Homeಕರ್ನಾಟಕಪಠ್ಯ ಪುಸ್ತಕ ಪರಿಷ್ಕರಣೆ ವಿವಾದ; ದೇವನೂರಿನಿಂದ ಗಾಂಧಿಗುಡಿಗೆ

ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ; ದೇವನೂರಿನಿಂದ ಗಾಂಧಿಗುಡಿಗೆ

- Advertisement -
- Advertisement -

ಪಠ್ಯ ಪರಿಷ್ಕರಣೆ ವಿಷಯದಲ್ಲಿ ಹೋರಾಡಲು ನಮಗಿರುವ ದೊಡ್ಡ ಶಕ್ತಿ ಯಾವುದೆಂದರೆ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು. ಪಠ್ಯ ಪರಿಷ್ಕರಣ ಕುತಂತ್ರಿಗಳ ವಿರುದ್ಧ ಮೊದಮೊದಲು ದನಿ ಎತ್ತಿದವರೇ ಅವರು. ಪರಿಷ್ಕರಣೆಯಲ್ಲಿ ಬಸವಣ್ಣನವರಿಗೆ ಅಪಚಾರವೆಸಗಿದ್ದಾರೆ ಎಂದು ಗೊತ್ತಾದಾಗ ನಡೆದ ಧಾರವಾಡದ ಸಭೆಯಲ್ಲಿ, ಎಲ್ಲ ಜಗದ್ಗುರುಗಳು ಸಾಣೆಹಳ್ಳಿ ಶ್ರೀಗಳಿಗೆ ಸರಕಾರವನ್ನ ಪ್ರಶ್ನಿಸುವ ಜವಬ್ದಾರಿ ವಹಿಸಿದರು. ಅದಾದನಂತರ ಅವರು ಮುಖ್ಯಮಂತ್ರಿ ಜತೆ ಮಾತನಾಡಿ ಹೋರಾಟದ ಎಚ್ಚರಿಕೆ ನೀಡಿದರು. ಆದರೂ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವ ಹಾಗೂ ಚಕ್ರತೀರ್ಥನ ಉದ್ಧಟತನದ ಮಾತುಗಳು ಮುಂದುವರಿದವು. ಪಠ್ಯ ಪುಸ್ತಕದಲ್ಲಿ ತಪ್ಪುಗಳಾಗಿದ್ದರೆ ಸರಿಪಡಿಸುತ್ತೇವೆ ಎಂದರು. ತಪ್ಪುಗಳು ಅವೇ ಆಗಲು ಸಾಧ್ಯವೆ? ಆರೆಸ್ಸೆಸ್ ಅಜೆಂಡಾ ಇಟ್ಟುಕೊಂಡು ತಿದ್ದಿದ್ದರಿಂದ ತಪ್ಪುಗಳಾಗಿವೆ. ಮಕ್ಕಳ ವಿದಯ ಬಗ್ಗೆ ಕಾಳಜಿಯಿದ್ದವರ್‍ಯಾರು ಇಂತಹ ಅಪರಾಧ ಎಸಗಲಾರರು. ಎಷ್ಟೇ ಆಗಲಿ ಶತಮಾನಗಳ ಕಾಲ ಶೂದ್ರ-ದಲಿತರಿಗೆ ವಿದ್ಯೆಯನ್ನ ವಂಚಿಸಿ ಮನಸ್ಸಗಳಲ್ಲವೆ!

