Homeಅಂಕಣಗಳುಜೈಲಿನಾಗ ರೊಟ್ಟಿ ತಣ್ಣಗೆ ಇರಬಹುದು, ಆದರ ಖಾಸಗಿ ಜೈಲು ಕಂಪನಿಗಳ ಷೇರು ಮಾತ್ರ ಬಿಸಿ ದೋಸೆಯಂತೆ...

ಜೈಲಿನಾಗ ರೊಟ್ಟಿ ತಣ್ಣಗೆ ಇರಬಹುದು, ಆದರ ಖಾಸಗಿ ಜೈಲು ಕಂಪನಿಗಳ ಷೇರು ಮಾತ್ರ ಬಿಸಿ ದೋಸೆಯಂತೆ ಖರ್ಚು ಆದವು

‘ಅಪರಾಧ ಅನ್ನೋದು ಯಾವತ್ತೂ ಕಮ್ಮಿ ಆಗೋದಿಲ್ಲ. ಹಿಂಗಾಗಿ ಖಾಸಗಿ ಜೈಲು ಯಾವತ್ತೂ ಬಂದ್ ಆಗೋದಿಲ್ಲ. ಅವುಗಳ ಒಳಗ ಹಣ ಹೂಡಿದರ ನಷ್ಟ ಇಲ್ಲ’ ಅಂತ. ನಮ್ಮ ಟ್ರಂಪ್ ಅಣ್ಣಾವ್ರು ಅಧ್ಯಕ್ಷರಾದ ಮ್ಯಾಲೆ ಖಾಸಗಿ ಜೈಲುಗಳ ಷೇರು ಮೌಲ್ಯ ಶೇಕಡಾ 100 ರಷ್ಟು ಹೆಚ್ಚು ಆಗೇದ.

- Advertisement -
- Advertisement -

‘ಅಪರಾಧ ಲಾಭದಾಯಕವಲ್ಲ’ (ಕ್ರೈಂ ಡಸ್ ನಾಟ್ ಪೇ) ಎನ್ನುವುದು ಹಳೆಯ ನಾಣ್ಣುಡಿ. ಇಂಥಾ ನಾಣ್ಣುಡಿಗಳ ನಾಡಾದ ಬ್ರಿಟನ್‌ದಾಗ ‘ಅಪರಾಧದಷ್ಟು ಲಾಭದಾಯಕ ಇನ್ನೊಂದು ಇಲ್ಲ’ ಅನ್ನೋ ಗಾದಿ ಮಾತು ಹುಟ್ಟಿಕೊಂಡದ.

ಅದು ಯಾಕಪಾ ಅಂದ್ರ ಅಲ್ಲಿ ಖಾಸಗಿ ಜೈಲು ಅದಾವು. ಬ್ರಿಟನ್ನಿನ ಒಟ್ಟು 130 ಜೈಲುಗಳಲ್ಲಿ 14 ಖಾಸಗಿ ಜೈಲು. ಮೊದಲುಮೊದಲಿಗೆ ಸರ್ಕಾರಿ ಜೈಲಿನ ಕಸ ಗುಡಿಸುವ, ಅಲ್ಲಿ ಊಟ ಒದಗಿಸುವ ಏಜೆನ್ಸಿಗಳಾಗಿ ನೇಮಕವಾದ ಈ ಕಂಪನಿಗಳು ಈಗ ಪೂರ್ಣಪ್ರಮಾಣದ ಖಾಸಗಿ ಜೈಲುಗಳನ್ನು ಕಟ್ಟಿವೆ. ಸರಕಾರದಿಂದ ಒಬ್ಬ ಕೈದಿಗೆ ಇಷ್ಟು ಅಂತ ಖರ್ಚು ಪಡೆಯುವ ಈ ಕಂಪನಿಗಳು ವರ್ಷದಿಂದ ವರ್ಷಕ್ಕೆ ಹೆಚ್ಚು ಆಗಲಿಕ್ಕೆ ಹತ್ತಿದ್ದಾವು.

