Homeಚಳವಳಿಸರ್ಕಾರದ ಅಜೆಂಡಾ ಸ್ಪಷ್ಟವಾಗಿದೆ, ರೈತ ಚಳವಳಿಗೆ ಸ್ಪಷ್ಟ ಅಜೆಂಡಾ ಬೇಕಿದೆ: ಚುಕ್ಕಿ ನಂಜುಂಡಸ್ವಾಮಿ

ಸರ್ಕಾರದ ಅಜೆಂಡಾ ಸ್ಪಷ್ಟವಾಗಿದೆ, ರೈತ ಚಳವಳಿಗೆ ಸ್ಪಷ್ಟ ಅಜೆಂಡಾ ಬೇಕಿದೆ: ಚುಕ್ಕಿ ನಂಜುಂಡಸ್ವಾಮಿ

ಭಾರತದ ರೈತ ಚಳವಳಿಗಳು ಈಗಲಾದರೂ ಆಲೋಚಿಸಬೇಕಾದ್ದು ತಮ್ಮದೇ ಆದ ಉತ್ಪಾದನಾ ವ್ಯವಸ್ಥೆ, ಮೌಲ್ಯವರ್ಧನೆ ವ್ಯವಸ್ಥೆ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ಸ್ಥಾಪಿಸುವುದರ ಬಗ್ಗೆ.

- Advertisement -
- Advertisement -

ರೈತ ಕುಲವನ್ನು ಒಕ್ಕಲೆಬ್ಬಿಸಿ ಕೃಷಿ ಕ್ಷೇತ್ರವನ್ನು ಇಡಿಯಾಗಿ ಕಾರ್ಪೋರೆಟ್ ಕಂಪೆನಿಗಳಿಗೆ ಮಾರಲು ಸರ್ಕಾರಗಳು ತುದಿಗಾಲಲ್ಲಿ ನಿಂತಿವೆ. ಇದೇನೂ ಹೊಸ ಬೆಳವಣಿಗೆಯಲ್ಲ. 1995ರಲ್ಲಿ ಭಾರತ ಸರ್ಕಾರ ವಿಶ್ವ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಿದ ದಿನದಿಂದಲೇ ಈ ದೇಶದ ರೈತರ ಲೂಟಿ ಶುರುವಾಯ್ತು. ಅದಾದ ನಂತರ ಭಾರತ ಕಂಡ ರೈತರ ಆತ್ಮಹತ್ಯೆಯ ಸಂಖ್ಯೆ ಬಹುಶಃ ಪ್ರಪಂಚದ ಬೇರೆ ಯಾವ ದೇಶಗಳೂ ಕಾಣಲಿಲಿಲ್ಲ. ಭಾರತದ ರೈತರ ಆತ್ಮಹತ್ಯೆಗೂ ಭಾರತ ಅಪ್ಪಿಕೊಂಡ ಉದಾರೀಕರಣದ ನೀತಿಗೂ ನೇರ ಸಂಬಂಧವಿದೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.

