ಜಮ್ಮು ಕಾಶ್ಮೀರದಲ್ಲಿ ಹೆಚ್ಚಿನ ಸಂಖ್ಯೆಯ ಅರೆಸೈನಿಕ ಪಡೆಗಳು ಸಂಚಾರ ಮಾಡುತ್ತಿದ್ದು, ನಾಗರಿಕರಲ್ಲಿ ಆತಂಕದ ಕರಿನೆರಳು ಹೆಚ್ಚುತ್ತಿವೆ. 2019 ರ ಆಗಸ್ಟ್ ತಿಂಗಳಲ್ಲಿ ರಾಜ್ಯದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಘಟನೆಯ ರೀತಿಯದ್ದೇ ಏನೊ ಮತ್ತೆ ನಡೆಯಲಿದೆ ಎಂದು ಕಣಿವೆಯ ಜನರು ಸಂಶಯ ಪಡುತ್ತಿದ್ದಾರೆ ಎಂದು ವರದಿಯಾಗಿದೆ. ಹೆಚ್ಚಿನ ಅರೆಸೈನಿಕ ಪಡೆಗಳು ಉತ್ತರ ಕಾಶ್ಮೀರ ಮತ್ತು ಜಮ್ಮು ಪ್ರದೇಶದ ಕೆಲವು ಭಾಗಗಳಲ್ಲಿ ನಿಯೋಜಿಸಲಾಗಿದೆ ಎನ್ನಲಾಗಿದೆ.
ಸೈನ್ಯದ ಬೃಹತ್ ಸಂಚಾರವು ರಾಜ್ಯದಲ್ಲಿ ಮತ್ತೆ ಏನೋ ಸಂಭವಿಸಲಿದೆ ಎಂದು ಸ್ಥಳೀಯ ರಾಜಕೀಯ ನಾಯಕರೇ ಅನುಮಾನ ಪಟ್ಟಿದ್ದಾರೆ. 2019 ರಲ್ಲಿ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಬಂಧನಕ್ಕೊಳಗಾದ ಕೆಲವು ರಾಜಕೀಯ ನಾಯಕರನ್ನು ಮತ್ತೆ ಬಂಧಿಸಬಹುದು ಎಂದು ಆಂತಕ ವ್ಯಕ್ತಪಡಿಸಿದ್ದಾರೆ.
ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ಮೊದಲು ಕೂಡಾ ಜಮ್ಮು ಕಾಶ್ಮೀರದಲ್ಲಿ ಇದೇ ರೀತಿಯಲ್ಲಿ ಸೈನ್ಯವನ್ನು ನಿಯೋಜಿಸಲಾಗಿತ್ತು.
ಇದನ್ನೂ ಓದಿ: ಕೇರಳ ಮೂಲದ ನರ್ಸ್ಗಳನ್ನು ಹಿಂದಿಯಲ್ಲಿ ಮಾತನಾಡುವಂತೆ ಒತ್ತಾಯಿಸಿದ ದೆಹಲಿ ಆಸ್ಪತ್ರೆ
ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಸಲಹೆಗಾರ ತನ್ವೀರ್ ಸಿದ್ದೀಕಿ ಅವರು ಕಣಿವೆಯಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅವರು ತಮ್ಮ ಟ್ವೀಟ್ನಲ್ಲಿ, “ವದಂತಿಗಳು ದಟ್ಟವಾಗಿ ಮತ್ತು ವೇಗವಾಗಿ ಹಬ್ಬುತ್ತಿದೆ, ನಾವು ಎರಡನೆ ಸೆಮಿಸ್ಟರ್ಗೆ ಸಿದ್ದವಾಗಬೇಕೆ? ಶಾಸಕರ ಹಾಸ್ಟೆಲ್ 2.0 ? ” ಎಂದು ಪ್ರಶ್ನಿಸಿದ್ದಾರೆ.
While rumours are flying thick and fast – should we be ready for second semester?
MLA’s hostel 2.0? ?
— Tanvir Sadiq (@tanvirsadiq) June 6, 2021
ಪೀಪಲ್ಸ್ ಕಾನ್ಫರೆನ್ಸ್ ಅಧ್ಯಕ್ಷ, ರಾಜ್ಯದ ಮಾಜಿ ಸಚಿವರು ಆಗಿರುವ ಸಜ್ಜಾದ್ ಲೋನ್ ಅವರು ಕೂಡಾ ರಾಜ್ಯದಲ್ಲಿ ಹರಡುತ್ತಿರುವ ವದಂತಿಗಳ ಬಗ್ಗೆ ಆತಂಕ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
We want to believe even in rumours rumoured to be rumours.
