2021ರಲ್ಲಿ ರಾಂಚಿಯಲ್ಲಿ ನಡೆದ ನಕಲಿ ಎನ್ಕೌಂಟರ್ನಲ್ಲಿ 24 ವರ್ಷದ ಬುಡಕಟ್ಟು ಯುವಕನನ್ನು ಪೊಲೀಸರು ಹತ್ಯೆ ಮಾಡಿದ ಪ್ರಕರಣದ ಕುರಿತು ಮರು ತನಿಖೆಗೆ ಜಾರ್ಖಂಡ್ ಹೈಕೋರ್ಟ್ ಆದೇಶಿಸಿದೆ ಮತ್ತು ಸಂತ್ರಸ್ತನ ಪತ್ನಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಪೊಲೀಸರ ಗುಂಡಿಗೆ ಬಲಿಯಾದ ಬ್ರಹ್ಮದೇವ್ ಸಿಂಗ್ ಸಾವನ್ನಪ್ಪಿದ್ದಾರೆ ಎಂಬುದು ಒಪ್ಪಿಕೊಳ್ಳುವ ಸತ್ಯ ಎಂದು ನ್ಯಾಯಮೂರ್ತಿ ಸಂಜಯ್ ಕುಮಾರ್ ದ್ವಿವೇದಿ ಆದೇಶದ ವೇಳೆ ಹೇಳಿದ್ದಾರೆ.
2021ರ ಜೂನ್ 12 ರಂದು ಜಾರ್ಖಂಡ್ನಲ್ಲಿ ಬುಡಕಟ್ಟು ಆಚರಣೆಯಾದ ‘ನೇಮ್ ಸರ್ಹುಲ್’ನ್ನು ಆಚರಿಸುವ ಹಿನ್ನೆಲೆ ಪಿರಿ ಗ್ರಾಮದ ಸುಮಾರು 10-12 ಬುಡಕಟ್ಟು ಜನರು ರಾಜೇಶ್ವರ್ ಸಿಂಗ್ ಎಂಬವರ ಮನೆಯ ಮುಂದೆ ಬೇಟೆಯಾಡಲು ಸೇರಿದ್ದರು ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.
ಮೊದಲ ಗುಂಪು ಅರಣ್ಯದತ್ತ ತೆರಳಲು ಆರಂಭಿಸಿದಾಗ ಯಾವುದೇ ಎಚ್ಚರಿಕೆ ನೀಡದೆ ಭದ್ರತಾ ಸಿಬ್ಬಂದಿ ಮತ್ತೊಂದು ಕಡೆಯಿಂದ ಗುಂಡು ಹಾರಿಸಲು ಆರಂಭಿಸಿದರು ಎಂದು ಆರೋಪಿಸಲಾಗಿದೆ. ಬಲಿಪಶು ತಾನು ಇದೇ ಹಳ್ಳಿಗ ಎಂದು ಮನವಿ ಮಾಡಿದರೂ ಹತ್ಯೆ ಮಾಡಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.
ಸಂತ್ರಸ್ತನ ಪತ್ನಿ ಹೈಕೋರ್ಟ್ಗೆ ಮೊರೆ ಹೋದ ನಂತರ ಘಟನೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸಲಾಗಿದೆ. ಸೆಕ್ಷನ್ 156(3) ಸಿಆರ್ಪಿಸಿ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ನೀಡಿದ ಆದೇಶವನ್ನು ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಎಂದು ಪೀಠವು ಗಮನಿಸಿದೆ. ಆದರೆ, ಎಫ್ಐಆರ್ ದಾಖಲಾದ ನಂತರ ಸಿಐಡಿಯು ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ಪ್ರಕರಣದ ವರದಿಯನ್ನು ಸಲ್ಲಿಸಿದೆ.
ನ್ಯಾಯಮೂರ್ತಿ ದ್ವಿವೇದಿ ಅವರ ಏಕಸದಸ್ಯ ಪೀಠವು ತನಿಖಾ ಸಂಸ್ಥೆಯು ಕಳಂಕಿತ ಮತ್ತು ಪಕ್ಷಪಾತದ ರೀತಿಯಲ್ಲಿ ತನಿಖೆ ನಡೆಸಲು ಅನುಮತಿ ನೀಡಲಾಗುವುದಿಲ್ಲ ಎಂದು ಹೇಳಿದರು. ಹೊಸ ತನಿಖೆಗೆ ಆದೇಶಿಸಿರುವ ನ್ಯಾಯಾಲಯ ಮೂರು ತಿಂಗಳೊಳಗೆ ತನಿಖೆ ಮುಕ್ತಾಯಗೊಳಿಸಬೇಕು ಎಂದು ಹೇಳಿದೆ.
ಇದನ್ನು ಓದಿ: ಮಧ್ಯಪ್ರದೇಶ: ಜಾತಿ ಗಣತಿ ಸೇರಿ 6 ಭರವಸೆ ಘೋಷಿಸಿದ ಮಲ್ಲಿಕಾರ್ಜುನ ಖರ್ಗೆ