ಇದೆಲ್ಲವನ್ನ ಚರ್ಚಿಸಿದ ಚಿಕ್ಕಮಗಳೂರಿನ ಹಲವು ಸಂಘಟನೆಯ ಗೆಳೆಯರು ಒಂದು ಜಾಥಾ ಮಾಡಿ ಸರಕಾರದ ಗಮನ ಸೆಳೆಯಲು ಯೋಚಿಸಿದರು. ಅದರಂತೆ ಲಕ್ಷ್ಮೀಶ ಕವಿಯ ನೆಲೆಯಾದ ದೇವನೂರು ಸಮೀಪದ ಎಸ್.ಕೊಪ್ಪಲಿನಿಂದ ನಿಡಘಟ್ಟದ ಗಾಂಧಿ ಗುಡಿಯವರೆಗೂ ಜಾಥಾ ತೆಗೆಯಲು ನಿರ್ಧರಿಸಿದರು. ಈ ಜಾಥಾದ ಉದ್ಘಾಟನೆಗೆ ಪಂಡಿತಾರಾಧ್ಯರನ್ನ ಆಹ್ವಾನಿಸಲು ಹೋದಾಗ ಅವರು ಸಾಮರಸ್ಯದ ನಡಿಗೆಯಾಗಿ ಬದಲಾಯಿಸಿಕೊಳ್ಳಲು ಹೇಳಿದರು. ಏಕೆಂದರೆ ಪ್ರಸ್ತುತ ಸಂದರ್ಭದಲ್ಲಿ ಸಾಮರಸ್ಯಕ್ಕೆ ಧಕ್ಕೆ ಬಂದಿರುವುದರಿಂದ ನಮ್ಮ ನಡಿಗೆ ಎಲ್ಲರನ್ನ ಒಳಗೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು; ಅದರಿಂದ ಪಠ್ಯಪರಿಷ್ಕರಣ ಅವಾಂತರ, ಸಾಮರಸ್ಯದ ನಡಿಗೆ ಸಾಮಾನ್ಯರೆಡೆಗಾಯ್ತು. ಇದರ ಫಲವಾಗಿ ಜಾಥಾಕ್ಕೆ ಬಸವಪಂಥದವರು, ದಲಿತ ಸಂಘದವರು ಮತ್ತು ಕಮ್ಯುನಿಸ್ಟರು, ಸಿಪಿಐನವರು ಹಾಗೂ ಕಾಂಗ್ರೆಸ್ ಮತ್ತು ದಳದವರೆಲ್ಲಾ ದೇವನೂರಿನಿಂದ ಗಾಂಧಿಗುಡಿಗೆ ಹೆಜ್ಜೆ ಹಾಕಿದರು. ಈ ಕಾಲ್ನಡಿಗೆ ಹೋರಾಟಗಾರರು ಮಳೆಗೇ ಸೆಡ್ಡು ಹೊಡೆದು ನಡೆದರು.

ಎಸ್. ಕೊಪ್ಪಲಿನಲ್ಲಿ ಜಾಥಾ ಉದ್ಘಾಟನೆ ಮಾಡಿದ ಪಂಡಿತಾರಾಧ್ಯರು ನೇರವಾಗಿ ಸರಕಾರ ನಡೆಸುವವರನ್ನ ಕುರಿತು, ’ಈಗ ಹೊಸ ಪಠ್ಯ ರಚನೆ ಕಷ್ಟ ಆದರೂ, ಮಕ್ಕಳಿಗೆ ಸರಿಯಾದ ಇತಿಹಾಸ ಬೋಧಿಸಬೇಕಾದ ಶಿಕ್ಷಣ ತಜ್ಞರು ಮತ್ತು ರಾಜಕೀಯ ಧುರೀಣರು ಯೋಚಿಸಬೇಕು. ದೂರದೃಷ್ಟಿ ಇಲ್ಲದೆ ಮಾಡಿರುವ ಅವಾಂತರಕ್ಕೆ ಈ ನಾಡು ಕ್ಷೆಭೆಗೊಳಪಟ್ಟಿದೆ. ಜಾತಿ ಧರ್ಮದ ಸಂಘರ್ಷವೇರ್ಪಟ್ಟಿದೆ. ಎಲ್ಲಾ ಕ್ಷೇತ್ರದಲ್ಲೂ ಕೊಳಕು ತುಂಬಿಹೋಗಿದೆ. ನಾವು ಇದನ್ನೆಲ್ಲಾ ಸ್ಪಷ್ಟಗೊಳಿಸಬೇಕಿದೆ. ನಮ್ಮ ಹೋರಾಟದ ಮನಸ್ಸುಗಳು ಎಚ್ಚರಗೊಳ್ಳಬೇಕಿದೆ. ಯಾವ ದುರ್ಘಟನೆಗೂ ನಮ್ಮ ಮನಸ್ಸು ಹೋರಾಟ ಮಾಡಲು ಅಣಿಯಾಗುತ್ತಿದ್ದು, ವ್ಯವಸ್ಥೆಯೊಂದಿಗೆ ರಾಜಿ ಮನೋಭಾವ ತುಂಬ ಅಪಾಯಕಾರಿ. ಅನ್ಯಾಯ ನಡೆದಾಗ ನಾವು ಪ್ರತಿಭಟಿಸದಿದ್ದರೆ ನಾವು ಸತ್ತಿದ್ದೇವೆ ಎಂದು ಅರ್ಥ. ಪ್ರತಿಭಟನೆಯೇ ಜೀವಂತಿಕೆಯ ಸಂಕೇತ’ ಎಂದವರು ಎಸ್.ಕೊಪ್ಪಲಿನಿಂದ ದೇವನೂರರವರೆಗೂ ನಡೆದು ಬಂದು ಜಾಥಾ ಮುನ್ನಡೆಸುವಂತೆ ಹೇಳಿಹೋದರು.

