ಸತತ ಎರಡನೆ ಬಾರಿ ಹತ್ರಾಸ್ಗೆ ಹೊರಟಿದ್ದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಕೊನೆಗೂ ಸಂತ್ರಸ್ತೆಯ ಮನೆಗೆ ತಲುಪಿದ್ದಾರೆ. ಮನೆಯ ಸುತ್ತ ಭಾರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದ್ದು, ಯಾವುದೇ ಮಾಧ್ಯಮದವರನ್ನು ಒಳಗೆ ಬಿಡುತ್ತಿಲ್ಲ ಎಂದು ವರದಿಯಾಗಿದೆ.
ಇಂದು ಮಧ್ಯಾಹ್ನ ದೆಹಲಿಯಿಂದ ಹೊರಟಿದ್ದ ರಾಹುಲ್ ಗಾಂಧಿಯನ್ನು ಉತ್ತರ ಪ್ರದೇಶದ ಗಡಿಯಲ್ಲಿ ತಡೆಯಲಾಗಿತ್ತಾದರೂ, ಸ್ವಲ್ಪ ಹೊತ್ತಿನ ನಂತರ ಅವರನ್ನು ಮುಂದಕ್ಕೆ ಪ್ರಯಾಣಿಸಲು ಅನುಮತಿಸಲಾಯಿತು. ನಾನು ಹತ್ರಾಸ್ನ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡುವ ಹಾಗೂ ಅವರ ನೋವು ಹಂಚಿಕೊಳ್ಳುವುದನ್ನು ಜಗತ್ತಿನ ಯಾವುದೂ ತಡೆಯಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.
#WATCH: Congress leaders Rahul Gandhi and Priyanka Gandhi Vadra arrive at the residence of the victim of #HathrasIncident. pic.twitter.com/98xDRRSfY0
— ANI UP (@ANINewsUP) October 3, 2020
ಎರಡು ದಿನಗಳ ಹಿಂದೆಯಷ್ಟೇ ಹತ್ರಾಸ್ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಲು ಹೊರಟಿದ್ದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಯನ್ನು ಉತ್ತರ ಪ್ರದೇಶದ ಪೊಲೀಸರು ತಳ್ಳಾಡಿ ಬಂಧಿಸಿದ್ದರು. ಆದರೆ ಅವರು ಇಂದು ಪಟ್ಟು ಬಿಡದೆ ಹತ್ರಾಸ್ಗೆ ಪ್ರಯಾಣಿಸಿದ್ದರು.
ಇದನ್ನೂ ಓದಿ: ಪಟ್ಟು ಬಿಡದೇ ಕೊನೆಗೂ ಹತ್ರಾಸ್ ಸಂತ್ರಸ್ತ ಕುಟುಂಬ ಭೇಟಿಗೆ ಹೊರಟ ರಾಹುಲ್, ಪ್ರಿಯಾಂಕ ಗಾಂಧಿ
ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಇತರ ಮೂವರೊಂದಿಗೆ ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಗೆ ಪ್ರಯಾಣಿಸುತ್ತಿದ್ದಾರೆ. ಮುಂದಿನ ಸೀಟಿನಲ್ಲಿ ರಾಹುಲ್ ಗಾಂಧಿ ಕುಳಿತಿದ್ದು, ಟೊಯೋಟಾ ಇನ್ನೋವಾ ಕಾರನ್ನು ಸ್ವತಃ ಪ್ರಿಯಾಂಕಾ ಗಾಂಧಿ ಚಲಾಯಿಸುತ್ತಿರುವ ಫೋಟೊಗಳನ್ನು ಎನ್ಡಿಟಿವಿ ಪ್ರಕಟಿಸಿತ್ತು.
ಸಿಆರ್ಪಿಸಿ ಸೆಕ್ಷನ್ 144 ರ ಅಡಿಯಲ್ಲಿ ವಿಧಿಸಿರುವ ನಿರ್ಬಂಧಗಳನ್ನು ಪರಿಗಣಿಸಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದ ಸಂಸದರ ನಿಯೋಗದ ಐವರು ಸದಸ್ಯರಿಗೆ ಮಾತ್ರ ನೋಯ್ಡಾ ಮೂಲಕ ಹತ್ರಾಸ್ಗೆ ಹೋಗಲು ಅನುಮತಿ ನೀಡಲಾಗಿದೆ ಎಂದು ಗೌತಮ ಬುದ್ಧ ನಗರ ಪೊಲೀಸರು ತಿಳಿಸಿದ್ದರು.
“ಐದು ಜನರಿಗಿಂತ ಹೆಚ್ಚಿನ ಜನರಿಲ್ಲದ ಯಾವುದೇ ಗುಂಪಿಗೆ ಹತ್ರಾಸ್ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಲು ಅವಕಾಶವಿದೆ” ಎಂದು ಯುಪಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನಿಶ್ ಅವಸ್ಥಿ ಹೇಳಿದ್ದಾರೆ.
ಇದನ್ನೂ ಓದಿ: ಹತ್ರಾಸ್ ಕುರಿತು ನೀವು ದನಿಯೆತ್ತದಿದ್ದರೆ..: ರಮ್ಯಾ ದಿವ್ಯಸ್ಪಂದನ ಮನವಿ ಮಾಡಿದ್ದೇನು?