Homeಕರ್ನಾಟಕಅಸ್ಥಿರ ಅಡಿಕೆ ಮಾರುಕಟ್ಟೆಯೂ, ಕಂಗೆಟ್ಟ ತೋಟಿಗರೂ!

ಅಸ್ಥಿರ ಅಡಿಕೆ ಮಾರುಕಟ್ಟೆಯೂ, ಕಂಗೆಟ್ಟ ತೋಟಿಗರೂ!

ಹಿಂದಿನ ಸರ್ಕಾರ ‘ಅಡಿಕೆ ಆರೋಗ್ಯಕ್ಕೆ ಹಾನಿಕರ’ ಎಂದು ಸುಪ್ರಿಮ್ ಕೋರ್ಟ್‍ಗೆ ಸಲ್ಲಿಸಿದ್ದ ಅಫಿಡವಿಟ್ ಹಿಂಪಡೆಯುವ ಸಣ್ಣ ಪ್ರಯತ್ನವನ್ನು ಯಾವ ಸಂಸದರೂ ಮಾಡಲಿಲ್ಲ..

- Advertisement -
- Advertisement -

ಅಡಿಕೆ ಮಾರುಕಟ್ಟೆ ಹೇಗೆ ಅಸ್ಥಿರವೋ ಹಾಗೇ ಅಡಿಕೆ ತೋಟಿಗರ ಬದುಕೂ ಅನಿಶ್ಚಿತವೇ! ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಇವತ್ತಿಗೂ ‘ಅಡಿಕೆ ನೀತಿ’ ಒಂದನ್ನು ರೂಪಿಸಲಾಗಿಲ್ಲ. ಹಾಲಿ ಸರ್ಕಾರಿ ಧೋರಣೆಯಿಂದ ಅಡಿಕೆ ಬೆಳೆಗಾರರಿಗಿಂತ ದಲ್ಲಾಳಿಗಳಿಗೆ ಮತ್ತು ಕಳ್ಳ ಸಾಗಾಣಿಕೆದಾರರಿಗೇ ಅನುಕೂಲ ಹೆಚ್ಚಾಗಿದೆ. ಅಡಿಕೆ ವಹಿವಾಟಿನಲ್ಲಾಗುವ ಪ್ರತಿ ಏರಿಳಿತ ಅಡಿಕೆ ಕೃಷಿಯನ್ನೇ ಅವಲಂಭಿಸಿರುವ ರಾಜ್ಯದ ಏಳೆಂಟು ಜಿಲ್ಲೆಯ ತೋಟಿಗರನ್ನು ಕಂಗೆಡಿಸುತ್ತಿರುತ್ತದೆ. ಜತೆಗೆ ಕೊಳೆರೋಗ, ಕೇಂದ್ರದ ಅಡಿಕೆ ನಿಷೇಧದ ಗುಮ್ಮ, ಅಡಿಕೆ ಕ್ಯಾನ್ಸರ್‌ಕಾರಕ ಎಂಬ ಕೇಂದ್ರ ಆರೋಗ್ಯ ಸಚಿವಾಲಯ ತಿಳುವಳಿಕೆ, ಕಾಡು ಪ್ರಾಣಿಗಳ ಹಾವಳಿ ಬಹುಸಂಖ್ಯಾತ ಸಣ್ಣ ಹಿಡುವಳಿದಾರರ ನಿದ್ದೆಗೆಡಿಸುತ್ತಲೇ ಇದೆ.

ಶ್ರೀಲಂಕಾ, ಮ್ಯಾನ್ಮಾರ್, ಮಲೇಶ್ಯಾ ದೇಶಗಳು ಮತ್ತು ದೇಶದ ಕೇರಳ, ಗೋವಾ, ಆಸ್ಸಾಮ್ ಮುಂತಾದೆಡೆ ನೈಸರ್ಗಿಕವಾಗಿ ಕಾಡು ಉತ್ಪನ್ನದಂತೆ ಅಡಿಕೆಯನ್ನು ಪಡೆಯಲಾಗುತ್ತಿದೆ; ಕರ್ನಾಟಕದಲ್ಲಿ ಮಾತ್ರ ಕ್ರಮಬದ್ಧ ಬೇಸಾಯದಿಂದ ಅಡಿಕೆ ಬೆಳೆಯಲಾಗುತ್ತದೆ. ಭಾರತದ ಒಟ್ಟೂ 4ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ತೋಟಗಳಿವೆ. ಇದರಲ್ಲಿ 2ಲಕ್ಷ ಹೆಕ್ಟೇರ್‍ಗೂ ಹೆಚ್ಚು ಪ್ರದೇಶ ಕರ್ನಾಟಕದಲ್ಲಿದೆ. ಪ್ರತಿ ವರ್ಷ ಉತ್ಪಾದೆಯಾಗುವ 8ಲಕ್ಷ ಟನ್ ಅಡಿಕೆಯಲ್ಲಿ ಶೇಕಡಾ 60ರಷ್ಟು ಕರ್ನಾಟಕದ್ದು. ರಾಜ್ಯದ ಅಡಿಕೆ ಉತ್ಕೃಷ್ಟ ಗುಣಮಟ್ಟದ್ದು. ಕರ್ನಾಟಕದ ಒಟ್ಟು ಮುಕ್ಕಾಲು ಪಾಲು ಉತ್ತರಕನ್ನಡ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಉತ್ಪಾದನೆ ಆಗುತ್ತದೆ.

ಅಡಿಕೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ, ಹಾವೇರಿ ಹಾಗೂ ತುಮಕೂರು ಜಿಲ್ಲೆಯ ತೋಟಿಗರ ಜೀವನಾಧಾರ ವಾಣಿಜ್ಯ ಬೆಳೆ. ಮಲೆನಾಡಿನ ತೋಟಿಗರಂತೂ ಬದುಕು ಕಟ್ಟಕೊಂಡಿರುವುದೇ ಅಡಿಕೆ ವಹಿವಾಟಿನ ಮೇಲೆ. ಮಲೆನಾಡಿನ ಕೆಂಪಡಿಕೆಗೆ ವಿದೇಶಗಳಲ್ಲೂ ದೊಡ್ಡ ಬೇಡಿಕೆಯಿದೆ. ಇಲ್ಲಿಯ ಸರಕು ಮಾದರಿಯ ಅಡಿಕೆಯನ್ನು ದಕ್ಷಿಣ ಭಾರತೀಯರು ವೀಳ್ಯದೆಲೆಯೊಂದಿಗೆ ಮೆಲ್ಲುತ್ತಾರೆ. ರಾಶಿ ಅಡಿಕೆ, ಬೆಟೆ ಅಡಿಕೆ ಪಾನ್‍ಮಸಲಾಕ್ಕೆ ಉಪಯೋಗಿಸಲಾಗುತ್ತದೆ. ಪಾನ್‍ಮಸಾಲಾ ಕಂಪನಿಗಳು ಮತ್ತು ಸಿಹಿ ಅಡಿಕೆ ಪೊಟ್ಟಣ ತಯಾರಿಕಾ ಘಟಕಗಳಲ್ಲಿ ಹೆಚ್ಚಾಗಿರುವುದು ಉತ್ತರ ಭಾರತದಲ್ಲಿ. ಈ ಗುಟ್ಕ ಕಂಪನಿಗಳಿಗೆ ಅಡಿಕೆ ಒದಗಿಸುವ ಮಧ್ಯವರ್ತಿಗಳ ಅನಾಹುತಕಾರಿ ಮಾಫಿಯಾ ತೋಟಿಗರಿಗೆ ನಾಜೂಕಾಗಿ ವಂಚಿಸುತ್ತಿದೆ.

ಅಧಿಕೃತ ಸಹಕಾರ ಸಂಘಗಳು ಮತ್ತು ಎಪಿಎಂಸಿ ಮೂಲಕ ಶೇಕಡಾ 60ರಷ್ಟು ಅಡಿಕೆ ವಹಿವಾಟಾಗುತ್ತಿದೆಯಷ್ಟೇ. ಶೇ.40ರಷ್ಟು ಅಡಿಕೆಯನ್ನು ಮಧ್ಯವರ್ತಿಗಳು ರೈತರ ಮನೆ ಬಾಗಿಲಲ್ಲೇ ಖರೀದಿಸಿ ಗುಟ್ಕ ಕಂಪನಿಗಳಿಗೆ ಮಾರುತ್ತಾರೆ. ಕಮಿಷನ್, ತೆರಿಗೆ ಉಳಿಸುವ ಆಸೆಗೆ ಬೆಳೆಗಾರರು ದಲ್ಲಾಳಿಗಳಿಗೆ ಬಲಿ ಬೀಳುತ್ತಿದ್ದಾರೆ. ಈ ಅಕ್ರಮ ವ್ಯವಹಾರದಲ್ಲಿ ಸರ್ಕಾರಕ್ಕೆ ಕನಿಷ್ಠವೆಂದರೂ 100 ಕೊಟಿ ತೆರಿಗೆ ವಂಚನೆಯಾಗುತ್ತಿದೆ! ಈ ಅಡಿಕೆ ಮಾಫಿಯಾ ವಿದೇಶದಿಂದಲೂ ಅಗ್ಗದಲ್ಲಿ ಕಳಪೆ ಅಡಿಕೆ ತರಿಸಿಕೊಳ್ಳುತ್ತದೆ. ಕಳ್ಳಸಾಗಾಣಿಕೆಯು ಮಾಡಿಸಿಕೊಳ್ಳುತ್ತದೆ. ಸ್ಥಳೀಯ ಅಡಿಕೆ ಜತೆ ಈ ಕಳಪೆ ಅಡಿಕೆ ಬೆರೆಸಿ ಕಲಬೆರೆಕೆ ದಂಧೆ ನಡೆಸುತ್ತದೆ. ಇದಕ್ಕೆ ಕಡಿವಾಣ ಹಾಕಲೆಂದೇ ಯುಪಿಎ ಸರ್ಕಾರ ಆಮದು ಅಡಿಕೆ ಮೇಲೆ ಶೇ 110ರಷ್ಟು ತೆರಿಗೆ ವಿಧಿಸಿತ್ತು. ಈ ದಂಧೆ ದುಬಾರಿಯಾಗಿದ್ದರಿಂದ ಮಾಫಿಯಾ ವಿದೇಶದಿಂದ ಅಡಿಕೆ ತರಿಸುವುದು ನಿಲ್ಲಿಸಿತ್ತು. ಕಳ್ಳಸಾಗಾಣಿಕೆಗೂ ಕಡಿವಾಣ ಬಿದ್ದಿತ್ತು.

ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದ ಬಳಿಕ ಹಿಂದಿನ ಸರ್ಕಾರದ ಬಿಗಿ ಕಡಿಮೆಯಾಗಿ ಮತ್ತೆ ಮಾಫಿಯಾ ಚಿಗುರಿಕೊಂಡಿದೆ! ಹೀಗಾಗಿ 2014ರ ನಂತರ ಅಡಿಕೆ ಬೆಳೆಗಾರರಿಗೆ ಹೇಳಿಕೊಳ್ಳುವಂಥ ಅನುಕೂಲವೇನೂ ಆಗಿಲ್ಲ. ಚಾಲಿಯಂಥ ಅಡಿಕೆ ಧಾರಣೆ ಕ್ವಿಂಟಾಲಿಗೆ 30 ಸಾವಿರದ ಆಸುಪಾಸಿನಲ್ಲಿ ಸುತ್ತಾಡಿದರೆ ರೈತರಿಗೆ ತೀರ ಲಾಭವೇನೂ ಇಲ್ಲದಿದ್ದರೂ ಸಮಚಿತ್ತದ ಬದುಕಿಗೊಂದು ದಾರಿಯಾಗುತ್ತದೆ. ಈ ಬಾರಿ ಧಾರಣೆ ಈ ರೇಂಜಿನಲ್ಲೇ ಇದೆ. ಕಳೆದ ವರ್ಷ ಬಿದ್ದ ವಿಪರೀತ ಮಳೆಯಿಂದ ಬಂದ ಕೊಳೆರೋಗ, ಹವಾಮಾನ ವೈಪರೀತ್ಯದಿಂದ ಅಡಿಕೆಗೆ ಬೆಲೆ ಬಂದಿದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ. ಆದರೆ ಇದೇ ಬೆಲೆ ಮುಂದೆಯೂ ಸಿಗುತ್ತದೆಂದು ಹೇಳಲಾಗದು. ಇತ್ತೀಚಿನ ವರ್ಷಗಳಲ್ಲಂತೂ ಅಡಿಕೆ ಇದ್ದಕ್ಕಿದ್ದಂತೆ ವಿವಾದಕ್ಕೆ ಸಿಲುಕಿ ಮಾರುಕಟ್ಟೆ ಮೇಲೆ ಪರಿಣಾಮವಾಗುವ ಆತಂಕ ಆರಂಭವಾಗುತ್ತಿದೆ. ಈ ಗೊಂದಲಕ್ಕೆ ಅಡಿಕೆ ಬೆಳೆಗಾರ ಸಹಜವಾಗೇ ಬೆಚ್ಚೆಳುತ್ತಿದ್ದಾನೆ.

ಆದರೆ ಅಡಿಕೆ ಬಗ್ಗೆ ವಿವಾದ ಎದ್ದಾಗೆಲ್ಲ ಧಾರಣೆ ಮೇಲೆ ಕೆಟ್ಟ ಪರಿಣಾಮವೇನೂ ಆಗಿದಿಲ್ಲ. ಈ ಗಲಾಟಿಯ ಲಾಭ ದಲ್ಲಾಳಿಗಳು, ಮಧ್ಯವರ್ತಿಗಳು ಎತ್ತಿದ್ದಾರೆ. ಇದರಲ್ಲಿ ರಾಜಕಾರಣೀಗಳೇನೂ ಕಮ್ಮಿಯಿಲ್ಲ. ಅಡಿಕೆ ಬೆಳೆಗಾರರಲ್ಲಿ ಅಲ್ಲೋಲಕಲ್ಲೋಲ ಉಂಟಾಗಿದ್ದು 2011ರಲ್ಲಿ. ಆಗ ಅಧಿಕಾರದಲ್ಲಿದ್ದ ಯುಪಿಎ-2 ಸರ್ಕಾರ ಅಡಿಕೆಯಲ್ಲಿ ಆರೋಗ್ಯಕ್ಕೆ ಹಾನಿಕರವಾದ ಅಂಶಗಳಿದೆಯೆಮದು ಸುಪ್ರೀಮ್ ಕೋರ್ಟ್‍ಗೆ ಅಫಿಡವಿಟ್ ಸಲ್ಲಿಸಿತ್ತು. ಇದನ್ನು ಬಿಜೆಪಿಗರು ರಾಜಕೀಯಕ್ಕೆ ಬಳಸಿಕೊಂಡರು; ಕಾಂಗ್ರೆಸ್ ಅಡಿಕೆ ಬೆಳೆಗಾರರ ವೈರಿಯೆಂಬಂತೆ ಬಿಂಬಿಸಿದರು. ಅಡಿಕೆ ನಿಷೇಧಕ್ಕೆ ಕಾಂಗ್ರೆಸ್ ಹವಣಿಸುತ್ತಿದೆಯೆಂದು ಹುಯಿಲೆಬ್ಬಿಸಿದರು.

ಅಡಿಕೆ ಬೆಳೆಗಾರರು ಕಾಂಗ್ರೆಸ್ ವಿರುದ್ಧ ತಿರುಗಿ ಬೀಳುವಂತೆ ಮಾಡಲಾಯಿತು. ಕಾಂಗ್ರೆಸ್ ಅಡಿಕೆ ನಿಷೇದಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರೂ ಬಿಜೆಪಿ ಅಪಪ್ರಚಾರದ ಎದುರು ಬೆಳೆಗಾರರನ್ನು ಅದು ಇಂಪ್ರೆಸ್ ಮಾಡಲಾಗಲಿಲ್ಲ! ಇದು ಅಡಿಕೆ ತೋಟ ಪಟ್ಟಿಯಲ್ಲಿ 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ವರವಾಗಿ ಪರಿಣಮಿಸಿತು. ಶಿವಮೊಗ್ಗೆಯ ರಾಘವೇಂದ್ರ, ಉಡುಪಿ-ಚಿಕ್ಕಮಗಳೂರಿನ ಶೋಭಾ ಕರಂದ್ಲಾಜೆ, ಉತ್ತರ ಕನ್ನಡದ ಅನಂತ ಹೆಗಡೆ, ಮಂಗಳೂರಿನ ನಳಿನ್ ಕಟೀಲ್, ದಾವಣಗೆರೆಯ ಸಿದ್ದೇಶ್ವರ್ ಅಡಿಕೆ ಬೆಳೆಗಾರರ ಬಚಾಯಿಸುವ ಭೋಂಗು ಬಿಟ್ಟೇ ಸಂಸದರಾಗಿ ಆಯ್ಕೆಯಾದರು. ತೋಟಿಗರ ಯಮಾರಿಸಿ ದಂಡಿಯಾಗಿ ಓಟು ಪಡೆದು ಗೆದ್ದವರಿಗೆ ಆನಂತರ ತಾವು ಕೊಟ್ಟ ಭರವಸೆಯೇ ಮರೆತುಹೋಗಿತ್ತು.

ತೋಟಿಗರಿಗೆ ಆಗುತ್ತಿರುವ ಅನ್ಯಾಯ-ಆತಂಕದ ಬಗ್ಗೆ ಅಡಿಕೆ ಬೆಳೆ ಏರಿಯಾದ ಒಬ್ಬೇ ಒಬ್ಬ ಸಂಸದ ಮಾತಾಡಲಿಲ್ಲ. ತಾವು ಕೊಂಡಾಡುವ ಮೋದಿ ಸರ್ಕಾರವಿದ್ದರೂ ಹಿಂದಿನ ಸರ್ಕಾರ ‘ಅಡಿಕೆ ಆರೋಗ್ಯಕ್ಕೆ ಹಾನಿಕರ’ ಎಂದು ಸುಪ್ರಿಮ್ ಕೋರ್ಟ್‍ಗೆ ಸಲ್ಲಿಸಿದ್ದ ಅಫಿಡವಿಟ್ ಹಿಂಪಡೆಯುವ ಸಣ್ಣ ಪ್ರಯತ್ನವನ್ನೂ ಮಾಡಲಿಲ್ಲ. ಕಾನೂನಿಗೆ ತಿದ್ದುಪಡಿ ತಂದು ಅಡಿಕೆಯನ್ನು ತಂಬಾಕು ಪಟ್ಟಿಯಿಂದ ಹೊರತರುವ ವೀರಾವೇಷದ ಮಾತಾಡಿದ್ದ ಈ ಪಂಚ ಪ್ರಚಂಡರು ಕೃತಘ್ನರಾಗಿ ಹೋದರು. ಈ ವಂಚಕ ಸಂಸದರ ಉದಾಸೀನದ ಒಟ್ಟೂ ಪರಿಣಾಮ ಎಂಬಂತೆ 2017ರ ಡಿಸೆಂಬರ್‍ನಲ್ಲಿ ಅಂದಿನ ಆರೋಗ್ಯ ಇಲಾಖೆಯ ರಾಜ್ಯ ಮಂತ್ರಿ ಅನುಪ್ರಿಯಾ ಪಟೇಲ್ ಯುಪಿಎ ಸರ್ಕಾರದ ಅನಿಸಿಕೆಯನ್ನೇ ಬಿತ್ತರಿಸಿದ್ದರು. ಆಕೆ ಅಡಿಕೆಯಿಂದ ಬಾಯಿ ಕ್ಯಾನ್ಸರ್ ಬರುತ್ತದೆಂದು ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದರು.

ಇಷ್ಟಾದರೂ ಅನಂತ್, ಶೋಭಾ, ಕಟೀಲ್, ಸಿದ್ದೇಶ್ವರ್, ರಾಘವೇಂದ್ರ ತಲೆಕೆಡಿಸಿಕೊಳ್ಳಲಿಲ್ಲ. ತೋಟಿಗರ ನೋವು ಅವರಿಗೆ ಅರ್ಥವಾಗಲಿಲ್ಲ. 2019ರಲ್ಲಿ ಮತ್ತೆ ಈ ಐವರು ಸಂಸದರಾಗಿ ಆಯ್ಕೆಯೂ ಆದರು. ಈ ಬಾರಿಯಾದರೂ ತಮ್ಮ ಸಮಸ್ಯೆಗೆ ಸ್ಪಂದಿಸಬಹುದೆಂದು ಭಾವಿಸಿದ್ದ ತೋಟಿಗರಿಗೆ ಮತ್ತದೇ ಆಘಾತ ಕಾದಿತ್ತು! 12-7-2019 ರಂದು ಆರೋಗ್ಯ ಇಲಾಖೆಯ ಸಹಾಯಕ ಸಚಿವ ಅಶ್ವಿನಿಕುಮಾರ್ ಚೌಬೆ “ಅಡಿಕೆ ದೇಹದ ವಿವಿಧ ಅಂಗಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಬಾಯಿ, ಅನ್ನನಾಳ, ಗಂಟಲು ಮತ್ತಿತರ ಅಂಗಗಳಿಗೆ ಕ್ಯಾನ್ಸರ್ ಬರುವಂತೆ ಮಾಡುತ್ತದೆಂದು ಕೆಲವು ಅಧ್ಯಯನದಿಂದ ತಿಳಿದು ಬಂದಿದೆಯೆಂದು” ಹೇಳಿದರು. ಮಂತ್ರಿಗಳ ಈ ಮಾತಿಂದ ತೋಟಿಗ ಸಮುದಾಯದಲ್ಲಿ ಆತಂಕ-ಆಕ್ರೋಶ ಮೂಡಿತು.

ಇದರಿಂದ ಕಕ್ಕಾಬಿಕ್ಕಿಯಾದ ಕಟೀಲು, ಶೋಭಾ, ಸಿದ್ದೇಶ್ವರ್ ಅವರುಗಳಿಗೆ ಗಡಿಬಿಡಿಯಲ್ಲಿ ಕೇಂದ್ರ ಆರೋಗ್ಯ ಮಂತ್ರಿಯನ್ನು ಭೇಟಿಯಾದ ಪೋಟೋ ಮಾಧ್ಯಮಗಳಿಗೆ ಬಿಡುಗಡೆ ಮಾಡಬೇಕಾಗಿ ಬಂತು. ಅಡಿಕೆ ಬೆಳೆಗಾರರ ಹಿತರಕ್ಷಿಸುವುದಾಗಿ ಹೇಳಿಕೆಯನ್ನೂ ಕೊಟ್ಟರು. ಆದರೆ ಇವತ್ತಿಗೂ ಅಡಿಕೆ ತೋಟಗಳಿಗೆ ಕೇಂದ್ರ ಸರ್ಕಾರ ಬಿಟ್ಟ ಕ್ಯಾನ್ಸರ್ ಗುಮ್ಮ ಮಾತ್ರ ಅಲ್ಲೇ ಕುಂತಿದೆ. ತೋಟಿಗರು ಅಂಜುತ್ತಲೇ ಬದುಕುತ್ತಿದ್ದಾರೆ. ಸಿಗರೇಟ್ ಲಾಬಿ ಮತ್ತು ಗುಟ್ಕ ಲಾಬಿ ನಡುವೆ ವ್ಯವಹಾರಿಕ ಸಂಘರ್ಷ ಮೊದಲಿನಿಂದಲೂ ನಡೆಯುತ್ತಿದೆ. ಕೇಂದ್ರದ ಆಹಾರ ಸುರಕ್ಷೆ ಮತ್ತು ಗುಣಮಟ್ಟಗಳ ನಿಯಾಮಾವಳಿಯಂತೆ ತಂಬಾಕಿನೊಂದಿಗೆ ಅಡಿಕೆ ಉತ್ಪನ್ನಗಳನ್ನೂ ಸೇರಿಸಿರುವುದೇ ಸಮಸ್ಯೆಯ ಮೂಲ.

ಸ್ವಲ್ಪ ತಿಂದರೆ ಅಡಿಕೆಯಲ್ಲಿ ಔಷಧಿ ಗುಣವಿದೆ. ಅತಿಯಾದರೆ ಹಾನಿಯೇ ಎಂದು ಸಂಶೋಧಕರು ಹೇಳುತ್ತಾರೆ. ಅಡಿಕೆ ವಹಿವಾಟು ನಡೆಸುವ ಸಹಕಾರ ಸಂಸ್ಥೆಗಳು ಕಾಸರಗೋಡಿನ ಸಿಪಿಸಿಆರ್‌ಐ ಮೂಲಕ ಅಡಿಕೆಯ ಗುಣಾವಗುಣದ ಬಗ್ಗೆ ಸಂಶೋಧನೆ ನಡೆಯುವಂತೆ ನೋಡಿಕೊಂಡಿದ್ದವು. ಈ ವರದಿ ಆಡಿಕೆ ಕ್ಯಾನ್ಸರ್‍ಕಾರಕವಲ್ಲ; ಆರೋಗ್ಯ ವರ್ಧಕ ಎಂದು ಹೇಳಿದೆ. ಹಿಂದೆ ಕೆಲವು ಕಂಪನಿಗಳು ಅಡಿಕೆಯನ್ನು ಚಾಕೊಲೆಟ್ ತಯಾರಿಕೆಗೆ ಬಳಸಿದ್ದವು. ಈ ಪ್ರಯೋಗ ಯಶಸ್ವಿಯಾಗಲಿಲ್ಲ. ವೈನ್ ತಯಾರಿಕೆ ಪ್ರಯತ್ನ ನಡೆದರೂ ದುಬಾರಿ ಎಂದಾಯಿತು. ಚಹಾ, ಬಣ್ಣ ಮತ್ತಿತರ ಉದ್ದೇಶಕ್ಕೆ ಅಡಿಕೆ ಬಳಸುವ ಸಂಶೋಧನೆಗಳು ನಡೆಯುತ್ತಿವೆ.

ಅಡಿಕೆ ನಿಷೇಧದ ಸಮಸ್ಯೆ ಇರುವುದು ತೋಟಪಟ್ಟಿಯ ಸಂಸದರ ಇಚ್ಛಾಶಕ್ತಿಯ ಕೊರತೆಯಲ್ಲಿ. ಸಂಸತ್ತಿನಲ್ಲಿ ಚರ್ಚೆ, ಕಾನೂನಿನಲ್ಲಿ ತಿದ್ದುಪಡಿ ಮೂಲಕ ಮಾತ್ರ ಅಡಿಕೆ ಮಾನಕ್ಕೆ ಬಂದಿರುವ ಕಳಂಕ ತೆಗೆಯಬಹುದು. ಆದರೆ ಅದು ಆಗುತ್ತಿಲ್ಲ.


ಇದನ್ನೂ ಓದಿ: ಅಡಿಕೆ ಬೆಳೆಗಾರರನ್ನು ರಕ್ಷಿಸುವರೆ ಈ ಆರು ಜನ ಮಾನಗೇಡಿ ಸಂಸದರು?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಇಂಪ್ರೆಸ್ >ತಟ್ಟು
    ರಕ್ಷಿಸು(ಸಂಸ್ಕ್ರುತ)>ಕಾಪಾಡು(ಕನ್ನಡ)
    ಸ್ವಲ್ಪ(ಸಂಸ್ಕ್ರುತ)>ತುಸು(ಕ)

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...