ಚಾಮರಾಜನಗರದಲ್ಲಿ ವಿಷಮುಕ್ತ ಆಹಾರೋತ್ಪನ್ನಗಳ ನೇರ ಮಾರಾಟದ “ನಮ್ದು ಬ್ರ್ಯಾಂಡ್” ಮಳಿಗೆ ನಿನ್ನೆ (ಗಾಂಧಿ ಜಯಂತಿ) ಉದ್ಘಾಟನೆಯಾಗಿದ್ದು, ರೈತ ಮುಖಂಡರಾಗಿದ್ದ ಪ್ರೊ.ಎಂ.ಡಿ ನಂಜುಂಡಸ್ವಾಮಿಯವರ ತಮ್ಮ ಕಡೆಯ ದಿನಗಳಲ್ಲಿ ಕಂಡಿದ್ದ ಈ ಕನಸು ಕೊನೆಗೂ ನನಸಾಗಿದೆ.
ಇಂದು ಸರ್ಕಾರಗಳು ರೈತಪರವಾಗಿಲ್ಲ. ಬೀಜ ಗೊಬ್ಬರ ಸೇರಿ ಎಲ್ಲದರ ಬೆಲೆ ಏರಿಸುವುದರೊಂದಗೆ ಕನಿಷ್ಟ ಬೆಂಬಲ ಬೆಲೆ ನೀಡಲು ವಿಫಲವಾಗುತ್ತಿವೆ. ಇಂಥಹ ಕಷ್ಟದ ಪರಿಸ್ಥಿತಿಯಲ್ಲಿ ರೈತರು ಒಳ್ಳೆಯ ಬೆಳೆ ಬೆಳೆದರೂ ಅವರಿಗೆ ಲಾಭವಾಗದೇ ಮಧ್ಯವರ್ತಿಗಳ ಪಾಲಾಗುತ್ತಿದೆ. ಇನ್ನು ಹೆಚ್ಚಿನ ಇಳುವರಿಯ ಮೋಹಕ್ಕೆ ಬಿದ್ದು ಕೃಷಿಯಲ್ಲಿ ರಾಸಯನಿಕಗಳನ್ನು ಬಳಸುವವರೆ ಸಂಖ್ಯೆ ಹೆಚ್ಚಾಗುತ್ತಿದೆ. ಇಷ್ಟೆಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಅಮೃತಭೂಮಿ ಸುಸ್ಥಿರ ಅಭಿವೃದ್ದಿ ಕೇಂದ್ರ ಮತ್ತು ಕ.ರಾ.ರೈ.ಸಂಘ, ಹಸಿರು ಸೇನೆ ಮಾಡುತ್ತಿರುವ ವಿನೂತನ ಪ್ರಯೋಗವೇ ‘ನಮ್ದು’ ಬ್ರ್ಯಾಂಡ್ ಆಗಿದೆ.
ಮಧ್ಯವರ್ತಿಗಳ ಹಾವಳಿಯಿಂದ ತತ್ತರಿಸಿರುವ ರೈತ ಸಮುದಾಯಕ್ಕೆ ಒಂದು ಶಾಶ್ವತ ಪರಿಹಾರ ಕಂಡುಕೊಳ್ಳುವ ಅವಶ್ಯಕತೆ ಹಿಂದೆಂದಿಗಿಂತ ಇಂದು ಅತಿ ಮುಖ್ಯವಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿ ಕೂಡ ರೈತರಿಗಿದ್ದ ಅಲ್ಪಸ್ವಲ್ಪ ಮಾರುಕಟ್ಟೆಯ ಭದ್ರತೆಯನ್ನು ಕಸಿದುಕೊಂಡು ಕೃಷಿ ಮಾರುಕಟ್ಟೆಯನ್ನು ಸಂಪೂರ್ಣ ಖಾಸಗೀಕರಣಗೊಳಿಸಲು ಹೊರಟಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರಿಂದ ನೇರ ಗ್ರಾಹಕರಿಗೆ ತಲುಪಿಸಲು ನಮ್ದು ಬ್ರ್ಯಾಂಡ್ನ ಉದ್ದೇಶ ಎಂದು ಅಮೃತಭೂಮಿ ಟ್ರಸ್ಟ್ ಹೇಳಿದೆ.
ಅದರ ಮೊದಲ ಮಾರಾಟ ಮಳಿಗೆಯು ಚಾಮರಾಜನಗರದಲ್ಲಿ ಆರಂಭವಾಗಿದ್ದು, ಇಲ್ಲಿ ರೈತರು ಬೆಳೆದ ಸಿರಿಧಾನ್ಯಗಳು, ದವಸ ಧಾನ್ಯಗಳು, ಹಣ್ಣು, ತರಕಾರಿ, ಸೊಪ್ಪು, ಜೇನುತುಪ್ಪ, ಬೆಲ್ಲ, ಗಾಣದಲ್ಲಿ ತಯಾರಿಸಿದ ಎಣ್ಣೆ ಮೊದಲಾದ ಆಹಾರ ಪದಾರ್ಥಗಳನ್ನು ರೈತರೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಿದ್ದಾರೆ.
