Homeಮುಖಪುಟದೆಹಲಿ ಗಲಭೆಯ ಅಸಲಿ ಪಿತೂರಿ ಭಾಗ-2: ‘ಅಂತಿಮ ಯುದ್ಧಕ್ಕೆ ಕರೆ ನೀಡಿದ್ದ ಮುಸ್ಲಿಂ-ವಿರೋಧಿ ‘ದೇವಮಾನವ’!

ದೆಹಲಿ ಗಲಭೆಯ ಅಸಲಿ ಪಿತೂರಿ ಭಾಗ-2: ‘ಅಂತಿಮ ಯುದ್ಧಕ್ಕೆ ಕರೆ ನೀಡಿದ್ದ ಮುಸ್ಲಿಂ-ವಿರೋಧಿ ‘ದೇವಮಾನವ’!

ದೆಹಲಿ ಗಲಭೆಗೂ ಮುನ್ನ ಹಿಂದುತ್ವ ಕಾರ್ಯಕರ್ತರನ್ನು ಹೇಗೆ ಪ್ರಚೋದಿಸಲಾಯಿತು ಮತ್ತು ರೊಚ್ಚಿಗೆಬ್ಬಿಸಲಾಯಿತು ಎಂಬುದನ್ನು ದಿ ವೈರ್ ಸಾಕ್ಷಿ ಸಮೇತ ವರದಿ ಮಾಡಿದೆ.

- Advertisement -
  • ಅಲಿಶಾನ್ ಜಾಫ್ರಿ, ಶೆಹಕ್ತ್ ಮಕ್ನೂನ್ ಮತ್ತು ಸಿದ್ದಾರ್ಥ ವರದರಾಜನ್
  • ಕೃಪೆ: ದಿ ವೈರ್
  • ಅನುವಾದ: ಮಲ್ಲನಗೌಡರ್ ಪಿ.ಕೆ
- Advertisement -

ಫೆಬ್ರವರಿ 2020 ರ ಕೊನೆಯ ವಾರದಲ್ಲಿ ದೆಹಲಿಯಲ್ಲಿ ನಾಲ್ಕು ದಿನಗಳ ಕಾಲ ನಡೆದ ಹಿಂಸಾಚಾರದಲ್ಲಿ 53 ಜನರು ಸಾವನ್ನಪ್ಪಿದ್ದರು. ಕೊಲ್ಲಲ್ಪಟ್ಟವರಲ್ಲಿ ಮುಕ್ಕಾಲು ಭಾಗ ಮುಸ್ಲಿಮರಾಗಿದ್ದರೂ ಮತ್ತು ಮುಸ್ಲಿಮರ ಹೆಚ್ಚಿನ ಆಸ್ತಿಪಾಸ್ತಿಗೆ ನಷ್ಟ ಉಂಟಾಗಿದ್ದರೂ, ಬಿಜೆಪಿ ನಾಯಕರು ಮಾತ್ರ ಅದನ್ನು ‘ಹಿಂದೂ ವಿರೋಧಿ ಗಲಭೆ’ ಎಂದು ವಿವರಿಸುತ್ತಾರೆ. ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮುಸ್ಲಿಂ ಮತ್ತು ಪ್ರಗತಿಪರ ಕಾರ್ಯಕರ್ತರು ಹಿಂಸಾಚಾರವನ್ನು ಪ್ರಚೋದಿಸುವ ಪಿತೂರಿ ಮಾಡಿದರು ಎಂದು ಆರೋಪಿಸಿ ದೆಹಲಿ ಪೊಲೀಸರು ಸತ್ಯಗಳನ್ನು ಮುಚ್ಚಿಡುತ್ತಿದ್ದಾರೆ.

ಪೊಲೀಸರು ಕಡೆಗಣಿಸಿರುವ ಪಿತೂರಿಯ ಬಗ್ಗೆ ನಮ್ಮ ತನಿಖೆಯ ಒಂದನೇ ಭಾಗದಲ್ಲಿ, ದೀಪಕ್ ಸಿಂಗ್ ಹಿಂದೂ ಮತ್ತು ಅಂಕಿತ್ ತಿವಾರಿ ಎಂಬ ಇಬ್ಬರು ಹಿಂದುತ್ವ ಕಾರ್ಯಕರ್ತರ ಪಾತ್ರವನ್ನು ನಾವು ಪರಿಶೀಲಿಸಿದ್ದೇವೆ. ಇಂದು, ನಾವು 2020 ರ ಫೆಬ್ರವರಿಯಲ್ಲಿ ಅಂತಿಮವಾಗಿ ಈಶಾನ್ಯ ದೆಹಲಿಯಲ್ಲಿ ರಕ್ತದೋಕುಳಿಗೆ ಕಾರಣವಾದ ಗಲಭೆಕೋರರನ್ನು ತೀವ್ರಗಾಮಿಗೊಳಿಸುವಲ್ಲಿ ದ್ವೇಷದ ಭಾಷಣಗಳು ಮತ್ತು ಪ್ರಚೋದನೆಯ ನಿರ್ಣಾಯಕ ಪಾತ್ರ ವಹಿಸಿದ ಯತಿ ನರಸಿಂಗಾನಂದ ಸರಸ್ವತಿ ಮತ್ತು ಅವರ ಸಹಚರರ ಮೇಲೆ ಕೇಂದ್ರೀಕರಿಸುತ್ತೇವೆ.

ಹಿಂಸಾಚಾರಕ್ಕೂ ಮುನ್ನ, ಮುಸ್ಲಿಮರ ವಿರುದ್ಧ ಹಿಂಸಾಚಾರ ಮಾಡುವಂತೆ ನೀಡಿದ ಕರೆಗಳು, ಪ್ರಚೋದನೆಗಳು ಅಮೂರ್ತ ವಕಾಲತ್ತು ಅಲ್ಲ. ಆದರೆ ನಿಜವಾದ ಪಿತೂರಿಯ ಅತ್ಯಗತ್ಯ ಅಂಶವಾಗಿದೆ. ಪೊಲೀಸರು ತಮ್ಮನ್ನು ಎಂದಿಗೂ ಮುಟ್ಟುವುದಿಲ್ಲ ಎಂದು ತಿಳಿದಿದ್ದರಿಂದ ಅದನ್ನು ಮುಕ್ತವಾಗಿ ಮಾಡಲಾಗಿದೆ ಎಂಬುದು ಈಗ ಸ್ಪಷ್ಟವಾಗಿದೆ.

ಗಾಜಿಯಾಬಾದ್‌ನ ದೇವಮಾನವ!

ಯತಿ ನರಸಿಂಗಾನಂದ್ ಉಗ್ರ ಹಿಂದೂತ್ವ ನಾಯಕರಾಗಿದ್ದು, ಅವರ ಪ್ರಧಾನ ಕಚೇರಿಯು ಗಾಜಿಯಾಬಾದ್‌ನ ದಾಸ್ನಾದಲ್ಲಿದೆ, ಅಲ್ಲಿ ಉತ್ತರ ಪ್ರದೇಶ ಗಡಿ ದೆಹಲಿಯನ್ನು ಸಂಧಿಸುತ್ತದೆ. ಕಪಿಲ್ ಮಿಶ್ರಾ ಅವರಂತಹ ಬಿಜೆಪಿಯ ಉನ್ನತ ನಾಯಕರೊಂದಿಗಿನ ಒಡನಾಟದಿಂದಾಗಿ ದೆಹಲಿಯ ಭೂಗತ ಹಿಂದುತ್ವ ಜಾಲಗಳಲ್ಲಿ ಅವರ ಪ್ರಭಾವವು ಮಹತ್ತರವಾಗಿ ಬೆಳೆದಿದೆ. ಮುಸ್ಲಿಮರ ಬಗ್ಗೆ ಮುಖ್ಯವಾಹಿನಿಯ ಹಿಂದುತ್ವ ರಾಜಕಾರಣಿಗಳು ಏನು ಹೇಳುತ್ತಿದ್ದಾರೆಂಬುದನ್ನು ಸ್ಪಷ್ಟವಾಗಿ ಮತ್ತು ಬಹಿರಂಗವಾಗಿ ಹೇಳುವ ಇಚ್ಛೆ ಇವರಿಗಿದೆ.
ಉದಾಹರಣೆಗೆ, ದೆಹಲಿ ಗಲಭೆಗೆ ಎರಡು ತಿಂಗಳ ಮೊದಲು, ನರಸಿಂಗಾನಂದರು ಮುಸ್ಲಿಮರನ್ನು ರಾಕ್ಷಸರು ಎಂದು ಬಣ್ಣಿಸಿದರು. “ನಮ್ಮ ಪ್ರಸ್ತುತ ಯುಗದಲ್ಲಿ ನಾವು ಮುಸ್ಲಿಮರು ಎಂದು ಕರೆಯುವವರನ್ನು ಹಿಂದಿನ ಯುಗಗಳಲ್ಲಿ ರಾಕ್ಷಸರು ಎಂದು ಕರೆಯಲಾಗುತ್ತಿತ್ತು” ಎಂಬ ಹೇಳಿಕೆ ನೀಡಿದ್ದರು.

