ಈರುಳ್ಳಿಯ ಮೇಲೆ 40% ರಫ್ತು ತೆರಿಗೆ ವಿಧಿಸಿದ ಕೇಂದ್ರದ ನಿರ್ಧಾರದ ವಿರುದ್ಧದ ಪ್ರತಿಭಟನೆಯಲ್ಲಿ ಬಿಜೆಪಿಯ ಮಿತ್ರ ಪಕ್ಷಗಳು ಈರುಳ್ಳಿ ಬೆಳೆಯುವ ರೈತರಿಗೆ ಬೆಂಬಲಿಸಿದ್ದು, ಸರ್ಕಾರವು ಹಾನಿ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದೆ.
ಭಾರತದಲ್ಲಿ ಈರುಳ್ಳಿ ಬೆಲೆ ಏರಿಕೆಯು ನರೇಂದ್ರ ಮೋದಿಯವರ ಸರ್ಕಾರಕ್ಕೆ ಹೆಚ್ಚಿನ ಅಪಾಯವನ್ನುಂಟುಮಾಡುವ ಲಕ್ಷಣ ಕಂಡು ಬರುತ್ತಿದೆ. ಅದಕ್ಕಾಗಿ ಹಾನಿ ನಿಯಂತ್ರಣಕ್ಕೆ ಸರಕಾರ ಯತ್ನಿಸುತ್ತಿದೆ.
ಈರುಳ್ಳಿ ರಫ್ತಿನ ಮೇಲೆ ಶೇ 40 ರಫ್ತು ಸುಂಕ ವಿಧಿಸಿದ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ರೈತರು ಮತ್ತು ವ್ಯಾಪಾರಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ಈ ನಿರ್ಧಾರ ವಿರೋಧಿಸಿ ರೈತರು ಪ್ರತಿಭಟನೆಗಿಳಿಯುವಂತೆ ಮಾಡಿದ್ದು, ದೆಹಲಿ ಮತ್ತು ಮುಂಬೈ ಎರಡೂ ಕಡೆಗಳಲ್ಲೂ ಮೈತ್ರಿ ಸರಕಾರ ಹಾನಿ ನಿಯಂತ್ರಣಕ್ಕಾಗಿ ಹರಸಾಹಸ ಪಡುತ್ತಿದೆ.
ಈ ಹಿನ್ನೆಲೆಯಲ್ಲಿ ಮಂಗಳವಾರದಿಂದ ಈರುಳ್ಳಿ ಸಂಗ್ರಹಣೆಯನ್ನು ಪುನರಾರಂಭಿಸುವುದಾಗಿ NAFED (ರಾಷ್ಟ್ರೀಯ ಸಹಕಾರಿ ಕೃಷಿ ಮಾರುಕಟ್ಟೆ ಒಕ್ಕೂಟ) ಘೋಷಣೆ ಮಾಡಿದೆ ಎನ್ನಲಾಗಿದೆ.
ಈರುಳ್ಳಿ ರಫ್ತಿನ ಮೇಲೆ ಶೇ 40ರಷ್ಟು ಸುಂಕ ವಿಧಿಸಿದ ನಂತರ ರೈತರ ಪ್ರತಿಭಟನೆ ಕುರಿತು ಡಿಸಿಎಂ ದೇವೇಂದ್ರ ಫಡ್ನವಿಸ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ರೈತರಿಗೆ ಪರಿಹಾರ ನೀಡಲು ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರವು ರೈತರಿಂದ ಈರುಳ್ಳಿ ಖರೀದಿಸಲು ನಿರ್ಧರಿಸಿದೆ. ಇದಕ್ಕಾಗಿ ನಾಸಿಕ್ ಮತ್ತು ಅಹಮದ್ನಗರದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗುತ್ತದೆ ಎಂದು ಹೇಳಿದೆ. ರಾಜ್ಯದ ರೈತರಿಂದ ಎರಡು ಲಕ್ಷ ಮೆಟ್ರಿಕ್ ಟನ್ ಈರುಳ್ಳಿಯನ್ನು ಕ್ವಿಂಟಲ್ಗೆ 2,410 ರೂಪಾಯಿ ದರದಲ್ಲಿ ಸರ್ಕಾರ ಖರೀದಿಸಲಿದೆ ಎಂದು ಸರಕಾರ ಹೇಳಿದೆ.
ಮಹಾರಾಷ್ಟ್ರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಛಗನ್ ಭುಜಬಲ್ ಅವರು ದಿ ಇಂಡಿಯನ್ ಎಕ್ಸ್ಪ್ರೆಸ್ ಜೊತೆ ಮಾತನಾಡಿ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭೇಟಿಯಾಗಿ ಈ ಕುರಿತು ಚರ್ಚಿಸುವುದಾಗಿ ತಿಳಿಸಿದ್ದಾರೆ. ಶಿಂಧೆ ನೇತೃತ್ವದ ಸರ್ಕಾರಕ್ಕೆ ಸೇರಲು ಅಜಿತ್ ಪವಾರ್ ಅವರೊಂದಿಗೆ ಎನ್ಸಿಪಿ ತೊರೆದ ಎಂಟು ಶಾಸಕರಲ್ಲಿ ಒಬ್ಬರಾದ ಭುಜಬಲ್ ನಾಸಿಕ್ ಜಿಲ್ಲೆಯ ಯೋಲಾ ಕ್ಷೇತ್ರದ ಶಾಸಕರಾಗಿದ್ದಾರೆ. ಇದು ಈರುಳ್ಳಿ ಬೆಳೆಯುವ ಪ್ರಮುಖ ವಲಯವಾಗಿದೆ.
ನಾಸಿಕ್ನಿಂದ ಬಂದಿರುವ ಕೇಂದ್ರ ಸರಕಾರದ ರಾಜ್ಯ ಖಾತೆ ಸಚಿವ ಭಾರತಿ ಪವಾರ್, ರೈತರು ಆತಂಕಪಡಬೇಡಿ ಎಂದು ಹೇಳುತ್ತಿದ್ದಾರೆ.
ಈರುಳ್ಳಿ ರಫ್ತಿನ ಮೇಲೆ ಶೇ 40 ರಫ್ತು ಸುಂಕ ವಿಧಿಸಿದ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಬಿಜೆಪಿಯ ಮಿತ್ರಪಕ್ಷ ಮಾಜಿ ಸಚಿವ ಸದಾಭಾವು ಖೋಟ್ ನೇತೃತ್ವದ ರೈತ ಕ್ರಾಂತಿ ಸಂಘಟನೆ ರೈತರ ಪ್ರತಿಭಟನೆಗೆ ಬೆಂಬಲವನ್ನು ವ್ಯಕ್ತಪಡಿಸಿದೆ. ಇನ್ನೆರಡು ದಿನಗಳಲ್ಲಿ ಸರ್ಕಾರ ಈ ನಿರ್ಧಾರವನ್ನು ಹಿಂಪಡೆಯದಿದ್ದರೆ ಮುಂಬೈಗೆ ಟ್ರ್ಯಾಕ್ಟರ್ ರ್ಯಾಲಿಯನ್ನು ಪ್ರಾರಂಭಿಸುವುದಾಗಿ ಸಂಘಟನೆಯ ನಾಸಿಕ್ ಮುಖ್ಯಸ್ಥ ದೀಪಕ್ ಪಗಾರ್ ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿ:ಮಧ್ಯಪ್ರದೇಶ: ಜಾತಿ ಗಣತಿ ಸೇರಿ 6 ಭರವಸೆ ಘೋಷಿಸಿದ ಮಲ್ಲಿಕಾರ್ಜುನ ಖರ್ಗೆ