Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರಗಳ ಸಮೀಕ್ಷೆ:ಅಫಜಲಪುರ: ಗುತ್ತೇದಾರ್ ಸಹೋದರರ ಒಡಕಿನ ಲಾಭ ಕಾಂಗ್ರೆಸ್‌ಗೆ?

ಅಫಜಲಪುರ: ಗುತ್ತೇದಾರ್ ಸಹೋದರರ ಒಡಕಿನ ಲಾಭ ಕಾಂಗ್ರೆಸ್‌ಗೆ?

- Advertisement -
- Advertisement -

ಕಲಬುರ್ಗಿ ಜಿಲ್ಲೆಯ ಅಫಜಲಪುರ ಅಷ್ಟೇನೂ ಅಭಿವೃದ್ಧಿ ಕಾಣದೆ, ಇಂದಿಗೂ ಮೂಲಭೂತ ಸೌಕರ‍್ಯಗಳಿಲ್ಲದೆ ಸಮಸ್ಯೆಗಳನ್ನು ಎದುರಿಸುತ್ತಿದೆ. ಶುದ್ಧ ಕುಡಿಯುವ ನೀರನ್ನೇ ಕಾಣದ ಹತ್ತಾರು ಹಳ್ಳಿಗಳು ಇಂದಿಗೂ ಕ್ಷೇತ್ರದಲ್ಲಿವೆ. ಬಸ್ಸುಗಳೇ ಹೋಗದ, ರಸ್ತೆಗಳೇ ಇಲ್ಲದ ಹಳ್ಳಿಗಳೂ ಇವೆ. “ಉತ್ತಮ” ಶಿಕ್ಷಣ ಪಡೆಯಲು ಒಳ್ಳೆಯ ಸರ್ಕಾರಿ ಅಥವಾ ಖಾಸಗೀ ಸಂಸ್ಥೆಗಳೂ ಇಲ್ಲ. ಸೂರಿಲ್ಲ, ಉದ್ಯೋಗವಿಲ್ಲ ಹೀಗೆ ಇನ್ನೂ ಸಾಕಷ್ಟು ಸಮಸ್ಯೆಗಳಿವೆ. ಕಳೆದ 45 ವರ್ಷಗಳಿಂದ ಮಾಲೀಕಯ್ಯ ಗುತ್ತೇದಾರ್ ಮತ್ತು ಎಂ ವೈ ಪಾಟೀಲ್‌ರವರೇ ಕ್ಷೇತ್ರದ ಶಾಸಕರಾಗಿದ್ದು, ಜನರ ಕಷ್ಟಗಳಿಗೆ ಬೆನ್ನು ತಿರುಗಿಸಿರುವುದರಿಂದ ಈ ಸಮಸ್ಯೆಗಳಿಗೆ ಈ ಬಾರಿಯ ಚುನಾವಣೆಯಲ್ಲಿ ಪರಿಹಾರ ಕಂಡುಕೊಳ್ಳಲು ಜನತೆ ಮುಂದಾಗಿದ್ದಾರೆ. ಇವರಿಬ್ಬರ ಆಡಳಿತದಿಂದ ಬೇಸೆತ್ತಿರುವ ಜನತೆ ಪಕ್ಷೇತರ ಅಭ್ಯರ್ಥಿ, ಹೊಸ ಮುಖ ನಿತಿನ್ ಗುತ್ತೇದಾರ್‌ ಕಡೆ ಮುಖ ಮಾಡಿದ್ದಾರೆ. ಇದರಿಂದ ಜನರ ಕಷ್ಟಗಳಿಗೆ ಪರಿಹಾರ ಸಿಗುತ್ತದೆಯೋ, ಬಿಡುತ್ತದೆಯೋ ಗೊತ್ತಿಲ್ಲ, ಆದರೆ ಜನರ ಸಿಟ್ಟಿಗೆ ಕ್ಷಣಿಕ ಪರಿಹಾರ ಸಿಗುವ ಸೂಚನೆಗಳು ಕಂಡುಬರುತ್ತಿವೆ.

ರಾಜಕೀಯ ಇತಿಹಾಸ

ಸಾಮಾನ್ಯ ಕ್ಷೇತ್ರವಾಗಿರುವ ಅಫಜಲಪುರ ಕಾಂಗ್ರೆಸ್‌ನ ಭದ್ರಕೋಟೆ ಅಂತಲೇ ಹೇಳಬಹುದು. ಇದುವರೆಗೆ ನಡೆದಿರುವ 15 ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ 10 ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಜನತಾಪಕ್ಷದ ಇಬ್ಬರು, ಜೆಡಿಎಸ್ ಪಕ್ಷದಿಂದ ಇಬ್ಬರು ಮತ್ತು ಕೆಸಿಪಿಯಿಂದ ಒಬ್ಬ ಅಭ್ಯರ್ಥಿ ಜಯಗಳಿಸಿದ್ದಾರೆ. ವಿಶೇಷವೆಂದರೆ ಬಿಜೆಪಿ ಇಲ್ಲಿ ಖಾತೆ ತೆರೆಯಲು ಸಾಧ್ಯವಾಗಿಲ್ಲ.

ಮೊದಲ ಚುನಾವಣೆಯಿಂದ 1978ರ ಚುನಾವಣೆವರೆಗೂ ಇಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಸತತವಾಗಿ ಜಯಗಳಿಸಿದ್ದರು. ಆದರೆ 1978ರಲ್ಲಿ ಮೊದಲ ಬಾರಿಗೆ ಲಿಂಗಾಯಿತ ಸಮುದಾಯದ ಎಂ ವೈ ಪಾಲೀಲ್ ಜನತಾ ಪಕ್ಷದಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಹನುಮಂತರಾವ್ ದೇಸಾಯಿಯವರನ್ನು ಮಣಿಸಿ ಗೆಲುವು ಸಾಧಿಸಿದ್ದರು. ಆದರೆ ಮುಂದಿನ 1983ರ ಚುನಾವಣೆಯಲ್ಲಿ ಜನತಾ ಪಕ್ಷ ಸೇರಿದ್ದ ಹನುಮಂತರಾವ್ ದೇಸಾಯಿ ಕಾಂಗ್ರೆಸ್‌ನಿಂದ ಕಣಕ್ಕಿಳಿದ ಎಂ.ವೈ ಪಾಟೀಲ್‌ರನ್ನು ಮಣಿಸಿದರು.

ಮಾಲಿಕಯ್ಯ ಗುತ್ತೇದಾರ್ ಆಳ್ವಿಕೆ

1985 ರಿಂದ ಮಾಲಿಕಯ್ಯ ಗುತ್ತೇದಾರ್‌ರವರ ಪಾರುಪತ್ಯ ಆರಂಭವಾಯಿತು. ಕ್ಷೇತ್ರದಲ್ಲಿ ಹೆಚ್ಚಿನ ಮತದಾರರಿಲ್ಲದ ಈಡಿಗ ಸಮುದಾಯದ ಅವರು 85 ಮತ್ತು 89ರಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿ ಶಾಸಕರಾದರು. ನಂತರ 1994ರಲ್ಲಿ ಬಂಗಾರಪ್ಪನವರ ಕರ್ನಾಟಕ ಕಾಂಗ್ರೆಸ್ ಪಕ್ಷ ಮತ್ತು 1999ರಲ್ಲಿ ಜೆಡಿಎಸ್‌ನಿಂದ ಗೆದ್ದು ಸತತ ನಾಲ್ಕು ಬಾರಿಗೆ ಶಾಸಕರಾದರು.

