Homeಕರ್ನಾಟಕಅಸ್ಥಿರ ಅಡಿಕೆ ಮಾರುಕಟ್ಟೆಯೂ, ಕಂಗೆಟ್ಟ ತೋಟಿಗರೂ!

ಅಸ್ಥಿರ ಅಡಿಕೆ ಮಾರುಕಟ್ಟೆಯೂ, ಕಂಗೆಟ್ಟ ತೋಟಿಗರೂ!

ಹಿಂದಿನ ಸರ್ಕಾರ ‘ಅಡಿಕೆ ಆರೋಗ್ಯಕ್ಕೆ ಹಾನಿಕರ’ ಎಂದು ಸುಪ್ರಿಮ್ ಕೋರ್ಟ್‍ಗೆ ಸಲ್ಲಿಸಿದ್ದ ಅಫಿಡವಿಟ್ ಹಿಂಪಡೆಯುವ ಸಣ್ಣ ಪ್ರಯತ್ನವನ್ನು ಯಾವ ಸಂಸದರೂ ಮಾಡಲಿಲ್ಲ..

- Advertisement -
- Advertisement -

ಅಡಿಕೆ ಮಾರುಕಟ್ಟೆ ಹೇಗೆ ಅಸ್ಥಿರವೋ ಹಾಗೇ ಅಡಿಕೆ ತೋಟಿಗರ ಬದುಕೂ ಅನಿಶ್ಚಿತವೇ! ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಇವತ್ತಿಗೂ ‘ಅಡಿಕೆ ನೀತಿ’ ಒಂದನ್ನು ರೂಪಿಸಲಾಗಿಲ್ಲ. ಹಾಲಿ ಸರ್ಕಾರಿ ಧೋರಣೆಯಿಂದ ಅಡಿಕೆ ಬೆಳೆಗಾರರಿಗಿಂತ ದಲ್ಲಾಳಿಗಳಿಗೆ ಮತ್ತು ಕಳ್ಳ ಸಾಗಾಣಿಕೆದಾರರಿಗೇ ಅನುಕೂಲ ಹೆಚ್ಚಾಗಿದೆ. ಅಡಿಕೆ ವಹಿವಾಟಿನಲ್ಲಾಗುವ ಪ್ರತಿ ಏರಿಳಿತ ಅಡಿಕೆ ಕೃಷಿಯನ್ನೇ ಅವಲಂಭಿಸಿರುವ ರಾಜ್ಯದ ಏಳೆಂಟು ಜಿಲ್ಲೆಯ ತೋಟಿಗರನ್ನು ಕಂಗೆಡಿಸುತ್ತಿರುತ್ತದೆ. ಜತೆಗೆ ಕೊಳೆರೋಗ, ಕೇಂದ್ರದ ಅಡಿಕೆ ನಿಷೇಧದ ಗುಮ್ಮ, ಅಡಿಕೆ ಕ್ಯಾನ್ಸರ್‌ಕಾರಕ ಎಂಬ ಕೇಂದ್ರ ಆರೋಗ್ಯ ಸಚಿವಾಲಯ ತಿಳುವಳಿಕೆ, ಕಾಡು ಪ್ರಾಣಿಗಳ ಹಾವಳಿ ಬಹುಸಂಖ್ಯಾತ ಸಣ್ಣ ಹಿಡುವಳಿದಾರರ ನಿದ್ದೆಗೆಡಿಸುತ್ತಲೇ ಇದೆ.