ನರಸಿಂಹಾನಂದ್ ಅವರು ಗಾಂಧಿಯವರ ಹಂತಕ ನಾಥುರಾಮ್ ಗೋಡ್ಸೆ ಅವರ ಅಭಿಮಾನಿ.
“ನಾಥುರಾಮ್ ಗೋಡ್ಸೆ ಜಿ ಅವರನ್ನು ಹೊಗಳುವಷ್ಟು ಪದಗಳು ನಮಗೆ ಸಿಗುತ್ತಿಲ್ಲ. ವೀರ್ ಸಾವರ್ಕರ್ ಜಿ ಮತ್ತು ನಾಥುರಾಮ್ ಗೋಡ್ಸೆ ಜಿ ಅವರನ್ನು ನನ್ನ ದೊಡ್ಡ ನಾಯಕರು ಎಂದು ನಾನು ಪರಿಗಣಿಸುತ್ತೇನೆ” ಎಂಬುದು ಅವರ ಅಭಿಪ್ರಾಯ.

ಮುಸ್ಲಿಮರ ಮೇಲಿನ ದೌರ್ಜನ್ಯಕ್ಕೆ ನರಸಿಂಹಾನಂದ್ ಅವರ ಕರೆಗಳು ವಾಸ್ತವವಾಗಿ ಸಿಎಎ ಮತ್ತು ಅದರ ವಿರುದ್ಧದ ಪ್ರತಿಭಟನೆಗಳಿಗೆ ಮುಂಚೆಯೇ ಆರಂಭವಾಗಿದ್ದವು. 2019 ರ ಅಕ್ಟೋಬರ್‌ನಲ್ಲಿ ಲಖನೌದಲ್ಲಿ ಉಗ್ರಗಾಮಿ ಹಿಂದುತ್ವ ನಾಯಕ ಕಮಲೇಶ್ ತಿವಾರಿ ಇರಿತಕ್ಕೊಳಗಾದ ನಂತರ, ಎಲ್ಲ ಮುಸ್ಲಿಮರ ಮೇಲೆ ಹಿಂಸಾಚಾರದ ಬೆದರಿಕೆ ಹಾಕಿದರು ಮತ್ತು ಇಸ್ಲಾಂ ಧರ್ಮವನ್ನು ಭಾರತದಿಂದ ನಿರ್ಮೂಲನೆ ಮಾಡುವುದಾಗಿ ಹೇಳಿದ್ದರು.

“ಹಿಂದೂ ಸಿಂಹವನ್ನು ಕೊಲ್ಲಲಾಗಿದೆ ಮತ್ತು ನಮ್ಮ ಎಲ್ಲಾ ಮನೆಗಳು ಶೋಕದಲ್ಲಿರುವುದರಿಂದ ವಿಶ್ವದಾದ್ಯಂತ ಮುಸ್ಲಿಮರು ಸಂಭ್ರಮ ಆಚರಿಸುತ್ತಿದ್ದಾರೆ. ನಾನು ಆ ಎಲ್ಲ ಕಿಡಿಗೇಡಿಗಳಿಗೆ ಹೇಳುತ್ತಿದ್ದೇನೆ, ಮುಸ್ಲಿಮರಿಗೆ ಹೇಳುತ್ತಿದ್ದೇನೆ, ಕಮಲೇಶ್ ತಿವಾರಿ ಅವರ ಮನೆ ಇಂದು ಶೋಕಿಸುತ್ತಿರುವ ರೀತಿಯಲ್ಲಿ ನಾನು ನಿಮ್ಮನ್ನು ಶೋಕಿಸದಿದ್ದರೆ, ನಾನು ನನ್ನ ತಂದೆಯ ಮಗನಲ್ಲ. ನಾನು ಬದುಕಿರುವವರೆಗೂ ಶಸ್ತ್ರಾಸ್ತ್ರಗಳನ್ನು ಬಳಸುತ್ತೇನೆ. ನಾನು ಪ್ರತಿಯೊಬ್ಬ ಮುಸ್ಲಿಮರಿಗೂ ಹೇಳುತ್ತಿದ್ದೇನೆ, ನಾವು ಒಂದು ದಿನ ಇಸ್ಲಾಂ ಧರ್ಮವನ್ನು ದೇಶದಿಂದ ನಿರ್ಮೂಲನೆ ಮಾಡುತ್ತೇವೆ”.

ಎಡಭಾಗದಲ್ಲಿ ಖಾವಿ ಬಟ್ಟೆ ಧರಿಸಿರುವವರು ನರಸಿಂಗಾನಂದ್ . ಅವರ ಹಿಂದೆ ಬಿಳಿ ಅಂಗಿ ಧರಿಸಿ ಉದ್ದ ಮೀಸೆ ಬಿಟ್ಟಿರುವವರು ಹಿಂದೂ ರಕ್ಷಾ ದಳದ ಪಿಂಕಿ ಚೌಧರಿ

ಯತಿ ಎಡಭಾಗದಲ್ಲಿ ಬಿಳಿ ಅಂಗಿ ಮತ್ತು ಮೀಸೆ ಬಿಟ್ಟಿರುವ ವ್ಯಕ್ತಿ ನಿಂತಿದ್ದಾನೆ . ಈತ ಹಿಂದೂ ರಕ್ಷಾ ದಳದ ಪಿಂಕಿ ಚೌಧರಿ. 2020ರ ಜನವರಿಯಲ್ಲಿ ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲಿನ ಹಿಂಸಾತ್ಮಕ ದಾಳಿಯ ಹೊಣೆ ಹೊತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ಇನ್ನು ಫೋಟೊದಲ್ಲಿ ಬೂದು ಬಣ್ಣದ ಅಂಗಿ ಮತ್ತು ಕಿತ್ತಳೆ ಬಣ್ಣದ ಸ್ಕಾರ್ಫ್‌ನಲ್ಲಿರುವ ವ್ಯಕ್ತಿ 2020 ಫೆಬ್ರವರಿ 23 ರ ಬೆಳಿಗ್ಗೆ ವೀಡಿಯೊವನ್ನು ಪೋಸ್ಟ್ ಮಾಡಿದ್ದ ಹಿಂದುತ್ವ ನಾಯಕ ದೀಪಕ್ ಸಿಂಗ್ ಹಿಂದೂ. ಆತ ದೆಹಲಿಯ ಮೌಜ್‌ಪುರ್ ಚೌಕ್‌ನಲ್ಲಿ ಆ ದಿನ 2:30 ಕ್ಕೆ ಜನಸಮೂಹವನ್ನು ಒಟ್ಟುಗೂಡಿಸಲು ಕರೆ ನೀಡಿದ್ದ.. ನಂತರವೇ ದೆಹಲಿ ಗಲಭೆ ಶೀಘ್ರದಲ್ಲೇ ಪ್ರಾರಂಭವಾಯಿತು.

ನರಸಿಂಹಾನಂದ್ ಗಲಭೆಗೂ ಮುನ್ನ ಡಿಸೆಂಬರ್ 4, 2019 ರಂದು ಮಾಡಿದ ಭಾಷಣದಲ್ಲಿ, ಮುಸ್ಲಿಮರ ವಿರುದ್ಧ ಹೋರಾಡುವ ಇಚ್ಛೆ ಕಳೆದುಕೊಂಡಿರುವ ಹಿಂದೂಗಳ ಕುರಿತು ಮಾತನಾಡಿದ್ದರು. ಗಲಭೆಗಳು ನಂತರದಲ್ಲಿ ವ್ಯಾಪಕವಾಗಿ ನಡೆದಿಲ್ಲ ಎಂದು ಅವರು ವಿಷಾದಿಸಿದರು, ಹಿಂದೂಗಳು ಶಸ್ತ್ರಾಸ್ತ್ರಗಳೊಂದಿಗೆ ಬೀದಿಗಿಳಿಯಲು ವಿಫಲರಾಗಿದ್ದಾರೆ ಎಂದು ಆರೋಪಿಸಿದರು:

“ಇಂದು, ಅನೇಕ ಹಿಂದೂಗಳು ಹೇಳುತ್ತಿದ್ದಾರೆ, ಮಹಾರಾಜ್, ಎಲ್ಲಿಯೂ ಯಾವುದೇ ಗಲಭೆಗಳು ನಡೆಯುತ್ತಿಲ್ಲ. ಏಕೆ ಗಲಭೆಗಳು ಇಲ್ಲ? ಈ ಹಿಂದೆ ಹಿಂದೂಗಳನ್ನು ಶಸ್ತ್ರಾಸ್ತ್ರಗಳೊಂದಿಗೆ ಬೀದಿಗೆ ತರಲು ಬಳಸುತ್ತಿದ್ದ ಸಮಸ್ಯೆಗಳು, ಯಾವುದೇ ಹಿಂದೂಗಳಿಗೆ ಆ ವಿಷಯಗಳ ಬಗ್ಗೆ ಧ್ವನಿ ಎತ್ತುವ ಧೈರ್ಯವೂ ಇಲ್ಲ. ನಮ್ಮ ಸಂಸ್ಥೆಗಳು ಏನು ಬಳಸುತ್ತವೆ ಎಂದು ನನಗೆ ತಿಳಿದಿಲ್ಲ. ನಾವು ನಮ್ಮ ಸಹೋದರರಿಗಾಗಿ ಹೋರಾಡಲು ಸಿದ್ಧರಿಲ್ಲ, ನಮ್ಮ ಸಹೋದರರಿಗಾಗಿ ಮಾತನಾಡಲು ಸಹ ಸಿದ್ಧರಿಲ್ಲ. ಕೆಲವು ಮುಸ್ಲಿಮರು ಹಿಂದೂಗಳ ಗಂಟಲನ್ನು ಕತ್ತರಿಸುವಾಗ ಸುಮ್ಮನಿದ್ದೇವೆ… ” ಎಂದಿದ್ದರು.

