Homeಕರ್ನಾಟಕದೇವೇಗೌಡರೂ ಬೆದರಿದರಾ ಮೋದಿ-ಶಾ ಜೋಡಿಯ ‘ಅರೆಸ್ಟ್’ ರಾಜಕಾರಣಕ್ಕೆ?

ದೇವೇಗೌಡರೂ ಬೆದರಿದರಾ ಮೋದಿ-ಶಾ ಜೋಡಿಯ ‘ಅರೆಸ್ಟ್’ ರಾಜಕಾರಣಕ್ಕೆ?

- Advertisement -
- Advertisement -

ಮನಿ ಲಾಂಡರಿಂಗ್ ಕೇಸಿನಲ್ಲಿ ಕೇಂದ್ರ ಸರ್ಕಾರದ ಇಡಿ ಬಂಧಿಸಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ರ ಮನೆಗೆ ಮಾಜಿ ಸಿಎಂ ಕುಮಾರಸ್ವಾಮಿ ಹೋಗಿಬಂದಿದ್ದಾರೆ. ಡೀಕೆ ತಾಯಿ ಹೆಚ್ಡಿಕೆ ಮುಂದೆ ಗೋಳಾಡಿದ ವೀಡಿಯೋ ವೈರಲ್ ಆಗಿದೆ. ಸಾಮಾನ್ಯವಾಗಿ ಯಾರಾದರು ನಮ್ಮನ್ನಗಲಿದರೆ ಅಂತವರ ಮನೆಗೆ ಹೋಗಿ ಸಂಬಂಧಿಕರಿಗೆ ಸಾಂತ್ವನ ಹೇಳಿಬರೋದು ವಾಡಿಕೆ. ಆದರೆ ಪ್ರಕರಣವೊಂದರಲ್ಲಿ (ಅದು ಸರಿಯೋ, ತಪ್ಪೋ) ಆರೋಪಿಯಾಗಿ ಅರೆಸ್ಟಾದ ವ್ಯಕ್ತಿಯ, ಅದೂ ತನ್ನ ಎದುರಾಳಿ ರಾಜಕೀಯ ಮುಖಂಡನ ಮನೆಗೆ ಮಾಜಿ ಸಿಎಂ ಒಬ್ಬರು ಹೋಗಿಬಂದದ್ದು ಮೇಲ್ನೋಟಕ್ಕೆ ಕಾಣುವಷ್ಟು ‘ಸಾಂತ್ವನ’ದ ಪ್ರಸಂಗವಲ್ಲ. ಅದರ ಹಿಂದೆ ಸೋ ಕಾಲ್ಡ್ ಫೀನಿಕ್ಸ್ ರಾಜಕಾರಣಿ ದೇವೇಗೌಡರ ಸ್ಪಷ್ಟ ಲೆಕ್ಕಾಚಾರಗಳಿವೆ.

ಹೌದು, ದೇವೇಗೌಡರ ನೇರ ನಿರ್ದೇಶನಗಳಿಲ್ಲದೆ ಕುಮಾರಸ್ವಾಮಿ ಕನಕಪುರದ ಕೋಡಿಹಳ್ಳಿ ಮನೆಗೆ ಕಾಲಿಡಲು ಸಾಧ್ಯವೇ ಇಲ್ಲ. ಬಿಜೆಪಿಯ ಅಧಿಕಾರ ದುರ್ಬಳಕೆಯನ್ನು ವಿರೋಧಿಸಬೇಕೆನ್ನುವ ದಿಟ್ಟ ನಿರ್ಧಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷ ತನ್ನ ಪಾರ್ಟಿಯ ಡಿ.ಕೆ.ಶಿವಕುಮಾರ್ ಪರವಾಗಿ ಗಟ್ಟಿ ದನಿ ಎತ್ತುತ್ತಿದೆಯಾದರು ಆ ಪಕ್ಷದ ಯಾರೂ ಶಿವಕುಮಾರ್ ಮನೆಗೆ ಹೋಗಿ ಸಾಂತ್ವನ ಹೇಳಿಲ್ಲ. ಅಂತದ್ದರಲ್ಲಿ ಕುಮಾರಸ್ವಾಮಿ ಹೋಗಿ ಬಂದದ್ದನ್ನು ಅಷ್ಟು ಸಲೀಸಾಗಿ ನೋಡಲಾಗದು.

