Homeಅಂಕಣಗಳುಗ್ಯಾರಂಟಿ ಸಪೋರ್ಟು ಮಾಡಿ ನೋಡಿ ಸಾರ್

ಗ್ಯಾರಂಟಿ ಸಪೋರ್ಟು ಮಾಡಿ ನೋಡಿ ಸಾರ್

- Advertisement -
- Advertisement -

ಕಡೆಗೂ ಭಾರತ ಕಂಡ ಅಪರೂಪದ ಪ್ರಧಾನಿ ಲೋಕಸಭೆಯಲ್ಲಿ ಕಾಣಿಸಿಕೊಂಡು ಕಾಂಗ್ರೆಸ್ಸಿಗರನ್ನು ಎರಡು ಗಂಟೆ ಟೀಕಿಸಿದರು, ನಂತರ ಐದು ನಿಮಿಷ ಮಣಿಪುರದ ಪ್ರಸ್ತಾಪ ಮಾಡಿದರು. ಆದರೇನು ಪ್ರಧಾನಿಯ ಮುಖ ಸಹಜವಾಗಿರಲಿಲ್ಲ. ತಪ್ಪುಗಳನ್ನು ಮುಚ್ಚಿಕೊಳ್ಳುವ ಸುಳ್ಳುಹೇಳುವ ಮುಖದಂತಿತ್ತು. ಮೋದಿ ಈ ದೇಶದ ಜವಾಬ್ದಾರಿ ಹೊತ್ತ ಪ್ರಧಾನಿಯಾಗಿದ್ದರೆ ಮಣಿಪುರದಲ್ಲಿ ಗಲಭೆ ಹೊತ್ತಿಕೊಂಡ ಕೂಡಲೇ ಅಲ್ಲಿಗೆ ಹೋಗುತ್ತಿದ್ದರೆ, ಆ ಕಾರಣಕ್ಕಾದರೂ ನೂರಾರು ಕೊಲೆಗಳು ನಡೆಯುತ್ತಿರಲಿಲ್ಲ; ಸಾವಿರಾರು ಮನೆ ಧ್ವಂಸವಾಗುತ್ತಿರಲಿಲ್ಲ; ಹೆಣ್ಣು ಮಕ್ಕಳ ಬೆತ್ತಲೆ ಮೆರವಣಿಗೆ ನಡೆಯುತ್ತಿರಲಿಲ್ಲ ಮತ್ತು ಅವರ ಮೇಲಿನ ದೌರ್ಜನ್ಯ ನಡೆಯುತ್ತಿರಲಿಲ್ಲ. ಮೋದಿ ಸಂಸತ್‌ಗೆ ಬರದಂತೆ ತಪ್ಪಿಸಿಕೊಂಡು ತಿರುಗುವ ಪ್ರಮೇಯವೇ ಜರುಗುತ್ತಿರಲಿಲ್ಲ. ಗುಜರಾತಿನಲ್ಲಿ ಮೋದಿ ಸರಕಾರವಿದ್ದಾಗ ಮುಸ್ಲಿಮರ ಮಾರಣಹೋಮಕ್ಕೆ ಕಾರಣರಾದ ಕೋಮುಗಲಭೆಯ ಬಗ್ಗೆ ಇಂದಿಗೂ ಅವರು ಕ್ಷಮೆ ಕೋರಿಲ್ಲ. ಇನ್ನು ಮಣಿಪುರದ ಘಟನೆ ಕೇವಲ ಮಣಿಪುರಕ್ಕೆ ಮಾತ್ರ ಸೀಮಿತ ಎಂದು ಭಾರತದ ಒಕ್ಕೂಟದ ರಾಜ್ಯಗಳು ಭಾವಿಸುವಂತಿಲ್ಲ. ಈ ನಡುವೆ ಮಣಿಪುರದ ಘಟನೆಗಳನ್ನು ಮರೆಮಾಚಿ ಕುಳಿತಿರುವ ಮಾಧ್ಯಮದವರು ರಾಹುಲ್ ಗಾಂಧಿಯವರ ’ಫ್ಲೈಯಿಂಗ್ ಕಿಸ್’ ಬಗ್ಗೆ ತಲೆಕೆಡಿಸಿಕೊಂಡು ದಿನಗಟ್ಟಲೆ ಕೊರೆಯುತ್ತಿರುವುದು ನಗು ಕಳೆದುಕೊಂಡವರಿಗೆ ನಗು ತರಿಸಿದೆಯಲ್ಲಾ, ಥೂತ್ತೇರಿ.