ಫೆಬ್ರವರಿ 2020 ರ ಗಲಭೆಗೆ ವಾರಗಳು ಮತ್ತು ತಿಂಗಳುಗಳ ಮೊದಲಿನಿಂದ ದೆಹಲಿಯಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಯತಿ ಅವರ ಸಾರ್ವಜನಿಕ ಮಾತುಗಳು ಪ್ರಚೋದನಾಕಾರಿ ಆಗಿದ್ದವು. ಮುಸ್ಲಿಮರಿಗೆ ಪಾಠ ಕಲಿಸುವ ಗಲಭೆ ಉಂಟಾಗುವಂತೆ ಹಿಂದೂಗಳನ್ನು ಶಸ್ತ್ರಾಸ್ತ್ರಗಳೊಂದಿಗೆ ಬೀದಿಗೆ ತರುವುದು ಅವರ ಉದ್ದೇಶಿತ ಉದ್ದೇಶವಾಗಿತ್ತು.

ನರಸಿಂಗಾನಂದರ ಪ್ರಚೋದನೆಗೆ ನೆರವಾಗಿದ್ದು ಅವರ ಸಾಮಾಜಿಕ ಮಾಧ್ಯಮ ಮತ್ತು ವಿಡಿಯೋ ಬಳಕೆ. ನ್ಯೂಸ್ ನೇಷನ್, ಸುದರ್ಶನ್ ಟಿವಿ ಮತ್ತು ಆಜ್‌ತಕ್‌ನಂತಹ ಪ್ರಮುಖ ಹಿಂದಿ ಸುದ್ದಿ ವಾಹಿನಿಗಳ ಚರ್ಚಾ ಪ್ಯಾನೆಲ್‌ಗಳಲ್ಲಿ ಅವರು ಕಾಣಿಸಿಕೊಂಡಿದ್ದರು ಮತ್ತು ಈಗಲೂ ಕಾಣಿಸಿಕೊಳ್ಳುತ್ತಾರೆ. ಯೂಟ್ಯೂಬ್‌ನಲ್ಲಿ ಹಲವಾರು ಉಗ್ರಗಾಮಿ ಹಿಂದುತ್ವ ಜಾಲಗಳಿಗೆ ಯತಿ ಹೀರೋ ಆಗಿದ್ದಾರೆ. ಅವರು ಹಿಂಸಾಚಾರದ ಕರೆಗಳು ಲಕ್ಷಾಂತರ ಜನರನ್ನು ತಲುಪುವಂತೆ ನೋಡಿಕೊಳ್ಳುತ್ತಾರೆ ಎಂದು ಅವರ ಬಗ್ಗೆ ಹಿಂದೂತ್ವ ಕಾರ್ಯಕರ್ತರಿಗೆ ಅಭಿಮಾನವಿದೆ.
2019 ರ ಡಿಸೆಂಬರ್‌ನಲ್ಲಿ ಮತ್ತು ನಂತರ ಜನವರಿ ಮತ್ತು ಫೆಬ್ರವರಿ 2020 ರಲ್ಲಿ ಅವರ ಭಾಷಣಗಳು ದ್ವೇಷ ಭಾಷಣಗಳೇ ಆಗಿದ್ದವು. ಆದರೆ ಅಂತಿಮವಾಗಿ ನಡೆದ ಮುಸ್ಲಿಂ ವಿರೋಧಿ ಹಿಂಸಾಚಾರದ ಹಿನ್ನೆಲೆಯಲ್ಲಿ ನೋಡಿದಾಗ, ಅವರ ಭಾಷಣಗಳು ಹಿಂಸಾಚಾರಕ್ಕೆ ನೂರಾರು ಮತ್ತು ಸಾವಿರಾರು ಜನರನ್ನು ಆಮೂಲಾಗ್ರಗೊಳಿಸಲು ಮತ್ತು ಸಜ್ಜುಗೊಳಿಸಲು ಒಂದು ಪ್ರಮುಖ ಸಾಧನವಾಗಿತ್ತು ಎಂಬುದು ಸ್ಪಷ್ಟವಾಗಿದೆ. ಯತಿ ನರಸಿಂಗಾನಂದ್ ಸರಸ್ವತಿಯನ್ನು ಗಲಭೆಯ ಪ್ರಮುಖ ಸಂಚುಕೋರ ಎಂದು ಪೊಲೀಸರು ಪರಿಗಣಿಸುವುದಿಲ್ಲ ಎಂಬುದು ವಿಚಿತ್ರ.

ಜಫ್ರಾಬಾದ್‌ನಲ್ಲಿ ಸಿಎಎಯನ್ನು ವಿರೋಧಿಸಿ ಪ್ರತಿಭಟಿಸಿದವರ ಮೇಲೆ ಗಲಭೆ ಪ್ರಾರಂಭವಾಯಿತು ಮತ್ತು ನಂತರ ಮೂರು ದಿನಗಳ ಕಾಲ ಈಶಾನ್ಯ ದೆಹಲಿಯಲ್ಲಿ ಮುಸ್ಲಿಂ ಜೀವ ಮತ್ತು ಆಸ್ತಿಗಳ ಮೇಲೆ ಭೀಕರ ದಾಳಿಗಳನ್ನು ರೂಪಿಸಲಾಗಿತು ಎಂದು ನಮಗೆ ತಿಳಿದಿದೆ. 2019 ರ ಡಿಸೆಂಬರ್ 14 ರಂದು ಪ್ರಾರಂಭವಾದ ಸಿಎಎ ವಿರುದ್ಧ ಮುಸ್ಲಿಂ ಮಹಿಳೆಯರು ನಡೆಸಿದ ಶಾಹೀನ್ ಬಾಗ್ ಪ್ರತಿಭಟನೆಯ ಹಿನ್ನೆಲೆಯಲ್ಲಿ, ಯತಿ ಸಿಎಎಗೆ ಬೆಂಬಲವಾಗಿ ನಡೆದ ಸಭೆಗಳು ಮತ್ತು ಪ್ರದರ್ಶನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಈ ಘಟನೆಗಳ ಉದ್ದೇಶ ಮುಸ್ಲಿಂ ಪ್ರತಿಭಟನಾಕಾರರನ್ನು ಅಪಹಾಸ್ಯ ಮಾಡುವುದು, ಅವರನ್ನು ಹಿಂದೂಗಳ ಶತ್ರುಗಳೆಂದು ರಾಕ್ಷಸೀಕರಿಸುವುದು ಮತ್ತು ಅವರ ಪ್ರತಿಭಟನೆಯನ್ನು ಬಲವಂತವಾಗಿ ಕೊನೆಗೊಳಿಸುವ ಕೆಲಸ ಮಾಡುವುದು. ಹಿಂಸಾಚಾರದ ಕರೆ ಸೇರಿದಂತೆ ಅವರ ವಾಕ್ಚಾತುರ್ಯವು ಹಿಂಸಾಚಾರ ಪ್ರಾರಂಭವಾಗುವ ಹಿಂದಿನ ದಿನವಾದ 2019 ರ ಡಿಸೆಂಬರ್‌ನಿಂದ 2020 ರ ಫೆಬ್ರವರಿ 22 ರವರೆಗೆ ಕ್ರಮೇಣ ಉಲ್ಬಣಗೊಂಡಿತು ಎಂಬುದನ್ನು ದಾಖಲೆ ತೋರಿಸುತ್ತದೆ.

ದೆಹಲಿ ಪೊಲೀಸರು ಬಯಸಿದರೆ, ಯತಿ ನರಸಿಂಗಾನಂದ ಸರಸ್ವತಿ ವಿರುದ್ಧ ಪೂರ್ಣ ಪ್ರಮಾಣದ ಸಾಕ್ಷ್ಯಗಳನ್ನು ಸುಲಭವಾಗಿ ಜೋಡಿಸಬಹುದು. ಉಮರ್ ಖಾಲಿದ್ ಮತ್ತು ಇತರರ ವಿಷಯದಲ್ಲಿ, ಹಿಂಸಾಚಾರವನ್ನು ಪ್ರತಿಪಾದಿಸುವ ಯಾವುದೇ ಭಾಷಣಗಳು, ಯಾವುದೇ ಧರ್ಮದ ವಿರುದ್ಧ ದ್ವೇಷವನ್ನು ಉಂಟುಮಾಡುವ ಯಾವುದೇ ಹೇಳಿಕೆಗಳು ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿರುವ ಯಾವುದೇ ವ್ಯಕ್ತಿಯೊಂದಿಗೆ ಅವರು ಸಂಬಂಧ ಹೊಂದಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಆದರೆ ಯತಿ ನರಸಿಂಗಾನಂದ್ ಹಿಂಸೆಗೆ ಪ್ರಚೊದನೆ ನೀಡಿದ್ದರೂ, ಆತನ ವಿರುದ್ಧ ಯಾವುದೇ ಪ್ರಕರಣಗಳಿಲ್ಲ!

