Homeಕರ್ನಾಟಕಅಸ್ಥಿರ ಅಡಿಕೆ ಮಾರುಕಟ್ಟೆಯೂ, ಕಂಗೆಟ್ಟ ತೋಟಿಗರೂ!

ಅಸ್ಥಿರ ಅಡಿಕೆ ಮಾರುಕಟ್ಟೆಯೂ, ಕಂಗೆಟ್ಟ ತೋಟಿಗರೂ!

ಹಿಂದಿನ ಸರ್ಕಾರ ‘ಅಡಿಕೆ ಆರೋಗ್ಯಕ್ಕೆ ಹಾನಿಕರ’ ಎಂದು ಸುಪ್ರಿಮ್ ಕೋರ್ಟ್‍ಗೆ ಸಲ್ಲಿಸಿದ್ದ ಅಫಿಡವಿಟ್ ಹಿಂಪಡೆಯುವ ಸಣ್ಣ ಪ್ರಯತ್ನವನ್ನು ಯಾವ ಸಂಸದರೂ ಮಾಡಲಿಲ್ಲ..

- Advertisement -
- Advertisement -

ಅಡಿಕೆ ಮಾರುಕಟ್ಟೆ ಹೇಗೆ ಅಸ್ಥಿರವೋ ಹಾಗೇ ಅಡಿಕೆ ತೋಟಿಗರ ಬದುಕೂ ಅನಿಶ್ಚಿತವೇ! ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಇವತ್ತಿಗೂ ‘ಅಡಿಕೆ ನೀತಿ’ ಒಂದನ್ನು ರೂಪಿಸಲಾಗಿಲ್ಲ. ಹಾಲಿ ಸರ್ಕಾರಿ ಧೋರಣೆಯಿಂದ ಅಡಿಕೆ ಬೆಳೆಗಾರರಿಗಿಂತ ದಲ್ಲಾಳಿಗಳಿಗೆ ಮತ್ತು ಕಳ್ಳ ಸಾಗಾಣಿಕೆದಾರರಿಗೇ ಅನುಕೂಲ ಹೆಚ್ಚಾಗಿದೆ. ಅಡಿಕೆ ವಹಿವಾಟಿನಲ್ಲಾಗುವ ಪ್ರತಿ ಏರಿಳಿತ ಅಡಿಕೆ ಕೃಷಿಯನ್ನೇ ಅವಲಂಭಿಸಿರುವ ರಾಜ್ಯದ ಏಳೆಂಟು ಜಿಲ್ಲೆಯ ತೋಟಿಗರನ್ನು ಕಂಗೆಡಿಸುತ್ತಿರುತ್ತದೆ. ಜತೆಗೆ ಕೊಳೆರೋಗ, ಕೇಂದ್ರದ ಅಡಿಕೆ ನಿಷೇಧದ ಗುಮ್ಮ, ಅಡಿಕೆ ಕ್ಯಾನ್ಸರ್‌ಕಾರಕ ಎಂಬ ಕೇಂದ್ರ ಆರೋಗ್ಯ ಸಚಿವಾಲಯ ತಿಳುವಳಿಕೆ, ಕಾಡು ಪ್ರಾಣಿಗಳ ಹಾವಳಿ ಬಹುಸಂಖ್ಯಾತ ಸಣ್ಣ ಹಿಡುವಳಿದಾರರ ನಿದ್ದೆಗೆಡಿಸುತ್ತಲೇ ಇದೆ.

