ಎಲೆಮರೆ:40 – ಅರುಣ್ ಜೋಳದಕೂಡ್ಲಿಗಿ.
ಇವರು ಹಾವೇರಿ ಜಿಲ್ಲೆಯಾದ್ಯಾಂತ ಸಿ.ಎ.ಎ/ಎನ್.ಆರ್.ಸಿ ಹೋರಾಟದಲ್ಲಿ ಮುಂದಾಳತ್ವ ವಹಿಸಿದ್ದರು. ಈ ಕಾರಣಕ್ಕೆ ಬಿಜೆಪಿ/ಆರ್.ಎಸ್.ಎಸ್ ನವರು ಇವರನ್ನು ಬೆದರಿಸುತ್ತಾರೆ. ರೋಡಲ್ಲಿ ಸೆಕ್ಸ್ವರ್ಕ್ ಮಾಡೋಳು, ಭಿಕ್ಷೆ ಬೇಡೋಳು ನೀನು ನರೇಂದ್ರ ಮೋದಿಯವರ ಬಗ್ಗೆ, ಅಮಿತ್ಶಾ ಬಗ್ಗೆ, ಬಿಜೆಪಿ ಬಗ್ಗೆ ಪ್ರಶ್ನೆ ಮಾಡ್ತೀಯಾ? ಎನ್ನುತ್ತಾರೆ. ಆಗ ಆಕೆ ’ನಾನು ಎಲ್ಲದಕ್ಕಿಂತ ಮೊದಲು ಈ ದೇಶದ ಪ್ರಜೆ. ಅಂಬೇಡ್ಕರ್ ನನಗೆ ಪ್ರಶ್ನಿಸುವ ಸಂವಿಧಾನಿಕ ಹಕ್ಕನ್ನು ಕೊಟ್ಟಾರ, ನಿಮ್ಮನ್ನ ಪ್ರಶ್ನೆ ಮಾಡಬಾರದು ಅನ್ನೋದಾದ್ರಾ ನೀವ್ಯಾಕ ಅಧಿಕಾರದೊಳಗ ಇದೀರಿ? ಯಾರೇ ಅಧಿಕಾರದಲ್ಲಿದ್ರೂ ನಾನು ಪ್ರಶ್ನೆ ಮಾಡತೀನಿ. ಪ್ರಶ್ನೆ ಮಾಡಬಾರದು ಅಂದ್ರ ಇದೆಂತಹ ಪ್ರಜಾಪ್ರಭುತ್ವ? ಎಂದು ಖಡಕ್ಕಾಗಿ ಉತ್ತರಿಸುತ್ತಾಳೆ. ಇವರೇ ಹಾವೇರಿ ಜಿಲ್ಲೆಯಲ್ಲಿ ಅಸಮಾನತೆ, ಅನ್ಯಾಯ, ವ್ಯವಸ್ಥೆಯ ಕ್ರೌರ್ಯಗಳನ್ನು ದಿಟ್ಟ ಧ್ವನಿಯಲ್ಲಿ ವಿರೋಧಿಸುವ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಕರಿಬಸಪ್ಪ ಚಲವಾದಿ ಅಕ್ಷತಾ.
