ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಮುಂಬೈನ ಮಾಜಿ ಪೊಲೀಸ್ ಮುಖ್ಯಸ್ಥ ಪರಮ್ ಬಿರ್ ಸಿಂಗ್ ಅವರ ಆರೋಪದ ಬಗ್ಗೆ 15 ದಿನಗಳಲ್ಲಿ ಪ್ರಾಥಮಿಕ ತನಿಖೆ ನಡೆಸುವಂತೆ ಬಾಂಬೆ ಹೈಕೋರ್ಟ್ ಇಂದು ಸಿಬಿಐಗೆ ಆದೇಶಿಸಿದ ಬೆನ್ನಲ್ಲೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಮುಖ್ಯಮಂತ್ರಿಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಹಲವು ವಾರಗಳಿಂದ ರಾಜೀನಾಮೆ ನೀಡುವುದಿಲ್ಲ ಎಂದು ದೃಢವಾಗಿದ್ದ ಅವರು ಇಂದು ಬಾಂಬೆ ಹೈಕೋರ್ಟ್ ನಿರ್ದೇಶನದ ಮೇರೆಗೆ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ ಎನ್ನಲಾಗಿದೆ.
“ಸಿಬಿಐ ಈಗ ಅವರನ್ನು ತನಿಖೆಗೆ ಒಳಪಡಿಸುವುದರಿಂದ ಅಂತಹ ಸಮಯದಲ್ಲಿ ಅವರು ಸಚಿವರಾಗಿ ಮುಂದುವರಿಯುವುದು ಸರಿಯಲ್ಲ” ಎಂದು ಎನ್ಸಿಪಿ ನಾಯಕರೊಬ್ಬರು ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
ಇತ್ತೀಚೆಗೆ ಮುಂಬೈ ಪೊಲೀಸ್ ಮುಖ್ಯಸ್ಥ ಸ್ಥಾನದಿಂದ ವರ್ಗಾವಣೆಗೊಂಡ ಪರಮ್ ಬಿರ್ ಸಿಂಗ್ ಅವರು ಅನಿಲ್ ದೇಶ್ಮುಖ್ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ದೂರು ನೀಡಿದ್ದರಿಂದ ಅವರು ತಮ್ಮನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದರು. ಗೃಹ ಸಚಿವರ ವಿರುದ್ಧ ಸುಲಿಗೆ ಮತ್ತು ಅಕ್ರಮ ವರ್ಗಾವಣೆ ಸೇರಿದಂತೆ ಹಲವಾರು ಆರೋಪಗಳನ್ನು ಹೊರಿಸಿದ್ದರು.
ಈ ಕುರಿತು ವಿಚಾರಣೆ ನಡೆಸಿದ್ದ ನ್ಯಾಯಾಲಯ “ಸಚಿವರ ವಿರುದ್ಧದ ಆರೋಪದ ಮೇಲೆ ಏಕೆ ಎಫ್ಐಆರ್ ದಾಖಲಿಸಲಿಲ್ಲ” ಎಂದು ಪರಮ್ ಬೀರ್ ಸಿಂಗ್ ಅವರನ್ನು ಪದೇ ಪದೇ ಪ್ರಶ್ನೆ ಕೇಳಿತ್ತು. ನೀವು ಪೊಲೀಸ್ ಆಯುಕ್ತರಾಗಿದ್ದೀರಿ, ಕಾನೂನಿಗಿಂತ ನೀವು ದೊಡ್ಡವರ? ಪೊಲೀಸ್ ಅಧಿಕಾರಿಗಳು, ಮಂತ್ರಿಗಳು ಮತ್ತು ರಾಜಕಾರಣಿಗಳು ಕಾನೂನಿಗಿಂತ ಮೇಲಿರುವವರಾ? ನೀವು ಅಷ್ಟು ಎತ್ತರ ಎಂದು ಭಾವಿಸಬೇಡಿ; ಕಾನೂನು ನಿಮಗಿಂತ ದೊಡ್ಡದು” ಎಂದು ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಿಜೆ ದತ್ತಾ ವಿಚಾರಣೆಯ ವೇಳೆ ಹೇಳಿದ್ದರು.
ಇದನ್ನೂ ಓದಿ; FIR ಎಲ್ಲಿದೆ? ನೀವು ಕಾನೂನಿಗಿಂತ ದೊಡ್ಡವರ?: ಮುಂಬೈ ಮಾಜಿ ಪೊಲೀಸ್ ಮುಖ್ಯಸ್ಥರಿಗೆ ಹೈಕೋರ್ಟ್ ತರಾಟೆ