HomeUncategorizedಸತ್ಯವನ್ನೇ ಹೇಳುತ್ತಿದ್ದೇನೆ, ಮುಖ್ಯಮಂತ್ರಿಗಳೇ, ನೀವು ಒಳ್ಳೇವ್ರು..!!

ಸತ್ಯವನ್ನೇ ಹೇಳುತ್ತಿದ್ದೇನೆ, ಮುಖ್ಯಮಂತ್ರಿಗಳೇ, ನೀವು ಒಳ್ಳೇವ್ರು..!!

ರಾಜ್ಯದ ಮುಖ್ಯಮಂತ್ರಿಯನ್ನು ತಮ್ಮ ಜಾತಿಯ ಬೆಂಬಲದಿಂದ ಅವಮಾನಿಸಿದ್ದು ತೀರ ಖಂಡನೀಯ. ಇದು ಪ್ರಜಾಪ್ರಭುತ್ವದ ವಿರೋಧ ನಡೆಯೂ ಕೂಡ

- Advertisement -
- Advertisement -

ರಾಜ್ಯದ ನೂತನ ಜಗದ್ಗುರು ಪೀಠದ ಸ್ವಾಮೀಜಿಯೊಬ್ಬರು ರಾಜ್ಯದ ಮುಖ್ಯಮಂತ್ರಿಗಳಿಗೆ ಸಾವಿರಾರು ಜನತೆ ಸೇರಿರುವ ಬಹಿರಂಗ ಸಭೆಯ ವೇದಿಕೆ ಮೇಲೆ ಅಧಿಕಾರವರ್ಗವನ್ನು ‘ಅವಾಜ್’ ಹಾಕುವ ಮೂಲಕ ಅವಾಂತರ ಸೃಷ್ಟಿಸಿಕೊಂಡ‌ ಘಟನೆ ಒಂದು ರಾಜಕೀಯ‌ ವಲಯದಲ್ಲಿ ಭಾರಿ ಚರ್ಚೆಗೆ ಒಳಪಟ್ಟಿದೆ.

“ಮುಖ್ಯಮಂತ್ರಿಗಳೇ , ನೀವು ಒಳ್ಳೇವ್ರು…!
ಪಂಚಮಸಾಲಿ ಸಮುದಾಯದ ಪ್ರಶ್ನಾತೀತ ನಾಯಕ ಮುರುಗೇಶ್ ನಿರಾಣಿಗೆ ಮಂತ್ರಿ ಸ್ಥಾನ ಕೊಡಲೇಬೇಕು..! ನಿಮ್ಮ ಬೆನ್ನಿಗೆ ಬೆನ್ನೆಲುಬಾಗಿ ನಿಂತು ನಿಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡಿರುವ ಮುರುಗೇಶ್ ನಿರಾಣಿಗೆ ಕೈ ಬಿಡ್ಬೇಡಿ..!
ನಮ್ಮ ಸಮುದಾಯದ 13 ಜನ ಶಾಸಕರಲ್ಲಿ ಕನಿಷ್ಠ
4 ಜನರಿಗೆ ಮಂತ್ರಿಸ್ಥಾನ ಕೊಡಲೇಬೇಕು..!
ಒಂದು ವೇಳ ನೀವು ಪಂಚಮಸಾಲಿ ಸಮುದಾಯದ ಕೈಬಿಟ್ಟರೇ ಅಖಂಡ ಪಂಚಮಸಾಲಿ ಸಮುದಾಯ ನಿಮ್ಮನ್ನು  ಕೈಬಿಡುತ್ತೆ…!!”