ಈ ಅಭಿಪ್ರಾಯವನ್ನು ಖಾತ್ರಿಪಡಿಸುವ ವರದಿಯೊಂದಿದೆ. Indian Council for Research on International Economic Relations (ICRIER) ಮತ್ತು OECD 2018ರಲ್ಲಿ ಹಮ್ಮಿಕೊಂಡಿದ್ದ ಎರಡು ವರ್ಷಗಳ ದೀರ್ಘ ಅಧ್ಯಯನದಲ್ಲಿ ಹೊರಬಂದ ಪ್ರಮುಖ ಅಂಶವೆಂದರೆ 2000-01 ರಿಂದ 2016-17 ನಡುವಿನ ವರ್ಷಗಳ ಲೆಕ್ಕ ತೆಗೆದುಕೊಂಡಾಗ ಭಾರತದ Producer Support Estimate(PSE) “ಉತ್ಪಾದಕ ಬೆಂಬಲ ಅಂದಾಜಿ”ನ ಮೊತ್ತ (ತೆರಿಗೆದಾರರು ಮತ್ತು ಗ್ರಾಹಕರು ರೈತರಿಗೆ ಹಣದ ರೂಪದಲ್ಲಿ ಕೊಡುವ ಬೆಂಬಲ. ಸಬ್ಸಿಡಿಗಳು ಇದರ ಅಡಿಯಲ್ಲಿ ಬರುತ್ತವೆ) ಮೊತ್ತ ಒಟ್ಟು ಕೃಷಿಕರಿಗೆ ಪಾವತಿಯಾದ ಸರಾಸರಿ ಮೊತ್ತಕ್ಕಿಂತ 14% ಕಡಿಮೆ ಇದೆ. ಇದರ ವಾರ್ಷಿಕ ಮೊತ್ತ 2.65 ಟ್ರಿಲಿಯನ್ ಅಂದರೆ ಹದಿನೇಳು ವರ್ಷಗಳಿಗೆ 45 ಟ್ರಿಲಿಯನ್ ರೂಪಾಯಿಗಳು. ಇದು ಭಾರತದ ರೈತರ ಮೇಲೆ ವಿಧಿಸಿದ ಪರೋಕ್ಷವಾದ ತೆರಿಗೆ ಎಂದು ಕೆಲವು ಅರ್ಥಶಾಸ್ತ್ರಜ್ಞರು ಕರೆಯುತ್ತಾರೆ. ಇದನ್ನು ನೇರವಾಗಿ ಹೇಳುವುದಾದರೆ ಇದು ಭಾರತದ ರೈತರ ಲೂಟಿ. ಈ ಲೂಟಿ ನಡೆದಿರುವುದು ಅನೇಕ ಹೆಸರುಗಳಲ್ಲಿ. ನಿರ್ಬಂಧಿತ ಮಾರುಕಟ್ಟೆ, ವಾಣಿಜ್ಯ ನೀತಿಗಳು ಅಥವಾ ಗ್ರಾಹಕರ ಪರ ವಾಲಿರುವ ಮಾರುಕಟ್ಟೆ. ಅದೇನೇ ಇರಲಿ. ಜಗತ್ತಿನ ಯಾವ ದೇಶವೂ ಅನ್ನದಾತರನ್ನು ಇಷ್ಟು ಅಮಾನವೀಯವಾಗಿ ಲೂಟಿ ಮಾಡಿಲ್ಲ. ವಾಸ್ತವ ಹೀಗಿರುವಾಗ ರೈತ ಆತ್ಮಹತ್ಯೆ ಮಾಡಿಕೊಳ್ಳದೇ ಬೇರೆ ದಾರಿ ಏನಿದೆ?

