ಫೆ.14ರ ಪುಲ್ವಾಮಾ ದಾಳಿಯ ಕುರಿತು ಪೊಲೀಸರಿಗೆ, ಸೈನ್ಯಕ್ಕೆ ಸಾಕಷ್ಟು ಮುಂಚೆಯೇ ಮಾಹಿತಿ ಇತ್ತು ಎಂಬ ಸುದ್ದಿ ಈ ಮುಂಚೆಯೇ ಹರಿದಾಡಿತ್ತು. ಆದರೆ, ದಿ ಕ್ವಿಂಟ್ ವೆಬ್ ಪೋರ್ಟಲ್ ನಿರ್ದಿಷ್ಟವಾದ ದಾಖಲೆಗಳನ್ನು ಪಡೆದು ಅದು ನಿಜ ಎಂಬ ಆಘಾತಕಾರಿ ಸುದ್ದಿಯನ್ನು ಪ್ರಕಟಿಸಿದೆ. ‘ಹೊರಗಿನಿಂದ ಬಂದ ಭಯೋತ್ಪಾದಕರು’ ಪುಲ್ವಾಮಾ ಜಿಲ್ಲೆಯ ಆವಂತಿಪುರ ಪ್ರದೇಶಕ್ಕೆ ಬಂದಿದ್ದಾರೆ ಮತ್ತು ಅವರು ಸದ್ಯದಲ್ಲೇ ಭಾರೀ ದೊಡ್ಡ ಆತ್ಮಹತ್ಯಾತ್ಮಕ ದಾಳಿ ನಡೆಸುವ ಸಾಧ್ಯತೆ ಇದೆ ಎಂಬುದು ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಜನವರಿ 24ಕ್ಕೇ ಮಾಹಿತಿ ಇತ್ತು.
ಅಷ್ಟೇ ಅಲ್ಲ, ಯಾವ ಭಯೋತ್ಪಾದಕ ಗುಂಪಿನ ಸದಸ್ಯರು ಅವರು ಮತ್ತು ಅವರಿಗೆ ಆಶ್ರಯದಾತರು ಯಾರಿರಬಹುದು ಎಂಬ ಬಗ್ಗೆಯೂ ಅವರಿಗೆ ಮಾಹಿತಿ ಇತ್ತು. ಅದನ್ನು ಪರಿಶೀಲಿಸಿದ ಜಮ್ಮು ಕಾಶ್ಮೀರದ ಪೊಲೀಸರು ಜನವರಿ 31ರಂದು ಅಡಿಷನಲ್ ಜನರಲ್ ಆಫ್ ಪೊಲೀಸ್ ಡಾ.ಬಿ.ಶ್ರೀನಿವಾಸ್ ಅವರ ಮೂಲಕ ಸಿಆರ್ಪಿಎಫ್ ಮತ್ತಿತರ ಪೊಲೀಸ್ ಬಳಗಕ್ಕೆ ಸುದ್ದಿ ಮುಟ್ಟಿಸಿದ್ದಾರೆ.
ಇಂತಹ ಮಹತ್ವದ ಮಾಹಿತಿ ಬಂದಾಗ ಸಂಬಂಧಿಸಿದವರ ಬಂಧನ ಆಗುವವರೆಗೆ ಅಥವಾ ‘ಬೆದರಿಕೆಯ ನಿರ್ಮೂಲನೆ’ ಆಗುವವರೆಗೆ ಹೈ ಅಲರ್ಟ್ ಇರಬೇಕಿತ್ತು. ಹೈವೇಗಳ ಸುತ್ತ ಕಟ್ಟೆಚ್ಚರ ವಹಿಸಿ ನಮ್ಮ ದಳಗಳು ಸಂಚರಿಸುವ ಜಾಗದಲ್ಲಿ ಬೇರಾವುದೇ ವಾಹನಗಳಿಗೆ ಅವಕಾಶ ಇರಬಾರದಿತ್ತು. ಕಾರ್ಯಾಚರಣೆಗೆ ಹೆಚ್ಚಿನ ದಳಗಳನ್ನು ನಿಯೋಜಿಸಬೇಕಿತ್ತು. ಇವ್ಯಾವುವೂ ಆಗದೇ ನಮ್ಮ ರಕ್ಷಣಾ ಪಡೆಯ ಅಮೂಲ್ಯವಾದ ಜೀವಗಳನ್ನು ಬಲಿಕೊಟ್ಟಿದ್ದನ್ನು ಭಾರೀ ದೊಡ್ಡ ಇಂಟೆಲಿಜೆನ್ಸ್ ವೈಫಲ್ಯ ಎಂದೇ ಬಗೆಯಲಾಗುತ್ತದೆ.
