Homeಮುಖಪುಟಈ ಮಾಧ್ಯಮಗಳಿಗೆ ’ದೊಡ್ಡರೋಗ’ ಬಂದಿದೆಯೇ? ಅಂಕೆ ತಪ್ಪಿದ ಅಭಿವ್ಯಕ್ತಿಯೇ ನಾಗರಿಕತೆಯ ತಿರುಗು ಚಕ್ರಕ್ಕೆ ತಡೆದಿಮ್ಮೆ! 

ಈ ಮಾಧ್ಯಮಗಳಿಗೆ ’ದೊಡ್ಡರೋಗ’ ಬಂದಿದೆಯೇ? ಅಂಕೆ ತಪ್ಪಿದ ಅಭಿವ್ಯಕ್ತಿಯೇ ನಾಗರಿಕತೆಯ ತಿರುಗು ಚಕ್ರಕ್ಕೆ ತಡೆದಿಮ್ಮೆ! 

ಇದೆಂತಹ ವಿಚಿತ್ರ ರೋಗವೆಂದರೆ ರೋಗದಿಂದ ಬಳಲುತ್ತಿರುವವನಿಗಿಂತಲೂ ಅವನ ಸುತ್ತು ಮುತ್ತಲಿನವರಿಗೆ ಮಾನಸಿಕ ನೋವು, ಮುಜುಗರವನ್ನು ಉಂಟು ಮಾಡುತ್ತದೆ. 

- Advertisement -
- Advertisement -

1949 ನವೆಂಬರ್ 25 ಸಂವಿಧಾನ ರಚನಾಸಭೆಯ ಕಡೆಯ ದಿನದ ಚರ್ಚೆ ಅತ್ಯಂತ ಮಹತ್ವಪೂರ್ಣವಾದದ್ದು. “ಧರ್ಮದೆಡಗಿನ ಭಕ್ತಿಯು ಮುಕ್ತಿಯನ್ನು ತಂದು ಕೊಡಬಹುದು. ಆದರೆ ರಾಜಕೀಯ ಭಕ್ತಿ, ವ್ಯಕ್ತಿ ಪೂಜೆ ಪ್ರಜಾಪ್ರಭುತ್ವದ ಕುಸಿತಕ್ಕೆ ಕಾರಣವಾಗುತ್ತದೆ ಮತ್ತು ಕ್ರಮೇಣ ನಿರಂಕುಶ ಆಡಳಿತಕ್ಕೆ ಎಡೆ ಮಾಡಿಕೊಡುತ್ತದೆ”. ಹಾಗೆಯೇ ಮಾಧ್ಯಮಗಳ ಕುರಿತು ವಿಶೇಷವಾಗಿ ಹೇಳಬೇಕಾದ್ದು ಏನೂ ಇಲ್ಲ. ಸಾಮಾನ್ಯ ಪ್ರಜೆಗೆ ಲಭಿಸುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳು ಮಾಧ್ಯಮಕ್ಕೂ ಅನ್ವಯವಾಗುತ್ತದೆ. ಸಂವಿಧಾನದ ವಿಧಿ 19(2) ರಲ್ಲಿ ಕಾಣಿಸಿರುವ ನಿಭಂದನೆಗಳು ಎಲ್ಲರಿಗೂ ಅನ್ವಯವಾಗಲಿವೆ ಎಂಬ ಮಾತುಗಳನ್ನು ಅಂಬೇಡ್ಕರ್ ಅವರು ಹೇಳಿದ್ದರು. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ಮತ್ತು ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿ ಮತ್ತು ಅವರ ಸಾಗಬೇಕಾದ ಹಾದಿಯನ್ನು ಬೊಟ್ಟು ಮಾಡಿ ತೋರಿದ್ದರು.

ರಾಜಕೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳ ಕುರಿತು ಪ್ರಜೆಗಳಿಗೆ ಅಪಾರವಾದ ನಂಬಿಕೆಯಿದೆ. ಪ್ರಜಾಪ್ರಭುತ್ವದ ಕಾವಲು ನಾಯಿ ಎಂದೇ ಭಾವಿಸಲಾದ ಮಾಧ್ಯಮಗಳು ಬೊಗಳುವುದನ್ನು ಬಿಟ್ಟು ಆಳ್ಮೆಗಾರರ ತಲೆಕಾಯುವ ಸಾಕುನಾಯಿಯಾದರೆ ಮತ್ಯಾವ ಕಾವಲುಗಾರನನ್ನು ಹುಡುಕಿ ತರಬೇಕು. ದೇಶವೊಂದು ಕರೋನಾದಂತಹ ಅಸಾಧಾರಣ ಪಿಡುಗನ್ನು ಮಣಿಸಲು ಪ್ರಯತ್ನಿಸುವ ಸನ್ನಿವೇಶದಲ್ಲಿ ಮಾಧ್ಯಮಗಳು ತುಳಿದಿರುವ ಹಾದಿಯನ್ನು ನೋಡಿದಾಗ ಈ ಕೆಳಗಿನ ಸಂಗತಿ ನೆನಪಿಗೆ ಬರುತ್ತದೆ.

ವಯಕ್ತಿಕ ಬದುಕಿಗೋ, ಕೌಟುಂಬಿಕ ನೆಮ್ಮದಿಗೋ ಅಥವಾ ಸಾಮಾಜಿಕ ನೆಮ್ಮದಿಗೋ ಕಂಟಕನಾದವನ ಕುರಿತು ದೂಷಿಸುವಾಗ ‘ದೊಡ್ಡ ರೋಗ’ ಬಂದು ಒರಗಿ ಹೋಗಲಿ ಎಂದು ಹೇಳುವುದು ಜನಪದದಲ್ಲಿದೆ.

ಮನೆಯ ನೆಮ್ಮದಿಗೆ ಬೇಡವೆನಿಸಿದ ಸಂಗತಿಗಳನ್ನು ಎತ್ತಿ ತಲೆಬುಡವಿಲ್ಲದೇ ಚರ್ಚಿಸಿ ಆರ್ಭಟಿಸಿ ನಿತ್ಯನಿರಕವನ್ನು ಉಂಟುಮಾಡುವ  ಕುಟುಂಬದ ಸದಸ್ಯನ  ಅಥವಾ ಇತರರ ಆರ್ಭಟ ಕುರಿತು ಹೇಳುವಾಗಲೂ ಏನ್ ‘ದೊಡ್ಡ ರೋಗ’ ಇವನಿಗೆ ಎಂದು ಪ್ರಾಸಂಗಿಕವಾಗಿ ಹೇಳುವುದು ವಾಡಿಕೆಯಲ್ಲಿದೆ.

ಈ ದೊಡ್ಡ ರೋಗವೆಂದರೆ ಏನು ಎಂಬುದರ ಕುರಿತು ಜನಪದದಲ್ಲಿ ಅಧ್ಯಯನಗಳು ನೆಡದ ಬಗ್ಗೆ ಮಾಹಿತಿ ಲಭ್ಯವಿಲ್ಲ. ದೊಡ್ಡ ರೋಗವೆಂದರೆ ಮದ್ದು ಸಿಗದ, ವಾಸಿಯಾಗದ ಕಾಯಿಲೆ. ವೈದ್ಯಶಾಸ್ತ್ರ ಪರಿಣಿತರ ಅರಿವಿಗೆ ನಿಲುಕದ ಕಾಯಿಲೆ, ಅದರ ಸ್ವರೂಪವೇನು ಮತ್ತು ಉಂಟು ಮಾಡುವ ಪರಿಣಾಮಗಳೇನು ಎಂಬುದಲ್ಲ. ದೊಡ್ಡ ರೋಗವೆಂಬುದು ಪೀಡಕನ ಕೆಟ್ಟ ಮನಸ್ಥಿತಿಯನ್ನು ಸೂಚಿಸುವ ಗುಣವಾಚಕ.

ಇದೆಂತಹ ವಿಚಿತ್ರ ರೋಗವೆಂದರೆ ರೋಗದಿಂದ ಬಳಲುತ್ತಿರುವವನಿಗಿಂತಲೂ ಅವನ ಸುತ್ತು ಮುತ್ತಲಿನವರಿಗೆ ಮಾನಸಿಕ ನೋವು, ಮುಜುಗರವನ್ನು ಉಂಟು ಮಾಡುತ್ತದೆ.

ಈ ದೂಷಣೆಯ ಹಿಂದೆ ಕಂಟಕಪ್ರಾಯನಾದವನನ್ನು ಹೋಗಲಾಡಿಸುವುದಕ್ಕಿಂತಲೂ ಎದೆಯೊಳಗಿನ ಸಂಕಟವನ್ನು ಹೊರಗೆ ಹಾಕಿ ಎದೆಗೂಡನ್ನು ಹಗುರ ಮಾಡಿಕೊಳ್ಳುವ ಭಾವವೇ ಹೆಚ್ಚು. ಸಂಕಟಗಳ ಹೊರತಾಗಿಯೂ ನಮ್ಮ ಸಮಾಜ ತೊಂದರೆಗೆ ಕಾರಣನಾದ ವ್ಯಕ್ತಿಯ ಸಾವನ್ನು ಬಯಸುವುದಿಲ್ಲ. ಪೀಡಕನು ತನ್ನ ಧೋರಣೆಯನ್ನು ಬದಲಿಸಿದರೆ ಅವನನ್ನು ಮನ್ನಿಸುವ ದೊಡ್ಡ ಗುಣವೂ ಈ ಮಣ್ಣಿನೊಳಗೆ ಮಿಳಿತವಾಗಿದೆ. ಇಂತಹ ಸಾತ್ವಿಕ ಕೋಪವನ್ನು ನಮ್ಮ ಸಮಾಜವು ತಲತಲಾಂತರದಿಂದ ಸಲಹಿಕೊಂಡು ಬಂದಿದೆ.

ಈ ಮೇಲಿನದ್ದು ಕೌಟುಂಬಿಕ ಹಿನ್ನೆಲೆಯ ಚಿತ್ರಣವಾದರೆ.
ನಂಜುಪೂರಿತ ಮಾತುಗಳನ್ನಾಡಿ, ಸಮಾಜದ ನೆಮ್ಮದಿಗೆ ಧಕ್ಕೆ ತರುವ, ಟಿವಿ ನಿರೂಪಕರ, ರಾಜಕೀಯ ಮುಂದಾಳುಗಳ, ಧಾರ್ಮಿಕ ನಾಯಕರ ಚಿತ್ರಣವೇನೂ ಬೇರೆಯಲ್ಲ! ಈ ಪಾತ್ರಗಳೆಲ್ಲವೂ  ಕುಟುಂಬದ ನೆಮ್ಮದಿ ಕಲಕುವವನ ಪಾತ್ರಕ್ಕಿಂತ ಭಿನ್ನವಾಗಿಲ್ಲ. ಜನರ ಬವಣೆಗಳನ್ನು ಎತ್ತಿ ತೋರಿ ಆಳ್ಮೆಗಾರರ ಕಣ್ಣ ತೆರಸಬೇಕಾದವರೇ ಆಳ್ಮೆಗಾರರಿಗೆ ಜೋಗುಳವಾಡಿದರೆ, ಧಮನಿತರು ಯಾರ ಮೊರೆಯೋಗಬೇಕು ಎಂಬ ಪ್ರಶ್ನೆಗೆ ಉತ್ತರವಿದೆಯೇ!

ದೇಶದ ಹೊಸ್ತಿಲನ್ನು ದಾಟಿ ಒಳನುಸುಳುಕೋರನಂತೆ ಬಂದೆರಗಿದ ಸಾಂಕ್ರಾಮಿಕ ಪಿಡುಗು ಯಾವುದೇ ಮತ, ಜಾತಿ ಭೇದವಿಲ್ಲದೆ ಎಲ್ಲರ ಎದೆಗೂಡೊಳಗೆ ಸೇರಲು ಹವಣಿಸಿದೆ‌. ಇಂತಹ ವಿಷಮ ಪರಿಸ್ಥಿತಿಯಲ್ಲಿ ಒಂದೆಡೆ ಆಳ್ಮೆಗಾರರನ್ನು ಅಗತ್ಯಕ್ಕಿಂತಲೂ ಹೆಚ್ಚು ವೈಭವೀಕರಿಸಿ ಮೈಮರೆಯಲು ಬಿಡುವುದು. ಮತ್ತೊಂದೆಡೆ ಸಾಂಕ್ರಾಮಿಕ ರೋಗದ ಸೊಂಕಿಗೆ ಒಂದು ಜನಾಂಗವನ್ನು ತಳಕು ಹಾಕುವುದು.

