ಮಾನವಶಾಸ್ತ್ರದ ಅಧ್ಯಯನಗಳ ಪ್ರಕಾರ ಕೃಷಿ ಹುಟ್ಟಿಕೊಂಡಿದ್ದು ಮಹಿಳೆಯಿಂದ. ಆದರೆ ಕಾಲಕ್ರಮೇಣ ನಾಗರಿಕತೆ ಬೆಳೆದಂತೆ ಕೃಷಿಯಿಂದ ಹಣ ಗಳಿಸುವ, ಅಧಿಕಾರ ಚಲಾಯಿಸುವುದು ಪುರುಷಾಧಿಪತ್ಯದೊಂದಿಗೆ ಸೇರಿಕೊಂಡಿತು. ಹಾಗೆಂದ ಮಾತ್ರಕ್ಕೆ ಕೃಷಿ ಸಂಬಂಧಿತ ಕಾರ್ಯ ಚಟುವಟಿಕೆಗಳೆಲ್ಲವೂ ಪುರುಷಕೇಂದ್ರಿತ ಚಟುವಟಿಕೆಗಳಾಗಿ ಬದಲಾಗಲಿಲ್ಲ. ವ್ಯವಹಾರ ಮಾತ್ರ ಆತನ ಕೈಯಲ್ಲಿ. ಕೆಲಸ ಮಾತ್ರ ಮಹಿಳೆಯ ಕೈಯಲ್ಲಿ ಎನ್ನುವ ಸ್ಥಿತಿ 21ನೇ ಶತಮಾನದಲ್ಲೂ ಚಾಲ್ತಿಯಲ್ಲಿದೆ.
ಕೃಷಿ ಕ್ಷೇತ್ರ ಸಂಪೂರ್ಣವಾಗಿ ಗಿರಕಿ ಹೊಡೆಯುವುದು ಮಹಿಳೆಯ ಸುತ್ತಲೇ. ಬಿತ್ತನೆ ಬೀಜಗಳು, ರಸಗೊಬ್ಬರಗಳ ಖರೀದಿ, ಮಾರುಕಟ್ಟೆ ವ್ಯವಸ್ಥೆ ಬಿಟ್ಟು ಮಿಕ್ಕಿದ ಎಲ್ಲಾ ಕಾರ್ಯಗಳಲ್ಲೂ ಆಕೆಯದ್ದೇ ಮೇಲುಗೈಯಾಗಿದೆ. ಆದರೆ ಆಕೆಗೆ ತಾನೂ ರೈತ ಮಹಿಳೆ ಎಂದು ಹೇಳಿಕೊಳ್ಳುವ ಮಾನ್ಯತೆ ಇಂದಿಗೂ ದೊರೆತಿಲ್ಲ. ಎಲ್ಲೋ ಅಲ್ಲೊಂದು ಇಲ್ಲೊಂದು ರೈತ ಮಹಿಳಾ ಗುಂಪುಗಳು ಇವೆ ಅಥವಾ ಯಾವುದೋ ಪ್ರಶಸ್ತಿ ಪಡೆದ ಹೆಣ್ಣುಮಕ್ಕಳು ತಾವು ರೈತ ಮಹಿಳೆ ಎಂದು ತಾವೇ ಹೇಳಿಕೊಳ್ಳುವಂತಿದೆ ಪರಿಸ್ಥಿತಿ. ಹಲವು ಸರ್ಕಾರಗಳ ಕಾಯಿದೆ ಕಾನೂನುಗಳು ಕೂಡ ರೈತ ಮಹಿಳೆಯರ ದೃಷ್ಟಿಯಿಂದ ಅಥವಾ ಅವರ ಹಿತದೃಷ್ಟಿಯಿಂದ ರೂಪಿತವಾಗುವುದು ಅಪರೂಪವೇ.
ಇಂತಹ ಸಂದರ್ಭದಲ್ಲಿ ಇಲ್ಲೊಂದು ಗುಂಪು ರೈತ ಮಹಿಳೆಯರ ಹಕ್ಕು, ಗೌರವ, ಅಸ್ತಿತ್ವ ಮತ್ತು ಮಾನ್ಯತೆಗಾಗಿ ಹೋರಾಟಕ್ಕೆ ಇಳಿದಿದೆ. ಅದು ಮಕಾಮ್ (MAKAAM- MAHILA KISAN ADHIKAAR MANCH).
