ಜಿರಳೆ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ದೆಹಲಿ ಹೈಕೋರ್ಟ್ (ಮೇ 29) ಕೇಂದ್ರ ಸರ್ಕಾರ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ಗೆ ನೋಟಿಸ್ ಜಾರಿ ಮಾಡಿದೆ.
ಕೇಂದ್ರದ ನಿರ್ದೇಶನಗಳು ಮತ್ತು ಗುಪ್ತಚರ ಬ್ಯೂರೋದ “ರಾಷ್ಟ್ರೀಯ ಭದ್ರತಾ ಕಾಳಜಿ”ಗಳನ್ನು ಪರಿಗಣಿಸಿ, ವಿಡಂಬನಾತ್ಮಕ ಡಿಜಿಟಲ್ ಸಂಘಟನೆಯ ಎಕ್ಸ್ ಹ್ಯಾಂಡಲ್ ಅನ್ನು ಮೇ 21 ರಂದು ಭಾರತದಲ್ಲಿ ತಡೆಹಿಡಿಯಲಾಯಿತು. ಈ ಸಂಘಟನೆಯು ಜಾಲತಾಣದಲ್ಲಿ ತ್ವರಿತವಾಗಿ ಪ್ರಸಿದ್ದಿಯಾಯಿತು. ಇನ್ಸ್ಟಾಗ್ರಾಮ್ನಲ್ಲಿ 22 ಮಿಲಿಯನ್ಗಿಂತಲೂ ಹೆಚ್ಚು ಅನುಯಾಯಿಗಳೊಂದಿಗೆ ಆನ್ಲೈನ್ನಲ್ಲಿ ವೈರಲ್ ಆಯಿತು.
ಅದರ ಎಕ್ಸ್ ಹ್ಯಾಂಡಲ್ ಅನ್ನು ನಿರ್ಬಂಧಿಸಿದ ನಂತರವೂ, ತಕ್ಷಣವೇ “ಜಿರಳೆಗಳು ಸಾಯುವುದಿಲ್ಲ” ಎಂಬ ಟ್ಯಾಗ್ಲೈನ್ನೊಂದಿಗೆ “ಜಿರಳೆ ಹಿಂತಿರುಗಿದೆ” ಎಂಬ ಮತ್ತೊಂದು ಖಾತೆಯನ್ನು ಪ್ರಾರಂಭಿಸಿತು.
ಆದರೆ, ಹಿನ್ನಡೆ ಎದುರಿಸಿದ ಏಕೈಕ ಸಾಮಾಜಿಕ ಮಾಧ್ಯಮ ಖಾತೆ ಅದರ ಎಕ್ಸ್ ಹ್ಯಾಂಡಲ್ ಮಾತ್ರಲ್ಲ. ದಿಪ್ಕೆ ಪ್ರಕಾರ, ಅವರ ಎಕ್ಸ್ ಖಾತೆ ಮತ್ತು ಸಿಜೆಪಿಯ ಅಧಿಕೃತ ಇನ್ಸ್ಟಾಗ್ರಾಮ್ ಪುಟವನ್ನು ಹ್ಯಾಕ್ ಮಾಡಲಾಗಿದೆ. ಸಂಘಟನೆಯ ಬ್ಯಾಕಪ್ ಇನ್ಸ್ಟಾಗ್ರಾಮ್ ಖಾತೆಯನ್ನು ಸಹ ತೆಗೆದುಹಾಕಲಾಗಿದೆ. ಅದರ ಎಕ್ಸ್ ಹ್ಯಾಂಡಲ್ ಅನ್ನು ತಡೆಹಿಡಿದ ಎರಡು ದಿನಗಳಲ್ಲಿ ವೆಬ್ಸೈಟ್ ಅನ್ನು ಸಹ ಮುಚ್ಚಲಾಯಿತು.
ಡಿಜಿಟಲ್ ಕ್ರಮದ ನಂತರ, ಸಿಜೆಪಿ ಸಂಸ್ಥಾಪಕರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿ, ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು “ಸರ್ವಾಧಿಕಾರಿ” ಎಂದು ಕರೆದರು.
ಏನಿದು ಜಿರಳೆ ಜನತಾ ಪಾರ್ಟಿ?