ಶ್ರೀಲಂಕಾ, ಮ್ಯಾನ್ಮಾರ್, ಮಲೇಶ್ಯಾ ದೇಶಗಳು ಮತ್ತು ದೇಶದ ಕೇರಳ, ಗೋವಾ, ಆಸ್ಸಾಮ್ ಮುಂತಾದೆಡೆ ನೈಸರ್ಗಿಕವಾಗಿ ಕಾಡು ಉತ್ಪನ್ನದಂತೆ ಅಡಿಕೆಯನ್ನು ಪಡೆಯಲಾಗುತ್ತಿದೆ; ಕರ್ನಾಟಕದಲ್ಲಿ ಮಾತ್ರ ಕ್ರಮಬದ್ಧ ಬೇಸಾಯದಿಂದ ಅಡಿಕೆ ಬೆಳೆಯಲಾಗುತ್ತದೆ. ಭಾರತದ ಒಟ್ಟೂ 4ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ತೋಟಗಳಿವೆ. ಇದರಲ್ಲಿ 2ಲಕ್ಷ ಹೆಕ್ಟೇರ್‍ಗೂ ಹೆಚ್ಚು ಪ್ರದೇಶ ಕರ್ನಾಟಕದಲ್ಲಿದೆ. ಪ್ರತಿ ವರ್ಷ ಉತ್ಪಾದೆಯಾಗುವ 8ಲಕ್ಷ ಟನ್ ಅಡಿಕೆಯಲ್ಲಿ ಶೇಕಡಾ 60ರಷ್ಟು ಕರ್ನಾಟಕದ್ದು. ರಾಜ್ಯದ ಅಡಿಕೆ ಉತ್ಕೃಷ್ಟ ಗುಣಮಟ್ಟದ್ದು. ಕರ್ನಾಟಕದ ಒಟ್ಟು ಮುಕ್ಕಾಲು ಪಾಲು ಉತ್ತರಕನ್ನಡ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಉತ್ಪಾದನೆ ಆಗುತ್ತದೆ.

ಅಡಿಕೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ, ಹಾವೇರಿ ಹಾಗೂ ತುಮಕೂರು ಜಿಲ್ಲೆಯ ತೋಟಿಗರ ಜೀವನಾಧಾರ ವಾಣಿಜ್ಯ ಬೆಳೆ. ಮಲೆನಾಡಿನ ತೋಟಿಗರಂತೂ ಬದುಕು ಕಟ್ಟಕೊಂಡಿರುವುದೇ ಅಡಿಕೆ ವಹಿವಾಟಿನ ಮೇಲೆ. ಮಲೆನಾಡಿನ ಕೆಂಪಡಿಕೆಗೆ ವಿದೇಶಗಳಲ್ಲೂ ದೊಡ್ಡ ಬೇಡಿಕೆಯಿದೆ. ಇಲ್ಲಿಯ ಸರಕು ಮಾದರಿಯ ಅಡಿಕೆಯನ್ನು ದಕ್ಷಿಣ ಭಾರತೀಯರು ವೀಳ್ಯದೆಲೆಯೊಂದಿಗೆ ಮೆಲ್ಲುತ್ತಾರೆ. ರಾಶಿ ಅಡಿಕೆ, ಬೆಟೆ ಅಡಿಕೆ ಪಾನ್‍ಮಸಲಾಕ್ಕೆ ಉಪಯೋಗಿಸಲಾಗುತ್ತದೆ. ಪಾನ್‍ಮಸಾಲಾ ಕಂಪನಿಗಳು ಮತ್ತು ಸಿಹಿ ಅಡಿಕೆ ಪೊಟ್ಟಣ ತಯಾರಿಕಾ ಘಟಕಗಳಲ್ಲಿ ಹೆಚ್ಚಾಗಿರುವುದು ಉತ್ತರ ಭಾರತದಲ್ಲಿ. ಈ ಗುಟ್ಕ ಕಂಪನಿಗಳಿಗೆ ಅಡಿಕೆ ಒದಗಿಸುವ ಮಧ್ಯವರ್ತಿಗಳ ಅನಾಹುತಕಾರಿ ಮಾಫಿಯಾ ತೋಟಿಗರಿಗೆ ನಾಜೂಕಾಗಿ ವಂಚಿಸುತ್ತಿದೆ.

