Homeಅಂಕಣಗಳುಗ್ಯಾರಂಟಿ ಸಪೋರ್ಟು ಮಾಡಿ ನೋಡಿ ಸಾರ್

ಗ್ಯಾರಂಟಿ ಸಪೋರ್ಟು ಮಾಡಿ ನೋಡಿ ಸಾರ್

- Advertisement -
- Advertisement -

ಕಡೆಗೂ ಭಾರತ ಕಂಡ ಅಪರೂಪದ ಪ್ರಧಾನಿ ಲೋಕಸಭೆಯಲ್ಲಿ ಕಾಣಿಸಿಕೊಂಡು ಕಾಂಗ್ರೆಸ್ಸಿಗರನ್ನು ಎರಡು ಗಂಟೆ ಟೀಕಿಸಿದರು, ನಂತರ ಐದು ನಿಮಿಷ ಮಣಿಪುರದ ಪ್ರಸ್ತಾಪ ಮಾಡಿದರು. ಆದರೇನು ಪ್ರಧಾನಿಯ ಮುಖ ಸಹಜವಾಗಿರಲಿಲ್ಲ. ತಪ್ಪುಗಳನ್ನು ಮುಚ್ಚಿಕೊಳ್ಳುವ ಸುಳ್ಳುಹೇಳುವ ಮುಖದಂತಿತ್ತು. ಮೋದಿ ಈ ದೇಶದ ಜವಾಬ್ದಾರಿ ಹೊತ್ತ ಪ್ರಧಾನಿಯಾಗಿದ್ದರೆ ಮಣಿಪುರದಲ್ಲಿ ಗಲಭೆ ಹೊತ್ತಿಕೊಂಡ ಕೂಡಲೇ ಅಲ್ಲಿಗೆ ಹೋಗುತ್ತಿದ್ದರೆ, ಆ ಕಾರಣಕ್ಕಾದರೂ ನೂರಾರು ಕೊಲೆಗಳು ನಡೆಯುತ್ತಿರಲಿಲ್ಲ; ಸಾವಿರಾರು ಮನೆ ಧ್ವಂಸವಾಗುತ್ತಿರಲಿಲ್ಲ; ಹೆಣ್ಣು ಮಕ್ಕಳ ಬೆತ್ತಲೆ ಮೆರವಣಿಗೆ ನಡೆಯುತ್ತಿರಲಿಲ್ಲ ಮತ್ತು ಅವರ ಮೇಲಿನ ದೌರ್ಜನ್ಯ ನಡೆಯುತ್ತಿರಲಿಲ್ಲ. ಮೋದಿ ಸಂಸತ್‌ಗೆ ಬರದಂತೆ ತಪ್ಪಿಸಿಕೊಂಡು ತಿರುಗುವ ಪ್ರಮೇಯವೇ ಜರುಗುತ್ತಿರಲಿಲ್ಲ. ಗುಜರಾತಿನಲ್ಲಿ ಮೋದಿ ಸರಕಾರವಿದ್ದಾಗ ಮುಸ್ಲಿಮರ ಮಾರಣಹೋಮಕ್ಕೆ ಕಾರಣರಾದ ಕೋಮುಗಲಭೆಯ ಬಗ್ಗೆ ಇಂದಿಗೂ ಅವರು ಕ್ಷಮೆ ಕೋರಿಲ್ಲ. ಇನ್ನು ಮಣಿಪುರದ ಘಟನೆ ಕೇವಲ ಮಣಿಪುರಕ್ಕೆ ಮಾತ್ರ ಸೀಮಿತ ಎಂದು ಭಾರತದ ಒಕ್ಕೂಟದ ರಾಜ್ಯಗಳು ಭಾವಿಸುವಂತಿಲ್ಲ. ಈ ನಡುವೆ ಮಣಿಪುರದ ಘಟನೆಗಳನ್ನು ಮರೆಮಾಚಿ ಕುಳಿತಿರುವ ಮಾಧ್ಯಮದವರು ರಾಹುಲ್ ಗಾಂಧಿಯವರ ’ಫ್ಲೈಯಿಂಗ್ ಕಿಸ್’ ಬಗ್ಗೆ ತಲೆಕೆಡಿಸಿಕೊಂಡು ದಿನಗಟ್ಟಲೆ ಕೊರೆಯುತ್ತಿರುವುದು ನಗು ಕಳೆದುಕೊಂಡವರಿಗೆ ನಗು ತರಿಸಿದೆಯಲ್ಲಾ, ಥೂತ್ತೇರಿ.

