Homeಅಂಕಣಗಳುಅನಿತಾ-ಮನೋಜ್‌ರ ‘ಸಂವಿಧಾನ ಸಾಕ್ಷಿ’ ಮದುವೆ: ಬುದ್ದ, ಅಂಬೇಡ್ಕರ್, ಸೂರ್ಯರ ಆಶೀರ್ವಾದ ನಿಮ್ಮ ಬದುಕಿಗೆ ಇದೆ-ಡಾ.ವಿದ್ಯಾಕುಮಾರಿ

ಅನಿತಾ-ಮನೋಜ್‌ರ ‘ಸಂವಿಧಾನ ಸಾಕ್ಷಿ’ ಮದುವೆ: ಬುದ್ದ, ಅಂಬೇಡ್ಕರ್, ಸೂರ್ಯರ ಆಶೀರ್ವಾದ ನಿಮ್ಮ ಬದುಕಿಗೆ ಇದೆ-ಡಾ.ವಿದ್ಯಾಕುಮಾರಿ

- Advertisement -
- Advertisement -

ಗಂಡ-ಹೆಂಡತಿಯಾದವರು ಬದುಕಿನೊಳಗಡೆ ಒಬ್ಬರಿಗೊಬ್ಬರು ಹೆತ್ತವರ ಸ್ಥಾನವನ್ನು ತುಂಬಿಕೊಳ್ಳಬೇಕು: ಡಾ.ವಿಜಯಮ್ಮ

ಹೊರಗಿನ ಸಮಾಜಕ್ಕೆ ಸರಳ ಮದುವೆ ಕುರಿತು ಎಚ್ಚರಿಕೆ ಮೂಡಿಸುವ ಕೆಲಸ ಮಾಡಬೇಕಿದೆ: ವೀರಸಂಗಯ್ಯ

ಬದುಕಿನ ಹೋರಾಟವನ್ನು ಮುಂದುವರೆಸಿ, ಸಮಾಜದಲ್ಲಿರುವ ಕೆಟ್ಟ ಶಕ್ತಿಗಳ ವಿರುದ್ಧ ಹೋರಾಡಿ: ಪ್ರೊ.ನಗರಗೆರೆ ರಮೇಶ್

ಬೆಂಗಳೂರು: ಬೆಂಗಳೂರಿನ ಅಂಜನಾನಗರದಲ್ಲಿರುವ ಸ್ಫೂರ್ತಿಧಾಮದಲ್ಲಿ ಇಂದು (ಆ. 24) ಅನಿತಾ ಮತ್ತು ಮನೋಜ್ ಅವರ ವಿವಾಹ ಸಮಾರಂಭವು ಯಾವುದೇ ರೀತಿಯ ಆಡಂಬರವಿಲ್ಲದೆ, ‘ಸಂವಿಧಾನ ಸಾಕ್ಷಿ’ಯಾಗಿ ಅತ್ಯಂತ ಸರಳವಾಗಿ ನೆರವೇರಿತು.

ಈ ವಿಶಿಷ್ಟ ಮದುವೆಯು ಕೇವಲ ಒಂದು ವೈಯಕ್ತಿಕ ಘಟನೆಯಾಗಿರದೆ, ಜಾತಿ, ಧರ್ಮಗಳ ಎಲ್ಲೆ ಮೀರಿ, ಪರಸ್ಪರ ಪ್ರೀತಿ ಮತ್ತು ಗೌರವಕ್ಕೆ ಮಹತ್ವ ನೀಡುವ ಸಮಾಜಮುಖಿ ಸಂದೇಶವನ್ನು ಸಾರಿತು. ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರಾದ ಡಾ. ವಿದ್ಯಾಕುಮಾರಿ, ಹಿರಿಯ ಪತ್ರಕರ್ತೆ ಡಾ. ವಿಜಯಮ್ಮ, ರೈತ ಸಂಘದ ವೀರಸಂಗಯ್ಯ, ಮತ್ತು ಪ್ರೊ. ನಗರೆಗೆರೆ ರಮೇಶ್ ಸೇರಿದಂತೆ ಹಲವು ಗಣ್ಯರು ಈ ಸಮಾರಂಭಕ್ಕೆ ಚಾಲನೆ ನೀಡಿ, ವಧು-ವರರಿಗೆ ಶುಭ ಹಾರೈಸಿದರು.

