ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ (2017ರ ಪ್ರಕರಣ) ಮಲಯಾಳಂನ ಪ್ರಮುಖ ನಟ ದಿಲೀಪ್ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಕೇರಳ ಸರ್ಕಾರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಪ್ರಕರಣದ 8ನೇ ಆರೋಪಿಯಾಗಿದ್ದ ದಿಲೀಪ್ ಜೊತೆಗೆ, ಅಪರಾಧ ಮಾಡಲು ಕ್ರಿಮಿನಲ್ ಪಿತೂರಿ ನಡೆಸಿದ ಆರೋಪ ಹೊತ್ತಿದ್ದ 7ನೇ ಆರೋಪಿಯಾಗಿದ್ದ ಚಾರ್ಲಿ ಥಾಮಸ್, 9 ಆರೋಪಿಯಾಗಿದ್ದ ಸನಿಲ್ ಕುಮಾರ್ ಯಾನೆ ಮೇಸ್ತ್ರಿ ಸನಿಲ್ ಮತ್ತು 15ನೇ ಆರೋಪಿಯಾಗಿದ್ದ ಶರತ್ ಜಿ. ನಾಯರ್ ಅವರ ಖುಲಾಸೆಯನ್ನು ರಾಜ್ಯ ಸರ್ಕಾರ ಪ್ರಶ್ನಿಸಿದೆ.
ವಿಚಾರಣಾ ನ್ಯಾಯಾಲಯವು ಪ್ರಕರಣದ ಇತರ ಆರೋಪಿಗಳಾಗಿದ್ದ ಪಲ್ಸರ್ ಸುನಿ (ಎ1), ಮಾರ್ಟಿಂಗ್ ಆಂಟನಿ (ಎ2), ಬಿ. ಮಣಿಕಂದನ್ (ಎ3), ವಿಪಿ ವಿಜೀಶ್ (ಎ4), ಎಚ್. ಸಲೀಮ್ (ಎ5), ಸಿ. ಪ್ರದೀಪ್ (ಎ 6) ಅವರನ್ನು ಅತ್ಯಾಚಾರ, ಪಿತೂರಿ, ಅಪಹರಣ ಮತ್ತು ಇತರ ಅಪರಾಧಗಳಲ್ಲಿ ತಪ್ಪಿತಸ್ಥರೆಂದು ಘೋಷಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 120 ಬಿ, 340, 354, 366, 354 ಬಿ ಮತ್ತು 376 ಡಿ ಅಡಿಯ ಅಪರಾಧಗಳಲ್ಲಿ ಇವರನ್ನು ತಪ್ಪಿತಸ್ಥರೆಂದು ಘೋಷಣೆ ಮಾಡಲಾಗಿದೆ.
ಅಪರಾಧಿಗಳಿಗೆ ಸಾಮೂಹಿಕ ಅತ್ಯಾಚಾರದ ಅಪರಾಧಕ್ಕಾಗಿ 20 ವರ್ಷಗಳ ಕಠಿಣ ಸಜೆ ವಿಧಿಸಲಾಗಿದ್ದು, ಇತರ ಸಂಬಂಧಿತ ಅಪರಾಧಗಳಿಗಾಗಿ ಏಕಕಾಲದಲ್ಲಿ ಅನುಭವಿಸಬೇಕಾದ ಹೆಚ್ಚುವರಿ ಶಿಕ್ಷೆಗಳನ್ನು ನೀಡಲಾಗಿದೆ. ಅಲ್ಲದೆ, ಆಪರಾಧಿಗಳಿಗೆ ವಿಧಿಸಲಾದ ದಂಡದ ಮೊತ್ತದಲ್ಲಿ 5 ಲಕ್ಷ ರೂಪಾಯಿಯನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯವು ನಿರ್ದೇಶಿಸಿದೆ.
ರಾಜ್ಯ ಸರ್ಕಾರವು ಹೈಕೋರ್ಟ್ಗೆ ಸಲ್ಲಿಸಿರುವ ಮೇಲ್ಮನವಿಯಲ್ಲಿ, 1 ರಿಂದ 6 ರವರೆಗಿನ ಅಪರಾಧಿಗಳಿಗೆ ವಿಧಿಸಲಾದ ಶಿಕ್ಷೆಯನ್ನು ಹೆಚ್ಚಿಸುವಂತೆ ಕೋರಿದೆ. ಅಪರಾಧದ ಗಂಭೀರತೆ ಮತ್ತು ಸಮಾಜದ ಮೇಲೆ ಅದು ಬೀರುವ ಪರಿಣಾಮವನ್ನು ಪರಿಗಣಿಸಿದರೆ, ಪ್ರಸ್ತುತ ನೀಡಿರುವ ಶಿಕ್ಷೆಯು ಅಸಮರ್ಪಕವಾಗಿದೆ ಎಂದು ವಾದಿಸಿದೆ.
ಸೆಷನ್ಸ್ ನ್ಯಾಯಾಲಯವು ಅಪರಾಧಿಗಳಿಗೆ ಆಶ್ರಯ ನೀಡಿದ್ದ ಆರೋಪದಿಂದ ಚಾರ್ಲಿ ಥಾಮಸ್ ಅವರನ್ನು ಖುಲಾಸೆಗೊಳಿಸಿದೆ ಮತ್ತು ನಟ ದಿಲೀಪ್ ಅವರ ಮೇಲಿದ್ದ ಎಲ್ಲಾ ಆರೋಪಗಳನ್ನು ವಜಾಗೊಳಿಸಿ ಅವರನ್ನು ಮುಕ್ತಗೊಳಿಸಿದೆ. ಸನಿಲ್ ಕುಮಾರ್ ಮತ್ತು ಶರತ್ ನಾಯರ್ ಅವರ ಮೇಲಿದ್ದ ಪಿತೂರಿ, ಪ್ರಚೋದನೆ ಮತ್ತು ಸಾಕ್ಷ್ಯ ನಾಶಪಡಿಸಿದ ಆರೋಪಗಳಿಂದಲೂ ನ್ಯಾಯಾಲಯ ಅವರನ್ನು ಖುಲಾಸೆಗೊಳಿಸಿದೆ.
ರಾಜ್ಯ ಸರ್ಕಾರವು ತನ್ನ ಮೇಲ್ಮನವಿಯಲ್ಲಿ, ಆರೋಪಿಗಳ ಖುಲಾಸೆಯು ಕಾನೂನುಬಾಹಿರ ಮತ್ತು ಅಸಮರ್ಥನೀಯ ಎಂದು ಪ್ರತಿಪಾದಿಸಿದೆ. ಪ್ರಕರಣದ ಹಿಂದಿನ ದೊಡ್ಡ ಮಟ್ಟದ ಪಿತೂರಿಗೆ ಸಂಬಂಧಿಸಿದ ಪುರಾವೆಗಳನ್ನು ಸಮಗ್ರವಾಗಿ ಮೌಲ್ಯಮಾಪನ ಮಾಡುವಲ್ಲಿ ವಿಚಾರಣಾ ನ್ಯಾಯಾಲಯವು ವಿಫಲವಾಗಿದೆ ಎಂದು ವಾದಿಸಿದೆ. ದಾಖಲಾಗಿರುವ ಸಾಕ್ಷ್ಯಾಧಾರಗಳ ಪ್ರಕಾರ, ಸಂತ್ರಸ್ತೆಯ ಮೇಲಿನ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ 2013 ರಲ್ಲೇ ಎಂಟನೇ ಆರೋಪಿ (ಎ8) ಮತ್ತು ಮೊದಲನೇ ಆರೋಪಿ (ಎ1) ನಡುವೆ ಮುಖ್ಯ ಪಿತೂರಿ ನಡೆದಿತ್ತು. ಆ ನಂತರ 1 ರಿಂದ 6 ರವರೆಗಿನ ಆರೋಪಿಗಳು ಮಾಡಿದ ಕೃತ್ಯಗಳು ಅದೇ ಪಿತೂರಿಯ ಮುಂದುವರಿದ ಭಾಗವಾಗಿವೆ ಎಂದಿದೆ.
ವಿಚಾರಣಾ ನ್ಯಾಯಾಲಯವು ತನಿಖಾ ತಂಡದ ವಿರುದ್ಧ ನೀಡಿರುವ ಕೆಲವು ಪ್ರತಿಕೂಲ ಅಭಿಪ್ರಾಯಗಳನ್ನು ಸಹ ರಾಜ್ಯ ಸರ್ಕಾರವು ತನ್ನ ಮೇಲ್ಮನವಿಯಲ್ಲಿ ಪ್ರಶ್ನಿಸಿದೆ. ವಿಶೇಷ ತನಿಖಾ ತಂಡವು (ಎಸ್ಐಟಿ) ಅತ್ಯಂತ ಸಮಗ್ರವಾದ ಮತ್ತು ನ್ಯಾಯಸಮ್ಮತವಾದ ತನಿಖೆಯನ್ನು ನಡೆಸಿದೆ ಎಂದು ಸರ್ಕಾರ ಪ್ರತಿಪಾದಿಸಿದೆ. ತನಿಖೆಯಲ್ಲಿ ಒಂದು ವೇಳೆ ಸಣ್ಣಪುಟ್ಟ ನ್ಯೂನತೆಗಳಿದ್ದರೂ ಸಹ, ಅವುಗಳಿಂದ ಆರೋಪಿಗಳಿಗೆ ಅನ್ಯಾಯವಾಗಿದೆ ಎಂದು ಸಾಬೀತಾಗದ ಹೊರತು, ಅಂತಹ ನ್ಯೂನತೆಗಳನ್ನೇ ಖುಲಾಸೆಗೆ ಆಧಾರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ವಾದಿಸಿದೆ.