ಧರ್ಮ, ಜನಾಂಗ, ಜಾತಿ, ಲಿಂಗಾಧಾರಿತ ದೂಷಣೆಗಳೂ ಮತ್ತು ತಾರತಮ್ಯಗಳು ಬೆಳಕಿಗೆ ಬಂದೊಡನೆಯೇ ಸಂವಿಧಾನದ ಆಶಯಗಳನ್ನು ಉಳಿಸಿಕೊಳ್ಳಲು ಆಳ್ಮೆಗಾರರರು ತಮ್ಮ ಅಧಿಕಾರವನ್ನು ಬಳಸಿ ಪ್ರಜಾಸತ್ತೆಯ ಸಾರ್ವಭೌಮತೆಯನ್ನು ಎತ್ತಿ ಹಿಡಿಯಬೇಕು. ಕಷ್ಟ ಕಾಲದಲ್ಲಿ ದನಿಯಿಲ್ಲದವರ, ಧಮನಿತರ ಪರವಾಗಿ ನಿಲ್ಲದೇ ಹೋಗುವ ಆಳ್ಮೆಗಾರರ ಸಾಮಾಜಿಕ ಬದ್ಧತೆಯೂ ಪ್ರಶ್ನಾರ್ಹವಾದದ್ದು.

ಇಂತಹ ಮನಸ್ಥಿತಿಯನ್ನು ಕುರಿತು ನೆನದಾಗಲೆಲ್ಲ
ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದಡೆ ನಿಲಲುಬಾರದು.
ಏರಿ ನೀರುಂಬಡೆ
ಬೇಲಿ ಕೆಯ್ಯ ಮೇವಡೆ
ನಾರಿ ತನ್ನ ಮನೆಯಲ್ಲಿ ಕಳುವಡೆ
ತಾಯವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ
ಎಂಬ ಅಣ್ಣನ ಕುಹಕ ನೆನಪಿಗೆ ಬರುತ್ತದೆ.

ವಸ್ತುನಿಷ್ಠ ಮತ್ತು ರಚನಾತ್ಮಕ ವಿಮರ್ಶೆಯನ್ನು ಕೈಬಿಟ್ಟು ಸರ್ಕಾರದ ಧ್ವನಿವರ್ಧಕವಾದ ಮಾಧ್ಯಮಗಳಿಗೆ ಅಂದು ಸಂವಿಧಾನ ರಚನಾ ಸಭೆಯಲ್ಲಿ ಉಲ್ಲೇಖಿಸಿದಂತೆ “ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳ ಸ್ವೇಚ್ಛಾಚಾರದ ಬಳಕೆ ಒಳಿತಿಗಿಂತಲೂ ಕೆಡುಕನ್ನು ಮಾಡಬಲ್ಲದು ಎಂಬ ಅಂಬೇಡ್ಕರ್ ಅವರ ನಿಲುವು ಎಲ್ಲಾ ಕಾಲಕ್ಕೂ ಸಲ್ಲುತ್ತದೆ. ತನ್ನ ಪಾಲಿನ ನೈತಿಕ ಹೊಣೆಗಾರಿಕೆಯನ್ನು ಮನಗಾಣದೇ, ಅಂಕೆ ಮೀರಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳನ್ನು ಬಳಸುವ ಮಾಧ್ಯಮಗಳು ಮತ್ತು ಪ್ರಜೆಗಳ ಮಹಾಮೌನವೇ ಪ್ರಜಾಪ್ರಭುತ್ವದ ಮಹಾಪಾತಕಿಗಳು. ಇದನ್ನು  ಅರಿಯದೇ ಹೋದರೆ ನಾವೆಲ್ಲರೂ ನಾಗರಿಕತೆಯ ತಿರುಗು ಚಕ್ರಕ್ಕೆ ತಡೆದಿಮ್ಮೆಯಾಗಬಲ್ಲೆವು! .

ಕೆ.ಬಿ.ಕೆ.ಸ್ವಾಮಿ

(ಲೇಖಕರು ಯುವ ಬರಹಗಾರರು. ಅಭಿಪ್ರಾಯಗಳು ವಯಕ್ತಿಕವಾದವುಗಳು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...