Homeಮುಖಪುಟಖಾಸಗಿ ಜಾಗದಲ್ಲಿ ನಮಾಝ್ ತಡೆದ ಅಧಿಕಾರಿಗಳು: ನ್ಯಾಯಾಂಗ ನಿಂದನೆ ನೋಟಿಸ್ ನೀಡಿದ ಅಲಹಾಬಾದ್ ಹೈಕೋರ್ಟ್

ಖಾಸಗಿ ಜಾಗದಲ್ಲಿ ನಮಾಝ್ ತಡೆದ ಅಧಿಕಾರಿಗಳು: ನ್ಯಾಯಾಂಗ ನಿಂದನೆ ನೋಟಿಸ್ ನೀಡಿದ ಅಲಹಾಬಾದ್ ಹೈಕೋರ್ಟ್

- Advertisement -
- Advertisement -

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮೊಹಮ್ಮದ್‌ಗಂಜ್ ಗ್ರಾಮದ ಖಾಲಿ ಮನೆಯೊಂದರಲ್ಲಿ ಮುಸ್ಲಿಂ ಸಮುದಾಯದವರು ನಮಾಝ್ ಮಾಡುವುದನ್ನು ತಡೆದ ಜಿಲ್ಲಾಧಿಕಾರಿ ಅವಿನಾಶ್ ಸಿಂಗ್ ಮತ್ತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಆರ್ಯ ಅವರಿಗೆ ಅಲಹಾಬಾದ್ ಹೈಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ.

ಈ ಹಿಂದೆ ಕ್ರಿಶ್ಚಿಯನ್ ಗುಂಪುಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, “ಖಾಸಗಿ ಜಾಗದಲ್ಲಿ ಪ್ರಾರ್ಥನಾ ಸಭೆಗಳನ್ನು ನಡೆಸಲು ಸರ್ಕಾರದ ಪೂರ್ವಾನುಮತಿ ಅಗತ್ಯವಿಲ್ಲ” ಎಂದು ನ್ಯಾಯಾಲಯ ತೀರ್ಪು ನೀಡಿತ್ತು. ಆ ತೀರ್ಪು ಮೇಲ್ನೋಟಕ್ಕೆ ಈ ಪ್ರಕರಣಕ್ಕೂ ಅನ್ವಯಿಸುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಮಂಗಳವಾರ (ಫೆ.17) ವರದಿ ಮಾಡಿದೆ.

ನ್ಯಾಯಾಧೀಶರಾದ ಅತುಲ್ ಶ್ರೀಧರನ್ ಮತ್ತು ಸಿದ್ಧಾರ್ಥ್ ನಂದನ್ ಅವರ ಪೀಠವು ಫೆಬ್ರವರಿ 12ರಂದು ಇಬ್ಬರು ಅಧಿಕಾರಿಗಳ ವಿರುದ್ಧ ‘ನ್ಯಾಯಾಂಗ ನಿಂದನೆ ಕಾಯ್ದೆ 1971’ರ ಅಡಿಯಲ್ಲಿ ಕ್ರಮ ಜರುಗಿಸಿದೆ. ಇದೇ ವೇಳೆ ಅರ್ಜಿದಾರ ತಾರಿಕ್ ಖಾನ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ತಡೆಯಾಜ್ಞೆ ನೀಡಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 11ಕ್ಕೆ ನಿಗದಿಪಡಿಸಿರುವ ಹೈಕೋರ್ಟ್, ಅಧಿಕಾರಿಗಳಿಂದ ಪ್ರತಿಕ್ರಿಯೆಯನ್ನು ಕೋರಿದೆ ಎಂದು ವರದಿ ವಿವರಿಸಿದೆ.

