Homeಮುಖಪುಟದೆಹಲಿ ಬಜೆಟ್‌ನ ಶೇ. 25ರಷ್ಟು ಹಣ ಶಿಕ್ಷಣಕ್ಕಾಗಿ ಮೀಸಲಿಟ್ಟಿದ್ದೇವೆ: ಆತಿಶಿ ಮಾರ್ಲೇನಾ

ದೆಹಲಿ ಬಜೆಟ್‌ನ ಶೇ. 25ರಷ್ಟು ಹಣ ಶಿಕ್ಷಣಕ್ಕಾಗಿ ಮೀಸಲಿಟ್ಟಿದ್ದೇವೆ: ಆತಿಶಿ ಮಾರ್ಲೇನಾ

ಸರ್ಕಾರಗಳು ಖಾಸಗಿ ಶಾಲೆಗಳ ಲಾಬಿಗೆ ಮಣಿಯದೇ ಸರ್ಕಾರಿ ಶಾಲೆಗಳ ಮೂಲ ಸೌಕರ್ಯ ಹಾಗೂ ಬೋಧನಾ ಗುಣಮಟ್ಟವನ್ನು ಅಭಿವೃದ್ಧಿ ಪಡಿಸಬೇಕು.

- Advertisement -
- Advertisement -

“ಮಕ್ಕಳೇ ನಮ್ಮ ರಾಜ್ಯದ ಮುಂದಿನ ಭವಿಷ್ಯ. ಹಾಗಾಗಿ ಅವರಿಗೆ ಉತ್ತಮ ಶಿಕ್ಷಣ ನೀಡಬೇಕೆಂದು ನಿರ್ಧರಿಸಿ, ದೆಹಲಿ ಬಜೆಟ್‌ನಲ್ಲಿ ಶೇ. 25ರಷ್ಟು ಹಣವನ್ನು ಶಿಕ್ಷಣಕ್ಕಾಗಿ ಮೀಸಲಿಟ್ಟಿದ್ದೆವು. ಆದ್ದರಿಂದ ದೆಹಲಿ ಶೈಕ್ಷಣಿಕ ಕ್ರಾಂತಿ ಸಾಧಿಸಲು ಸಾಧ್ಯವಾಯಿತು ಎಂದು ದೆಹಲಿಯ ಎಎಪಿ ಶಾಸಕಿ, ಶಿಕ್ಷಣ ತಜ್ಞೆ ಆತಿಶಿ ಮಾರ್ಲೇನಾ ತಿಳಿಸಿದರು.

ಬೆಂಗಳೂರಿನ ರೋಟರಿ ಹಾಲ್‌ನಲ್ಲಿ ಆಮ್‌ ಆದ್ಮಿ ಪಾರ್ಟಿ ಆಯೋಜಿಸಿದ್ದ “ಶಿಕ್ಷಣ ಸಮ್ಮೇಳನ” ಸಂವಾದದಲ್ಲಿ ಮಾತನಾಡಿದ ಅವರು, “ಏಳು ವರ್ಷಗಳ ಹಿಂದೆ ದೆಹಲಿಯ ಸರ್ಕಾರಿ ಶಾಲೆಗಳು ಕೂಡ ಕರ್ನಾಟಕದ ಈಗಿನ ಸರ್ಕಾರಿ ಶಾಲೆಗಳಂತೆ ಇದ್ದವು. ಶೌಚಾಲಯ, ಬೋರ್ಡ್‌, ಡೆಸ್ಕ್‌, ಟೇಬಲ್‌, ಕೊಠಡಿ ಯಾವುದೂ ಅಲ್ಲಿ ಸರಿಯಾಗಿರಲಿಲ್ಲ. ಇದು ವಿದ್ಯಾರ್ಥಿಗಳ ಕಲಿಕೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದೆ ಎಂದು ಅನುಭವ ಹಂಚಿಕೊಂಡರು.

ದೆಹಲಿ ಸರ್ಕಾರದಂತೆ ಕರ್ನಾಟಕ ಸರ್ಕಾರ ಕೂಡ ಕೋವಿಡ್‌ ಸಮಯವನ್ನು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು ನಾವು ಮೀಸಲಿಟ್ಟ ಹಣದಲ್ಲಿ ಪ್ರತಿ ರೂಪಾಯಿಗೂ ಲೆಕ್ಕವಿಟ್ಟು ಸದ್ಭಳಕೆ ಮಾಡಿಕೊಂಡೆವು ಎಂದರು.

ಶಿಕ್ಷಣದಲ್ಲಿ ಸುಧಾರಣೆ ತರುವುದು ಕಷ್ಟವಲ್ಲ. ಬದಲಾವಣೆ ತರಬೇಕೆಂಬ ಇಚ್ಛಾಶಕ್ತಿ ಸರ್ಕಾರಕ್ಕೆ ಇರಬೇಕು ಅಷ್ಟೇ. ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳ ಸರ್ಕಾರಗಳಿಗೆ ಶಿಕ್ಷಣವು ಆದ್ಯತೆಯ ವಿಷಯವೇ ಆಗಿಲ್ಲ. ಆದ್ದರಿಂದ ದೆಹಲಿಯೇತರ ರಾಜ್ಯಗಳ ಸರ್ಕಾರಿ ಶಾಲೆಗಳು ಈಗಲೂ ಹಿಂದುಳಿದಿವೆ ಎಂದು ಬೇಸರ ವ್ಯಕ್ತಪಡಿಸಿದರು.


