ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆ-2010 (ಎಫ್ಸಿಆರ್ಎ) ಯನ್ನು ‘ಆಯುಧ’ವನ್ನಾಗಿ ಮಾಡುತ್ತಿರುವ ಬಗ್ಗೆ, ಮಣಿಪುರದ ಜನರು ನಿರ್ಲಕ್ಷಕ್ಕೆ ಒಳಗಾಗುತ್ತಿರುವುದು ಸೇರಿದಂತೆ ಕ್ರಿಶ್ಚಿಯನ್ ಸಮುದಾಯದ ಬಗ್ಗೆ ನರೇಂದ್ರ ಮೋದಿ ಸರ್ಕಾರಕ್ಕೆ ‘ಕಠಿಣ ಪ್ರಶ್ನೆಗಳನ್ನು’ ಕೇಳಬೇಕು ಎಂದು ಟಿಎಂಸಿ ನಾಯಕ ಡೆರೆಕ್ ಒ’ಬ್ರಿಯಾನ್ ಶುಕ್ರವಾರ ಹೇಳಿದ್ದಾರೆ. ಕ್ರಿಶ್ಚಿಯನ್ನರ ಬಗ್ಗೆ
ದೆಹಲಿಯಲ್ಲಿ ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ (ಸಿಬಿಸಿಐ) ಆಯೋಜಿಸಿದ್ದ ಕ್ರಿಸ್ಮಸ್ ಆಚರಣೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ ಕೆಲವು ದಿನಗಳ ನಂತರ ಅವರು ಈ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಶುಕ್ರವಾರದ ಬ್ಲಾಗ್ ಪೋಸ್ಟ್ನಲ್ಲಿ, ಓ’ಬ್ರಿಯಾನ್ ಅವರು ಕ್ರಿಶ್ಚಿಯನ್ ಸಮುದಾಯವು ಕೇಂದ್ರ ಸರ್ಕಾರದ ಜೊತೆಗೆ ತಮ್ಮ ಧ್ವನಿ ಎತ್ತಬೇಕು ಎಂದು ಹೇಳಿದ್ದಾರೆ. ಕ್ರಿಶ್ಚಿಯನ್ನರ ಬಗ್ಗೆ
“ಇವು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಕೇಳಬೇಕಾದ ಕಠಿಣ ಪ್ರಶ್ನೆಗಳಾಗಿವೆ. ಅನೇಕ ಕ್ರಿಸ್ಮಸ್ಗಳು ಕಳೆದಿವೆ, ಈಗ ಉತ್ತರಗಳನ್ನು ಕೇಳಬೇಕಾಗಿದೆ” ಎಂದು ರಾಜ್ಯಸಭೆಯ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರೂ ಆಗಿರುವ ಓ`ಬ್ರಿಯಾನ್ ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ನೀವು ಕ್ರಿಸ್ಮಸ್ ದಿನವನ್ನು ‘ಉತ್ತಮ ಆಡಳಿತ ದಿನ’ವನ್ನಾಗಿ ಮಾಡಲು ಏಕೆ ಪ್ರಯತ್ನಿಸಿದ್ದೀರಿ? ನೀವು ನಿರ್ದಿಷ್ಟವಾಗಿ ಕ್ರಿಶ್ಚಿಯನ್ ಸಮುದಾಯದಿಂದ ನಡೆಸಲ್ಪಡುವ ಸಂಸ್ಥೆಗಳನ್ನು ಗುರಿಯಾಗಿಸಲು ವಿದೇಶಿ ಕೊಡುಗೆ (ನಿಯಂತ್ರಣ) ಕಾಯಿದೆ (ಎಫ್ಸಿಆರ್ಎ) ಅನ್ನು ಏಕೆ ಅಸ್ತ್ರಗೊಳಿಸುತ್ತಿದ್ದೀರಿ?,” ಎಂದು ಅವರು ಕೇಳಿದ್ದಾರೆ.
“ನೀವು ಮಣಿಪುರದ ಜನರನ್ನು ಏಕೆ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದೀರಿ? ಅರುಣಾಚಲ ಪ್ರದೇಶ, ಛತ್ತೀಸ್ಗಢ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ , ಮಧ್ಯಪ್ರದೇಶ, ಉತ್ತರ ಪ್ರದೇಶ, ಒಡಿಶಾ, ಉತ್ತರಾಖಂಡ, ರಾಜಸ್ಥಾನಗಳಲ್ಲಿ ಸಂವಿಧಾನದ 14, 15 ಮತ್ತು 25 ನೇ ವಿಧಿಯ ಅಡಿಯಲ್ಲಿ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವ ಮತಾಂತರ ವಿರೋಧಿ ಕಾನೂನುಗಳನ್ನು ನೀವು ಏಕೆ ಪ್ರೋತ್ಸಾಹಿಸುತ್ತಿದ್ದೀರಿ?” ಎಂದು ಅವರು ಕೇಳಿದ್ದಾರೆ.
ಸರ್ಕಾರವು ವಕ್ಫ್ ಮಸೂದೆಯನ್ನು ಮುಂದಕ್ಕೆ ತರುತ್ತಿದ್ದು, ವಿಶೇಷವಾಗಿ ಕೇರಳದಲ್ಲಿ ‘ಅಲ್ಪಸಂಖ್ಯಾತ ವರ್ಸಸ್ ಅಲ್ಪಸಂಖ್ಯಾತ ಎಂದು ಆಟವಾಡುತ್ತಿದೆ ಎಂದು ಅವರು ಕೇಳಿದ್ದಾರೆ. “ದ್ವೇಷ ಭಾಷಣಗಳು ಮತ್ತು ಕಟ್ಟಾ ಕೋಮು ದೂಷಣೆಗಳನ್ನು ಖಂಡಿಸುವ ಒಂದು ಪದವನ್ನು ನೀವು ಏಕೆ ಹೇಳುವುದಿಲ್ಲ?” ಅವರು ಪ್ರಶ್ನಿಸಿದ್ದಾರೆ.