ನಮ್ಮ ಸಂವಿಧಾನದ 25ನೇ ವಿಧಿ ಅಡಿಯಲ್ಲಿ ಖಾಸಗಿ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸುವುದು ನಾಗರಿಕರ ಮೂಲಭೂತ ಹಕ್ಕು ಎಂದು ನ್ಯಾಯಾಲಯ ಈ ಸಂದರ್ಭದಲ್ಲಿ ಒತ್ತಿಹೇಳಿದೆ.

ಜನವರಿ 16ರಂದು ರೇಷ್ಮಾ ಖಾನ್ ಎಂಬುವವರಿಗೆ ಸೇರಿದ ಖಾಲಿ ಮನೆಯೊಳಗೆ ನಮಾಝ್ ಮಾಡಿದ ಗುಂಪನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದ್ದರು. ಪ್ರಾರ್ಥನೆಯು ಸಂಪೂರ್ಣವಾಗಿ ತನ್ನ ಖಾಸಗಿ ಆವರಣದೊಳಗೆ ನಡೆದಿದ್ದು, ಇದಕ್ಕೆ ತಾನು ಅನುಮತಿ ನೀಡಿರುವುದಾಗಿ ರೇಷ್ಮಾ ಖಾನ್ ತಿಳಿಸಿದ್ದರು.

ಪೊಲೀಸರ ಕ್ರಮದ ವಿರುದ್ದ ಈ ಹಿಂದೆ ಕ್ರಿಶ್ಚಿಯನ್ ಸಂಸ್ಥೆಗಳಿಗೆ ಸಂಬಂಧಿಸಿದ ‘ಮಾರನಾಥ ಫುಲ್ ಗಾಸ್ಪೆಲ್ ಮಿನಿಸ್ಟ್ರೀಸ್ ಮತ್ತು ಉತ್ತರ ಪ್ರದೇಶ ಸರ್ಕಾರ’ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿ ತಾರಿಖ್ ಖಾನ್ ನ್ಯಾಯಾಲಯದ ಮೊರೆ ಹೋಗಿದ್ದರು.

ಮಾರನಾಥ ಫುಲ್ ಗಾಸ್ಪೆಲ್ ಮಿನಿಸ್ಟ್ರೀಸ್ ಪ್ರಕರಣದಲ್ಲಿ ಉತ್ತರ ಪ್ರದೇಶದಲ್ಲಿ ಖಾಸಗಿ ಆಸ್ತಿಯಲ್ಲಿ ಧಾರ್ಮಿಕ ಪ್ರಾರ್ಥನಾ ಸಭೆ ನಡೆಸಲು ಯಾವುದೇ ಅನುಮತಿ ಅಗತ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿತ್ತು. ಆದರೆ, ಕಾರ್ಯಕ್ರಮಕ್ಕೆ ಸಾರ್ವಜನಿಕ ರಸ್ತೆ ಅಥವಾ ಸಾರ್ವಜನಿಕ ಆಸ್ತಿ ಬಳಸಿಕೊಳ್ಳುವುದಾದರೆ ಕನಿಷ್ಠ ಪೊಲೀಸರಿಗೆ ತಿಳಿಸಬೇಕು ಮತ್ತು ಕಾನೂನಿನಡಿಯಲ್ಲಿ ಅಗತ್ಯವಿರುವ ಅನುಮತಿಯನ್ನು ಪಡೆಯಬೇಕು ಎಂದು ಹೇಳಿತ್ತು.