ಎಂದು ಪಕ್ಕದ ಕುರ್ಚಿಯ ಮೇಲೆ ಕುಳಿತ ರಾಜ್ಯದ ಮುಖ್ಯಮಂತ್ರಿಗಳಿಗೆ ಸಮುದಾಯಪರ ಬ್ಯಾಟಿಂಗ್ ನಡೆಸಿದ ಸ್ವಾಮೀಜಿಯೊಬ್ಬರ ‘ಬೆದರಿಕೆ’ಯ ಮಾತುಗಳು ಯಡಿಯೂರಪ್ಪನವರ ಕೆಂಡಾಮಂಡಲವಾಗಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಪರ – ವಿರೋಧ ವ್ಯಕ್ತವಾಗುತ್ತಿದೆ.

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ‌‌ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಪೀಠಾಧಿಪತಿ ವಚನಾನಂದ ಸ್ವಾಮೀಜಿ ತಮ್ಮ ನಾಯಕರ ಏಳಿಗೆ, ಹಿತಾಸಕ್ತಿ ಬಯಸಿ ರಾಜಕೀಯ ತೆವಲು ತೀರಿಸಿಕೊಳ್ಳಲು ಸಮುದಾಯವನ್ನು ಬಳಸಿಕೊಳ್ಳಲು ಮುಂದಾದರು.

ಅಷ್ಟಕ್ಕೂ ಈ ಸ್ವಾಮೀಜಿ ಮಠಾಧೀಶರೋ ಅಥವಾ ರಾಜಕಾರಣಿಯೋ ಎಂಬ ಸಂಶಯ ರಾಜ್ಯದ ಜನತೆಗೆ ಗಾಢವಾಗಿ ಕಾಡುತ್ತದೆ. ರಾಜ್ಯದ ಮುಖ್ಯಮಂತ್ರಿಗಳ ಜೊತೆ ಹೇಗೆ ಮಾತಾಡಬೇಕೆನ್ನುವ ಕನಿಷ್ಠ ನೈತಿಕತೆ ಇಲ್ಲದವರು ಅದೇಗೆ ಸ್ವಾಮೀಜಿಯಾದರು?
ಇದು ಕಾವಿಯ ಮಹಿಮೆಯೋ ಅಥವಾ ತಮ್ಮ ಸಮುದಾಯ ಬೆಂಬಲದ ”ಅಹಂ’ ಇದಕ್ಕೆ ಮೂಲ ಕಾರಣ ಎನ್ನಬಹುದು. ಈ ರೀತಿಯ ‘ಪಾಲು’ ಕೇಳುವ ಧೈರ್ಯ ಬಹುತೇಕ ಕಾವಿಧಾರಿಗಳು ಕರಗತ ಮಾಡಿಕೊಂಡಿದ್ದಾರೆ. ಇದು ಕಾವಿ – ಖಾದಿಗಳು ಪರಸ್ಪರ ಕೊಂಡುಕೊಳ್ಳುವಿಕೆ ಪ್ರಕ್ರಿಯೆಯಾಗಿದೆ.

ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಮಠಾಧೀಶರಾದ ಇವರು ಅದೆಷ್ಟು ವಚನ ಓದಿದ್ದಾರೋ ಗೊತ್ತಿಲ್ಲ, ಬಹುಶಃ ಇವರು ವಚನ ಸಾಹಿತ್ಯ ಆಳವಾಗಿ ಅಧ್ಯಯನ ಕೈಗೊಂಡಿದರೆ
ಈ ರೀತಿ ಜಾತಿವಾದಿ ರಾಜಕೀಯ ಹಾಗೂ ರಾಜಕಾರಣಿಗಳ ಪರ ನಿಂತು ಅಂಗಲಾಚುತ್ತಿರಲಿಲ್ಲ ಅನ್ಸುತ್ತೆ. ಕೇವಲ ಪಂಚಮಸಾಲಿ ಸಮುದಾಯಕ್ಕೆ ಮಾತ್ರ  ಸೀಮಿತ ಎಂದು ಮಂತ್ರಿ ಸ್ಥಾನ ಕೊಡಬೇಕೆಂದು ಬೆದರಿಸುವ ಈ ಸ್ವಾಮೀಜಿಗಳು ಲಿಂಗಾಯತ ಮಠದ ಸ್ವಾಮೀಜಿ ಎಂದು ಹೇಳಲು ಸಾಧ್ಯವೇ?