******

ಪತ್ರಕರ್ತರಿಗೆ ಪ್ರಿಯರಾಗಿರುವ ಕುಮಾರಣ್ಣನನ್ನು ಮಾತನಾಡಿಸಬೇಕೆನಿಸಿತಲ್ಲಾ. ಇಂತಹ ಅಪೇಕ್ಷೆ ಮೂಡಲು, ಕುಮಾರಣ್ಣ ಸಿಂಗಾಪುರದ ಮುಖಾಂತರ ಯೂರೋಪ್ ಟೂರು ಮಾಡುತ್ತಿದ್ದಾರೆ ಎಂಬ ಸುದ್ದಿಯೇ ಕಾರಣವಾಗಿ ಪೋನು ಮಾಡಿದರೆ ರಿಂಗಾಯ್ತು. ರಿಂಗ್ ಟೋನ್ ’ಯಾರು ಏನು ಮಾಡುವರು, ನನಗೇನು ಕೇಡು ಮಾಡುವರು..’

“ಯಾರು? ಹಲೊ ಯಾರು?”

“ನಾನು ಸಾರ್ ಯಾಹೂ.”

“ಎಲ್ಲಿ ಬ್ರದರ್ ಸಿಕ್ಕಲೇಯಿಲ್ಲ ನೀವು.”

“ಬಂದಿದ್ದೆ ಸಾರ್, ಈಗತಾನೇ ಸಿಂಗಾಪುರಕ್ಕೋದ್ರು ಅಂದ್ರು ಸಾರ್.”

“ಕರೆದಿದ್ರೆ ನೀವು ಬರತಿದ್ರ?”

“ನಾನಾಗ್ಲೆ ನೋಡಿದ್ದಿನಿ ಸಾರ್.”

“ಯಾವಾಗ ನೋಡಿದ್ರಿ?”

“ನಾನು ಸಿಂಗಾಪುರ ನೋಡಿದಾಗ ನೀವಿನ್ನೂ ಸ್ಟೂಡೆಂಟು ಸಾರ್, ಆಗ ಸಿಂಗಾಪುರ ತೋರಿಸೊ ಏಜೆಂಟ್‌ಗಳು ಹುಟ್ಟಿಗಂಡಿದ್ರು. ನಮ್ಮನ್ನ ಕರಕಂಡು ಹೋಗಿ, ನಮ್ಮ ಹೆಸರಲ್ಲಿ ಟಿ.ವಿ, ಗಡಿಯಾರ, ಫೋನು, ಟೇಪರಿಕಾರ್ಡು ಯಲ್ಲಾನು ತಗಂಡು ರಸ್ತೆ ಪಾರ್ಕು ಮಾಲ್ ತೋರಿಸಿ ಕರಕಂಡು ಬರೋರು. ಅಂಗೆ ನಾನು ಹೋಗಿದ್ದೆ, ನಾನು ಪತ್ರಕರ್ತ ಅಂತ ಒಂದು ಪೆನ್ನು ತಕ್ಕೊಟ್ರು ಸಾರ್, ಅಂಗಾಗಿ ನಾನು ಸಿಂಗಾಪುರ ನೋಡಿದ್ದಿನಿ.”

“ಈಗ ನೋಡಬೇಕು ನೀವು. ಆ ದೇಶಗಳ ನೋಡಿದ್ರೆ ತಲೆ ತಗ್ಗಸಂಗಾಯ್ತದೆ ಕಂಡ್ರಿ.”

“ನೀವ್ಯಾಕೆ ತಲೆ ತಗ್ಗಸಬೇಕು ಸಾರ್.”

“ನಾನು ಕರ್ನಾಟಕದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಸಿಂಗಾಪುರದ ತರ ಒಂದು ರೋಡು ಒಂದು ಪಾರ್ಕು ಮಾಡಕ್ಕಾಗಲಿಲ್ಲವಲ್ಲ ಅಂತ ತಲೆ ತಗ್ಗಸತಕ್ಕಂತ ಅಭಿಪ್ರಾಯ ಮೂಡುತ್ತೆ ಕಂಡ್ರಿ.”

“ನಿಜ ಸಾರ್, ನಿಮ್ಮ ಆತ್ಮವಿಮರ್ಶೆ ಮೆಚ್ಚತಕ್ಕೆಂತದ್ದು. ಎಷ್ಟು ಜನ ರಾಜಕಾರಣಿಗಳಿಗೆ ಇಂತ ಜ್ಞಾನೋದಯ ಆಗತ್ತೆ ಸಾರ್? ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ನೀವು ರಾಮನಗರದ ಊರೊಳಗಡೆ ಹೋದ್ರೆ ತಲೆ ತಗ್ಗಿಸಲೇಬೇಕು ಸಾರ್. ಆ ರಸ್ತೆ ಗುಂಡಿಗಳು ಆ ಗಲೀಜು ನೋಡಕ್ಕಾಗಲ್ಲ ಸಾರ್.”

“ರಾಮನಗರ ಅಷ್ಟೇ ಅಲ್ಲ ಕಂಡ್ರಿ. ಐದಾರು ಬಾರಿ ಗೆದ್ದು ಶಾಸಕರು ಮಂತ್ರಿಗಳಾಗಿರತಕ್ಕಂತ ಉದಾಹರಣೆಗಳು ನಮ್ಮ ರಾಜ್ಯದಲ್ಲಿ ಹೇರಳವಾಗಿವೆ. ಕನಿಷ್ಟ ಜನಗಳಿಗೆ ಪ್ರಾಥಮಿಕವಾಗಿ ಬೇಕಾಗಿರತಕ್ಕಂತ ಅಗತ್ಯಗಳು ಏನಿವೆ ಅವನ್ನ ಪೂರ್ಣವಾಗಿ ಒದಗಿಸತಕ್ಕಂತ ಕೆಲಸನ ಯಾರೂ ಮಾಡತಕ್ಕಂತದ್ದಕ್ಕೆ ಮನಸು ಮಾಡದೆ ಬರೀ ಆಸ್ತಿ ಮಾಡಿಬುಟು.”

“ನಿಜ ಸಾರ್ ಕೇವಲ ಐದೊರ್ಸ ಮಂತ್ರಿಗಳಾಗಿದ್ದ ಜನಗಳು ಕೋಟ್ಯಾಂತರ ರೂಪಾಯಿಗಳ ಆಸ್ತಿ ಮಾಡಿದ್ದರೆ, ರಾಜಕಾರಣಿಗಳಿಗೆ ದುಡ್ಡು ಹೊಡಿಯಕ್ಕೆ ಅವಕಾಶ ಮಾಡಿಕೊಟ್ಟ ಅಧಿಕಾರಿಗಳು ಕೋಟ್ಯಾಧಿಪತಿಗಳಾಗಿದ್ದಾರೆ. ಒಬ್ಬ ಅಧಿಕಾರಿನ ಲೋಕಾಯುಕ್ತರು ರೈಡ್ ಮಾಡಿದ್ರೆ ಐದು ಕೋಟಿ ಬೆಲೆ ಬಾಳೊ ಮನೆ, ಮೂರುವರೆ ಕೆ.ಜಿ ಚಿನ್ನ, ಸೈಟುಗಳು, ಅಪಾರ್ಟ್‌ಮೆಂಟ್ ಮನೆಲಿ ಎಪ್ಪತೈದು ಲಕ್ಷ ಕ್ಯಾಶು ಇನ್ನೂರು ಪ್ಯಾಂಟು, ನಾನ್ನೂರು ಶರಟು, ನೂರು ಜೊತೆ ಚಪ್ಪಲಿ ಸಿಗತವೆ ಸಾರ್.”

“ರಾಜಕಾರಣಿಗಳ ಮನೆ ರೈಡು ಮಾಡಿದ್ರು ಅಷ್ಟೆ ಆಸ್ತಿ ಸಿಗತಕ್ಕಂತ ವಾತಾವರಣ ಇದೆಯಲ್ರಿ. ಆ ದುಡ್ಡನ್ನೆಲ್ಲಾ ನಾವು ಕರ್ನಾಟಕದ ಅಭಿವೃದ್ಧಿಗೆ ಬಳಸಿದ್ರೆ ನಮ್ಮೂರು ಸಿಂಗಾಪುರ ಆಯ್ತಿತ್ತಲ್ರೀ.”

ಇದನ್ನೂ ಓದಿ: ರಾಮ ಕೃಷ್ಣ ಕಪ್ಪುಗಿದ್ರಲ್ಲವ..

“ಹಂಡ್ರೆಡ್ ಪರಸೆಂಟು ನಿಜ ಸಾರ್. ಒಬ್ಬ ರಾಜಕಾರಣಿಗೆ ನಾಲ್ಕು ಜನ ಗಂಡು ಮಕ್ಕಳಿದ್ರೆ ಅವುರಿಗೆಲ್ಲಾ ಮನೆ ಇರತ್ತೆ, ಕಾರಿರತ್ತೆ, ಬೈಕಿರತವೆ ನಾಲ್ಕು ಜನ ಸೊಸೆಯರತ್ರ ತಲಾ ನಾಲ್ಕು ಕೆ.ಜಿ ಚಿನ್ನದ ಒಡವೆಗಳಿರತವೆ. ಇಂಥ ರಾಜಕಾರಣಿಗಳ ಆಸ್ತಿ ಹರಾಜಾಕಿದ್ರೆ ಸಾಕು ಸಾರ್. ನಾವು ದುಬೈ ಶೇಕ್‌ಗಳ ತರ ಇರಬಹುದು.”

“ಆ ದೇಶದ ಜನಗಳನ್ನ ನೋಡ್ತಾಯಿದ್ರೆ ನಾವು ಯಾವತ್ತು ಆತರ ಆಗ್ತಿವಿ ಅನತಕ್ಕಂತ ಭಾವನೆ ಏನಿದೆ ಆ ಬಗ್ಗೆ ಚಿಂತನೆ ಮಾಡಿದ್ರೆ ನಿಜಕ್ಕೂ ಆಶ್ಚರ್ಯ ಆಗತ್ತೆ ಕಂಡ್ರಿ.”

“ನೀವು ಆ ದೇಶದ ಜನ ನೋಡದಿರ್ಲಿ, ಇಲ್ಲೆ ನಮ್ಮ ಸಿಟಿಗಳ ಹೊರಗೆ ಶೆಡ್ಡು ಗುಡುಸ್ಲಾಕ್ಕಂಡಿರೊ ಅಲೆಮಾರಿಗಳ ನೋಡಿದ್ರೆ. ಈ ರಾಜಕಾರಣಿಗಳು ಯಾವತ್ತು ಉದ್ದಾರಾಗಬಾರದು ಅನ್ಸುತ್ತೆ ಸಾರ್. ನೀವು ಮುಖ್ಯಮಂತ್ರಿಯಾಗಿದ್ದಾಗ ಇಂತವರ ಕಡೆ ನೋಡದು ಬಿಟ್ಟು ಬ್ರಾಹ್ಮಣರ ಅಭಿವೃದ್ಧಿ ನಿಗಮ ಮಾಡಿದ್ರಿ ಗೊತ್ತ ಸಾರ್.”

“ನಾನು ಬ್ರಾಹ್ಮಣರ ಅಭಿವೃದ್ಧಿ ನಿಗಮ ಮಾಡಿದ್ದು ಸರಿ ಕಂಡ್ರಿ. ಆ ಜನ ಸಮಾಜಕ್ಕೆ ಏನಾದ್ರು ಮಾಡ್ತರೆ, ಅದೇ ಈ ಊರ ಹೊರಗೆ ಇರತಕ್ಕಂತ ಜನಗಳಿಗೆ ಏನಾದ್ರು ಸಹಾಯ ಮಾಡಿದ್ರೆ ಕುಡುದು ತಿಂದು ಹಾಳು ಮಾಡ್ತರೆ. ಅವರಿಗೆ ಕೊಟ್ಟಿದ್ದೆ ವೇಸ್ಟು ಅನ್ನಂಗೆ ಮಾಡ್ತರೆ, ಅದ್ಕೆ ನಾನು ನಮ್ಮ ಸಹಾಯ ಏನಿದೆ ಅದು ಸದುಪಯೋಗ ಮಾಡಿಕತಕ್ಕಂತ ಜನಗಳನ್ನ ಪತ್ತೆ ಹಚ್ಚಿ ಆ ಕೆಲಸ ಮಾಡಿದೆ.”

“ನೀವು ಮಾಡಿದ್ದು ಬಿಜೆಪಿ ಕಾರ್ಯಕ್ರಮ ಸಾರ್. ನೋಡಿ ಅವುರು ನಿಮ್ಮನ್ನ ಬಳಸ್ಕಂಡ್ರು. ಮೋದಿನು ಬಳಸ್ಕಂಡು ಎಕನಾಮಿಕಲಿ ವೀಕರ್ ಸೆಕ್ಷನ್‌ಗೆ ಮೀಸಲಾತಿ ಬೇಕು ಅಂತ ಪಡದೇಬುಟ್ರು. ಈಗ ಅವುರನ್ನ ಹಿಡಿಯಕ್ಕೆ ಯಾರ ಕೈಲು ಆಗಲ್ಲ ಗೊತ್ತೆ.”

“ಆದ್ರು ಅವುರೆಷ್ಟು ಜನ ಇದಾರ್ರಿ?”

“ಒಬ್ಬರೆ ಸಾಕು ಸಾರ್, ಬ್ರಿಟಿಷರು ಎಷ್ಟು ಜನ ಇದ್ರು? ಇಂಡಿಯಾನೆ ಆಳಲಿಲ್ಲವ?”

“ಆಳಿದ್ರು ಸರಿ, ಆದ್ರೆ ರಾಜ್ಯವನ್ನ ಆಳತಕ್ಕಂತ ಜನಕ್ಕೆ ಅಧಿಕಾರ ಹೋದ್ರೆ ಹಾಗೆ ಇರದು ಕಷ್ಟ ಕಂಡ್ರಿ. ನನಿಗಂತು ಕರ್ನಾಟಕದಲ್ಲಿ ಇರಕ್ಕೆ ಬೇಜಾರು.”

“ಬೇಜಾರಾದ್ರೆ ಒಂದು ಕೆಲಸ ಮಾಡಬಹುದು ಸಾರ್. ಹ್ಯಂಗಿದ್ರೂ ನಮ್ಮ ಸಿನಿಮಾ ರಂಗ ಹಾಳಾಗ್ತಾಯಿದೆ. ಅದಕ್ಕೆ ಜೀವಕೊಡಿ ಸಾರ್, ಹೊಸ ಸಿನಿಮಾ ತಗಿರಿ, ಸಿನಿಮಾ ಟಾಕೀಸ್ ಕಟ್ಟಿ, ಡಿಸ್ಟ್ರಿಬ್ಯೂಷನ್ ಮಾಡಿ.”

“ಅವುನ್ಯಲ್ಲ ಮಾಡಿ ಆಯ್ತಲ್ರಿ, ಆ ಸಿನಿಮಾ ಲೋಕ ಏನು ಅನತಕ್ಕಂತ ಅನುಭವವನ್ನ ಪಡಕೊಂಡೆ ನಾನು ರಾಜಕಾರಣಕ್ಕೆ ಬಂದಿದ್ದು. ಈಗ ರಾಜಕಾರಣದ ಅನುಭವನೂ ಆಯ್ತು, ಪಂಚರತ್ನ ಕೈ ಹಿಡಿತವೆ ಅಂತ ತಿಳಕಂಡಿದ್ದೇ ತಪ್ಪಾಯ್ತು.”

“ಸಾರ್ ನನಿಗೆ ನಿಮ್ಮ ಬಗ್ಗೆ ಏನೋ ಒಂಥರ ಅಭಿಮಾನ ಇತ್ತು. ಅದ್ಯಲ್ಲ ವಂಟೊಯ್ತು ಸಾರ್.”

“ಯಾಕ್ರಿ?”

“ನಿಮ್ಮ ಪಾರ್ಟಿಗೆ ಐವತ್ತೆಂಟು ಸೀಟು ಬಂದಾಗ ಎಸ್ಸೆಂ ಕೃಷ್ಣ ಆಡಳಿತ ರಾಜ್ಯಪಾಲರ ಆಡಳಿತದಂಗಿತ್ತು, ಜನತಾದಳದಲ್ಲಿ ಪಟೇಲ್ರು, ಪ್ರಕಾಶ್, ಸಿಂಧ್ಯ, ಸಿದ್ದರಾಮಯ್ಯ, ವೈದ್ಯನಾಥ ಪಾಟೀಲ, ರಾಯರೆಡ್ಡಿ ಈ ತರ ಒಂದು ದಂಡೇಯಿದ್ದ ಕಾರಣಕ್ಕೆ ಜನತಾ ಪಾರ್ಟಿಗೆ ಅಷ್ಟು ಸೀಟು ಬಂದು ಈಗ ಅವರ್‍ಯಾರೂ ಇಲ್ಲದ ಕಾಲದಲ್ಲಿ ಪಂಚರತ್ನ ತೋರುಸ್ತ ನೀವೊಬ್ರು ಹೋದ್ರೆ ಯಾರು ಓಟಾಕ್ತರೆ ಸಾರ್? ನಿಜವಾಗ್ಲು ಹೇಳ್ತಿನಿ ನಿಮ್ಮ ಕುಟುಂಬದ ಮರ್‍ಯಾದಿಗೋಸ್ಕರ ಹತ್ತೊಂಬತ್ತು ಬಂದವೆ. ಇಲ್ಲಾ ಅಂದಿದ್ರೆ ಹತ್ತೆಯ. ಈಗ್ಲು ನೀವು ಬಿಜೆಪಿ ಕಡಿಕೋದ್ರೆ ನಿಮ್ಮ ಜೊತೆ ಬರವು ಒಂಬತ್ತು ನವಗ್ರಹಗಳು ಮಾತ್ರ.”

“ಮತ್ತೇನು ಮಾಡದೀಗ?”

“ಗ್ಯಾರಂಟಿ ಸಪೊರ್ಟ್ ಮಾಡಿ, ಮುಂದೆ ನೋಡಿ.”

“ಸತ್ರು ಅಂತ ಕೆಲಸ ಮಾಡಲ್ಲ.”

“ಥೂತ್ತೆರಿ.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...