Homeಅಂಕಣಗಳುಶುರುವಾದ ಮಹೇಶ ಜೋಶಿ ಮಂತ್ರಗಳು!

ಶುರುವಾದ ಮಹೇಶ ಜೋಶಿ ಮಂತ್ರಗಳು!

- Advertisement -
- Advertisement -

ಈ ನಾಡಿನ ಸಂಸ್ಕೃತಿಯ ಪ್ರತೀಕವಾದ ಸಾಹಿತ್ಯ ಪರಿಷತ್‌ಗೆ ಛದ್ಮವೇಶದವರ ಅವಿರತ ಶ್ರಮದಿಂದ ಆರಿಸಿಬಂದ ಜೋಶಿ ತಮ್ಮ ಜೋಳಿಗೆಯಿಂದ ಒಂದೊಂದೇ ಅಸ್ತ್ರವನ್ನ ತೆಗೆಯತೊಡಗಿದ್ದಾರಲ್ಲ! ಈತ ಆರಿಸಿ ಬಂದ ಆರಂಭದಲ್ಲಿ ಶುದ್ಧ ಕನ್ನಡ ಮಾತಾಡಲು ಕರೆಕೊಟ್ಟರು. ಶುದ್ಧ ಕನ್ನಡ ಎಂದರೆ ಯಾವುದು? ಈ ನಾಡಿನ ಮೂವತ್ತು ಜಿಲ್ಲೆಗಳಲ್ಲೂ ಮೂವ್ವತ್ತು ವರಸೆಯಲ್ಲಿ ಕನ್ನಡ ಮಾತನಾಡುತ್ತಾರೆ ಎಂದಾಗ ಈತನ ಪ್ರೌಢಿಮೆ ಬಾಯಿ ಮುಚ್ಚಿಕೊಂಡಿತು. ತುಂಬ ಪ್ರಜಾಸತ್ತಾತ್ಮಕವಾಗಿ ನಡೆದುಕೊಂಡು ಬರುತ್ತಿದ್ದ ಸಾಹಿತ್ಯ ಪರಿಷತ್‌ನ ಆಡಳಿತವನ್ನು ಕೇಂದ್ರಿಕರಿಸಲು ಹೊರಟಿರುವ ಈತ ಸಾಹಿತ್ಯ ಪರಿಷತ್ ಸದಸ್ಯರಿಗೆ ಎಸೆಸೆಲ್ಸಿ ಸರ್ಟಿಫಿಕೇಟ್ ಕೇಳುತ್ತಿದ್ದಾರೆ. ಶಾಲೆಗೆ ಹೋಗದೆ ಸಾವಿರಾರು ಜಾನಪದ ಹಾಡು ಹೇಳುವ, ಕತೆ ಹೇಳುವ, ಜಾನಪದ ಕುಣಿತಗಳನ್ನು ಪ್ರದರ್ಶಿಸುವ ಮತ್ತು ಡೊಳ್ಳುಬಡಿಯುವವರು ಜೋಶಿಗೆ ಭೂತ ಬಿಡಿಸಬೇಕಷ್ಟೇ. ಕನ್ನಡಿಗರು ಎಚ್ಚೆತ್ತುಕೊಳ್ಳದಿದ್ದರೆ ಸಾಹಿತ್ಯ ಪರಿಷತ್ ಕಾರ್ಯಾಲಯವು ಪೂರ್ಣವಾಗಿ ಕೇಶವಕೃಪವಾಗುದರಲ್ಲಿ ಸಂಶಯವಿಲ್ಲವಂತಲ್ಲಾ ಥೂತ್ತೆರಿ.

