Homeಕರ್ನಾಟಕಇನ್ನೊಬ್ಬ ಹರ್ಷಮಂದರ್ ಆಗುವರೇ ಸಸಿಕಾಂತ್ ಸೆಂಥಿಲ್...?

ಇನ್ನೊಬ್ಬ ಹರ್ಷಮಂದರ್ ಆಗುವರೇ ಸಸಿಕಾಂತ್ ಸೆಂಥಿಲ್…?

- Advertisement -
- Advertisement -

ಬಹಳ ಹಿಂದಿನ ಕತೆಗಳೇನೂ ನನಗೆ ಗೊತ್ತಿಲ್ಲ. ಕಳೆದ ಹದಿನೈದು ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬಂದ ಹೆಚ್ಚು ಕಡಿಮೆ ಎಲ್ಲಾ ಜಿಲ್ಲಾಧಿಕಾರಿಗಳ ಕುರಿತು ಅಲ್ಪ ಸ್ವಲ್ಪ ಬಲ್ಲೆ. ಅದರಲ್ಲೂ ಕಳೆದ ಹತ್ತು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ ಜಿಲ್ಲಾಧಿಕಾರಿಗಳನ್ನು ಓರ್ವ ಪ್ರಗತಿಪರ ಚಳವಳಿಯ ಕಾರ್ಯಕರ್ತನೆಂಬ ನೆಲೆಯಲ್ಲಿ ಕಂಡು ಮಾತನಾಡಿ ಬಲ್ಲೆ. ನನ್ನ ದೃಷ್ಟಿಯಲ್ಲಿ ನಮ್ಮ ಜಿಲ್ಲೆಯಲ್ಲಿ ಕಳೆದೆರಡು ಅವಧಿಗಳಲ್ಲಿ ಕೆಲಸ ಮಾಡಿದ ಇಬ್ರಾಹಿಂ ಮತ್ತು ಸಸಿಕಾಂತ್ ಸೆಂಥಿಲ್ ಅತ್ಯುತ್ತಮ ಜಿಲ್ಲಾಧಿಕಾರಿಗಳು.

ಇಬ್ರಾಹಿಂ ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯವರು. ಕಾಸರಗೋಡಿಗರಿಗೆ ಮಂಗಳೂರು ಎಂದರೆ ಪಕ್ಕದ ಮನೆಯಿದ್ದಂತೆ. ಆದುದರಿಂದ ಸಹಜವಾಗಿಯೇ ಈ ಜಿಲ್ಲೆಯ ಸಮಸ್ಯೆಗಳು, ಜನರ ನಾಡಿಮಿಡಿತ ಗೊತ್ತಿರುತ್ತದೆ.‌ಆ ನೆಲೆಯಲ್ಲಿ ಮತ್ತು ಓರ್ವ ಅತ್ಯಂತ ಜನಪರ ಧೋರಣೆಯವರಾದ ಅವರು ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಓರ್ವ ಮುಸ್ಲಿಮನಾಗಿದ್ದರೂ ಬಿಜೆಪಿ ಸಂಘಪರಿವಾರಕ್ಕೂ ಕೆಟ್ಟವನೆಂದು ಟೀಕಿಸುವ ಅವಕಾಶ ಕೊಡದೇ ಅತ್ಯಂತ ದಕ್ಷವಾಗಿ ಕೆಲಸ ಮಾಡಿ ಸೈ ಎನಿಸಿಕೊಂಡವರು ಇಬ್ರಾಹಿಂ ಸಾಹೇಬರು. ಅವರ ಮೇಲೆ ಗೂಬೆ ಕೂರಿಸಲು ತೀರಾ ಅಸಾಧ್ಯವೆನಿಸಿದಾಗ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಸಮಾರಂಭಕ್ಕೆ ಬ್ಯಾರಿ ಇಬ್ರಾಹಿಂ ಏಕೆ ಎಂದು ರಂಪ ಮಾಡಿದರು. ಆ ಬಳಿಕ ಬಂದ ಸಸಿಕಾಂತ್ ಸೆಂಥಿಲ್ ಇಂಜಿನಿಯರಿಂಗ್ ಪದವೀಧರರು. ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಲಕ್ಷದ ಲೆಕ್ಕದಲ್ಲಿ ಸಂಬಳ ಪಡೆಯುತ್ತಿದ್ದ ಸೆಂಥಿಲ್ ಜನಸೇವೆಯಲ್ಲಿ ಅತ್ಯಂತ ಆಸಕ್ತರಾಗಿದ್ದ ಕಾರಣ ಯುಪಿಎಸ್ಸಿ ಪರೀಕ್ಷೆ ಬರೆದರು. ಯುಪಿಎಸ್ಸಿ ಪರೀಕ್ಷೆಯಲ್ಲಿ ತಮಿಳುನಾಡಿಗೆ ಟಾಪರ್ ಮತ್ತು ದೇಶಕ್ಕೆ ಒಂಬತ್ತನೇ ಸ್ಥಾನ ಪಡೆದರು.