ಜಿರಳೆ ಜನತಾ ಪಾರ್ಟಿ (Cockroach Janta Party – CJP) ಎಂಬುದು ಚುನಾವಣಾ ಆಯೋಗದಿಂದ ನೋಂದಾಯಿಸಲ್ಪಟ್ಟ ನಿಜವಾದ ರಾಜಕೀಯ ಪಕ್ಷವಲ್ಲ; ಇದೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹುಟ್ಟಿಕೊಂಡ ವಿಡಂಬನಾತ್ಮಕ ಯುವ ಆಂದೋಲನ. ಇನ್ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಕೆಲವೇ ದಿನಗಳಲ್ಲಿ ಕೋಟ್ಯಂತರ ಫಾಲೋವರ್ಸ್ ಗಳಿಸುವ ಮೂಲಕ ಇದು ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ.
ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಅವರು ಇತ್ತೀಚಿನ ನ್ಯಾಯಾಲಯದ ವಿಚಾರಣೆಯೊಂದರಲ್ಲಿ ಕೆಲವು ನಿರುದ್ಯೋಗಿ ಯುವಕರು ಮತ್ತು ಆನ್ಲೈನ್ ಕಾರ್ಯಕರ್ತರನ್ನು “ಜಿರಳೆಗಳಿಗೆ” ಹೋಲಿಸಿ ಮಾತನಾಡಿದ್ದರು. ಉದ್ಯೋಗವಿಲ್ಲದ ಇಂತಹ ಯುವಕರು ನಂತರ ಪತ್ರಕರ್ತರೋ ಅಥವಾ ಸಾಮಾಜಿಕ ಮಾಧ್ಯಮ ಕಾರ್ಯಕರ್ತರೋ ಆಗಿ ಎಲ್ಲರ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತಾರೆ ಎಂದು ಅವರು ಟೀಕಿಸಿದ್ದರು.
ಸಿಜೆಐ ಹೇಳಿಕೆಯಿಂದ ಬೇಸತ್ತ ಭಾರತದ ‘ಜೆನ್-ಝೀ’ (ಜೆನ್ ಜಿ) ಯುವ ಪೀಳಿಗೆಯು, ತಮ್ಮ ಮೇಲಿನ ಆ ವ್ಯಂಗ್ಯವನ್ನೇ ಒಂದು ಪ್ರತಿಭಟನೆಯ ಅಸ್ತ್ರವನ್ನಾಗಿ ಮಾಡಿಕೊಂಡಿತು.
ಈ ಆಕ್ರೋಶವನ್ನು ಗಮನಿಸಿದ ಡಿಜಿಟಲ್ ಮೀಡಿಯಾ ತಂತ್ರಜ್ಞ ಮತ್ತು ಬೋಸ್ಟನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾದ ಅಭಿಜೀತ್ ದಿಪ್ಕೆ ಎಂಬುವವರು ಮೇ 16, 2026 ರಂದು ಜಿರಳೆ ಜನತಾ ಪಾರ್ಟಿ (ಸಿಜೆಪಿ) ಹೆಸರಿನಲ್ಲಿ ಒಂದು ವೆಬ್ಸೈಟ್ ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪ್ರಾರಂಭಿಸಿದರು.
ದೇಶದಲ್ಲಿ ಹೆಚ್ಚುತ್ತಿರುವ ಯುವ ನಿರುದ್ಯೋಗ ಮತ್ತು ಆರ್ಥಿಕ ಸಂಕಷ್ಟಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ತೀಕ್ಷ್ಣವಾದ ವ್ಯಂಗ್ಯ ಹಾಗೂ ಮೀಮ್ಸ್ ಗಳ ಮೂಲಕ ಈ ವೇದಿಕೆಯನ್ನು ಬಳಸಲಾಗುತ್ತಿದೆ. ದೇಶದ ಯುವಜನತೆಯ ಹತಾಶೆಗಳು ಮತ್ತು ವ್ಯವಸ್ಥೆಯ ವಿರುದ್ಧದ ಅಸಮಾಧಾನಕ್ಕೆ ಈ ಆಂದೋಲನವು ಒಂದು ಮುಖ್ಯ ಮುಖವಾಣಿಯಾಗಿ ಮಾರ್ಪಟ್ಟಿದೆ.