******

ಪತ್ರಕರ್ತರಿಗೆ ಪ್ರಿಯರಾಗಿರುವ ಕುಮಾರಣ್ಣನನ್ನು ಮಾತನಾಡಿಸಬೇಕೆನಿಸಿತಲ್ಲಾ. ಇಂತಹ ಅಪೇಕ್ಷೆ ಮೂಡಲು, ಕುಮಾರಣ್ಣ ಸಿಂಗಾಪುರದ ಮುಖಾಂತರ ಯೂರೋಪ್ ಟೂರು ಮಾಡುತ್ತಿದ್ದಾರೆ ಎಂಬ ಸುದ್ದಿಯೇ ಕಾರಣವಾಗಿ ಪೋನು ಮಾಡಿದರೆ ರಿಂಗಾಯ್ತು. ರಿಂಗ್ ಟೋನ್ ’ಯಾರು ಏನು ಮಾಡುವರು, ನನಗೇನು ಕೇಡು ಮಾಡುವರು..’

“ಯಾರು? ಹಲೊ ಯಾರು?”

“ನಾನು ಸಾರ್ ಯಾಹೂ.”

“ಎಲ್ಲಿ ಬ್ರದರ್ ಸಿಕ್ಕಲೇಯಿಲ್ಲ ನೀವು.”

“ಬಂದಿದ್ದೆ ಸಾರ್, ಈಗತಾನೇ ಸಿಂಗಾಪುರಕ್ಕೋದ್ರು ಅಂದ್ರು ಸಾರ್.”

“ಕರೆದಿದ್ರೆ ನೀವು ಬರತಿದ್ರ?”

“ನಾನಾಗ್ಲೆ ನೋಡಿದ್ದಿನಿ ಸಾರ್.”

“ಯಾವಾಗ ನೋಡಿದ್ರಿ?”

“ನಾನು ಸಿಂಗಾಪುರ ನೋಡಿದಾಗ ನೀವಿನ್ನೂ ಸ್ಟೂಡೆಂಟು ಸಾರ್, ಆಗ ಸಿಂಗಾಪುರ ತೋರಿಸೊ ಏಜೆಂಟ್‌ಗಳು ಹುಟ್ಟಿಗಂಡಿದ್ರು. ನಮ್ಮನ್ನ ಕರಕಂಡು ಹೋಗಿ, ನಮ್ಮ ಹೆಸರಲ್ಲಿ ಟಿ.ವಿ, ಗಡಿಯಾರ, ಫೋನು, ಟೇಪರಿಕಾರ್ಡು ಯಲ್ಲಾನು ತಗಂಡು ರಸ್ತೆ ಪಾರ್ಕು ಮಾಲ್ ತೋರಿಸಿ ಕರಕಂಡು ಬರೋರು. ಅಂಗೆ ನಾನು ಹೋಗಿದ್ದೆ, ನಾನು ಪತ್ರಕರ್ತ ಅಂತ ಒಂದು ಪೆನ್ನು ತಕ್ಕೊಟ್ರು ಸಾರ್, ಅಂಗಾಗಿ ನಾನು ಸಿಂಗಾಪುರ ನೋಡಿದ್ದಿನಿ.”

“ಈಗ ನೋಡಬೇಕು ನೀವು. ಆ ದೇಶಗಳ ನೋಡಿದ್ರೆ ತಲೆ ತಗ್ಗಸಂಗಾಯ್ತದೆ ಕಂಡ್ರಿ.”

“ನೀವ್ಯಾಕೆ ತಲೆ ತಗ್ಗಸಬೇಕು ಸಾರ್.”