ದಲಿತ ಸಮುದಾಯದ ಅಪ್ಪ ಕರಿಬಸಪ್ಪ, ಲಿಂಗಾಯತ ಸಮುದಾಯದ ಅವ್ವ ಸರೋಜ ವ್ಯವಸ್ಥೆಯ ವಿರೋಧಿಸಿಯೇ ಒಂದಾಗಿದ್ದರು. ಆ ದಂಪತಿಗಳಿಗೆ ಜೂನ್ 1, 1991 ರಲ್ಲಿ ಮಗನಾಗಿ ಹುಟ್ಟಿದ ಮಗಳು. ಬಾಲ್ಯದಲ್ಲೆ ಅಪ್ಪ ತೀರಿಹೋಗುತ್ತಾರೆ. ಚುರುಕಾದ ಬಾಲಕ ಗಣೇಶನನ್ನು ರಾಣೆಬೆನ್ನೂರಿನ ಶಿಕ್ಷಕಿ ಸುಂದರಾ ರಾಮಚಂದ್ರ ಓದಿಸುತ್ತಾರೆ. ಮಗು ಬಾಲ್ಯದಲ್ಲೇ ರಂಗೋಲಿ ಹಾಕುವುದು, ಹೆಣ್ಣು ಮಕ್ಕಳಂತೆ ಆಡುವುದು, ಲಂಗ–ದಾವಣಿ ತೊಡುವುದು ಮಾಡುತ್ತದೆ. ಗಂಡಾಳ್ವಿಕೆ ಸಮಾಜ ‘ಚಕ್ಕಾ’, ‘ಮಾಮಾ’ ಎಂದು ಅಸಹ್ಯವಾಗಿ ವರ್ತಿಸುತ್ತದೆ. ಪಿಯುಗೆ ಬಂದಾಗ ಹುಡುಗಿ ಹೆಸರಲ್ಲಿ ಕರೆದು, ಚಪ್ಪಾಳೆ ಹೊಡೆದು ಹೀಯಾಳಿಸುತ್ತಾರೆ. ಮನೆಯಲ್ಲಿ ಹೇಳಿಕೊಂಡರೆ, ‘ನೀನು ಸರಿಯಾಗಿದ್ದರೆ, ಅವರೂ ಸರಿಯಾಗಿರುತ್ತಾರೆ’ಎಂದು ಬೈಯುತ್ತಾರೆ. ಇತ್ತ ಹುಡುಗನ ಒಳಗಣ ಹೆಣ್ಣು ಬಲಗೊಳ್ಳುತ್ತಾಳೆ. ಇದನ್ನು ನಿಯಂತ್ರಿಸಲಾಗದೆ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿಯೂ ಬದುಕುಳಿಯುತ್ತಾನೆ.
ಪದವಿ ತರಗತಿಯಲ್ಲಿ ಪ್ರಾಧ್ಯಾಪಕರೊಬ್ಬರು ಅವನನ್ನು ನಿಲ್ಲಿಸಿ, ‘ನೀನು ಹೆಣ್ಣೋ ಗಂಡೋ’ ಎಂದು ಕುಹಕವಾಡುತ್ತಾರೆ. ಈ ಘಟನೆಯಿಂದ ಬೇಸತ್ತ ಮನೆಯವರು ಹುಡುಗನಿಗೆ ಮದುವೆಗೆ ಸಿದ್ಧತೆ ನಡೆಸುತ್ತಾರೆ. ಅದರೆ ಮಾನಸಿಕವಾಗಿ ಹೆಣ್ಣಾದ ಹುಡುಗನಿಗೆ ಇನ್ನೊಂದು ಹೆಣ್ಣನ್ನು ವರಿಸಲು ಹೇಗೆ ಸಾಧ್ಯ? ಆಕೆಯ ಜೀವನ ಏಕೆ ಹಾಳು ಮಾಡಬೇಕು? ಎಂಬ ಪ್ರಶ್ನೆ ಕಾಡುತ್ತದೆ. ಇದನ್ನು ವಿರೋಧಿಸಿ ಮನೆಬಿಟ್ಟು ತನ್ನಂತೆಯೇ ಇರುವ ಲಿಂಗತ್ವ ಅಲ್ಪಸಂಖ್ಯಾತರನ್ನು ಸೇರಿಕೊಳ್ಳುತ್ತಾನೆ. `ಓದಿ ಅಧಿಕಾರಿಯಾಗುವ ಕನಸಿನಲ್ಲಿದ್ದ ನನಗೆ, ಸಾಮಾಜಿಕ ಕಿರುಕುಳದಿಂದಾಗಿ ‘ಹೆಣ್ತನ’ವೇ ಪ್ರಮುಖವಾಯಿತು. ಕಿವಿ–ಮೂಗು ಚುಚ್ಚಿಕೊಳ್ಳಬೇಕು, ಸೀರೆ ಉಡಬೇಕೆಂಬ ಆಸೆಯನ್ನು ಈಡೇರಿಸಿಕೊಂಡೆನು. ನನ್ನ ಬಳಿ ದೇಹ ಬಿಟ್ಟು, ಬೇರೆ ಯಾವ ಆಸ್ತಿಯೂ ಇರಲಿಲ್ಲ. ಯಾರೂ ಕೆಲಸ ನೀಡಲಿಲ್ಲ. ಭಿಕ್ಷಾಟನೆ, ಲೈಂಗಿಕ ಕಾರ್ಯಕರ್ತೆಯರ ಒಡನಾಟ ಅನಿವಾರ್ಯವಾಯಿತು. ಆದರೂ, ಸ್ವಾಭಿಮಾನ ಕಾಡುತ್ತಿತ್ತು. ತಿರಸ್ಕರಿಸಿದವರೇ ಪುರಸ್ಕರಿಸುವಂತಾಗಬೇಕು ಎಂದು ಹೋರಾಟಕ್ಕಿಳಿದೆನು’ ಎಂದು ಅಕ್ಷತಾ ತನ್ನ ಬದುಕಿನ ತಿರುವುಗಳನ್ನು ಕಡು ದುಃಖದಿಂದಲೇ ಹೇಳುತ್ತಾಳೆ.
ಇದೀಗ ಅಕ್ಷತಾ ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ಕರ್ನಾಟಕದ ದಲಿತ ಸಂಘರ್ಷ ಸಮಿತಿಯ ಹಾವೇರಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆಯಾಗಿ, ಸಂಜೀವಿನಿ ಲೈಂಗಿಕ/ಲಿಂಗತ್ವ ಅಲ್ಪಸಂಖ್ಯಾತರ ಸಂಸ್ಥೆಯ ಹಾವೇರಿ ಜಿಲ್ಲಾಧ್ಯಕ್ಷೆಯಾಗಿ, ಹಾವೇರಿ ಜಿಲ್ಲಾ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಜಿಲ್ಲಾ ಸಂಚಾಲಕಿಯಾಗಿ ಹಾವೇರಿ ಭಾಗದ ಪ್ರಗತಿಪರ ಸಂಘಟನೆಗಳ ಭಾಗವಾಗಿ, ಎಸ್.ಎಫ್.ಐ (ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ) ಮತ್ತು ಡಿವೈಎಫ್ಐ (ಡೆಮಕ್ರಾಟಿಕ್ ಯೂಥ್ ಫೆಡರೇಷನ್ ಆಫ್ ಇಂಡಿಯಾ) ವಿದ್ಯಾರ್ಥಿ ಬಂಧುತ್ವ ವೇದಿಕೆಯಂತರ ವಿದ್ಯಾರ್ಥಿ ಸಂಘಟನೆಗಳ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.