ಸ್ವಾತಂತ್ರ್ಯೋತ್ತರ ಭಾರತ ಆಹಾರದ ಕೊರತೆಯನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿ ಈ ದೇಶದ ಗಡಿ ಕಾದು ದೇಶವನ್ನು ರಕ್ಷಿಸಿದ ಯೋಧರ ಹಾಗೇ ದೇಶದ ಆಹಾರದ ಬುಟ್ಟಿಯನ್ನು ತುಂಬಿಸಿದ್ದು ಈ ದೇಶದ ಮಣ್ಣಿನ ಮಕ್ಕಳು. ಗಡಿ ಕಾಯುತ್ತಿದ್ದ ಸೈನಿಕರು ತಮ್ಮ ಜೀವವನ್ನೇ ಒತ್ತೆ ಇಟ್ಟರೆ ಇಲ್ಲಿ ರೈತರು ತಮ್ಮ ಪೂರ್ವಜರು ಕಾಪಾಡಿಕೊಂಡು ಬಂದಿದ್ದ ಮಣ್ಣು, ಬೀಜ ಮತ್ತು ಕೃಷಿ ಜ್ಞಾನವನ್ನೇ ಒತ್ತೆ ಇಟ್ಟರು. ಹಸಿರು ಕ್ರಾಂತಿಯ ಹೆಸರಿನಲ್ಲಿ ನಡೆದದ್ದೂ ಕೂಡ ಮಣ್ಣಿನ ಲೂಟಿ, ಬೀಜದ ಲೂಟಿ ಮತ್ತು ಸಾಂಪ್ರದಾಯಿಕ ಜ್ಞಾನದ ಲೂಟಿ. ಹಸಿರು ಕ್ರಾಂತಿ ನಡೆದ ಅರವತ್ತು ವರ್ಷಗಳ ನಂತರ ಮಣ್ಣಿನಲ್ಲಿದ್ದ ಸಾವಯವ ಇಂಗಾಲ ಇಲ್ಲದಂತಾಗಿದೆ. ಸೂಕ್ಷ್ಮಾಣುಜೀವಿಗಳು ಸತ್ತುಹೋಗಿವೆ. ಮಣ್ಣು ಬರಡಾಗಿದೆ. ಸಹಜವಾಗಿಯೆ ಇಳುವರಿ ಕಡಿಮೆಯಾಗಿದೆ.


ಇದನ್ನೂ ಓದಿ: ’ಮಿಸ್ಟರ್‌ ಯಡಿಯೂರಪ್ಪ ನೀವು ಪ್ರಜಾಪ್ರಭುತ್ವವಾದಿಯಲ್ಲ, ಸರ್ವಾಧಿಕಾರಿ’!: ಕೋಡಿಹಳ್ಳಿ ಚಂದ್ರಶೇಖರ್ ಸಂದರ್ಶನ


ಭಾರತದ ಬೆನ್ನೆಲುಬು ಎಂದು ಕರೆಯಲ್ಪಡುವ ಕೃಷಿ ಕ್ಷೇತ್ರದ ಪರಿಸ್ಥಿತಿ ಹೀಗಿರುವಾಗ ನಮ್ಮನ್ನಾಳುತ್ತಿರುವ ಸರ್ಕಾರಗಳಿಗೆ ಸ್ವಲ್ಪವಾದರೂ ಕಾಳಜಿ ಇದ್ದಿದ್ದರೆ ಬರೀ ಘೋಷಣೆಗೆ ಸೀಮಿತವಾಗಿರುವ ಎಂಎಸ್‍ಪಿ ಅಥವಾ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸುವ ಎಲ್ಲಾ ಇಪ್ಪತ್ಮೂರು ಬೆಳೆಗಳಿಗೂ ಅದು ಶಾಸನಬದ್ಧವಾಗಿ ಅನ್ವಯವಾಗುವಂತೆ ಸುಗ್ರೀವಾಜ್ಞೆ ಹೊರಡಿಸಬೇಕಿತ್ತು. ಘೋಷಿಸುವುದೇ ಅಲ್ಲ ಅದನ್ನು ಸರ್ಕಾರ ಖರೀದಿ ಮಾಡಲು ಎಪಿಎಂಸಿಯಲ್ಲಿ ಇದ್ದಂತಹ ಲೋಪದೋಷಗಳನ್ನು ಸರಿಪಡಿಸಿ ವ್ಯವಸ್ಥೆಯನ್ನು ರೂಪಿಸುವ ಸುಗ್ರೀವಾಜ್ಞೆ ತರಬೇಕಾಗಿತ್ತು. ಆದರೆ ಸೋರುತ್ತಿರುವ ಮಾಳಿಗೆಯ ರಂಧ್ರಗಳನ್ನು ಮುಚ್ಚದೆ ಮಾಳಿಗೆಯನ್ನೇ ತೆಗೆದು ಹಾಕಿ ರೈತರಿಗೆ ಯಾರಿಗೆ ಬೇಕಾದರೂ ಮಾರಾಟ ಮಾಡುವ ಸ್ವಾತಂತ್ರ್ಯವನ್ನು ಕೊಟ್ಟಿದ್ದೇವೆ ಎನ್ನುವುದು ರೈತರಿಗೆ ಕೊಟ್ಟಿರುವ ಸ್ವಾತಂತ್ರ್ಯವೋ ಅಥವಾ ರೈತರನ್ನು ಲೂಟಿ ಮಾಡಲು ಕಾರ್ಪೋರೆಟ್ ಕಂಪೆನಿಗಳಿಗೆ ಕೊಟ್ಟಿರುವ ಸ್ವಾತಂತ್ರ್ಯವೋ ಎನ್ನುವುದು ರೈತ ವಿರೋಧಿ ಸುಗ್ರೀವಾಜ್ಞೆಗಳನ್ನು ವಿರೋಧಿಸುತ್ತಿರುವ ರೈತರಿಗೆ ಈಗಾಗಲೇ ಸ್ಪಷ್ಟವಾಗಿ ಅರ್ಥವಾಗಿದೆ.