2014ರಲ್ಲಿ ಆರಂಭವಾದ ‘ಮಹಿಳಾ ರೈತರ ಹಕ್ಕುಗಳ ವೇದಿಕೆ’ಯು ಭಾರತದ ಅನೌಪಚಾರಿಕ ವೇದಿಕೆಯಾಗಿದ್ದು, ಇದು ಸುಮಾರು 24 ರಾಜ್ಯಗಳಲ್ಲಿ ರೈತ ಮಹಿಳೆಯರು, ಮಹಿಳಾ ರೈತರ ಸಾಮೂಹಿಕ ಸಂಘಟನೆಗಳು, ನಾಗರಿಕ ಸಮಾಜ ಸಂಸ್ಥೆಗಳು, ಸಂಶೋಧಕರು ಮತ್ತು ಕಾರ್ಯಕರ್ತರನ್ನು ಒಳಗೊಂಡಿದೆ ಮತ್ತು ಒಗ್ಗೂಡಿಸಲು ಪ್ರಯತ್ನಿಸುತ್ತಿದೆ.
ಈ ವೇದಿಕೆ ಪ್ರಮುಖವಾಗಿ ಭಾರತದಲ್ಲಿನ ಮಹಿಳಾ ರೈತರ ಗುರುತಿಗಾಗಿ, ಅವರಿಗೆ ಸಿಗಬೇಕಾಗಿರುವ ಮಾನ್ಯತೆ ಮತ್ತು ಹಕ್ಕುಗಳ ಖಾತ್ರಿಗಾಗಿ ಶ್ರಮಿಸುತ್ತಿದೆ. ಸಣ್ಣ ಹಿಡುವಳಿದಾರ ಮಹಿಳೆಯರನ್ನು ಸಶಕ್ತಗೊಳಿಸಿ ಮತ್ತು ಸ್ವಾವಲಂಬಿಗಳನ್ನಾಗಿಸಿ, ಸುಸ್ಥಿರ ಕೃಷಿ ಮೂಲಕ
ಉತ್ತಮ ಜೀವನೋಪಾಯ ಕಲ್ಪಿಸುವುದು ಮಕಾಮ್ನ ಗುರಿಯಾಗಿದೆ.
ದೇಶದಲ್ಲಿ ಕೃಷಿ ಮಾಡುವ ಅತಿ ಹೆಚ್ಚಿನ ಮಹಿಳೆಯರು ಭೂರಹಿತರು. ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೆ- 2017ರ ಪ್ರಕಾರ ಜಾಗತಿಕವಾಗಿ 73% ಮಹಿಳೆಯರು ಗ್ರಾಮೀಣ ಕೃಷಿ ಕೆಲಸವನ್ನು ಮಾಡುತ್ತಾರೆ. ಅವರು ವಿಶ್ವದಲ್ಲಿ ಬಳಸಲಾಗುವ 50% ಆಹಾರದ ಪೂರೈಕೆಯನ್ನು ಮಾಡುತ್ತಾರೆ. ಆದರೆ ಕೃಷಿ ಆದಾಯದ 10% ಗಳಿಸುತ್ತಾರೆ ಮತ್ತು ಕೇವಲ 1% ರಷ್ಟು ಆಸ್ತಿಯನ್ನು ಹೊಂದಿದ್ದಾರೆ. ಅಖಿಲ ಭಾರತ ಮಟ್ಟದಲ್ಲಿ ಶೇಕಡಾ 24% ಪುರುಷರು ಭೂಮಿಯನ್ನು ಹೊಂದಿದ್ದರೆ, ಕೇವಲ 4% ಗ್ರಾಮೀಣ ಮಹಿಳೆಯರು ಮಾತ್ರ ಭೂಮಿಯನ್ನು ಹೊಂದಿದ್ದಾರೆ. ಈ ಪರಿಸ್ಥಿತಿ ಬದಲಾಗಬೇಕೇಂದು ವೇದಿಕೆ ಒತ್ತಾಯಿಸುತ್ತದೆ.