ಶ್ರೀಲಂಕಾ, ಮ್ಯಾನ್ಮಾರ್, ಮಲೇಶ್ಯಾ ದೇಶಗಳು ಮತ್ತು ದೇಶದ ಕೇರಳ, ಗೋವಾ, ಆಸ್ಸಾಮ್ ಮುಂತಾದೆಡೆ ನೈಸರ್ಗಿಕವಾಗಿ ಕಾಡು ಉತ್ಪನ್ನದಂತೆ ಅಡಿಕೆಯನ್ನು ಪಡೆಯಲಾಗುತ್ತಿದೆ; ಕರ್ನಾಟಕದಲ್ಲಿ ಮಾತ್ರ ಕ್ರಮಬದ್ಧ ಬೇಸಾಯದಿಂದ ಅಡಿಕೆ ಬೆಳೆಯಲಾಗುತ್ತದೆ. ಭಾರತದ ಒಟ್ಟೂ 4ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ತೋಟಗಳಿವೆ. ಇದರಲ್ಲಿ 2ಲಕ್ಷ ಹೆಕ್ಟೇರ್‍ಗೂ ಹೆಚ್ಚು ಪ್ರದೇಶ ಕರ್ನಾಟಕದಲ್ಲಿದೆ. ಪ್ರತಿ ವರ್ಷ ಉತ್ಪಾದೆಯಾಗುವ 8ಲಕ್ಷ ಟನ್ ಅಡಿಕೆಯಲ್ಲಿ ಶೇಕಡಾ 60ರಷ್ಟು ಕರ್ನಾಟಕದ್ದು. ರಾಜ್ಯದ ಅಡಿಕೆ ಉತ್ಕೃಷ್ಟ ಗುಣಮಟ್ಟದ್ದು. ಕರ್ನಾಟಕದ ಒಟ್ಟು ಮುಕ್ಕಾಲು ಪಾಲು ಉತ್ತರಕನ್ನಡ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಉತ್ಪಾದನೆ ಆಗುತ್ತದೆ.

ಅಡಿಕೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ, ಹಾವೇರಿ ಹಾಗೂ ತುಮಕೂರು ಜಿಲ್ಲೆಯ ತೋಟಿಗರ ಜೀವನಾಧಾರ ವಾಣಿಜ್ಯ ಬೆಳೆ. ಮಲೆನಾಡಿನ ತೋಟಿಗರಂತೂ ಬದುಕು ಕಟ್ಟಕೊಂಡಿರುವುದೇ ಅಡಿಕೆ ವಹಿವಾಟಿನ ಮೇಲೆ. ಮಲೆನಾಡಿನ ಕೆಂಪಡಿಕೆಗೆ ವಿದೇಶಗಳಲ್ಲೂ ದೊಡ್ಡ ಬೇಡಿಕೆಯಿದೆ. ಇಲ್ಲಿಯ ಸರಕು ಮಾದರಿಯ ಅಡಿಕೆಯನ್ನು ದಕ್ಷಿಣ ಭಾರತೀಯರು ವೀಳ್ಯದೆಲೆಯೊಂದಿಗೆ ಮೆಲ್ಲುತ್ತಾರೆ. ರಾಶಿ ಅಡಿಕೆ, ಬೆಟೆ ಅಡಿಕೆ ಪಾನ್‍ಮಸಲಾಕ್ಕೆ ಉಪಯೋಗಿಸಲಾಗುತ್ತದೆ. ಪಾನ್‍ಮಸಾಲಾ ಕಂಪನಿಗಳು ಮತ್ತು ಸಿಹಿ ಅಡಿಕೆ ಪೊಟ್ಟಣ ತಯಾರಿಕಾ ಘಟಕಗಳಲ್ಲಿ ಹೆಚ್ಚಾಗಿರುವುದು ಉತ್ತರ ಭಾರತದಲ್ಲಿ. ಈ ಗುಟ್ಕ ಕಂಪನಿಗಳಿಗೆ ಅಡಿಕೆ ಒದಗಿಸುವ ಮಧ್ಯವರ್ತಿಗಳ ಅನಾಹುತಕಾರಿ ಮಾಫಿಯಾ ತೋಟಿಗರಿಗೆ ನಾಜೂಕಾಗಿ ವಂಚಿಸುತ್ತಿದೆ.

ಅಧಿಕೃತ ಸಹಕಾರ ಸಂಘಗಳು ಮತ್ತು ಎಪಿಎಂಸಿ ಮೂಲಕ ಶೇಕಡಾ 60ರಷ್ಟು ಅಡಿಕೆ ವಹಿವಾಟಾಗುತ್ತಿದೆಯಷ್ಟೇ. ಶೇ.40ರಷ್ಟು ಅಡಿಕೆಯನ್ನು ಮಧ್ಯವರ್ತಿಗಳು ರೈತರ ಮನೆ ಬಾಗಿಲಲ್ಲೇ ಖರೀದಿಸಿ ಗುಟ್ಕ ಕಂಪನಿಗಳಿಗೆ ಮಾರುತ್ತಾರೆ. ಕಮಿಷನ್, ತೆರಿಗೆ ಉಳಿಸುವ ಆಸೆಗೆ ಬೆಳೆಗಾರರು ದಲ್ಲಾಳಿಗಳಿಗೆ ಬಲಿ ಬೀಳುತ್ತಿದ್ದಾರೆ. ಈ ಅಕ್ರಮ ವ್ಯವಹಾರದಲ್ಲಿ ಸರ್ಕಾರಕ್ಕೆ ಕನಿಷ್ಠವೆಂದರೂ 100 ಕೊಟಿ ತೆರಿಗೆ ವಂಚನೆಯಾಗುತ್ತಿದೆ! ಈ ಅಡಿಕೆ ಮಾಫಿಯಾ ವಿದೇಶದಿಂದಲೂ ಅಗ್ಗದಲ್ಲಿ ಕಳಪೆ ಅಡಿಕೆ ತರಿಸಿಕೊಳ್ಳುತ್ತದೆ. ಕಳ್ಳಸಾಗಾಣಿಕೆಯು ಮಾಡಿಸಿಕೊಳ್ಳುತ್ತದೆ. ಸ್ಥಳೀಯ ಅಡಿಕೆ ಜತೆ ಈ ಕಳಪೆ ಅಡಿಕೆ ಬೆರೆಸಿ ಕಲಬೆರೆಕೆ ದಂಧೆ ನಡೆಸುತ್ತದೆ. ಇದಕ್ಕೆ ಕಡಿವಾಣ ಹಾಕಲೆಂದೇ ಯುಪಿಎ ಸರ್ಕಾರ ಆಮದು ಅಡಿಕೆ ಮೇಲೆ ಶೇ 110ರಷ್ಟು ತೆರಿಗೆ ವಿಧಿಸಿತ್ತು. ಈ ದಂಧೆ ದುಬಾರಿಯಾಗಿದ್ದರಿಂದ ಮಾಫಿಯಾ ವಿದೇಶದಿಂದ ಅಡಿಕೆ ತರಿಸುವುದು ನಿಲ್ಲಿಸಿತ್ತು. ಕಳ್ಳಸಾಗಾಣಿಕೆಗೂ ಕಡಿವಾಣ ಬಿದ್ದಿತ್ತು.

ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದ ಬಳಿಕ ಹಿಂದಿನ ಸರ್ಕಾರದ ಬಿಗಿ ಕಡಿಮೆಯಾಗಿ ಮತ್ತೆ ಮಾಫಿಯಾ ಚಿಗುರಿಕೊಂಡಿದೆ! ಹೀಗಾಗಿ 2014ರ ನಂತರ ಅಡಿಕೆ ಬೆಳೆಗಾರರಿಗೆ ಹೇಳಿಕೊಳ್ಳುವಂಥ ಅನುಕೂಲವೇನೂ ಆಗಿಲ್ಲ. ಚಾಲಿಯಂಥ ಅಡಿಕೆ ಧಾರಣೆ ಕ್ವಿಂಟಾಲಿಗೆ 30 ಸಾವಿರದ ಆಸುಪಾಸಿನಲ್ಲಿ ಸುತ್ತಾಡಿದರೆ ರೈತರಿಗೆ ತೀರ ಲಾಭವೇನೂ ಇಲ್ಲದಿದ್ದರೂ ಸಮಚಿತ್ತದ ಬದುಕಿಗೊಂದು ದಾರಿಯಾಗುತ್ತದೆ. ಈ ಬಾರಿ ಧಾರಣೆ ಈ ರೇಂಜಿನಲ್ಲೇ ಇದೆ. ಕಳೆದ ವರ್ಷ ಬಿದ್ದ ವಿಪರೀತ ಮಳೆಯಿಂದ ಬಂದ ಕೊಳೆರೋಗ, ಹವಾಮಾನ ವೈಪರೀತ್ಯದಿಂದ ಅಡಿಕೆಗೆ ಬೆಲೆ ಬಂದಿದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ. ಆದರೆ ಇದೇ ಬೆಲೆ ಮುಂದೆಯೂ ಸಿಗುತ್ತದೆಂದು ಹೇಳಲಾಗದು. ಇತ್ತೀಚಿನ ವರ್ಷಗಳಲ್ಲಂತೂ ಅಡಿಕೆ ಇದ್ದಕ್ಕಿದ್ದಂತೆ ವಿವಾದಕ್ಕೆ ಸಿಲುಕಿ ಮಾರುಕಟ್ಟೆ ಮೇಲೆ ಪರಿಣಾಮವಾಗುವ ಆತಂಕ ಆರಂಭವಾಗುತ್ತಿದೆ. ಈ ಗೊಂದಲಕ್ಕೆ ಅಡಿಕೆ ಬೆಳೆಗಾರ ಸಹಜವಾಗೇ ಬೆಚ್ಚೆಳುತ್ತಿದ್ದಾನೆ.

ಆದರೆ ಅಡಿಕೆ ಬಗ್ಗೆ ವಿವಾದ ಎದ್ದಾಗೆಲ್ಲ ಧಾರಣೆ ಮೇಲೆ ಕೆಟ್ಟ ಪರಿಣಾಮವೇನೂ ಆಗಿದಿಲ್ಲ. ಈ ಗಲಾಟಿಯ ಲಾಭ ದಲ್ಲಾಳಿಗಳು, ಮಧ್ಯವರ್ತಿಗಳು ಎತ್ತಿದ್ದಾರೆ. ಇದರಲ್ಲಿ ರಾಜಕಾರಣೀಗಳೇನೂ ಕಮ್ಮಿಯಿಲ್ಲ. ಅಡಿಕೆ ಬೆಳೆಗಾರರಲ್ಲಿ ಅಲ್ಲೋಲಕಲ್ಲೋಲ ಉಂಟಾಗಿದ್ದು 2011ರಲ್ಲಿ. ಆಗ ಅಧಿಕಾರದಲ್ಲಿದ್ದ ಯುಪಿಎ-2 ಸರ್ಕಾರ ಅಡಿಕೆಯಲ್ಲಿ ಆರೋಗ್ಯಕ್ಕೆ ಹಾನಿಕರವಾದ ಅಂಶಗಳಿದೆಯೆಮದು ಸುಪ್ರೀಮ್ ಕೋರ್ಟ್‍ಗೆ ಅಫಿಡವಿಟ್ ಸಲ್ಲಿಸಿತ್ತು. ಇದನ್ನು ಬಿಜೆಪಿಗರು ರಾಜಕೀಯಕ್ಕೆ ಬಳಸಿಕೊಂಡರು; ಕಾಂಗ್ರೆಸ್ ಅಡಿಕೆ ಬೆಳೆಗಾರರ ವೈರಿಯೆಂಬಂತೆ ಬಿಂಬಿಸಿದರು. ಅಡಿಕೆ ನಿಷೇಧಕ್ಕೆ ಕಾಂಗ್ರೆಸ್ ಹವಣಿಸುತ್ತಿದೆಯೆಂದು ಹುಯಿಲೆಬ್ಬಿಸಿದರು.