ಇಷ್ಟೆಲ್ಲಾ ಪ್ರತಿಭಟನೆಗಳು ನಡೆಯುತ್ತಿದ್ದರೂ ಸರ್ಕಾರ ಚಳವಳಿಗಳತ್ತ ತಿರುಗಿಯೂ ನೋಡುತ್ತಿಲ್ಲ. ಸರ್ಕಾರದ ಅಜೆಂಡಾ ಬಹಳ ಸ್ಪಷ್ಟವಾಗಿದೆ. ರೈತರ ಸರ್ವನಾಶಕ್ಕೆ ಪಣ ತೊಟ್ಟು ನಿಂತಿರುವ ಸರ್ಕಾರದ ವಿರುದ್ಧ ಕೇವಲ ಪ್ರತಿಭಟನೆಗಳನ್ನು ಹಮ್ಮಿಕೊಂಡರಷ್ಟೇ ಸಾಲದು ಎನಿಸುತ್ತದೆ.

ದೇಶದ ರೈತರ ಪಾಲಿಗೆ, ಕೃಷಿ ಕಾರ್ಮಿಕರ ಪಾಲಿಗೆ, ಮಹಿಳಾ ರೈತರ ಪಾಲಿಗೆ ಸರ್ಕಾರ ಸತ್ತು ಹೋಗಿದೆ ಎಂದು ಘೋಷಣೆ ಕೂಗಿದರಷ್ಟೇ ಸಾಲದು. ಅದು ವಾಸ್ತವ ಎಂಬ ಸತ್ಯವನ್ನು ಆಳವಾಗಿ ಅರ್ಥ ಮಾಡಿಕೊಳ್ಳಲೇಬೇಕಾದ ಸಂದರ್ಭದಲ್ಲಿ ನಾವಿದ್ದೇವೆ. ಭಾರತದ ರೈತ ಚಳವಳಿಗಳು ತಮ್ಮ ಅಜೆಂಡಾದ ಬಗ್ಗೆ ಪರಾಮರ್ಶೆ ಮಾಡಿಕೊಳ್ಳುವ ಅವಶ್ಯಕತೆ ಈಗ ಇದೆ. ಈ ಗ್ರಹಿಕೆ ನಮ್ಮಲ್ಲಿ ಆಳವಾಗಿ ಬೇರೂರಿದಾಗ ಮಾತ್ರ ನಮ್ಮ ಎದುರಿರುವ ಸವಾಲುಗಳಿಗೆ ಶಾಶ್ವತವಾದ ಉತ್ತರ ಹುಡುಕಲು ಸಾಧ್ಯ. ಆಗ ಸಂಘರ್ಷವಷ್ಟೇ ಸಾಲದು, ಅದರ ಜೊತೆಗೆ ನೇರ ಕಾರ್ಯಕ್ರಮಗಳ ಮೂಲಕ ಕ್ರಿಯಾತ್ಮಕ ನಿರ್ಮಾಣ ಕೆಲಸಕ್ಕೂ ಕೈಹಾಕಬೇಕು ಅನ್ನುವ ಅಭಿಪ್ರಾಯಕ್ಕೆ ಬರಬಹುದು.