ಸಸಿಕಾಂತ್ ಸೆಂಥಿಲ್ ದಕ್ಷಿಣ ಕನ್ನಡ  ಜಿಲ್ಲೆಗೆ ಬರುವಾಗ ಅವರ ಮುಂದಿದ್ದ ಅತೀ ದೊಡ್ಡ ಸವಾಲು ” ಕೋಮು ಸೂಕ್ಷ್ಮ ‌ಜಿಲ್ಲೆ” ಯೆಂಬ ಕುಖ್ಯಾತಿ‌ ಪಡೆದ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಶಾಂತಿ ಭಂಗವಾಗದಂತೆ, ಕೋಮು ಗಲಭೆಗಳಾಗದಂತೆ ಕಾಪಾಡುವುದು. ಈ ನಿಟ್ಟಿನಲ್ಲಿ ಜಿಲ್ಲೆಗೆ ಬಂದ ಕೂಡಲೇ ಅವರು‌ ವಿವಿಧ ಸಂಘಟನೆಗಳ ಮುಖಂಡರನ್ನು ಕರೆಸಿ ಮಾತನಾಡಿದ್ದರು. ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ನಾವು ಅವರನ್ನು ಭೇಟಿಯಾಗಲು ಹೋಗಿರಲಿಲ್ಲ. ಅವರು ನಮ್ಮ ಕೇಂದ್ರ ಸಮಿತಿಯ ಮುಖಂಡರಿಗೆ ಕರೆ ಮಾಡಿ ಜಿಲ್ಲೆಯ ಕೋಮು ಸೌಹಾರ್ದ ವೇದಿಕೆಯವರು ಅವರನ್ನು ಭೇಟಿಯಾಗಲು ತಿಳಿಸಿದ್ದರು. ಅದಾಗ್ಯೂ ನಾವು ಹೋಗದಿದ್ದಾಗ ಮತ್ತೆ ಮತ್ತೆ ನಮ್ಮ ಕೇಂದ್ರ ಸಮಿತಿಗೆ ಕರೆ ಮಾಡಿ ನಮ್ಮನ್ನು ಕರೆಸಿದ್ದರು. ದಮನಿತ ಸಮುದಾಯದ ಹಿನ್ನೆಲೆಯಿಂದ ಬಂದಿದ್ದ ಅವರಿಗೆ ಪ್ರಗತಿಪರ ಚಳವಳಿಗಳ ಬಗ್ಗೆ ತುಂಬು  ಗೌರವವಿತ್ತು. ದ್ರಾವಿಡ ಚಳವಳಿಗಳ ತವರೂರಾಗಿದ್ದ ತಮಿಳುನಾಡು ಮೂಲದವರಾಗಿದ್ದ ಅವರು ಸಹಜವಾಗಿಯೇ ಪೆರಿಯಾರ್ ಚಳವಳಿಯ ಸಿಂಪಥೈಸರ್ ಆಗಿದ್ದರು. ಒಟ್ಟಿನಲ್ಲಿ ಜನಪರ  ಚಳವಳಿಗಳನ್ನು ಸನಿಹದಿಂದ ನೋಡಿ ಬಲ್ಲವರೂ ಕೂಡಾ.

ನಾವು ಅವರನ್ನು ಭೇಟಿ ಮಾಡಿದಾಗ ಅತ್ಯಂತ ಗೌರವಪೂರ್ವಕವಾಗಿ ನಮ್ಮನ್ನು ಬರ ಮಾಡಿಕೊಂಡ ಅವರು ತುಂಬು ಪ್ರೀತಿಯಿಂದ ಸುಮಾರು ಮುಕ್ಕಾಲು ಗಂಟೆಯಷ್ಟು ಹೊತ್ತು ನಮ್ಮಲ್ಲಿ ಜಿಲ್ಲೆಯ ಸಮಸ್ಯೆಗಳ ಕುರಿತಂತೆ ಚರ್ಚಿಸಿದ್ದರು. ಜಿಲ್ಲೆಯ ಶಾಂತಿಗೆ ಭಂಗ ತರುವವರ ಕುರಿತಂತೆ ನಮ್ಮಿಂದ ಕೆಲ ಮಾಹಿತಿಗಳನ್ನು ಕೇಳಿ ಪಡೆದಿದ್ದರು. ಅವರಲ್ಲಿ ನಮ್ಮ ಮಾತುಗಳನ್ನು ಆಸ್ಥೆಯಿಂದ ಆಲಿಸುವ ದೊಡ್ಡ ಗುಣವಿತ್ತು. ಅಂದು ಅವರು ಮಾತನಾಡಿದ್ದಕ್ಕಿಂತ ನಾವು ಮಾತನಾಡಿದ್ದೇ ಅಧಿಕ.‌ನಾವು ಅಲ್ಲಿಂದ ಹೊರಟು ಬರುವಾಗ ಅವರು ಪದೇ ಪದೇ ಹೇಳಿದ ಮಾತು “ಯಾವಾಗ ಬೇಕಾದರೂ ಬಂದು ಮಾತನಾಡಿಕೊಳ್ಳಿ… ಮತ್ತು ನನ್ನ ಸಂಪರ್ಕದಲ್ಲಿರಿ….” ಆದರೆ ಅವರೋರ್ವ ಉನ್ನತ ಸರಕಾರಿ ಅಧಿಕಾರಿ. ಅವರಿಗೂ ಅವರದೇ ಆದ ಒತ್ತಡಗಳಿರುತ್ತದಾದ್ದರಿಂದ ನಾವು ಅವರಂದಂತೆ ಆಗಾಗ ಭೇಟಿ ಮಾಡಲು ಬಯಸಿರಲಿಲ್ಲ.

ಸೆಂಥಿಲ್ ಅವರ ಅವಧಿಯನ್ನು ಅವಲೋಕಿಸಿ ನೋಡಿ. ಜಿಲ್ಲೆಯಲ್ಲಿ ಯಾವುದೇ ಕೋಮುಗಲಭೆಗಳಾಗಲಿಲ್ಲ.‌ ಗಲಭೆಗಳಾಗಬಹುದಾದಂತಹ ಸನ್ನಿವೇಶಗಳನ್ನು ಅವರು ಅತ್ಯಂತ ಚಾಕಚಕ್ಯತೆಯಿಂದ ನಿಭಾಯಿಸಿ ಎಲ್ಲಾ ಬಿಗುವಿನ ಸಂದರ್ಭಗಳನ್ನೂ ತಣ್ಣಗಾಗಿಸಿದ್ದರು.
ಕಳೆದ ಚುನಾವಣೆಯ ಸಂದರ್ಭದಲ್ಲಿ ಗುಜರಾತ್ ಶಾಸಕ ಜಿಗ್ನೇಶ್ ಮೆವಾನಿಯವರ ಕಾರ್ಯಕ್ರಮವನ್ನು ನಾವು ಹಮ್ಮಿಕೊಂಡಿದ್ದೆವು. ಆಗ ಜಿಗ್ನೇಶ್ ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಪ್ರತಿಗಾಮಿ ಶಕ್ತಿಗಳು ಸಾಧ್ಯಂತ ಶ್ರಮಿಸಿದ್ದರು. ಆಗ ಎಲ್ಲಾ ಅಡೆತಡೆಗಳನ್ನು ಮೀರಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಯುವ ನಮ್ಮ ಕಾರ್ಯಕ್ರಮ ಸುಸೂತ್ರವಾಗಿ ನಡೆಯಲು ಸಸಿಕಾಂತ್ ಸೆಂಥಿಲ್ ಸರ್ ನೀಡಿದ ನೆರವನ್ನು ನಾವೆಂದೂ ಮರೆಯಲಾರೆವು.

