ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹರೀಶ್ ರಾವತ್ ಅವರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದು, ಇದು ಉತ್ತರಾಖಂಡ್ನ ಸೇನಾ ಕೇಂದ್ರದಲ್ಲಿ ವ್ಯಕ್ತಿಯೊಬ್ಬ ಹಲವಾರು ಅಂಚೆ ಮತಪತ್ರಗಳಿಗೆ ಟಿಕ್ ಮತ್ತು ಸಹಿ ಮಾಡುತ್ತಿರುವುದನ್ನು ಬಹಿರಂಗಪಡಿಸಿದೆ.
ಮಂಗಳವಾರ ತಮ್ಮ ಟ್ವಿಟರ್ ಹ್ಯಾಂಡಲ್ ಮತ್ತು ಫೇಸ್ಬುಕ್ನಲ್ಲಿ ವೀಡಿಯೊವನ್ನು ಹಂಚಿಕೊಂಡಿರುವ ಹರೀಶ್ ರಾವತ್, “ಎಲ್ಲರ ಮಾಹಿತಿಗಾಗಿ ಈ ಕಿರು ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದೇನೆ. ಸೇನಾ ಕೇಂದ್ರದಲ್ಲಿ ವ್ಯಕ್ತಿಯೊಬ್ಬ ಹಲವಾರು ಮತಪತ್ರಗಳಿಗೆ ಟಿಕ್ ಮತ್ತು ಸಹಿ ಹಾಕುತ್ತಿದ್ದಾರೆ. ಚುನಾವಣಾ ಆಯೋಗವು ಇದನ್ನು ಗಮನಿಸುತ್ತದೆಯೇ?” ಎಂದು ಅವರು ಕೇಳಿದ್ದಾರೆ.
ರಾವತ್ ಅವರ ವಕ್ತಾರ ಸುರೇಂದ್ರ ಕುಮಾರ್ ಅವರು ವೀಡಿಯೊದ ಮೂಲವನ್ನು ಬಹಿರಂಗಪಡಿಸಲು ನಿರಾಕರಿಸಿದ್ದು, ವಿಡಿಯೊ ಉತ್ತರಾಖಂಡದಿಂದ ಬಂದಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಪಕ್ಷವು ಚುನಾವಣಾ ಆಯೋಗಕ್ಕೆ ಇನ್ನೂ ಔಪಚಾರಿಕ ದೂರು ನೀಡಿಲ್ಲ, ಆದರೆ ಚುನಾವಣಾ ಆಯೋಗ ಇದನ್ನು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಬಹುದು ಎಂದು ಅವರು ಹೇಳಿದ್ದಾರೆ.
एक छोटा #वीडियो सबकी जानकारी के लिए वायरल कर रहा हूंँ, इसमें एक #आर्मी के सेंटर में किस प्रकार से एक ही व्यक्ति सारे #वोटों को टिक कर रहा है और यहां तक कि सभी लोगों के हस्ताक्षर भी वही कर रहा है, उसका एक नमूना देखिए, क्या इलेक्शन कमिशन इसका संज्ञान लेना चाहेगा?@UttarakhandCEO pic.twitter.com/yAd4UVPpLh
— Harish Rawat (@harishrawatcmuk) February 22, 2022
ಕಾಂಗ್ರೆಸ್ ನಾಯಕರು ಇದನ್ನು ಪ್ರಜಾಪ್ರಭುತ್ವದ ಅಣಕ ಎಂದು ಬಣ್ಣಿಸಿದ್ದು, ಚುನಾವಣಾ ಆಯೋಗವು ವೀಡಿಯೊವನ್ನು ಗಮನದಲ್ಲಿಟ್ಟುಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ರಾವತ್ ಅವರ ಟ್ವೀಟ್ ಅನ್ನು ರಾಜ್ಯ ಕಾಂಗ್ರೆಸ್ ರಿಟ್ವೀಟ್ ಮಾಡಿದೆ.
ಉತ್ತರಾಖಂಡ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಪ್ರೀತಮ್ ಸಿಂಗ್, “ಪ್ರಜಾಪ್ರಭುತ್ವವನ್ನು ಅಪಹಾಸ್ಯ ಮಾಡುವ ಈ ವೀಡಿಯೊದಲ್ಲಿ, ಸೇನಾ ಕೇಂದ್ರದಲ್ಲಿ ವ್ಯಕ್ತಿಯೊಬ್ಬರು ತಮ್ಮ ಆಯ್ಕೆಯ ಪಕ್ಷದ ಪರವಾಗಿ ಹಲವಾರು ಅಂಚೆ ಮತಪತ್ರಗಳಿಗೆ ಟಿಕ್ ಮತ್ತು ಸಹಿ ಹಾಕುತ್ತಿದ್ದಾರೆ” ಎಂದು ಬರೆದಿದ್ದಾರೆ.
ಚುನಾವಣಾ ಆಯೋಗವು ಇದನ್ನು ಅರಿತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರೀತಮ್ ಸಿಂಗ್ ಹೇಳಿದ್ದಾರೆ.
ಟ್ವೀಟ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಇದು ಕಾಂಗ್ರೆಸ್ನ ಹತಾಶೆ ಎಂದು ಬಣ್ಣಿಸಿದೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಭಯದಿಂದ ಕಾಂಗ್ರೆಸ್ ಇದನ್ನು ಮಾಡುತ್ತಿದೆ ಎಂದು ಹೇಳಿದೆ.
“ಜನರ ದಿಕ್ಕು ತಪ್ಪಿಸುವಲ್ಲಿ ವಿಫಲವಾಗಿದ್ದೇವೆ ಎಂದು ಅರಿತಿರುವ ಕಾಂಗ್ರೆಸ್ ಇಂತಹ ತಂತ್ರಕ್ಕೆ ಮೊರೆ ಹೋಗುತ್ತಿದೆ. ತನ್ನ ಸೋಲು ಸನ್ನಿಹಿತವಾಗಿರುವ ಹಿನ್ನೆಲೆಯಲ್ಲಿ ಇವಿಎಂ ದುರ್ಬಳಕೆ ಬಗ್ಗೆ ಮಾತನಾಡುತ್ತಿದ್ದ ಪಕ್ಷ ಈಗ ಬ್ಯಾಲೆಟ್ ಪೇಪರ್ ಬಗ್ಗೆ ಮಾತನಾಡುತ್ತಿರುವುದು ಪಕ್ಷದ ಹತಾಶೆಯನ್ನು ತೋರಿಸುತ್ತದೆ” ಎಂದು ಪ್ರದೇಶ ಬಿಜೆಪಿ ಮಾಧ್ಯಮ ಉಸ್ತುವಾರಿ ಮನ್ವೀರ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಸೇನೆಯನ್ನು ರಾಜಕೀಯದಿಂದ ದೂರವಿಡಬೇಕು ಮತ್ತು ಕಾಂಗ್ರೆಸ್ ಸತ್ಯಾಸತ್ಯತೆಯನ್ನು ಪರೀಕ್ಷಿಸದೆ ಇಂತಹ ಆರೋಪಗಳನ್ನು ಮಾಡುವುದನ್ನು ತಪ್ಪಿಸಬೇಕು ಎಂದು ಚೌಹಾಣ್ ಹೇಳಿದ್ದಾರೆ.
ಇದನ್ನೂ ಓದಿ: ಯುಪಿ 4ನೇ ಹಂತದ ಚುನಾವಣೆ: ಲಖಿಂಪುರ್ಖೇರಿ ಪ್ರಾಂತ್ಯ ಬಿಜೆಪಿಗೆ ಬಿಸಿತುಪ್ಪ!