ವಿಷಕಾರಿ ವಾರಗಳು

ಸಿಎಎ ಪರ ಶಿಬಿರ/ಸಭೆಗಳಲ್ಲಿನ ಪ್ರಚೋದನಾತ್ಮಕ ಮತ್ತು ಹಿಂಸಾತ್ಮಕ ಮಾತುಗಳನ್ನು ಗುಪ್ತಚರ ಸಂಸ್ಥೆಗಳು ಮೇಲ್ವಿಚಾರಣೆ ಮಾಡಿದ್ದರೆ, ಅವರು ಮೊಗ್ಗಿನಲ್ಲಿಯೇ ಹಿಂಸಾಚಾರವನ್ನು ತೊಡೆದುಹಾಕಬಹುದಿತ್ತು. ಬದಲಾಗಿ, ಬೀದಿಗಳಲ್ಲಿ ಮತ್ತು ಯೂಟ್ಯೂಬ್‌ನಲ್ಲಿ ನಡೆಯುತ್ತಿದ್ದ ಈ ತಯಾರಿಯ ಬಗ್ಗೆ ಪೊಲೀಸರು ಕಣ್ಣುಮುಚ್ಚಿ ಕುಳಿತಿದ್ದರು. ಡಿಸೆಂಬರ್ 22, 2019 ರಂದು ಅವರು ದೆಹಲಿಯ ಜಂತರ್ ಮಂತ್ರದಲ್ಲಿ ಹೀಗೆ ಹೇಳಿದರು.

“ಸಿಎಎ ಮುಸ್ಲಿಮರ ವಿರುದ್ಧವಲ್ಲ, ಆದರೆ ದೇಶದ್ರೋಹಿಗಳ ವಿರುದ್ಧವಾಗಿದೆ. ಅವರು ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಬಹುದು ಮತ್ತು ದೇಶವನ್ನು ವಶಪಡಿಸಿಕೊಳ್ಳಬಹುದು ಎಂದು ಭಾವಿಸಿದ್ದಾರೆ. ಆದರೆ ಮೋದಿ ಜಿ ಮತ್ತು ಅಮಿತ್ ಶಾ ಈ ಕಾನೂನನ್ನು ತಂದು ಅವರ ಕನಸನ್ನು ಒಡೆದಿದ್ದಾರೆ. ಹಿಂದೆ ಸರಿಯದಂತೆ ನಾನು ಒತ್ತಾಯಿಸುತ್ತೇನೆ, ಆದರೆ ಎನ್‌ಆರ್‌ಸಿ, ಏಕರೂಪದ ಸಿವಿಲ್ ಕೋಡ್ ಮತ್ತು ನಂತರ ಜನಸಂಖ್ಯಾ ನಿಯಂತ್ರಣ ಕಾನೂನಿನೊಂದಿಗೆ ಮುಂದುವರಿಯಿರಿ”

2019 ರ ಡಿಸೆಂಬರ್ 25 ರಂದು ಸಿಎಎಗೆ ಬೆಂಬಲವಾಗಿ ರ‍್ಯಾಲಿಯೊಂದನ್ನು ಜಂತರ್ ಮಂತರ್‌ನಲ್ಲಿ ಉಗ್ರಗಾಮಿ ವಿಶ್ವ ಸನಾತನ ಸಂಘದ ಸಂಸ್ಥಾಪಕ ಉಪದೇಶ್ ರಾಣಾ ನಡೆಸಿದರು. ಯತಿ ನರಸಿಂಗಾನಂದ ಸರಸ್ವತಿ ಸ್ಟಾರ್ ಸ್ಪೀಕರ್ ಆಗಿದ್ದರು. ಈ ಹೊತ್ತಿಗೆ, ಅವರ ವಾಕ್ಚಾತುರ್ಯವು ಈಗಾಗಲೇ ಹಲವರ ಗಮನ ಸೆಳೆದಿತ್ತು. ಸಿಎಎಗೆ ಭಾರತೀಯ ಮುಸ್ಲಿಮರೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಅಮಿತ್ ಶಾ ಹೇಳಿರಬಹುದು, ಆದರೆ ಯತಿ ಪ್ರಕಾರ, ಸಿಎಎ ಭಾರತೀಯ ಮುಸ್ಲಿಮರ ಜನಸಂಖ್ಯೆಯನ್ನು ನಿಯಂತ್ರಿಸುವ ಮೊದಲ ಹೆಜ್ಜೆಯಾಗಿದೆ. ಸಿಎಎಯನ್ನು ಪ್ರತಿಭಟಿಸುತ್ತಿದ್ದ ಮುಸ್ಲಿಮರಿಗೆ ಪಾಠ ಕಲಿಸಲು ಹಿಂದೂಗಳು ಬೀದಿಗಿಳಿಯಬೇಕಾಗುತ್ತದೆ ಎಂದು ಜಂತರ್ ಮಂತರ್‌ನಲ್ಲಿ ಅವರು ಮೊದಲ ಬಾರಿಗೆ ಹೇಳಿದರು:

“ನಾನು ನಿಮ್ಮೆಲ್ಲ ಯುವಕರಿಗೆ ಕೇಳುತ್ತೇನೆ, ಬೀದಿಗಳಲ್ಲಿ ಹೊರಬರುತ್ತಿರುವ ಈ ಮುಸ್ಲಿಮರಿಗೆ, ನಾವು ಹೊರಬರುವ ದಿನ ಅವರಿಗೆ ಏನಾಗಬಹುದು ಎಂಬುದನ್ನು ತೋರಿಸಬೇಕು. ನಾನು ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರಿಗೆ ಹೇಳಲು ಬಯಸುತ್ತೇನೆ, ದಯವಿಟ್ಟು ಚಿಂತಿಸಬೇಡಿ, ನಾವೆಲ್ಲರೂ ನಿಮ್ಮೊಂದಿಗಿದ್ದೇವೆ. ನೀವು ಸಿಎಎ ಅನ್ನು ತಂದಿದ್ದೀರಿ, ಈಗ ನಾಗರಿಕರ ರಾಷ್ಟ್ರೀಯ ನೋಂದಣಿಯನ್ನು ತನ್ನಿ.. ಅದರ ನಂತರ ‘ಕಟುವಾಸ್’ (ಮುಸ್ಲಿಮರ) ಜನಸಂಖ್ಯೆಯನ್ನು ನಿಲ್ಲಿಸಿ. ಈ ಹಂದಿಗಳು ತಮ್ಮ ಸಂಖ್ಯೆಯನ್ನು ಹೆಚ್ಚಿಸಿದರೆ, ಅವು ಹೊಲಸು ಹರಡುತ್ತವೆ, ಆದ್ದರಿಂದ ಈ ದೇಶವನ್ನು ಕೊಳೆ ಮತ್ತು ಕೊಳಕಿನಿಂದ ರಕ್ಷಿಸಲು, ದಯವಿಟ್ಟು ಅವರ ಜನಸಂಖ್ಯೆಯನ್ನು ತಡೆಯಲು ಕಾನೂನು ತರಲು, ನಾವು ನಿಮ್ಮನ್ನು ಬೆಂಬಲಿಸುತ್ತೇವೆ.”

ನರಸಿಂಗಾನಂದರು ಮುಸ್ಲಿಮರಿಗೆ ‘ಸುವ್ವರ್’ ಮತ್ತು ‘ಕಟುವಾಸ್’ ನಂತಹ ನಿಂದನೀಯ ಪದಗಳನ್ನು ಬಳಸುತ್ತಾರೆ ಮತ್ತು ನಂತರ ಅವರ ಕಣ್ಣುಗಳನ್ನು ಕಿತ್ತುವಂತೆ ಕರೆ ನೀಡುತ್ತಾರೆ:
“ನೀವೆಲ್ಲರೂ ಧರ್ಮಕ್ಕಾಗಿ ಹೋರಾಡುವವರೇ. ನಿಮ್ಮಲ್ಲಿ ಪ್ರತಿಯೊಬ್ಬರೂ ಹುಲಿಗಳು. 1,25,000 ಹಂದಿಗಳಿಗಿಂತ ಹೆಚ್ಚು.. [ಮುಸ್ಲಿಮರು] ಭಾರತವನ್ನು ಸ್ವಾಧೀನಪಡಿಸಿಕೊಳ್ಳುವ ಕನಸುಗಳನ್ನು ನೋಡುತ್ತಿದ್ದರೆ, ನಾವು ಅವರ ಕಣ್ಣುಗಳನ್ನು ಕಿತ್ತುತ್ತೇವೆ ಎಂದು ಅವರಿಗೆ ತಿಳಿಸಿ.”