ಇನ್ನೂ ಬ್ರಿಟನ್‌ನ ಹಳೆ ಮಂದಿ ಬಿಟ್ಟು ಹೋಗಿ ಕಟ್ಟಿಕೊಂಡಿರುವ ನಿರಾಶ್ರಿತರ ಶಿಬಿರ ಅಮೆರಿಕದಾಗ ಪರಿಸ್ಥಿತಿ ಏನೂ ಬ್ಯಾರೆ ಇಲ್ಲ. ಅಲ್ಲಿನ 23 ಲಕ್ಷ ಕೈದಿಗಳ ಪೈಕಿ ಸುಮಾರು ಶೇಕಡಾ ಒಂಬತ್ತು ಕೈದಿಗಳು ಖಾಸಗಿ ಜೈಲಿನ ಒಳಗೆ ಇರ್ತಾರ.

ಏನು ಅಂದರೂ ಅಮೆರಿಕ ಬ್ರಿಟನ್‌ಗಿಂತ ಒಂದು ಕೈ ಮುಂದೆ ಇರೋದು. ಇನ್ನ ಬ್ರಿಟನ್ ಹಾಗೂ ಅಮೆರಿಕದ ಜಗಳ ಇಂದುನಿನ್ನೆಯದಲ್ಲ. ಅದು 1609ರಾಗ ಮೇ ಫ್ಲವರ್ ಹಡಗಿನ ಯಾತ್ರೆಯಿಂದ ಶುರು ಆಗಿದ್ದು. ಇನ್ನೂ ನಿಂತಿಲ್ಲ.

PC : Politico, (ಬೋರಿಸ್ ಜಾನ್ಸನ್ & ಡೊನಾಲ್ಡ್ ಟ್ರಂಪ್)

ಅಲ್ಲಿನ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಸಂಗತೆ ನಮ್ಮ ದೋಸ್ತ ಬಿಳಿಮನೀ ಟ್ರಂಪಣ್ಣನವರ ಅವರು “ನಿನ್ನ ಕೂದಲ ಜಾಸ್ತಿ ಹಳದಿನೋ, ನನ್ನ ಕೂದಲ ಜಾಸ್ತಿ ಹಳದಿನೋ” ಅಂತ ಹೇಳಿ ಜಿದ್ದಿಗೆ ಬಿದ್ದಿರತಾರ. ಟ್ರಂಪ್ ಅವರು ಕಲರು – ಖದರು ಎರಡೂ ಜಾಸ್ತಿ ಅಂತ ಗೊತ್ತ ಆದ ಮ್ಯಾಲೆ ಬೋರಿಸ್ ಅವರು ತಮ್ಮ ಕೂದಲ ಬಾಚಿಕೊಳ್ಳೋದು ಬಿಟ್ಟುಬಿಟ್ಟಾರ. ಅದು ಹೋಗಲಿ ಬಿಡರಿ.

ಇನ್ನ ಬೋರಿಸ್ ಅಣ್ಣಾ ಅವರು ಮೊದಲನೇ ಸಲ ಚುನಾವಣೆ ಎದುರಿಸದೆ ಪ್ರಧಾನಿ ಆಗಿದ್ದು ನೋಡಿ ಹೊಟ್ಯಾಗ್ ಸಂಕಟ ಆಗಿ ಟ್ರಂಪ್ ಅವರು ಚುನಾವಣೆಯಲ್ಲಿ ಸೋತರೂ ಇನ್ನೂ ಅಧಿಕಾರದಲ್ಲಿ ಉಳಕೊಂಡು ಬಿಟ್ಟಾರ. ಜನವರಿ 20ನೇ ತಾರೀಖಿಗೆ ಅವರನ್ನ ಅವರ ಸಾಮಾನು ಸಮೇತ ಹೊರಗ ಹಾಕತಾರ. ಅದುನೂ ಬ್ಯಾರೆ ಮಾತು.