ಅಧಿಕೃತ ಸಹಕಾರ ಸಂಘಗಳು ಮತ್ತು ಎಪಿಎಂಸಿ ಮೂಲಕ ಶೇಕಡಾ 60ರಷ್ಟು ಅಡಿಕೆ ವಹಿವಾಟಾಗುತ್ತಿದೆಯಷ್ಟೇ. ಶೇ.40ರಷ್ಟು ಅಡಿಕೆಯನ್ನು ಮಧ್ಯವರ್ತಿಗಳು ರೈತರ ಮನೆ ಬಾಗಿಲಲ್ಲೇ ಖರೀದಿಸಿ ಗುಟ್ಕ ಕಂಪನಿಗಳಿಗೆ ಮಾರುತ್ತಾರೆ. ಕಮಿಷನ್, ತೆರಿಗೆ ಉಳಿಸುವ ಆಸೆಗೆ ಬೆಳೆಗಾರರು ದಲ್ಲಾಳಿಗಳಿಗೆ ಬಲಿ ಬೀಳುತ್ತಿದ್ದಾರೆ. ಈ ಅಕ್ರಮ ವ್ಯವಹಾರದಲ್ಲಿ ಸರ್ಕಾರಕ್ಕೆ ಕನಿಷ್ಠವೆಂದರೂ 100 ಕೊಟಿ ತೆರಿಗೆ ವಂಚನೆಯಾಗುತ್ತಿದೆ! ಈ ಅಡಿಕೆ ಮಾಫಿಯಾ ವಿದೇಶದಿಂದಲೂ ಅಗ್ಗದಲ್ಲಿ ಕಳಪೆ ಅಡಿಕೆ ತರಿಸಿಕೊಳ್ಳುತ್ತದೆ. ಕಳ್ಳಸಾಗಾಣಿಕೆಯು ಮಾಡಿಸಿಕೊಳ್ಳುತ್ತದೆ. ಸ್ಥಳೀಯ ಅಡಿಕೆ ಜತೆ ಈ ಕಳಪೆ ಅಡಿಕೆ ಬೆರೆಸಿ ಕಲಬೆರೆಕೆ ದಂಧೆ ನಡೆಸುತ್ತದೆ. ಇದಕ್ಕೆ ಕಡಿವಾಣ ಹಾಕಲೆಂದೇ ಯುಪಿಎ ಸರ್ಕಾರ ಆಮದು ಅಡಿಕೆ ಮೇಲೆ ಶೇ 110ರಷ್ಟು ತೆರಿಗೆ ವಿಧಿಸಿತ್ತು. ಈ ದಂಧೆ ದುಬಾರಿಯಾಗಿದ್ದರಿಂದ ಮಾಫಿಯಾ ವಿದೇಶದಿಂದ ಅಡಿಕೆ ತರಿಸುವುದು ನಿಲ್ಲಿಸಿತ್ತು. ಕಳ್ಳಸಾಗಾಣಿಕೆಗೂ ಕಡಿವಾಣ ಬಿದ್ದಿತ್ತು.

ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದ ಬಳಿಕ ಹಿಂದಿನ ಸರ್ಕಾರದ ಬಿಗಿ ಕಡಿಮೆಯಾಗಿ ಮತ್ತೆ ಮಾಫಿಯಾ ಚಿಗುರಿಕೊಂಡಿದೆ! ಹೀಗಾಗಿ 2014ರ ನಂತರ ಅಡಿಕೆ ಬೆಳೆಗಾರರಿಗೆ ಹೇಳಿಕೊಳ್ಳುವಂಥ ಅನುಕೂಲವೇನೂ ಆಗಿಲ್ಲ. ಚಾಲಿಯಂಥ ಅಡಿಕೆ ಧಾರಣೆ ಕ್ವಿಂಟಾಲಿಗೆ 30 ಸಾವಿರದ ಆಸುಪಾಸಿನಲ್ಲಿ ಸುತ್ತಾಡಿದರೆ ರೈತರಿಗೆ ತೀರ ಲಾಭವೇನೂ ಇಲ್ಲದಿದ್ದರೂ ಸಮಚಿತ್ತದ ಬದುಕಿಗೊಂದು ದಾರಿಯಾಗುತ್ತದೆ. ಈ ಬಾರಿ ಧಾರಣೆ ಈ ರೇಂಜಿನಲ್ಲೇ ಇದೆ. ಕಳೆದ ವರ್ಷ ಬಿದ್ದ ವಿಪರೀತ ಮಳೆಯಿಂದ ಬಂದ ಕೊಳೆರೋಗ, ಹವಾಮಾನ ವೈಪರೀತ್ಯದಿಂದ ಅಡಿಕೆಗೆ ಬೆಲೆ ಬಂದಿದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ. ಆದರೆ ಇದೇ ಬೆಲೆ ಮುಂದೆಯೂ ಸಿಗುತ್ತದೆಂದು ಹೇಳಲಾಗದು. ಇತ್ತೀಚಿನ ವರ್ಷಗಳಲ್ಲಂತೂ ಅಡಿಕೆ ಇದ್ದಕ್ಕಿದ್ದಂತೆ ವಿವಾದಕ್ಕೆ ಸಿಲುಕಿ ಮಾರುಕಟ್ಟೆ ಮೇಲೆ ಪರಿಣಾಮವಾಗುವ ಆತಂಕ ಆರಂಭವಾಗುತ್ತಿದೆ. ಈ ಗೊಂದಲಕ್ಕೆ ಅಡಿಕೆ ಬೆಳೆಗಾರ ಸಹಜವಾಗೇ ಬೆಚ್ಚೆಳುತ್ತಿದ್ದಾನೆ.

ಆದರೆ ಅಡಿಕೆ ಬಗ್ಗೆ ವಿವಾದ ಎದ್ದಾಗೆಲ್ಲ ಧಾರಣೆ ಮೇಲೆ ಕೆಟ್ಟ ಪರಿಣಾಮವೇನೂ ಆಗಿದಿಲ್ಲ. ಈ ಗಲಾಟಿಯ ಲಾಭ ದಲ್ಲಾಳಿಗಳು, ಮಧ್ಯವರ್ತಿಗಳು ಎತ್ತಿದ್ದಾರೆ. ಇದರಲ್ಲಿ ರಾಜಕಾರಣೀಗಳೇನೂ ಕಮ್ಮಿಯಿಲ್ಲ. ಅಡಿಕೆ ಬೆಳೆಗಾರರಲ್ಲಿ ಅಲ್ಲೋಲಕಲ್ಲೋಲ ಉಂಟಾಗಿದ್ದು 2011ರಲ್ಲಿ. ಆಗ ಅಧಿಕಾರದಲ್ಲಿದ್ದ ಯುಪಿಎ-2 ಸರ್ಕಾರ ಅಡಿಕೆಯಲ್ಲಿ ಆರೋಗ್ಯಕ್ಕೆ ಹಾನಿಕರವಾದ ಅಂಶಗಳಿದೆಯೆಮದು ಸುಪ್ರೀಮ್ ಕೋರ್ಟ್‍ಗೆ ಅಫಿಡವಿಟ್ ಸಲ್ಲಿಸಿತ್ತು. ಇದನ್ನು ಬಿಜೆಪಿಗರು ರಾಜಕೀಯಕ್ಕೆ ಬಳಸಿಕೊಂಡರು; ಕಾಂಗ್ರೆಸ್ ಅಡಿಕೆ ಬೆಳೆಗಾರರ ವೈರಿಯೆಂಬಂತೆ ಬಿಂಬಿಸಿದರು. ಅಡಿಕೆ ನಿಷೇಧಕ್ಕೆ ಕಾಂಗ್ರೆಸ್ ಹವಣಿಸುತ್ತಿದೆಯೆಂದು ಹುಯಿಲೆಬ್ಬಿಸಿದರು.