ಅಲ್ಪಸಂಖ್ಯಾತರು ನಡೆಸುವ ಸಂಸ್ಥೆಗಳ ಮೇಲೆ ದಾಳಿಗಳು ಹೆಚ್ಚುತ್ತಿವೆ ಎಂದು ಅವರು ಆರೋಪಿಸಿದ್ದು, ಕ್ರಿಶ್ಚಿಯನ್ನರ ವಿರುದ್ಧ ಹಿಂಸಾಚಾರದ ಘಟನೆಗಳು ಏಕೆ ಹೆಚ್ಚುತ್ತಿವೆ ಎಂದು ಕೇಳಿದ್ದಾರೆ. “ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು 2014 ರಿಂದ ಎರಡು ಬಾರಿ ವಿಶ್ವಸಂಸ್ಥೆಯ ಮಾನ್ಯತೆಯನ್ನು ಏಕೆ ಕಳೆದುಕೊಂಡಿತು? ನಿಮಗೆ ಫಾದರ್ ಸ್ಟಾನ್ ಸ್ವಾಮಿ ನೆನಪಿದೆಯೇ? ಸಿಪ್ಪರ್? ಸ್ಟ್ರಾ? ಸಾವು?” ಅವರು ಕೇಳಿದ್ದಾರೆ.
84 ವರ್ಷದ ಬುಡಕಟ್ಟು ಹಕ್ಕುಗಳ ಹೋರಾಟಗಾರ ಮತ್ತು ಜೆಸ್ಯೂಟ್ ಪಾದ್ರಿ ಆಗಿದ್ದ ಸ್ಟಾನ್ ಸ್ವಾಮಿ ಅವರು ಜೈಲಿನಲ್ಲೆ ಕೊರೊನಾ ಸೋಂಕಿಗೆ ಒಳಗಾಗಿ ಹೃದಯ ಸ್ತಂಭನದಿಂದ ಜುಲೈ 2021 ರಲ್ಲಿ ನಿಧನರಾಗಿದ್ದರು. ಅವರನ್ನು ಅಕ್ಟೋಬರ್ 2020 ರಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಬಂಧಿಸಲಾಗಿತ್ತು ಮತ್ತು ಅವರು ಎಂಟು ತಿಂಗಳುಗಳನ್ನು ಮುಂಬೈ ಜೈಲಿನಲ್ಲಿ ಕಳೆದಿದ್ದರು. ಈ ವೇಳೆ ಅವರಿಗೆ ವೈದ್ಯಕೀಯ ಕಾರಣಕ್ಕೂ ಕೂಡಾ ಹಲವು ಬಾರಿ ಜಾಮೀನು ನಿರಾಕರಿಸಲಾಗಿತ್ತು. ಕೈಕಾಲು ನಡುಗುವ ರೋಗವಾದ ಪಾರ್ಕಿಸನ್ ಕಾರಣಕ್ಕೆ ಅವರಿಗೆ ಕೈಯ್ಯಲ್ಲಿ ಆಹಾರ ಸೇವಿಸಲು ಕಷ್ಟವಾಗಿತ್ತು. ಹಾಗಾಗಿ ಅವರಿಗೆ ಆಹಾರ ಸೇವಿಸಲು ಸ್ಟ್ರಾ ನೀಡಲು ಕೂಡಾ ಅನುಮತಿಯನ್ನು ನಿರಾಕರಿಸಲಾಗಿತ್ತು.
“ಸಂವಿಧಾನವನ್ನು ರಕ್ಷಿಸದವರನ್ನು ಎತ್ತಿತೋರಿಸುವ ಬಗ್ಗೆ ಕ್ರಿಶ್ಚಿಯನ್ ನಾಯಕತ್ವವು ನಿಲುವು ತೆಗೆದುಕೊಳ್ಳಬೇಕು” ಎಂದು ಡೆರೆಕ್ ಒ`ಬ್ರಿಯಾನ್ ಹೇಳಿದ್ದಾರೆ. ಕ್ರಿಸ್ಮಸ್ಗೂ ಮುನ್ನ ರಾಷ್ಟ್ರ ರಾಜಧಾನಿಯಲ್ಲಿ ಸಿಬಿಸಿಐ ಆಯೋಜಿಸಿದ್ದ ಸಂಭ್ರಮಾಚರಣೆಯಲ್ಲಿ ಮೋದಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: ದೆಹಲಿ ವಿವಿ ಕಾಲೇಜಿಗೆ ಮನಮೋಹನ್ ಸಿಂಗ್ ಹೆಸರಿಡುವಂತೆ ಎನ್ಎಸ್ಯುಐ ಆಗ್ರಹ; ಪ್ರಧಾನಿಗೆ ಪತ್ರ
ದೆಹಲಿ ವಿವಿ ಕಾಲೇಜಿಗೆ ಮನಮೋಹನ್ ಸಿಂಗ್ ಹೆಸರಿಡುವಂತೆ ಎನ್ಎಸ್ಯುಐ ಆಗ್ರಹ; ಪ್ರಧಾನಿಗೆ ಪತ್ರ


