ಉತ್ತರ ಪ್ರದೇಶ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರು ಶನಿವಾರ ಹೇಳಿದ್ದಾರೆ.
“ಅಖಿಲೇಶ್ ಅವರು ದಲಿತ ಮತ ಬ್ಯಾಂಕ್ ಅನ್ನು ಬಯಸುತ್ತಾರೆಯೇ ಹೊರತು ದಲಿತ ನಾಯಕರಲ್ಲ. ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಒಂದು ತಿಂಗಳಿನಿಂದ ಪ್ರಯತ್ನಿಸಿದರೂ ಅದು ಫಲ ನೀಡಲಿಲ್ಲ, ಅಖಿಲೇಶ್ ಯಾದವ್ ಬಹುಜನ ಸಮಾಜದ ಜನರನ್ನು ಅವಮಾನಿಸಿದ್ದಾರೆ” ಎಂದು ಚಂದ್ರಶೇಖರ್ ಆರೋಪಿಸಿದ್ದಾರೆ.
ಇದನ್ನೂ ಓದಿ:ಸಂವಿಧಾನ, ಸುಪ್ರೀಂ ಕೋರ್ಟ್ ಮೇಲೆ ನಂಬಿಕೆ ಇಲ್ಲ: ಮತ್ತೆ ನಾಲಿಗೆ ಹರಿಬಿಟ್ಟ ಯತಿ ನರಸಿಂಗಾನಂದ
“ಎಲ್ಲಾ ಚರ್ಚೆಗಳ ನಂತರ, ಅಂತಿಮವಾಗಿ, ಅಖಿಲೇಶ್ ಯಾದವ್ ಅವರಿಗೆ ಈ ಮೈತ್ರಿಯಲ್ಲಿ ದಲಿತರು ಬೇಡ, ಅವರಿಗೆ ದಲಿತ ಮತ ಬ್ಯಾಂಕ್ ಬೇಕು ಎಂದು ನನಗೆ ಅನಿಸಿತು. ಅವರು ಬಹುಜನ ಸಮಾಜದ ಜನರನ್ನು ಅವಮಾನಿಸಿದ್ದಾರೆ. ನಾನು 1 ತಿಂಗಳು 3 ದಿನಗಳ ಕಾಲ ಪ್ರಯತ್ನಿಸಿದೆ ಆದರೆ ಮೈತ್ರಿ ಸಾಧ್ಯವಾಗಲಿಲ್ಲ” ಎಂದು ಚಂದ್ರಶೇಖರ್ ಆಜಾದ್ ಹೇಳಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
“ಶಕ್ತಿ ಮತ್ತು ಒಗ್ಗಟ್ಟು ಇಲ್ಲದೆ ಭಾರತೀಯ ಜನತಾ ಪಕ್ಷವನ್ನು ಸೋಲಿಸುವುದು ಸುಲಭವಲ್ಲ. ಸಮಾಜದ ಎಲ್ಲ ವರ್ಗಗಳ ಪ್ರಾತಿನಿಧ್ಯವನ್ನು ಗೌರವಿಸುವುದು ಮತ್ತು ಕಾಳಜಿ ವಹಿಸುವುದು ಒಕ್ಕೂಟದ ನಾಯಕನ ಜವಾಬ್ದಾರಿಯಾಗಿದೆ. ಇಂದು ಯುಪಿಯಲ್ಲಿರುವ ದಲಿತ ವರ್ಗ ಅಖಿಲೇಶ್ ಅವರು ಈ ಜವಾಬ್ದಾರಿಯನ್ನು ಪೂರೈಸಬೇಕೆಂದು ನಿರೀಕ್ಷಿಸುತ್ತಾರೆ” ಎಂದು ಆಜಾದ್ ಅವರು ಶುಕ್ರವಾರ ಟ್ವೀಟ್ ಮಾಡಿದ್ದರು.
ಅಖಿಲೇಶ್ ಯಾದವ್ ಅವರ ಸಮ್ಮುಖದಲ್ಲಿ ಶುಕ್ರವಾರ ನಡೆದ ವರ್ಚುವಲ್ ರ್ಯಾಲಿಯಲ್ಲಿ ಆದಿತ್ಯನಾಥ್ ಸರ್ಕಾರದ ಹಲವಾರು ಬಿಜೆಪಿ ಶಾಸಕರು ಮತ್ತು ಇಬ್ಬರು ಸಚಿವರು ಸಮಾಜವಾದಿ ಪಕ್ಷಕ್ಕೆ ಸೇರಿದ್ದಾರೆ. ಈ ಸೇರಿರುವವರಲ್ಲಿ ಹೆಚ್ಚಿನವರು ಹಿಂದುಳಿದ ಜಾತಿಗಳ ನಾಯಕರಾಗಿದ್ದಾರೆ. ರಾಜೀನಾಮೆ ನೀಡಿರುವ ಶಾಸಕರು, ‘ರಾಜ್ಯ ಸರ್ಕಾರವು ಹಿಂದುಳಿದವರು ಮತ್ತು ದಲಿತರ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿದೆ’ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:‘ಅಳಿಯ ಅಲ್ಲ, ಮಗಳ ಗಂಡ’: ಸರ್ಕಾರದ ಹೊಸ ಆದೇಶದ ಬಗ್ಗೆ ಅತಿಥಿ ಉಪನ್ಯಾಸಕರ ಆಕ್ರೋಶ