2004ರಲ್ಲಿ ಮಾಲಿಕಯ್ಯ ಗುತ್ತೇದಾರ್ ಕಾಂಗ್ರೆಸ್ ಸೇರಿದರು. ಅದರಿಂದಾಗಿ ಎಂ.ವೈ ಪಾಟೀಲ್ ಜೆಡಿಎಸ್ ಸೇರಿದರು. ಆ ಚುನಾವಣೆಯಲ್ಲಿ ಎಂ.ವೈ ಪಾಟೀಲ್ ಗೆಲುವು ಸಾಧಿಸುವ ಮೂಲಕ ಮಾಲಿಕಯ್ಯ ಗುತ್ತೇದಾರ್‌ರವರಿಗೆ ಮೊದಲ ಬಾರಿಗೆ ಸೋಲಿನ ರುಚಿ ತೋರಿಸಿದರು.

ಆದರೆ 2008ರ ಚುನಾವಣೆ ವೇಳೆಗೆ ಮಾಲಿಕಯ್ಯ ಗುತ್ತೇದಾರ್ ಮತ್ತೆ ಕಾಂಗ್ರೆಸ್ ಸೇರಿದರೆ ಎಂ.ವೈ ಪಾಟೀಲ್ ಬಿಜೆಪಿ ಸೇರಿದರು. ಗೆಲುವಿನ ಹಳಿಗೆ ಮರಳಿದ ಮಾಲಿಕಯ್ಯ ಗುತ್ತೇದಾರ್ ಗೆಲುವು ಕಂಡರು. 2013ರಲ್ಲಿಯೂ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಕಂಡರೆ ಎಂ.ವೈ ಪಾಟೀಲ್ ಕೆಜೆಪಿ ಸೇರಿ ಸೋಲು ಕಂಡರು. ಮಲ್ಲಿಕಾರ್ಜುನ ಖರ್ಗೆ ಮತ್ತು ಧರ್ಮಸಿಂಗ್ ವಿರುದ್ಧ ಕಿಡಿಕಾರುತ್ತಿದ್ದ ಮಾಲಿಕಯ್ಯ ಗುತ್ತೇದಾರ್ 2018 ರ ಚುನಾವಣೆ ವೇಳೆಗೆ ಬಿಜೆಪಿ ಸೇರಿ ಸೋಲು ಕಂಡರು. ಅದೇ ಸಮಯಕ್ಕೆ ಎಂ.ವೈ ಪಾಟೀಲ್ ಕಾಂಗ್ರೆಸ್ ಸೇರಿ ಜಯ ಸಾಧಿಸಿದರು

ಅಂದಾಜು ಜಾತಿವಾರು ಮತಗಳು

ಅಫಜಲಪುರದಲ್ಲಿ ಒಟ್ಟು 2,25,000 ಮತಗಳಿವೆ. ಲಿಂಗಾಯಿತ ಸಮುದಾಯದ 48,000 ಮತಗಳಿದ್ದರೆ, 45,000 ದಷ್ಟು ಪ.ಜಾತಿಯ ಮತಗಳು ಕ್ಷೇತ್ರದಲ್ಲಿವೆ. ಕೋಲಿ/ಕಬ್ಬಲಿಗ ಸಮುದಾಯದ 44,000 ಮತಗಳು ಮತ್ತು ಮುಸ್ಲಿಂ ಸಮುದಾಯದ 40,000 ಮತಗಳಿದ್ದರೆ, ಕುರುಬ ಸಮುದಾಯದ 28,000 ಮತಗಳಿವೆ. ಇತರ ಸಮುದಾಯಗಳು ಸುಮಾರು 20,000 ದಷ್ಟು ಮತಗಳಿವೆ.