ಡಾ. ವಿದ್ಯಾಕುಮಾರಿ ತಮ್ಮ ಭಾಷಣವನ್ನು ಪ್ರಾರಂಭಿಸುತ್ತಾ, “ಬುದ್ಧ, ಅಂಬೇಡ್ಕರ್, ಮತ್ತು ಸೂರ್ಯ ಈ ಮೂರು ಶಕ್ತಿಗಳ ಆಶೀರ್ವಾದ ನಿಮ್ಮ ಬದುಕಿಗೆ ಇದೆ ಎಂದು ನಾನು ಹೇಳಲು ಇಚ್ಛಿಸುತ್ತೇನೆ” ಎಂದರು.

ವಧು-ವರರು ತಮ್ಮ ಆಮಂತ್ರಣ ಪತ್ರಿಕೆಯಲ್ಲಿ ‘ಹೋರಾಟದ ಹಾದಿಯಲ್ಲಿ ಒಂದಾಗಿದ್ದೇವೆ’ ಎಂದು ಬರೆದಿದ್ದನ್ನು ಉಲ್ಲೇಖಿಸಿ, “ಬದುಕನ್ನು ರೂಪಿಸುವಲ್ಲಿ ಇದೇ ರೀತಿಯ ಹೋರಾಟ ಇರಲಿ, ನಿಮ್ಮ ಮುಂದಿನ ದಿನಗಳು ಒಳ್ಳೆಯದಾಗಲಿ” ಎಂದು ಹಾರೈಸಿದರು.

ಮದುವೆ ಎನ್ನುವುದು ಆಯ್ಕೆಯ ಸ್ವಾತಂತ್ರ್ಯ

ಮದುವೆ ಎಂಬುದು ಒಂದು ಸಾಮಾಜಿಕ ಕಟ್ಟುಪಾಡಾಗಿರದೆ, ಇಬ್ಬರು ವ್ಯಕ್ತಿಗಳು ತಮ್ಮ ಬದುಕನ್ನು ನೆಮ್ಮದಿಯಾಗಿ ಸಾಗಿಸಲು ಯಾರ ಸಹಕಾರ ಬೇಕು ಎಂಬುದನ್ನು ಸ್ವತಂತ್ರವಾಗಿ ಆಯ್ಕೆ ಮಾಡಿಕೊಳ್ಳುವ ಒಂದು ಅವಕಾಶ ಎಂದು ಡಾ. ವಿದ್ಯಾಕುಮಾರಿ ವಿವರಿಸಿದರು.

“ಜಾತಿ ಮತ್ತು ಧರ್ಮದಂತಹ ಸಂಕುಚಿತ ಚೌಕಟ್ಟುಗಳನ್ನು ಮೀರಿ ಬದುಕನ್ನು ರೂಪಿಸಿಕೊಳ್ಳಲು ಇಂತಹ ಮದುವೆಗಳು ಅವಕಾಶ ಒದಗಿಸುತ್ತವೆ. ಅನಿತಾ ಮತ್ತು ಮನೋಜ್ ಅವರು ಬಹಳ ದಿನಗಳಿಂದ ಜೊತೆಗಿದ್ದು, ಪರಸ್ಪರ ಅರ್ಥಮಾಡಿಕೊಂಡು ಮದುವೆಯಾಗುತ್ತಿರುವುದು ಈ ಕಾರಣಕ್ಕಾಗಿಯೇ ಹೆಚ್ಚು ಮುಖ್ಯವಾಗುತ್ತದೆ” ಎಂದು ಒತ್ತಿ ಹೇಳಿದರು. ಇಬ್ಬರೂ ವಿದ್ಯಾವಂತರು ಮತ್ತು ತಿಳುವಳಿಕೆಯುಳ್ಳವರು, ತಮ್ಮ ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕೆಂದು ಅವರಿಗೆ ತಿಳಿದಿದೆ. ಈ ಅರಿವು ಮತ್ತು ತಿಳುವಳಿಕೆಯ ಹಿನ್ನೆಲೆಯಲ್ಲಿ ಇವರಿಬ್ಬರ ಒಗ್ಗೂಡುವಿಕೆ ಮಹತ್ವಪೂರ್ಣವಾಗಿದೆ  ಎಂದರು.