ಬ್ರಿಟನ್‌ನವರು ಖಾಸಗಿ ಜೈಲು ಪ್ರಾರಂಭ ಮಾಡಿದಾರ ಅಂತ ಗೊತ್ತಾದ ಕೂಡಲೇ ಅಮೆರಿಕದವರು ಇನ್ನೂ ಒಂದು ಹೆಜ್ಜಿ ಮುಂದೆ ಹೋದರು. ತಮ್ಮಲ್ಲಿನ ಖಾಸಗಿ ಜೈಲಿನ ಕಂಪನಿಗಳು ಅಲ್ಲಿನ ಷೇರ್ ಮಾರುಕಟ್ಟೆಯಲ್ಲಿ ಷೇರು ಮಾರಾಟ ಮಾಡಲಿಕ್ಕೆ ಅನುಕೂಲ ಮಾಡಿಕೊಟ್ಟರು.

ಜೈಲಿನಾಗ ರೊಟ್ಟಿ ತಣ್ಣಗೆ ಇರಬಹುದು, ಆದರ ಖಾಸಗಿ ಜೈಲು ಕಂಪನಿಗಳ ಷೇರು ಮಾತ್ರ ಬಿಸಿ ದೋಸೆಯಂತೆ ಖರ್ಚು ಆದವು. ಆ ಕಂಪನಿಗಳಲ್ಲಿ ಹಣ ಹೂಡುವುದು ಲಾಭದಾಯಕ ಆಗಿ ಖಾಸಗಿ ಕಂಪನಿಗಳ ಸಂಖ್ಯೆ ಕಳೆದ 30 ವರ್ಷಗಳಲ್ಲಿ 40 ಶೇಕಡಾ ಹೆಚ್ಚು ಆದವು.

ಭಾಷೆಯ ಬಳಕೆಯೊಳಗ ಭಾಳ ಶಾಣೆ ಇರುವ ಅಮೆರಿಕದವರು ಜೈಲ್ ಅನ್ನು ಜೈಲ್ ಅಂತ ಕರೆಯೋದಿಲ್ಲ. ಅವರು ಅದನ್ನ ‘ಅಪಕೃತ್ಯ ಮಾಡಿದವರ ಮನಪರಿವರ್ತನಾ ಕೇಂದ್ರ, ‘ಪ್ರಮಾದ ಎಸಗಿದವರ ನಿರ್ವಹಣಾ ಘಟಕ’, ‘ಮೊದಲ ಸಲ ತಪ್ಪು ಮಾಡಿದವರ ತಾತ್ಕಾಲಿಕ ಆಶ್ರಯ ತಾಣ’, ‘ನಿರ್ಬಂಧ ಹಾಗೂ ಸುಧಾರಣ ಗೃಹಗಳು’ ಅಂತ ಎಲ್ಲಾ ಮಜಾ ಹೆಸರಿನಿಂದ ಕರಿತಾರ. ಆ ಹೆಸರು ನೋಡಿ, ಅವರು ಗಳಿಸೊ ಲಾಭ ನೋಡಿ, ಅಲ್ಲಿಯ ಜನ ಆ ಕಂಪನಿಗಳ ಷೇರು ಖರೀದಿ ಮಾಡತಾರ. ಅದನ್ನ ಸರಕಾರಪ್ರೇರಿತ ಸಾಮಾಜಿಕ ಉದ್ದಿಮೆ ಅಂತ ಪರಿಗಣಿಸಿಬಿಟ್ಟಾರ.

ಷೇರು ಮಾರುಕಟ್ಟೆ ಒಳಗ ಒಂದು ಮಾತು ಅದ. ‘ಯಾವ ಕಂಪನಿ ಬಂದ್ ಆದರೂ ಕೂಡ ಆಹಾರ, ವಸತಿ, ಮದ್ದುಗುಂಡು, ತಂಬಾಕು, ಹೆಂಡ, ಔಷಧಿ ತಯಾರು ಮಾಡುವ ಕಂಪನಿಗಳು ಮಾತ್ರ ಯಾವತ್ತೂ ಬಂದ್ ಆಗೋದಿಲ್ಲ. ಆ ಕಂಪನಿಗಳ ಒಳಗ ದುಡ್ಡು ಹಾಕಿದರ ನಷ್ಟ ಅನ್ನೂದ ಇಲ್ಲ’ ಅಂತ.