ನಾನು ಕೆಲವು ಕಾಂಗ್ರೆಸಿಗರು ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಬಿಜೆಪಿಯ ಆಜ್ಞಾಪಾಲಕ ಎಂದು ಬರೆದಿದ್ದನ್ನು ನೋಡಿದ್ದೆ. ಆಗ ಮನಸ್ಸಿಗೆ ತುಂಬಾ ನೋವೆನಿಸುತ್ತಿತ್ತು. ಅವರ ಕಾಳಜಿಯನ್ನು ಇನಿತೂ ಅರ್ಥೈಸದೇ ನೆಲದ ಸಂವಿಧಾನಕ್ಕೆ ಬದ್ಧವಾಗಿ ಕರ್ತವ್ಯ ನಿರ್ವಹಿಸಿದ ಓರ್ವ ಅತ್ಯುತ್ತಮ ಜಿಲ್ಲಾಧಿಕಾರಿಯನ್ನು ಇವರು ಈ ರೀತಿ ಟೀಕಿಸಬೇಕಿದ್ದರೆ ಅವರು ಕಾಂಗ್ರೆಸಿಗರ ತಾಳಕ್ಕೆ ತಕ್ಕಂತೆ ಕುಣಿಯುತ್ತಿಲ್ಲ ಎಂಬುವುದೇ ಕಾಂಗ್ರೆಸಿಗರ (ಕೆಲವು) ಅಸಹನೆಗೆ ಕಾರಣವಾಗಿರಬಹುದು.

ಅವರು ಜಿಲ್ಲೆಯ  ಅಕ್ರಮ ದಂಧೆಕೋರರಿಗೆ ದೊಡ್ಡ ತಲೆ ನೋವಾಗಿದ್ದರು.‌ ಅವರನ್ನು ಎಂತಹ ಬಲಿಷ್ಠ ಮಾಫಿಯಾಕ್ಕೂ ಖರೀದಿಸಲು‌ ಸಾಧ್ಯವಾಗಿಲ್ಲ. ತನ್ನ ವೇತನವಲ್ಲದೇ ನಯಾ ಪೈಸೆಯ ಲಂಚವನ್ನೂ ಮುಟ್ಟದಿದ್ದ ಸೆಂಥಿಲ್ ರಜಾದಿನಗಳಲ್ಲಿ ಪತ್ನಿಯೊಂದಿಗೆ ಬೈಕ್‌ನಲ್ಲಿ ತಿರುಗಾಡುತ್ತಿದ್ದರು. ಅಷ್ಟು ಸರಳವಾಗಿ ಅವರು ಬದುಕಬೇಕಾದರೆ ಅವರು ಕಷ್ಟಗಳನ್ನು ಅನುಭವಿಸಿ ಅರಿತವರು ಎಂದರ್ಥ.

ಅವರಿಗೆ ಪ್ರಗತಿಪರ ಚಳವಳಿಗಳ ಬಗ್ಗೆ ಗೌರವವಿದ್ದಾಗ್ಯೂ ಅವರು ಓರ್ವ ಸರಕಾರಿ ಅಧಿಕಾರಿಯಾಗಿದ್ದರಿಂದ ಯಾವತ್ತೂ ಕೂಡಾ ಎಲ್ಲೂ ಕೂಡಾ ಅದನ್ನು ಬಹಿರಂಗವಾಗಿ ತೋರಿಸಿದವರಲ್ಲ.

ಸತತ ಎರಡು ವರ್ಷಗಳ ಕಾಲ ಜಿಲ್ಲೆಯಲ್ಲಿ ನೆರೆಹಾವಳಿ ಸಂಭವಿಸಿದಾಗ ಅವರು ಜನರ ಮಧ್ಯೆ ನಿಂತು ಕೆಲಸ ಮಾಡಿದರು.ಮತ್ತು ಅದರಿಂದ ಆಗಬಹುದಾದ ಅಪಾಯ ಮತ್ತು ಹಾನಿಗಳನ್ನು ಅತ್ಯಂತ ಕನಿಷ್ಠ ಗೊಳಿಸುವ ನಿಟ್ಟಿನಲ್ಲಿ ಹಗಲು ರಾತ್ರಿ ಶ್ರಮಿಸಿದರು. ಶಾಲೆಗೆ ರಜೆ ಕೊಟ್ಟಾಗೆಲ್ಲಾ ಜಿಲ್ಲೆಯ ಸಾಮಾಜಿಕ ಜಾಲತಾಣಗಳ ಪ್ರವೀಣರು ಸೆಂಥಿಲ್ ಸರ್ ಅವರನ್ನು ನಿರಂತರವಾಗಿ ಟ್ರೋಲ್ ಮಾಡುತ್ತಿದ್ದರು. ಅವರನ್ನು ಗೇಲಿ ಮಾಡಿ ಲೆಕ್ಕವಿಲ್ಲದಷ್ಟು ಪೋಸ್ಟ್ ಗಳನ್ನು ಅವರ ವಿರುದ್ಧ ಬರೆದು ಹಾಕುತ್ತಿದ್ದರು. ಅವರ ಜನಪರ ಕಾಳಜಿಯನ್ನು ಆ ಮಂದಿಗಳು ಎಂದೂ ಅರ್ಥಮಾಡಿಕೊಳ್ಳಲಿಲ್ಲ. ಅಂತವರಿಗೆಲ್ಲಾ ಈಗ ಸಸಿಕಾಂಥ್ ಸೆಂಥಿಲ್ ಎಂತಹ ಜನಪರ ಅಧಿಕಾರಿ ಎಂಬುವುದು ಅರ್ಥವಾಗುತ್ತಿದೆ. ಸೆಂಥಿಲ್ ರಾಜಿನಾಮೆಯ ಬಳಿಕ ಅವರ ಹಿನ್ನೆಲೆ ಅರಿತ ಸಂಘಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬ ಆಚರಿಸತೊಡಗಿದ್ದಾರೆ.

ಸಸಿಕಾಂತ್ ಸರ್ ಅವರ ಕಚೇರಿಯ ಬಾಗಿಲು ಜನಸಾಮಾನ್ಯರಿಗೆ ಸದಾ ತೆರೆದಿತ್ತು. ಅವರ ರಾಜಿನಾಮೆ ಪತ್ರ ನೋಡಿದಾಗ ಈ ದೇಶದ ಬಗ್ಗೆ ಕಾಳಜಿ ಇರುವ ಎಂತವನಿಗೂ ನೋವಾಗದಿರದು. ದೇಶದ ಸಂವಿಧಾನ ಅಪಾಯದಲ್ಲಿದೆ.. ನೆಲದ ಬಹುತ್ವವನ್ನು ಕೊಲ್ಲಲು ಪ್ರಭುತ್ವ ಶಕ್ತಿ ಮೀರಿ ಶ್ರಮಿಸುತ್ತಿರುವುದನ್ನೂ ಅವರು ತನ್ನ ರಾಜಿನಾಮೆ ಪತ್ರದಲ್ಲಿ  ಉಲ್ಲೇಖಿಸಿದ್ದಾರೆ.ಕೇಂದ್ರದ ಬಿಜೆಪಿಯ ಸರ್ವಾಧಿಕಾರಿ ಸರಕಾರದ ಬಗ್ಗೆ ಅವರಿಗೆ ಅತೀವ ಸಿಟ್ಟಿರುವುದು ಅವರ ರಾಜಿನಾಮೆ ಪತ್ರವನ್ನು ನೋಡಿದಾಗ ಸ್ಪಷ್ಟವಾಗಿ ಅರಿವಾಗುತ್ತದೆ.