****

ನಮ್ಮ ಪ್ರಖರ ವಿಮರ್ಶಕ ಮತ್ತು ಸಂಸ್ಕೃತಿ ಚಿಂತಕ ಡಿ.ಎಸ್ ನಾಗಭೂಷಣ ತರುತ್ತಿದ್ದ ಹೊಸ ಮನುಷ್ಯ ಎಂಬ ಮಾಸಪತ್ರಿಕೆ ನಿಲ್ಲಿಸುವುದಾಗಿ ಹೇಳಿದ್ದಾರಲ್ಲಾ! ಸದ್ಯ ಗರಹೊಡೆದ ಸ್ಥಿತಿಯಲ್ಲಿ ಪ್ರಜ್ಞಾವಂತರನ್ನು ಎಚ್ಚರಿಸುತ್ತಿದ್ದ ಹೊಸ ಮನುಷ್ಯ ಒಂದು ದಶಕವಾದರೂ ಹಳೆ ಮನುಷ್ಯನಾಗಿ ಉಳಿದಿದ್ದು ಹಳೆ ವಿಷಯ. ಆದರೆ ಹೊಸ ಮನುಷ್ಯನ ಒಗರು ದನಿ ಇರಬೇಕಿತ್ತು. ಅವನ್ನ ಹೊರತರಲು ಹಣಕಾಸಿನ ಸಮಸ್ಯೆಯಿಲ್ಲವಂತೆ, ಆದರೆ ಸಂಪಾದಕರ ಆರೋಗ್ಯ ಸಹಕರಿಸುತ್ತಿಲ್ಲವಂತೆ. ಸಮಾಜವಾದಿಗಳ ಅನಾರೋಗ್ಯದಿಂದ ಈ ಸಮಾಜಕ್ಕೆ ನಷ್ಟ. ಆಳುವ ಸರಕಾರಕ್ಕೆ ಅನಧಿಕೃತ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದ್ದ ಹೊಸ ಮನುಷ್ಯ ಪ್ರತಿ ತಿಂಗಳೂ ಸಿದ್ದರಾಮಯ್ಯನ ಸರಕಾರಕ್ಕೆ ಭೂತ ಬಿಡಿಸುತ್ತಿದ್ದು ಒಂದು ವಿಶೇಷ. ಆದರೆ ಕುಮಾರಣ್ಣ ಮತ್ತು ಎಡೂರಪ್ಪನ ಸರಕಾರಕ್ಕೆ ಛಾಟಿ ಬೀಸುವ ಬದಲು ಸಪ್ಪಗಾದದ್ದೂ ಒಂದು ವಿಶೇಷ. ಪ್ರಖರ ಚಿಂತನೆಯ ನಿಷ್ಠುರ ವಿಮರ್ಶೆಯ ಮತ್ತು ನಾಡಿನ ಸಂಸ್ಕೃತಿ ಚಿಂತಕರಿಗೆ, ಬೌದ್ಧಿಕವಾಗಿ ಕೆಲಸ ಕೊಡುತ್ತಿದ್ದ ಹೊಸ ಮನುಷ್ಯ ನಿಲ್ಲಬಾರದಿತ್ತು, ಯಾರಾದರೂ ನಡೆಸಿಕೊಂಡು ಹೋಗಲು ಅನುವುಮಾಡಿಕೊಡಬೇಕಿತ್ತು. ಆದರೆ ಅಂತ ತೀರ್ಮಾನ ಇಂತವರಿಂದ ಸಾಧ್ಯವಿಲ್ಲವಂತಲ್ಲಾ ಥೂತ್ತೆರಿ.

****

ನಮ್ಮ ಜನಪ್ರಿಯ ಪ್ರಧಾನಿ ಯಾಕೋ ಈಶ್ವರಪ್ಪನಂತೆ ಮಾತನಾಡತೊಡಗಿದ್ದಾರಲ್ಲಾ ಕುಮಾರಣ್ಣ ಮತ್ತು ದೇವೇಗೌಡರ ಕೃಪಾಕಟಾಕ್ಷದಿಂದ ಮಂತ್ರಿಯಾದ ಅಮಲಿನಲ್ಲಿ ಈಶ್ವರಪ್ಪ ಇನ್ನೂ ಹದಿನೈದು ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದುಬಿಟ್ಟರು. ಈ ಬಗ್ಗೆ ಯಾರೂ ಅವರನ್ನ ವಿವರ ಕೇಳಲಿಲ್ಲ. ಆದರೇನು, ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದುದಲ್ಲದೆ ಅವರ ಬಂಧುಬಾಂಧವರಾದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಇದೀಗ ಮೋದಿಯವರು ಕಾಂಗ್ರೆಸ್ ಇನ್ನ ನೂರು ವರ್ಷಗಳವರೆಗೆ ಅಧಿಕಾರಕ್ಕೆ ಬರುವುದಿಲ್ಲ ಎಂದಿದ್ದಾರೆ. ಈ ಕಾಲಜ್ಞಾನಿಯ ಮಾತನ್ನು ನೆನೆಸಿಕೊಂಡು ಸ್ಮರಿಸಲು ಯಾರಿರುತ್ತಾರೆ? ಅದಿರಲಿ, ಜಗತ್ತಿನ ತಾಪಮಾನ ಕುರಿತು ನಮ್ಮ ವಿಜ್ಞಾನಿಗಳು ಎಚ್ಚರಿಸುವ ಮಾತಿನ ಪ್ರಕಾರ, ಇನ್ನ ಹದಿನೈದು ವರ್ಷದಲ್ಲಿ ಏನಾಗುತ್ತದೊ ಏನೋ! ಅಂಥಾದ್ದರಲ್ಲಿ ನೂರುವರ್ಷದ ಭವಿಷ್ಯ ಹೇಳಿರುವ ಕಾಲಜ್ಞಾನಿ ಪ್ರಧಾನಿ ಈವರೆಗೆ ಬೀದಿಯಲ್ಲಾಡುತ್ತಿದ್ದ ಮಾತನ್ನ ಲೋಕಸಭೆಯಲ್ಲಾಡುತ್ತಾರೆ, ಲೋಕಸಭೆಯ ಮಾತನ್ನು ಅಮೆರಿಕದಲ್ಲಿ ಬಿತ್ತರಿಸುತ್ತಾರೆ. ಇದನ್ನೆಲ್ಲಾ ಗಮನಿಸಿದರೆ ನಮ್ಮ ಈಶ್ವರಪ್ಪನ ಜೊತೆ ಸ್ಪರ್ಧೆಗಿಳಿದಂತಿದ್ದಾರಲ್ಲಾ ಥೂತ್ತೆರಿ.