ಕೇಂದ್ರದ ಬಿಜೆಪಿ ಸರ್ಕಾರ, ನಿರ್ದಿಷ್ಟವಾಗಿ ಮೋದಿ-ಶಾ ಜೋಡಿ, ವಿರೋಧ ಪಕ್ಷಗಳನ್ನು ಮಟ್ಟಹಾಕಲು ಅಸ್ತ್ರವೊಂದನ್ನು ಅಣಿಗೊಳಿಸಿಕೊಂಡು ಕೂತಿದೆ. ಎದುರಾಳಿ ನಾಯಕರ ಮೇಲಿರುವ ಕೇಸುಗಳಿಗೆಲ್ಲ ಜೀವತುಂಬಿ ಬೆದರಿಸಿ, ಜೈಲುಭೀತಿ ಹುಟ್ಟಿಸಿ ಅವರನ್ನು ಒಂದೋ ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳೋದು ಇಲ್ಲವೇ ಜೈಲಿಗೆ ತಳ್ಳಿ ಎದುರಾಳಿಗಳ ಬಲ ಕುಗ್ಗಿಸುವುದು ಈಗ ನಡೆಯುತ್ತಿರುವ ರಾಜಕೀಯ ಸರ್ಕಸ್ಸು. ಬೇರೆಬೇರೆ ಪಕ್ಷಗಳ ರಾಜಕಾರಣಿಗಳು ದಂಡಿಯಾಗಿ ಬಿಜೆಪಿಯತ್ತ ಗುಳೆ ಹೊರಟಿರೋದು ಈ ಅನುಮಾನವನ್ನು ದಟ್ಟವಾಗಿಸಿದರೆ, ಮಾಜಿ ಕೇಂದ್ರ ಮಂತ್ರಿ ಪಿ.ಚಿದಂಬರಂಗೆ ಆದ ಗತಿ ಇದನ್ನು ಒತ್ತಿ ಹೇಳುತ್ತೆ. ಕರ್ನಾಟಕದಲ್ಲೇ ತೆಗೆದುಕೊಂಡರೆ ಅಧಿಕಾರದಲ್ಲಿದ್ದ ಮೈತ್ರಿ ಸರ್ಕಾರವನ್ನು ಅನಾಮತ್ತು ಅಡ್ಡಡ್ಡ ಮಲಗಿಸಿ ಮಹಾರಾಷ್ಟ್ರದ ರೆಸಾರ್ಟು ಸೇರಿಕೊಂಡ ಅತೃಪ್ತ ಕಂ ಅನರ್ಹ ಶಾಸಕರನ್ನು ಸೆಳೆದಿದ್ದೂ ಇದೇ ತಂತ್ರದಿಂದ ಎನ್ನುವುದು ದಿನೇದಿನೇ ದಟ್ಟವಾಗುತ್ತಿರುವ ಸಂಗತಿ.

ಈ ಭಯವೇ ದೇವೇಗೌಡರಿಗೆ ಕಾಡಲು ಶುರುವಾಗಿದೆಯಾ? ಇಂಥಾ ಡರ್ಟಿ ರಾಜಕಾರಣಕ್ಕೆ ಕೌಂಟರ್ ಕೊಡಲೆಂದೇ ಅವರು ತಮ್ಮ ವೆರಿ ಓಲ್ಡ್ ‘ಒಕ್ಕಲಿಗ’ಜಾತಿ ಅಸ್ತ್ರವನ್ನು ಮೊನಚು ಮಾಡಿಕೊಳ್ಳುತ್ತಿದ್ದಾರಾ? ಎಂಬೆಲ್ಲ ಅನುಮಾನಗಳು ಎಚ್ಡಿಕೆ ಹೋಗಿ ಡೀಕೆ ತಾಯಿಯನ್ನು ಭೇಟಿ ಮಾಡಿ ಬಂದದ್ದರ ಸುತ್ತ ತಲೆ ಎತ್ತುತ್ತಿವೆ. ಅಜಮಾಸು ಅರ್ಧ ಶತಮಾನಗಳ ಕಾಲ ರಾಜ್ಯ ಮತ್ತು ದೇಶ ರಾಜಕಾರಣದಲ್ಲಿ ಸರಿದಾಡಿದ ಗೌಡರ ಕುಟುಂಬದ ಬೆನ್ನಿಗೆ ದೊಡ್ಡ ಸಂಖ್ಯೆಗಳಲ್ಲಿ ಹಗರಣಗಳು ಮೆತ್ತಿಕೊಂಡಿಲ್ಲ ಎನ್ನುವುದು ನಿಜವೇ ಆದರು ಕ್ಲೀನ್‌ಚಿಟ್ ಪಡೆದು ಬೀಗುವಷ್ಟು ಪಾರದರ್ಶಕವಾಗೇನೂ ಅವರ ವ್ಯವಹಾರಗಳಿಲ್ಲ. ಅದರಲ್ಲೂ ತೀರಾ ಇತ್ತೀಚೆಗಿನ ಹಲಗೆವಡೇರಹಳ್ಳಿ ಡಿನೋಟಿಫಿಕೇಷನ್ ಪ್ರಕರಣ, ಫೋನ್ ಕದ್ದಾಲಿಕೆ ಹಗರಣ, ಮುಖ್ಯವಾಗಿ ಐಎಂಎ ವಂಚನೆ ಕೇಸುಗಳು ಕುಮಾರಸ್ವಾಮಿಯ ಮಗ್ಗುಲ ಮುಳ್ಳಾಗುವ ಎಲ್ಲಾ ಸಾಧ್ಯತೆಗಳಿವೆ. ಈಗಾಗಲೇ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಕುಮಾರಸ್ವಾಮಿಗೆ ಸಮನ್ಸ್ ಕೂಡಾ ಜಾರಿಯಾಗಿದೆ. ಜೊತೆಗೆ ಅವರ ಕುಟುಂಬದಿಂದ ಸ್ಪರ್ಧಿಸಿದ್ದ ಮೂವರು ಹುರಿಯಾಳುಗಳಲ್ಲಿ ಗೆದ್ದ ಏಕೈಕ ಸಂಸದ ಪ್ರಜ್ವಲ್ ರೇವಣ್ಣರ ಆಯ್ಕೆ ಅನೂರ್ಜಿತಗೊಳಿಸಬೇಕೆಂದು ಬಿಜೆಪಿಯ ಎ.ಮಂಜು ಕೊಟ್ಟ ಕೇಸ್ ಕೂಡಾ ಹೈಕೋರ್ಟ್‌ನಲ್ಲಿ ಲಗುಬಗೆಯಿಂದ ವಿಚಾರಣೆಗೆ ಒಳಪಟ್ಟಿದೆ. ಇಷ್ಟು ಸಾಕಲ್ಲವೇ ಮೋ-ಶಾ ಜೋಡಿಗೆ ದೇವೇಗೌಡರ ಕುಟುಂಬವನ್ನು ಮಟ್ಟಹಾಕಲು.

ವೀರಶೈವ ಓಟ್‌ಬ್ಯಾಂಕ್ ಮೂಲಕ ಉತ್ತರ ಕರ್ನಾಟಕದಲ್ಲಿ ಭರ್ಜರಿ ಬೇರೂರಿರುವ ಬಿಜೆಪಿಯನ್ನು ಕರ್ನಾಟಕದಲ್ಲಿ ಗಟ್ಟಿ ನೆಲೆಗೊಳಿಸಬೇಕೆಂದರೆ ಒಕ್ಕಲಿಗ ಪ್ರಾಬಲ್ಯದ ಹಳೇ ಮೈಸೂರು ಪ್ರಾಂತ್ಯದಲ್ಲೂ ಅಷ್ಟೇ ಆಳವಾಗಿ ಬೇರೂರಿಸಬೇಕು ಎಂಬ ಆಲೋಚನೆ ಬಿಜೆಪಿ ಹೈಕಮಾಂಡ್ ನದ್ದು. ಅದಕ್ಕೋಸ್ಕರ ಒಕ್ಕಲಿಗ ಲೀಡರುಗಳನ್ನೇ ಟಾರ್ಗೆಟ್ ಮಾಡಿಕೊಂಡಿರುವ ತಂತ್ರಗಾರಿಕೆ ದೇವೇಗೌಡರ ಕಿವಿಗೂ ತಲುಪಿದೆ. ಈಗಾಗಲೇ ಡೀಕೆ ಮೇಲೆ ಮುರಕೊಂಡು ಬಿದ್ದಿರುವ ಮೋದಿ-ಶಾ ಜೋಡಿಯ ಮುಂದಿನ ಟಾರ್ಗೆಟ್ ತಮ್ಮ ಕುಟುಂಬ ಎನ್ನುವುದೂ ಅವರಿಗೆ ಚೆನ್ನಾಗಿ ಮನದಟ್ಟಾಗಿದೆ. ಅದರಲ್ಲೂ ಕುಮಾರಸ್ವಾಮಿ ಸಿಎಂ ಆಗಿದ್ದಾಗಲೇ ಕರ್ನಾಟಕ ಪೊಲೀಸರು ದುಬೈಗೆ ಹೋಗಿ ಅರೆಸ್ಟು ಮಾಡಿ ಕರೆತರುತ್ತಿದ್ದ ಐಎಂಎ ಆರೋಪಿ ಮನ್ಸೂರ್ ಖಾನ್‌ನನ್ನು ಕೇಂದ್ರದ ಇಡಿ ಅಧಿಕಾರಿಗಳು ದೆಹಲಿಯಲ್ಲೇ ಅಡ್ಡಗಟ್ಟಿ ತಮ್ಮ ವಶಕ್ಕೆ ಪಡೆದಿದ್ದಂತೂ (ವಿಶ್ವಾಸಮತ ಹೈಡ್ರಾಮಾ ಅವಧಿಯಲ್ಲಿ ಸ್ವತಃ ಕುಮಾರಸ್ವಾಮಿ ಸದನದಲ್ಲೇ ಈ ಬಗ್ಗೆ ಹೇಳಿಕೊಂಡಿದ್ದರು) ಗೌಡರ ಕುಟುಂಬಕ್ಕೆ ದೊಡ್ಡ ಕಗ್ಗಂಟಾಗುವ ಸಾಧ್ಯತೆಯಿದೆ. ನೆನಪಿರಲಿ, ತನ್ನ ಮಗಳು ಶೀನಾ ಬೋರಾ ಮರ್ಡರ್ ಕೇಸಿನಲ್ಲಿ ಜೈಲುಹಕ್ಕಿಯಾಗಿರುವ ಇಂದ್ರಾಣಿ ಮುಖರ್ಜಿಯಿಂದ ಪಡೆದುಕೊಂಡ ಹೇಳಿಕೆಯನ್ನು ನೆಪವಾಗಿಟ್ಟುಕೊಂಡೇ ಪಿ.ಚಿದಂಬರಂ ಅವರನ್ನು ಅರೆಸ್ಟ್ ಮಾಡಿರೋದು. ಈಗ ಮನ್ಸೂರ್ ಖಾನನಿಂದಲೂ ಅಂತದ್ದೇ ಹೇಳಿಕೆ ಬರೆಸಿಕೊಳ್ಳೋದೇನು ಕಷ್ಟವಿಲ್ಲ. ಇನ್ನು ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಟ್ಟಿರೋದು ಕೂಡಾ ಗೌಡರ ಆತಂಕವನ್ನು ದುಪ್ಪಟ್ಟುಗೊಳಿಸಿರಲಿಕ್ಕೂ ಸಾಕು.