ಸಾಮಾನ್ಯವಾಗಿ ಟ್ರಾನ್ಸ್ ಜೆಂಡರ್ ಸಮುದಾಯದವರು ತಮ್ಮ ಪ್ರದೇಶದಿಂದ ಯಾವಾಗಲೂ ದೂರ ಇರಲು ಬಯಸುತ್ತಾರೆ. ತಾನು ಒಡನಾಡಿದ ಜನರೆದುರು ಕಾಣಬಾರದು ಎಂದುಕೊಳ್ಳುತ್ತಾರೆ. ಆದರೆ ಅಕ್ಷತಾ, ನಾನು ಏನಾದರೂ ಸಾಧಿಸಿದರೆ ನನ್ನ ನೆಲದಲ್ಲೆ ಸಾಧಿಸಬೇಕು, ಇಲ್ಲಿಯೇ ಚಿಗುರೊಡೆದವಳು ಇಲ್ಲಿಯೇ ಬೇರುಬಿಟ್ಟು ಹೆಮ್ಮರವಾಗಿ ಹೂ, ಕಾಯಿ, ಹಣ್ಣಿನ ಫಲ ಕೊಡಬೇಕೆಂದು ಕನಸಿದವಳು. ಲಿಂಗತ್ವ ಅಲ್ಪಸಂಖ್ಯಾರರ ಹೋರಾಟಗಳು ಕೇವಲ ರಾಜಧಾನಿ ಬೆಂಗಳೂರು ಕೇಂದ್ರಿತವಾಗಿರುವಾಗ ಈ ಹೋರಾಟವನ್ನು ಅಕ್ಷತಾ ಹಾವೇರಿ ಜಿಲ್ಲಾ ಮಟ್ಟದಲ್ಲಿ ವಿಸ್ತರಿಸುತ್ತಿದ್ದಾರೆ. ‘ನಾನು ಬೀದಿಯಲ್ಲಿ ಹೋಗುತ್ತಿದ್ದಾಗ ಹಂಗಿಸಿದವರು, ನಿಂದಿಸಿದವರು, ಕಲ್ಲೆಸೆದವರು, ಚಪ್ಪಾಳೆ ಹೊಡೆದು ಚಕ್ಕಾ ಎಂದವರು, ನೀ ಗಂಡೋ–ಹೆಣ್ಣೋ ಎಂದು ಪ್ರಶ್ನಿಸಿದವರು, ಕೈಯಾಡಿಸಲು ಯತ್ನಿಸಿದ ಸುಸಂಸ್ಕೃತ ಸೋಗಿನವರು, ಲೈಂಗಿಕ ದೌರ್ಜನ್ಯ ಎಸಗಲು ಬಂದವರೆಲ್ಲರೂ ಈಗ ‘ಮೇಡಂ’ ಎನ್ನುತ್ತಿದ್ದಾರೆ. ಅದುವೆ ನನ್ನ ಮಟ್ಟಿಗೆ ಬದುಕಿನ ಬಹುದೊಡ್ಡ ಸಾಧನೆ ಎನ್ನುತ್ತಾರೆ.
ಅಂಬೇಡ್ಕರ್ `ದಲಿತರಲ್ಲಿ ಶೋಷಣೆಗೆ ಒಳಗಾಗುತ್ತಿರುವ ಪ್ರಜ್ಞೆಯನ್ನು ಜಾಗೃತಿ ಮೂಡಿಸುವಂತೆಯೇ, ಮೇಲ್ಜಾತಿಗಳಲ್ಲಿ ನಾವು ಶೋಷಕರು ಎನ್ನುವ ಪಾಪಪ್ರಜ್ಞೆಯನ್ನೂ ಮೂಡಿಸಿ ದಲಿತರನ್ನು ನೋಡುವ ದೃಷ್ಠಿಕೋನವನ್ನು ಬದಲಿಸುವಂತೆ ಅರಿವು ಮೂಡಿಸಬೇಕು’ ಎನ್ನುತ್ತಾರೆ. ಅಕ್ಷತಾ ಕೂಡ ಬಾಬಾ ಸಾಹೇಬರ ಈ ತತ್ವದಲ್ಲಿ ನಂಬಿಕೆ ಇಟ್ಟಿದ್ದಾರೆ. ಟ್ರಾನ್ಸ್ ಜೆಂಡರ್ ಸಮುದಾಯದಲ್ಲಿ ಅರಿವು ಮೂಡಿಸುವುದು ಎಷ್ಟು ಮುಖ್ಯವೋ, ಸಮಾಜದ ದೃಷ್ಟಿಕೋನವನ್ನು ಬದಲಾಯಿಸುವುದು ಅಷ್ಟೇ ಮುಖ್ಯ ಎಂದು ನಂಬಿದ್ದಾರೆ. ಹಾಗಾಗಿಯೇ ಅಕ್ಷತಾ ಕೇವಲ ಲಿಂಗತ್ವ ಅಲ್ಪಸಂಖ್ಯಾತರ ಸಮಸ್ಯೆಯ ಬಗ್ಗೆ ಮಾತ್ರ ಧ್ವನಿ ಎತ್ತುವುದಿಲ್ಲ. ರೈತ, ದಲಿತ, ಮಹಿಳಾ ಮತ್ತು ವಿಧ್ಯಾರ್ಥಿ ಸಂಘಟನೆಗಳಲ್ಲಿಯೂ ಕ್ರಿಯಾಶೀಲರಾಗಿದ್ದಾರೆ. ವಿದ್ಯಾರ್ಥಿಗಳಲ್ಲಿ ಟ್ರಾನ್ಸ್ ಜೆಂಡರ್ ಬಗೆಗೆ ಒಳ್ಳೆಯ ಅಭಿಪ್ರಾಯ ಮೂಡಿಸಬೇಕು. ಅವರುಗಳಲ್ಲಿ ಬದಲಾವಣೆಯಾದರೆ ಅವರು ಹತ್ತಾರು ಜನರನ್ನು ತಿದ್ದುತ್ತಾರೆ. ನಾನು ಕಂಡಲ್ಲೆಲ್ಲಾ ವಿದ್ಯಾರ್ಥಿಗಳು `ಮೇಡಂ’ ಎಂದು ಗೌರವದಿಂದ ಮಾತನಾಡಿಸುತ್ತಾರೆ. ಹೀಗೆ ಟ್ರಾನ್ಸ್ ಜೆಂಡರ್ ಸಮುದಾಯದ ಎಲ್ಲರನ್ನೂ ಗೌರವಿಸುವಂತಾಗಬೇಕು ಎನ್ನುವುದು ನನ್ನ ಕನಸು ಎನ್ನುತ್ತಾರೆ.
ಅಕ್ಷತಾ ಅವರ ಹೋರಾಟ ಹಲವು ಬಗೆಯಲ್ಲಿ ಸಫಲಗೊಂಡಿದೆ. ವಿಜಯಾ ಬ್ಯಾಂಕ್ ತರಬೇತಿ ಕೇಂದ್ರದ ಮೂಲಕ 19 ಜನರಿಗೆ ತರಬೇತಿ ಮತ್ತು ಸ್ವುದ್ಯೋಗಕ್ಕೆ ಸಾಲ ದೊರೆತಿದೆ. 65 ಕ್ಕೂ ಹೆಚ್ಚು ಜನರು `ಮೈತ್ರಿ’ ಯೋಜನೆಯ ಫಲಾನುಭಾವಿಗಳಾಗಿದ್ದಾರೆ. 8 ಜನ ರಾಜೀವ್ ಗಾಂಧಿ ಆಶ್ರಯ ವಸತಿ ಯೋಜನೆ ಪಡೆದಿದ್ದಾರೆ. ಮಹಿಳಾ ಅಭಿವೃದ್ಧಿ ನಿಗಮದಿಂದ ಸ್ವುದ್ಯೋಗಕ್ಕೆ 130 ಸದಸ್ಯರು ಸಾಲ ಪಡೆದಿದ್ದಾರೆ. ಲಿಂಗತ್ವ ಅಲ್ಪಸಂಖ್ಯಾತರದ ಸಂಘಟನೆಯಲ್ಲಿ 1 ಲಕ್ಷದಷ್ಟು ದೇಣಿಗೆ ಸಂಗ್ರಹಿಸಿದ್ದಾರೆ. ಜಿಲ್ಲೆಯ 850 ಲಿಂಗತ್ವ ಅಲ್ಪಸಂಖ್ಯಾತರಲ್ಲಿ 250 ಜನರನ್ನು ಮುಖ್ಯವಾಹಿನಿಗೆ ತಂದಿದ್ದಾರೆ. ಲಿಂಗಬದಲಾವಣೆ ಕಾಣಿಸಿಕೊಂಡ ಹೊಸ ಯುವಕರ ಮನೆಗಳಲ್ಲಿ ಜಾಗೃತಿ ಮೂಡಿಸಿ ಅವರನ್ನು ಮನೆಯಲ್ಲೆ ಗೌರವಯುತವಾಗಿ ಕಾಣುವಂತೆ ಮಾಡಿದ್ದಾರೆ. ಹಾವೇರಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ರಾಜ್ಯಮಟ್ಟದ ಸಮಾವೇಶ ಏರ್ಪಡಿಸಿ ಜಾಗೃತಿ ಮೂಡಿಸಿದ್ದಾರೆ. ಕೊರೊನಾ ಸಂದರ್ಭದಲ್ಲಿ ದಿಕ್ಕೆಟ್ಟು ಕಂಗಾಲಾದ ಲಿಂಗತ್ವ ಅಲ್ಪಸಂಖ್ಯಾತರಿಗೆ ದೈರ್ಯತುಂಬಿ ದಾನಿಗಳ ನೆರವಿನಿಂದ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಶ್ರಮಿಸಿದ್ದಾರೆ.
