“ಈತ ದೇವರಲ್ಲ, ಈತ 1918ರಲ್ಲಿಯೇ ಮರಣ ಹೊಂದಿದ್ದಾನೆ. ಈತ ಮುಸ್ಲಿಂ ಆಗಿದ್ದು, ಮುಲ್ಲಾ ಇವನು” ಎಂದು ಹೇಳುತ್ತಾ ದೇವಸ್ಥಾನವೊಂದರಲ್ಲಿನ ಶಿರಡಿ ಸಾಯಿಬಾಬಾರ ಮೂರ್ತಿಯನ್ನು ಹಾರೆ ಮತ್ತು ಸುತ್ತಿಗೆಗಳಿಂದ ಧ್ವಂಸಗೈಯುವ ವಿಡಿಯೋವೊಂದು ಕಳೆದ ಹಲವು ದಿನಗಳಿಂದ ವೈರಲ್ ಆಗುತ್ತಿದೆ.
साईं बाबा मुसलमान थे ये कहते हुए मूर्ति तोड़ दी गई मौन रहिये धीरे धीरे सबका नंबर आएगा।
Video – Social media pic.twitter.com/hAnn9FF7po— Nigar Parveen (@NigarNawab) March 28, 2021
ದಕ್ಷಿಣ ದೆಹಲಿಯ ಶಾಹ್ಪುರ ಜಾತ್ನಲ್ಲಿ ಪುರಾನ ಶಿವ ಮಂದಿರ್ ದೇವಾಲಯದಲ್ಲಿನ ಶಿರಡಿ ಸಾಯಿಬಾಬಾ ಮೂರ್ತಿಯನ್ನು ಮಾರ್ಚ್ 25 ರಂದು ಧ್ವಂಸಗೊಳಿಸಿ ಅದೇ ಸ್ಥಳದಲ್ಲಿ ಗಣಪತಿ ವಿಗ್ರಹ ಸ್ಥಾಪಿಸಲಾಗಿದೆ ಎನ್ನಲಾಗಿದ್ದು, ಈ ಕುರಿತು ಅಲ್ಲಿನ ಭಕ್ತರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಈ ಪ್ರಕರಣದಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಶಾಹ್ಪುರ ಜಾತ್ನ ಹಲವಾರು ಭಕ್ತರು ದೂರು ನೀಡಿದ್ದಾರೆ. ಈ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ದೆಹಲಿ ದಕ್ಷಿಣ ಡಿಸಿಪಿ ಅತುಲ್ ಕುಮಾರ್ ಠಾಕೂರ್ ತಿಳಿಸಿರುವುದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಹಿಂದೂಗಳ ಆಧ್ಯಾತ್ಮಿಕ ದೇವರಾದ ಶಿರಡಿ ಸಾಯಿಬಾಬಾ ವಿಗ್ರಹವನ್ನು ನಿಕೃಷ್ಟವಾಗಿ ಧ್ವಂಸ ಮಾಡುತ್ತಿರುವ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಲ್ಪಡುತ್ತಿವೆ. ಘಟನೆಯಲ್ಲಿ ಭಾಗಿಯಾದ ಆರೋಪಿಗಳು ಪ್ರಚೋದನಾಕಾರಿ ಭಾಷಣಕ್ಕೆ ಕುಖ್ಯಾತಿಯಾದ ಮತ್ತು ದೆಹಲಿ ಗಲಭೆಯ ಪಿತೂರಿಗಾರ ಎಂದು ಆರೋಪಿಸಲ್ಪಟ್ಟಿರುವ ಯತಿ ನರಸಿಂಗಾನಂದರ ಜೊತೆ ಇರುವ ಫೋಟೊಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಅಲ್ಲದೇ ವಿಗ್ರಹ ಧ್ವಂಸಗೈದವರನ್ನು ಅಭಿನಂದಿಸಿರುವ ಯತಿ ನರಸಿಂಗಾನಂದ್, “ಪಾಖಂಡಿ ಸಾಯಿಯಂತಹ ಜಿಹಾದಿಗಳನ್ನು ದೇವಾಲಯದೊಳಕ್ಕೆ ಬಿಟ್ಟುಕೊಳ್ಳಬಾರದು” ಎಂದು ಹೇಳುತ್ತಿರುವ ವಿಡಿಯೋ ಸಹ ಹೊರಬಂದಿದೆ. ನಂತರ ಸ್ಕ್ರೋಲ್.ಇನ್ ಜೊತೆ ಮಾತನಾಡಿದ ಅವರು, “ಸಾಯಿಬಾಬಾ ಒರ್ವ ಪಿಂಡಾರಿ ಲೂಟೇರಾ, ಆತನ ಹೆಸರು ಚಾಂದ್ ಖಾನ್ ಎಂಬುದಾಗಿತ್ತು. ಆತ ಜಿಹಾದಿ, ಆತನ ವಿಗ್ರಹ ದೇವಾಲಯದೊಳಗೆ ಇಟ್ಟಿರುವವರಿಗೆ ಹುಚ್ಚು ಹಿಡಿದಿದೆ” ಎಂದು ಹೇಳಿದ್ದಾರೆ.