ಅರ್ಜಿದಾರ ತಾರಿಖ್ ಖಾನ್ ಪ್ರತಿಕ್ರಿಯಿಸಿ, “ಜನವರಿ 27ರಂದು ಹೊರಡಿಸಲಾದ ನ್ಯಾಯಾಲಯದ ಆದೇಶವು ಮತ್ತೊಂದು ಅಲ್ಪಸಂಖ್ಯಾತ ಸಮುದಾಯವಾದ ಕ್ರಿಶ್ಚಿಯನ್ನರಿಗೆ ಸಂಬಂಧಿಸಿದ್ದಾಗಿದ್ದು, ಖಾಸಗಿ ಜಾಗದಲ್ಲಿ ಪ್ರಾರ್ಥನೆ ಸಲ್ಲಿಸಬಹುದು ಎಂದು ಅದು ಸ್ಪಷ್ಟವಾಗಿ ತಿಳಿಸಿದೆ. ನಾವೂ ಸಹ ಅಲ್ಪಸಂಖ್ಯಾತ ಸಮುದಾಯದವರೇ ಆಗಿರುವುದರಿಂದ, ಅದೇ ನಿಯಮ ನಮಗೂ ಅನ್ವಯಿಸಬೇಕು. ಇಲ್ಲಿಯವರೆಗೆ ನ್ಯಾಯಾಲಯದ ತಡೆಯಾಜ್ಞೆಯು ನಮಗೆ ರಕ್ಷಣೆ ನೀಡಿದೆ, ಆ ಕಾರಣಕ್ಕಾಗಿಯೇ ನಾವು ಮನೆಯಲ್ಲಿ ನಮ್ಮ ಪ್ರಾರ್ಥನೆಯನ್ನು ಪುನರಾರಂಭಿಸಿದ್ದೇವೆ” ಎಂದು ಹೇಳಿದ್ದಾಗಿ ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ.

ಹಿರಿಯ ಹೈಕೋರ್ಟ್ ವಕೀಲರಾದ ಎಸ್‌ಎಫ್‌ಎ ನಖ್ವಿ ಅವರು ನ್ಯಾಯಾಲಯದ ಆದೇಶ ಮತ್ತು ಹಿಂದೂ ನಿವಾಸಿಗಳ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯಿಸುತ್ತಾ, ಈ ತೀರ್ಪು ಯಾವುದೇ ಗೊಂದಲಕ್ಕೆ ಅವಕಾಶ ನೀಡಿಲ್ಲ ಎಂದು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.

“ಈ ಆದೇಶವು ಸ್ವಯಂ ವಿವರಣಾತ್ಮಕವಾಗಿದೆ. ಒಂದು ಕಡೆ, ಖಾಸಗಿ ಜಾಗದಲ್ಲಿ ಪ್ರಾರ್ಥನೆ ನಡೆಸುವ ಅರ್ಜಿದಾರರ ಸಾಂವಿಧಾನಿಕ ಹಕ್ಕನ್ನು ನ್ಯಾಯಾಲಯ ಎತ್ತಿ ಹಿಡಿದಿದೆ. ಮತ್ತೊಂದು ಕಡೆ, ಈ ವಿಷಯದಲ್ಲಿ ಯಾವುದೇ ನಿಷೇಧಾಜ್ಞೆ ಹೊರಡಿಸಿಲ್ಲ ಎಂದು ಸ್ವತಃ ರಾಜ್ಯ ಸರ್ಕಾರವೇ ನ್ಯಾಯಾಲಯಕ್ಕೆ ತಿಳಿಸಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಈ ಕ್ರಮವು ಕಾನೂನುಬಾಹಿರ ಎಂದು ಹೇಗೆ ಪ್ರತಿಪಾದಿಸಲು ಸಾಧ್ಯ?” ಎಂದು ಅವರು ಪ್ರಶ್ನಿಸಿದ್ದಾರೆ.

ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡುವುದು ಆಡಳಿತಾತ್ಮಕ ಜವಾಬ್ದಾರಿಯಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿಯೇ ಹೊರತು ಖಾಸಗಿ ವ್ಯಕ್ತಿಗಳದ್ದಲ್ಲ. ಒಂದು ವೇಳೆ ಪ್ರಾರ್ಥನೆ ನಡೆಸುವುದರ ವಿರುದ್ಧ ಯಾವುದೇ ಪ್ರತಿಭಟನೆ ನಡೆದರೆ, ಸರ್ಕಾರವು ಅದನ್ನು ಕಾನೂನಿನ ಚೌಕಟ್ಟಿನಲ್ಲಿ ನಿರ್ವಹಿಸಬೇಕು. ಸಂವಿಧಾನಬದ್ಧ ಹಕ್ಕನ್ನು ಚಲಾಯಿಸುತ್ತಿರುವ ವ್ಯಕ್ತಿಗಳ ಬದಲಿಗೆ, ಕಾನೂನುಬದ್ಧ ಧಾರ್ಮಿಕ ಆಚರಣೆಯನ್ನು ವಿರೋಧಿಸುವವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು” ಎಂದು ನಖ್ವಿ ಅವರು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನ್ಯಾಯಾಲಯದ ಆದೇಶದ ನಡುವೆ ಮೊಹಮ್ಮದ್‌ಗಂಜ್‌ನಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಮನೆಯಲ್ಲಿ ಶುಕ್ರವಾರದ ನಮಾಝ್ ಪುನರಾರಂಭಿಸುವುದಕ್ಕೆ ಕೆಲವು ಹಿಂದೂ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಾರದ ಪ್ರಾರ್ಥನಾ ಸಭೆಗಳನ್ನು ಬೇರೆ ಬೇರೆ ಖಾಸಗಿ ಮನೆಗಳಲ್ಲಿ ಆಯೋಜಿಸಲಾಗುತ್ತಿದೆ ಎಂದು ಆರೋಪಿಸಿರುವ ಐದು ಕುಟುಂಬಗಳು, ಈ ವಸತಿ ಆಸ್ತಿಯು ಕಾಲಾನಂತರದಲ್ಲಿ ಶಾಶ್ವತ ಪ್ರಾರ್ಥನಾ ಮಂದಿರವಾಗಿ ಮಾರ್ಪಡಬಹುದು ಎಂಬ ಆತಂಕ ವ್ಯಕ್ತಪಡಿಸಿ ತಮ್ಮ ಮನೆಗಳ ಹೊರಗೋಡೆಗಳ ಮೇಲೆ “ಮನೆ ಮಾರಾಟಕ್ಕಿದೆ” ಎಂದು ಬರೆದಿದ್ದಾರೆ. ಅಲ್ಲದೆ, ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಬೇಕೆಂದು ಕೋರಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮನವಿಯನ್ನೂ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

ಮೊಹಮ್ಮದ್‌ಗಂಜ್‌ ಗ್ರಾಮವು ಸುಮಾರು 100 ಮನೆಗಳನ್ನು ಹೊಂದಿದ್ದು, ಎರಡೂ ಸಮುದಾಯಗಳ ಸುಮಾರು 600 ಜನರು ಅಕ್ಕಪಕ್ಕದಲ್ಲೇ ವಾಸಿಸುತ್ತಿದ್ದಾರೆ. ಭಿನ್ನಾಭಿಪ್ರಾಯಗಳು ಸಾರ್ವಜನಿಕ ಪ್ರತಿಭಟನೆಯಾಗಿ ಬದಲಾದ ಕಾರಣ, ಈ ವಾರದ ಆರಂಭದಲ್ಲಿ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತನ್ನು ಹೆಚ್ಚಿಸಲಾಗಿದೆ.

ಗ್ರಾಮಸ್ಥರಾದ ಕಮಲ್ ಕಿಶೋರ್ ಅವರು ಪ್ರತಿಕ್ರಿಯಿಸಿ, “ಕಳೆದ ಬಾರಿ ಅವರನ್ನು ತಡೆಯಲಾಗಿತ್ತು, ಆದರೆ ಈಗ ಮತ್ತೆ ಅದೇ ಮನೆಯಲ್ಲಿ ನಮಾಝ್ ಮಾಡುವುದನ್ನು ಆರಂಭಿಸಿದ್ದಾರೆ. ಆ ಮನೆ ಮದರಸಾ ಅಥವಾ ಮಸೀದಿಯಾಗಿ ಬದಲಾಗುವ ಮೊದಲೇ ಅದನ್ನು ಕೆಡವಬೇಕು ಎಂಬುದು ನಮ್ಮ ಆಗ್ರಹ” ಎಂದಿದ್ದಾರೆ ಎಂದು ಟೈಮ್ಸ್‌ ಆಫ್ ಇಂಡಿಯಾ ವರದಿ ಉಲ್ಲೇಖಿಸಿದೆ.

ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಎಸ್‌ಎಸ್‌ಪಿ ಆರ್ಯ ತಿಳಿಸಿದ್ದಾರೆ. “ಯಾವುದೇ ಬಲವಂತದ ಕ್ರಮ ಕೈಗೊಂಡಿಲ್ಲ. ಸ್ಥಾಪಿತ ನಿಯಮಗಳನ್ನು ಉಲ್ಲಂಘಿಸದ ಹೊರತು ನಾವು ಧಾರ್ಮಿಕ ಆಚರಣೆಗಳಲ್ಲಿ ಎಂದಿಗೂ ಹಸ್ತಕ್ಷೇಪ ಮಾಡಿಲ್ಲ. ಯಾವುದೇ ವಸತಿ ಆಸ್ತಿಯನ್ನು ಸೂಕ್ತ ಪ್ರಕ್ರಿಯೆಯಿಲ್ಲದೆ ರಹಸ್ಯವಾಗಿ ಸಾರ್ವಜನಿಕ ಪ್ರಾರ್ಥನಾ ಸ್ಥಳವಾಗಿ ಪರಿವರ್ತಿಸದಂತೆ ನೋಡುವುದಷ್ಟೇ ನಮ್ಮ ಕಾಳಜಿಯಾಗಿದೆ” ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಟ್ರಕ್ ಚಾಲಕನಿಗೆ ಥಳಿಸಿ, ಸೆಗಣಿ ತಿನ್ನಿಸಿದ ಪ್ರಕರಣ : ಇಬ್ಬರು ಸ್ವಘೋಷಿತ ಗೋರಕ್ಷಕರ ಬಂಧನ

ಎಮ್ಮೆಗಳನ್ನು ಸಾಗಿಸುತ್ತಿದ್ದ ಟ್ರಕ್‌ ಚಾಲಕನಿಗೆ ಥಳಿಸಿ, ಸೆಗಣಿ ತಿನ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸ್ವಘೋಷಿತ ಗೋರಕ್ಷಕರನ್ನು ಮಹಾರಾಷ್ಟ್ರದ ಪುಣೆ ನಗರ ಪೊಲೀಸರು ಬಂಧಿಸಿದ್ದಾರೆ. ಬಿಪಾಶಾ ಅಲಿಯಾಸ್ ಆಕಾಶ್ ಮಾಣಿಕಂ ಮತ್ತು ಹೇಮಂತ್ ಗಾಯಕ್ವಾಡ್ ಬಂಧಿತರು....

ದೆಹಲಿ ಗಲಭೆ ಪ್ರಕರಣ : ಶಾರ್ಜೀಲ್ ಇಮಾಮ್‌ಗೆ 10 ದಿನಗಳ ಮಧ್ಯಂತರ ಜಾಮೀನು

ದೆಹಲಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಸಂಶೋಧನಾ ವಿದ್ಯಾರ್ಥಿ ಶಾರ್ಜೀಲ್ ಇಮಾಮ್ ಅವರಿಗೆ ನ್ಯಾಯಾಲಯ ಸೋಮವಾರ (ಮಾ.9) 10 ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ತನ್ನ ಸಹೋದರನ...