ಇದನ್ನೂ ಓದಿ: ‘ರೈತರಿಂದ ನೇರ ಗ್ರಾಹಕರಿಗೆ’ ಫೇಸ್ಬುಕ್ ಗ್ರೂಪ್: ವಿಭಿನ್ನ ಪ್ರಯೋಗಕ್ಕೆ ಅಭೂತಪೂರ್ವ ಪ್ರತಿಕ್ರಿಯೆ
ರೈತ ಮುಖಂಡರಾಗಿದ್ದ ಪ್ರೊ.ಎಂ.ಡಿ ನಂಜುಂಡಸ್ವಾಮಿಯವರ ತಮ್ಮ ಕಡೆಯ ದಿನಗಳಲ್ಲಿ ಕಂಡಿದ್ದ ಕನಸುಗಳಲ್ಲಿ, ಮಧ್ಯವರ್ತಿಗಳಿಲ್ಲದ ನೇರ ಮಾರುಕಟ್ಟೆ ಕಲ್ಪನೆಯೂ ಕೂಡ ಒಂದಾಗಿತ್ತು. ಸಹಕಾರ ವ್ಯವಸ್ಥೆಯಲ್ಲಿ ಯಶಸ್ಸು ಕಂಡಿರುವ ಹಾಲು ಮತ್ತು ಹಾಲಿನ ಉಪಉತ್ಪನ್ನಗಳ ರೀತಿಯೇ ರೈತರು ಬೆಳೆಯುವ ಎಲ್ಲಾ ರೀತಿಯ ದವಸ ಧಾನ್ಯಗಳು, ಹಣ್ಣು ತರಕಾರಿಗಳು ಮತ್ತು ಅದರ ಉಪ ಉತ್ಪನ್ನಗಳನ್ನು ಇಡೀ ಕರ್ನಾಟಕದ ರೈತರು ಒಂದೇ ಬ್ರಾಂಡ್ನ ಕೆಳಗೆ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ವ್ಯವಸ್ಥೆಯನ್ನು ಕಟ್ಟುವುದರ ಮೂಲಕ ಗಾಂಧೀಜಿಯವರು ಕಂಡಿದ್ದ ಗ್ರಾಮಸ್ವ ರಾಜ್ಯದ ಕನಸನ್ನು ನನಸು ಮಾಡಲು ಪ್ರಯತ್ನಪಟ್ಟಿದ್ದರು. ಈ ಬ್ರಾಂಡ್ಗೆ “ನಮ್ದು” ಎನ್ನುವ ಹೆಸರನ್ನು ಕೂಡ ಕೊಟ್ಟಿದ್ದರು ಅದನ್ನೇ ನಾವು ಮುಂದುವರೆಸಿದ್ದೇವೆ ಎಂದು ಟ್ರಸ್ಟ್ ಹೇಳಿದೆ.
ಇದನ್ನೂ ಓದಿ: ಗಾಂಧಿ ಜಯಂತಿಯಂದು ಕೃಷಿ ಮಸೂದೆ ವಿರೋಧಿಸಿ ’ಅನ್ನದಾತ’ರ ಉಪವಾಸ ಸತ್ಯಾಗ್ರಹ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಅಮೃತಭೂಮಿ ಅಂತರಾಷ್ಟ್ರೀಯ ಸುಸ್ಥಿರ ಅಭಿವೃದ್ಧಿ ಕೇಂದ್ರ, ನಿಸರ್ಗ ಟ್ರಸ್ಟ್, ನಿಸರ್ಗ ನೈಸರ್ಗಿಕ ಸಾವಯವ ಕೃಷಿಕರ ಸಂಘ, ಗುರುಮಲ್ಲೇಶ್ವರ ಸಾವಯವ ಕೃಷಿಕರ ಸಂಘ, ಮಹದೇಶ್ವರ ಜಿಲ್ಲಾ ಸಾವಯವ ಕೃಷಿಕರ ಸಂಘಗಳ ಸಹಯೋಗದಲ್ಲಿ ಈ ಮಳಿಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಇತ್ತೀಚೆಗೆ ಸಾವಯವ ಕೃಷಿ ಮತ್ತು ಸಾವಯವ ಉತ್ಪನ್ನಗಳಿಗೆ ಮಹತ್ವ ಹೆಚ್ಚಾಗುತ್ತಿರುವುದು ಒಂದು ಒಳ್ಳೆಯ ಬೆಳವಣಿಗೆಯಾಗಿದೆ. ಕೃಷಿ ಕ್ಷೇತ್ರಕ್ಕೆ ಉಳಿಗಾಲವಿಲ್ಲದಂತೆ ಹುನ್ನಾರ ಮಾಡುತ್ತಿರುವ ಕಾರ್ಪೋರೇಟ್ ಪ್ರಣೀತ ಸರ್ಕಾರಗಳ ಯೋಜನೆ ಮತ್ತು ಕಾನೂನುಗಳ ನಡುವೆ ಇಂತಹ ಸಣ್ಣ ಸಣ್ಣ ಕೆಲಸಗಳು ಮರುಭೂಮಿಯಲ್ಲಿ ಓಯಸಿಸ್ನಂತೆ ಕಾಣಿಸುತ್ತದೆ. ಹಾಗಾಗಿ ಇದನ್ನು ಬೆಂಬಲಿಸಿ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿಯಾಗುವಂತೆ ಮಾಡುವುದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರೀಕನ ಕರ್ತವ್ಯವಾಗಿದೆ.
ಇದನ್ನೂ ಓದಿ: ಕೃಷಿ ಮಸೂದೆಗಳ ವಿರುದ್ಧ ಆಕ್ರೋಶ: ರಾಜ್ಯದ್ಯಂತ ಕರ್ನಾಟಕ ಬಂದ್ ಆರಂಭ – ವಿಡಿಯೋ ನೋಡಿ