ಇದನ್ನೂ ಓದಿ: ಸಂದರ್ಶನ – ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ


ಭಾರತದ ರೈತ ಚಳವಳಿಗಳು ಈಗಲಾದರೂ ಆಲೋಚಿಸಬೇಕಾದ್ದು ತಮ್ಮದೇ ಆದ ಉತ್ಪಾದನಾ ವ್ಯವಸ್ಥೆ, ಮೌಲ್ಯವರ್ಧನೆ ವ್ಯವಸ್ಥೆ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ಸ್ಥಾಪನೆ ಮಾಡುವುದರ ಬಗ್ಗೆ. ಈ ಬಗ್ಗೆ ಅಗತ್ಯವಾದ ತರಬೇತಿಗಳನ್ನು ರೈತಮಕ್ಕಳಿಗೆ ಕೊಡಿಸುವುದರ ಬಗ್ಗೆ ಸಮಗ್ರವಾಗಿ ಚಿಂತಿಸಿ ಮತ್ತು ಅನುಷ್ಠಾನಗೊಳಿಸಿ ಇದರ ಮೂಲಕ ದೇಶವನ್ನು ಕಾಡುತ್ತಿರುವ ಮತ್ತೊಂದು ಸಮಸ್ಯೆ ನಿರುದ್ಯೋಗಕ್ಕೂ ಉತ್ತರ ಕಂಡುಕೊಳ್ಳಬೇಕಾಗಿದೆ.

ನಮ್ಮದೇ ಆದ ಪರ್ಯಾಯ ವ್ಯವಸ್ಥೆಗಳನ್ನು ಕಟ್ಟಿಕೊಳ್ಳುವುದರ ಮೂಲಕ ಸರ್ಕಾರಿ ವ್ಯವಸ್ಥಗಳಿಗೆ ಬದಲಿಯಾದ ಮತ್ತು ರೈತಸ್ನೇಹಿಯಾದ ವ್ಯವಸ್ಥೆಯ ಧ್ವಜಾರೋಹಣ ಮಾಡಬೇಕಾಗಿದೆ. ಇಡೀ ಭಾರತದ ರೈತ ಚಳವಳಿಯ ಒಂದು ಭಾಗ ಈ ಕೆಲಸವನ್ನು ಗಂಭೀರವಾಗಿ ಮಾಡಲೇಬೇಕಿದೆ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳು ಕಾರ್ಪೋರೇಟ್ ಕಂಪೆನಿಗಳ ಕೂಲಿಗಳಾಗುವುದರಲ್ಲಿ ಸಂಶಯವೇ ಇಲ್ಲ.

ಇದನ್ನು ರೈತ ಸಂಘಟನೆಗಳು ಕೈಗೆತ್ತಿಕೊಂಡು ಕರೆಕೊಟ್ಟರೆ ಸಾಕು, ಇದರ ಜೊತೆಗೆ ಕೆಲಸ ಮಾಡಲು ಮನಸ್ಸಿರುವ ಅನೇಕ ನಗರವಾಸಿ ತಂತ್ರಜ್ಞರು ಕೈಜೋಡಿಸುವ ಸಾಧ್ಯತೆ ಇದೆ. ಇದೇನೂ ಬಹಳ ಕಷ್ಟದ ಕೆಲಸವಲ್ಲ.