ಇದನ್ನೂ ಓದಿ: ಇವು ದೆಹಲಿ ಸರ್ಕಾರಿ ಶಾಲೆ ಮತ್ತು ಸರ್ಕಾರಿ ಆಸ್ಪತ್ರೆಗಳು ಎಂದರೆ ನೀವು ನಂಬುವುದಿಲ್ಲ


ಸರ್ಕಾರಗಳು ಶಿಕ್ಷಣ ಕ್ಷೇತ್ರವನ್ನು ನೋಡುವ ರೀತಿ ಬದಲಾಗಬೇಕು. ಖಾಸಗಿ ಶಾಲೆಗಳ ಲಾಬಿಗೆ ಮಣಿಯದೇ ಸರ್ಕಾರಿ ಶಾಲೆಗಳ ಮೂಲ ಸೌಕರ್ಯ ಹಾಗೂ ಬೋಧನಾ ಗುಣಮಟ್ಟವನ್ನು ಅಭಿವೃದ್ಧಿ ಪಡಿಸಬೇಕು. ಉಪಕರಣಗಳ ಕೊರತೆಯಿಂದಾಗಿ ಕರ್ನಾಟಕದ 65% ಮಕ್ಕಳು ಶಿಕ್ಷಣದಿಂದ ದೂರ ಉಳಿದಿದ್ದಾರೆ. ಕೊರೊನಾವನ್ನು ಬಿಟ್ಟರೆ, ಹಾಳಾಗಿರುವ ಶಿಕ್ಷಣ ವ್ಯವಸ್ಥೆಯೇ ದೇಶಕ್ಕೆ ಹೆಚ್ಚು ಮಾರಕವಾಗಿದೆ ಎಂದು ಆತಿಶಿ ಮಾರ್ಲೇನಾ ಅಭಿಪ್ರಾಯಪಟ್ಟರು.

ದೆಹಲಿಯಲ್ಲಿ ಬೋಧನಾ ಗುಣಮಟ್ಟದ ಅಭಿವೃದ್ಧಿಗೆ ಶಿಕ್ಷಕರನ್ನು ಮಾತ್ರವಲ್ಲದೇ ಪೋಷಕರ ಸಹಾಯವನ್ನೂ ಪಡೆಯಲಾಯಿತು. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರ ನಡುವೆ ಅನೇಕ ಸಲ ಸಭೆ, ಸಂವಾದ ಏರ್ಪಡಿಸಿದೆವು. ಅಲ್ಲಿ ಅಮೂಲ್ಯವಾದ ಸಲಹೆಗಳು ಕೇಳಿಬಂದವು. ಅದನ್ನು ಸರಿಯಾಗಿ ಕಾರ್ಯರೂಪಕ್ಕೆ ತರುವ ಕೆಲಸವನ್ನು ಎಎಪಿ ಸರ್ಕಾರ ಮಾಡಿತು. ಶಿಕ್ಷಕರಿಗೆ ತಜ್ಞರಿಂದ ತರಬೇತಿ ಕೊಡಿಸಲಾಯಿತು. ಆಧುನಿಕ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಿಕೊಂಡೆವು. ಈ ಎಲ್ಲಾ ಕ್ರಮಗಳಿಂದ ಪೋಷಕರಿಗೆ ಸರ್ಕಾರದ ಮೇಲೆ ಹೆಮ್ಮೆ ಉಂಟಾಗಿ, ದೆಹಲಿಯ ಪಾಲಿಕೆ ಚುನಾವಣೆಯಲ್ಲಿ ಸ್ವಯಂಪ್ರೇರಣೆಯಿಂದ ಎಎಪಿ ಪರವಾಗಿ ಕೆಲಸ ಮಾಡಿದರು. ಹೀಗೆ ನಾವು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದು ಎಎಪಿಯ ಬೆಳವಣಿಗೆಗೂ ಕಾರಣವಾಯಿತು ಎಂದು ಆತಿಶಿ ಹೇಳಿದರು.

ಕಾರ್ಯಕ್ರಮದಲ್ಲಿ ಆಮ್‌ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿ, ಎಎಪಿ ಮುಖಂಡರಾದ ಎಚ್‌.ಡಿ.ಬಸವರಾಜು, ಶಿಕ್ಷಣ ತಜ್ಞರಾದ ಗುರುರಾಜ್‌ ಕರ್ಜಗಿ, ತಾನ್ಯಾ ಜಯರಾಜ್‌, ಪುಷ್ಪಾ ತಂತ್ರಿ, ಬಿ.ಎಸ್.ಸೂರ್ಯಪ್ರಕಾಶ್‌, ಚಿದಾನಂದ್‌, ಗುರು ಕಾಸಿನಾಥನ್‌, ಸಂಜೀವ್‌ ನರೇನ್‌ ಮತ್ತಿತರರು ಉಪಸ್ಥಿತರಿದ್ದರು.


ಇದನ್ನೂ ಓದಿ: ಕನಸುಗಾರ್ತಿಯೊಬ್ಬಳ ಕಣ್ಣೀರು : ಆತಿಶಿ ಮರ್ಲೀನಾ ಎಂಬ ಶೈಕ್ಷಣಿಕ ಚೈತನ್ಯದ ಕುರಿತು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...