ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಯಲ್ಲಿ ಕೆಲವೊಂದು ಮಹತ್ವದ ಆಂತರಿಕ ಬದಲಾವಣೆಗಳನ್ನು ಮಾಡಲಾಗಿದೆ. ಒಂದರ್ಥದಲ್ಲಿ ಎಐಸಿಸಿಯನ್ನು ಪುನಾರಚಿಸಲಾಗಿದೆ. ಬಹು ರಾಜ್ಯಗಳ ಪಕ್ಷದ ಉಸ್ತುವಾರಿಯಲ್ಲೂ ಗಮನಾರ್ಹ ಬದಲಾವಣೆಗಳಾಗಿವೆ.
ಛತ್ತೀಸ್ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ಪಂಜಾಬ್ನ ಉಸ್ತುವಾರಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದ್ದು, ರಾಜ್ಯಸಭಾ ಸಂಸದ ಸೈಯದ್ ನಾಸೀರ್ ಹುಸೇನ್ ಅವರನ್ನು ಜಮ್ಮು ಕಾಶ್ಮೀರ, ಲಡಾಖ್ನ ಉಸ್ತುವಾರಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ರಜನಿ ಪಾಟೀಲ್ ಅವರನ್ನು ಹಿಮಾಚಲ ಪ್ರದೇಶ ಮತ್ತು ಚಂಡೀಗಢದ ಉಸ್ತುವಾರಿಯನ್ನಾಗಿ ಮಾಡಲಾಗಿದೆ. ಹಿರಿಯ ಕಾಂಗ್ರೆಸ್ ನಾಯಕ ಹರೀಶ್ ಚೌಧರಿ ಅವರಿಗೆ ಮಧ್ಯಪ್ರದೇಶದ ಉಸ್ತುವಾರಿ ನೀಡಲಾಗಿದೆ.
ಕರ್ನಾಟಕದ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಗೆ ಹರಿಯಾಣದ ಜವಾಬ್ದಾರಿ ವಹಿಸಲಾಗಿದ್ದು, ರಾಹುಲ್ ಗಾಂಧಿ ಅವರ ಆಪ್ತ ಸಹಾಯಕ ಕೃಷ್ಣ ಅಲ್ಲಾವರು ಚುನಾವಣೆ ನಡೆಯಲಿರುವ ಪ್ರಮುಖ ರಾಜ್ಯವಾದ ಬಿಹಾರದ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿದ್ದಾರೆ.
ಇನ್ನುಳಿದಂತೆ, ಒಡಿಶಾದ ಉಸ್ತುವಾರಿಯಾಗಿ ಅಜಯ್ ಕುಮಾರ್ ಲಲ್ಲು, ಜಾರ್ಖಂಡ್ಗೆ ಕೆ ರಾಜು, ತೆಲಂಗಾಣಕ್ಕೆ ಮೀನಾಕ್ಷಿ ನಟರಾಜನ್, ತಮಿಳುನಾಡು ಹಾಗೂ ಪುದುಚೇರಿಗೆ ಗಿರೀಶ್ ಚೋಡಂಕರ್, ಮಣಿಪುರ, ತ್ರಿಪುರಾ, ಸಿಕ್ಕಿಂ ಮತ್ತು ನಾಗಾಲ್ಯಾಂಡ್ಗೆ ಸಪ್ತಗಿರಿ ಶಂಕರ್ ಉಲಕಾ ಅವರನ್ನು ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ.
ಪುನಾರಚನೆ ವೇಳೆ ದೀಪಕ್ ಬಬಾರಿಯಾ, ಮೋಹನ್ ಪ್ರಕಾಶ್, ಭರತ್ ಸಿನ್ಹ್ ಸೋಲಂಕಿ, ರಾಜೀವ್ ಶುಕ್ಲಾ, ಅಜೋಯ್ ಕುಮಾರ್ ಮತ್ತು ದೇವೇಂದ್ರ ಯಾದವ್ ಸೇರಿದಂತೆ ಹಲವಾರು ಹಿರಿಯ ನಾಯಕರನ್ನು ಹೊರಗಿಡಲಾಗಿದೆ. ಅವರ ಕೊಡುಗೆಗಳನ್ನು ಪಕ್ಷ ಗುರುತಿಸಿದೆ.
ಹೊಸದಾಗಿ ನೇಮಕಗೊಂಡ ಉಸ್ತುವಾರಿಗಳು ತಕ್ಷಣದಿಂದ ಜಾರಿಗೆ ಬರುವಂತೆ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ಶುಕ್ರವಾರ (ಫೆ.14) ಹೊರಡಿಸಿದ ಕಾಂಗ್ರೆಸ್ನ ಅಧಿಕೃತ ಪ್ರಕಟಣೆ ತಿಳಿಸಿದೆ.
Hon'ble Congress President Shri @kharge has appointed the following party functionaries as AICC General Secretaries/In-charges of the respective States/UTs, with immediate effect. pic.twitter.com/zl8Y0eP5ZM
— Congress (@INCIndia) February 14, 2025
ಹಲವು ರಾಜ್ಯಗಳಲ್ಲಿ ಚುನಾವಣೆಗಳನ್ನು ಎದುರಿಸಲು ಪಕ್ಷ ತಯಾರಿ ನಡೆಸುತ್ತಿರುವಾಗ ನಾಯಕತ್ವದಲ್ಲಿ ಬದಲಾವಣೆಗಳಾಗಿರುವುದು ಮಹತ್ವ ಪಡೆದುಕೊಂಡಿದೆ. ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಪಕ್ಷದ ಸಂಘಟನೆಯ ಪುನಾರಚನೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.