We love rumours don’t we. Last few days has been all about rumours and conspiracies. They say don’t believe a rumour to b true until govt actually denies it.— Sajad Lone (@sajadlone) June 7, 2021
ಆದಾಗ್ಯೂ, ಕಣಿವೆಯಲ್ಲಿ ಸೈನ್ಯದ ಸಂಚಾರದಿಂದಾಗಿ ಹರಡುತ್ತಿರುವ ಈ ಎಲ್ಲಾ ವದಂತಿಗಳನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ. ಜಮ್ಮು ಕಾಶ್ಮೀರಕ್ಕೆ ಆಗಮಿಸುತ್ತಿರುವ ಪಡೆಗಳು ಪಂಚರಾಜ್ಯ ವಿಧಾನಸಭಾ ಚುನಾವಣೆಯ ಕರ್ತವ್ಯಕ್ಕೆ ನಿಯೋಜನೆಗೊಂಡವರಾಗಿದ್ದು, ಇದೀಗ ಕರ್ತವ್ಯ ನಿರ್ವಹಿಸಿ ಹಿಂತಿರುಗುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯ ಹೇಳಿಕೆಯನ್ನು ಉಲ್ಲೇಖಿಸಿ ಎನ್ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಪಿಜ್ಜಾ, ಬರ್ಗರ್, ಸ್ಮಾರ್ಟ್ಫೋನ್ ಮನೆ ಬಾಗಿಲಿಗೆ ಬರುವುದಾದರೇ, ಪಡಿತರವೇಕೆ ಬೇಡ? ಕೇಂದ್ರಕ್ಕೆ ಕೇಜ್ರಿವಾಲ್ ಪ್ರಶ್ನೆ
“ಈ ಪಡೆಗಳು ಇತ್ತೀಚೆಗೆ ಚುನಾವಣೆ ನಡೆದ ರಾಜ್ಯಗಳಿಂದ ಹಿಂತಿರುಗುತ್ತಿವೆ. ಅವರನ್ನು ಮತ್ತೆ ಸೇರಿಸಿಕೊಳ್ಳಲಾಗುತ್ತಿದೆ. ಇದು ಹೊಸ ನಿಯೋಜನೆಯಲ್ಲ” ಎಂದು ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ವಿಜಯ್ ಕುಮಾರ್ ಹೇಳಿದ್ದಾರೆ.
“ಜಮ್ಮು ಕಾಶ್ಮೀರದ ಅರೆಸೈನಿಕ ಪಡೆಗಳ ಸುಮಾರು 200 ತುಕಡಿಗಳು ವಿಧಾನಸಭಾ ಚುನಾವಣೆಗಾಗಿ ರಾಜ್ಯಗಳಿಗೆ ಕಳುಹಿಸಲಾಗಿತ್ತು. ಅದರಲ್ಲಿ ಐವತ್ತು ತುಕಡಿಗಳು ಒಂದು ತಿಂಗಳ ಹಿಂದೆ ಮರಳಿದ್ದವು ಮತ್ತು ಉಳಿದವುಗಳು ಈಗ ಮರಳಿ ಬರುತ್ತಿವೆ” ಎಂದು ಹೇಳಿದ್ದಾರೆ.
2019 ಆಗಸ್ಟ್ ತಿಂಗಳು ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಮೊದಲು ಕೇಂದ್ರ ಅರೆಸೈನಿಕ ಪಡೆಗಳ ಕನಿಷ್ಠ 800 ಹೆಚ್ಚುವರಿ ತುಕಡಿಗಳನ್ನು ನಿಯೋಜಿಸಲಾಗಿತ್ತು. ಆದರೆ ಕಳೆದ ವರ್ಷದ ಆರಂಭದಲ್ಲಿ, ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ಪ್ರತಿಭಟನೆಗಳು ನಡೆದಾಗ 100 ತುಕಡಿಗಳನ್ನು ಅಲ್ಲಿಂದ ದೇಶದ ಇತರ ಭಾಗಗಳಿಗೆ ಕಳುಹಿಸಲಾಯಿತು.
ಇದನ್ನೂ ಓದಿ: ಸುಸ್ಥಿರ ಅಭಿವೃದ್ಧಿ ಪಟ್ಟಿಯಲ್ಲಿ ಮತ್ತೆರಡು ಸ್ಥಾನ ಕುಸಿದ ಭಾರತ: ಬಾಂಗ್ಲಾ, ನೇಪಾಳ ಶ್ರೀಲಂಕಾ, ಭೂತಾನ್ಗಳಿಗಿಂತ ಹಿಂದೆ