ಇದನ್ನೂ ಓದಿ: ರೈತರಿಂದ ನೇರ ಗ್ರಾಹಕರಿಗೆ ವಿಷಮುಕ್ತ ಆಹಾರೋತ್ಪನ್ನ ಮಾರಲು ಪಣ: ‘ನಮ್ದು ಬ್ರ್ಯಾಂಡ್’ ಆರಂಭ


ಇದರ ಪ್ರಯೋಗವಾಗಿಯೆ ನಮ್ದು ಎಂಬ ಬ್ರ್ಯಾಂಡ್‍ಅನ್ನು ಪ್ರಾರಂಭ ಮಾಡುವುದರ ಮೂಲಕ ಕ್ರಿಯಾತ್ಮಕ ಪ್ರತಿರೋಧವನ್ನು ಒಡ್ಡುವ ಕೆಲಸವನ್ನು ಈಗಾಗಲೇ ನಾವು ಪ್ರಾರಂಭ ಮಾಡಿದ್ದೇವೆ. ಇದು ರೈತರ ಹಿಡಿತದಲ್ಲಿರುವ ಮಾರುಕಟ್ಟೆ ವ್ಯವಸ್ಥೆ. ಇಲ್ಲಿ ನೈಸರ್ಗಿಕವಾಗಿ ಬೆಳೆದ ಉತ್ಪನ್ನಗಳಿಗೆ ರೈತರೇ ಬೆಲೆ ನಿಗದಿ ಮಾಡುತ್ತಾರೆ. ಉಪ ಉತ್ಪನ್ನಗಳನ್ನು ಮತ್ತು ಮೌಲ್ಯವರ್ಧನೆಗೊಳಿಸಿದ ವಸ್ತುಗಳನ್ನು ನೇರವಾಗಿ ರೈತರೇ ಮಾರಾಟ ಮಾಡುತ್ತಾರೆ.

ಇಡೀ ದೇಶದಾದ್ಯಂತ ಭುಗಿಲೆದ್ದಿರುವ ರೈತರ ಪ್ರತಿರೋಧ, ಕೇವಲ ಈ ಕಾನೂನುಗಳನ್ನು ವಿರೋಧಿಸುವುದಕ್ಕೆ ಸೀಮಿತವಾಗದೆ ಮುಂಬರಬಹುದಾದ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಲು ಬೇಕಾದ ಎಲ್ಲ ರೀತಿಯ ವೈಚಾರಿಕ, ಸೈದ್ಧಾಂತಿಕ ಮತ್ತು ಕ್ರಿಯಾತ್ಮಕ ಪ್ರತಿರೋಧಗಳಿಗೆ ಅವಕಾಶವಾಗಬೇಕು.
ರೈತ ಚಳವಳಿಗೆ ಜಯವಾಗಲಿ!


(ಚಿಕ್ಕಂದಿನಿಂದಲೂ ರೈತ ಚಳವಳಿಯ ಜೊತೆಗೇ ಬೆಳೆದ ಚುಕ್ಕಿ, ಈಗ ರೈತ ಚಳವಳಿಯ ರಾಜ್ಯ ನಾಯಕಿಯರಲ್ಲೊಬ್ಬರು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಹಾಗೂ ತೃತೀಯ ದೇಶಗಳ ರೈತರನ್ನು ಪ್ರತಿನಿಧಿಸುವವರು. ಪ್ರಸ್ತುತ ಚಾಮರಾಜನಗರದ ಅಮೃತಭೂಮಿಯ ವಿಶಿಷ್ಟ ರೈತ ಪ್ರಯೋಗ ಶಾಲೆಯ ಮುಖ್ಯಸ್ಥರು.)


ಇದನ್ನೂ ಓದಿ: ರೈತ ಮಹಿಳಾ ದಿನ: ‘ರೈತ ಮಹಿಳೆ’ಯ ಅಸ್ತಿತ್ವ, ಅಸ್ಮಿತೆಗಾಗಿ ಹೋರಾಟ ನಡೆಸುತ್ತಿರುವ ‘ಮಕಾಮ್’
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...