ಹಾವೇರಿ ಜಿಲ್ಲಾಡಳಿತವು ಅಕ್ಷತಾ ಅವರ ಹೋರಾಟವನ್ನು ಗುರುತಿಸಿ ‘ರಾಜ್ಯೋತ್ಸವ ಪುರಸ್ಕಾರ’ ನೀಡಿ ಸನ್ಮಾನಿಸಿದೆ. ಅಂತೆಯೇ ಕನ್ನಡಪ್ರಭ ಮತ್ತು ಸುವರ್ಣ ಚಾನಲ್ಲಿನ 2018 ರ `ಅಸಾಮಾನ್ಯ ಕನ್ನಡಿಗ’ ಪುರಸ್ಕಾರಕ್ಕೆ ಆಯ್ಕೆಯಾಗಿದ್ದರು. ಮುಖ್ಯವಾಗಿ ಅಕ್ಷತಾ ಅವರು ಅಂಬೇಡ್ಕರ್ ಚಿಂತನೆಗಳನ್ನು ಓದಿಕೊಂಡಿದ್ದಾರೆ. ಅಂತೆಯೇ ಸಾಮಾಜಿಕ ವಿದ್ಯಮಾನಗಳ ಬಗ್ಗೆ ಪ್ರಖರವಾಗಿ ಮಾತನಾಡುತ್ತಾರೆ. ಲಿಂಗತ್ವ ಅಲ್ಪಸಂಖ್ಯಾತರ ಕಾನೂನಾತ್ಮಕ ಹೋರಾಟದ ಬಗ್ಗೆ ಆಳವಾದ ತಿಳಿವಿದೆ. ತನ್ನದೇ ಸಮುದಾಯದ ಒಳಗಿನ ಮಿತಿಗಳನ್ನೂ ಚರ್ಚಿಸುವಷ್ಟು ಸೂಕ್ಷ್ಮವಾಗಿದ್ದಾರೆ. ಅಕ್ಷತಾಳ ಹೋರಾಟದ ಮಾದರಿ ಇಡೀ ಲಿಂಗತ್ವ ಅಲ್ಪಸಂಖ್ಯಾತರ ಹೋರಾಟಕ್ಕೆ ಹೊಸ ದಿಕ್ಕನ್ನು ತೋರಿಸುವಂತಿದೆ. ಅಕ್ಷತಾಳ ಹೋರಾಟ ಮತ್ತು ಜನಪರ ಕಾಳಜಿಗೆ ನ್ಯಾಯಪಥ ಪತ್ರಿಕೆಯೂ ಜೊತೆಯಾಗಿರುತ್ತದೆ.
ಅಕ್ಷತಾ ಅವರ ಚಟುವಟಿಕೆಗಳನ್ನು ಗಮನಿಸಲು ಅವರ ಫೇಸ್ ಬುಕ್ ಪೇಜಿಗೆ ಬೇಟಿಕೊಡಿ.
ಇದನ್ನೂ ಓದಿ: ತಲೆಕೆಳಗಾಗಿರುವುದು ನಾನಲ್ಲ; ನಿಮ್ಮ ಶಿಕ್ಷಣ ವಿಧಾನ: ಕಲಾವಿದನ ಕಲ್ಪನೆ ವೈರಲ್!



ಸಹೋದರಿ ಅಕ್ಷತಾ ಅವರ ಲೇಖನ ಓದಿ ಹೆಮ್ಮೆ ಅನಿಸ್ತಿದೆ… ಅರುಣ್ ಚೆನ್ನಾಗಿ ಬರೆದಿದ್ದೀರಿ…