ಅಡಿಕೆ ಬೆಳೆಗಾರರು ಕಾಂಗ್ರೆಸ್ ವಿರುದ್ಧ ತಿರುಗಿ ಬೀಳುವಂತೆ ಮಾಡಲಾಯಿತು. ಕಾಂಗ್ರೆಸ್ ಅಡಿಕೆ ನಿಷೇದಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರೂ ಬಿಜೆಪಿ ಅಪಪ್ರಚಾರದ ಎದುರು ಬೆಳೆಗಾರರನ್ನು ಅದು ಇಂಪ್ರೆಸ್ ಮಾಡಲಾಗಲಿಲ್ಲ! ಇದು ಅಡಿಕೆ ತೋಟ ಪಟ್ಟಿಯಲ್ಲಿ 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ವರವಾಗಿ ಪರಿಣಮಿಸಿತು. ಶಿವಮೊಗ್ಗೆಯ ರಾಘವೇಂದ್ರ, ಉಡುಪಿ-ಚಿಕ್ಕಮಗಳೂರಿನ ಶೋಭಾ ಕರಂದ್ಲಾಜೆ, ಉತ್ತರ ಕನ್ನಡದ ಅನಂತ ಹೆಗಡೆ, ಮಂಗಳೂರಿನ ನಳಿನ್ ಕಟೀಲ್, ದಾವಣಗೆರೆಯ ಸಿದ್ದೇಶ್ವರ್ ಅಡಿಕೆ ಬೆಳೆಗಾರರ ಬಚಾಯಿಸುವ ಭೋಂಗು ಬಿಟ್ಟೇ ಸಂಸದರಾಗಿ ಆಯ್ಕೆಯಾದರು. ತೋಟಿಗರ ಯಮಾರಿಸಿ ದಂಡಿಯಾಗಿ ಓಟು ಪಡೆದು ಗೆದ್ದವರಿಗೆ ಆನಂತರ ತಾವು ಕೊಟ್ಟ ಭರವಸೆಯೇ ಮರೆತುಹೋಗಿತ್ತು.

ತೋಟಿಗರಿಗೆ ಆಗುತ್ತಿರುವ ಅನ್ಯಾಯ-ಆತಂಕದ ಬಗ್ಗೆ ಅಡಿಕೆ ಬೆಳೆ ಏರಿಯಾದ ಒಬ್ಬೇ ಒಬ್ಬ ಸಂಸದ ಮಾತಾಡಲಿಲ್ಲ. ತಾವು ಕೊಂಡಾಡುವ ಮೋದಿ ಸರ್ಕಾರವಿದ್ದರೂ ಹಿಂದಿನ ಸರ್ಕಾರ ‘ಅಡಿಕೆ ಆರೋಗ್ಯಕ್ಕೆ ಹಾನಿಕರ’ ಎಂದು ಸುಪ್ರಿಮ್ ಕೋರ್ಟ್‍ಗೆ ಸಲ್ಲಿಸಿದ್ದ ಅಫಿಡವಿಟ್ ಹಿಂಪಡೆಯುವ ಸಣ್ಣ ಪ್ರಯತ್ನವನ್ನೂ ಮಾಡಲಿಲ್ಲ. ಕಾನೂನಿಗೆ ತಿದ್ದುಪಡಿ ತಂದು ಅಡಿಕೆಯನ್ನು ತಂಬಾಕು ಪಟ್ಟಿಯಿಂದ ಹೊರತರುವ ವೀರಾವೇಷದ ಮಾತಾಡಿದ್ದ ಈ ಪಂಚ ಪ್ರಚಂಡರು ಕೃತಘ್ನರಾಗಿ ಹೋದರು. ಈ ವಂಚಕ ಸಂಸದರ ಉದಾಸೀನದ ಒಟ್ಟೂ ಪರಿಣಾಮ ಎಂಬಂತೆ 2017ರ ಡಿಸೆಂಬರ್‍ನಲ್ಲಿ ಅಂದಿನ ಆರೋಗ್ಯ ಇಲಾಖೆಯ ರಾಜ್ಯ ಮಂತ್ರಿ ಅನುಪ್ರಿಯಾ ಪಟೇಲ್ ಯುಪಿಎ ಸರ್ಕಾರದ ಅನಿಸಿಕೆಯನ್ನೇ ಬಿತ್ತರಿಸಿದ್ದರು. ಆಕೆ ಅಡಿಕೆಯಿಂದ ಬಾಯಿ ಕ್ಯಾನ್ಸರ್ ಬರುತ್ತದೆಂದು ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದರು.

ಇಷ್ಟಾದರೂ ಅನಂತ್, ಶೋಭಾ, ಕಟೀಲ್, ಸಿದ್ದೇಶ್ವರ್, ರಾಘವೇಂದ್ರ ತಲೆಕೆಡಿಸಿಕೊಳ್ಳಲಿಲ್ಲ. ತೋಟಿಗರ ನೋವು ಅವರಿಗೆ ಅರ್ಥವಾಗಲಿಲ್ಲ. 2019ರಲ್ಲಿ ಮತ್ತೆ ಈ ಐವರು ಸಂಸದರಾಗಿ ಆಯ್ಕೆಯೂ ಆದರು. ಈ ಬಾರಿಯಾದರೂ ತಮ್ಮ ಸಮಸ್ಯೆಗೆ ಸ್ಪಂದಿಸಬಹುದೆಂದು ಭಾವಿಸಿದ್ದ ತೋಟಿಗರಿಗೆ ಮತ್ತದೇ ಆಘಾತ ಕಾದಿತ್ತು! 12-7-2019 ರಂದು ಆರೋಗ್ಯ ಇಲಾಖೆಯ ಸಹಾಯಕ ಸಚಿವ ಅಶ್ವಿನಿಕುಮಾರ್ ಚೌಬೆ “ಅಡಿಕೆ ದೇಹದ ವಿವಿಧ ಅಂಗಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಬಾಯಿ, ಅನ್ನನಾಳ, ಗಂಟಲು ಮತ್ತಿತರ ಅಂಗಗಳಿಗೆ ಕ್ಯಾನ್ಸರ್ ಬರುವಂತೆ ಮಾಡುತ್ತದೆಂದು ಕೆಲವು ಅಧ್ಯಯನದಿಂದ ತಿಳಿದು ಬಂದಿದೆಯೆಂದು” ಹೇಳಿದರು. ಮಂತ್ರಿಗಳ ಈ ಮಾತಿಂದ ತೋಟಿಗ ಸಮುದಾಯದಲ್ಲಿ ಆತಂಕ-ಆಕ್ರೋಶ ಮೂಡಿತು.

ಇದರಿಂದ ಕಕ್ಕಾಬಿಕ್ಕಿಯಾದ ಕಟೀಲು, ಶೋಭಾ, ಸಿದ್ದೇಶ್ವರ್ ಅವರುಗಳಿಗೆ ಗಡಿಬಿಡಿಯಲ್ಲಿ ಕೇಂದ್ರ ಆರೋಗ್ಯ ಮಂತ್ರಿಯನ್ನು ಭೇಟಿಯಾದ ಪೋಟೋ ಮಾಧ್ಯಮಗಳಿಗೆ ಬಿಡುಗಡೆ ಮಾಡಬೇಕಾಗಿ ಬಂತು. ಅಡಿಕೆ ಬೆಳೆಗಾರರ ಹಿತರಕ್ಷಿಸುವುದಾಗಿ ಹೇಳಿಕೆಯನ್ನೂ ಕೊಟ್ಟರು. ಆದರೆ ಇವತ್ತಿಗೂ ಅಡಿಕೆ ತೋಟಗಳಿಗೆ ಕೇಂದ್ರ ಸರ್ಕಾರ ಬಿಟ್ಟ ಕ್ಯಾನ್ಸರ್ ಗುಮ್ಮ ಮಾತ್ರ ಅಲ್ಲೇ ಕುಂತಿದೆ. ತೋಟಿಗರು ಅಂಜುತ್ತಲೇ ಬದುಕುತ್ತಿದ್ದಾರೆ. ಸಿಗರೇಟ್ ಲಾಬಿ ಮತ್ತು ಗುಟ್ಕ ಲಾಬಿ ನಡುವೆ ವ್ಯವಹಾರಿಕ ಸಂಘರ್ಷ ಮೊದಲಿನಿಂದಲೂ ನಡೆಯುತ್ತಿದೆ. ಕೇಂದ್ರದ ಆಹಾರ ಸುರಕ್ಷೆ ಮತ್ತು ಗುಣಮಟ್ಟಗಳ ನಿಯಾಮಾವಳಿಯಂತೆ ತಂಬಾಕಿನೊಂದಿಗೆ ಅಡಿಕೆ ಉತ್ಪನ್ನಗಳನ್ನೂ ಸೇರಿಸಿರುವುದೇ ಸಮಸ್ಯೆಯ ಮೂಲ.