ಬಸವ ತತ್ವ ಸಿದ್ಧಾಂತ‌ ಸೂಕ್ಷ್ಮವಾಗಿ  ಅರ್ಥೈಸಿಕೊಳ್ಳದವರು ಮಠಾಧೀಶರಾಗಲು
ಅರ್ಹರೇ? ‘ಲಿಂಗಾಯತ’ ಎಂಬುದು ಜಾತಿಯಲ್ಲ,
ಜಾತಿ ಮತ ಪಂಥ ಹಾಗೂ ಲಿಂಗರಹಿತವಾದ ‘
ಸಕಲ ಜೀವಾತ್ಮರಿಗೂ ಲೇಸು ಬಯಸುವ’
ಮಾನವೀಯತೆ ನೆಲೆಗಟ್ಟಿನ‌ ಅದೊಂದು
ಧರ್ಮ. ಆದರೆ ಹಿರಿಯ‌ ಮಠಾಧೀಶರ ಬುದ್ಧಿವಂತಿಕೆಯಿಂದ ಲಿಂಗಾಯತ ಎನ್ನುವ ಮೂಲ ಪರಿಕಲ್ಪನೆ ಮರೆಮಾಚಿಸುವ ಮೂಲಕ ಜಾತಿಗೊಂದು ಮಠ ಸ್ಥಾಪಿಸಿದರು. ಅಂತಹ ಮಠಗಳಿಗೆ ಜಾತಿಗೊಬ್ಬ ಮಠಾಧೀಶರನ್ನು ನೇಮಿಸುವ ಮೂಲಕ ಲಿಂಗಾಯತ ಧರ್ಮವನ್ನು ವೈದಿಕ ಧರ್ಮದ ಭಾಗವಾಗಿ ಗುರುತಿಸಿದರು! ಇಂತಹ ಪೀಠಗಳಲ್ಲಿ ಪಂಚಮಸಾಲಿ ಕೂಡ ಒಂದು. ಮಾಧ್ಯಮಗಳ ಮೂಲಕ ಜನಮಾನಸದಲ್ಲಿ ಗುರುತಿಸಿಕೊಂಡಿರುವ ಶ್ವಾಸಗುರು‌ ಸ್ವಾಮೀಜಿ ನಂತರದ ದಿನಗಳಲ್ಲಿ ಪಂಚಮಸಾಲಿ ಪೀಠಕ್ಕೆ ಹೊಸ ‘ಜಗದ್ಗುರು’ವಾಗಿ‌ ಬಡ್ತಿ ಪಡೆದರು.

ರಾಜ್ಯದ ಮುಖ್ಯಮಂತ್ರಿಯನ್ನು ತಮ್ಮ ಜಾತಿಯ ಬೆಂಬಲದಿಂದ ಅವಮಾನಿಸಿದ್ದು ತೀರ ಖಂಡನೀಯ. ಇದು ಪ್ರಜಾಪ್ರಭುತ್ವದ ವಿರೋಧ ನಡೆಯೂ ಕೂಡ. ಸಂವಿಧಾನ ಬದ್ಧವಾಗಿ ಆಯ್ಕೆಯಾದ ಪ್ರತಿನಿಧಿಗೆ ಕನಿಷ್ಠ ಗೌರವ ನೀಡದ ಸ್ವಾಮೀಜಿಯೊಬ್ಬರು ತನ್ನ ಮಠ ಹಾಗೂ ಸಮುದಾಯದಕ್ಕೆ ಸೀಮಿತವಾಗಿ ಬೇಡಿಕೆ ಮಂಡಿಸುವ ತಾಕತ್ತು ಧರ್ಮ ಕಲಿಸುವುದಿಲ್ಲ.