ಈ ಜಾಥಾ ರೂಪುಗೊಂಡದ್ದೇ ಕವಿ ಎಸ್.ಜಿ ಸಿದ್ದರಾಮಯ್ಯನವರಿಂದ. ಹಾಗಾಗಿ ಅವರು ಹಿಂದಿನ ದಿನವೇ ರುದ್ರಪ್ಪ ಅನಗವಾಡಿ ಮತ್ತು ಶ್ರೀಪಾದ ಭಟ್‌ರೊಡನೆ ಬಂದಿದ್ದರು. ಪಂಡಿತಾರಾಧ್ಯರು ನಿರ್ಗಮಿಸಿದ ನಂತರ ಜಾಥಾ ಮುನ್ನಡೆಸಿದ ಸಿದ್ದರಾಮಯ್ಯನವರು ಮಳೆಯಲ್ಲಿ ತೊಯ್ದರೂ ಲೆಕ್ಕಿಸದೆ ಗಾಂಧಿ ಗುಡಿ ತಲುಪಿದರು. ವಿಶೇಷ ಅಂದರೆ ಕೇವಲ ಒಂದು ಮೇಸೆಜ್ ಕಳಿಸೇಸಿದ್ದಕ್ಕೆ ಬಸವಕುಮಾರ ಸ್ವಾಮೀಜಿ ಮತ್ತು ಕಲ್ಕೆರೆ ಅಲ್ಲಮಪ್ರಭು ಪೀಠದ ತಿಪ್ಪೆರುದ್ರ ಸ್ವಾಮಿ ಬಂದು ಬರಿಗಾಲಲ್ಲೇ ನಡೆದುದು.