ಓರ್ವ ಸಂವೇದನಾ ಶೀಲನಿಗೆ ಇಂತಹ ಕೇಡುಗಾಲದಲ್ಲಿ ವ್ಯವಸ್ಥೆಯೊಂದಿಗೆ ರಾಜಿಮಾಡಿಕೊಳ್ಳಲು ಸಾಧ್ಯವಾಗದು.‌ಆದುದರಿಂದಲೇ ಅವರು ರಾಜಿನಾಮೆ ನೀಡಿದ್ದಾರೆ. ಮತ್ತು ಅವರು ತನ್ನ ಪತ್ರದಲ್ಲಿ ಉಲ್ಲೇಖಿಸಿದಂತೆ ಅವರು ಜನರಿಗಾಗಿ ಕೆಲಸ ಮಾಡಹೊರಟಿದ್ದಾರೆ. ಅರ್ಥಾತ್ ಅವರು ಜನಚಳವಳಿಗಳ ಭಾಗವಾಗಬಯಸಿದ್ದಾರೆ ಎಂಬುವುದನ್ನು ಅವರ ರಾಜಿನಾಮೆ ಪತ್ರ ಧ್ವನಿಸುತ್ತದೆ. ಗುಜರಾತಿನಲ್ಲಿ ಐ.ಎ.ಎಸ್. ಅಧಿಕಾರಿಯಾಗಿದ್ದ ಹರ್ಷ ಮಂದರ್ ಅವರು ಈ ಸಂದರ್ಭದಲ್ಲಿ ನನಗೆ ನೆನಪಾಗುತ್ತಾರೆ. ಪ್ರಭುತ್ವ ಸಮೂಹ ಸನ್ನಿಯ ಪಾಲಕನಾದ ಕಾಲದಲ್ಲಿ ಓರ್ವ ಅಧಿಕಾರಿಯಾಗಿ ಕೆಲಸ ಮಾಡಲು ಸಾಧ್ಯವಿಲ್ಲವೆಂಬುವುದು ಸ್ಪಷ್ಟಗೊಂಡಾಗ ಓರ್ವ ಅಧಿಕಾರಿಯಾಗಿ ಜನರ ಕೆಲಸ ಮಾಡುವುದಕ್ಕಿಂತ ಪರಿಣಾಮಕಾರಿ ಕೆಲಸ ಮಾಡಲು ಇರುವ ಅವಕಾಶ ಜನತೆಗಾಗಿ ಬೀದಿಗಿಳಿಯುವುದು. ಹರ್ಷ ಮಂದರ್ ರಾಜಿನಾಮೆ ಎಸೆದು ಬಂದು ಜನಚಳವಳಿಗೆ ದುಮುಕಿದರು. ತನ್ನ ಲೇಖನಿಯಿಂದ ನಿರಂತರವಾಗಿ ಪ್ರಭುತ್ವವನ್ನು ತಿವಿಯುತ್ತಿದ್ದಾರೆ. ದಮನಿತರ ಅಡಗಿಸಲ್ಪಟ್ಟ ಧ್ವನಿಯನ್ನು ಹೋರಾಟ ಮತ್ತು ಬರವಣಿಗೆಯ ಮೂಲಕ ಎತ್ತಿ‌‌ ಹಿಡಿಯುವ ಕೆಲಸ ಮಾಡುತ್ತಿದ್ದಾರೆ.

ಸಸಿಕಾಂತ್ ಸೆಂಥಿಲ್ ಅವರ ರಾಜಿನಾಮೆ ಪತ್ರ ಓದಿದಾಗ ಅವರೂ ಹರ್ಷ ಮಂದರ್ ಅವರ ಹಾದಿ ಹಿಡಿಯುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತವೆ.ಅವರಿಗೆ ಶುಭವಾಗಲಿ… ಅವರ ಜನಪರ ಕಾಳಜಿಗೆ ಎದೆತುಂಬಿದ ನಮನಗಳು…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಆಯೋಗ ಪಕ್ಷಾತೀತವಾಗಿ ನಡೆದುಕೊಳ್ಳುತ್ತಿಲ್ಲ: ಪಿಣರಾಯಿ ವಿಜಯನ್

0
ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಮುಸ್ಲಿಮರ ವಿರುದ್ಧ ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ಚುನಾವಣಾ ಆಯೋಗವು ಪಕ್ಷಾತೀತವಾಗಿ ವರ್ತಿಸದಿರುವುದು ದುರದೃಷ್ಟಕರ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮೋದಿಯ...