Homeಅಂಕಣಗಳುಅನಿತಾ-ಮನೋಜ್‌ರ ‘ಸಂವಿಧಾನ ಸಾಕ್ಷಿ’ ಮದುವೆ: ಬುದ್ದ, ಅಂಬೇಡ್ಕರ್, ಸೂರ್ಯರ ಆಶೀರ್ವಾದ ನಿಮ್ಮ ಬದುಕಿಗೆ ಇದೆ-ಡಾ.ವಿದ್ಯಾಕುಮಾರಿ

ಅನಿತಾ-ಮನೋಜ್‌ರ ‘ಸಂವಿಧಾನ ಸಾಕ್ಷಿ’ ಮದುವೆ: ಬುದ್ದ, ಅಂಬೇಡ್ಕರ್, ಸೂರ್ಯರ ಆಶೀರ್ವಾದ ನಿಮ್ಮ ಬದುಕಿಗೆ ಇದೆ-ಡಾ.ವಿದ್ಯಾಕುಮಾರಿ

- Advertisement -
- Advertisement -

ಗಂಡ-ಹೆಂಡತಿಯಾದವರು ಬದುಕಿನೊಳಗಡೆ ಒಬ್ಬರಿಗೊಬ್ಬರು ಹೆತ್ತವರ ಸ್ಥಾನವನ್ನು ತುಂಬಿಕೊಳ್ಳಬೇಕು: ಡಾ.ವಿಜಯಮ್ಮ

ಹೊರಗಿನ ಸಮಾಜಕ್ಕೆ ಸರಳ ಮದುವೆ ಕುರಿತು ಎಚ್ಚರಿಕೆ ಮೂಡಿಸುವ ಕೆಲಸ ಮಾಡಬೇಕಿದೆ: ವೀರಸಂಗಯ್ಯ

ಬದುಕಿನ ಹೋರಾಟವನ್ನು ಮುಂದುವರೆಸಿ, ಸಮಾಜದಲ್ಲಿರುವ ಕೆಟ್ಟ ಶಕ್ತಿಗಳ ವಿರುದ್ಧ ಹೋರಾಡಿ: ಪ್ರೊ.ನಗರಗೆರೆ ರಮೇಶ್

ಬೆಂಗಳೂರು: ಬೆಂಗಳೂರಿನ ಅಂಜನಾನಗರದಲ್ಲಿರುವ ಸ್ಫೂರ್ತಿಧಾಮದಲ್ಲಿ ಇಂದು (ಆ. 24) ಅನಿತಾ ಮತ್ತು ಮನೋಜ್ ಅವರ ವಿವಾಹ ಸಮಾರಂಭವು ಯಾವುದೇ ರೀತಿಯ ಆಡಂಬರವಿಲ್ಲದೆ, ‘ಸಂವಿಧಾನ ಸಾಕ್ಷಿ’ಯಾಗಿ ಅತ್ಯಂತ ಸರಳವಾಗಿ ನೆರವೇರಿತು.

ಈ ವಿಶಿಷ್ಟ ಮದುವೆಯು ಕೇವಲ ಒಂದು ವೈಯಕ್ತಿಕ ಘಟನೆಯಾಗಿರದೆ, ಜಾತಿ, ಧರ್ಮಗಳ ಎಲ್ಲೆ ಮೀರಿ, ಪರಸ್ಪರ ಪ್ರೀತಿ ಮತ್ತು ಗೌರವಕ್ಕೆ ಮಹತ್ವ ನೀಡುವ ಸಮಾಜಮುಖಿ ಸಂದೇಶವನ್ನು ಸಾರಿತು. ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರಾದ ಡಾ. ವಿದ್ಯಾಕುಮಾರಿ, ಹಿರಿಯ ಪತ್ರಕರ್ತೆ ಡಾ. ವಿಜಯಮ್ಮ, ರೈತ ಸಂಘದ ವೀರಸಂಗಯ್ಯ, ಮತ್ತು ಪ್ರೊ. ನಗರೆಗೆರೆ ರಮೇಶ್ ಸೇರಿದಂತೆ ಹಲವು ಗಣ್ಯರು ಈ ಸಮಾರಂಭಕ್ಕೆ ಚಾಲನೆ ನೀಡಿ, ವಧು-ವರರಿಗೆ ಶುಭ ಹಾರೈಸಿದರು.

ಡಾ. ವಿದ್ಯಾಕುಮಾರಿ ತಮ್ಮ ಭಾಷಣವನ್ನು ಪ್ರಾರಂಭಿಸುತ್ತಾ, “ಬುದ್ಧ, ಅಂಬೇಡ್ಕರ್, ಮತ್ತು ಸೂರ್ಯ ಈ ಮೂರು ಶಕ್ತಿಗಳ ಆಶೀರ್ವಾದ ನಿಮ್ಮ ಬದುಕಿಗೆ ಇದೆ ಎಂದು ನಾನು ಹೇಳಲು ಇಚ್ಛಿಸುತ್ತೇನೆ” ಎಂದರು.

ವಧು-ವರರು ತಮ್ಮ ಆಮಂತ್ರಣ ಪತ್ರಿಕೆಯಲ್ಲಿ ‘ಹೋರಾಟದ ಹಾದಿಯಲ್ಲಿ ಒಂದಾಗಿದ್ದೇವೆ’ ಎಂದು ಬರೆದಿದ್ದನ್ನು ಉಲ್ಲೇಖಿಸಿ, “ಬದುಕನ್ನು ರೂಪಿಸುವಲ್ಲಿ ಇದೇ ರೀತಿಯ ಹೋರಾಟ ಇರಲಿ, ನಿಮ್ಮ ಮುಂದಿನ ದಿನಗಳು ಒಳ್ಳೆಯದಾಗಲಿ” ಎಂದು ಹಾರೈಸಿದರು.

ಮದುವೆ ಎನ್ನುವುದು ಆಯ್ಕೆಯ ಸ್ವಾತಂತ್ರ್ಯ

ಮದುವೆ ಎಂಬುದು ಒಂದು ಸಾಮಾಜಿಕ ಕಟ್ಟುಪಾಡಾಗಿರದೆ, ಇಬ್ಬರು ವ್ಯಕ್ತಿಗಳು ತಮ್ಮ ಬದುಕನ್ನು ನೆಮ್ಮದಿಯಾಗಿ ಸಾಗಿಸಲು ಯಾರ ಸಹಕಾರ ಬೇಕು ಎಂಬುದನ್ನು ಸ್ವತಂತ್ರವಾಗಿ ಆಯ್ಕೆ ಮಾಡಿಕೊಳ್ಳುವ ಒಂದು ಅವಕಾಶ ಎಂದು ಡಾ. ವಿದ್ಯಾಕುಮಾರಿ ವಿವರಿಸಿದರು.

“ಜಾತಿ ಮತ್ತು ಧರ್ಮದಂತಹ ಸಂಕುಚಿತ ಚೌಕಟ್ಟುಗಳನ್ನು ಮೀರಿ ಬದುಕನ್ನು ರೂಪಿಸಿಕೊಳ್ಳಲು ಇಂತಹ ಮದುವೆಗಳು ಅವಕಾಶ ಒದಗಿಸುತ್ತವೆ. ಅನಿತಾ ಮತ್ತು ಮನೋಜ್ ಅವರು ಬಹಳ ದಿನಗಳಿಂದ ಜೊತೆಗಿದ್ದು, ಪರಸ್ಪರ ಅರ್ಥಮಾಡಿಕೊಂಡು ಮದುವೆಯಾಗುತ್ತಿರುವುದು ಈ ಕಾರಣಕ್ಕಾಗಿಯೇ ಹೆಚ್ಚು ಮುಖ್ಯವಾಗುತ್ತದೆ” ಎಂದು ಒತ್ತಿ ಹೇಳಿದರು. ಇಬ್ಬರೂ ವಿದ್ಯಾವಂತರು ಮತ್ತು ತಿಳುವಳಿಕೆಯುಳ್ಳವರು, ತಮ್ಮ ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕೆಂದು ಅವರಿಗೆ ತಿಳಿದಿದೆ. ಈ ಅರಿವು ಮತ್ತು ತಿಳುವಳಿಕೆಯ ಹಿನ್ನೆಲೆಯಲ್ಲಿ ಇವರಿಬ್ಬರ ಒಗ್ಗೂಡುವಿಕೆ ಮಹತ್ವಪೂರ್ಣವಾಗಿದೆ  ಎಂದರು.

ಇಂದು ಮನೆ-ಮಂದಿ, ತಂದೆ-ತಾಯಿಯರ ಒತ್ತಡಕ್ಕೆ ಮಣಿದು ನಡೆಯುವ ಅನೇಕ ಸಾಂಪ್ರದಾಯಿಕ ಮದುವೆಗಳು ಯಾವ ರೀತಿ ವಿಫಲಗೊಳ್ಳುತ್ತಿವೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಇಂತಹ ಸಂಬಂಧಗಳಲ್ಲಿ ಉಂಟಾಗುವ ಬಿರುಕುಗಳು ಮಕ್ಕಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ, ಕುಟುಂಬಗಳು ಬೇರ್ಪಡುತ್ತಿವೆ. ಆದರೆ, ಅನಿತಾ ಮತ್ತು ಮನೋಜ್‌ರಂತಹ ಪ್ರೀತಿಯ ಮದುವೆಗಳು ಬದುಕಿಗೆ ಹೊಸ ಭರವಸೆ ನೀಡುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಇಂತಹ ಆದರ್ಶ ಮದುವೆಗಳು ವಿಫಲವಾಗುತ್ತವೆ ಎಂಬ ಮಾತು ಸಂಪೂರ್ಣ ಸುಳ್ಳು ಎಂದ ಅವರು, ಬದುಕನ್ನು ರೂಪಿಸಿಕೊಳ್ಳುವ ಜವಾಬ್ದಾರಿ ನಮ್ಮದೇ ಎಂದು ನುಡಿದರು.

ಖಂಡಿತವಾಗಿಯೂ ಕೆಲವು ಕಷ್ಟಗಳು ಎದುರಾಗುತ್ತವೆ, ಆದರೆ ಅವುಗಳನ್ನು ಮೆಟ್ಟಿ ನಿಂತು ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಬೇಕಿದೆ. ಪರಸ್ಪರ ಹೊಂದಾಣಿಕೆಯಿಂದ, ಒಬ್ಬರ ಬೆಳವಣಿಗೆಗೆ ಇನ್ನೊಬ್ಬರು ಕಾರಣರಾಗಿ, ಬೆಳೆದರೆ ಖಂಡಿತವಾಗಿಯೂ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯ. ಅಂತಹ ಯಶಸ್ವಿ ದಾಂಪತ್ಯ ಸಮಾಜಕ್ಕೊಂದು ಮಾದರಿಯಾಗಿ ನಿಲ್ಲಲಿದೆ ಎಂದು ಅವರು ಹೇಳಿದರು.

ವೈಯಕ್ತಿಕ ಅನುಭವದ ಮೂಲಕ ಪ್ರೇರಣೆ

ಡಾ. ವಿದ್ಯಾಕುಮಾರಿ ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಳ್ಳುವ ಮೂಲಕ ಹೊಸ ದಂಪತಿಗೆ ಪ್ರೇರಣೆ ತುಂಬಿದರು. “ನನಗೀಗ 26 ವರ್ಷಗಳ ಹಿಂದಿನ ನನ್ನ ಮದುವೆ ನೆನಪಾಗುತ್ತಿದೆ. ನಾನು ಮತ್ತು ಡಾಮಿನಿಕ್ ಇದೇ ರೀತಿಯ ಸರಳ ವಿವಾಹವಾಗಿದ್ದೆವು. ಆಗ ಸುಮಾರು 65 ಜನರ ಮಧ್ಯೆ ನಡೆದ ಆ ಮದುವೆಗೆ ಬಹುಶಃ ಮೂರೂವರೆ ಸಾವಿರ ರೂಪಾಯಿ ಮಾತ್ರ ಖರ್ಚಾಗಿತ್ತು” ಎಂದರು. ಬಟ್ಟೆ, ಊಟ ಎಲ್ಲವನ್ನೂ ಸೇರಿಸಿ ಅತ್ಯಂತ ಸರಳವಾಗಿ ನಡೆದ ಆ ಮದುವೆಗೆ, ಅವರು ಮೊದಲು ನೋಂದಣಿ ಮಾಡಿಸಿದ್ದೆವು ಎಂದು ವಿವರಿಸಿದರು.

ಮದುವೆಯ ನಂತರವೇ ನಾವು ನಮ್ಮ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕೆಂದು ನಿರ್ಧರಿಸಿದೆವು. ನಾನು ಪರೀಕ್ಷೆ ಬರೆದು ಕೆಎಎಸ್ ಅಧಿಕಾರಿಯಾದೆ, ಡಾಮಿನಿಕ್ ಪಿಹೆಚ್‌ಡಿ ಮಾಡಿ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡರು. ಇದೆಲ್ಲವನ್ನೂ ಮದುವೆಯ ನಂತರವೇ ನಾವು ಸಾಧಿಸಿದ್ದು. ಹಾಗಾಗಿ, ಮದುವೆಯ ನಂತರವೂ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಿದೆ ಎಂಬುದಕ್ಕೆ ನಮ್ಮ ಬದುಕೇ ಸಾಕ್ಷಿ ಎಂದು ಹೇಳಿದರು.

ಇಂದು ಅನಿತಾ ಮತ್ತು ಮನೋಜ್‌ರ ಮದುವೆಗೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಇದು ‘ಸಂವಿಧಾನ ಸಾಕ್ಷಿ’ ಮದುವೆಯಾಗಿದೆ. “ನಾವೆಲ್ಲರೂ ಮುಖ್ಯವಾಗಿ ಭಾರತೀಯ ಪ್ರಜೆಗಳು, ನಮಗೆ ಪೌರತ್ವವನ್ನು ನೀಡಿರುವುದು ನಮ್ಮ ಸಂವಿಧಾನ. ಆದ್ದರಿಂದ, ಇಂತಹ ಮದುವೆಗಳು ಇನ್ನಷ್ಟು ಹೆಚ್ಚಾಗಬೇಕು” ಎಂದು ಅವರು ಹೇಳಿದರು.

ತಾವು ಪ್ರತಿ ವರ್ಷ ತಮ್ಮ ಪರಿಚಯಸ್ಥರ ‘ಮಂತ್ರ ಮಾಂಗಲ್ಯ’ ಮದುವೆಗಳನ್ನು ಮಾಡಿಸಿ ಸಹಾಯ ಮಾಡುತ್ತಿರುವುದನ್ನು ಉಲ್ಲೇಖಿಸಿದರು. 2019ರಲ್ಲಿ ಸ್ವತಃ ತಾನೇ ನಿಂತು ಒಂದು ಮದುವೆಯನ್ನು ಮಾಡಿಸಿದ್ದೇನೆ ಎಂದರು.

ಆದರೆ, ದುರದೃಷ್ಟವಶಾತ್ ಇಂತಹ ವಿವಾಹಗಳಿಗೆ ವಿದ್ಯಾವಂತರು ಮತ್ತು ತಿಳುವಳಿಕೆ ಇರುವವರಿಂದಲೇ ವಿರೋಧ ವ್ಯಕ್ತವಾಗುತ್ತಿರುವುದು ದುರಂತ ಎಂದು ವಿಷಾದ ವ್ಯಕ್ತಪಡಿಸಿದರು.

ಅಂತಹ ವಿರೋಧದ ನಡುವೆಯೂ ಇಂದು ಸುಂದರವಾದ ಬದುಕನ್ನು ಕಟ್ಟಿಕೊಂಡ ಹಲವು ದಂಪತಿಗಳು ಬದುಕುತ್ತಿದ್ದಾರೆ ಎಂದು ಉದಾಹರಿಸಿದರು. ಬುದ್ಧ, ಅಂಬೇಡ್ಕರ್, ಮತ್ತು ಸೂರ್ಯನ ಆಶೀರ್ವಾದದೊಂದಿಗೆ ವಧು-ವರರ ಹೋರಾಟದ ಹಾದಿ ಯಶಸ್ವಿಯಾಗಿ ಮುಂದುವರಿಯಲಿ ಎಂದು ಹಾರೈಸಿ ಅವರು ತಮ್ಮ ಭಾಷಣವನ್ನು ಮುಗಿಸಿದರು.

ರೈತ ಸಂಘದ ವೀರಸಂಗಯ್ಯ ಅವರ ಹಾರೈಕೆ

ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ವೀರಸಂಗಯ್ಯ, “ಈ ರೀತಿಯ ಮದುವೆಗಳಲ್ಲಿ ಹೆಚ್ಚು ಭಾಷಣಗಳು ಆಗುವುದು ಅಗತ್ಯವಿಲ್ಲ. ಯಾಕೆಂದರೆ ಇಲ್ಲಿ ಸೇರಿರುವವರೆಲ್ಲರೂ ಸಮಾನ ಮನಸ್ಕರು ಮತ್ತು ಸಮಾನ ಚಿಂತಕರು, ಇಂತಹ ಮದುವೆಗಳಿಗೆ ಪ್ರೋತ್ಸಾಹ ನೀಡುವವರು” ಎಂದರು.

ಹೊರಗಿನ ಸಮಾಜಕ್ಕೆ ಸರಳ ಮದುವೆಗಳ ಕುರಿತು ಅರಿವು ಮೂಡಿಸುವ ಮತ್ತು ಎಚ್ಚರಿಕೆ ನೀಡುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು. ಅನಿತಾ ಮತ್ತು ಮನೋಜ್‌ಗೆ ಕರ್ನಾಟಕ ರಾಜ್ಯ ರೈತ ಸಂಘದ ಪರವಾಗಿ ಶುಭ ಹಾರೈಸಿದರು.

ತಮ್ಮ ಮಾತುಗಳನ್ನು ಒಂದು ಸಣ್ಣ ಕವನದ ಮೂಲಕ ಮುಗಿಸಿದ ವೀರಸಂಗಯ್ಯ, “ಎಲ್ಲೆಡೆ ಎಚ್ಚೆತ್ತಿದೆ ಜನ, ಮೂಡಣ, ಪಡುವಣ, ಬಡಗಣ, ತೆಂಕಣ, ಬದುಕ ಬಯಸಿದೆ ಮನ, ಸಮತೆ ಬದುಕ ಬಯಸಿದೆ. ಬುದ್ಧ, ಏಸು, ಪೈಗಂಬರರು, ಬಸವ, ಲೆನಿನ್‌, ಗಾಂಧಿಗಳು ಸಾರಿದ ಶಾಂತಿಯ ಸಂದೇಶವನ್ನು ಹೊತ್ತವರು ನಾವು… ನಮಸ್ಕಾರ” ಎಂದು ಭಾವಪೂರ್ಣವಾಗಿ ನುಡಿದರು.

ಪ್ರೊ. ನಗರೆಗೆರೆ ರಮೇಶ್ ಅವರ ಮಾತುಗಳು

ಪ್ರೊ. ನಗರೆಗೆರೆ ರಮೇಶ್ ಅವರು ಅನಿತಾ ಮತ್ತು ಮನೋಜ್ ಅವರಿಗೆ ಶುಭ ಹಾರೈಸಿದರು. “ನಾನು ಮನೋಜ್‌ಗೆ ಆಮಂತ್ರಣ ಪತ್ರಿಕೆಯಲ್ಲಿ ಮೊದಲು ಅನಿತಾ ಹೆಸರು ಇದ್ದಿದ್ದರೆ ಡಬಲ್ ಕಂಗ್ರಾಜುಲೇಷನ್ ಹೇಳುತ್ತಿದ್ದೆ” ಎಂದು ಹಾಸ್ಯಭರಿತವಾಗಿ ಹೇಳಿದರು. ಇಂತಹ ಮದುವೆಗಳು ಹೆಚ್ಚಾಗಬೇಕು ಎಂಬ ಆಶಯ ಮತ್ತು ಕನಸು ನಮ್ಮೆಲ್ಲರದ್ದು ಎಂದ ಅವರು, ಆಶಯಗಳು ಯಾವಾಗಲೂ ಕೈಗೂಡುವುದಿಲ್ಲ, ಕನಸು ಯಾವಾಗಲೂ ನನಸಾಗುವುದಿಲ್ಲ ಎಂದರು.

ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾ, “53 ವರ್ಷಗಳ ಹಿಂದೆ, ಅಂದರೆ 1973ರಲ್ಲಿ ನನ್ನ ಮದುವೆಯಾಗಿತ್ತು. ಅದು ಸರಳ ಮದುವೆ ಆಗಿರಲಿಲ್ಲ, ಸಾಂಪ್ರದಾಯಿಕ ಮದುವೆಯಾಗಿತ್ತು. ಆದರೆ, ಆ ನಂತರ ನಾನು ಹೆಚ್ಚು ಅಸಾಂಪ್ರದಾಯಿಕನಾದೆ” ಎಂದರು.

“ನನ್ನ ಮದುವೆ ನನ್ನದೇ ಜಾತಿಯಲ್ಲಿ ತುಂಬಾ ಸಂಪ್ರದಾಯಬದ್ಧವಾಗಿ ನಡೆದಿತ್ತು. ಮದುವೆಯ ಮುಂಚೆಯೇ ನಾನು ಅಸಾಂಪ್ರದಾಯಿಕ ವ್ಯಕ್ತಿಯಾಗಿದ್ದೆ, ಆದರೆ ಮದುವೆಯಾದ ನಂತರ ಇನ್ನೂ ಹೆಚ್ಚು ಹೆಚ್ಚು ಸಂಪ್ರದಾಯ ವಿರೋಧಿಯಾದೆ. ಆ ನೆನಪು ಏನೂ ಕೆಟ್ಟ ನೆನಪಲ್ಲ. ಆಗ ನಾವು ಜೊತೆಯಾದೆವು, ಈಗಲೂ ಜಗಳವಾಡಿಲ್ಲ, ಆರಾಮವಾಗಿ ಇದ್ದೇವೆ. ನನ್ನ ಮಕ್ಕಳು ಕೂಡ ಸುಖವಾಗಿದ್ದಾರೆ” ಎಂದು ಹೇಳಿದರು.

ಈ ಮೂಲಕ, ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಮದುವೆಗಳ ನಡುವಿನ ವೈರುಧ್ಯವನ್ನು ಅವರು ವಿವರಿಸಿದರು.

ಯುವಜನರಿಗೆ ಸಾಧ್ಯವಾದರೆ, ಈ ರೀತಿಯ ಮದುವೆಯಾಗಿ ಕೆ.ಎಲ್. ಅಶೋಕ್ ಹೇಳಿದಂತಹ ಮಹಾನ್ ನಷ್ಟವನ್ನು ತಪ್ಪಿಸಬೇಕು. ಒಂದು ಮಾದರಿಯಾದ ಮದುವೆಯಾಗಿ, ಮಾದರಿಯಾಗಿ ಬಾಳಿ ಎಂದು ಹೇಳುತ್ತೇನೆ ಎಂದು ಕರೆ ನೀಡಿದರು.

ಕೊನೆಯಲ್ಲಿ ಮದುಮಕ್ಕಳಿಗೆ, “ಬದುಕಿನ ಹೋರಾಟವನ್ನು ಮುಂದುವರೆಸಿ, ಸಮಾಜದಲ್ಲಿರುವ ಕೆಟ್ಟ ಶಕ್ತಿಗಳ ವಿರುದ್ಧ ಹೋರಾಡಿ. ನಿಮ್ಮಗಳ ವಿರುದ್ಧವಲ್ಲ. ಯಾವಾಗಲೂ ಜಗಳವಾಡಬೇಡಿ” ಎಂದು ನುಡಿದರು.

ಡಾ. ವಿಜಯಮ್ಮ ಅವರ ಅನುಭವದ ಮಾತು

ಹಿರಿಯ ಪತ್ರಕರ್ತೆ ಮತ್ತು ಹೋರಾಟಗಾರ್ತಿ ಡಾ. ವಿಜಯಮ್ಮ ಅವರು ಅನಿತಾ-ಮನೋಜ್ ಅವರಿಗೆ ಶುಭಾಶಯ ಕೋರಿದರು. “ಈ ಬಗೆಯ ಮದುವೆಗಳು ನನಗೆ ಹೊಸದಲ್ಲ, ನಾನು ಸಾಕಷ್ಟು ಮದುವೆಗಳನ್ನು ಮಾಡಿಸಿದ್ದೇನೆ ಮತ್ತು ನೋಡಿದ್ದೇನೆ” ಎಂದರು. ಅವರು ಆಡಂಬರದ ಮದುವೆಗಳಿಂದ ಜಿಗುಪ್ಸೆ ಹುಟ್ಟುತ್ತದೆ ಎಂದು ಹೇಳುತ್ತಾ, ಇಂತಹ ಸರಳ ಮದುವೆಗಳಿಂದ ಸುಖ ಮತ್ತು ಶಾಂತಿ ಸಿಗುತ್ತದೆ ಎಂಬ ಆಶಾಭಾವನೆ ಇರುವುದರಿಂದ ಇವುಗಳನ್ನು ನಾವು ಒಪ್ಪಿಕೊಳ್ಳಬೇಕಿದೆ ಎಂದರು.

“ಅನಿತಾ ಮತ್ತು ಮನೋಜ್ ಹೋರಾಟಗಳಲ್ಲಿದ್ದು, ಬದುಕಿನ ಹೋರಾಟದಲ್ಲೂ ಒಂದಾಗಿದ್ದಾರೆ. ಬದುಕು ಒಂದು ಹೋರಾಟವೇ ಆಗಿದೆ. ಎಲ್ಲವೂ ಸುಖಮಯವಾಗಿ, ಶಾಂತವಾಗಿ ಇರುವುದಿಲ್ಲ. ಎಲ್ಲವನ್ನೂ ಈಜಿಕೊಂಡು ಹೊರಬರಲು ಎರಡು ಜೀವಗಳು ಒಟ್ಟಾಗಿ, ಪರಸ್ಪರ ಪೂರಕವಾಗಿ ನಿಂತಾಗ ಮಾತ್ರ ಸಾಧ್ಯವಾಗುತ್ತದೆ. ಇದು ನನ್ನ ಅನುಭವದ ಮಾತು” ಎಂದರು.

“ಮದುವೆಯಾಗುವವರೆಗೆ ಸ್ನೇಹ ಚೆನ್ನಾಗಿರುತ್ತದೆ, ಆದರೆ ಗಂಡ-ಹೆಂಡತಿ ಎಂಬ ಪದ ಬಂದ ತಕ್ಷಣ ಯಾರೋ ಒಬ್ಬರು ‘ನನ್ನದು ಅಧಿಕಾರ’ ಎನ್ನುತ್ತಾರೆ. ಆದರೆ ಮದುವೆ ಎನ್ನುವುದು ಅಧಿಕಾರವೂ ಅಲ್ಲ, ಹಕ್ಕೂ ಅಲ್ಲ. ಅವರವರ ಬದುಕನ್ನು ಅವರು ಚೆನ್ನಾಗಿ ರೂಪಿಸಿಕೊಳ್ಳಬೇಕು ಮತ್ತು ಒಬ್ಬರಿಗೊಬ್ಬರು ಗೌರವವನ್ನು ಕೊಡಬೇಕು” ಎಂದು ಸಲಹೆ ನೀಡಿದರು.

“ಒಂಟಿ ಹೆಜ್ಜೆಯನ್ನಲ್ಲ, ಜಂಟಿಯಾಗಿ ನಡೆಯುತ್ತೇವೆ, ಮನಸ್ಸುಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಚರ್ಚೆಯ ಮೂಲಕ ಸರಿಪಡಿಸಿಕೊಳ್ಳುತ್ತೇವೆ ಎಂಬ ಗಟ್ಟಿಯಾದ ನಿರ್ಧಾರವನ್ನು ತೆಗೆದುಕೊಳ್ಳಬೇಕು” ಎಂದು ಅವರು ಒತ್ತಿ ಹೇಳಿದರು.

ಇದೇ ಸಂದರ್ಭದಲ್ಲಿ ಕುವೆಂಪು ಅವರ ಜೀವನದ ಒಂದು ಪ್ರಸಂಗವನ್ನು ನೆನಪಿಸಿಕೊಂಡರು. “ಒಮ್ಮೆ ಕುವೆಂಪು ಅವರಿಗೆ ಕನಸು ಬಿದ್ದು, ಅವರು ಸ್ವರ್ಗದ ಬಾಗಿಲ ಬಳಿ ಹೋಗುತ್ತಾರೆ. ‘ನಾನು ಕುವೆಂಪು’ ಎಂದರೂ ಬಾಗಿಲು ತೆರೆಯುವುದಿಲ್ಲ. ‘ನಾನು ಪುಟ್ಟಪ್ಪ’ ಎಂದರೂ ಇಲ್ಲ. ‘ನಾನು ರಾಷ್ಟ್ರಕವಿ’ ಎಂದರೂ ಇಲ್ಲ. ಕೊನೆಗೆ ‘ನಾನು ಹೇಮಿಯ ಗಂಡ’ ಎಂದಾಗ ಬಾಗಿಲು ತೆರೆಯುತ್ತದೆ” ಎಂದು ವಿವರಿಸಿದರು. “ಇದು ಕುವೆಂಪು ಅವರ ಕಂಡ ಬದುಕು ಮತ್ತು ತನ್ನ ಹೆಂಡತಿಗೆ ಅವರು ಕೊಟ್ಟ ಮರ್ಯಾದೆ. ಬದುಕಿನೊಳಗೆ ಒಬ್ಬರಿಗೊಬ್ಬರು ಹೆತ್ತವರ ಸ್ಥಾನವನ್ನು ತುಂಬಿಕೊಳ್ಳಬೇಕು. ಕಷ್ಟ-ಸುಖ ಬಂದಾಗ ಮಾತುಕತೆಯ ಮೂಲಕ ಸರಿಪಡಿಸಿಕೊಳ್ಳಬೇಕು. ಚಳವಳಿಯಲ್ಲಿ ಮಾತನಾಡುವುದು ಒಂದು, ಮನೆಯಲ್ಲಿರುವುದು ಒಂದು ಆಗಬಾರದು” ಎಂದು ಸಲಹೆ ನೀಡಿದರು.

ವಧು-ವರರ ವಿನಮ್ರ ನುಡಿಗಳು

ಮದುಮಗಳು ಅನಿತಾ, ತಮ್ಮ ವಿವಾಹಕ್ಕೆ ಸಾಕ್ಷಿಯಾದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿ, ಎಲ್ಲರೂ ಊಟ ಮಾಡಿಕೊಂಡು ಹೋಗಬೇಕೆಂದು ವಿನಂತಿಸಿದರು.

ಮದುಮಗ ಮನೋಜ್, “ಹಿರಿಯರು ಹೇಳಿದ ಹಿತವಚನಗಳನ್ನು ನಾನು ಮನಸ್ಸಿನಲ್ಲಿ ಇಟ್ಟುಕೊಂಡು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳುತ್ತೇನೆ ಎಂದು ಮತ್ತೊಮ್ಮೆ ಪ್ರತಿಜ್ಞೆ ಮಾಡುತ್ತೇನೆ” ಎಂದು ಹೇಳಿ, ಬಂದಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಈ ಸರಳ ವಿವಾಹ ಸಮಾರಂಭದಲ್ಲಿ ಶಿವಸುಂದರ್, ಇಂದೂಧರ ಹೊನ್ನಾಪುರ, ಕೆ.ಎಲ್.ಅಶೋಕ್, ಕಾರಳ್ಳಿ ಶ್ರೀನಿವಾಸ್, ಬಸವರಾಜ್ ಕೌತಾಳ್, ಶ್ರೀಗೌರಿ, ಮಲ್ಲಿಗೆ, ಶ್ರಮಿಕ ಶಕ್ತಿಯ ಬಸವರಾಜ್, ವಿದ್ಯಾರ್ಥಿ ಸಂಘಟನೆಯ ಸರೋವರ್ ಬೆಂಕಿಕೆರೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ, ನವ ದಂಪತಿಗೆ ಶುಭ ಹಾರೈಸಿದರು. ಈ ಮದುವೆಯು ಕೇವಲ ಒಂದು ಕುಟುಂಬದ ಒಗ್ಗೂಡುವಿಕೆಯಾಗಿರದೆ, ಜಾತ್ಯತೀತ ಮತ್ತು ಪ್ರಗತಿಪರ ಚಿಂತನೆಗಳಿಗೆ ಒಂದು ಪ್ರೇರಣೆಯಾಯಿತು.

36 ಲಕ್ಷ ರೂ. ವರದಕ್ಷಿಣೆ ತರುವಂತೆ ಮಹಿಳೆಗೆ ಬೆಂಕಿ ಹಚ್ಚಿ ಕೊಂದ ಗಂಡನ ಮನೆಯವರು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...