ಇಂದು ಮನೆ-ಮಂದಿ, ತಂದೆ-ತಾಯಿಯರ ಒತ್ತಡಕ್ಕೆ ಮಣಿದು ನಡೆಯುವ ಅನೇಕ ಸಾಂಪ್ರದಾಯಿಕ ಮದುವೆಗಳು ಯಾವ ರೀತಿ ವಿಫಲಗೊಳ್ಳುತ್ತಿವೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಇಂತಹ ಸಂಬಂಧಗಳಲ್ಲಿ ಉಂಟಾಗುವ ಬಿರುಕುಗಳು ಮಕ್ಕಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ, ಕುಟುಂಬಗಳು ಬೇರ್ಪಡುತ್ತಿವೆ. ಆದರೆ, ಅನಿತಾ ಮತ್ತು ಮನೋಜ್‌ರಂತಹ ಪ್ರೀತಿಯ ಮದುವೆಗಳು ಬದುಕಿಗೆ ಹೊಸ ಭರವಸೆ ನೀಡುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಇಂತಹ ಆದರ್ಶ ಮದುವೆಗಳು ವಿಫಲವಾಗುತ್ತವೆ ಎಂಬ ಮಾತು ಸಂಪೂರ್ಣ ಸುಳ್ಳು ಎಂದ ಅವರು, ಬದುಕನ್ನು ರೂಪಿಸಿಕೊಳ್ಳುವ ಜವಾಬ್ದಾರಿ ನಮ್ಮದೇ ಎಂದು ನುಡಿದರು.

ಖಂಡಿತವಾಗಿಯೂ ಕೆಲವು ಕಷ್ಟಗಳು ಎದುರಾಗುತ್ತವೆ, ಆದರೆ ಅವುಗಳನ್ನು ಮೆಟ್ಟಿ ನಿಂತು ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಬೇಕಿದೆ. ಪರಸ್ಪರ ಹೊಂದಾಣಿಕೆಯಿಂದ, ಒಬ್ಬರ ಬೆಳವಣಿಗೆಗೆ ಇನ್ನೊಬ್ಬರು ಕಾರಣರಾಗಿ, ಬೆಳೆದರೆ ಖಂಡಿತವಾಗಿಯೂ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯ. ಅಂತಹ ಯಶಸ್ವಿ ದಾಂಪತ್ಯ ಸಮಾಜಕ್ಕೊಂದು ಮಾದರಿಯಾಗಿ ನಿಲ್ಲಲಿದೆ ಎಂದು ಅವರು ಹೇಳಿದರು.

ವೈಯಕ್ತಿಕ ಅನುಭವದ ಮೂಲಕ ಪ್ರೇರಣೆ

ಡಾ. ವಿದ್ಯಾಕುಮಾರಿ ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಳ್ಳುವ ಮೂಲಕ ಹೊಸ ದಂಪತಿಗೆ ಪ್ರೇರಣೆ ತುಂಬಿದರು. “ನನಗೀಗ 26 ವರ್ಷಗಳ ಹಿಂದಿನ ನನ್ನ ಮದುವೆ ನೆನಪಾಗುತ್ತಿದೆ. ನಾನು ಮತ್ತು ಡಾಮಿನಿಕ್ ಇದೇ ರೀತಿಯ ಸರಳ ವಿವಾಹವಾಗಿದ್ದೆವು. ಆಗ ಸುಮಾರು 65 ಜನರ ಮಧ್ಯೆ ನಡೆದ ಆ ಮದುವೆಗೆ ಬಹುಶಃ ಮೂರೂವರೆ ಸಾವಿರ ರೂಪಾಯಿ ಮಾತ್ರ ಖರ್ಚಾಗಿತ್ತು” ಎಂದರು. ಬಟ್ಟೆ, ಊಟ ಎಲ್ಲವನ್ನೂ ಸೇರಿಸಿ ಅತ್ಯಂತ ಸರಳವಾಗಿ ನಡೆದ ಆ ಮದುವೆಗೆ, ಅವರು ಮೊದಲು ನೋಂದಣಿ ಮಾಡಿಸಿದ್ದೆವು ಎಂದು ವಿವರಿಸಿದರು.

