ಮರ್ಯಾದೆಗೇಡು ಹತ್ಯೆ ಪ್ರಕರಣದಲ್ಲಿ, 2014ರಲ್ಲಿ ತಮ್ಮ ಅಪ್ರಾಪ್ತ ಮಗಳು ಮತ್ತು ಬಾಡಿಗೆದಾರರನ್ನು ಕೊಲೆ ಮಾಡಿದ್ದ ದಂಪತಿಗೆ ಜೀವಾವಧಿ ಶಿಕ್ಷೆಯನ್ನು ಅಲಹಾಬಾದ್ ಹೈಕೋರ್ಟ್ ಖಾಯಂಗೊಳಿಸಿದೆ.
ನ್ಯಾಯಮೂರ್ತಿ ಜೆ.ಜೆ. ಮುನೀರ್ ಮತ್ತು ನ್ಯಾಯಮೂರ್ತಿ ವಿನಯ್ ಕುಮಾರ್ ದ್ವಿವೇದಿ ಅವರನ್ನೊಳಗೊಂಡ ವಿಭಾಗೀಯ ಪೀಠವು, ಇದು ಕತ್ತು ಹಿಸುಕಿದ ಪರಿಣಾಮ ಸಂಭವಿಸಿದ ಕೊಲೆಯಾಗಿದೆಯೇ ಹೊರತು, ಆರೋಪಿಗಳು ಪ್ರತಿಪಾದಿಸಿದಂತೆ ಆತ್ಮಹತ್ಯೆಯ ಪ್ರಕರಣವಲ್ಲ ಎಂದು ತೀರ್ಪು ನೀಡಿದೆ.
ನ್ಯಾಯಾಲಯವು ಈ ಪ್ರಕರಣದಲ್ಲಿ ಮತ್ತೊಂದು ಪ್ರಮುಖ ಅಂಶವನ್ನು ಗಮನಿಸಿದ್ದು, ಬಾಡಿಗೆದಾರ ಪ್ರದೀಪ್ ಕುಮಾರ್ ಮತ್ತು 15 ವರ್ಷದ ಬಾಲಕಿಯ ಹತ್ಯೆಯು ಆಕೆ ಗರ್ಭಿಣಿಯಾಗಿರುವ ವಿಷಯ ಪೋಷಕರಿಗೆ ತಿಳಿದ ತಕ್ಷಣವೇ ನಡೆದಿದೆ ಎಂದು ಅಭಿಪ್ರಾಯಪಟ್ಟಿದೆ.
ಆಗಸ್ಟ್ 20, 2014ರಂದು ನಡೆದ ಈ ಘಟನೆಗೆ ಸಂಬಂಧಿಸಿದಂತೆ, 28 ವರ್ಷದ ಶಿಕ್ಷಕ ಪ್ರದೀಪ್ ಕುಮಾರ್, ಅಪರಾಧಿಗಳಾದ ಮುಖೇಶ್ ಗುಪ್ತಾ ಮತ್ತು ಅವರ ಪತ್ನಿ ಸೀಮಾ ಗುಪ್ತಾ ಮನೆಯಲ್ಲಿ ಬಾಡಿಗೆದಾರರಾಗಿದ್ದರು.
ದಂಪತಿಯ 15 ವರ್ಷದ ಮಗಳು ಮತ್ತು ಪ್ರದೀಪ್ ಕುಮಾರ್ ನಡುವೆ ಇದ್ದ ದೈಹಿಕ ಸಂಬಂಧದಿಂದ ಬಾಲಕಿ ಗರ್ಭಿಣಿಯಾಗಿದ್ದಳು. ಈ ಕಾರಣಕ್ಕೆ ದಂಪತಿ ಅವರಿಬ್ಬರನ್ನೂ ಕೊಂದಿದ್ದಾರೆ ಎಂದು ಆರೋಪಿಸಲಾಗಿತ್ತು. ಪ್ರಾಸಿಕ್ಯೂಷನ್ ಇದನ್ನು ಸ್ಪಷ್ಟವಾಗಿ ‘ಮರ್ಯಾದೆಗೇಡು ಹತ್ಯೆ’ ಪ್ರಕರಣ ಎಂದು ಹೇಳಿತ್ತು.
ಫೆಬ್ರವರಿ 2020ರಲ್ಲಿ ದಂಪತಿ ತಪ್ಪಿತಸ್ಥರೆಂದು ಸಾಬೀತಾಗಿ ವಿಚಾರಣಾ ನ್ಯಾಯಾಲಯ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಅವರು ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನಂತರ, ಆರೋಪಿಗಳ ಅವಿವಾಹಿತ ಮಗಳು ಗರ್ಭಿಣಿಯಾಗಿದ್ದಳು ಎಂಬ ಅಂಶವು ಸಾಬೀತಾಗಿದೆ ಎಂದು ಹೈಕೋರ್ಟ್ ಕಂಡುಕೊಂಡಿದೆ. ಅಲ್ಲದೆ, ಪ್ರದೀಪ್ ಕುಮಾರ್ ತಮ್ಮ ಮಗಳೊಂದಿಗೆ ಸಂಬಂಧ ಹೊಂದಿದ್ದ ಎಂಬ ಬಗ್ಗೆ ಗುಪ್ತಾ ದಂಪತಿಗೆ ಖಚಿತವಾಗಿ ತಿಳಿದಿತ್ತು ಎಂಬ ಅಂಶವನ್ನೂ ನ್ಯಾಯಾಲಯವು ಪತ್ತೆಹಚ್ಚಿದೆ.
ಈ ವಿಷಯವು (ಮಗಳ ಗರ್ಭಧಾರಣೆ) ಪೋಷಕರಿಗೆ ತೀವ್ರ ಆಘಾತವನ್ನುಂಟು ಮಾಡಿತ್ತು ಎಂದ ನ್ಯಾಯಾಲಯ, ದಂಪತಿಗೆ ದುಷ್ಕೃತ್ಯ ಎಸಗಲು ಸ್ಪಷ್ಟವಾದ ಉದ್ದೇಶವಿತ್ತು ಎಂದು ಹೇಳಿದೆ.
Courtesy : barandbench.com