ಈ ಅವಧಿಯಲ್ಲಿ ನರಸಿಂಗಾನಂದ್ ಅವರ ಪ್ರಚೋದನೆಯು ಅಂತಿಮ ಯುದ್ಧ ಮತ್ತು ಅಂತಿಮ ಪರಿಹಾರ ಸಮೀಪಿಸುತ್ತಿದೆ ಎಂಬ ಕಲ್ಪನೆಯಿಂದ ತುಂಬಿದೆ. ಗಲಭೆಗೆ ಎಂಟು ವಾರಗಳ ಮೊದಲು ಅವರು ಡಿಸೆಂಬರ್ 25, 2019 ರಂದು ಹೇಳುತ್ತಾರೆ:
“ನಾನು ಮತ್ತೊಮ್ಮೆ ಹಿಂದೂಗಳಿಗೆ ಮನವಿ ಮಾಡುತ್ತಿದ್ದೇನೆ, ಇಂದು ಸಮಯ ಬಂದಿದೆ, ಇಂದಿಗೂ ನಾವು ಎದ್ದು ನಿಲ್ಲದಿದ್ದರೆ ನಾವು ಬದುಕುಳಿಯುವುದಿಲ್ಲ. ಇದು ಅಂತಿಮ ಯುದ್ಧ ಎಂದು ನಾನು ಹಿಂದೂಗಳಿಗೆ ಹೇಳಲು ಬಯಸುತ್ತೇನೆ, ನೀವು ಈ ಯುದ್ಧವನ್ನು ಕಳೆದುಕೊಂಡರೆ ಏನೂ ಉಳಿಯುವುದಿಲ್ಲ.”

ಹೇಗಾದರೂ, ಯತಿ ನರಸಿಂಗಾನಂದರು ಆ ದಿನ ಹೇಳಲು ಇನ್ನೂ ಹೆಚ್ಚಿನದನ್ನು ಹೊಂದಿದ್ದರು. ತಮ್ಮ ಪ್ರಚೋದನಕಾರಿ ಭಾಷಣವನ್ನು ಮುಗಿಸಿದ ನಂತರ, ಅವರು ಹಲವಾರು ಹಿಂದುತ್ವ ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನಗಳನ್ನು ನೀಡಿದರು. ಅಲ್ಲಿ ಅವರು ತಮ್ಮ ತೀವ್ರ ಪ್ರಚೋದನಾತ್ಮಕ ಭಾಷಣಗಳನ್ನು ಮುಂದುವರೆಸಿದರು.. ಈ ಚಾನೆಲ್‌ಗಳಲ್ಲಿ ಒಂದಾದ ‘ಹಿಂದೂ ಪಬ್ಲಿಷರ್’ ಸಿಎಎಯನ್ನು ವಿರೋಧಿಸುವವರು ‘ದೇಶವನ್ನು ಸುಡುತ್ತಿದ್ದಾರೆ’ ಎಂದು ಹೇಳಿದ ಜನರ ಬಗ್ಗೆ ಯತಿ ಅವರ ಅಭಿಪ್ರಾಯಗಳನ್ನು ಕೇಳಿತು.

“ಈ ಜನರು ದೇಶದ ಶತ್ರುಗಳು, ಅವರನ್ನು ಜೈಲಿಗೆ ಹಾಕಬೇಕು. ಮತ್ತು ಜೈಲಿನಲ್ಲಿದ್ದ ನಂತರ ಅವರು ಸುಧಾರಣೆ ಆಗದಿದ್ದರೆ, ಅವರಿಗೆ ಮರಣದಂಡನೆ ವಿಧಿಸಬೇಕು” ಎಂದಿದ್ದರು.

ಆಗ ‘ಹಿಂದೂ ಪಬ್ಲಿಷರ್’ ಚಾನೆಲ್ ವರದಿಗಾರ ಯತಿ ಅವರನ್ನು ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಮುಸ್ಲಿಂ ನಿರಾಶ್ರಿತರಿಗೆ ಭಾರತ ತನ್ನ ಬಾಗಿಲು ತೆರೆಯಬೇಕೆಂದು ಬಯಸುವವರು ಯಾರು ಎಂದು ಕೇಳುತ್ತಾರೆ. ನರಸಿಂಗಾನಂದ್ ಅವರ ಉತ್ತರ ಆಘಾತಕಾರಿ: ಅವರು ಭಾರತದ ಮುಸ್ಲಿಮರನ್ನು ಹಿಂದೂಗಳು ಮತ್ತು ಭಾರತವನ್ನು ನಾಶಮಾಡಲು ಹೊರಟ ಜಿಹಾದಿಗಳು ಎಂದು ವಿವರಿಸುತ್ತಾರೆ ಮತ್ತು ಅಂತಹ ಜನರನ್ನು ತಮ್ಮ ಮೂಲದಿಂದ ಮುಗಿಸುವುದು ಹಿಂದೂಗಳ ಮೂಲ ಧಾರ್ಮಿಕ ಕರ್ತವ್ಯವಾಗಿರಬೇಕು ಎಂದು ಹೇಳುತ್ತಾರೆ:

“ಈ ಜನರು ದೇಶದಲ್ಲಿ ಕೊಳೆ ಹರಡಲು ಬಯಸುವ ಜಿಹಾದಿಗಳು, ಇವರು ದೇಶವನ್ನು ನಾಶಮಾಡಲು ಬಯಸುವ ಜಿಹಾದಿಗಳು, ಇವರು ನಮ್ಮ ಸಂಪನ್ಮೂಲಗಳನ್ನು ಸ್ವಾಧೀನಪಡಿಸಿಕೊಳ್ಳಲು ಬಯಸುವ ಜಿಹಾದಿಗಳು, ಇವರೆಲ್ಲರೂ ನಮ್ಮೆಲ್ಲರನ್ನೂ ಕೊಲ್ಲಲು ಬಯಸುವ ಜಿಹಾದಿಗಳು, ಈ ಜಿಹಾದಿಗಳು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳನ್ನು ವೇಶ್ಯೆಯರನ್ನಾಗಿ ಮಾಡಲು ನೋಡುತ್ತಿದ್ದಾರೆ. ಅಂತಹ ಜನರನ್ನು ಅವರ ಮೂಲದಿಂದ ನಾಶಪಡಿಸಬೇಕು ಮತ್ತು ಇದು ನಮ್ಮ ಮೂಲ ಧಾರ್ಮಿಕ ಕರ್ತವ್ಯ.”

ಸಿಎಎಯ ಕುರಿತು ಮೋದಿ ಸರ್ಕಾರದ ವಕೀಲರು ಹೇಳದೆ ಬಿಡಲು ಬಯಸಿದ್ದನ್ನು ಹೇಳಲು ನರಸಿಂಗಾನಂದರು ಸಿದ್ಧರಾಗಿದ್ದರು: ಹಿಂದೂತ್ವ ಗುಂಪುಗಳು ವಿಭಜನೆಯ ಅಪೂರ್ಣ ಕಾರ್ಯಸೂಚಿಯನ್ನು ಕರೆಯುವಲ್ಲಿ ಸಿಎಎ ಅತ್ಯಗತ್ಯ ಭಾಗವಾಗಿದೆ – ಎಲ್ಲ ಮುಸ್ಲಿಮರನ್ನು ಭಾರತದಿಂದ ಹೊರಹಾಕುವುದು:

ಯತಿ: ವಿಭಜನೆಯ ನಂತರ, ಜಿಹಾದಿಗಳಾದ ಗಾಂಧಿ ಮತ್ತು ನೆಹರೂ ಈ ದೇಶದ್ರೋಹಿಗಳನ್ನು ದೇಶದಲ್ಲಿ ಉಳಿಸಿಕೊಂಡರು. ಇದು ಭಾರತದ ಅತಿದೊಡ್ಡ ದುರದೃಷ್ಟ

ಪ್ರಶ್ನೆ: ಆದರೆ ಮಹಾರಾಜ್ ಜಿ, ಈ ಜನರು ಆಯ್ಕೆಯಿಂದ ಇಲ್ಲಿಯೇ ಇದ್ದರು ಎಂದು ಹೇಳುತ್ತಾರೆ.

ಯತಿ: ಇದು ಅವರ ಆಯ್ಕೆಯಾಗಿರಲಿಲ್ಲ, ಅದು ನಮ್ಮ ದೌರ್ಬಲ್ಯ, ನಾವು ಅವರನ್ನು ಹೊರಗೆ ಓಡಿಸಬೇಕಿತ್ತು…

ಹಿಂದೂಗಳು ಅರ್ಥಮಾಡಿಕೊಳ್ಳಬೇಕಾಗುತ್ತದೆ, ಇವರು ನಮ್ಮ ಜನರು ಅಲ್ಲ, ಅವರು ಜಿಹಾದಿಗಳು ಮತ್ತು ನಾವು ಅವರನ್ನು ಮುಗಿಸಬೇಕಾಗಿದೆ, ಇದು ನಮ್ಮ ಧರ್ಮ, ಇದು ದೇಶಪ್ರೇಮ. ಯತಿ ನರಸಿಂಗಾನಂದ ಸರಸ್ವತಿ ಖಬರ್ ಇಂಡಿಯಾ ಸುದ್ದಿ ವಾಹಿನಿಗೆ ತಿಳಿಸಿದರು, “ಭಾರತವು ತನ್ನ ಮುಸ್ಲಿಮರೊಂದಿಗೆ ವ್ಯವಹರಿಸುವಾಗ ಚೀನಾದ ಮಾದರಿಯನ್ನು ಅನುಸರಿಸಬೇಕಾಗಿದೆ, ಅಂದರೆ ಇಸ್ಲಾಂ ಧರ್ಮವನ್ನು ಮಾನಸಿಕ ಅಸ್ವಸ್ಥತೆಯೆಂದು ಪರಿಗಣಿಸಬೇಕು.. ಅದು ಹರಡಲು ಅನುಮತಿಸಬಾರದು”

ಯತಿ; ಚೀನಾ ಮುಸ್ಲಿಮರೊಂದಿಗೆ ಏನು ಮಾಡುತ್ತಿದೆ ಎಂಬುದನ್ನು ಇಡೀ ಜಗತ್ತು ನೋಡಿದೆ. ಇಸ್ಲಾಂ ಧರ್ಮವು ಮಾನಸಿಕ ಅಸ್ವಸ್ಥತೆಯಾಗಿದೆ ಮತ್ತು ನಮ್ಮ ದೇಶವು ಈ ರೋಗಕ್ಕೆ ಬಲಿಯಾಗಲು ನಾವು ಬಿಡುವುದಿಲ್ಲ ಎಂದು ಚೀನಾದ ಅಧ್ಯಕ್ಷರು ಹೇಳಿದ್ದಾರೆ.