ಮದುವೆಯ ನಂತರವೇ ನಾವು ನಮ್ಮ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕೆಂದು ನಿರ್ಧರಿಸಿದೆವು. ನಾನು ಪರೀಕ್ಷೆ ಬರೆದು ಕೆಎಎಸ್ ಅಧಿಕಾರಿಯಾದೆ, ಡಾಮಿನಿಕ್ ಪಿಹೆಚ್‌ಡಿ ಮಾಡಿ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡರು. ಇದೆಲ್ಲವನ್ನೂ ಮದುವೆಯ ನಂತರವೇ ನಾವು ಸಾಧಿಸಿದ್ದು. ಹಾಗಾಗಿ, ಮದುವೆಯ ನಂತರವೂ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಿದೆ ಎಂಬುದಕ್ಕೆ ನಮ್ಮ ಬದುಕೇ ಸಾಕ್ಷಿ ಎಂದು ಹೇಳಿದರು.

ಇಂದು ಅನಿತಾ ಮತ್ತು ಮನೋಜ್‌ರ ಮದುವೆಗೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಇದು ‘ಸಂವಿಧಾನ ಸಾಕ್ಷಿ’ ಮದುವೆಯಾಗಿದೆ. “ನಾವೆಲ್ಲರೂ ಮುಖ್ಯವಾಗಿ ಭಾರತೀಯ ಪ್ರಜೆಗಳು, ನಮಗೆ ಪೌರತ್ವವನ್ನು ನೀಡಿರುವುದು ನಮ್ಮ ಸಂವಿಧಾನ. ಆದ್ದರಿಂದ, ಇಂತಹ ಮದುವೆಗಳು ಇನ್ನಷ್ಟು ಹೆಚ್ಚಾಗಬೇಕು” ಎಂದು ಅವರು ಹೇಳಿದರು.

ತಾವು ಪ್ರತಿ ವರ್ಷ ತಮ್ಮ ಪರಿಚಯಸ್ಥರ ‘ಮಂತ್ರ ಮಾಂಗಲ್ಯ’ ಮದುವೆಗಳನ್ನು ಮಾಡಿಸಿ ಸಹಾಯ ಮಾಡುತ್ತಿರುವುದನ್ನು ಉಲ್ಲೇಖಿಸಿದರು. 2019ರಲ್ಲಿ ಸ್ವತಃ ತಾನೇ ನಿಂತು ಒಂದು ಮದುವೆಯನ್ನು ಮಾಡಿಸಿದ್ದೇನೆ ಎಂದರು.

ಆದರೆ, ದುರದೃಷ್ಟವಶಾತ್ ಇಂತಹ ವಿವಾಹಗಳಿಗೆ ವಿದ್ಯಾವಂತರು ಮತ್ತು ತಿಳುವಳಿಕೆ ಇರುವವರಿಂದಲೇ ವಿರೋಧ ವ್ಯಕ್ತವಾಗುತ್ತಿರುವುದು ದುರಂತ ಎಂದು ವಿಷಾದ ವ್ಯಕ್ತಪಡಿಸಿದರು.

ಅಂತಹ ವಿರೋಧದ ನಡುವೆಯೂ ಇಂದು ಸುಂದರವಾದ ಬದುಕನ್ನು ಕಟ್ಟಿಕೊಂಡ ಹಲವು ದಂಪತಿಗಳು ಬದುಕುತ್ತಿದ್ದಾರೆ ಎಂದು ಉದಾಹರಿಸಿದರು. ಬುದ್ಧ, ಅಂಬೇಡ್ಕರ್, ಮತ್ತು ಸೂರ್ಯನ ಆಶೀರ್ವಾದದೊಂದಿಗೆ ವಧು-ವರರ ಹೋರಾಟದ ಹಾದಿ ಯಶಸ್ವಿಯಾಗಿ ಮುಂದುವರಿಯಲಿ ಎಂದು ಹಾರೈಸಿ ಅವರು ತಮ್ಮ ಭಾಷಣವನ್ನು ಮುಗಿಸಿದರು.