ಹಾಲಿ ಪರಿಸ್ಥಿತಿ

ಮೂರು ಬಾರಿ ಜಯ ಕಂಡಿರುವ ಲಿಂಗಾಯತ ಸಮುದಾಯದ ಎಂ.ವೈ ಪಾಟೀಲ್ ಜನತಾ ಪಕ್ಷ, ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಕೆಜೆಪಿ ಎಲ್ಲಾ ಪಕ್ಷಗಳನ್ನು ಸುತ್ತು ಹಾಕಿ ಸದ್ಯ ಕಾಂಗ್ರೆಸ್‌ನಿಂದ ಗೆದ್ದು ಶಾಸಕರಾಗಿದ್ದಾರೆ. ಮತ್ತೆ ಕಾಂಗ್ರೆಸ್‌ನಿಂದಲೇ ಅಭ್ಯರ್ಥಿಯಾಗಿದ್ದಾರೆ. ಇನ್ನು ಆರು ಬಾರಿ ವಿಜಯ ಪತಾಕೆ ಹಾರಿಸಿರುವ ಈಡಿಗ ಸಮುದಾಯದ ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್, ಕೆಸಿಪಿ, ಜೆಡಿಎಸ್‌ನಿಂದ ಗೆದ್ದು ಬಿಜೆಪಿ ಸೇರಿ ಸೋತಿದ್ದಾರೆ. ಸದ್ಯ ಅವರೇ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಕಳೆದ 40 ವರ್ಷ ಇವರಿಬ್ಬರ ನಡುವೆಯೇ ಶಾಸಕ ಸ್ಥಾನ ಅದಲು ಬದಲಾಗುತ್ತಾ ಬಂದಿದೆ.

ಬಂಡಾಯಗಾರನ ಉದಯ

ಆದರೂ ಈ ಇಬ್ಬರಿಗೆ ಈ ಬಾರಿಯ ಚುನಾವಣೆ ಅಷ್ಟು ಸುಲಭವಲ್ಲ ಎನ್ನುವುದು ವಾಸ್ತವ. ಬಿಜೆಪಿಯೊಳಗಿನ ಬಂಡಾಯದ ಬಿಸಿ ಅಫಜಲಪುರಕ್ಕೂ ತಟ್ಟಿದೆ. ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಲೀಕಯ್ಯ ಗುತ್ತೇದಾರ್ ಅವರ ಸಹೋದರ ಮಾಜಿ ಜಿ.ಪಂ ಸದಸ್ಯ ನಿತಿನ್ ವಿ ಗುತ್ತೇದಾರ್ ಟಿಕೆಟ್ ಸಿಗದ ಕಾರಣ ಪಕ್ಷೇತರರಾಗಿ ತೊಡೆ ತಟ್ಟಿದ್ದಾರೆ. ಮಾಲೀಕಯ್ಯ ಗುತ್ತೇದಾರ್‌ಗಿಂತಲೂ ಹೆಚ್ಚಿನ ಜನಪ್ರಿಯತೆ ಹೊಂದಿರುವ ನಿತಿನ್ ಗುತ್ತೇದಾರ್ ಪಕ್ಷೇತರರಾಗಿ ಕಣದಲ್ಲಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಈಗಾಗಲೇ ಅಫಜಲಪುರ ಹಳ್ಳಿ-ಹಳ್ಳಿಗಳಲ್ಲಿ ನಿತಿನ್ ಗುತ್ತೇದಾರ್ ಪರವಾಗಿ ಜನರು ನೇರವಾಗಿಯೇ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಇನ್ನು ಮತ್ತೊಂದು ಕಡೆ ಜೆಡಿಎಸ್ ಕೂಡ ತನ್ನ ಹಳೆಯ ಕ್ಷೇತ್ರವನ್ನು ಮರಳಿ ಗಳಿಸಿಕೊಳ್ಳುವ ಯತ್ನದಲ್ಲಿ ಗಟ್ಟಿಯಾಗಿ ನಿಂತಿದೆ. ಕೋಲಿ ಸಮುದಾಯದ ಶಿವಕುಮಾರ ನಾಟೀಕಾರ ಜೆಡಿಎಸ್ ಅಭ್ಯರ್ಥಿಯಾಗಿದ್ದು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಇನ್ನು ಪಿಎಸ್‌ಐ ಹಗರಣದ ಆರೋಪಿಗಳಲ್ಲಿ ಒಬ್ಬರಾದ ಕೋಲಿ ಸಮುದಾಯದ ಆರ್ ಡಿ ಪಾಟೀಲ ಸಮಾಜವಾದಿ ಪಕ್ಷದಿಂದ ಕಣಕ್ಕಿಳಿದಿದ್ದಾರೆ. ಇವರಿಬ್ಬರಲ್ಲಿ ಯಾರು ಸಮುದಾಯದ ಮತಗಳನ್ನು ಸೆಳೆದುಕೊಳ್ಳಲಿದ್ದಾರೆ ಎಂಬ ಚರ್ಚೆಗಳು ಆರಂಭವಾಗಿದೆ.

2023ರ ಸಾಧ್ಯತೆಗಳು

82 ವರ್ಷದ ಶಾಸಕ ಎಂ.ವೈ ಪಾಟೀಲ್‌ರವರಿಗೆ ಆಡಳಿತ ವಿರೋಧಿ ಅಲೆ ಕಾಡುತ್ತಿದೆ. ಆದರೆ ಜಾತಿ ಬಲ ಮತ್ತು ಬಿಜೆಪಿಯಲ್ಲಿನ ಒಳಜಗಳ ಬಂಡಾಯದ ಬಿಸಿ ಅವರಿಗೆ ವರವಾಗುವ ಸಾಧ್ಯತೆಯಿದೆ. ಇನ್ನೊಂದೆಡೆ ಬಿಜೆಪಿ ಪಕ್ಷವು ಇಲ್ಲಿ ಮಾಲೀಕಯ್ಯ ಗುತ್ತೇದಾರ್ ಬದಲಾಗಿ ಅವರ ಸಹೋದರ ನಿತಿನ್ ಗುತ್ತೇದಾರ್‌ರವರಿಗೆ ಟಿಕೆಟ್ ನೀಡಿದ್ದಲ್ಲಿ ಗೆದ್ದು ಖಾತೆ ತೆರೆಯುವ ಸುವರ್ಣ ಅವಕಾಶವಿತ್ತು. ಆದರೆ ಮತ್ತೆ ಮಾಲೀಕಯ್ಯ ಗುತ್ತೇದಾರ್‌ರವರಿಗೆ ಮಣೆ ಹಾಕುವ ಮೂಲಕ ಬಿಜೆಪಿ ಬಂಡಾಯಕ್ಕೆ ಅವಕಾಶ ಮಾಡಿಕೊಟ್ಟಿದೆ. ಹಾಗಾಗಿ ಅಣ್ಣ ತಮ್ಮಂದಿರ ಮತ ವಿಭಜನೆಯ ಲಾಭ ಕಾಂಗ್ರೆಸ್‌ಗೆ ಗೆಲುವಿನ ಅವಕಾಶ ತೆರೆಯಬಲ್ಲದು ಎಂಬುದು ಜನರ ಅಭಿಮತವಾಗಿದೆ.

ಇದನ್ನೂ ಓದಿ: ವಿರಾಜಪೇಟೆ: ಕೊಡವ v/s ಅರೆಭಾಷೆಗೌಡ ದಾಳದಲ್ಲಿ ಕಾಂಗ್ರೆಸ್ ಅರಳುವುದೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇಂದೋರ್‌ ಕಾಂಗ್ರೆಸ್‌ ಅಭ್ಯರ್ಥಿ ನಾಮಪತ್ರ ಹಿಂಪಡೆಯಲು ಬೆದರಿಕೆ, ಚಿತ್ರಹಿಂಸೆ ಕಾರಣ?

0
ಮಧ್ಯಪ್ರದೇಶದ ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ಅವರು ಸೋಮವಾರ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದು, ಅವರನ್ನು ಬೆದರಿಸಿ ಚಿತ್ರಹಿಂಸೆ ನೀಡಿ ನಾಮಪತ್ರ ಹಿಂಪಡೆಯುವಂತೆ ಮಾಡಲಾಗಿದೆ ಎಂದು ಮಧ್ಯಪ್ರದೇಶದ ವಿರೋಧ...