ಪ್ರಶ್ನೆ: ಹಾಗಾದರೆ ನಾವು ನಮ್ಮ ದೇಶವನ್ನು ಹೇಗೆ ಉಳಿಸಬೇಕು?

ಯತಿ: ಚೀನಾದ ಮಾದರಿಯನ್ನು ಅನುಸರಿಸುವ ಮೂಲಕ ನಮ್ಮ ದೇಶವು ತನ್ನನ್ನು ತಾನು ಉಳಿಸಿಕೊಳ್ಳುತ್ತದೆ. ಬೇರೆ ದಾರಿಯಿಲ್ಲ.

‘ಧರಮ್ ಸಂಸದ್’ ಪಾತ್ರ

ಜಂತರ್ ಮಂತರ್ ಘಟನೆಯ ನಂತರ, ಯತಿ ನರಸಿಂಗಾನಂದರು ಯುವ ಹಿಂದೂಗಳನ್ನು ಹೆಚ್ಚು ತೀವ್ರವಾದ ಉಪದೇಶದ ಕಾರ್ಯಕ್ರಮಕ್ಕಾಗಿ ಸಜ್ಜುಗೊಳಿಸಲು ತಮ್ಮ ಶಕ್ತಿಯನ್ನು ಕೇಂದ್ರೀಕರಿಸಿದ್ದಾರೆ.

ಡಿಸೆಂಬರ್ 29 ರಂದು, ಅವರು ‘ಹಿಂದೂ ಸಿಂಹಗಳು’ ಎಂದು ಕರೆಯುವ ವೀಡಿಯೊ ಮನವಿಯನ್ನು ಮಾಡಿ, ಗಾಜಿಯಾಬಾದ್‌ನಲ್ಲಿರುವ ತಮ್ಮ ಪ್ರಧಾನ ಕಚೇರಿಗೆ ಎರಡು ದಿನಗಳ ಧರಮ್ ಸಂಸದ್‌ಗೆ ಬರಲು ಸೂಚಿಸಿದರು.. ‘ನೀವು ನನಗೆ ಸಹಾಯ ಮಾಡದಿದ್ದರೆ ಏನೂ ಆಗುವುದಿಲ್ಲ’, ಅವರು ಹೇಳಿದರು:

“ನಾನು ಎಲ್ಲ ಯುವ ಹಿಂದೂಗಳಿಗೆ ಮನವಿ ಮಾಡುತ್ತೇನೆ, ನನ್ನ ಧ್ವನಿ ಎಲ್ಲೆಲ್ಲಿ ತಲುಪಿದರೂ, ನೀವೆಲ್ಲರೂ ಜನವರಿ 12 ಮತ್ತು 13 ರಂದು ಗಾಜಿಯಾಬಾದ್‌ನ ಧರಮ್ ಸಂಸದ್‌ನಲ್ಲಿ ಭಾಗವಹಿಸಬೇಕು. ಇದು ನನ್ನ ಮನವಿ. ನನ್ನ ಮಕ್ಕಳು, ನನ್ನ ಸಿಂಹಗಳು, ನೀವು ನನಗೆ ಸಹಾಯ ಮಾಡದಿದ್ದರೆ ಏನೂ ಆಗುವುದಿಲ್ಲ.”

ಧರಮ್ ಸಂಸದ್ ಅಥವಾ ಧಾರ್ಮಿಕ ಸಭೆ 2020 ರ ಜನವರಿ 12 ಮತ್ತು 13 ರಂದು ನಡೆಯಿತು ಮತ್ತು ಹಿಂದುತ್ವ ವಿಚಾರವಾದಿಗಳು ಮತ್ತು ಧಾರ್ಮಿಕ ವ್ಯಕ್ತಿಗಳ ಹಲವಾರು ಪ್ರಚೋದನಾಕಾರಿ ಭಾಷಣಗಳನ್ನು ಕಂಡಿತು.

ಜನವರಿ 16, 2020 ರಂದು ಸತ್ಯ ಸನಾತನ ಯೂಟ್ಯೂಬ್ ಚಾನೆಲ್ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಈ ಧರ್ಮ ಸಂಸತ್‌ನ ಮುಖ್ಯ ನಿರ್ಣಯಗಳು ಮತ್ತು ಸಂದೇಶದ ಕುರಿತು ನರಸಿಂಗಾನಂದ್, ಅಂಕುರ್ ಆರ್ಯ ಮತ್ತು ಯತಿ ಮಾ ಚೆಟ್ನಾ ಸರಸ್ವತಿ ಮಾತನಾಡಿದ್ದಾರೆ.
ಹಿಂದೂಗಳು ಪೊಲೀಸ್ ಮತ್ತು ಸೈನ್ಯವನ್ನು ಅವಲಂಬಿಸಬಾರದು, ಆದರೆ ಅವರ ಪುರುಷತ್ವವನ್ನು ಪ್ರತಿಪಾದಿಸಬೇಕು ಮತ್ತು ತಮ್ಮ ರಕ್ಷಣೆಗಾಗಿ ಏನು ಮಾಡಬೇಕೆಂಬುದನ್ನು ನರಸಿಂಗಾನಂದ ಹೇಳಿದರು. ಪ್ರತಿ ಹಿಂದೂ ಮನೆಯೂ ಹೆಚ್ಚು ಮಕ್ಕಳನ್ನು ಉತ್ಪಾದಿಸಬೇಕು. ಪ್ರತಿ ಹಿಂದೂ ಮನೆಯೂ ಶಸ್ತ್ರಸಜ್ಜಿತರಾಗಿರಬೇಕು. ಡೊನಾಲ್ಡ್ ಟ್ರಂಪ್ ಭಯೋತ್ಪಾದಕರನ್ನು ಕೊಲ್ಲುವುದಾಗಿ ತಿಳಿಸಿದ್ದರಿಂದ ಧರ್ಮ ಸಂಸದ್ ಅವರನ್ನು ಗೌರವಿಸಲು ನಿರ್ಧರಿಸಿದೆ ಎಂದು ಅವರು ಹೇಳಿದರು.

“ನಮ್ಮ ಧರ್ಮ ಸಂಸದ್ ಡೊನಾಲ್ಡ್ ಟ್ರಂಪ್ ಅವರನ್ನು ಗೌರವಿಸುತ್ತದೆ ಮತ್ತು ನಮ್ಮ ಮುಂದಿನ ಧರ್ಮ ಸಂಸದ್‌ಗೆ ಅವರನ್ನು ಆಹ್ವಾನಿಸಲು ನಿರ್ಧರಿಸಿದೆ. ಅವರು ಭಯೋತ್ಪಾದಕರನ್ನು ತಮ್ಮ ಮನೆಗಳಲ್ಲಿ ಕೊಲ್ಲುವ ರೀತಿ, ಇದು ಇಡೀ ಜಗತ್ತಿಗೆ ಬಹಳ ಅವಶ್ಯಕವಾಗಿದೆ ಮತ್ತು ಡೊನಾಲ್ಡ್ ಟ್ರಂಪ್ ಅವರನ್ನು ನಮ್ಮ ನಾಯಕ ಎಂದು ನಾವು ಪರಿಗಣಿಸುತ್ತೇವೆ. ”

ಟ್ರಂಪ್ ಕುರಿತ ಈ ಉಲ್ಲೇಖವು 2019 ರ ಡಿಸೆಂಬರ್‌ನಿಂದ ನರಸಿಂಗಾನಂದ ಮಾತನಾಡುತ್ತಿದ್ದ ಅಂತಿಮ ಯುದ್ಧದ ಸಮಯದ ಬಗ್ಗೆ ಒಂದು ಸೂಕ್ಷ್ಮ ಸಂದೇಶವಾಗಿದೆಯೇ? ನರಸಿಂಗಾನಂದರು ಯಾವ ರೀತಿಯ ಸಂದೇಶವನ್ನು ನೀಡುತ್ತಾರೋ ಆಮೂಲಾಗ್ರವಾಗಿ ಉಗ್ರಗಾಮಿ ಹಿಂದುತ್ವ ಕಾರ್ಯಕರ್ತರು ತಮ್ಮ ಭೇಟಿಯ ಸಮಯದಲ್ಲಿ ಮುಸ್ಲಿಮರನ್ನು ಅವರ ಸ್ವಂತ ಮನೆಗಳಲ್ಲಿ ಗುರಿಯಾಗಿಸಿಕೊಂಡು ತಮ್ಮ ನಾಯಕನನ್ನು ಗೌರವಿಸಲು ಆಯ್ಕೆ ಮಾಡಿರುವುದು ಕೇವಲ ಕಾಕತಾಳೀಯವೇ? ನಿಜವಾದ ಪಿತೂರಿಯ ಬಗ್ಗೆ ತನಿಖೆ ನಡೆಸಿದ್ದರೆ ಮಾತ್ರ ದೆಹಲಿ ಪೊಲೀಸರು ಉತ್ತರಿಸಬಹುದಿತ್ತು.