“ದೇಶದಲ್ಲಿ ಪ್ರತಿ ವರ್ಷ ಅಕ್ಟೋಬರ್ 15ರಂದು ರೈತ ಮಹಿಳಾ ದಿನಾಚರಣೆ ಆಚರಿಸಲು ಭಾರತ ಸರ್ಕಾರ 2017ರಲ್ಲಿ ಆದೇಶಿಸಿದೆ. ಆದರೆ ಮಹಿಳೆಯರನ್ನು ಪ್ರಾಪರ್ಟಿಯಾಗಿ ನೋಡುವ ದೇಶದಲ್ಲಿ ಮಹಿಳೆಯರಿಗೆ ಪ್ರಾಪರ್ಟಿ ಹಕ್ಕು ಸಿಗುವುದಾದರೂ ಹೇಗೆ..?” ಎಂದು ಮಕಾಮ್ನ ರಾಜ್ಯ ಸಂಯೋಜಕರಾದ ಕವಿತಾ ಶ್ರೀನಿವಾಸ್ ಪ್ರಶ್ನಿಸುತ್ತಾರೆ.
“ದೇಶದಲ್ಲಿ ಮಹಿಳೆಯರಿಗೆ ರೈತರು ಎಂಬ ಮಾನ್ಯತೆಯೇ ಇಲ್ಲ ಯಾಕೆಂದರೆ ಅವರಿಗೆ ಭೂಮಿಯ ಹಕ್ಕು ಇಲ್ಲ. ರೈತರು ಎಂದು ಹೇಳಿಕೊಳ್ಳಲು ಯಾವ ಗುರುತು ಕೂಡ ಇಲ್ಲ. ಇಲ್ಲಿ ರೈತರು ಎಂದು ಹೇಳಿಕೊಳ್ಳಲು ಅವರ ಹೆಸರಿನಲ್ಲಿ ಕೃಷಿ ಭೂಮಿ ಇರುವುದು ತುಂಬಾ ಅಗತ್ಯ. ಅಂತಹ ಒಂದು ವ್ಯವಸ್ಥೆ ನಮ್ಮಲ್ಲಿ ಇಲ್ಲ” ಎಂದು ವಿಷಾದ ವ್ಯಕ್ತಪಡಿಸುತ್ತಾರೆ.
ಕೃಷಿಯ ವಿಚಾರದಲ್ಲಿ ಮಹಿಳೆ ಹೇಗೆ ತೊಡಗಿಸಿಕೊಂಡಿದ್ದಾರೆ ಎಂಬ ಪ್ರಶ್ನೆಗೆ “1977-78ರ ಅಂಕಿಅಂಶಗಳ ಪ್ರಕಾರ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಪುರುಷರು 80.06% ರಷ್ಟು, ಮಹಿಳೆಯರು 88.01%. ಅದೇ 2017-18ರ ಅಂಕಿ ಅಂಶಗಳ ಪ್ರಕಾರ ಕೃಷಿಯಲ್ಲಿ ಪುರುಷರ ಪ್ರಮಾಣ 55%ರಷ್ಟಕ್ಕೆ ಇಳಿಮುಖವಾಗಿದ್ದರೆ, ಮಹಿಳೆಯರು 73.05%ರಷ್ಟು ಮಂದಿ ಇನ್ನು ಕೃಷಿಯಲ್ಲೇ ಇದ್ದಾರೆ. ಆದರೂ ಕೂಡ ಮಹಿಳೆಗೆ ರೈತರು ಎಂಬ ಮಾನ್ಯತೆ ದೊರಕಿಲ್ಲ” ಎಂದು ಉತ್ತರಿಸುತ್ತಾರೆ ಕವಿತಾ ಶ್ರೀನಿವಾಸ್.
