ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ಬಳಿಕ ಕಾಂಗ್ರೆಸ್ ರಾಜ್ಯದಲ್ಲಿ ಜಾತಿ ಗಣತಿ ನಡೆಸಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.
ಮಧ್ಯಪ್ರದೇಶದ ಬುಂದೇಲ್ಖಂಡ್ ಪ್ರದೇಶದ ಸಾಗರದಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡಲಾಗುವುದು . ಎಲ್ಪಿಜಿ 500 ರೂ.ಗೆ ಸಿಗಲಿದೆ. ಮಹಿಳೆಯರಿಗೆ ತಿಂಗಳಿಗೆ 1500 ರೂ. ಸಿಗಲಿದೆ. ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರಲಿದ್ದೇವೆ. 100 ಯೂನಿಟ್ಗಳವರೆಗೆ ವಿದ್ಯುತ್ ಬಿಲ್ ಉಚಿತ. ರಾಜ್ಯದಲ್ಲೂ ಜಾತಿ ಗಣತಿ ನಡೆಸುತ್ತೇವೆ. ಈಗ ನಮ್ಮ ಕಾರ್ಯಕಾರಿ ಸಮಿತಿಯಲ್ಲಿ ಆರು ಹಿಂದುಳಿದ ವರ್ಗದ ಜನರಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಅವರ ಶಿಫಾರಸಿನ ಮೇರೆಗೆ ಮಂಜೂರಾದ ಬುಂದೇಲ್ಖಂಡ್ ಪ್ಯಾಕೇಜನ್ನು ಬಿಜೆಪಿ ಸರ್ಕಾರ ಜಾರಿಗೆ ತಂದಿಲ್ಲ. ಅವರು ಹಿಂಸಾಚಾರ ಪೀಡಿತ ಮಣಿಪುರಕ್ಕೆ ಏನೂ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ಮೋದಿ ಮಾಡಿದ ಸಂತ ರವಿದಾಸ್ ಅವರ 100 ಕೋಟಿ ರೂ.ಗಳ ಸ್ಮಾರಕ ಮತ್ತು ದೇವಾಲಯದ ಶಂಕುಸ್ಥಾಪನೆ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ, ಅವರು ಸಾಗರದಲ್ಲಿ ಪರಿಶಿಷ್ಟ ಜಾತಿಯ ಜನ ಪೂಜ್ಯರಾದ ಸಂತ ರವಿದಾಸ್ ದೇವಾಲಯದ ಅಡಿಪಾಯವನ್ನು ಹಾಕಿದರು ಆದರೆ ದೆಹಲಿಯಲ್ಲಿ ಅದನ್ನು ಧ್ವಂಸ ಮಾಡಿದ್ದಾರೆ. ಪ್ರಧಾನಿ ಮೋದಿಯವರು ಚುನಾವಣಾ ಸಂದರ್ಭದಲ್ಲಿ ಮಾತ್ರ ಸಂತ ರವಿದಾಸರನ್ನು ನೆನಪಿಸಿಕೊಳ್ಳುತ್ತಾರೆ ಎಂದು ಆರೋಪಿಸಿದರು.
2011ರ ಜನಗಣತಿಯ ಪ್ರಕಾರ, ಮಧ್ಯಪ್ರದೇಶದಲ್ಲಿ ದಲಿತರ ಜನಸಂಖ್ಯೆ 1.13 ಕೋಟಿ ಇದೆ.
ಇದನ್ನು ಓದಿ:ಪಾಕಿಸ್ತಾನದ ಮೇಲೆ ಮತ್ತೆ ಸರ್ಜಿಕಲ್ ಸ್ಟ್ರೈಕ್; ಸುಳ್ಳು ಸುದ್ದಿ ಎಂದ ರಕ್ಷಣಾ ಸಚಿವಾಲಯ