“ನಾನು ಕರ್ನಾಟಕದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಸಿಂಗಾಪುರದ ತರ ಒಂದು ರೋಡು ಒಂದು ಪಾರ್ಕು ಮಾಡಕ್ಕಾಗಲಿಲ್ಲವಲ್ಲ ಅಂತ ತಲೆ ತಗ್ಗಸತಕ್ಕಂತ ಅಭಿಪ್ರಾಯ ಮೂಡುತ್ತೆ ಕಂಡ್ರಿ.”

“ನಿಜ ಸಾರ್, ನಿಮ್ಮ ಆತ್ಮವಿಮರ್ಶೆ ಮೆಚ್ಚತಕ್ಕೆಂತದ್ದು. ಎಷ್ಟು ಜನ ರಾಜಕಾರಣಿಗಳಿಗೆ ಇಂತ ಜ್ಞಾನೋದಯ ಆಗತ್ತೆ ಸಾರ್? ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ನೀವು ರಾಮನಗರದ ಊರೊಳಗಡೆ ಹೋದ್ರೆ ತಲೆ ತಗ್ಗಿಸಲೇಬೇಕು ಸಾರ್. ಆ ರಸ್ತೆ ಗುಂಡಿಗಳು ಆ ಗಲೀಜು ನೋಡಕ್ಕಾಗಲ್ಲ ಸಾರ್.”

“ರಾಮನಗರ ಅಷ್ಟೇ ಅಲ್ಲ ಕಂಡ್ರಿ. ಐದಾರು ಬಾರಿ ಗೆದ್ದು ಶಾಸಕರು ಮಂತ್ರಿಗಳಾಗಿರತಕ್ಕಂತ ಉದಾಹರಣೆಗಳು ನಮ್ಮ ರಾಜ್ಯದಲ್ಲಿ ಹೇರಳವಾಗಿವೆ. ಕನಿಷ್ಟ ಜನಗಳಿಗೆ ಪ್ರಾಥಮಿಕವಾಗಿ ಬೇಕಾಗಿರತಕ್ಕಂತ ಅಗತ್ಯಗಳು ಏನಿವೆ ಅವನ್ನ ಪೂರ್ಣವಾಗಿ ಒದಗಿಸತಕ್ಕಂತ ಕೆಲಸನ ಯಾರೂ ಮಾಡತಕ್ಕಂತದ್ದಕ್ಕೆ ಮನಸು ಮಾಡದೆ ಬರೀ ಆಸ್ತಿ ಮಾಡಿಬುಟು.”

“ನಿಜ ಸಾರ್ ಕೇವಲ ಐದೊರ್ಸ ಮಂತ್ರಿಗಳಾಗಿದ್ದ ಜನಗಳು ಕೋಟ್ಯಾಂತರ ರೂಪಾಯಿಗಳ ಆಸ್ತಿ ಮಾಡಿದ್ದರೆ, ರಾಜಕಾರಣಿಗಳಿಗೆ ದುಡ್ಡು ಹೊಡಿಯಕ್ಕೆ ಅವಕಾಶ ಮಾಡಿಕೊಟ್ಟ ಅಧಿಕಾರಿಗಳು ಕೋಟ್ಯಾಧಿಪತಿಗಳಾಗಿದ್ದಾರೆ. ಒಬ್ಬ ಅಧಿಕಾರಿನ ಲೋಕಾಯುಕ್ತರು ರೈಡ್ ಮಾಡಿದ್ರೆ ಐದು ಕೋಟಿ ಬೆಲೆ ಬಾಳೊ ಮನೆ, ಮೂರುವರೆ ಕೆ.ಜಿ ಚಿನ್ನ, ಸೈಟುಗಳು, ಅಪಾರ್ಟ್‌ಮೆಂಟ್ ಮನೆಲಿ ಎಪ್ಪತೈದು ಲಕ್ಷ ಕ್ಯಾಶು ಇನ್ನೂರು ಪ್ಯಾಂಟು, ನಾನ್ನೂರು ಶರಟು, ನೂರು ಜೊತೆ ಚಪ್ಪಲಿ ಸಿಗತವೆ ಸಾರ್.”