ಸ್ವಲ್ಪ ತಿಂದರೆ ಅಡಿಕೆಯಲ್ಲಿ ಔಷಧಿ ಗುಣವಿದೆ. ಅತಿಯಾದರೆ ಹಾನಿಯೇ ಎಂದು ಸಂಶೋಧಕರು ಹೇಳುತ್ತಾರೆ. ಅಡಿಕೆ ವಹಿವಾಟು ನಡೆಸುವ ಸಹಕಾರ ಸಂಸ್ಥೆಗಳು ಕಾಸರಗೋಡಿನ ಸಿಪಿಸಿಆರ್‌ಐ ಮೂಲಕ ಅಡಿಕೆಯ ಗುಣಾವಗುಣದ ಬಗ್ಗೆ ಸಂಶೋಧನೆ ನಡೆಯುವಂತೆ ನೋಡಿಕೊಂಡಿದ್ದವು. ಈ ವರದಿ ಆಡಿಕೆ ಕ್ಯಾನ್ಸರ್‍ಕಾರಕವಲ್ಲ; ಆರೋಗ್ಯ ವರ್ಧಕ ಎಂದು ಹೇಳಿದೆ. ಹಿಂದೆ ಕೆಲವು ಕಂಪನಿಗಳು ಅಡಿಕೆಯನ್ನು ಚಾಕೊಲೆಟ್ ತಯಾರಿಕೆಗೆ ಬಳಸಿದ್ದವು. ಈ ಪ್ರಯೋಗ ಯಶಸ್ವಿಯಾಗಲಿಲ್ಲ. ವೈನ್ ತಯಾರಿಕೆ ಪ್ರಯತ್ನ ನಡೆದರೂ ದುಬಾರಿ ಎಂದಾಯಿತು. ಚಹಾ, ಬಣ್ಣ ಮತ್ತಿತರ ಉದ್ದೇಶಕ್ಕೆ ಅಡಿಕೆ ಬಳಸುವ ಸಂಶೋಧನೆಗಳು ನಡೆಯುತ್ತಿವೆ.

ಅಡಿಕೆ ನಿಷೇಧದ ಸಮಸ್ಯೆ ಇರುವುದು ತೋಟಪಟ್ಟಿಯ ಸಂಸದರ ಇಚ್ಛಾಶಕ್ತಿಯ ಕೊರತೆಯಲ್ಲಿ. ಸಂಸತ್ತಿನಲ್ಲಿ ಚರ್ಚೆ, ಕಾನೂನಿನಲ್ಲಿ ತಿದ್ದುಪಡಿ ಮೂಲಕ ಮಾತ್ರ ಅಡಿಕೆ ಮಾನಕ್ಕೆ ಬಂದಿರುವ ಕಳಂಕ ತೆಗೆಯಬಹುದು. ಆದರೆ ಅದು ಆಗುತ್ತಿಲ್ಲ.


ಇದನ್ನೂ ಓದಿ: ಅಡಿಕೆ ಬೆಳೆಗಾರರನ್ನು ರಕ್ಷಿಸುವರೆ ಈ ಆರು ಜನ ಮಾನಗೇಡಿ ಸಂಸದರು?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಇಂಪ್ರೆಸ್ >ತಟ್ಟು
    ರಕ್ಷಿಸು(ಸಂಸ್ಕ್ರುತ)>ಕಾಪಾಡು(ಕನ್ನಡ)
    ಸ್ವಲ್ಪ(ಸಂಸ್ಕ್ರುತ)>ತುಸು(ಕ)

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...