‘ಬಲಾಢ್ಯರ ಓಲೈಕೆಗಾಗಿ ಸಾಮಾಜಿಕ ನ್ಯಾಯದ ಸಮಾಧಿ..’; ಬಜೆಟ್‌ನಲ್ಲಿ ಅಲೆಮಾರಿ ಸಮುದಾಯಗಳಿಗೆ ಅನ್ಯಾಯ

'ಬಲಾಢ್ಯರ ಓಲೈಕೆಗಾಗಿ ಸಾಮಾಜಿಕ ನ್ಯಾಯದ ಸಮಾಧಿ ಮಾಡಲಾಗಿದೆ; ಬಜೆಟ್‌ನಲ್ಲಿ ಅಲೆಮಾರಿ ಸಮುದಾಯಗಳಿಗೆ ಅನ್ಯಾಯ ಮಾಡಲಾಗಿದೆ ಎಂದು 'ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾಒಕ್ಕೂಟ' ಸಿದ್ದರಾಮಯ್ಯ ಅವರ ಬಜೆಟ್‌ ಕುರಿತು ಅಸಮಾಧಾನ ಹೊರಹಾಕಿದೆ. ಈ ಕುರಿತು...

ಒಳಮೀಸಲಾತಿ ಇಲ್ಲದೇ ಉದ್ಯೋಗ ಭರ್ತಿಗೆ ವಿರೋಧ; ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ

ಒಳಮೀಸಲಾತಿ ಇಲ್ಲದೇ 56 ಸಾವಿರ ಉದ್ಯೋಗ ಭರ್ತಿಗೆ ಮುಂದಾಗಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ಒಳಮೀಸಲಾತಿ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದು, ಇದೇ ತಿಂಗಳ 12 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ. ಈ...

ನಾಸಿರ್–ಜುನೈದ್ ಕೊಲೆ ಪ್ರಕರಣ: ಜಾಮೀನಿನ ಮೇಲೆ ಹೊರಬಂದ ಹಿಂದುತ್ವ ಕಾರ್ಯಕರ್ತ ಮೋನು ಮಾನೇಸರ್ ಗೆ ಗುರುಗ್ರಾಮದಲ್ಲಿ ಭವ್ಯ ಸ್ವಾಗತ 

2023 ರಲ್ಲಿ ಹರಿಯಾಣದಲ್ಲಿ ಗೋರಕ್ಷಣೆ ಹೆಸರಿನಲ್ಲಿ ಇಬ್ಬರು ಮುಸ್ಲಿಂ ಪುರುಷರ ಹತ್ಯೆ ಪ್ರಕರಣದ ಆರೋಪಿಯಾಗಿರುವ ಹಿಂದುತ್ವ ಕಾರ್ಯಕರ್ತ ಮೋನು ಮಾನೇಸರ್ ಅವರಿಗೆ ರಾಜಸ್ಥಾನ ಹೈಕೋರ್ಟ್ ಜಾಮೀನು ನೀಡಿದ ನಂತರ ಶನಿವಾರ ಸಂಜೆ ಭರತ್‌ಪುರ...

ಪಶ್ಚಿಮ ಏಷ್ಯಾ ಸಂಘರ್ಷ: ಇರಾನ್ ನಾಯಕರನ್ನು ಗುರಿಯಾಗಿಸುವ ಇಸ್ರೇಲ್ ಬೆದರಿಕೆಗೆ ಚೀನಾ ವಿರೋಧ

ಇರಾನ್‌ನಲ್ಲಿ ಸರ್ವೋಚ್ಛ ನಾಯಕರಾಗಿ ಯಾರೇ ಆಯ್ಕೆಯಾದರು ಅವರು ನಮ್ಮ ಮುಂದಿನ ಗುರಿಯಾಗಿರುತ್ತಾರೆ ಎಂದು ಬೆದರಿಕೆ ಹಾಕಿದ್ದ ಇಸ್ರೇಲ್ ನಡೆಯನ್ನು ಚೀನಾ ಖಂಡಿಸಿದೆ. ಸದ್ಯ ಸರ್ವೋಚ್ಛ ನಾಯಕರಾಗಿ ನೇಮಕವಾಗಿರುವ ಅಲಿ ಖಮೇನಿ ಅವರ ಪುತ್ರ...