“ರಾಜಕಾರಣಿಗಳ ಮನೆ ರೈಡು ಮಾಡಿದ್ರು ಅಷ್ಟೆ ಆಸ್ತಿ ಸಿಗತಕ್ಕಂತ ವಾತಾವರಣ ಇದೆಯಲ್ರಿ. ಆ ದುಡ್ಡನ್ನೆಲ್ಲಾ ನಾವು ಕರ್ನಾಟಕದ ಅಭಿವೃದ್ಧಿಗೆ ಬಳಸಿದ್ರೆ ನಮ್ಮೂರು ಸಿಂಗಾಪುರ ಆಯ್ತಿತ್ತಲ್ರೀ.”

ಇದನ್ನೂ ಓದಿ: ರಾಮ ಕೃಷ್ಣ ಕಪ್ಪುಗಿದ್ರಲ್ಲವ..

“ಹಂಡ್ರೆಡ್ ಪರಸೆಂಟು ನಿಜ ಸಾರ್. ಒಬ್ಬ ರಾಜಕಾರಣಿಗೆ ನಾಲ್ಕು ಜನ ಗಂಡು ಮಕ್ಕಳಿದ್ರೆ ಅವುರಿಗೆಲ್ಲಾ ಮನೆ ಇರತ್ತೆ, ಕಾರಿರತ್ತೆ, ಬೈಕಿರತವೆ ನಾಲ್ಕು ಜನ ಸೊಸೆಯರತ್ರ ತಲಾ ನಾಲ್ಕು ಕೆ.ಜಿ ಚಿನ್ನದ ಒಡವೆಗಳಿರತವೆ. ಇಂಥ ರಾಜಕಾರಣಿಗಳ ಆಸ್ತಿ ಹರಾಜಾಕಿದ್ರೆ ಸಾಕು ಸಾರ್. ನಾವು ದುಬೈ ಶೇಕ್‌ಗಳ ತರ ಇರಬಹುದು.”

“ಆ ದೇಶದ ಜನಗಳನ್ನ ನೋಡ್ತಾಯಿದ್ರೆ ನಾವು ಯಾವತ್ತು ಆತರ ಆಗ್ತಿವಿ ಅನತಕ್ಕಂತ ಭಾವನೆ ಏನಿದೆ ಆ ಬಗ್ಗೆ ಚಿಂತನೆ ಮಾಡಿದ್ರೆ ನಿಜಕ್ಕೂ ಆಶ್ಚರ್ಯ ಆಗತ್ತೆ ಕಂಡ್ರಿ.”

“ನೀವು ಆ ದೇಶದ ಜನ ನೋಡದಿರ್ಲಿ, ಇಲ್ಲೆ ನಮ್ಮ ಸಿಟಿಗಳ ಹೊರಗೆ ಶೆಡ್ಡು ಗುಡುಸ್ಲಾಕ್ಕಂಡಿರೊ ಅಲೆಮಾರಿಗಳ ನೋಡಿದ್ರೆ. ಈ ರಾಜಕಾರಣಿಗಳು ಯಾವತ್ತು ಉದ್ದಾರಾಗಬಾರದು ಅನ್ಸುತ್ತೆ ಸಾರ್. ನೀವು ಮುಖ್ಯಮಂತ್ರಿಯಾಗಿದ್ದಾಗ ಇಂತವರ ಕಡೆ ನೋಡದು ಬಿಟ್ಟು ಬ್ರಾಹ್ಮಣರ ಅಭಿವೃದ್ಧಿ ನಿಗಮ ಮಾಡಿದ್ರಿ ಗೊತ್ತ ಸಾರ್.”

“ನಾನು ಬ್ರಾಹ್ಮಣರ ಅಭಿವೃದ್ಧಿ ನಿಗಮ ಮಾಡಿದ್ದು ಸರಿ ಕಂಡ್ರಿ. ಆ ಜನ ಸಮಾಜಕ್ಕೆ ಏನಾದ್ರು ಮಾಡ್ತರೆ, ಅದೇ ಈ ಊರ ಹೊರಗೆ ಇರತಕ್ಕಂತ ಜನಗಳಿಗೆ ಏನಾದ್ರು ಸಹಾಯ ಮಾಡಿದ್ರೆ ಕುಡುದು ತಿಂದು ಹಾಳು ಮಾಡ್ತರೆ. ಅವರಿಗೆ ಕೊಟ್ಟಿದ್ದೆ ವೇಸ್ಟು ಅನ್ನಂಗೆ ಮಾಡ್ತರೆ, ಅದ್ಕೆ ನಾನು ನಮ್ಮ ಸಹಾಯ ಏನಿದೆ ಅದು ಸದುಪಯೋಗ ಮಾಡಿಕತಕ್ಕಂತ ಜನಗಳನ್ನ ಪತ್ತೆ ಹಚ್ಚಿ ಆ ಕೆಲಸ ಮಾಡಿದೆ.”

