ರಾಷ್ಟ್ರಧ್ವಜಕ್ಕೆ ಸಂಬಂಧಿಸಿದಂತೆ ಈಶ್ವರಪ್ಪನವರ ವಿವಾದಾತ್ಮಕ ಹೇಳಿಕೆ ಮಾಸುವ ಮುನ್ನವೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಫೆಬ್ರವರಿ 28 ರಂದು ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ನಡೆದ ಬೆಳ್ತಂಗಡಿ ಬಿಜೆಪಿ ಮಂಡಲದ ಪ್ರತಿಭಟನೆಯಲ್ಲಿ ಶಾಸಕ ಹರೀಶ್ ಪೂಂಜಾ “ಕೆಂಪು ಕೋಟೆಯಲ್ಲಿ ಭಗವಾಧ್ವಜ ಹಾರಿಸ್ತೀವಿ ಅಂತ ಈಶ್ವರಪ್ಪನವರು ಹೇಳಿದ್ದಕ್ಕೆ ಕಾಂಗ್ರೆಸ್ನವರು ಅಧಿವೇಶನವನ್ನೇ ಮೊಟಕುಗೊಳಿಸಿದ್ದಾರೆ. ನಾನು ಬೆಳ್ತಂಗಡಿಯ ಶಾಸಕನಾಗಿ ಹೇಳ್ತಿದ್ದೇನೆ, ದೆಹಲಿಯ ಕೆಂಪುಕೋಟೆಯಲ್ಲಿ ಭಗವಾಧ್ವಜವನ್ನು ಹಾರಿಸಿಯೇ ಸಿದ್ದ. ಈ ಹಿಂದೂ ಸಮಾಜ ತ್ರಿವರ್ಣ ಧ್ವಜದ ಕೆಳಗೆ ಭಗವಾಧ್ವಜವನ್ನು ಹಾರಿಸುತ್ತದೆ. ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜದ ಕೆಳಗಡೆ ಭಗವಾಧ್ವಜ ಹಾರಿಸುವುದನ್ನು ಯಾವ ಪಕ್ಷವೂ ತಡೆಯಲು ಸಾಧ್ಯವಿಲ್ಲ. ಇದು ಬಿಜೆಪಿ ಮತ್ತು ಹಿಂದೂ ಸಮಾಜದ ಸಂಕಲ್ಪ.” ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈಗ ಅವರ ವಿರುದ್ಧ ಯುವ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಅನಿಲ್ ಪೈ ದೂರು ನೀಡಿದ್ದಾರೆ.
ಶಾಸಕ ಹರೀಶ್ ಪೂಂಜಾ ರಾಷ್ಟ್ರಧ್ವಜಕ್ಕೆ ಅವಮಾನವಾಗುವಂತೆ ಉದ್ರೇಕಕಾರಿ ಭಾಷಣ ಮಾಡಿ, ದೇಶದ್ರೋಹಿ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಸಂವಿಧಾನ ವಿರೋಧಿಯಾಗಿದ್ದು, ರಾಷ್ಟ್ರಧ್ವಜವನ್ನು ಸಾರ್ವಜನಿಕವಾಗಿ ಅವಮಾನ ಮಾಡಿದ್ದಾರೆ. ಸಂವಿಧಾನದ ಆಧಾರದಲ್ಲಿ ಪ್ರಮಾಣವಚನ ಸ್ವೀಕರಿಸಿದ ಶಾಸಕರು ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದು ಅವರ ವಿರುದ್ಧ ತಕ್ಷಣ ಪ್ರಕರಣ ದಾಖಲಿಸಬೇಕೆಂದು ಯುವ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಅನಿಲ್ ಪೈ ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಮಾಧ್ಯಮದವರ ಜೊತೆಗೆ ಮಾತನಾಡಿದ್ದ ಕೆ.ಎಸ್. ಈಶ್ವರಪ್ಪ “ಮುಂದೊಂದು ದಿನ ತ್ರಿವರ್ಣ ಧ್ವಜದ ಬದಲು ಕೇಸರಿ ಭಗವಧ್ವಜವೇ ದೇಶದ ರಾಷ್ಟ್ರೀಯ ಧ್ವಜವಾದರೂ ಆಗಬಹುದು” ಎಂಬ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಈಶ್ವರಪ್ಪನವರ ಹೇಳಿಕೆ ಖಂಡಿಸಿ, ಅವರ ವಜಾಗೆ ಒತ್ತಾಯಿಸಿ ಕಾಂಗ್ರೆಸ್ ನಾಯಕರು ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದರು. ಅಲ್ಲದೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರೇ ಈ ಹೇಳಿಕೆಯನ್ನು ಟೀಕಿಸಿ ಈಶ್ವರಪ್ಪನವರಿಗೆ ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ; ಕೆ.ಎಸ್ ಈಶ್ವರಪ್ಪನವರ ವಿವಾದಾತ್ಮಕ ಹೇಳಿಕೆಗಳು ಹೊಸದೇನಲ್ಲ: ಇಲ್ಲಿವೆ ಸಾಲು ಸಾಲು ಪ್ರಕರಣಗಳು