ಕೊಲ್ಲಲು ಮುಕ್ತ ಕರೆಗಳು

ಯತಿ ಧರಮ್ ಸಂಸದ್ ದೆಹಲಿ ಹಿಂಸಾಚಾರದಲ್ಲಿ ಕಾಲಗಣನೆಯಲ್ಲಿ ಒಂದು ಪ್ರಮುಖ ಘಟನೆಯಾಗಿ ಕಾಣಿಸಿಕೊಳ್ಳಲು ಕಾರಣ, ಅದರ ನಿಜವಾದ ಸಂದೇಶವೆಂದರೆ ಅದರಲ್ಲಿ ಭಾಗವಹಿಸಿದ ನೂರಾರು ಯುವ ಹಿಂದೂಗಳು ತಮ್ಮ ನಿಜವಾದ ಶತ್ರು ಮುಸ್ಲಿಮರು ಮತ್ತು ಈ ಶತ್ರುವನ್ನು ಕೊಲ್ಲಬೇಕಾಗಿತ್ತು ಎಂದು ಹೇಳುವುದು.

ಸತ್ಯ ಸನಾತನ ಚಾನೆಲ್ ನಡೆಸುತ್ತಿರುವ ಅಂಕುರ್ ಆರ್ಯ ಈ ಸಂದೇಶದ ಮೊದಲ ಭಾಗವನ್ನು ನೇರವಾಗಿ ವಿವರಿಸಿದರು:

“ಗುರು ಗೋಬಿಂದ್ ಸಹಾಬ್ ಒಮ್ಮೆ 1,25,000 ಜನರ ವಿರುದ್ಧ ಒಬ್ಬರನ್ನು ನಿಲ್ಲಿಸುವುದಾಗಿ ಹೇಳಿದರು. ಅಂದಿನಿಂದ, ಈ 1, 25,000 ಯಾರು ಎಂದು ನಾವು ಯೋಚಿಸಿದ್ದೇವೆ. ಯತಿಜಿ ಅತ್ಯಂತ ಸ್ಪಷ್ಟವಾದ ಮಾತುಗಳಲ್ಲಿ ಆ 1,25,000 ಯಾರು ಎಂದು ಹೇಳಿದ್ದಾರೆ. ಅವರು ಜಿಹಾದಿಗಳು. ಅವರು ನಮ್ಮ ಧರ್ಮದ ಶತ್ರುಗಳು.

ನಾವು ಯಾವಾಗಲೂ ಆಶ್ಚರ್ಯ ಪಡುತ್ತಿದ್ದೆವು. ಯಾರೂ ವಿವರಿಸುವುದಿಲ್ಲ, ದೊಡ್ಡ ಧರ್ಮ ಸಂಸದರು ಸಹ ಈ ಶತ್ರುಗಳು ಯಾರೆಂದು ನಮಗೆ ಹೇಳಲಾರರು. ಆದರೆ ಸ್ವಾಮೀಜಿ ನಮಗೆ ಸ್ಪಷ್ಟವಾಗಿ ವಿವರಿಸಿದ್ದಾರೆ.

ಇಲ್ಲಿಂದ, ಯುವಜನರಿಗೆ ಪದಗಳ ಹಿಂದಿನ ಅರ್ಥಮಾಡಿಕೊಳ್ಳಲು ಅನುಮತಿ ದೊರೆತಿದೆ. ಏಕೆಂದರೆ ಗುರು ಗೋಬಿಂದ್ ಅವರ ಕಾಲದಲ್ಲಿ ಯಾರೊಬ್ಬರು ಹೋರಾಡಬೇಕು ಮತ್ತು ಒಬ್ಬರು ಕತ್ತರಿಸಬೇಕು ಎಂದು ಹೇಳಿದ್ದ ಆ ಲಕ್ಷ (125,000 ಜನರು) ಯಾರೆಂದು ಮೊದಲೇ ಅವರಿಗೆ ತಿಳಿದಿರಲಿಲ್ಲ.”

ನಂತರ ನರಸಿಂಗಾನಂದರು ತಮ್ಮ ಆಪ್ತ ಸಹವರ್ತಿ ಯತಿ ಮಾ ಚೆಟ್ನಾ ಸರಸ್ವತಿಗೆ ಮುಕ್ತಾಯದ ಅಭಿಪ್ರಾಯವನ್ನು ನೀಡಲು ತಿಳಿಸಿದರು. ಆಕೆ ಹೇಳಿದ್ದು ಕೊಲ್ಲುವ ಮುಕ್ತ ಪ್ರಚೋದನೆಯಾಗಿದೆ, ಅಕ್ಷರಶಃ ಹಾಗೆ ಇದೆ:

“ಇಂದು, ನಮ್ಮ ಗುರುಗಳಾದ ನರಸಿಂಗಾನಂದ ಸರಸ್ವತಿ ಜಿ ಅವರು ನಮಗೆ ಈ ಸಂದೇಶವನ್ನು ನೀಡಿದ್ದಾರೆ: ಈಗ ನಾವು ಶಸ್ತ್ರಾಸ್ತ್ರಗಳಿಂದ ಶಸ್ತ್ರಸಜ್ಜಿತರಾಗಲು ಮತ್ತು ಶತ್ರುಗಳನ್ನು ಹತ್ಯೆ ಮಾಡುವ ಸಮಯ ಬಂದಿದೆ. ಏಕೆಂದರೆ ಈ ರಾಕ್ಷಸರು / ರಕ್ತಪಿಶಾಚಿಗಳನ್ನು ನೀವು ಶಸ್ತ್ರಾಸ್ತ್ರ ಹೊಂದಿರುವಾಗ ಮತ್ತು ನಿಮ್ಮ ನಂಬಿಕೆಯನ್ನು ಎತ್ತಿಹಿಡಿಯುವ ಸಾಮರ್ಥ್ಯವನ್ನು ಹೊಂದಿರುವಾಗ ಮಾತ್ರ ಇತ್ಯರ್ಥಪಡಿಸಬಹುದು. ಇಲ್ಲದಿದ್ದರೆ ಎಲ್ಲವೂ ಕಳೆದುಹೋಗುತ್ತದೆ. ಆದ್ದರಿಂದ ಈ ಸಂದೇಶ ತಲುಪುವ ಎಲ್ಲರಿಗೂ ನನ್ನ ವಿನಂತಿ, ಅವರು ಈ ಸಂದೇಶವನ್ನು ಎಚ್ಚರಿಕೆಯಿಂದ ಆಲಿಸಬೇಕು ಮತ್ತು ಅವರಿಂದ ಸಮಯ ಏನು ಕೇಳುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.”

ಈ ಚಿಲ್ಲಿಂಗ್ ಸಂದೇಶಗಳನ್ನು ರವಾನಿಸಿ ಪ್ರಸಾರ ಮಾಡಿದ ಒಂದು ತಿಂಗಳ ನಂತರ, ಈಶಾನ್ಯ ದೆಹಲಿಯ ಬೀದಿಗಳಲ್ಲಿ ಹತ್ಯಾಕಾಂಡದ ಮೂಲಕ ನರಸಿಂಗಾನಂದ ಅವರ ಧರ್ಮ ಸಂಸದದ ನಿರ್ಣಯವನ್ನು ಜಾರಿಗೆ ತರಲಾಯಿತು. ‘ಯುವ ಸಿಂಹಗಳು, ಈ ಬಗ್ಗೆ ಯಾವುದೇ ಸಂದೇಹವಿಲ್ಲ – ಅವರ ವಿರುದ್ಧ ಹೋರಾಡಬೇಕು ಮತ್ತು ಅವರನ್ನು ಕತ್ತರಿಸಿ ಕುರುಡಾಗಿಸಬೇಕು.