ಚಿಕ್ಕಮಗಳೂರು ಜಿಲ್ಲೆಯ ನಿಡಘಟ್ಟದಲ್ಲಿ ಗಾಂಧಿಗುಡಿಯಿದೆ. 1948 ಫೆಬ್ರವರಿಯಲ್ಲಿ ನಿರ್ಮಿಸಿದ ಈ ಪುಟ್ಟಗುಡಿಯಲ್ಲಿ ಗಾಂಧೀಜಿ ಪ್ರತಿಮೆಯಿದೆ. ಯಾವುದೇ ಕಾರ್ಯಕ್ರಮಕ್ಕೂ ಮುನ್ನ ಈ ಗುಡಿಯಲ್ಲಿ ನಿಂತಿರುವ ಗಾಂಧೀಜಿ ವಿಗ್ರಹಕ್ಕೆ ಮಾಲಾರ್ಪಣೆ ಮಾಡುವುದು ವಾಡಿಕೆ. ಗಾಂಧಿ ಗುಡಿ ಸಾಮಾನ್ಯವಾಗಿ ಎಲ್ಲೂ ಇರಲಾರದು. ಹರಪನಹಳ್ಳಿ ಪ್ರೈಮರಿ ಶಾಲೆಯಲ್ಲಿ ಗಾಂಧೀಜಿ ಮಲಗಿಹೋಗಿದ್ದರಂತೆ. ಅವರ ನೆನಪಿಗೆ ಎಂ.ಪಿ ಪ್ರಕಾಶ್ ಮಗ ರವೀಂದ್ರ ಆ ಶಾಲಾಕೊಠಡಿಯೊಳಗೆ ವಿಶ್ರಾಂತ ಭಂಗಿಯ ವಿಗ್ರಹ ನಿರ್ಮಿಸಿದ್ದಾರೆ. ಅದು ಬಿಟ್ಟರೆ ನಿಡಘಟ್ಟದಲ್ಲಿರುವ ಗಾಂಧಿ ಗುಡಿ ಅವರ ಹತ್ಯೆಯಾದ ನಂತರ ಅನುಯಾಯಿಗಳು ನಿರ್ಮಿಸಿದ್ದು. ತೆಳು ನಗೆಯ ಗಾಂಧಿ ಪ್ರತಿಮೆ ಜಾಥಾ ಬಂದವರನ್ನ ನೋಡಿ ಮೆಚ್ಚಿದಂತೆ ಕಾಣುತ್ತಿತ್ತು. ಹಾಗೆ ನೋಡಿದರೆ ಚಳವಳಿಗಾರರ
ಜಾಥಾಗಳೆಲ್ಲಾ ಗಾಂಧೀಜಿ ಹಾಕಿಕೊಟ್ಟ ಮಾರ್ಗಗಳು. ಚಿಕ್ಕಮಗಳೂರಲ್ಲಿ ಗಾಂಧೀಜಿಯ ನೆನಪು ಇನ್ನೂ ಹಸಿರಾಗಿದೆ. ಇಲ್ಲಿನ ಡಿ.ಸಿ ಕಚೇರಿ ಆವರಣದಲ್ಲಿ ಕುಳಿತು ಗಾಂಧೀಜಿ ಭಾಷಣ ಮಾಡಿದ್ದರು. ಆ ನೆನಪಿಗಾಗಿ ಅಂದು ತೆಗೆದ ಭಾವಚಿತ್ರ ಇಲ್ಲಿರುವುದಲ್ಲದೆ, ಅವರ ಸಂದೇಶಗಳೂ ಇವೆ. ಇಲ್ಲಿ ದಲಿತ ಚಳುವಳಿ ಕಮ್ಯುನಿಸ್ಟರ ಚಳುವಳಿ ಮತ್ತು ರೈತ ಚಳವಳಿ ಜಿಲ್ಲೆಯನ್ನು ಸದಾ ಜೀವಂತವಾಗಿಟ್ಟಿದ್ದವು. ಎಲ್ಲ ಚಳವಳಿಯ ನೇತಾರರು ಅಕಾಲ ಮರಣಕ್ಕೆ ತುತ್ತಾಗಿಹೋದರು. ಕಮ್ಯುನಿಸ್ಟ್ ನಾಯಕ ಸುಂದರೇಶ್ ರೈಲ್ವೆ ಅಪಘಾತದಲ್ಲಿ ಮಡಿದರು, ಎಂ.ಡಿ ಗಂಗಯ್ಯ ಹೃದಯಾಘಾತದಲ್ಲಿ ತೀರಿಕೊಂಡರು. ಇನ್ನ ರೈತಸಂಘದ ನಾಯಕರಾದ ಎಂ.ಡಿ ನಂಜುಂಡಸ್ವಾಮಿಯವರ ನಿಧನಾನಂತರ ಹೆಚ್.ಹೆಚ್ ದೇವರಾಜ್ ಕಾಂಗ್ರೆಸ್ ಸೇರಿದರು. ಹಾಳೂರಿಗೆ ಉಳಿದವನೇ ಹಮ್ಮೀರ ಎಂಬಂತೆ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಹೆಚ್.ಹೆಚ್ ದೇವರಾಜ್ ಎದುರಿಗೆ ಠೇವಣಿ ಕಳೆದುಕೊಂಡಿದ್ದ ಸಿ.ಟಿ ರವಿ ಬಾಬಾಬುಡನ್‌ಗಿರಿಯ ಸಮಸ್ಯೆಯನ್ನು ಬೃಹದಾಕಾರವಾಗಿ ಬೆಳೆಸಿಕೊಂಡು ಅದನ್ನೆ ಜೀವಂತವಾಗಿರಿಸಿಕೊಂಡು ಚುನಾವಣೆಯಲ್ಲಿ ಗೆದ್ದು ಬರುತ್ತಿದ್ದಾರೆ. ಇವರಿಗೆ ಪಠ್ಯಪುಸ್ತಕದ ಪರಿಷ್ಕರಣೆ ವಿಷಯದಲ್ಲಿ ಕುವೆಂಪು ಬಗ್ಗೆಯೂ ಗೌರವವಿಲ್ಲ. ಮತ್ತೆ ಬಸವಣ್ಣನ ವಿಷಯದಲ್ಲಿ ಚಕ್ರತೀರ್ಥ
ಮತ್ತು ಈತನ ಅಭಿಪ್ರಾಯಕ್ಕೆ ಯಾವುದೇ ವ್ಯತ್ಯಾಸವಿಲ್ಲ. ಒಬ್ಬ ಚಕ್ರತೀರ್ಥನನ್ನು ನೀವು ಅರಗಿಸಿಕೊಳ್ಳಲಾಗಿಲ್ಲ ಎಂಬ ಈತನ ಮಾತೇ ಕಾಲ್ನಡಿಗೆ ಜಾಥಾ ನಡೆಯುವಂತೆ ಪ್ರಚೋದಿಸಿತು. ಈಗಾಗಲೇ ಕವಿಶೈಲದಿಂದ ತೀರ್ಥಹಳ್ಳಿಗೆ ನಡೆದ ಹಲವರು ಇಲ್ಲೂ ಇದ್ದರು. ಹಾಗೆ ಮಹಿಳೆಯರ ಮುಖಂಡರಾಗಿ ರೇಖಾ ಹುಲಿಯಪ್ಪಗೌಡ, ಜಾಥಾ ಸಂಘಟಿಸಿದ ರವೀಶ್ ಬಸಪ್ಪ ಗುರುಶಾಂತಪ್ಪ ಅಮ್ಜದ್, ದೇವರಾಜ್ ಮತ್ತು ನಟರಾಜ್ ಇವರೆಲ್ಲಾ ಮುಂದೆ ಹಲವು ಜಾಥಾಗಳನ್ನ ಸಂಘಟಿಸುವ ಹುಮ್ಮಸ್ಸಿನಲ್ಲಿದ್ದರು.