ಇದಕ್ಕೆ ಇನ್ನೊಂದು ಕಾರಣವನ್ನೂ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ದಿ ಕ್ವಿಂಟ್ ವರದಿ ಮಾಡಿದೆ. ‘ಫೆ.9 ಮತ್ತು ಫೆ.11 ಅಫ್ಜಲ್ಗುರು ಮತ್ತು ಜೆಕೆಎಲ್ಎಫ್ ಸ್ಥಾಪಕ ಮಕ್ಬೂಲ್ ಬಟ್ ಅವರುಗಳನ್ನು ನೇಣಿಗೇರಿಸಿದ ದಿನಗಳು. ಹಾಗಾಗಿ ಅವರೆಡು ದಿನಗಳ ನಡುವೆ ಏನಾದರೂ ಆಗಬಹುದು ಎಂಬ ಎಚ್ಚರ ವಹಿಸಲಾಗಿತ್ತು. ಆಗ ಏನೂ ಆಗದಿದ್ದುದರಿಂದ ಎಲ್ಲರೂ ಸಡಿಲವಾದರು’. ಇಂತಹ ನಿರ್ಲಕ್ಷ್ಯದಿಂದ 40ಕ್ಕೂ ಹೆಚ್ಚು ಸಿಆರ್ಪಿಎಫ್ ಯೋಧರು ಪ್ರಾಣ ತೆತ್ತಬೇಕಾಯಿತು ಎಂಬುದನ್ನು ಮರೆಯಲಾಗದು.
ಆದರೆ, ಇದರ ಹೊಣೆ ಹೊರುವವರು ಯಾರು ಎಂಬುದೇ ಪ್ರಶ್ನೆ. ಎಲ್ಲರೂ ಸಾಧನೆಗಳಿಗೆ ತಾವೇ ಕಾರಣರು ಎಂದು ಹೇಳಿಕೊಳ್ಳಲು ಮುಂದಾಗುತ್ತಿದ್ದಾರೆ, ವೈಫಲ್ಯಕ್ಕೆ ಮಾತ್ರ ಯಾರೂ ದಿಕ್ಕಿಲ್ಲದಂತಾಗಿದೆ. ಜಮ್ಮು ಕಾಶ್ಮೀರದಲ್ಲಿ ಇಂದು ಚುನಾಯಿತ ಸರ್ಕಾರವೂ ಇಲ್ಲ. ರಾಷ್ಟ್ರಪತಿ ಆಡಳಿತ ಇರುವುದರಿಂದ, ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರವೇ ಆಳ್ವಿಕೆ ನಡೆಸುತ್ತದೆ. ಇನ್ನು ಕೇಂದ್ರೀಯ ದಳಗಳೂ ಅವರ ವ್ಯಾಪ್ತಿಯಲ್ಲೇ ಬರುತ್ತವೆ. ಹೀಗಿರುವಾಗ ಗಂಭೀರ ಆತ್ಮಾವಲೋಕನಕ್ಕೆ ಮುಂದಾಗುವ ಕೆಲಸ ಕೇಂದ್ರದ್ದೇ ಆಗಿದೆ.