ಮೂರು ವರ್ಷಗಳ ಹಿಂದೆ ಪ್ರಮುಖ ಪತ್ರಿಕೆಯೊಂದು ಕೃಷಿಯಲ್ಲಿ ಸ್ತ್ರೀಕರಣ ಎಂಬ ಪದ ಬಳಸಿದ್ದರ ಬಗ್ಗೆ ಮಾತು ಮುಂದುವರೆಸಿದ ಕವಿತಾ “2017ರಲ್ಲಿ ಬಂದ ಆ ಒಂದು ಲೇಖನ ಯಾವುದೇ ಅಂಕಿ-ಅಂಶಗಳನ್ನು ಅವಲಂಬಿಸದೆ ಕೃಷಿಯಲ್ಲಿ ಸ್ತ್ರೀಕರಣ ಹೆಚ್ಚಾಗಿದೆ ಎಂದು ಹೇಳುತ್ತಿತ್ತು. ಆದರೆ ವಾಸ್ತವ ಹಾಗಿರಲಿಲ್ಲ. ಈಗಲೂ ಇಲ್ಲ. ಮಹಿಳೆಯರು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಾರೆ ಆದರೆ, ಅದಕ್ಕೆ ದಾಖಲೆಗಳು ಇರುವುದಿಲ್ಲ. ಏಕೆಂದರೆ ಅವರ್ಯಾರಿಗೂ ರೈತರು ಎಂಬ ಮಾನ್ಯತೆಯೇ ಇಲ್ಲ. ನಾನು ಪದೇಪದೇ ಮಹಿಳೆಯರಿಗೆ ರೈತರು ಎಂಬ ಮಾನ್ಯತೆ ಇಲ್ಲ.. ಭೂಹೀನರು ಎಂದು ಹೇಳುತ್ತೇನೆ ಏಕೆಂದರೆ ಇಲ್ಲಿ ಮಹಿಳೆಯರನ್ನು ನಾವು ರೈತರು ಎಂದು ಪರಿಗಣಿಸಲು ಈ ಎರಡು ಅಂಶಗಳು ತುಂಬಾ ಮುಖ್ಯ. ಹಾಗಾಗಿ ನಾನು ಈ ಹಿನ್ನೆಲೆಯಲ್ಲೇ ಮಾತುಗಳನ್ನಾಡುತ್ತೇನೆ’ ಎನ್ನುತ್ತಾರೆ.
ಇದನ್ನೂ ಓದಿ: ವಿವಾದಿತ ಕೃಷಿ ಮಸೂದೆಗಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ
ಸರ್ಕಾರದ ಬಳಿ ರೈತರ ದಾಖಲೆಗಳಿವೆ. ಕೃಷಿ ಭೂಮಿಯ ದಾಖಲೆ ಇದೆ. ಎಲ್ಲಿ ಯಾವ ಬೆಳೆ ಬೆಳೆಯುತ್ತಾರೆ ಎಂಬ ಮಾಹಿತಿ ಇರುತ್ತದೆ ಆದರೆ ಮಹಿಳಾ ರೈತರು ಎಷ್ಟು ಮಂದಿ ಇದ್ದಾರೆ ಎಂಬ ಮಾಹಿತಿ ಮಾತ್ರ ದೊರೆಯುವುದಿಲ್ಲ. ಸರ್ಕಾರ ಒಂದು ಕಾಲಂ ಜಾಸ್ತಿ ಮಾಡಿದರೂ ಸಾಕು ಈ ಸಮಸ್ಯೆಗೆ ಅಲ್ಪ ಪರಿಹಾರ ದೊರೆತಂತೆ ಎನ್ನುತ್ತಾರೆ.
ಈ ಸಮಸ್ಯೆಯ ಬಗ್ಗೆ ಗಮನಹರಿಸಲು ಮಕಾಮ್ ಸರ್ಕಾರದ ಬಳಿ ಇಟ್ಟಿರುವ ಮೂರು ಬೇಡಿಕೆಗಳು ಇಂತಿವೆ.