ರೈತ ಸಂಘದ ವೀರಸಂಗಯ್ಯ ಅವರ ಹಾರೈಕೆ

ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ವೀರಸಂಗಯ್ಯ, “ಈ ರೀತಿಯ ಮದುವೆಗಳಲ್ಲಿ ಹೆಚ್ಚು ಭಾಷಣಗಳು ಆಗುವುದು ಅಗತ್ಯವಿಲ್ಲ. ಯಾಕೆಂದರೆ ಇಲ್ಲಿ ಸೇರಿರುವವರೆಲ್ಲರೂ ಸಮಾನ ಮನಸ್ಕರು ಮತ್ತು ಸಮಾನ ಚಿಂತಕರು, ಇಂತಹ ಮದುವೆಗಳಿಗೆ ಪ್ರೋತ್ಸಾಹ ನೀಡುವವರು” ಎಂದರು.

ಹೊರಗಿನ ಸಮಾಜಕ್ಕೆ ಸರಳ ಮದುವೆಗಳ ಕುರಿತು ಅರಿವು ಮೂಡಿಸುವ ಮತ್ತು ಎಚ್ಚರಿಕೆ ನೀಡುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು. ಅನಿತಾ ಮತ್ತು ಮನೋಜ್‌ಗೆ ಕರ್ನಾಟಕ ರಾಜ್ಯ ರೈತ ಸಂಘದ ಪರವಾಗಿ ಶುಭ ಹಾರೈಸಿದರು.

ತಮ್ಮ ಮಾತುಗಳನ್ನು ಒಂದು ಸಣ್ಣ ಕವನದ ಮೂಲಕ ಮುಗಿಸಿದ ವೀರಸಂಗಯ್ಯ, “ಎಲ್ಲೆಡೆ ಎಚ್ಚೆತ್ತಿದೆ ಜನ, ಮೂಡಣ, ಪಡುವಣ, ಬಡಗಣ, ತೆಂಕಣ, ಬದುಕ ಬಯಸಿದೆ ಮನ, ಸಮತೆ ಬದುಕ ಬಯಸಿದೆ. ಬುದ್ಧ, ಏಸು, ಪೈಗಂಬರರು, ಬಸವ, ಲೆನಿನ್‌, ಗಾಂಧಿಗಳು ಸಾರಿದ ಶಾಂತಿಯ ಸಂದೇಶವನ್ನು ಹೊತ್ತವರು ನಾವು… ನಮಸ್ಕಾರ” ಎಂದು ಭಾವಪೂರ್ಣವಾಗಿ ನುಡಿದರು.

ಪ್ರೊ. ನಗರೆಗೆರೆ ರಮೇಶ್ ಅವರ ಮಾತುಗಳು

ಪ್ರೊ. ನಗರೆಗೆರೆ ರಮೇಶ್ ಅವರು ಅನಿತಾ ಮತ್ತು ಮನೋಜ್ ಅವರಿಗೆ ಶುಭ ಹಾರೈಸಿದರು. “ನಾನು ಮನೋಜ್‌ಗೆ ಆಮಂತ್ರಣ ಪತ್ರಿಕೆಯಲ್ಲಿ ಮೊದಲು ಅನಿತಾ ಹೆಸರು ಇದ್ದಿದ್ದರೆ ಡಬಲ್ ಕಂಗ್ರಾಜುಲೇಷನ್ ಹೇಳುತ್ತಿದ್ದೆ” ಎಂದು ಹಾಸ್ಯಭರಿತವಾಗಿ ಹೇಳಿದರು. ಇಂತಹ ಮದುವೆಗಳು ಹೆಚ್ಚಾಗಬೇಕು ಎಂಬ ಆಶಯ ಮತ್ತು ಕನಸು ನಮ್ಮೆಲ್ಲರದ್ದು ಎಂದ ಅವರು, ಆಶಯಗಳು ಯಾವಾಗಲೂ ಕೈಗೂಡುವುದಿಲ್ಲ, ಕನಸು ಯಾವಾಗಲೂ ನನಸಾಗುವುದಿಲ್ಲ ಎಂದರು.

ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾ, “53 ವರ್ಷಗಳ ಹಿಂದೆ, ಅಂದರೆ 1973ರಲ್ಲಿ ನನ್ನ ಮದುವೆಯಾಗಿತ್ತು. ಅದು ಸರಳ ಮದುವೆ ಆಗಿರಲಿಲ್ಲ, ಸಾಂಪ್ರದಾಯಿಕ ಮದುವೆಯಾಗಿತ್ತು. ಆದರೆ, ಆ ನಂತರ ನಾನು ಹೆಚ್ಚು ಅಸಾಂಪ್ರದಾಯಿಕನಾದೆ” ಎಂದರು.