ಮಠಾಧೀಶರಾದವರು ‘ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ’ ಎನ್ನುವ ತತ್ವದಲ್ಲಿ ಮುನ್ನಡೆದು ಇತರರಿಗೂ ಮಾದರಿಯಾಗಬೇಕು.
ಆದರೆ ಕೂತಲ್ಲೇ ಮೈಕ್ ನಲ್ಲಿ ಅಸಭ್ಯವಾಗಿ ಏರು ದನಿಯಲ್ಲಿ ಮಾತನಾಡಿ ಮುಖ್ಯಮಂತ್ರಿಗೆ ಅವಮಾನಿಸುವ ಧೈರ್ಯ ಹೇಗೆ ಬಂದಿರಬಹುದು?

ಸರ್ಕಾರಕ್ಕೆ ತಮ್ಮ ಸಮುದಾಯ ಹಾಗೂ ಜಾತಿಗಳಿಗೆ ಸವಲತ್ತು ಕೇಳುವ ಹಕ್ಕನ್ನು ಸಂವಿಧಾನ ನೀಡಿದೆ. ಯಾವುದೇ ಸರ್ಕಾರ ಹಾಗೂ ರಾಜಕಾರಣಿಗಳಿಗೆ ಸಲಹೆ ಸೂಚನೆಗಳನ್ನು ನೀಡುವ ಅಧಿಕಾರ ಕೂಡ ಮಠಾಧೀಶರಿಗಿದೆ. ಆದರೆ ರಾಜಕೀಯ ಹಸ್ತಕ್ಷೇಪ ಮಾಡುವಂತಿಲ್ಲ. ಹಾಗೇನಾದರೂ ಮಾಡಿದರೆ ಕಾವಿ ಕಳಚಿಟ್ಪು ನೇರವಾಗಿ ರಾಜಕಾರಣ ಮಾಡಲು ಖಾದಿ ಧರಿಸಬೇಕು? ಆದರೆ ಧಾರ್ಮಿಕ ಬೋಧನೆಯ ಸ್ವಾಮೀಜಿ ತನ್ನ ಜಾತಿಯ ಒಬ್ಬರನ್ನ ಮಂತ್ರಿ ಮಾಡಲೇಬೇಕು ಎಂದು ಅಂತ ಧಮ್ಕಿ ಹಾಕಿ ಹಕ್ಕೊತ್ತಾಯ ಮೂಲಕ ಆಮಿಷ ತೋರಿಸೋದು ಕಾನೂನು ಬಾಹಿರ ಅಲ್ಲವೇ?

ಬಸವಣ್ಣರ ಕಟ್ಟಲು ಬಯಸಿದ ಲಿಂಗಾಯತ ಸಿದ್ಧಾಂತವೇ ಬೇರೆ.ಈ ಸ್ವಾಮೀಜಿಗಳ ಸಿದ್ಧಾಂತವೇ ಬೇರೆಯಾಗಿದೆ. ಮೊದಲಿಗೆ ಬಸವ ಸಿದ್ಧಾಂತದಲ್ಲಿ  ಮಠವೂ ಇಲ್ಲ, ಕಾವಿಯೂ ಇಲ್ಲ. ಆದರೆ ಜಾತಿ ಲೆಕ್ಕಾಚಾರದಲ್ಲಿ ಜಾತಿಗೊಂದು ಜಾತ್ರೆ ಮಾಡಲು ಮಠೀಯ ವ್ಯವಸ್ಥೆ ಜಾರಿಗೊಳಿಸಿದರು. ಇಂತಹ ಕಾವಿಧಾರಿಗಳ ನಡುವೆಯೂ ಸಿದ್ಧಗಂಗಾ ಶ್ರೀ, ತೋಂಟದಾರ್ಯ ಶ್ರೀಗಳು, ಭಾಲ್ಕಿಯ ಚನ್ನಬಸವ ಪಟ್ಟದೇವರ ಭಿನ್ನವಾಗಿ ಕಂಡು ಸಮನ್ವಯತೆಗೆ ಮಾದರಿಯಾದವರು.

ವಚನಾನಂದ ಶ್ರೀಗಳು ಬಹುಶಃ ತಮ್ಮ ಸಮುದಾಯದ ಏಳಿಗೆ ಬಯಸಿ ಒಂದಿಷ್ಟು ಪೂರಕ ಯೋಜನೆ ರೂಪಿಸುವಂತೆ ಸಲಹೆ ನೀಡಬಹುದಿತ್ತು. ತಮ್ಮ ಭಾಗದ ರೈತರ ಕೃಷಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲು ಆಗ್ರಹಿಸಬಹುದಿತ್ತು. ಉಳಿದ ಜಾತಿಗಳ ಬಗ್ಗೆ ನಿರ್ಲಕ್ಷ್ಯ ತೋರಿದರೂ ತಮ್ಮ ಜಾತಿಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಪ್ರತ್ಯೇಕ ಅನುದಾನವಾದರೂ ಕೇಳಿದರೆ??  ನೀವು ನಿಜವಾಗ್ಲೂ ಜನಪರ ‘ಶ್ವಾಸಗುರು’ ಎನಿಸಿಕೊಳ್ಳುತ್ತಿದ್ದೀರಿ. ಇನ್ನಾದರೂ ಬದಲಾಗಿ ‘ಇವನಮ್ಮವ’ ಎನ್ನುವ ತತ್ವ ಸಿದ್ಧಾಂತ ಮೈಗೂಡಿಸಿಕೊಳ್ಳಬೇಕಿದೆ.

ಚುನಾವಣೆಯಲ್ಲಿ ಮಠ ಪೀಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಸಲಹೆಯಂತೆ ಟಿಕೇಟ್ ಹಂಚುವ ರಾಜಕಾರಣಿಗಳು ಕಾವಿಗೆ ಹೆದರದೆ ಇರುವವರೇ?
ಜಾತಿ‌, ಧರ್ಮಾಧಾರಿತ‌ವಾಗಿ ಬದಲಾದ ಇಂದಿನ ರಾಜಕೀಯ ವ್ಯವಸ್ಥೆಯನ್ನು ಮಠ‌ – ಪೀಠಗಳೇ ನಿರ್ಣಾಯಕವಾಗಿವೆ.

ಇಂದಿನ ಬಹುತೇಕ ಎಲ್ಲಾ ಮಠಗಳು ರಾಜಕೀಯ ತಾಣಗಳಾಗಿ ಪರಿವರ್ತನೆಯಾಗಿವೆ. ಚುನಾವಣೆಗಳಲ್ಲಿ ಪಕ್ಷಗಳ ಗೆಲುವಿಗಾಗಿ ಹರಸಾಹಸಪಟ್ಟು ಬೆಂಬಲ ಘೋಷಿಸುವ ಮಠಾಧೀಪತಿಗಳು ನಂತರದ ದಿನಗಳಲ್ಲಿ ತಮ್ಮ ಕಸರತ್ತಿನ ಪಾಲು ಕೇಳದೇ ಇರಬಹುದೇ? ಧರ್ಮದ ಹೆಸರಿನಲ್ಲಿ ಜಾತಿ ರಾಜಕಾರಣ ನಡೆಸುವ ಮಠಾಧೀಶರು ತಮ್ಮ ಮಠ – ಪೀಠ ಬೆಳವಣಿಗೆಗಾಗಿ ಎಲ್ಲಾ ರೀತಿಯ ಸಾಹಸಗಳನ್ನು ಮಾಡಲು ಮುಂದಾಗುತ್ತಾರೆ.

ಮಂತ್ರಿ ಸ್ಥಾನ ತೊರೆದು ನಾಲ್ಕು ತಿಂಗಳ ಉಪವಾಸ ವನವಾಸ ಅನುಭವಿಸಿ ಮುಖ್ಯಮಂತ್ರಿ ‌ಮಾಡಿದ
17 ಶಾಸಕರಿಗೆ ಹೇಗೆ ಸಚಿವ‌ ಸ್ಥಾನ ಕೊಡಬೇಕೆಂಬ ಸಂಕಷ್ಟದಲ್ಲಿರುವ ಯಡಿಯೂರಪ್ಪನವರಿಗೆ ವಚನಾನಂದ ಸ್ವಾಮೀಜಿಯ ‘ಗರ್ ಗುರ್’ ಮಾತುಗಳು ನಿರಾಸೆ ಮೂಡಿಸಿದವು. ಕೊನೆಗೆ
“ನನ್ನ ಪರಿ‌ಸ್ಥಿತಿ‌ ಅರ್ಥೈಸಿಕೊಳ್ಳಿ,‌ ಎಲ್ಲರೂ ‌ನನಗೆ ಅಷ್ಟೇ ಸಮ,ಸಲಹೆ ನೀಡಬಹುದು ಹೊರತು ಬೆದರಿಕೆ ಅಲ್ಲ, ನೀವು ಬಯಸಿದರೆ ನಾಳೆಯೇ ರಾಜಿನಾಮೆ ಕೊಡುತ್ತೇನೆ” ಎಂದು ಸ್ವಾಮೀಜಿಗೆ ಸರಿಯಾಗೇ ಉತ್ತರಿಸಿದರೂ ಒಳಗೊಳಗೆ ಸಂಪುಟ ವಿಸ್ತರಣೆಯ ಭಯ ಮತ್ತೆ ಕಾಡುತ್ತಿತ್ತು.

ಇಂದಿನ ರಾಜಕೀಯ ವ್ಯವಸ್ಥೆ ಕಾವಿಧಾರಿಗಳ ನಿರ್ದೇಶನದಂತೆ ಮುನ್ನಡೆಯುತ್ತಿರುವಾಗ ಇಂತಹ ಬೆಳವಣಿಗೆಗಳು ಸಾಮಾನ್ಯವಾಗಿ ಹುಟ್ಟಿಕೊಳ್ಳುತ್ತವೆ ಎಂಬುದು ಈ ಘಟನೆ ಮತ್ತೊಮ್ಮೆ ಸಾಕ್ಷಿಯಾಗಿ ‌ನೋಡಬಹುದು.

(ಲೇಖಕರು ಶಿಕ್ಷಕರು ಮತ್ತು ಬರಹಗಾರರು. ಅಭಿಪ್ರಾಯಗಳು ಅವರ ಸ್ವಂತದ್ದು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಒಂದು ಸಮುದಾಯಕ್ಕೆ ಸೀಮಿತವಾದ ಸ್ವಾಮೀಜಿ ಜಗದ್ಗುರು ಆಗಲು ಹೇಗೆ ಸಾಧ್ಯ?

LEAVE A REPLY

Please enter your comment!
Please enter your name here

- Advertisment -

ಬಿಕ್ಲುಶಿವ ಹತ್ಯೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜ್ ಬಂಧನ: ಇಂದು ಕೋರ್ಟ್‌ಗೆ ಹಾಜರು

ಬೆಂಗಳೂರು ನಗರ ಪೊಲೀಸ್‌ ವ್ಯಾಪ್ತಿಯ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲುಶಿವ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಆರ್‌.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರಿಗೆ ಆರಿ ಹಿನ್ನಡೆಯಾಗಿದೆ. ಕೊಲೆ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ...

ಸಾರ್ವತ್ರಿಕ ಮುಷ್ಕರ | ಕೆಲ ರಾಜ್ಯಗಳಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತ; ಬ್ಯಾಂಕಿಂಗ್, ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ 'ಕಾರ್ಮಿಕ, ರೈತ ವಿರೋಧಿ ಹಾಗೂ ಕಾರ್ಪೊರೇಟ್ ಪರ ನೀತಿಗಳ' ವಿರುದ್ಧ ಕಾರ್ಮಿಕ ಸಂಘಟನೆಗಳು ಗುರುವಾರ (ಫೆ.12) ಕರೆ ನೀಡಿದ್ದ ರಾಷ್ಟ್ರವ್ಯಾಪಿ ಮುಷ್ಕರದಿಂದ ವಿವಿಧ ರಾಜ್ಯಗಳಲ್ಲಿ ಜನ ಜೀವನ...

ಅದಾನಿ ಮಾನನಷ್ಟ ಪ್ರಕರಣದಲ್ಲಿ ಪತ್ರಕರ್ತ ರವಿ ನಾಯರ್‌ಗೆ ಶಿಕ್ಷೆ: ‘ಇದು ಪತ್ರಿಕಾ ಸ್ವಾತಂತ್ರ್ಯಕ್ಕೆ ಹೊಡೆತ’ ಎಂದ ಪತ್ರಕರ್ತರ ಸಂಘಟನೆಗಳು

ಅದಾನಿ ಎಂಟರ್‌ಪ್ರೈಸಸ್ ದಾಖಲಿಸಿದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ತನಿಖಾ ಪತ್ರಕರ್ತ ರವಿ ನಾಯರ್ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿರುವುದನ್ನು ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಮತ್ತು ಹಲವಾರು ಪತ್ರಿಕಾ ಸಂಸ್ಥೆಗಳು...

‘ನಾವು ಯಾರನ್ನೂ ನಿಂದಿಸಿಲ್ಲ’: ಚೇಂಬರ್ ‘ದುರ್ವರ್ತನೆ’ ಆರೋಪಕ್ಕೆ ಪ್ರಿಯಾಂಕಾ ಗಾಂಧಿ ಸ್ಪಷ್ಟನೆ 

ನವದೆಹಲಿ: ಸ್ಪೀಕರ್ ಓಂ ಬಿರ್ಲಾ ಅವರ ಕೊಠಡಿಯಲ್ಲಿ ತಮ್ಮ ಪಕ್ಷದ ಸಂಸದರು "ಅನುಚಿತವಾಗಿ ವರ್ತಿಸಿದ್ದಾರೆ" ಎಂದು ಆರೋಪಿಸಿದಾಗ, ಅವರನ್ನು ಬೆಂಬಲಿಸಿದ್ದೇನೆ ಎಂದು ಹೇಳಿದ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಂಸದೀಯ ವ್ಯವಹಾರಗಳ...

‘ಭಾರತಕ್ಕೆ ಮರಳಲು ಇದು ಕೊನೆಯ ಅವಕಾಶ’: ವಿಜಯ್ ಮಲ್ಯಗೆ ಬಾಂಬೆ ಹೈಕೋರ್ಟ್‌ ಎಚ್ಚರಿಕೆ

ಭಾರತದ ಹೊರಗೆ ಇರುವ ಉದ್ಯಮಿ ವಿಜಯ್ ಮಲ್ಯ ನ್ಯಾಯಾಲಯದ ಪ್ರಕ್ರಿಯೆಗಳಿಂದ ಉದ್ದೇಶಪೂರ್ವಕವಾಗಿ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಗಂಭೀರವಾಗಿ ಪರಿಗಣಿಸಿರುವ ಬಾಂಬೆ ಹೈಕೋರ್ಟ್, ಅವರಿಗೆ ಭಾರತಕ್ಕೆ ಮರಳಲು “ಒಂದು ಕೊನೆಯ ಅವಕಾಶ” ನೀಡಿದೆ. ಒಂದು ವೇಳೆ...

ಕೆಲಸದ ಸ್ಥಳದಲ್ಲಿ ಜಾತಿ ತಾರತಮ್ಯದ ಬಗ್ಗೆ ರಾಜ್ಯಸಭೆಯಲ್ಲಿ ಖರ್ಗೆ ಕಳವಳ; ಒಡಿಶಾ ಅಂಗನವಾಡಿ ಘಟನೆ ಉಲ್ಲೇಖ

ಕೆಲಸದ ಸ್ಥಳಗಳಲ್ಲಿ ಆಗುತ್ತಿರುವ ಜಾತಿ ತಾರತಮ್ಯದ ಕುರಿತು ರಾಜ್ಯಸಭೆಯಲ್ಲಿ ಗುರುವಾರ (ಫೆ.12) ವಿಪಕ್ಷ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಳವಳ ವ್ಯಕ್ತಪಡಿಸಿದರು. ಒಡಿಶಾದ ಅಂಗನವಾಡಿಯೊಂದರಲ್ಲಿ ದಲಿತ ಮಹಿಳೆ ತಯಾರಿಸಿದ ಆಹಾರವನ್ನು...

ಕರ್ನಾಟಕ ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್

ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ...

‘ಆಕೆಯ ಜೀವ ಮುಖ್ಯ’: ಅಮೆರಿಕದ ಪೊಲೀಸ್ ಅಧಿಕಾರಿ ವೇಗದ ಚಾಲನೆಯಿಂದ ಸಾವನ್ನಪ್ಪಿದ ಭಾರತೀಯ ವಿದ್ಯಾರ್ಥಿನಿಯ ಕುಟುಂಬಕ್ಕೆ 260 ಕೋಟಿ ಪರಿಹಾರ

2023 ರಲ್ಲಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಚಾಲನೆ ಮಾಡುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರು ಡಿಕ್ಕಿ ಹೊಡೆದ ಕಾರಣ ಸಾವನ್ನಪ್ಪಿದ ಭಾರತದ 23 ವರ್ಷದ ಪದವೀಧರ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಅವರ ಕುಟುಂಬಕ್ಕೆ ಸಿಯಾಟಲ್ ನಗರವು...

ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯಿಂದ ನಿಲುವಳಿ ಸೂಚನೆ ಸಲ್ಲಿಕೆ; ಸಂಸತ್ ಸದಸ್ಯತ್ವ ರದ್ದುಗೊಳಿಸುವಂತೆ ಆಗ್ರಹ

ಲೋಕಸಭೆ ಅಧಿವೇಶನದಲ್ಲಿ ಗುರುವಾರ (ಫೆ.12) ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಿಲುವಳಿ ಸೂಚನೆ ಸಲ್ಲಿಸಿದ್ದು, ಅವರ ಸಂಸತ್ತಿನ ಸದಸ್ಯತ್ವ ರದ್ದುಗೊಳಿಸುವಂತೆ ಕೋರಿದೆ. ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ನಿಶಿಕಾಂತ್...

ಕಾನ್ಪುರ ಲ್ಯಾಂಬೋರ್ಗಿನಿ ಅಪಘಾತ: ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಪುತ್ರ ಶಿವಂ ಮಿಶ್ರಾ ಬಂಧನ

2026 ಫೆಬ್ರವರಿ 8, ಭಾನುವಾರದಂದು ವಿಐಪಿ ರಸ್ತೆಯಲ್ಲಿ ಹಲವಾರು ಜನರು ಗಾಯಗೊಂಡಿದ್ದ ಹೈ ಪ್ರೊಫೈಲ್ ಲ್ಯಾಂಬೋರ್ಗಿನಿ ಅಪಘಾತಕ್ಕೆ ಸಂಬಂಧಿಸಿದಂತೆ ಸ್ಥಳೀಯ ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಅವರ ಪುತ್ರ ಶಿವಂ ಮಿಶ್ರಾ ಅವರನ್ನು...