****

ಮತೀಯವಾಗಿ ಜೋರುಗಂಟಲಿನಿಂದ ಕೂಗಿದವರ ಕಡೆ ಬಿಜೆಪಿ ಪಕ್ಷದ ದೃಷ್ಟಿ ಬೇಗ ಬೀಳುತ್ತದೆ ಮತ್ತು ಅಂಥವರು ಮಾತ್ರ ನಮ್ಮ ಪಾರ್ಟಿ ಉಳಿಸಿ ಬೆಳೆಸಬಲ್ಲ ಎಂಬ ಮೂಢನಂಬಿಕೆಗೆ ತುತ್ತಾದ ಹಲವರು ಗಂಟಲು ಹರಿದುಕೊಳ್ಳುವ ಕೂಗುಮಾರಿಗಳಾಗಿದ್ದಾರಂತಲ್ಲಾ. ಈ ಪೈಕಿ ಬಸನಗೌಡ ಪಾಟೀಲ ಯತ್ನಾಳ, ಮೈಸೂರಿನ ಪ್ರತಾಪಸಿಮ್ಮ ಹಾಗೂ ಶಿವಮೊಗ್ಗದ ಈಶ್ವರಪ್ಪ ಹಳೆಯಗಂಟಲು. ಅವರದ್ದು ನೈನ್‌ಟೀನ್ ಫಾರ್ಟಿ ಸೆವೆನ್ ಮಾಡೆಲಿನ ಗಾಡಿಯ ಸೈಲೆನ್ಸರ್ ಪೈಪು. ಅದು ಶಬ್ದ ಮಾಡಿದರೆ ಉಳಿದ ಯಾವುದೇ ಶಬ್ದ ಕೇಳುವುದಿಲ್ಲ. ಅಂತಹ ಗಂಟಲಿನಲ್ಲಿ ದೇಶದ ಬಾವುಟ ಹಾರಾಡುವ ಧ್ವಜಸ್ತಂಭದಿಂದ ರಾಷ್ಟ್ರಧ್ವಜ ಇಳಿಸಿ ಭಗವಾಧ್ವಜವನ್ನ ಹಾರಿಸುತ್ತೇವೆ, ಜೊತೆಗೆ ಕೆಂಪುಕೋಟೆಯ ಮೇಲೂ ಹಾರಿಸುತ್ತೇವೆ ಎಂದು ಅಬ್ಬರಿಸಿದ್ದಾರಲ್ಲಾ. ಈ ಅಬ್ಬರವು ಅಭದ್ರತೆಯ ಮೂಲದ್ದು. ಎಡೂರಪ್ಪನ ನಂತರ ಈಶ್ವರಪ್ಪ ನಿವೃತ್ತಿಯ ಸಾಲಿನಲ್ಲಿ ನಿಂತಿರುವಾಗ ನನ್ನಂತವನು ನಿವೃತ್ತಿಗೆ ಯೋಗ್ಯನಲ್ಲ ಪಾರ್ಟಿಗೆ ಅನಿವಾರ್ಯ ಎಂಬುದು ಭಗವಾಧ್ವಜದ ದನಿಯಲ್ಲಿದೆಯಂತಲ್ಲಾ. ಅದೇನಾದರಾಗಲಿ ಎಡೂರಪ್ಪನವರ ನಿರ್ಗಮನದ ನಂತರ ಈಶ್ವರಪ್ಪ ಅನಿವಾರ್ಯವಾಗಿ ಆಕಡೆ ಸರಿದು ನಿಲ್ಲಬೇಕಿದೆ. ಏಕೆಂದರೆ ಎಡೂರಪ್ಪನ ಮುಖ ನೋಡಿ ಈಶ್ವರಪ್ಪನಿಗೆ ಓಟು ಮಾಡುತ್ತಿದ್ದ ಶಿವಮೊಗ್ಗದ ಲಿಂಗಾಯಿತರಿಗೆ ಪುನಹ ಈಶ್ವರಪ್ಪನಿಗೆ ಓಟು ಮಾಡುವ ಅಗತ್ಯ ಕಾಣುತ್ತಿಲ್ಲವಂತಲ್ಲಾ

ಥೂತ್ತೆರಿ.


ಇದನ್ನೂ ಓದಿ: ಸತ್ಯ ಹೇಳಿದ್ರೆ ಪಾರ್ಟಿಯಿಂದ್ಲೆ ತಗೀತರಲ್ರಿ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಹಿಂದುತ್ವ ಕಾರ್ಯಕರ್ತರ ಅಸಮಾಧಾನ

0
ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಪ್ರಯೋಗಿಸುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನು ಬಳಸಿಕೊಳ್ಳಬೇಡಿ ಎಂದು ಹಿಂದುತ್ವ ಕಾರ್ಯಕರ್ತ ಶ್ರೀರಾಮ್...