“ನನ್ನ ಮದುವೆ ನನ್ನದೇ ಜಾತಿಯಲ್ಲಿ ತುಂಬಾ ಸಂಪ್ರದಾಯಬದ್ಧವಾಗಿ ನಡೆದಿತ್ತು. ಮದುವೆಯ ಮುಂಚೆಯೇ ನಾನು ಅಸಾಂಪ್ರದಾಯಿಕ ವ್ಯಕ್ತಿಯಾಗಿದ್ದೆ, ಆದರೆ ಮದುವೆಯಾದ ನಂತರ ಇನ್ನೂ ಹೆಚ್ಚು ಹೆಚ್ಚು ಸಂಪ್ರದಾಯ ವಿರೋಧಿಯಾದೆ. ಆ ನೆನಪು ಏನೂ ಕೆಟ್ಟ ನೆನಪಲ್ಲ. ಆಗ ನಾವು ಜೊತೆಯಾದೆವು, ಈಗಲೂ ಜಗಳವಾಡಿಲ್ಲ, ಆರಾಮವಾಗಿ ಇದ್ದೇವೆ. ನನ್ನ ಮಕ್ಕಳು ಕೂಡ ಸುಖವಾಗಿದ್ದಾರೆ” ಎಂದು ಹೇಳಿದರು.

ಈ ಮೂಲಕ, ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಮದುವೆಗಳ ನಡುವಿನ ವೈರುಧ್ಯವನ್ನು ಅವರು ವಿವರಿಸಿದರು.

ಯುವಜನರಿಗೆ ಸಾಧ್ಯವಾದರೆ, ಈ ರೀತಿಯ ಮದುವೆಯಾಗಿ ಕೆ.ಎಲ್. ಅಶೋಕ್ ಹೇಳಿದಂತಹ ಮಹಾನ್ ನಷ್ಟವನ್ನು ತಪ್ಪಿಸಬೇಕು. ಒಂದು ಮಾದರಿಯಾದ ಮದುವೆಯಾಗಿ, ಮಾದರಿಯಾಗಿ ಬಾಳಿ ಎಂದು ಹೇಳುತ್ತೇನೆ ಎಂದು ಕರೆ ನೀಡಿದರು.

ಕೊನೆಯಲ್ಲಿ ಮದುಮಕ್ಕಳಿಗೆ, “ಬದುಕಿನ ಹೋರಾಟವನ್ನು ಮುಂದುವರೆಸಿ, ಸಮಾಜದಲ್ಲಿರುವ ಕೆಟ್ಟ ಶಕ್ತಿಗಳ ವಿರುದ್ಧ ಹೋರಾಡಿ. ನಿಮ್ಮಗಳ ವಿರುದ್ಧವಲ್ಲ. ಯಾವಾಗಲೂ ಜಗಳವಾಡಬೇಡಿ” ಎಂದು ನುಡಿದರು.

ಡಾ. ವಿಜಯಮ್ಮ ಅವರ ಅನುಭವದ ಮಾತು

ಹಿರಿಯ ಪತ್ರಕರ್ತೆ ಮತ್ತು ಹೋರಾಟಗಾರ್ತಿ ಡಾ. ವಿಜಯಮ್ಮ ಅವರು ಅನಿತಾ-ಮನೋಜ್ ಅವರಿಗೆ ಶುಭಾಶಯ ಕೋರಿದರು. “ಈ ಬಗೆಯ ಮದುವೆಗಳು ನನಗೆ ಹೊಸದಲ್ಲ, ನಾನು ಸಾಕಷ್ಟು ಮದುವೆಗಳನ್ನು ಮಾಡಿಸಿದ್ದೇನೆ ಮತ್ತು ನೋಡಿದ್ದೇನೆ” ಎಂದರು. ಅವರು ಆಡಂಬರದ ಮದುವೆಗಳಿಂದ ಜಿಗುಪ್ಸೆ ಹುಟ್ಟುತ್ತದೆ ಎಂದು ಹೇಳುತ್ತಾ, ಇಂತಹ ಸರಳ ಮದುವೆಗಳಿಂದ ಸುಖ ಮತ್ತು ಶಾಂತಿ ಸಿಗುತ್ತದೆ ಎಂಬ ಆಶಾಭಾವನೆ ಇರುವುದರಿಂದ ಇವುಗಳನ್ನು ನಾವು ಒಪ್ಪಿಕೊಳ್ಳಬೇಕಿದೆ ಎಂದರು.