ಪಶ್ಚಿಮ ಏಷ್ಯಾ ಸಂಘರ್ಷ ಕುರಿತು ಚರ್ಚೆಗೆ ಒತ್ತಾಯ : ಸಂಸತ್ ಆವರಣದಲ್ಲಿ ವಿಪಕ್ಷ ಸಂಸದರಿಂದ ಪ್ರತಿಭಟನೆ

ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಚರ್ಚೆಗೆ ಒತ್ತಾಯಿಸಿ ಮತ್ತು ಅದಕ್ಕೆ ಸಂಬಂಧಿಸಿದ ನಿರ್ಣಾಯಕ ವಿಷಯಗಳ ಬಗ್ಗೆ ಸರ್ಕಾರ ಮೌನ ವಹಿಸಿರುವುದನ್ನು ಖಂಡಿಸಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ರಾಹುಲ್...

ಇರಾನಿನ ತೈಲ ಸಂಗ್ರಹಾಗಾರಗಳ ಮೇಲೆ ಇಸ್ರೇಲ್ ದಾಳಿ; ಅಮೆರಿಕಾ ಅಸಮಾಧಾನಗೊಂಡಿರುವುದಾಗಿ ವರದಿ

ವಾಷಿಂಗ್ಟನ್, ಡಿಸಿ: ಇರಾನಿನ ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ದೊಡ್ಡ ಪ್ರಮಾಣದ ವೈಮಾನಿಕ ದಾಳಿಯ ಬಗ್ಗೆ ಅಮೆರಿಕ ಮತ್ತು ಇಸ್ರೇಲ್ ನಡುವೆ ಭಿನ್ನಾಭಿಪ್ರಾಯ ಹೊರಹೊಮ್ಮಿದೆ ಎಂದು ವರದಿಯಾಗಿದೆ. ಅಮೆರಿಕದ ಅಧಿಕಾರಿಗಳು ಕಾರ್ಯಾಚರಣೆಯ...

ಪಶ್ಚಿಮ ಏಷ್ಯಾ ಸಂಘರ್ಷ ಕುರಿತು ಚರ್ಚೆಗೆ ಪ್ರತಿಪಕ್ಷಗಳು ಪಟ್ಟು : ಲೋಕಸಭೆ ಕಲಾಪ ಮುಂದೂಡಿಕೆ

ಲೋಕಸಭೆಯ ಬಜೆಟ್ ಅಧಿವೇಶನದ ಎರಡನೇ ಹಂತದ ಕಾರ್ಯ ಕಲಾಪಗಳು ಸೋಮವಾರ (ಮಾ.9) ಭಾರೀ ಗದ್ದಲದೊಂದಿಗೆ ಆರಂಭಗೊಂಡಿತು. ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಕುರಿತು ಚರ್ಚಿಸಲು ಆಗ್ರಹಿಸಿ ಪ್ರತಿಪಕ್ಷಗಳು ತೀವ್ರ ಪ್ರತಿಭಟನೆ ನಡೆಸಿದ ಹಿನ್ನೆಲೆ, ಸ್ಪೀಕರ್...

Parliament Budget Session | ಇಂಧನ ಭದ್ರತೆ ಕುರಿತು ಮಲ್ಲಿಕಾರ್ಜುನ ಖರ್ಗೆ ಪ್ರಸ್ತಾಪ : ರಾಜ್ಯಸಭೆಯಲ್ಲಿ ಗದ್ದಲ

ಸಂಸತ್ತಿನ 2026-27ನೇ ಸಾಲಿನ ಬಜೆಟ್ ಅಧಿವೇಶನದ ಎರಡನೇ ಹಂತದ ಕಾರ್ಯ ಕಲಾಪಗಳು ಸೋಮವಾರದಿಂದ (ಮಾ.9) ಪ್ರಾರಂಭಗೊಂಡಿವೆ. ಮೊದಲ ದಿನ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಅವರು...