Homeಕರ್ನಾಟಕಅಸ್ಥಿರ ಅಡಿಕೆ ಮಾರುಕಟ್ಟೆಯೂ, ಕಂಗೆಟ್ಟ ತೋಟಿಗರೂ!

ಅಸ್ಥಿರ ಅಡಿಕೆ ಮಾರುಕಟ್ಟೆಯೂ, ಕಂಗೆಟ್ಟ ತೋಟಿಗರೂ!

ಹಿಂದಿನ ಸರ್ಕಾರ ‘ಅಡಿಕೆ ಆರೋಗ್ಯಕ್ಕೆ ಹಾನಿಕರ’ ಎಂದು ಸುಪ್ರಿಮ್ ಕೋರ್ಟ್‍ಗೆ ಸಲ್ಲಿಸಿದ್ದ ಅಫಿಡವಿಟ್ ಹಿಂಪಡೆಯುವ ಸಣ್ಣ ಪ್ರಯತ್ನವನ್ನು ಯಾವ ಸಂಸದರೂ ಮಾಡಲಿಲ್ಲ..

- Advertisement -
- Advertisement -

ಅಡಿಕೆ ಮಾರುಕಟ್ಟೆ ಹೇಗೆ ಅಸ್ಥಿರವೋ ಹಾಗೇ ಅಡಿಕೆ ತೋಟಿಗರ ಬದುಕೂ ಅನಿಶ್ಚಿತವೇ! ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಇವತ್ತಿಗೂ ‘ಅಡಿಕೆ ನೀತಿ’ ಒಂದನ್ನು ರೂಪಿಸಲಾಗಿಲ್ಲ. ಹಾಲಿ ಸರ್ಕಾರಿ ಧೋರಣೆಯಿಂದ ಅಡಿಕೆ ಬೆಳೆಗಾರರಿಗಿಂತ ದಲ್ಲಾಳಿಗಳಿಗೆ ಮತ್ತು ಕಳ್ಳ ಸಾಗಾಣಿಕೆದಾರರಿಗೇ ಅನುಕೂಲ ಹೆಚ್ಚಾಗಿದೆ. ಅಡಿಕೆ ವಹಿವಾಟಿನಲ್ಲಾಗುವ ಪ್ರತಿ ಏರಿಳಿತ ಅಡಿಕೆ ಕೃಷಿಯನ್ನೇ ಅವಲಂಭಿಸಿರುವ ರಾಜ್ಯದ ಏಳೆಂಟು ಜಿಲ್ಲೆಯ ತೋಟಿಗರನ್ನು ಕಂಗೆಡಿಸುತ್ತಿರುತ್ತದೆ. ಜತೆಗೆ ಕೊಳೆರೋಗ, ಕೇಂದ್ರದ ಅಡಿಕೆ ನಿಷೇಧದ ಗುಮ್ಮ, ಅಡಿಕೆ ಕ್ಯಾನ್ಸರ್‌ಕಾರಕ ಎಂಬ ಕೇಂದ್ರ ಆರೋಗ್ಯ ಸಚಿವಾಲಯ ತಿಳುವಳಿಕೆ, ಕಾಡು ಪ್ರಾಣಿಗಳ ಹಾವಳಿ ಬಹುಸಂಖ್ಯಾತ ಸಣ್ಣ ಹಿಡುವಳಿದಾರರ ನಿದ್ದೆಗೆಡಿಸುತ್ತಲೇ ಇದೆ.

ಶ್ರೀಲಂಕಾ, ಮ್ಯಾನ್ಮಾರ್, ಮಲೇಶ್ಯಾ ದೇಶಗಳು ಮತ್ತು ದೇಶದ ಕೇರಳ, ಗೋವಾ, ಆಸ್ಸಾಮ್ ಮುಂತಾದೆಡೆ ನೈಸರ್ಗಿಕವಾಗಿ ಕಾಡು ಉತ್ಪನ್ನದಂತೆ ಅಡಿಕೆಯನ್ನು ಪಡೆಯಲಾಗುತ್ತಿದೆ; ಕರ್ನಾಟಕದಲ್ಲಿ ಮಾತ್ರ ಕ್ರಮಬದ್ಧ ಬೇಸಾಯದಿಂದ ಅಡಿಕೆ ಬೆಳೆಯಲಾಗುತ್ತದೆ. ಭಾರತದ ಒಟ್ಟೂ 4ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ತೋಟಗಳಿವೆ. ಇದರಲ್ಲಿ 2ಲಕ್ಷ ಹೆಕ್ಟೇರ್‍ಗೂ ಹೆಚ್ಚು ಪ್ರದೇಶ ಕರ್ನಾಟಕದಲ್ಲಿದೆ. ಪ್ರತಿ ವರ್ಷ ಉತ್ಪಾದೆಯಾಗುವ 8ಲಕ್ಷ ಟನ್ ಅಡಿಕೆಯಲ್ಲಿ ಶೇಕಡಾ 60ರಷ್ಟು ಕರ್ನಾಟಕದ್ದು. ರಾಜ್ಯದ ಅಡಿಕೆ ಉತ್ಕೃಷ್ಟ ಗುಣಮಟ್ಟದ್ದು. ಕರ್ನಾಟಕದ ಒಟ್ಟು ಮುಕ್ಕಾಲು ಪಾಲು ಉತ್ತರಕನ್ನಡ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಉತ್ಪಾದನೆ ಆಗುತ್ತದೆ.

ಅಡಿಕೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ, ಹಾವೇರಿ ಹಾಗೂ ತುಮಕೂರು ಜಿಲ್ಲೆಯ ತೋಟಿಗರ ಜೀವನಾಧಾರ ವಾಣಿಜ್ಯ ಬೆಳೆ. ಮಲೆನಾಡಿನ ತೋಟಿಗರಂತೂ ಬದುಕು ಕಟ್ಟಕೊಂಡಿರುವುದೇ ಅಡಿಕೆ ವಹಿವಾಟಿನ ಮೇಲೆ. ಮಲೆನಾಡಿನ ಕೆಂಪಡಿಕೆಗೆ ವಿದೇಶಗಳಲ್ಲೂ ದೊಡ್ಡ ಬೇಡಿಕೆಯಿದೆ. ಇಲ್ಲಿಯ ಸರಕು ಮಾದರಿಯ ಅಡಿಕೆಯನ್ನು ದಕ್ಷಿಣ ಭಾರತೀಯರು ವೀಳ್ಯದೆಲೆಯೊಂದಿಗೆ ಮೆಲ್ಲುತ್ತಾರೆ. ರಾಶಿ ಅಡಿಕೆ, ಬೆಟೆ ಅಡಿಕೆ ಪಾನ್‍ಮಸಲಾಕ್ಕೆ ಉಪಯೋಗಿಸಲಾಗುತ್ತದೆ. ಪಾನ್‍ಮಸಾಲಾ ಕಂಪನಿಗಳು ಮತ್ತು ಸಿಹಿ ಅಡಿಕೆ ಪೊಟ್ಟಣ ತಯಾರಿಕಾ ಘಟಕಗಳಲ್ಲಿ ಹೆಚ್ಚಾಗಿರುವುದು ಉತ್ತರ ಭಾರತದಲ್ಲಿ. ಈ ಗುಟ್ಕ ಕಂಪನಿಗಳಿಗೆ ಅಡಿಕೆ ಒದಗಿಸುವ ಮಧ್ಯವರ್ತಿಗಳ ಅನಾಹುತಕಾರಿ ಮಾಫಿಯಾ ತೋಟಿಗರಿಗೆ ನಾಜೂಕಾಗಿ ವಂಚಿಸುತ್ತಿದೆ.

ಅಧಿಕೃತ ಸಹಕಾರ ಸಂಘಗಳು ಮತ್ತು ಎಪಿಎಂಸಿ ಮೂಲಕ ಶೇಕಡಾ 60ರಷ್ಟು ಅಡಿಕೆ ವಹಿವಾಟಾಗುತ್ತಿದೆಯಷ್ಟೇ. ಶೇ.40ರಷ್ಟು ಅಡಿಕೆಯನ್ನು ಮಧ್ಯವರ್ತಿಗಳು ರೈತರ ಮನೆ ಬಾಗಿಲಲ್ಲೇ ಖರೀದಿಸಿ ಗುಟ್ಕ ಕಂಪನಿಗಳಿಗೆ ಮಾರುತ್ತಾರೆ. ಕಮಿಷನ್, ತೆರಿಗೆ ಉಳಿಸುವ ಆಸೆಗೆ ಬೆಳೆಗಾರರು ದಲ್ಲಾಳಿಗಳಿಗೆ ಬಲಿ ಬೀಳುತ್ತಿದ್ದಾರೆ. ಈ ಅಕ್ರಮ ವ್ಯವಹಾರದಲ್ಲಿ ಸರ್ಕಾರಕ್ಕೆ ಕನಿಷ್ಠವೆಂದರೂ 100 ಕೊಟಿ ತೆರಿಗೆ ವಂಚನೆಯಾಗುತ್ತಿದೆ! ಈ ಅಡಿಕೆ ಮಾಫಿಯಾ ವಿದೇಶದಿಂದಲೂ ಅಗ್ಗದಲ್ಲಿ ಕಳಪೆ ಅಡಿಕೆ ತರಿಸಿಕೊಳ್ಳುತ್ತದೆ. ಕಳ್ಳಸಾಗಾಣಿಕೆಯು ಮಾಡಿಸಿಕೊಳ್ಳುತ್ತದೆ. ಸ್ಥಳೀಯ ಅಡಿಕೆ ಜತೆ ಈ ಕಳಪೆ ಅಡಿಕೆ ಬೆರೆಸಿ ಕಲಬೆರೆಕೆ ದಂಧೆ ನಡೆಸುತ್ತದೆ. ಇದಕ್ಕೆ ಕಡಿವಾಣ ಹಾಕಲೆಂದೇ ಯುಪಿಎ ಸರ್ಕಾರ ಆಮದು ಅಡಿಕೆ ಮೇಲೆ ಶೇ 110ರಷ್ಟು ತೆರಿಗೆ ವಿಧಿಸಿತ್ತು. ಈ ದಂಧೆ ದುಬಾರಿಯಾಗಿದ್ದರಿಂದ ಮಾಫಿಯಾ ವಿದೇಶದಿಂದ ಅಡಿಕೆ ತರಿಸುವುದು ನಿಲ್ಲಿಸಿತ್ತು. ಕಳ್ಳಸಾಗಾಣಿಕೆಗೂ ಕಡಿವಾಣ ಬಿದ್ದಿತ್ತು.

ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದ ಬಳಿಕ ಹಿಂದಿನ ಸರ್ಕಾರದ ಬಿಗಿ ಕಡಿಮೆಯಾಗಿ ಮತ್ತೆ ಮಾಫಿಯಾ ಚಿಗುರಿಕೊಂಡಿದೆ! ಹೀಗಾಗಿ 2014ರ ನಂತರ ಅಡಿಕೆ ಬೆಳೆಗಾರರಿಗೆ ಹೇಳಿಕೊಳ್ಳುವಂಥ ಅನುಕೂಲವೇನೂ ಆಗಿಲ್ಲ. ಚಾಲಿಯಂಥ ಅಡಿಕೆ ಧಾರಣೆ ಕ್ವಿಂಟಾಲಿಗೆ 30 ಸಾವಿರದ ಆಸುಪಾಸಿನಲ್ಲಿ ಸುತ್ತಾಡಿದರೆ ರೈತರಿಗೆ ತೀರ ಲಾಭವೇನೂ ಇಲ್ಲದಿದ್ದರೂ ಸಮಚಿತ್ತದ ಬದುಕಿಗೊಂದು ದಾರಿಯಾಗುತ್ತದೆ. ಈ ಬಾರಿ ಧಾರಣೆ ಈ ರೇಂಜಿನಲ್ಲೇ ಇದೆ. ಕಳೆದ ವರ್ಷ ಬಿದ್ದ ವಿಪರೀತ ಮಳೆಯಿಂದ ಬಂದ ಕೊಳೆರೋಗ, ಹವಾಮಾನ ವೈಪರೀತ್ಯದಿಂದ ಅಡಿಕೆಗೆ ಬೆಲೆ ಬಂದಿದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ. ಆದರೆ ಇದೇ ಬೆಲೆ ಮುಂದೆಯೂ ಸಿಗುತ್ತದೆಂದು ಹೇಳಲಾಗದು. ಇತ್ತೀಚಿನ ವರ್ಷಗಳಲ್ಲಂತೂ ಅಡಿಕೆ ಇದ್ದಕ್ಕಿದ್ದಂತೆ ವಿವಾದಕ್ಕೆ ಸಿಲುಕಿ ಮಾರುಕಟ್ಟೆ ಮೇಲೆ ಪರಿಣಾಮವಾಗುವ ಆತಂಕ ಆರಂಭವಾಗುತ್ತಿದೆ. ಈ ಗೊಂದಲಕ್ಕೆ ಅಡಿಕೆ ಬೆಳೆಗಾರ ಸಹಜವಾಗೇ ಬೆಚ್ಚೆಳುತ್ತಿದ್ದಾನೆ.

ಆದರೆ ಅಡಿಕೆ ಬಗ್ಗೆ ವಿವಾದ ಎದ್ದಾಗೆಲ್ಲ ಧಾರಣೆ ಮೇಲೆ ಕೆಟ್ಟ ಪರಿಣಾಮವೇನೂ ಆಗಿದಿಲ್ಲ. ಈ ಗಲಾಟಿಯ ಲಾಭ ದಲ್ಲಾಳಿಗಳು, ಮಧ್ಯವರ್ತಿಗಳು ಎತ್ತಿದ್ದಾರೆ. ಇದರಲ್ಲಿ ರಾಜಕಾರಣೀಗಳೇನೂ ಕಮ್ಮಿಯಿಲ್ಲ. ಅಡಿಕೆ ಬೆಳೆಗಾರರಲ್ಲಿ ಅಲ್ಲೋಲಕಲ್ಲೋಲ ಉಂಟಾಗಿದ್ದು 2011ರಲ್ಲಿ. ಆಗ ಅಧಿಕಾರದಲ್ಲಿದ್ದ ಯುಪಿಎ-2 ಸರ್ಕಾರ ಅಡಿಕೆಯಲ್ಲಿ ಆರೋಗ್ಯಕ್ಕೆ ಹಾನಿಕರವಾದ ಅಂಶಗಳಿದೆಯೆಮದು ಸುಪ್ರೀಮ್ ಕೋರ್ಟ್‍ಗೆ ಅಫಿಡವಿಟ್ ಸಲ್ಲಿಸಿತ್ತು. ಇದನ್ನು ಬಿಜೆಪಿಗರು ರಾಜಕೀಯಕ್ಕೆ ಬಳಸಿಕೊಂಡರು; ಕಾಂಗ್ರೆಸ್ ಅಡಿಕೆ ಬೆಳೆಗಾರರ ವೈರಿಯೆಂಬಂತೆ ಬಿಂಬಿಸಿದರು. ಅಡಿಕೆ ನಿಷೇಧಕ್ಕೆ ಕಾಂಗ್ರೆಸ್ ಹವಣಿಸುತ್ತಿದೆಯೆಂದು ಹುಯಿಲೆಬ್ಬಿಸಿದರು.

ಅಡಿಕೆ ಬೆಳೆಗಾರರು ಕಾಂಗ್ರೆಸ್ ವಿರುದ್ಧ ತಿರುಗಿ ಬೀಳುವಂತೆ ಮಾಡಲಾಯಿತು. ಕಾಂಗ್ರೆಸ್ ಅಡಿಕೆ ನಿಷೇದಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರೂ ಬಿಜೆಪಿ ಅಪಪ್ರಚಾರದ ಎದುರು ಬೆಳೆಗಾರರನ್ನು ಅದು ಇಂಪ್ರೆಸ್ ಮಾಡಲಾಗಲಿಲ್ಲ! ಇದು ಅಡಿಕೆ ತೋಟ ಪಟ್ಟಿಯಲ್ಲಿ 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ವರವಾಗಿ ಪರಿಣಮಿಸಿತು. ಶಿವಮೊಗ್ಗೆಯ ರಾಘವೇಂದ್ರ, ಉಡುಪಿ-ಚಿಕ್ಕಮಗಳೂರಿನ ಶೋಭಾ ಕರಂದ್ಲಾಜೆ, ಉತ್ತರ ಕನ್ನಡದ ಅನಂತ ಹೆಗಡೆ, ಮಂಗಳೂರಿನ ನಳಿನ್ ಕಟೀಲ್, ದಾವಣಗೆರೆಯ ಸಿದ್ದೇಶ್ವರ್ ಅಡಿಕೆ ಬೆಳೆಗಾರರ ಬಚಾಯಿಸುವ ಭೋಂಗು ಬಿಟ್ಟೇ ಸಂಸದರಾಗಿ ಆಯ್ಕೆಯಾದರು. ತೋಟಿಗರ ಯಮಾರಿಸಿ ದಂಡಿಯಾಗಿ ಓಟು ಪಡೆದು ಗೆದ್ದವರಿಗೆ ಆನಂತರ ತಾವು ಕೊಟ್ಟ ಭರವಸೆಯೇ ಮರೆತುಹೋಗಿತ್ತು.

ತೋಟಿಗರಿಗೆ ಆಗುತ್ತಿರುವ ಅನ್ಯಾಯ-ಆತಂಕದ ಬಗ್ಗೆ ಅಡಿಕೆ ಬೆಳೆ ಏರಿಯಾದ ಒಬ್ಬೇ ಒಬ್ಬ ಸಂಸದ ಮಾತಾಡಲಿಲ್ಲ. ತಾವು ಕೊಂಡಾಡುವ ಮೋದಿ ಸರ್ಕಾರವಿದ್ದರೂ ಹಿಂದಿನ ಸರ್ಕಾರ ‘ಅಡಿಕೆ ಆರೋಗ್ಯಕ್ಕೆ ಹಾನಿಕರ’ ಎಂದು ಸುಪ್ರಿಮ್ ಕೋರ್ಟ್‍ಗೆ ಸಲ್ಲಿಸಿದ್ದ ಅಫಿಡವಿಟ್ ಹಿಂಪಡೆಯುವ ಸಣ್ಣ ಪ್ರಯತ್ನವನ್ನೂ ಮಾಡಲಿಲ್ಲ. ಕಾನೂನಿಗೆ ತಿದ್ದುಪಡಿ ತಂದು ಅಡಿಕೆಯನ್ನು ತಂಬಾಕು ಪಟ್ಟಿಯಿಂದ ಹೊರತರುವ ವೀರಾವೇಷದ ಮಾತಾಡಿದ್ದ ಈ ಪಂಚ ಪ್ರಚಂಡರು ಕೃತಘ್ನರಾಗಿ ಹೋದರು. ಈ ವಂಚಕ ಸಂಸದರ ಉದಾಸೀನದ ಒಟ್ಟೂ ಪರಿಣಾಮ ಎಂಬಂತೆ 2017ರ ಡಿಸೆಂಬರ್‍ನಲ್ಲಿ ಅಂದಿನ ಆರೋಗ್ಯ ಇಲಾಖೆಯ ರಾಜ್ಯ ಮಂತ್ರಿ ಅನುಪ್ರಿಯಾ ಪಟೇಲ್ ಯುಪಿಎ ಸರ್ಕಾರದ ಅನಿಸಿಕೆಯನ್ನೇ ಬಿತ್ತರಿಸಿದ್ದರು. ಆಕೆ ಅಡಿಕೆಯಿಂದ ಬಾಯಿ ಕ್ಯಾನ್ಸರ್ ಬರುತ್ತದೆಂದು ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದರು.

ಇಷ್ಟಾದರೂ ಅನಂತ್, ಶೋಭಾ, ಕಟೀಲ್, ಸಿದ್ದೇಶ್ವರ್, ರಾಘವೇಂದ್ರ ತಲೆಕೆಡಿಸಿಕೊಳ್ಳಲಿಲ್ಲ. ತೋಟಿಗರ ನೋವು ಅವರಿಗೆ ಅರ್ಥವಾಗಲಿಲ್ಲ. 2019ರಲ್ಲಿ ಮತ್ತೆ ಈ ಐವರು ಸಂಸದರಾಗಿ ಆಯ್ಕೆಯೂ ಆದರು. ಈ ಬಾರಿಯಾದರೂ ತಮ್ಮ ಸಮಸ್ಯೆಗೆ ಸ್ಪಂದಿಸಬಹುದೆಂದು ಭಾವಿಸಿದ್ದ ತೋಟಿಗರಿಗೆ ಮತ್ತದೇ ಆಘಾತ ಕಾದಿತ್ತು! 12-7-2019 ರಂದು ಆರೋಗ್ಯ ಇಲಾಖೆಯ ಸಹಾಯಕ ಸಚಿವ ಅಶ್ವಿನಿಕುಮಾರ್ ಚೌಬೆ “ಅಡಿಕೆ ದೇಹದ ವಿವಿಧ ಅಂಗಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಬಾಯಿ, ಅನ್ನನಾಳ, ಗಂಟಲು ಮತ್ತಿತರ ಅಂಗಗಳಿಗೆ ಕ್ಯಾನ್ಸರ್ ಬರುವಂತೆ ಮಾಡುತ್ತದೆಂದು ಕೆಲವು ಅಧ್ಯಯನದಿಂದ ತಿಳಿದು ಬಂದಿದೆಯೆಂದು” ಹೇಳಿದರು. ಮಂತ್ರಿಗಳ ಈ ಮಾತಿಂದ ತೋಟಿಗ ಸಮುದಾಯದಲ್ಲಿ ಆತಂಕ-ಆಕ್ರೋಶ ಮೂಡಿತು.

ಇದರಿಂದ ಕಕ್ಕಾಬಿಕ್ಕಿಯಾದ ಕಟೀಲು, ಶೋಭಾ, ಸಿದ್ದೇಶ್ವರ್ ಅವರುಗಳಿಗೆ ಗಡಿಬಿಡಿಯಲ್ಲಿ ಕೇಂದ್ರ ಆರೋಗ್ಯ ಮಂತ್ರಿಯನ್ನು ಭೇಟಿಯಾದ ಪೋಟೋ ಮಾಧ್ಯಮಗಳಿಗೆ ಬಿಡುಗಡೆ ಮಾಡಬೇಕಾಗಿ ಬಂತು. ಅಡಿಕೆ ಬೆಳೆಗಾರರ ಹಿತರಕ್ಷಿಸುವುದಾಗಿ ಹೇಳಿಕೆಯನ್ನೂ ಕೊಟ್ಟರು. ಆದರೆ ಇವತ್ತಿಗೂ ಅಡಿಕೆ ತೋಟಗಳಿಗೆ ಕೇಂದ್ರ ಸರ್ಕಾರ ಬಿಟ್ಟ ಕ್ಯಾನ್ಸರ್ ಗುಮ್ಮ ಮಾತ್ರ ಅಲ್ಲೇ ಕುಂತಿದೆ. ತೋಟಿಗರು ಅಂಜುತ್ತಲೇ ಬದುಕುತ್ತಿದ್ದಾರೆ. ಸಿಗರೇಟ್ ಲಾಬಿ ಮತ್ತು ಗುಟ್ಕ ಲಾಬಿ ನಡುವೆ ವ್ಯವಹಾರಿಕ ಸಂಘರ್ಷ ಮೊದಲಿನಿಂದಲೂ ನಡೆಯುತ್ತಿದೆ. ಕೇಂದ್ರದ ಆಹಾರ ಸುರಕ್ಷೆ ಮತ್ತು ಗುಣಮಟ್ಟಗಳ ನಿಯಾಮಾವಳಿಯಂತೆ ತಂಬಾಕಿನೊಂದಿಗೆ ಅಡಿಕೆ ಉತ್ಪನ್ನಗಳನ್ನೂ ಸೇರಿಸಿರುವುದೇ ಸಮಸ್ಯೆಯ ಮೂಲ.

ಸ್ವಲ್ಪ ತಿಂದರೆ ಅಡಿಕೆಯಲ್ಲಿ ಔಷಧಿ ಗುಣವಿದೆ. ಅತಿಯಾದರೆ ಹಾನಿಯೇ ಎಂದು ಸಂಶೋಧಕರು ಹೇಳುತ್ತಾರೆ. ಅಡಿಕೆ ವಹಿವಾಟು ನಡೆಸುವ ಸಹಕಾರ ಸಂಸ್ಥೆಗಳು ಕಾಸರಗೋಡಿನ ಸಿಪಿಸಿಆರ್‌ಐ ಮೂಲಕ ಅಡಿಕೆಯ ಗುಣಾವಗುಣದ ಬಗ್ಗೆ ಸಂಶೋಧನೆ ನಡೆಯುವಂತೆ ನೋಡಿಕೊಂಡಿದ್ದವು. ಈ ವರದಿ ಆಡಿಕೆ ಕ್ಯಾನ್ಸರ್‍ಕಾರಕವಲ್ಲ; ಆರೋಗ್ಯ ವರ್ಧಕ ಎಂದು ಹೇಳಿದೆ. ಹಿಂದೆ ಕೆಲವು ಕಂಪನಿಗಳು ಅಡಿಕೆಯನ್ನು ಚಾಕೊಲೆಟ್ ತಯಾರಿಕೆಗೆ ಬಳಸಿದ್ದವು. ಈ ಪ್ರಯೋಗ ಯಶಸ್ವಿಯಾಗಲಿಲ್ಲ. ವೈನ್ ತಯಾರಿಕೆ ಪ್ರಯತ್ನ ನಡೆದರೂ ದುಬಾರಿ ಎಂದಾಯಿತು. ಚಹಾ, ಬಣ್ಣ ಮತ್ತಿತರ ಉದ್ದೇಶಕ್ಕೆ ಅಡಿಕೆ ಬಳಸುವ ಸಂಶೋಧನೆಗಳು ನಡೆಯುತ್ತಿವೆ.

ಅಡಿಕೆ ನಿಷೇಧದ ಸಮಸ್ಯೆ ಇರುವುದು ತೋಟಪಟ್ಟಿಯ ಸಂಸದರ ಇಚ್ಛಾಶಕ್ತಿಯ ಕೊರತೆಯಲ್ಲಿ. ಸಂಸತ್ತಿನಲ್ಲಿ ಚರ್ಚೆ, ಕಾನೂನಿನಲ್ಲಿ ತಿದ್ದುಪಡಿ ಮೂಲಕ ಮಾತ್ರ ಅಡಿಕೆ ಮಾನಕ್ಕೆ ಬಂದಿರುವ ಕಳಂಕ ತೆಗೆಯಬಹುದು. ಆದರೆ ಅದು ಆಗುತ್ತಿಲ್ಲ.


ಇದನ್ನೂ ಓದಿ: ಅಡಿಕೆ ಬೆಳೆಗಾರರನ್ನು ರಕ್ಷಿಸುವರೆ ಈ ಆರು ಜನ ಮಾನಗೇಡಿ ಸಂಸದರು?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಇಂಪ್ರೆಸ್ >ತಟ್ಟು
    ರಕ್ಷಿಸು(ಸಂಸ್ಕ್ರುತ)>ಕಾಪಾಡು(ಕನ್ನಡ)
    ಸ್ವಲ್ಪ(ಸಂಸ್ಕ್ರುತ)>ತುಸು(ಕ)

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...