ಮಳೆಯ ಕಾರಣಕ್ಕೆ ನಿಡಘಟ್ಟದ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಕವಿ ಎಸ್.ಜಿ ಸಿದ್ದರಾಮಯ್ಯನವರು ಪಠ್ಯಪರಿಷ್ಕರಣದ ಪೂರ್ಣ ವಿವರವನ್ನ ಜನರಿಗೆ ಮನವರಿಕೆ ಮಾಡಿಕೊಟ್ಟರು. ಶ್ರೀಪಾದ ಭಟ್ ಆರೆಸ್ಸೆಸಿಗರ ಹುನ್ನಾರಗಳನ್ನ ಬಿಡಿಸಿದರು. ತಿಪ್ಪೆರುದ್ರಸ್ವಾಮಿ ಒಂದಿಷ್ಟು ಆವೇಶದಿಂದ ಮಾತನಾಡಿ ಬಸವಣ್ಣನಿಗೆ ಅವಮಾನವಾಗಿದ್ದರೂ ಸುಮ್ಮನಿದ್ದೀರಲ್ಲಾ ಎಂದರು.

ಬಸವಣ್ಣನನ್ನ ಮುಗಿಸಲು ಬೊಮ್ಮಾಯಿ, ಕನಕದಾಸರನ್ನ ಮರೆಯಾಗಿಸಲು ಈಶ್ವರಪ್ಪ, ಕುವೆಂಪು ಹಣಿಯಲು ಅಶೋಕ, ಅಶ್ವತ್ಥನಾರಾಯಣ, ಸಿ.ಟಿ ರವಿ, ನಾರಾಯಣಗುರುವನ್ನು ಗತಿ ಕಾಣಿಸಲು ಸುನೀಲ್ ಕುಮಾರ್ ಇನ್ನು ಅಂಬೇಡ್ಕರ್‌ರವರಿಗೆ ಅವಮಾನಿಸಲು ನಾರಾಯಣಸ್ವಾಮಿ ಹೀಗೆ ಆಯಾ ಜಾತಿಯವರನ್ನೇ ಗುರುತಿಸಿ ಜವಾಬ್ದಾರಿ ವಹಿಸಿರುವ ಆರೆಸ್ಸೆಸ್ಸಿಗರು ತಾವು ಮಾತ್ರ ಅಗಮ್ಯ ಜಾಗದಲ್ಲಿ ಕುಳಿತು ಮಾಯಾ ಯುದ್ಧ ಮಾಡುತ್ತಿದ್ದಾರೆ. ಹಾಗಾಗಿ ಜಾಥಾಗಳು ಸಭೆಗಳು ನಾಡಿನಾದ್ಯಂತ ನಡೆಯಬೇಕಿದೆ.


ಇದನ್ನೂ ಓದಿ: ಸಂವಿಧಾನ ಒಬ್ಬರೇ ಬರೆದಿದ್ದು ಎಂದು ಹೇಗೆ ಹೇಳುತ್ತೀರಿ?: ಪಠ್ಯದಿಂದ ‘ಸಂವಿಧಾನ ಶಿಲ್ಪಿ’ ಪದ ಕೈಬಿಟ್ಟಿದ್ದಕ್ಕೆ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...