ಪ್ರಾರಂಭವಾದ ಕೆಲವೇ ದಿನಗಳಲ್ಲಿ ಈ ಕಾಕ್ರೋಚ್ ಜನತಾ ಪಾರ್ಟಿಯು ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ನಂತಹ ದೊಡ್ಡ ದೊಡ್ಡ ರಾಜಕೀಯ ಪಕ್ಷಗಳ ಅಧಿಕೃತ ಖಾತೆಗಳಿಗಿಂತಲೂ ವೇಗವಾಗಿ ಬೆಳೆದು, ಇನ್ಸ್ಟಾಗ್ರಾಮ್ನಲ್ಲಿ 2 ಕೋಟಿಗೂ (20 ಮಿಲಿಯನ್) ಹೆಚ್ಚು ಫಾಲೋವರ್ಸ್ ಪಡೆದು ಜಾಗತಿಕ ಮಟ್ಟದಲ್ಲಿ ಇಂಟರ್ನೆಟ್ ಸೆನ್ಸೇಷನ್ ಆಗಿದೆ. ದೇಶದ ಹಲವು ಪ್ರಮುಖ ರಾಜಕಾರಣಿಗಳು ಸಹ ಇದರ ಅಧಿಕೃತ ವೆಬ್ಸೈಟ್ನಲ್ಲಿ ತಮಾಷೆಯಾಗಿ ಸದಸ್ಯತ್ವಕ್ಕೆ ಸಹಿ ಹಾಕಿದ್ದಾರೆ.
ಇತ್ತೀಚಿನ ವರದಿಗಳ ಪ್ರಕಾರ, ಈ ಪಕ್ಷದ ಖಾತೆಗಳ ಮೂಲಕ ಹಂಚಿಕೊಳ್ಳಲಾಗುತ್ತಿದ್ದ ಕೆಲವು ತೀಕ್ಷ್ಣ ವಿಷಯಗಳಿಂದಾಗಿ ರಾಷ್ಟ್ರೀಯ ಭದ್ರತೆಯ ಕಾರಣಗಳನ್ನು ನೀಡಿ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಇದರ ಎಕ್ಸ್ (ಟ್ವಿಟರ್) ಖಾತೆಯನ್ನು ತಡೆಹಿಡಿಯಲಾಗಿದೆ.
ಕುತೂಹಲ ಮೂಡಿಸಿದ ಸಿಜೆಪಿ ‘ಮ್ಯಾನಿಫೆಸ್ಟೋ‘
ಜಿರಳೆ ಜನತಾ ಪಾರ್ಟಿ (ಸಿಜೆಪಿ) ಬಿಡುಗಡೆ ಮಾಡಿರುವ ಐದು ಅಂಶಗಳ ಮ್ಯಾನಿಫೆಸ್ಟೋ ಭಾರತದ ಇಂಟರ್ನೆಟ್ ಜಗತ್ತಿನಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದು ಮೇಲ್ನೋಟಕ್ಕೆ ತಮಾಷೆ ಹಾಗೂ ತೀಕ್ಷ್ಣ ವ್ಯಂಗ್ಯದಿಂದ ಕೂಡಿದ್ದರೂ, ದೇಶದ ಪ್ರಸ್ತುತ ರಾಜಕೀಯ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ನೇರವಾಗಿ ಪ್ರಶ್ನಿಸುವ ಗಂಭೀರ ಆಶಯಗಳನ್ನು ಒಳಗೊಂಡಿದೆ.
ನ್ಯಾಯಾಧೀಶರ ನಿವೃತ್ತಿ ನಂತರದ ಹುದ್ದೆಗಳಿಗೆ ನಿಷೇಧ
ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳು (ಸಿಜೆಐ) ನಿವೃತ್ತಿಯಾದ ತಕ್ಷಣ ಅವರಿಗೆ ರಾಜ್ಯಸಭಾ ಸೀಟು ಅಥವಾ ಯಾವುದೇ ರಾಜಕೀಯ ಹುದ್ದೆಗಳನ್ನು ಬಹುಮಾನವಾಗಿ ನೀಡಬಾರದು. ಇದು ನ್ಯಾಯಾಂಗದ ಸ್ವತಂತ್ರತೆಯನ್ನು ಕಾಪಾಡಲು ಅತ್ಯಗತ್ಯ ಎಂದು ಪ್ರಣಾಳಿಕೆ ಪ್ರತಿಪಾದಿಸುತ್ತದೆ.
ಸಂಸತ್ತಿನ ಒಟ್ಟು ಸದಸ್ಯರ ಬಲವನ್ನು ಹೆಚ್ಚಿಸದೆಯೇ, ಸಂಸತ್ತು ಮತ್ತು ಕೇಂದ್ರ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಶೇಕಡಾ 50 ರಷ್ಟು ಸೀಟುಗಳನ್ನು ಕಡ್ಡಾಯವಾಗಿ ಮೀಸಲಿಡಬೇಕು.