“ಅನಿತಾ ಮತ್ತು ಮನೋಜ್ ಹೋರಾಟಗಳಲ್ಲಿದ್ದು, ಬದುಕಿನ ಹೋರಾಟದಲ್ಲೂ ಒಂದಾಗಿದ್ದಾರೆ. ಬದುಕು ಒಂದು ಹೋರಾಟವೇ ಆಗಿದೆ. ಎಲ್ಲವೂ ಸುಖಮಯವಾಗಿ, ಶಾಂತವಾಗಿ ಇರುವುದಿಲ್ಲ. ಎಲ್ಲವನ್ನೂ ಈಜಿಕೊಂಡು ಹೊರಬರಲು ಎರಡು ಜೀವಗಳು ಒಟ್ಟಾಗಿ, ಪರಸ್ಪರ ಪೂರಕವಾಗಿ ನಿಂತಾಗ ಮಾತ್ರ ಸಾಧ್ಯವಾಗುತ್ತದೆ. ಇದು ನನ್ನ ಅನುಭವದ ಮಾತು” ಎಂದರು.

“ಮದುವೆಯಾಗುವವರೆಗೆ ಸ್ನೇಹ ಚೆನ್ನಾಗಿರುತ್ತದೆ, ಆದರೆ ಗಂಡ-ಹೆಂಡತಿ ಎಂಬ ಪದ ಬಂದ ತಕ್ಷಣ ಯಾರೋ ಒಬ್ಬರು ‘ನನ್ನದು ಅಧಿಕಾರ’ ಎನ್ನುತ್ತಾರೆ. ಆದರೆ ಮದುವೆ ಎನ್ನುವುದು ಅಧಿಕಾರವೂ ಅಲ್ಲ, ಹಕ್ಕೂ ಅಲ್ಲ. ಅವರವರ ಬದುಕನ್ನು ಅವರು ಚೆನ್ನಾಗಿ ರೂಪಿಸಿಕೊಳ್ಳಬೇಕು ಮತ್ತು ಒಬ್ಬರಿಗೊಬ್ಬರು ಗೌರವವನ್ನು ಕೊಡಬೇಕು” ಎಂದು ಸಲಹೆ ನೀಡಿದರು.

“ಒಂಟಿ ಹೆಜ್ಜೆಯನ್ನಲ್ಲ, ಜಂಟಿಯಾಗಿ ನಡೆಯುತ್ತೇವೆ, ಮನಸ್ಸುಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಚರ್ಚೆಯ ಮೂಲಕ ಸರಿಪಡಿಸಿಕೊಳ್ಳುತ್ತೇವೆ ಎಂಬ ಗಟ್ಟಿಯಾದ ನಿರ್ಧಾರವನ್ನು ತೆಗೆದುಕೊಳ್ಳಬೇಕು” ಎಂದು ಅವರು ಒತ್ತಿ ಹೇಳಿದರು.

ಇದೇ ಸಂದರ್ಭದಲ್ಲಿ ಕುವೆಂಪು ಅವರ ಜೀವನದ ಒಂದು ಪ್ರಸಂಗವನ್ನು ನೆನಪಿಸಿಕೊಂಡರು. “ಒಮ್ಮೆ ಕುವೆಂಪು ಅವರಿಗೆ ಕನಸು ಬಿದ್ದು, ಅವರು ಸ್ವರ್ಗದ ಬಾಗಿಲ ಬಳಿ ಹೋಗುತ್ತಾರೆ. ‘ನಾನು ಕುವೆಂಪು’ ಎಂದರೂ ಬಾಗಿಲು ತೆರೆಯುವುದಿಲ್ಲ. ‘ನಾನು ಪುಟ್ಟಪ್ಪ’ ಎಂದರೂ ಇಲ್ಲ. ‘ನಾನು ರಾಷ್ಟ್ರಕವಿ’ ಎಂದರೂ ಇಲ್ಲ. ಕೊನೆಗೆ ‘ನಾನು ಹೇಮಿಯ ಗಂಡ’ ಎಂದಾಗ ಬಾಗಿಲು ತೆರೆಯುತ್ತದೆ” ಎಂದು ವಿವರಿಸಿದರು. “ಇದು ಕುವೆಂಪು ಅವರ ಕಂಡ ಬದುಕು ಮತ್ತು ತನ್ನ ಹೆಂಡತಿಗೆ ಅವರು ಕೊಟ್ಟ ಮರ್ಯಾದೆ. ಬದುಕಿನೊಳಗೆ ಒಬ್ಬರಿಗೊಬ್ಬರು ಹೆತ್ತವರ ಸ್ಥಾನವನ್ನು ತುಂಬಿಕೊಳ್ಳಬೇಕು. ಕಷ್ಟ-ಸುಖ ಬಂದಾಗ ಮಾತುಕತೆಯ ಮೂಲಕ ಸರಿಪಡಿಸಿಕೊಳ್ಳಬೇಕು. ಚಳವಳಿಯಲ್ಲಿ ಮಾತನಾಡುವುದು ಒಂದು, ಮನೆಯಲ್ಲಿರುವುದು ಒಂದು ಆಗಬಾರದು” ಎಂದು ಸಲಹೆ ನೀಡಿದರು.

ವಧು-ವರರ ವಿನಮ್ರ ನುಡಿಗಳು

ಮದುಮಗಳು ಅನಿತಾ, ತಮ್ಮ ವಿವಾಹಕ್ಕೆ ಸಾಕ್ಷಿಯಾದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿ, ಎಲ್ಲರೂ ಊಟ ಮಾಡಿಕೊಂಡು ಹೋಗಬೇಕೆಂದು ವಿನಂತಿಸಿದರು.

ಮದುಮಗ ಮನೋಜ್, “ಹಿರಿಯರು ಹೇಳಿದ ಹಿತವಚನಗಳನ್ನು ನಾನು ಮನಸ್ಸಿನಲ್ಲಿ ಇಟ್ಟುಕೊಂಡು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳುತ್ತೇನೆ ಎಂದು ಮತ್ತೊಮ್ಮೆ ಪ್ರತಿಜ್ಞೆ ಮಾಡುತ್ತೇನೆ” ಎಂದು ಹೇಳಿ, ಬಂದಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಈ ಸರಳ ವಿವಾಹ ಸಮಾರಂಭದಲ್ಲಿ ಶಿವಸುಂದರ್, ಇಂದೂಧರ ಹೊನ್ನಾಪುರ, ಕೆ.ಎಲ್.ಅಶೋಕ್, ಕಾರಳ್ಳಿ ಶ್ರೀನಿವಾಸ್, ಬಸವರಾಜ್ ಕೌತಾಳ್, ಶ್ರೀಗೌರಿ, ಮಲ್ಲಿಗೆ, ಶ್ರಮಿಕ ಶಕ್ತಿಯ ಬಸವರಾಜ್, ವಿದ್ಯಾರ್ಥಿ ಸಂಘಟನೆಯ ಸರೋವರ್ ಬೆಂಕಿಕೆರೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ, ನವ ದಂಪತಿಗೆ ಶುಭ ಹಾರೈಸಿದರು. ಈ ಮದುವೆಯು ಕೇವಲ ಒಂದು ಕುಟುಂಬದ ಒಗ್ಗೂಡುವಿಕೆಯಾಗಿರದೆ, ಜಾತ್ಯತೀತ ಮತ್ತು ಪ್ರಗತಿಪರ ಚಿಂತನೆಗಳಿಗೆ ಒಂದು ಪ್ರೇರಣೆಯಾಯಿತು.

36 ಲಕ್ಷ ರೂ. ವರದಕ್ಷಿಣೆ ತರುವಂತೆ ಮಹಿಳೆಗೆ ಬೆಂಕಿ ಹಚ್ಚಿ ಕೊಂದ ಗಂಡನ ಮನೆಯವರು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಲ್ಲಿನ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...