ಅಡಿಕೆ ಬೆಳೆಗಾರರು ಕಾಂಗ್ರೆಸ್ ವಿರುದ್ಧ ತಿರುಗಿ ಬೀಳುವಂತೆ ಮಾಡಲಾಯಿತು. ಕಾಂಗ್ರೆಸ್ ಅಡಿಕೆ ನಿಷೇದಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರೂ ಬಿಜೆಪಿ ಅಪಪ್ರಚಾರದ ಎದುರು ಬೆಳೆಗಾರರನ್ನು ಅದು ಇಂಪ್ರೆಸ್ ಮಾಡಲಾಗಲಿಲ್ಲ! ಇದು ಅಡಿಕೆ ತೋಟ ಪಟ್ಟಿಯಲ್ಲಿ 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ವರವಾಗಿ ಪರಿಣಮಿಸಿತು. ಶಿವಮೊಗ್ಗೆಯ ರಾಘವೇಂದ್ರ, ಉಡುಪಿ-ಚಿಕ್ಕಮಗಳೂರಿನ ಶೋಭಾ ಕರಂದ್ಲಾಜೆ, ಉತ್ತರ ಕನ್ನಡದ ಅನಂತ ಹೆಗಡೆ, ಮಂಗಳೂರಿನ ನಳಿನ್ ಕಟೀಲ್, ದಾವಣಗೆರೆಯ ಸಿದ್ದೇಶ್ವರ್ ಅಡಿಕೆ ಬೆಳೆಗಾರರ ಬಚಾಯಿಸುವ ಭೋಂಗು ಬಿಟ್ಟೇ ಸಂಸದರಾಗಿ ಆಯ್ಕೆಯಾದರು. ತೋಟಿಗರ ಯಮಾರಿಸಿ ದಂಡಿಯಾಗಿ ಓಟು ಪಡೆದು ಗೆದ್ದವರಿಗೆ ಆನಂತರ ತಾವು ಕೊಟ್ಟ ಭರವಸೆಯೇ ಮರೆತುಹೋಗಿತ್ತು.

ತೋಟಿಗರಿಗೆ ಆಗುತ್ತಿರುವ ಅನ್ಯಾಯ-ಆತಂಕದ ಬಗ್ಗೆ ಅಡಿಕೆ ಬೆಳೆ ಏರಿಯಾದ ಒಬ್ಬೇ ಒಬ್ಬ ಸಂಸದ ಮಾತಾಡಲಿಲ್ಲ. ತಾವು ಕೊಂಡಾಡುವ ಮೋದಿ ಸರ್ಕಾರವಿದ್ದರೂ ಹಿಂದಿನ ಸರ್ಕಾರ ‘ಅಡಿಕೆ ಆರೋಗ್ಯಕ್ಕೆ ಹಾನಿಕರ’ ಎಂದು ಸುಪ್ರಿಮ್ ಕೋರ್ಟ್‍ಗೆ ಸಲ್ಲಿಸಿದ್ದ ಅಫಿಡವಿಟ್ ಹಿಂಪಡೆಯುವ ಸಣ್ಣ ಪ್ರಯತ್ನವನ್ನೂ ಮಾಡಲಿಲ್ಲ. ಕಾನೂನಿಗೆ ತಿದ್ದುಪಡಿ ತಂದು ಅಡಿಕೆಯನ್ನು ತಂಬಾಕು ಪಟ್ಟಿಯಿಂದ ಹೊರತರುವ ವೀರಾವೇಷದ ಮಾತಾಡಿದ್ದ ಈ ಪಂಚ ಪ್ರಚಂಡರು ಕೃತಘ್ನರಾಗಿ ಹೋದರು. ಈ ವಂಚಕ ಸಂಸದರ ಉದಾಸೀನದ ಒಟ್ಟೂ ಪರಿಣಾಮ ಎಂಬಂತೆ 2017ರ ಡಿಸೆಂಬರ್‍ನಲ್ಲಿ ಅಂದಿನ ಆರೋಗ್ಯ ಇಲಾಖೆಯ ರಾಜ್ಯ ಮಂತ್ರಿ ಅನುಪ್ರಿಯಾ ಪಟೇಲ್ ಯುಪಿಎ ಸರ್ಕಾರದ ಅನಿಸಿಕೆಯನ್ನೇ ಬಿತ್ತರಿಸಿದ್ದರು. ಆಕೆ ಅಡಿಕೆಯಿಂದ ಬಾಯಿ ಕ್ಯಾನ್ಸರ್ ಬರುತ್ತದೆಂದು ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದರು.