ಚುನಾವಣೆಯಲ್ಲಿ ಗೆದ್ದ ನಂತರ ಒಂದು ರಾಜಕೀಯ ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿಯುವ (ಪಕ್ಷಾಂತರ ಮಾಡುವ) ಯಾವುದೇ ಶಾಸಕ ಅಥವಾ ಸಂಸದನನ್ನು ಮುಂದಿನ 20 ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮತ್ತು ಸಾರ್ವಜನಿಕ ಹುದ್ದೆ ವಹಿಸಿಕೊಳ್ಳದಂತೆ ನಿರ್ಬಂಧಿಸಬೇಕು.
ಕಾರ್ಪೊರೇಟ್ ಸಂಸ್ಥೆಗಳ (ಅಂಬಾನಿ, ಅದಾನಿ ಗ್ರೂಪ್ಸ್) ಮಾಲೀಕತ್ವದಲ್ಲಿರುವ ಮಾಧ್ಯಮ ಸಂಸ್ಥೆಗಳ ಪರವಾನಗಿಯನ್ನು ರದ್ದುಗೊಳಿಸಬೇಕು. ಪಕ್ಷಪಾತ ಧೋರಣೆ ಹೊಂದಿರುವ ‘ಗೋದಿ ಮೀಡಿಯಾ’ ಆಂಕರ್ಗಳ ಬ್ಯಾಂಕ್ ಖಾತೆಗಳ ಬಗ್ಗೆ ತನಿಖೆ ನಡೆಸಬೇಕು.
ದೇಶದ ಯಾವುದೇ ರಾಜ್ಯದಲ್ಲಿ ಕಾನೂನುಬದ್ಧ ಮತದಾರನ ಹೆಸರನ್ನು ವೋಟರ್ ಲಿಸ್ಟ್ನಿಂದ ಅಳಿಸಿಹಾಕಿದರೆ, ಅದಕ್ಕೆ ನೇರ ಹೊಣೆಯಾಗಿಸಿ ಮುಖ್ಯ ಚುನಾವಣಾ ಆಯುಕ್ತರನ್ನು (ಸಿಇಸಿ) ಕಠಿಣವಾದ ಯುಎಪಿಎ ಕಾಯ್ದೆಯಡಿ ಬಂಧಿಸಬೇಕು.
ಇವರು ತಮ್ಮ ಪಕ್ಷದ ಸಿದ್ಧಾಂತವನ್ನು ಜಾತ್ಯತೀತ, ಸಮಾಜವಾದಿ, ಪ್ರಜಾಸತ್ತಾತ್ಮಕ ಮತ್ತು ಸೋಮಾರಿ ಎಂದು ಕರೆದುಕೊಂಡಿದ್ದಾರೆ.
ಈ ಪಕ್ಷಕ್ಕೆ ಸೇರಲು ಅಭ್ಯರ್ಥಿಯು “ನಿರುದ್ಯೋಗಿ, ಸೋಮಾರಿ, ಸದಾ ಇಂಟರ್ನೆಟ್ನಲ್ಲಿ ಮುಳುಗಿರುವವನು ಮತ್ತು ವೃತ್ತಿಪರರಂತೆ ಆನ್ಲೈನ್ನಲ್ಲಿ ಹತಾಶೆ ಹೊರಹಾಕುವ ಕಲೆ ಬಲ್ಲವನಾಗಿರಬೇಕು” ಎಂದು ತಮಾಷೆಯಾಗಿ ವೆಬ್ಸೈಟ್ನಲ್ಲಿ ಬರೆಯಲಾಗಿದೆ.
ಪಕ್ಷದ ಪ್ರಧಾನ ಕಚೇರಿ ಎಲ್ಲಿದೆ ಎಂಬ ಪ್ರಶ್ನೆಗೆ, “ಎಲ್ಲಿ ವೈಫೈ (WiFi) ಸಿಗುತ್ತದೋ ಅದೇ ನಮ್ಮ ಹೆಡ್ಕ್ವಾರ್ಟರ್ಸ್” ಎಂದು ಉತ್ತರಿಸಿದ್ದಾರೆ. ಸಾಂಪ್ರದಾಯಿಕ ಗುರುತುಗಳನ್ನು ಬಿಟ್ಟು ಇವರು “ಸ್ಮಾರ್ಟ್ಫೋನ್” ಅನ್ನು ತಮ್ಮ ಪಕ್ಷದ ಚಿಹ್ನೆಯನ್ನಾಗಿ ಘೋಷಿಸಿಕೊಂಡಿದ್ದಾರೆ.