1. ಮಹಿಳಾ ರೈತರಿಗೆ ಐಡಂಟಿಟಿ ಕಾರ್ಡ್/ನಂಬರ್ ನೀಡಬೇಕು; 2. ಲಿಂಗಾಧಾರಿತ ವರ್ಗೀಕೃತ ಅಂಕಿಅಂಶ (Gender disaggregated data) ನೀಡಬೇಕು; ಮತ್ತು 3. ಮಹಿಳೆಯರಿಗೆ ಭೂಮಿಯಹಕ್ಕು/ ಆಸ್ತಿಯ ಹಕ್ಕು
“ಎಲ್ಲ ಮಕ್ಕಳಿಗೂ ಆಸ್ತಿಯಲ್ಲಿ ಸಮಪಾಲು ನೀಡುವ ಹಕ್ಕು ಈಗಾಗಲೇ ಇದೆ. ಆದರೆ ಎಷ್ಟರ ಮಟ್ಟಿಗೆ ಅದು ಮಹಿಳೆಗೆ ದೊರೆಯುತ್ತದೆ. ವಿದ್ಯಾಭ್ಯಾಸ ಮಾಡಿಸಿದ್ದೇವೆ, ಮದುವೆ ಮಾಡಿದ್ದೇವೆ ಎಂಬ ಖರ್ಚುಗಳ ವಿವರವೇ ಹೆಚ್ಚಾಗಿ ಭೂಮಿ ತವರು ಮನೆಯವರ ಜೊತೆಗೇ ಇರುವ ಸ್ಥಿತಿ ಇದೆ. ಕೆಲವೊಮ್ಮೆ ತವರುಮನೆಯ ಮೇಲಿನ ಮಮತೆ ಮತ್ತೂ ಕೆಲವೊಮ್ಮೆ ತವರು ಮನೆಯವರು ಸಂಬಂಧ ಕಡಿದುಕೊಳ್ಳುವ ಭಯ ಕೂಡ ಇದಕ್ಕೆ ಕಾರಣವಾಗುತ್ತದೆ” ಎನ್ನುತ್ತಾರೆ ಕವಿತ.
“ಮಹಿಳೆಯರು ಕೃಷಿ ಕ್ಷೇತ್ರದಲ್ಲಿ ಶ್ರಮ ಮಾತ್ರ ವ್ಯಯಿಸುವವರಾಗಿದ್ದಾರೆ. ಅವರಿಗೆ ಭೂಮಿಯ ಹಕ್ಕು ಇಲ್ಲದಿರುವುದು ಮುಖ್ಯವಾದರೆ, ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಕೂಡ ಕಡೆಗಣಿಸಲಾಗುತ್ತದೆ. 70% ಕೃಷಿ ಕೆಲಸ ಮಾಡುವವರು ಮಹಿಳೆಯರಾಗಿದ್ದರೆ, ಆ ಕೃಷಿ ಭೂಮಿಯಲ್ಲಿ ಏನು ಬೆಳೆಯಬೇಕು, ಎಷ್ಟು ಬೆಳೆಯಬೇಕು, ಎಲ್ಲಿಂದ ಬಿತ್ತನೆ ಬೀಜ ತರಬೇಕು, ಸಾಲ ಪಡೆಯುವುದರ ಬಗ್ಗೆ, ಗೊಬ್ಬರ ಹಾಕುವುದು ಎಲ್ಲಾ ನಿರ್ಧಾರಗಳು ಪುರುಷರು ಮಾತ್ರ ತೆಗೆದುಕೊಳ್ಳುತ್ತಾರೆ. ನಮ್ಮ ಮಾರುಕಟ್ಟೆ ವ್ಯವಸ್ಥೆಯ ಪುರುಷಪ್ರಧಾನ ಸ್ಥಿತಿ ಕೂಡ ರೈತ ಮಹಿಳೆಯರನ್ನು ಎಪಿಎಂಸಿಗಳ ಬಳಿಗೆ ಬರದಂತೆ ತಡೆದಿವೆ” ಎನ್ನುತ್ತಾರೆ.
ಪುರುಷನ ಜೊತೆಗಿದ್ದು ತನ್ನ ಹಕ್ಕಿಗಾಗಿ ಹೋರಾಡಬೇಕಾದ ಸ್ಥಿತಿ ಒಂದು ಕಡೆಯಾದರೆ, ಒಂದು ಪಕ್ಷ ಮನೆಯ, ಕೃಷಿಯ ಜವಾಬ್ದಾರಿ ಹೊತ್ತ ಪುರುಷ ಅಕಾಲಿಕ ಸಾವಿಗೀಡಾದರೇ ಆಕೆಯ ಸ್ಥಿತಿ ಇನ್ನೂ ಹೀನಾಯವಾಗುತ್ತದೆ ಎಂಬುದನ್ನು ವಿವರಿಸುತ್ತಾರೆ.