ಇಷ್ಟಾದರೂ ಅನಂತ್, ಶೋಭಾ, ಕಟೀಲ್, ಸಿದ್ದೇಶ್ವರ್, ರಾಘವೇಂದ್ರ ತಲೆಕೆಡಿಸಿಕೊಳ್ಳಲಿಲ್ಲ. ತೋಟಿಗರ ನೋವು ಅವರಿಗೆ ಅರ್ಥವಾಗಲಿಲ್ಲ. 2019ರಲ್ಲಿ ಮತ್ತೆ ಈ ಐವರು ಸಂಸದರಾಗಿ ಆಯ್ಕೆಯೂ ಆದರು. ಈ ಬಾರಿಯಾದರೂ ತಮ್ಮ ಸಮಸ್ಯೆಗೆ ಸ್ಪಂದಿಸಬಹುದೆಂದು ಭಾವಿಸಿದ್ದ ತೋಟಿಗರಿಗೆ ಮತ್ತದೇ ಆಘಾತ ಕಾದಿತ್ತು! 12-7-2019 ರಂದು ಆರೋಗ್ಯ ಇಲಾಖೆಯ ಸಹಾಯಕ ಸಚಿವ ಅಶ್ವಿನಿಕುಮಾರ್ ಚೌಬೆ “ಅಡಿಕೆ ದೇಹದ ವಿವಿಧ ಅಂಗಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಬಾಯಿ, ಅನ್ನನಾಳ, ಗಂಟಲು ಮತ್ತಿತರ ಅಂಗಗಳಿಗೆ ಕ್ಯಾನ್ಸರ್ ಬರುವಂತೆ ಮಾಡುತ್ತದೆಂದು ಕೆಲವು ಅಧ್ಯಯನದಿಂದ ತಿಳಿದು ಬಂದಿದೆಯೆಂದು” ಹೇಳಿದರು. ಮಂತ್ರಿಗಳ ಈ ಮಾತಿಂದ ತೋಟಿಗ ಸಮುದಾಯದಲ್ಲಿ ಆತಂಕ-ಆಕ್ರೋಶ ಮೂಡಿತು.

ಇದರಿಂದ ಕಕ್ಕಾಬಿಕ್ಕಿಯಾದ ಕಟೀಲು, ಶೋಭಾ, ಸಿದ್ದೇಶ್ವರ್ ಅವರುಗಳಿಗೆ ಗಡಿಬಿಡಿಯಲ್ಲಿ ಕೇಂದ್ರ ಆರೋಗ್ಯ ಮಂತ್ರಿಯನ್ನು ಭೇಟಿಯಾದ ಪೋಟೋ ಮಾಧ್ಯಮಗಳಿಗೆ ಬಿಡುಗಡೆ ಮಾಡಬೇಕಾಗಿ ಬಂತು. ಅಡಿಕೆ ಬೆಳೆಗಾರರ ಹಿತರಕ್ಷಿಸುವುದಾಗಿ ಹೇಳಿಕೆಯನ್ನೂ ಕೊಟ್ಟರು. ಆದರೆ ಇವತ್ತಿಗೂ ಅಡಿಕೆ ತೋಟಗಳಿಗೆ ಕೇಂದ್ರ ಸರ್ಕಾರ ಬಿಟ್ಟ ಕ್ಯಾನ್ಸರ್ ಗುಮ್ಮ ಮಾತ್ರ ಅಲ್ಲೇ ಕುಂತಿದೆ. ತೋಟಿಗರು ಅಂಜುತ್ತಲೇ ಬದುಕುತ್ತಿದ್ದಾರೆ. ಸಿಗರೇಟ್ ಲಾಬಿ ಮತ್ತು ಗುಟ್ಕ ಲಾಬಿ ನಡುವೆ ವ್ಯವಹಾರಿಕ ಸಂಘರ್ಷ ಮೊದಲಿನಿಂದಲೂ ನಡೆಯುತ್ತಿದೆ. ಕೇಂದ್ರದ ಆಹಾರ ಸುರಕ್ಷೆ ಮತ್ತು ಗುಣಮಟ್ಟಗಳ ನಿಯಾಮಾವಳಿಯಂತೆ ತಂಬಾಕಿನೊಂದಿಗೆ ಅಡಿಕೆ ಉತ್ಪನ್ನಗಳನ್ನೂ ಸೇರಿಸಿರುವುದೇ ಸಮಸ್ಯೆಯ ಮೂಲ.