“ನೀವು ಮಾಡಿದ್ದು ಬಿಜೆಪಿ ಕಾರ್ಯಕ್ರಮ ಸಾರ್. ನೋಡಿ ಅವುರು ನಿಮ್ಮನ್ನ ಬಳಸ್ಕಂಡ್ರು. ಮೋದಿನು ಬಳಸ್ಕಂಡು ಎಕನಾಮಿಕಲಿ ವೀಕರ್ ಸೆಕ್ಷನ್‌ಗೆ ಮೀಸಲಾತಿ ಬೇಕು ಅಂತ ಪಡದೇಬುಟ್ರು. ಈಗ ಅವುರನ್ನ ಹಿಡಿಯಕ್ಕೆ ಯಾರ ಕೈಲು ಆಗಲ್ಲ ಗೊತ್ತೆ.”

“ಆದ್ರು ಅವುರೆಷ್ಟು ಜನ ಇದಾರ್ರಿ?”

“ಒಬ್ಬರೆ ಸಾಕು ಸಾರ್, ಬ್ರಿಟಿಷರು ಎಷ್ಟು ಜನ ಇದ್ರು? ಇಂಡಿಯಾನೆ ಆಳಲಿಲ್ಲವ?”

“ಆಳಿದ್ರು ಸರಿ, ಆದ್ರೆ ರಾಜ್ಯವನ್ನ ಆಳತಕ್ಕಂತ ಜನಕ್ಕೆ ಅಧಿಕಾರ ಹೋದ್ರೆ ಹಾಗೆ ಇರದು ಕಷ್ಟ ಕಂಡ್ರಿ. ನನಿಗಂತು ಕರ್ನಾಟಕದಲ್ಲಿ ಇರಕ್ಕೆ ಬೇಜಾರು.”

“ಬೇಜಾರಾದ್ರೆ ಒಂದು ಕೆಲಸ ಮಾಡಬಹುದು ಸಾರ್. ಹ್ಯಂಗಿದ್ರೂ ನಮ್ಮ ಸಿನಿಮಾ ರಂಗ ಹಾಳಾಗ್ತಾಯಿದೆ. ಅದಕ್ಕೆ ಜೀವಕೊಡಿ ಸಾರ್, ಹೊಸ ಸಿನಿಮಾ ತಗಿರಿ, ಸಿನಿಮಾ ಟಾಕೀಸ್ ಕಟ್ಟಿ, ಡಿಸ್ಟ್ರಿಬ್ಯೂಷನ್ ಮಾಡಿ.”

“ಅವುನ್ಯಲ್ಲ ಮಾಡಿ ಆಯ್ತಲ್ರಿ, ಆ ಸಿನಿಮಾ ಲೋಕ ಏನು ಅನತಕ್ಕಂತ ಅನುಭವವನ್ನ ಪಡಕೊಂಡೆ ನಾನು ರಾಜಕಾರಣಕ್ಕೆ ಬಂದಿದ್ದು. ಈಗ ರಾಜಕಾರಣದ ಅನುಭವನೂ ಆಯ್ತು, ಪಂಚರತ್ನ ಕೈ ಹಿಡಿತವೆ ಅಂತ ತಿಳಕಂಡಿದ್ದೇ ತಪ್ಪಾಯ್ತು.”

“ಸಾರ್ ನನಿಗೆ ನಿಮ್ಮ ಬಗ್ಗೆ ಏನೋ ಒಂಥರ ಅಭಿಮಾನ ಇತ್ತು. ಅದ್ಯಲ್ಲ ವಂಟೊಯ್ತು ಸಾರ್.”

“ಯಾಕ್ರಿ?”