“ತನ್ನ ಹೊಲದ ಮೇಲೆ ಅಧಿಕಾರ ಹೊಂದಿರುವ ಪುರುಷ ಸಾಲ ತೆಗೆದುಕೊಂಡಿರುತ್ತಾರೆ. ಆದರೆ ಮಹಿಳೆಗೆ ಮತ್ತೆ ಅದೇ ಹೊಲದ ಮೇಲೆ ಸಾಲ ದೊರೆಯುವುದಿಲ್ಲ. ಕೃಷಿ ಲೋನ್ಗಳನ್ನು ನೀಡಲಾಗುವುದಿಲ್ಲ. ಬ್ಯಾಡ್ ಕ್ರಿಡಿಟ್ ಎಂದು ಸಾಲ ನಿರಾಕರಿಸಲಾಗುತ್ತದೆ. ಏಕೆಂದರೆ ಭೂಮಿ ಆಕೆಯ ಹೆಸರಿನಲ್ಲಿ ಇರದ ಕಾರಣ” ಎನ್ನುತ್ತಾರೆ.
ಕೃಷಿ ಮಹಿಳೆಯರಿಗೆ ಕೇರಳ ಮತ್ತು ಆಂಧ್ರ ಪ್ರದೇಶ ಸರ್ಕಾರಗಳು ನೀಡುವ ಯೋಜನೆಗಳನ್ನು ಕವಿತಾ ಶ್ರೀನಿವಾಸ್ ನೆನಪಿಸುತ್ತಾರೆ. ಕೇರಳದ ಡೆತ್ ರಿಲೀಫ್ ಕಮಿಟಿ, ಆಂಧ್ರ ಸರ್ಕಾರದ ಒನ್ ಟೈಂ ಸೆಟಲ್ಮೆಂಟ್ ಯೋಜನೆಗಳು ರೈತ ಮಹಿಳೆಯರಿಗೆ ಮತ್ತೆ ಬ್ಯಾಂಕ್ಗಳಿಂದ ಸಾಲ ತೆಗೆದುಕೊಳ್ಳುವ ಅವಕಾಶ ನೀಡುವುದನ್ನು, ಜೊತೆಗೆ ಅಲ್ಲಿ ಮಹಿಳಾ ರೈತರ ಕೃಷಿ ಚಟುವಟಿಕೆಗಳ ಮೇಲೆ ಸರ್ಕಾರಗಳು ಹಣ ವಿನಿಯೋಗಿಸುತ್ತಿರುದನ್ನು ಅವರು ಪ್ರಸ್ತಾಪಿಸುತ್ತಾರೆ.
ಸರ್ಕಾರದ ನ್ಯಾಷನಲ್ ಪಾಲಿಸಿ ಫಾರ್ ಪಾರ್ಮಸ್ಸ್- 2007 ಸೆಕ್ಷನ್ 3 ಹೇಗೆ ಪ್ರಾಥಮಿಕ ಆಹಾರ ಉತ್ಪಾದಕರನ್ನು ರೈತರು ಎಂದು ಮಾನ್ಯ ಮಾಡುತ್ತದೋ ಅದೇ ಮಾನದಂಡದಲ್ಲಿ ಸರ್ಕಾರ ಮಹಿಳೆಯರನ್ನೂ ರೈತರು ಎಂದು ಪರಿಗಣಿಸಬೇಕು ಎಂದು ಅವರು ಒತ್ತಾಯಿಸುತ್ತಾರೆ.
ಕೃಷಿ ಭೂಮಿ ಇರಲಿ ಇಲ್ಲದೆ ಇರಲಿ, ರೈತರು ಅಂದರೆ- ಪ್ರಾಥಮಿಕ ಆಹಾರ ಉತ್ಪಾದಕರು, ಅರಣ್ಯ ಉತ್ಪನ್ನ ತರುವವರು, ಕೋಳಿ ಸಾಕಾಣಿಕೆ, ಮೀನುಗಾರಿಕೆ, ಪಶುಸಂಗೋಪನೆ, ರೇಷ್ಮೆ ಕೃಷಿಕರು, ಎರೆಹುಳು ಕೃಷಿಕರು, ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡ ಎಲ್ಲರನ್ನೂ ಕೃಷಿಕರು ಎಂದು ಪರಿಗಣಿಸಬೇಕು ಎಂದು ಈ ಪಾಲಿಸಿ ಹೇಳುತ್ತದೆ.