ಸ್ವಲ್ಪ ತಿಂದರೆ ಅಡಿಕೆಯಲ್ಲಿ ಔಷಧಿ ಗುಣವಿದೆ. ಅತಿಯಾದರೆ ಹಾನಿಯೇ ಎಂದು ಸಂಶೋಧಕರು ಹೇಳುತ್ತಾರೆ. ಅಡಿಕೆ ವಹಿವಾಟು ನಡೆಸುವ ಸಹಕಾರ ಸಂಸ್ಥೆಗಳು ಕಾಸರಗೋಡಿನ ಸಿಪಿಸಿಆರ್‌ಐ ಮೂಲಕ ಅಡಿಕೆಯ ಗುಣಾವಗುಣದ ಬಗ್ಗೆ ಸಂಶೋಧನೆ ನಡೆಯುವಂತೆ ನೋಡಿಕೊಂಡಿದ್ದವು. ಈ ವರದಿ ಆಡಿಕೆ ಕ್ಯಾನ್ಸರ್‍ಕಾರಕವಲ್ಲ; ಆರೋಗ್ಯ ವರ್ಧಕ ಎಂದು ಹೇಳಿದೆ. ಹಿಂದೆ ಕೆಲವು ಕಂಪನಿಗಳು ಅಡಿಕೆಯನ್ನು ಚಾಕೊಲೆಟ್ ತಯಾರಿಕೆಗೆ ಬಳಸಿದ್ದವು. ಈ ಪ್ರಯೋಗ ಯಶಸ್ವಿಯಾಗಲಿಲ್ಲ. ವೈನ್ ತಯಾರಿಕೆ ಪ್ರಯತ್ನ ನಡೆದರೂ ದುಬಾರಿ ಎಂದಾಯಿತು. ಚಹಾ, ಬಣ್ಣ ಮತ್ತಿತರ ಉದ್ದೇಶಕ್ಕೆ ಅಡಿಕೆ ಬಳಸುವ ಸಂಶೋಧನೆಗಳು ನಡೆಯುತ್ತಿವೆ.

ಅಡಿಕೆ ನಿಷೇಧದ ಸಮಸ್ಯೆ ಇರುವುದು ತೋಟಪಟ್ಟಿಯ ಸಂಸದರ ಇಚ್ಛಾಶಕ್ತಿಯ ಕೊರತೆಯಲ್ಲಿ. ಸಂಸತ್ತಿನಲ್ಲಿ ಚರ್ಚೆ, ಕಾನೂನಿನಲ್ಲಿ ತಿದ್ದುಪಡಿ ಮೂಲಕ ಮಾತ್ರ ಅಡಿಕೆ ಮಾನಕ್ಕೆ ಬಂದಿರುವ ಕಳಂಕ ತೆಗೆಯಬಹುದು. ಆದರೆ ಅದು ಆಗುತ್ತಿಲ್ಲ.


ಇದನ್ನೂ ಓದಿ: ಅಡಿಕೆ ಬೆಳೆಗಾರರನ್ನು ರಕ್ಷಿಸುವರೆ ಈ ಆರು ಜನ ಮಾನಗೇಡಿ ಸಂಸದರು?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಇಂಪ್ರೆಸ್ >ತಟ್ಟು
    ರಕ್ಷಿಸು(ಸಂಸ್ಕ್ರುತ)>ಕಾಪಾಡು(ಕನ್ನಡ)
    ಸ್ವಲ್ಪ(ಸಂಸ್ಕ್ರುತ)>ತುಸು(ಕ)

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....