‘ಮುಸ್ಲಿಮರಿಗೆ ಜೀವಂತವಾಗಿರಲು ಯಾವುದೇ ಹಕ್ಕಿಲ್ಲ’

ಆದರೆ ಫೆಬ್ರವರಿ 22, 2020 ರಂದು ನರಸಿಂಗಾನಂದರು ಮಾಡಿದ ಭಾಷಣದ ಅಂತಿಮ ಜನಾಂಗೀಯ ಕರೆ ಹೀಗಿತ್ತು. ಅದು ಮುಸ್ಲಿಂ ವಿರೋಧಿ ಹಿಂಸಾಚಾರ ಪ್ರಾರಂಭವಾಗುವುದಕ್ಕೆ ಒಂದು ದಿನ ಮೊದಲು ನೀಡಿದ ಕರೆಯಾಗಿತ್ತು. ಮುಸ್ಲಿಮರಿಗೆ ಬದುಕುವ ಹಕ್ಕಿಲ್ಲ ಎಂದು ಅವರು ಹೇಳಿದರು. ‘ಮುಸ್ಲಿಮರೊಂದಿಗೆ ಬದುಕಲು ಅವಕಾಶವಿದೆ ಎಂದು ಅವರು ನಂಬಿದ್ದಾರೆಯೇ’ ಎಂದು ಅವರನ್ನು ಮತ್ತೊಂದು ಹಿಂದುತ್ವ ಚಾನೆಲ್ ಕೇಳಿದೆ:

“ಒಳ್ಳೆಯ ಜನರು ಬದುಕಬೇಕು. ಆದರೆ ನಮ್ಮ ಶತ್ರುಗಳು, ನಮ್ಮ ಧರ್ಮದ ಶತ್ರುಗಳು, ನಮ್ಮನ್ನು ಅಳಿಸಿಹಾಕಲು ಬಯಸುವವರು, ನಾವು ಅವುಗಳನ್ನು ಮುಗಿಸುವವರೆಗೆ, ಇಸ್ಲಾಂ ಎಂದು ಕರೆಯಲ್ಪಡುವ ಸಮಾಜದಿಂದ ಈ ದುಷ್ಟತನವನ್ನು ನಾವು ತೆಗೆದುಹಾಕುವವರೆಗೆ, ನಾವು ಬದುಕುಳಿಯುತ್ತೇವೆಯೇ? ಬದುಕು ಸುಸಂಸ್ಕೃತ ಜನರಿಗೆ ಮಾತ್ರ, ಅನಾಗರಿಕ ಕಳ್ಳರಿಗೆ ಅಲ್ಲ, ಭಯೋತ್ಪಾದಕರಿಗೆ ಅಲ್ಲ, ಜಿಹಾದಿಗಳಿಗೆ ಅಲ್ಲ. ನಮಗೆ ಯಾವುದೇ ಸಮಸ್ಯೆಯನ್ನು ಉಂಟುಮಾಡದ ನಮ್ಮ ಸ್ನೇಹಿತರನ್ನು ನಾವು ಬದುಕಲು ಬಿಡಬೇಕು. ಆದರೆ ಆ ಜನರಿಗೆ ಜೀವಂತವಾಗಿರಲು ಯಾವುದೇ ಹಕ್ಕಿಲ್ಲ, ಅವರ ಗುರಿ ನಮ್ಮ ಮಕ್ಕಳನ್ನು ಕೊಲ್ಲುವುದು. ಅಂತಹ ಜನರಿಗೆ ಬದುಕುವ ಹಕ್ಕನ್ನು ನೀಡಲು ಸಾಧ್ಯವಿಲ್ಲ.”

ಹಿಂಸಾಚಾರವನ್ನು ಪ್ರಚೋದಿಸುವುದು ಸ್ವತಃ ಅಪರಾಧವಾಗಿದ್ದರೂ, ಯತಿ ನರಸಿಂಗಾನಂದ್ ಸರಸ್ವತಿ ಅವರ ಕರೆಯನ್ನು ಅನುಸರಿಸಿದ ಹತ್ಯೆಗಳಲ್ಲಿ ಯಾವುದೇ ನೇರ ಪಾತ್ರ ವಹಿಸಿದ್ದಾರೆಯೇ ಎಂದು ನೋಡಲು ಸರಿಯಾದ ಪೊಲೀಸ್ ತನಿಖೆ ಅಗತ್ಯ.

ಅವರ ಸಹಾಯಕ, ಹಿಂದೂ ರಕ್ಷಾ ದಳದ ಮುಖಂಡ ಪಿಂಕಿ ಚೌಧರಿ, ಜೆಎನ್‌ಯು ಮೇಲೆ ಸಶಸ್ತ್ರ ಜನಸಮೂಹದ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ ಎಂದು ನಮಗೆ ತಿಳಿದಿದೆ.

ಅವರ ಆಪ್ತ ಸಹವರ್ತಿ, ‘ಹಿಂದೂ ಪಡೆ’ಯ ದೀಪಕ್ ಸಿಂಗ್ ಹಿಂದೂ, ಫೆಬ್ರವರಿ 23, 2020 ರ ಬೆಳಿಗ್ಗೆ ವಿಡಿಯೋ ಮನವಿಯನ್ನು ಹೊರಡಿಸಿದರು, ಅವರ ಬೆಂಬಲಿಗರು ಮಧ್ಯಾಹ್ನ 2:30 ಕ್ಕೆ ಮೌಜ್‌ಪುರ್ ಚೌಕ್‌ನಲ್ಲಿ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಪ್ರಚೋದನಕಾರಿ ಭಾಷಣ ಮಾಡಿದರು.

ನಮ್ಮ ತನಿಖೆಯ ಮೊದಲ ಭಾಗದಲ್ಲಿ ಕಾಣಿಸಿಕೊಂಡಿದ್ದ ಆರ್‌ಎಸ್‌ಎಸ್ ಕಾರ್ಯಕರ್ತ ಅಂಕಿತ್ ತಿವಾರಿ – ನರಸಿಂಗಾನಂದರು ಮಾತನಾಡಿದ ಕೆಲವು ಸಭೆಗಳಿಗೆ ಹಾಜರಾಗಿದ್ದರು ಎಂದು ನಮಗೆ ತಿಳಿದಿದೆ. 2019 ರ ಡಿಸೆಂಬರ್ 25 ರಂದು ಜಂತರ್ ಮಂತರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಸಭಿಕರಲ್ಲಿದ್ದರು, ಅಲ್ಲಿ ಯತಿ ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡಿದರು. ಅದೇ ಭಾಷಣದ ವೀಡಿಯೊವನ್ನು ಅಂಕಿತ್ ತಿವಾರಿ ತಮ್ಮ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ.

ನಮ್ಮ ದೆಹಲಿ ಹಿಂಸಾಚಾರದ ಪಿತೂರಿಯ ಮೊದಲ ಭಾಗದ ವರದಿ ನಂತರ, ತಿವಾರಿ ತನ್ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ. ಆದರೆ ಪೊಲೀಸರು ಆತನನ್ನು ತನಿಖೆ ಮಾಡಲು ಎಂದಾದರೂ ನಿರ್ಧರಿಸಿದಲ್ಲಿ ನಾವು ಉಳಿಸಿಟ್ಟ ಅವರ ಎಲ್ಲಾ ವೀಡಿಯೊಗಳನ್ನು ಒದಗಿಸುತ್ತೇವೆ.

ನಮ್ಮ ತನಿಖೆಯಲ್ಲಿ ನಾವು ಸ್ಥಾಪಿಸಿರುವ ಕಾಲಾನುಕ್ರಮವು 2019 ರ ಡಿಸೆಂಬರ್‌ನ ಹಿಂದೆಯೇ ಹಿಂಸಾಚಾರವನ್ನು ಪ್ರಾರಂಭಿಸುವ ಪಿತೂರಿ ನಡೆದಿತ್ತು ಮತ್ತು ಮುಂದಿನ ಎರಡು ತಿಂಗಳಲ್ಲಿ ಈ ನೆಲವನ್ನು ಸಿದ್ಧಪಡಿಸಲಾಗಿದೆ, ಇದು 53 ಜನರ ಪ್ರಾಣ ತೆಗೆದ ಹಿಂಸಾಚಾರದ ಪರಾಕಾಷ್ಠೆಯಾಗಿದೆ ಎಂದು ಸ್ಪಷ್ಟಪಡಿಸುತ್ತದೆ. ದುಃಖಕರವೆಂದರೆ, ಇದು ದೆಹಲಿ ಪೊಲೀಸರು ತನಿಖೆ ನಡೆಸುತ್ತಿರುವ ಪಿತೂರಿ ಅಲ್ಲ.

ನಮ್ಮ ಸರಣಿಯ ಮೂರನೇ ಭಾಗದಲ್ಲಿ, ನಾವು ರಾಗಿಣಿ ತಿವಾರಿ ಮತ್ತು ಇತರರಂತಹ ಹಿಂದುತ್ವ ಕಾರ್ಯಕರ್ತರನ್ನು ನೋಡುತ್ತೇವೆ ಮತ್ತು ಅವರು ಭಾರತೀಯ ಜನತಾ ಪಕ್ಷದ ವ್ಯಾಪಕ ರಾಜಕೀಯ ಕಾರ್ಯಸೂಚಿಗೆ ಹೇಗೆ ಹೊಂದಿಕೊಳ್ಳುತ್ತಾರೆ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದ ಸಂಘ ಪರಿವಾರ್ ಅನ್ನು ಅನ್ವೇಷಿಸುತ್ತೇವೆ, ಅದು 2020ರ ದೆಹಲಿ ಗಲಭೆಗಳ ಒಂದು ಪ್ರಮುಖ ಭಾಗವಾಗಿತ್ತು.

ವರದಿಯ ದಿ ವೈರ್ ವಿಡಿಯೋ ನೋಡಿ


ಇದನ್ನೂ ಓದಿ: ದೆಹಲಿ ಹಿಂಸಾಚಾರದ ಅಸಲಿ ಪಿತೂರಿಗಾರರು ಯಾರು? ದೆಹಲಿ ಪೊಲೀಸ್ ನೋಡಲೊಲ್ಲದ ಭೀಕರ ಸತ್ಯಗಳನ್ನು ತೆರೆದಿಟ್ಟ ದಿ ವೈರ್ ವರದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...