ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರ ಮಗ ವಿಜಯೇಂದ್ರ ವಿರುದ್ಧ ‘ಜನ ಸಾಮಾನ್ಯರ ಪಕ್ಷ’ವು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದು, ವಿಜಯೇಂದ್ರ ಅಸಾಂವಿಧಾನಿಕವಾಗಿ ರಾಜ್ಯ ಸರ್ಕಾರದ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿ ಪಕ್ಷದ ಮುಖಂಡರಾದ ಯಲ್ಲಪ್ಪ ಹೆಗಡೆ ರಾಜ್ಯಪಾಲರಾದ ವಾಜುಭಾಯ್ ವಾಲಾ ಅವರಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಸಿಎಂ ಮಗ ವಿಜಯೇಂದ್ರ ಮೇಲೆ FIR ದಾಖಲಿಸದ ಇನ್ಸ್ಪೆಕ್ಟರ್ ವಿರುದ್ದ ನ್ಯಾಯಾಲಯದಲ್ಲಿ ದೂರು
ಇದನ್ನೂ ಓದಿ: ವಿಜಯೇಂದ್ರರ ವಿರುದ್ಧದ ತನಿಖೆಗೆ ಪೊಲೀಸರ ನಕಾರ: ಕೋರ್ಟ್ ಮೆಟ್ಟಿಲೇರಲಿರುವ ಜಸಂಪ!
ಈ ಪತ್ರದಲ್ಲಿ, “ಪ್ರಸ್ತುತ ದಿನಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಅವರ ಸಚಿವ ಸಂಪುಟವು ರಾಜ್ಯದ ಆಡಳಿತ ಮತ್ತು ನಿರ್ಧಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅಧಿಕಾರ ಕಳೆದುಕೊಂಡಿದೆ. ರಾಜ್ಯ ಸರ್ಕಾರದ ಪ್ರತೀ ಇಲಾಖೆಗಳಲ್ಲೂ ವಿಜಯೇಂದ್ರ ಮಧ್ಯಪ್ರವೇಶಿಸಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇವರು ಏನನ್ನು ಬಯಸುತ್ತಾರೋ ಅದೇ ರೀತಿ ಆಡಳಿತ ನಡೆಯುತ್ತಿದ್ದು, ಇವರು ಅಕ್ಷರಶಹ ‘ಪರ್ಯಾಯ ಮುಖ್ಯಮಂತ್ರಿ’ಯಂತೆ ವರ್ತಿಸುತ್ತಿದ್ದಾರೆ” ಎಂದು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಆರೋಪಿಸಲಾಗಿದೆ.
“ಶಿರಾ ಉಪ ಚುನಾವಣೆ ಸಂದರ್ಭದಲ್ಲಿ ವಿಜಯೇಂದ್ರ ನೀಡಿದ್ದ ಭರವಸೆಯಂತೆ ‘ಕಾಡುಗೊಲ್ಲ ಅಭಿವೃದ್ಧಿ ನಿಗಮ’ ಸ್ಥಾಪಿಸಲಾಗಿದೆ. ಈಗ ಮರಾಠರ ಅಭಿವೃದ್ಧಿ ಪ್ರಾಧಿಕಾರ ಮತ್ತು ವೀರಶೈವ–ಲಿಂಗಾಯತ ಅಭಿವೃದ್ಧಿ ನಿಗಮಗಳ ಸ್ಥಾಪನೆಯ ನಿರ್ಧಾರವೂ ಬಿ.ವೈ.ವಿಜಯೇಂದ್ರ ಅವರ ಕನಸಿನ ಯೋಜನೆಯಾಗಿದೆ. ಇದು ಅವರು ರಾಜ್ಯ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿರುವುದಕ್ಕೆ ಪ್ರಮುಖ ಸಾಕ್ಷಿಗಳು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸುಲಿಗೆ, ವಸೂಲಿ ದಂಧೆ ಆರೋಪ: ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ವಿರುದ್ಧ ಕ್ರಿಮಿನಲ್ ದೂರು!
ಇದನ್ನೂ ಓದಿ: ಉಪಚುನಾವಣೆ: ಗಾಳಿ ಬೀಸಿದತ್ತ ಹೋದ ಅಲೆಯಷ್ಟೇ ಅಲ್ಲ, ಆಡಳಿತದ ವಿರುದ್ಧದ ಭಾವನೆ ಘನೀಭವಿಸಿಲ್ಲ
“ಯಡಿಯೂರಪ್ಪ ಸಂಪುಟದ ಸಚಿವರೆಲ್ಲರೂ ಬಿ.ವೈ.ವಿಜಯೇಂದ್ರ ಅವರ ಭಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ತಕ್ಷಣವೇ ಯಡಿಯೂರಪ್ಪ ಅವರಿಂದ ರಾಜೀನಾಮೆ ಪಡೆಯಬೇಕು. ಸಂವಿಧಾನಕ್ಕೆ ವಿರುದ್ಧವಾಗಿ ವಿಜಯೇಂದ್ರ ಆಡಳಿತದಲ್ಲಿ ಹಸ್ತಕ್ಷೇಪ ನಡೆಸಿರುವ ಕುರಿತು ಉನ್ನತಮಟ್ಟದ ತನಿಖೆಗೆ ಆದೇಶಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಈ ದೂರಿನ ಪ್ರತಿಗಳನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಕಳುಹಿಸಲಾಗಿದೆ.
ಇದನ್ನೂ ಓದಿ: ಸಿದ್ದರಾಮಯ್ಯ-ಡಿಕೆಶಿ ಜಗಳ ಶೀಘ್ರವೇ ಬೀದಿಗೆ – ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್