ಇತ್ತೀಚೆಗೆ ಬೆಂಗಳೂರಿನಲ್ಲಿ ಸಂಚಲನ ಉಂಟುಮಾಡಿದ್ದ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ಬುಧವಾರ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ (SDPI) 4 ಕಚೇರಿಗಳು ಸೇರಿದಂತೆ 43 ಕಡೆ ದಾಳಿ ನಡೆಸಿದೆ.
“SDPI/PFI ಕಛೇರಿಗಳ ಮೇಲಿನ ದಾಳಿ ವೇಳೆ ಕೆಲ ಮಾರಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಗಲಭೆಗಳು ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳಲ್ಲೂ ಭೀತಿಯನ್ನು ಉಂಟುಮಾಡಿತ್ತು. ಜೊತೆಗೆ ಸಮಾಜದಲ್ಲಿ ಭಯೋತ್ಪಾದನೆಯನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿತ್ತು” ಎಂದು NIA ಹೇಳಿದೆ ಎಂಬುದಾಗಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಈ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರ ಅಪರಾಧ ಶಾಖೆ (ಸಿಸಿಬಿ) ಡಿ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಮತ್ತು ಕಾರ್ಪೋರೇಟರ್ ಝಾಕಿರ್ ಸೇರಿದಂತೆ 60 ಜನರ ಹೆಸರಿರುವ ಪ್ರಾಥಮಿಕ ಚಾರ್ಜ್ಶೀಟ್ ಸಲ್ಲಿಸಿತ್ತು.
ಇದನ್ನೂ ಓದಿ: ಡಿ.ಜೆ.ಹಳ್ಳಿಯಲ್ಲಿ ಪ್ರಕ್ಷುಬ್ಧ ವಾತಾವರಣ: ಶಾಂತಿ ಕಾಪಾಡಲು ಪಾಪ್ಯುಲರ್ ಫ್ರಂಟ್ ಮನವಿ
ಕಳೆದ ಆಗಸ್ಟ್ 12ರಂದು ನಡೆದ ಈ ಗಲಭೆಯಲ್ಲಿ ಸಾವು, ನೋವು ಸಂಭವಿಸಿದ್ದಲ್ಲದೆ, ಡಿಜೆ ಹಳ್ಳಿ ಪೊಲೀಸ್ ಠಾಣೆ ಹಾಗೂ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಆರ್.ಅಖಂಡ ಶ್ರೀನಿವಾಸಮೂರ್ತಿ ನಿವಾಸವು ಸುಟ್ಟು ಕರಕಲಾಗಿತ್ತು. ಗಲಭೆಯಲ್ಲಿ ಪಾಲ್ಗೊಂಡ ಆರೋಪದ ಹಿನ್ನೆಲೆಯಲ್ಲಿ, ಇಲ್ಲಿಯವರೆಗೆ ಡಿ.ಜೆ.ಹಳ್ಳಿ ಪೊಲೀಸ್ ಠಾಣೆ ಪ್ರಕರಣದಲ್ಲಿ 124 ಆರೋಪಿಗಳನ್ನು ಮತ್ತು ಕೆ.ಜಿ.ಹಳ್ಳಿಯಲ್ಲಿ 169 ಮಂದಿಯನ್ನು ಬಂಧಿಸಲಾಗಿದೆ.
ನವೀನ್ ಎಂಬಾತ ಪ್ರವಾದಿ ಮಹಮ್ಮದ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದನೆಂಬ ಕಾರಣಕ್ಕೆ ಆರಂಭವಾದ ಗಲಭೆಯಲ್ಲಿ ಸಾಕಷ್ಟು ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿತ್ತು. ನಂತರ ಇದು ರಾಜಕೀಯ ಮೇಲಾಟಗಳಿಗೂ ಕಾರಣವಾಗಿ ಆಡಳಿತ ಮತ್ತು ವಿರೋಧ ಪಕ್ಷಗಳು ಆರೋಪ-ಪ್ರತ್ಯಾರೋಪಗಳನ್ನು ಮಾಡಿಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸಿದವು.
ಇದನ್ನೂ ಓದಿ: PFI, SDPI ವಿರುದ್ಧದ 175 ಪ್ರಕರಣಗಳನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆದಿತ್ತೇ?: ಇಲ್ಲಿದೆ ವಿವರ
ಇದು ಸತ್ಯಕ್ಕೆ ದೂರವಾದ ಅಸಂಬದ್ದ ವರದಿ,ಹಾಗೊಂದು ವೇಳೆ SDPI ಕಛೇರಿಗೆ ದಾಳಿ ನಡೆಸಿದ್ದರೆ ಅದಕ್ಕೆ ಸಾಕ್ಷಿಯನ್ನೂ ಒದಗಿಸಿ.