ಹಾಗಂತ, ಬಿಜೆಪಿಯ ಈ ಅರೆಸ್ಟ್ ರಾಜಕಾರಣಕ್ಕೆ ದೇವೇಗೌಡರ ಮೊದಲ ಅಸ್ತ್ರ ಜಾತಿ ರಾಜಕಾರಣವಾಗಿರಲಿಲ್ಲ. ಮೈತ್ರಿ ಸರ್ಕಾರವನ್ನು ಬಿಜೆಪಿ ಬೀಳಿಸಿದ ನಂತರ ಪತ್ರಿಕಾಗೋಷ್ಠಿ ನಡೆಸಿದ ದೇವೇಗೌಡರು ತಮ್ಮ ವಾಕ್ಚಾತುರ್ಯವನ್ನು ಖರ್ಚು ಮಾಡಿದ್ದು ಸಿದ್ದರಾಮಯ್ಯನನ್ನು ತೆಗೆಳುವುದಕ್ಕೇ ವಿನಾಃ ಬಿಜೆಪಿಯನ್ನು ತರಾಟೆಗೆ ತೆಗೆದುಕೊಳ್ಳುವುದಕ್ಕಲ್ಲ. ಒಂದು ಹಂತದಲ್ಲಿ, ಒಂದಷ್ಟು ಜೆಡಿಎಸ್ ಶಾಸಕರು ದೇವೇಗೌಡರ ಮನೆಯಲ್ಲಿ ಕೂತು ಬಿಜೆಪಿ ಸರ್ಕಾರಕ್ಕೆ ಬೆಂಬಲ ಕೊಡಬೇಕೆನ್ನುವ ಮಾತುಗಳೂ ಕೇಳಿಬಂದವು. ಆ ರೀತಿಯಲ್ಲಿ ಬಿಜೆಪಿಯೊಂದಿಗೆ ಸನಿಹಗೊಳ್ಳಲು ಗೌಡರು ಯತ್ನಿಸಿದ್ದುಂಟು. ಆದರೆ ಗೌಡರ ವರಾತಗಳ ಬಗ್ಗೆ ಚೆನ್ನಾಗಿ ಅರಿವಿರುವ ಬಿಜೆಪಿ ಅದಕ್ಕೆ ಸೊಪ್ಪು ಹಾಕಲಿಲ್ಲ.

ಯಾವಾಗ ಡೀಕೆ ಬುಡಕ್ಕೇ ‘ಇಡಿ’ ನೆಪದಲ್ಲಿ ಮೋ-ಶಾ ಜೋಡಿ ಲಗ್ಗೆ ಇಟ್ಟಿತೊ ಆಗ ಗೌಡರಿಗೆ ಅನಿವಾರ್ಯವಾಗಿ ಉಳಿದದ್ದು ತಮ್ಮ ಹಳೇ ಅಸ್ತ್ರ. ಅದು ಜಾತಿ ರಾಜಕಾರಣ. ಡೀಕೆ ಬಂಧನ ವಿರೋಧಿಸಿ ಒಕ್ಕಲಿಗರ ಪ್ರಾಬಲ್ಯವಿರುವ ಸ್ಥಳಗಳಲ್ಲಿ (ಅಲ್ಲಿ ಸ್ವತಃ ಕಾಂಗ್ರೆಸ್ ಪಕ್ಷ ಬಲಾಢ್ಯವಾಗಿಲ್ಲವಾದರು) ದೊಡ್ಡದೊಡ್ಡ ಪ್ರತಿಭಟನೆಗಳು ನಡೆದಿವೆ, ವಿಶ್ವ ಒಕ್ಕಲಿಗರ ಸಂಘ ಕೇಂದ್ರದ ದ್ವೇಷ ರಾಜಕಾರಣದ ವಿರುದ್ಧ ಹೇಳಿಕೆ ಕೊಟ್ಟಿದೆ. ಇವೆಲ್ಲವುಗಳ ಹಿಂದೆ ದೇವೇಗೌಡರ ಮುತುವರ್ಜಿ ಇದೆ ಎನ್ನುವುದು ಲೇಟೆಸ್ಟ್ ವರ್ತಮಾನ. ಆ ಮೂಲಕ ಒಕ್ಕಲಿಗ ನಾಯಕರ ಮೇಲೆ (ತಮ್ಮ ಕುಟುಂಬದ ಮೇಲೆ) ಅಟ್ಯಾಕ್ ಮಾಡಿದರೆ ಇಡೀ ಒಕ್ಕಲಿಗ ಸಮುದಾಯವೇ ಬಿಜೆಪಿ ವಿರುದ್ಧ ತಿರುಗಿಬೀಳಲಿದೆ ಎಂಬ ಸಂದೇಶವನ್ನು ಡೀಕೆ ಪ್ರಕರಣದ ಮೂಲಕ ಬಿಜೆಪಿ ಹೈಕಮ್ಯಾಂಡ್‌ಗೆ ರವಾನಿಸಲು ಗೌಡರು ಯತ್ನಿಸುತ್ತಿದ್ದಾರೆ.