“ನಿಮ್ಮ ಪಾರ್ಟಿಗೆ ಐವತ್ತೆಂಟು ಸೀಟು ಬಂದಾಗ ಎಸ್ಸೆಂ ಕೃಷ್ಣ ಆಡಳಿತ ರಾಜ್ಯಪಾಲರ ಆಡಳಿತದಂಗಿತ್ತು, ಜನತಾದಳದಲ್ಲಿ ಪಟೇಲ್ರು, ಪ್ರಕಾಶ್, ಸಿಂಧ್ಯ, ಸಿದ್ದರಾಮಯ್ಯ, ವೈದ್ಯನಾಥ ಪಾಟೀಲ, ರಾಯರೆಡ್ಡಿ ಈ ತರ ಒಂದು ದಂಡೇಯಿದ್ದ ಕಾರಣಕ್ಕೆ ಜನತಾ ಪಾರ್ಟಿಗೆ ಅಷ್ಟು ಸೀಟು ಬಂದು ಈಗ ಅವರ್‍ಯಾರೂ ಇಲ್ಲದ ಕಾಲದಲ್ಲಿ ಪಂಚರತ್ನ ತೋರುಸ್ತ ನೀವೊಬ್ರು ಹೋದ್ರೆ ಯಾರು ಓಟಾಕ್ತರೆ ಸಾರ್? ನಿಜವಾಗ್ಲು ಹೇಳ್ತಿನಿ ನಿಮ್ಮ ಕುಟುಂಬದ ಮರ್‍ಯಾದಿಗೋಸ್ಕರ ಹತ್ತೊಂಬತ್ತು ಬಂದವೆ. ಇಲ್ಲಾ ಅಂದಿದ್ರೆ ಹತ್ತೆಯ. ಈಗ್ಲು ನೀವು ಬಿಜೆಪಿ ಕಡಿಕೋದ್ರೆ ನಿಮ್ಮ ಜೊತೆ ಬರವು ಒಂಬತ್ತು ನವಗ್ರಹಗಳು ಮಾತ್ರ.”

“ಮತ್ತೇನು ಮಾಡದೀಗ?”

“ಗ್ಯಾರಂಟಿ ಸಪೊರ್ಟ್ ಮಾಡಿ, ಮುಂದೆ ನೋಡಿ.”

“ಸತ್ರು ಅಂತ ಕೆಲಸ ಮಾಡಲ್ಲ.”

“ಥೂತ್ತೆರಿ.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪಂಚರಾಜ್ಯ ಚುನಾವಣೆಯ ಗೋಜಲುಗಳು

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ...

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ...

ತಮಿಳುನಾಡಿನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದ 60 ನೂತನ ಶಾಸಕರು

ತಮಿಳುನಾಡು ರಾಜಕಾರಣ ಎಂದರೆ ಅದು ಐದು ದಶಕಗಳಿಂದ ಕೇವಲ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಜಿದ್ದಾಜಿದ್ದಿ. ಆದರೆ 2026ರ ಫಲಿತಾಂಶವು ಈ "ದ್ವಿಪಕ್ಷೀಯ" ಸಂಪ್ರದಾಯವನ್ನು ಮುರಿದುಹಾಕಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ...

‘ಪ್ರಜಾತಂತ್ರಕ್ಕೆ ಬೆದರಿಕೆ ಒಡ್ಡುತ್ತಿರುವ ಎಸ್ಐಆರ್’: ಬಿಜೆಪಿಯ (ಕು)ತಂತ್ರ ಫಲಿಸಿದರೇ ಭಾರತವೇ ಇರುವುದಿಲ್ಲ..!

ಪಂಚರಾಜ್ಯ ಚುನಾವಣಾ ಫಲಿತಾಂಶಗಳು 2026 ಮೇ 4ರಂದು ಹೊರಬಿದ್ದಿದ್ದು, ಭಾರತೀಯ ಜನತಾ ಪಾರ್ಟಿ ಪಶ್ಚಿಮ ಬಂಗಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ ಈ ಗೆಲುವು ಕೇವಲ ಜನರ ಆದರ್ಶವಲ್ಲ, ಬದಲಿಗೆ ಚುನಾವಣಾ ವ್ಯವಸ್ಥೆಯೇ...