ಅದಕ್ಕ ಇನ್ನೊಂದು ಮಾತು ಸೇರಿಕೊಂಡದ. ‘ಅಪರಾಧ ಅನ್ನೋದು ಯಾವತ್ತೂ ಕಮ್ಮಿ ಆಗೋದಿಲ್ಲ. ಹಿಂಗಾಗಿ ಖಾಸಗಿ ಜೈಲು ಯಾವತ್ತೂ ಬಂದ್ ಆಗೋದಿಲ್ಲ. ಅವುಗಳ ಒಳಗ ಹಣ ಹೂಡಿದರ ನಷ್ಟ ಇಲ್ಲ’ ಅಂತ. ನಮ್ಮ ಟ್ರಂಪ್ ಅಣ್ಣಾವ್ರು ಅಧ್ಯಕ್ಷರಾದ ಮ್ಯಾಲೆ ಖಾಸಗಿ ಜೈಲುಗಳ ಷೇರು ಮೌಲ್ಯ ಶೇಕಡಾ 100 ರಷ್ಟು ಹೆಚ್ಚು ಆಗೇದ. ‘ಇದು ಒಂದು ಆಕರ್ಷಕ ಹೂಡಿಕೆಯ ಅವಕಾಶ, ಮರೆಯದಿರಿ, ಮರೆತು ನಿರಾಶರಾಗದಿರಿ’, ಅಂತ ಅವರ ಬೆಂಬಲಿಗರು ಹೇಳಿಕೊಂಡು ಓಡಾಡಲಿಕ್ಕೆ ಹತ್ಯಾರ.

ಭರತ ಭೂಮಿಯ ಎಲ್ಲಾ ಸರಕಾರಿ ಸಂಸ್ಥೆಗಳಿಗೂ ಸಾಮೂಹಿಕ ಕೊನೆಗಾಲ ಬಂದೇತಿ. ಪಂಥ ಪ್ರಧಾನ ಸೇವಕರ ಸರಕಾರ ಛಲೋ ಛಲೋ ಸರ್ಕಾರಿ ಸಂಸ್ಥೆಗಳನ್ನ ಹಿಡಕೊಂಡು ಖಾಸಗಿಗೆ ಮಾರಲಿಕ್ಕೆ ಹೊಂಟೆತಿ. ಅದಾನಿ ಅವರಿಗೆ ಏರಪೋರ್ಟ್ ಅಥಾರಿಟೀ ಅವರ ವಿಮಾನನಿಲ್ದಾಣಗಳನ್ನ, ಅಂಬಾನಿ ಅವರಿಗೆ ಒಎನ್‌ಜಿಸಿ ತೈಲ ಬಾವಿಗಳನ್ನ, ರೈಲ್ವೆ ಇಲಾಖೆಯನ್ನು ಇನ್ಯಾರಿಗೋ ಕೊಡುವ ಹುನ್ನಾರ ಶುರು ಆಗಿಬಿಟ್ಟದ.

ಆದರ ಇದು ಸರಳವಾಗಿ, ಪಾರದರ್ಶಕವಾಗಿ ನಡೆದಿಲ್ಲ. ವಿಮಾನ ನಿಲ್ದಾಣ ನಿರ್ವಹಣೆ ಮಾಡಲಿಕ್ಕೆ ಯಾವ ಅನುಭವ ಬೇಕಾಗಿಲ್ಲ ಅಂತ ಕಾಯಿದೆ ಬದಲಿಸಿ ಅದಾನಿ ಅಣ್ಣಾ ಅವರಿಗೆ ಕೊಟ್ಟಾರ. ತಮಗ ಸಿಕ್ಕ ಗುತ್ತಿಗೆಯನ್ನು ಅವರು ಜರ್ಮನಿ ಕಂಪನಿಗೆ ಕೊಟ್ಟರು. ವಿಮಾನ ತಯಾರಿ ಅನುಭವ ಇಲ್ಲದ ಅನಿಲ್ ಅಣ್ಣಾ ಅವರ ಇನ್ನೂ ಹಲ್ಲು ಮೂಡದ ಕಂಪನಿಗೆ ಯುದ್ಧ ವಿಮಾನ ತಯಾರಿ ಜವಾಬ್ದಾರಿ ಕೊಟ್ಟಾರ. ಅವರು ಇನ್ನೂ ವಿಮಾನದ ಗಾಲಿಸಹಿತ ಮಾಡಿಲ್ಲ.

ಸದಾ ಲಾಭದಲ್ಲಿ ಇರುವ, ಸುಮಾರು ಆರು ಲಕ್ಷ ಕೋಟಿ ಮೌಲ್ಯದ ಭಾರತ ಪೆಟ್ರೋಲಿಯಂ ಕಂಪನೀನ ಬರೆ ಒಂದು ಲಕ್ಷ ಕೋಟಿಗೆ ಮಾರಲಿಕ್ಕೆ ಇಟ್ಟಾರ. ಏರ್ ಇಂಡಿಯಾ ಮಾರಾಟ ಮಾಡಬೇಕು ಅಂತ ಹೇಳಿ ಅದರ ಮೇಲಿನ ಸಾಲ ಇನ್ನೊಂದು ಕಂಪನಿಗೆ ವರ್ಗಾವಣೆ ಮಾಡಿಬಿಟ್ಟಾರ. ಮಧ್ಯ ಪ್ರದೇಶ, ಉತ್ತರ ಪ್ರದೇಶ, ಬಿಹಾರ, ಗುಜರಾತ್, ರಾಜಸ್ತಾನದೊಳಗ ಮದ್ದಾನಿ ಕಂಪನಿಗಳು ಆಹಾರ ಸಂಗ್ರಹ, ಸಂಸ್ಕರಣೆ, ಸಾಗಾಣಿಕೆಯ ಸಗಟು ಹಾಗೂ ಚಿಲ್ಲರೆ ಮಾರಾಟ ಕಂಪನಿಗಳನ್ನ ಶುರು ಮಾಡಿ ವ್ಯವಹಾರ ಮಾಡಲಿಕ್ಕೆ ಹತ್ತಿಬಿಟ್ಟಾವು.

ಇವು ಈಗ ಆಗಿ ಹೋದ ಮಾತುಗಳು. ಇನ್ನೂ ಮುಂದ ಏನು ಏನು ಬರ್ತದ ಅಂತ ನೋಡೋಣ.

ಯೋಜನಾ ಆಯೋಗದ ಸಮಾಧಿ ಮ್ಯಾಲೆ ಕಟ್ಟಿರುವ ಎರಡು ಅಂತಸ್ತಿನ ಕಟ್ಟಡದೊಳಗ ಇರೋ ನೀತಿ ಆಯೋಗದ ಸಲಹಾ ಸಮಿತಿ ಎಲ್ಲಾ ಜಿಲ್ಲಾ ಆಸ್ಪತ್ರೆಗಳನ್ನ ಖಾಸಗೀಕರಣ ಮಾಡಬೇಕು ಅಂತ ಹೇಳಿಬಿಟ್ಟದ. ಇದು ಲಗುನ ಲಾಗು ಆಗಬಹುದು. ತಮ್ಮ ಜೀವನದೊಳಗ ಒಂದು ಸಲಾನೂ ಸರ್ಕಾರಿ ಆಸ್ಪತ್ರೆಗೆ ಹೋಗದೆ ನಿವೃತ್ತಿ ಆದ ಮಧ್ಯಮ ವರ್ಗದವರಿಗೆ ಇದು ಸರಿ ಅಂತ ಅನ್ನಿಸಲೂಬಹುದು.

PC: Indian Education Dairy, (ಎನ್‌ಇಪಿ)

ಭಾರತದ ಇತಿಹಾಸದೊಳಗ ಮೊದಲ ಬಾರಿಗೆ ಶಿಕ್ಷಣ ಆಯೋಗ ನೇಮಿಸದೆ ತಯಾರು ಮಾಡಿದ ಹೊಸ ಶಿಕ್ಷಣ ನೀತಿಯೊಳಗ (ಹೊಶಿನೀ-ಎನ್‌ಇಪಿ) ಒಂದು ಮಾತು ಅದ. ಈಗ ದೇಶದೊಳಗ ಸುಮಾರು 50,000 ಉನ್ನತ ಶಿಕ್ಷಣ ಸಂಸ್ಥೆಗಳು ಅದಾವು. ಇದು ಭಾಳ ಜಾಸ್ತಿ ಆತು. ಇಷ್ಟೇನು ಬ್ಯಾಡ. ಇವು 2025ರೊಳಗೆ 15,000 ಇದ್ದರ ಸಾಕು. ಎಲ್ಲ ಕ್ಷೇತ್ರದಂತೆ ಶಿಕ್ಷಣದೊಳಗ ಸಹಿತ ಖಾಸಗಿ ಸಹಭಾಗಿತ್ವದಾಗ ಸರಕಾರ ಕೆಲಸ ಮಾಡಬೇಕು. ವಿಶ್ವವಿದ್ಯಾಲಯಗಳು ಸಂಲಗ್ನತೆ, ಮೇಲುಸ್ತುವಾರಿ ಎಲ್ಲಾ ಬಿಟ್ಟು, ಬರೆ ಸಂಶೋಧನೆ – ಸೆಮಿನಾರು, ಮಣ್ಣು ಮಸಿ ಅಂತ ವಿಶೇಷ ಕೆಲಸ ಮಾಡಬೇಕು. ಕಾಲೇಜುಗಳಿಗೆ ಸ್ವಾಯತ್ತತೆ ಕೊಡಬೇಕು ಅಂತ ಹೇಳಿದ್ದಾರ.

ಹೊಶಿನೀ ಆಣತಿಯಂತೆ ನಮ್ಮ ಉನ್ನತ ಶಿಕ್ಷಣ ಸಚಿವ ಚಿಕ್ಕಲ್ಯ ನಾರಾಯಣಪ್ಪ ಅಶ್ವಥನಾರಾಯಣ ಅವರು ನಾವು ಪಿಯುಸಿಯಿಂದ ಹಿಡಿದು ಸ್ನಾತಕೋತ್ತರದವರೆಗೆ ಎಲ್ಲರಿಗೂ ಸ್ವಾಯತ್ತತೆ ಕೊಡ್ತೇವಿ ಅಂತ ಹೇಳಿದ್ದಾರ.

ಸ್ವಾಯತ್ತ ಕಾಲೇಜುಗಳು ತಮಗೆ ಇಷ್ಟ ಬಂದ್ ಹಂಗ ಶುಲ್ಕ ವಸೂಲು ಮಾಡಬಹುದು. ತಮಗೆ ತಿಳಿದ ರೀತಿಯಲ್ಲಿ ಪರೀಕ್ಷೆ ನಡೆಸಬಹುದು. ಅವರ ಮೇಲೆ ವಿಶ್ವವಿದ್ಯಾಲಯ ಅಥವಾ ಉನ್ನತ ಶಿಕ್ಷಣ ಮಂಡಳಿ ಉಸ್ತುವಾರಿ ಮಾಡೋ ಹಂಗ ಇಲ್ಲ. ಸರಕಾರ ನೀಡಿದ ಚೌಕಟ್ಟಿನ ಒಳಗ ಅವರು ಇದ್ದರ ಸಾಕು ಅನ್ನೋದು ನಿಯಮ.

ಇದು ಉಳ್ಳವರಿಗೆ ಸರಿಯಾಗಬಹುದು. ಇಲ್ಲದವರಿಗೆ? ಬಿಜೆಪಿ ಅವರು ವಿರೋಧ ಪಕ್ಷದೊಳಗ ಇದ್ದಾಗ ಸರಕಾರ ಖಾಸಗಿ ಶಿಕ್ಷಣ ಸಂಸ್ಥೆಗಳನ್ನ ನಿಯಂತ್ರಿಸಬೇಕು ಅಂತ ಹೇಳ್ತಾ ಇದ್ದರು. ಹಿಂದೊಮ್ಮೆ ಬಿಜೆಪಿ ನಾಯಕರೊಬ್ಬರು ಬೆಂಗಳೂರಿನಾಗ ಡೊನೇಶನ್ ವಿರುದ್ಧ ಚಳವಳಿ ಮಾಡಿದ್ದರು. ಅಲ್ಲೆ “ಜಾಲಪ್ಪ-ಶಿವಶಂಕರಪ್ಪ ರೊಕ್ಕ ಎಲ್ಲಿಂದ ತರ್ಲೇಪ್ಪ” ಅಂತ ಘೋಷಣೆ ಕೂಗಿದ್ದರು. ಅದು ಹಿಟ್ಟು ಅಗಿಬಿಟ್ಟು ಎಲ್ಲಾ ಕಡೆ ಸುತ್ತಾಡಿತ್ತು. ತಾವು ಅಧಿಕಾರಕ್ಕ ಬಂದಾಗ ಅವರು ಘೋಷಣೆ ಬದಲು ಮಾಡಿಬಿಟ್ಟಾರ.

ಸರಕಾರ ಕಮ್ಮಿ ಕೆಲಸ ಮಾಡಬೇಕು. ಖಾಸಗಿ ಸಹಭಾಗಿತ್ವ ಹೆಚ್ಚಬೇಕು. ಇದು ಪಂಥ ಪ್ರಧಾನ ಸೇವಕರ ಕನಸು ಅಂತ ಸಚಿವ ಗಡ್ಕರಿ ಅವರು ಹೇಳಿದ್ದಾರ. ಖಾಸಗೀಕರಣದ ಕನಸು ಕಂಡ ಭಾಳ ಜನ ಪ್ರಧಾನಿ- ರಾಷ್ಟ್ರಪತಿಗಳು ಇತಿಹಾಸದೊಳಗ ಬಂದುಹೋಗಿಬಿಟ್ಟಾರ. ಅವರೊಳಗ ಒಬ್ಬರ ನೆನಪು ಮಾಡಿಕೊಳ್ಳೋಣ.

PC : Biography, (ಮಾರ್ಗರೆಟ್ ಹಿಳದಾ ಥ್ಯಾಚರ)

ಮಾರ್ಗರೆಟ್ ಹಿಳದಾ ಥ್ಯಾಚರ ಅವರು ಎಪ್ಪತ್ತು-ಎಂಬತ್ತರ ದಶಕದೊಳಗ ಬ್ರಿಟನ್ನು ಹಾಗೂ ಉತ್ತರ ಐರ್ಲೆಂಡ್‌ನ ಪ್ರಧಾನಿ ಆಗಿದ್ದರು. ಅವರು ನೀರು, ವಿದ್ಯುತ್, ರೈಲು, ಆಹಾರ ಪೂರೈಕೆ, ಕಬ್ಬಿಣ ಮತ್ತು ಅದಿರು, ಅರಣ್ಯ ನಿರ್ವಹಣೆ, ನದಿ ನೀರು ನಿರ್ವಹಣೆ, ರಸ್ತೆ-ಕಟ್ಟಡ-ಅಣೆಕಟ್ಟು ನಿರ್ಮಾಣ ಎಲ್ಲವನ್ನೂ ಖಾಸಗೀಕರಣ ಮಾಡಿದರು. ಇಡೀ ವಿಶ್ವದಲ್ಲಿಯೇ ಮೊದಲ ಖಾಸಗಿ ಜೈಲು ಉದ್ಘಾಟನೆ ಮಾಡಿದ ನಾಯಕರು ಅವರು. ಉಕ್ಕಿನ ಮಹಿಳೆ ಅನ್ನುವ ಬಿರುದು ಪಡೆದ ಅವರು ಯುವ ವಯಸ್ಸಿನಲ್ಲಿ ರಸಾಯನ ಶಾಸ್ತ್ರ ವಿಜ್ಞಾನಿಯಾಗಿ ಕೆಲಸ ಮಾಡಲಿಕ್ಕೆ ಇಂಪೆರಿಯಲ್ ಕೆಮಿಕಲ್ ಅನ್ನೋ ಕಂಪನಿಗೆ ಆರ್ಜಿ ಹಾಕಿದರು. ಅವರು ಇವರನ್ನು ಸಂದರ್ಶಿಸಿದರು ಆದರೆ ಕೆಲಸ ಕೊಡಲಿಲ್ಲ. ಆ ಸಂದರ್ಶನದ ವಿವರ ಬಹಿರಂಗ ಆದ ಮ್ಯಾಲೆ ಗೊತ್ತಾಯತು. ಅಲ್ಲಿನ ಸಂದರ್ಶಕ ಮಂಡಳಿಯೊಳಗ ಇದ್ದ ಮನೋವಿಜ್ಞಾನಿಯೊಬ್ಬರು, ಈ ಯುವತಿ ‘ತುಂಬ ಹಠಮಾರಿ, ದುರಾಗ್ರಹಿ ಹಾಗೂ ತಾನೇ ಸರ್ವಸ್ವ ಎನ್ನುವ ಸ್ವಭಾವದವಳು. ಇವರು ಒಂದು ತಂಡದ ಸದಸ್ಯರಾಗಿ ಕೆಲಸ ಮಾಡುವುದು ಕಷ್ಟ’ ಅಂತ ವರದಿ ನೀಡಿದ್ದರು.

ಥ್ಯಾಚರ ಬಗ್ಗೆ ಇನ್ನೊಂದು ಜೋಕು ಇದೆ. ಅದು ‘ದಿ ವೆಜಿಟೆಬಲಸ್’ ಅನ್ನುವ ಸಿಟ್ ಕಾಂ ಟಿವಿ ಕಾರ್ಯಕ್ರಮದೊಳಗ ಬಂದಿತ್ತು. ಪ್ರಧಾನಿ ಥ್ಯಾಚರ ಅವರು ತಮ್ಮ ಸಂಪುಟ ಸದಸ್ಯರನ್ನ ಹೊಟೇಲ್‌ಗೆ ಊಟಕ್ಕ ಕರಕೊಂಡು ಹೋಗತಾರ. ಅಲ್ಲೆ ವೇಟರ್ ಬಂದು ನೀವು ಏನು ತೊಗೊಳ್ಳುತ್ತೀರಿ ಅಂತ ಕೇಳಿದಾಗ ಫಿಶ್ ಹಾಗೂ ಚಿಪ್ಸ್ ಅಂತ ಹೇಳತಾರ. ಆ ವೇಟರ್ (‘ಅಂಡ್ ದಿ ವೆಜಿಟೆಬಲಸ್’) ಮತ್ತೆ ತರಕಾರಿಗಳು ಅಂತ ಕೇಳತಾನ. ಅಂದ್ರ ನೀವು ಎನರ ತರಕಾರಿ-ಸೂಪು- ಸಾಸು ತೊಗೋತೀರಾ ಅಂತ. ಆಗ ಥ್ಯಾಚರ ಅವರು ಅವರಿಗೂ ಅದನ್ನೇ ಕೊಡರಿ. ಅವರ ಕಡೆ ಇಂಥ ಸಣ್ಣ ನಿರ್ಧಾರ ತೊಗೊಳ್ಳಲಿಕ್ಕೆ ಸಹಿತ ಆಗೋದಿಲ್ಲ ಅಂತ ಆರ್ಡರ್ ಮಾಡತಾರ.

ಇದರಾಗ ಜೋಕು ಎನಪ ಅಂದ್ರ ಯೂರೋಪಿನಾಗ ಸ್ವಂತ ವಿಚಾರ ಶಕ್ತಿ ಇಲ್ಲದ – ಬೇರೆಯವರ ಕೈಗೊಂಬೆ ಅಗಿರೋ ಮನುಷ್ಯರಿಗೆ ವೆಜಿಟೆಬಲಸ್ ಅಂತ ಕರಿತಾರ.

ಯೂರೋಪಿನವರಗಿಂತ ಹೆಚ್ಚು ತರಕಾರಿ ತಿನ್ನೋ ನಮಗೆ ಈ ಜೋಕು ಸರಳವಾಗಿ ಅರ್ಥ ಆಗಬಹುದೇ ಮನೋಲ್ಲಾಸಿನಿ?


ಇದನ್ನೂ ಓದಿ: ಉಪಸಭಾಪತಿ ಧರ್ಮೇಗೌಡರನ್ನು ಕೊಂದವರಾರು?!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...