ವಿಗ್ರಹ ಧ್ವಂಸಗೊಳಿಸುವ ನೇತೃತ್ವ ವಹಿಸಿದ್ದ ವ್ಯಕ್ತಿಯನ್ನು ದೇವಾಲಯ ಸಮಿತಿಯ ಸದಸ್ಯ ಪದಮ್ ಪನ್ವಾರ್ ಎಂದು ಸ್ಥಳೀಯರು ಗುರುತಿಸಿದ್ದಾರೆ. ಅವರು “ವಿಗ್ರಹವು ಹಳೆಯದಾಗಿದ್ದರಿಂದ ಅದನ್ನು ತೆಗೆಯಲಾಯಿತು. ಹಳೆಯ ವಿಗ್ರಹಗಳನ್ನು ತೆಗೆಯುವುದು ಹಿಂದೂ ಧರ್ಮದಲ್ಲಿ ಒಂದು ಸಂಪ್ರದಾಯವಾಗಿದೆ. ದೇವಾಲಯವನ್ನು ಪುನರ್ನಿರ್ಮಾಣ ಮಾಡಲಾಗುತ್ತಿದೆ. ಹೊಸ ದೇವಾಲಯ ಸಿದ್ಧವಾದ ನಂತರ, ನಾವು ಸಭೆ ನಡೆಸಿ ಹೊಸ ಸಾಯಿಬಾಬಾ ವಿಗ್ರಹವನ್ನು ಸ್ಥಾಪಿಸಲಾಗುತ್ತದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದಿದ್ದಾರೆ.
ವಿಡಿಯೋದಲ್ಲಿ ತಮ್ಮ ಅವಾಚ್ಯ ಬೈಗಳಗಳ ಬಗ್ಗೆ ಪ್ರಶ್ನಿಸಿದಾಗ “ನಾನು ಆ ರೀತಿಯ ಏನನ್ನೂ ಹೇಳಲಿಲ್ಲ. ಆ ರೀತಿಯ ಯಾವುದೇ ವಿಡಿಯೋ ಇದ್ದರೆ ಅದು ನಕಲಿ” ಎಂದು ಅವರು ಜಾರಿಕೊಂಡಿದ್ದಾರೆ.
ಆದರೆ ಸ್ಥಳೀಯ ಕೆಲವು ಭಕ್ತರು ಮಾರ್ಚ್ 31 ರಂದು ಸಲ್ಲಿಸಿದ ದೂರಿನಲ್ಲಿ “ಕೆಲವು ಜನರು ಬಂದು ಶ್ರೀ ಸಾಯಿಬಾಬಾರವರ ವಿಗ್ರಹವನ್ನು ಮುರಿದು ಹಾಕಿದರು. ಸಾಯಿಬಾಬಾ ಹಿಂದೂ ದೇವರಲ್ಲ, ಅವರು ಮುಸ್ಲಿಮರಿಗೆ ಸೇರಿದವರಾಗಿರುವುದರಿಂದ ವಿಗ್ರಹವನ್ನು ತೆಗೆಯಬೇಕು ಎಂದು ಹೇಳಿದರು. ಇದು ಸಾಯಿಬಾಬಾ ಅವರನ್ನು ನಂಬುವ ಜನರ ಭಾವನೆಗಳಿಗೆ ನೋವುಂಟು ಮಾಡುವ ಕಾರಣ ಈ ಘೋರ ಅಪರಾಧ ನಡೆಸಿದ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾವು ವಿನಂತಿಸುತ್ತೇವೆ. ಸಾಯಿಬಾಬಾ ವಿಗ್ರಹವನ್ನು ಅದೇ ದೇವಾಲಯದ ಆವರಣದಲ್ಲಿ ಸಾಧ್ಯವಾದಷ್ಟು ಬೇಗ ಪುನಃಸ್ಥಾಪಿಸಲು ನಾವು ವಿನಂತಿಸುತ್ತೇವೆ” ಎಂದು ಬರೆಯಲಾಗಿದೆ.
ಇದನ್ನೂ ಓದಿ: ದೆಹಲಿ ಗಲಭೆಯ ಅಸಲಿ ಪಿತೂರಿ ಭಾಗ-2: ‘ಅಂತಿಮ ಯುದ್ಧಕ್ಕೆ ಕರೆ ನೀಡಿದ್ದ ಮುಸ್ಲಿಂ-ವಿರೋಧಿ ‘ದೇವಮಾನವ’!