ಅದರ ಭಾಗವಾಗಿಯೇ ಕುಮಾರಸ್ವಾಮಿ, ಡಿಕೆಶಿಯವರ ಮನೆಗೆ ಹೋಗಿ ಅವರ ತಾಯಿ ಜೊತೆ ಮಾತನಾಡುವ ಭಾವನಾತ್ಮಕ ಎಪಿಸೋಡು ಕ್ರಿಯೇಟ್ ಆಗಿರೋದು. ಅಲ್ಲಿ ನಿಂತು ಆಡಿದ ಕುಮಾರಸ್ವಾಮಿಯವರ ಮಾತಿನಲ್ಲೂ ಜಾತಿಯನ್ನು ಎಳೆದು ತರುವ ಪ್ರಯತ್ನ ಜೋರಾಗಿಯೇ ನಡೆಯಿತು. ‘ನಾನು ೧೪ ತಿಂಗಳ ಕಾಲ ಮುಖ್ಯಮಂತ್ರಿ ಆಗಿದ್ದೆ. ಮನಸ್ಸು ಮಾಡಿದ್ದರೆ ಯಡಿಯೂರಪ್ಪ ಅವರ ಆಡಿಯೊ ಪ್ರಕರಣವನ್ನು ಇಟ್ಟುಕೊಂಡು ಕ್ರಮ ಕೈಗೊಳ್ಳಬಹುದಿತ್ತು. ಹಾಗೆ ಮಾಡಿದ್ದರೆ ವೀರಶೈವ ಸಮಾಜದ ಮುಖಂಡರ ಮೇಲೆ ಕುಮಾರಸ್ವಾಮಿ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ದೂರುತ್ತಿದ್ದರು. ಈಗಾಗಲೇ ಒಕ್ಕಲಿಗ ಸಮುದಾಯಕ್ಕೆ ಸೇರಿದ ಎಸ್.ಎಂ. ಕೃಷ್ಣ ಅವರ ಅಳಿಯ ಸಿದ್ದಾರ್ಥ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐ.ಟಿ. ಅಧಿಕಾರಿಗಳು ಅವರನ್ನು ಬಲಿ ತೆಗೆದುಕೊಂಡಿದ್ದಾರೆ. ಮತ್ತೊಂದೆಡೆ ಶಿವಕುಮಾರ್‌ಗೆ ತೊಂದರೆ ಕೊಡುತ್ತಿದ್ದಾರೆ’ ಎನ್ನುವ ಕುಮಾರಸ್ವಾಮಿಯವರ ಮಾತಿನಲ್ಲಿ ಜಾತಿ ರಾಜಕಾರಣ ಎದ್ದು ಕಾಣುತ್ತದೆ. ಸಿದ್ಧಾರ್ಥ್ ಆತ್ಮಹತ್ಯೆ ಮತ್ತು ಡೀಕೆ ಬಂಧನ ಪ್ರಕರಣಗಳನ್ನು ಮುಂದೆ ಮಾಡಿ ಬಿಜೆಪಿಯ ಅಡ್ಡಹಾದಿಗೇ ಚೆಕ್‌ಪೋಸ್ಟ್ ಕಟ್ಟುವ ಪ್ರಯತ್ನ ಇದು. ಈ ಪ್ರಯತ್ನದಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೊ ಕಾದುನೋಡಬೇಕು. ಒಟ್ಟಿನಲ್ಲಿ ಕುತಂತ್ರಗಳೇ ವಿಜೃಂಭಿಸುತ್ತಿರುವ ಕಾಲಘಟ್ಟದಲ್ಲಿ ನಾವಿರೋದು ದುರಂತ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಇಂದ್ರಾಣಿ ಮುಖರ್ಜಿಯ ಹೇಳಿಕೆಯ ಆಧಾರದ ಮೇಲೆ ಚಿದಂಬರಂರನ್ನು ಬಂಧಿಸಿರುವ ರೀತಿಯಲ್ಲಿಯೇ; ಡಿಕೆಶಿ ಬಾಯಲ್ಲಿ ಸೋನಿಯಾಗಾಂಧಿ ಮತ್ತು ರಾಹುಲ್‌ ಗಾಂಧಿಯವರ ಹೆಸರು ಹೇಳಿಸಿ, ಇವರಿಬ್ಬರ ವಿರುದ್ಧವೂ ಎಫ್. ಐ.ಆರ್ ಮತ್ತು ಆರೋಪ ಪಟ್ಟಿ ಸಲ್ಲಿಸುವ ಎಲ್ಲಾ ಸಾಧ್ಯತೆಗಳು ಇವೆ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...