ಮಹಿಳಾ ರೈತರಿಗೆ, ವಿಶೇಷವಾಗಿ ದಲಿತ ಮತ್ತು ಆದಿವಾಸಿ ಮಹಿಳಾ ರೈತರಿಗೆ ಸರ್ಕಾರ ಎಂದಿಗೂ ಆದ್ಯತೆ ನೀಡಿಲ್ಲ. ಈಗ ಇರುವ ಕಾನೂನನ್ನು ಇನ್ನೂ ದುರ್ಬಲಗೊಳಿಸುವ ಬದಲು, ಅವರಿಗೆ ಭೂಮಿಯನ್ನು ನೀಡಬೇಕು. ಪಶುಗಳನ್ನು ಮೇಯಿಸಲಿಕ್ಕೆ, ಗುಂಪು ಕೃಷಿ, ಸಣ್ಣ ಅರಣ್ಯ ಉತ್ಪನ್ನಗಳ ಸಂಗ್ರಹ ಮತ್ತು ಮೀನುಗಾರಿಕೆಗೆ ಅನುವು ಮಾಡಿಕೊಡಬೇಕು. ಭೂರಹಿತ ಕುಟುಂಬಗಳಿಗೆ 5 ಎಕರೆ ಜಮೀನನ್ನು ಮಹಿಳೆಯನ್ನು ಸೇರಿದಂತೆ ಜಂಟಿ ಪಟ್ಟ ನೀಡಬೇಕು ಎಂದು ಮಕಾಮ್ ವೇದಿಕೆ ಒತ್ತಾಯಿಸುತ್ತದೆ.
ಕರ್ನಾಟಕದಲ್ಲಿ ಮಕಾಮ್ನ ವ್ಯಾಪ್ತಿಯ ಬಗ್ಗೆ ಕವಿತಾ ಶ್ರೀನಿವಾಸ್ ಹೀಗೆ ಪ್ರತಿಕ್ರಿಯಿಸುತ್ತಾರೆ.
“ನಾವು 24 ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಕರ್ನಾಟಕದಲ್ಲೂ ರೈತರ ಆತ್ಮಹತ್ಯೆ ಸೇರಿದಂತೆ ಮಹಿಳಾ ಕೃಷಿಕರ ಕುರಿತು ಅಧ್ಯಯನ ನಡೆಸಿದ್ದೇವೆ. ಇಲ್ಲಿ ನಾವಿನ್ನೂ ಕೃಷಿಕ ಮಹಿಳೆಯರನ್ನು ಪರಿಣಾಮಕಾರಿಯಾಗಿ ತಲುಪಲು ಸಾಧ್ಯವಾಗಿಲ್ಲ ಎಂಬ ಅರಿವು ನಮಗಿದೆ. ಕರ್ನಾಟಕದಲ್ಲಿ ಫೆಸಿಲಿಟೇಷನ್ ತಂಡ ಮಾತ್ರ ಇದೆ. ಇಲ್ಲಿನ ಸದಸ್ಯರು ಬೇರೆ ಬೇರೆ ಸಂಘಟನೆಗಳಲ್ಲೂ ತೊಡಗಿಕೊಂಡು ಆ ಮೂಲಕ ಮಕಾಮ್ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿ ಮಕಾಮ್ ಇದೆ. ಆದರೂ ಇಲ್ಲ ಎಂಬ ಎರಡು ಹೇಳಿಕೆಗಳ ಮಧ್ಯ ನಾವಿದ್ದೇವೆ. ಆದರೆ ಆದಷ್ಟು ಬೇಗನೆ ಎಲ್ಲಾ ರೈತ ಮಹಿಳೆಯರನ್ನು ತಲುಪುತ್ತೇವೆ. ಅವರ ಹಕ್ಕುಗಳಿಗಾಗಿ ಹೋರಾಡುತ್ತೇವೆ” ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ ಕವಿತಾ ಶ್ರೀನಿವಾಸ್.