Homeಮುಖಪುಟ'ರೈತರಿಂದ ನೇರ ಗ್ರಾಹಕರಿಗೆ' ಫೇಸ್‌ಬುಕ್‌ ಗ್ರೂಪ್: ವಿಭಿನ್ನ ಪ್ರಯೋಗಕ್ಕೆ ಅಭೂತಪೂರ್ವ ಪ್ರತಿಕ್ರಿಯೆ

‘ರೈತರಿಂದ ನೇರ ಗ್ರಾಹಕರಿಗೆ’ ಫೇಸ್‌ಬುಕ್‌ ಗ್ರೂಪ್: ವಿಭಿನ್ನ ಪ್ರಯೋಗಕ್ಕೆ ಅಭೂತಪೂರ್ವ ಪ್ರತಿಕ್ರಿಯೆ

ಕರ್ನಾಟಕ ರಾಜ್ಯ ರೈತ ಸಂಘದ ಪಚ್ಚೆ ನಂಜುಂಡಸ್ವಾಮಿ ಮತ್ತು ಯುವ ರೈತ ಸಂಘದ ಕಾರ್ಯಕರ್ತರ ಈ ಪ್ರಯತ್ನದಿಂದ ಹಲವಾರು ರೈತರು ಭವಿಷ್ಯದ ಬಗ್ಗೆ ಆಶಾವಾದ ಹೊಂದುವಂತಾಗಿದೆ.

- Advertisement -
- Advertisement -

“ಸಾವಯುವ ಕೃಷಿಯಲ್ಲಿ ಬೆಳೆದ ಅರಿಶಿನದಿಂದ ತಯಾರಿಸಿದ ಪರಿಶುದ್ಧ ಅರಿಶಿನ ಪುಡಿ. 200 ರೂಪಾಯಿ ಒಂದು ಕೆಜಿ”.. ಎಂದು ಶಿವಮೊಗ್ಗ ಜಿಲ್ಲೆಯ ಹೊಸನಗರದ ಸಂತೋಷ್ ಕೆ.ಎಸ್ ಎಂಬುವವರು ಒಂದು ಪೋಸ್ಟ್ ಹಾಕುತ್ತಾರೆ. ಎರಡೇ ದಿನದಲ್ಲಿ ಸುಮಾರು 30ಕ್ಕೂ ಹೆಚ್ಚು ಜನ ನಮಗೆ ಎರಡು ಕೆಜಿ ಬೇಕು, ಒಂದು, ಅರ್ಧ ಕೆಜಿ ಬೇಕು ಎಂದು ಕಮೆಂಟ್ ಮಾಡುತ್ತಾರೆ. ನಿಮ್ಮ ಫೋನ್ ನಂಬರ್ ಕೊಡಿ ಎಂದು ಕೇಳುತ್ತಾರೆ. ಇದೇ ರೀತಿ ತೋಟದ ಅವರೆಕಾಯಿ, ಶುದ್ದ ಹರಳೆಣ್ಣೆ, ಏಲಕ್ಕಿ, ಕಾಳುಮೆಣಸು, ಜೋನಿ ಬೆಲ್ಲ, ಉಪ್ಪಿನಕಾಯಿ ರೀತಿಯ ಹಲವಾರು ಉತ್ಪನ್ನಗಳನ್ನು ಮಾರಲು ಹಲವಾರು ರೈತರು ಮುಂದೆ ಬಂದಿದ್ದಾರೆ.

ಇದು ಸಾಧ್ಯವಾಗಿರುವುದು ಪ್ರೊ.ಎಂ.ಡಿ ನಂಜುಂಡಸ್ವಾಮಿ ಕನಸಿನ ವೈಜ್ಞಾನಿಕ ಬೆಲೆಯ ಮಾರುಕಟ್ಟೆ ವ್ಯವಸ್ಥೆ ‘ರೈತರಿಂದ ನೇರ ಗ್ರಾಹಕರಿಗೆ’ ಎಂಬ ಹೆಸರಿನ ಫೇಸ್‌ಬುಕ್‌ ಗ್ರೂಪ್ ಮೂಲಕ. “ರೈತರಿಗೆ ಆರ್ಥಿಕ ಭದ್ರತೆಯನ್ನು ತಂದುಕೊಡುವುದು ಈ ಗ್ರೂಪ್‌ನ ಉದ್ದೇಶ. ರೈತರಿಗೆ ಸಿಗಲೇಬೇಕಾದ ವೈಜ್ಞಾನಿಕ ಬೆಲೆಯು ಮಧ್ಯವರ್ತಿಗಳಿಂದ ತಪ್ಪಿಹೋಗುತ್ತಿರುವುದರಿಂದ, ರೈತರೇ ತಮ್ಮ ಬೆಳೆ ಹಾಗೂ ಉತ್ಪನ್ನಗಳನ್ನು ಫೇಸ್ ಬುಕ್‌ನ ಈ ಗ್ರೂಪ್‌ನ ಮುಖಾಂತರ ಗ್ರಾಹಕರಿಗೆ ನೇರವಾಗಿ ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟ ಮಾಡುವ ವಿನೂತನ ಪ್ರಯತ್ನವಿದು. ರೈತರೆಲ್ಲರೂ ಸಹಕರಿಸಿ” ಎಂದು ಗ್ರೂಪ್‌ನ ಉದ್ದೇಶವನ್ನು ಸರಳವಾಗಿ ವಿವರಿಸಲಾಗಿದೆ.

ಈ ಗ್ರೂಪ್ ಆರಂಭವಾದ ಎರಡೇ ದಿನದಲ್ಲಿ ರೈತರು ಮತ್ತು ಗ್ರಾಹಕರಿಗೆ ಬಹುದೊಡ್ಡ ಭರವಸೆಯಾಗಿ ಕಂಡುಬಂದಿದೆ. ಜುಲೈ 9ರಂದು ಆರಂಭವಾದ ಈ ವಿಭಿನ್ನ ಪ್ರಯೋಗಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಾಗಲೇ ಹತ್ತಾರು ಉತ್ಪನ್ನಗಳನ್ನು ಪೋಸ್ಟ್ ಮಾಡಲಾಗಿದೆ. ನೂರಾರು ರೈತರು ಮತ್ತು ಗ್ರಾಹಕರು ಈ ಗ್ರೂಪ್‌ಗೆ ಎಡತಾಕುತ್ತಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ ಪಚ್ಚೆ ನಂಜುಂಡಸ್ವಾಮಿ ಮತ್ತು ಯುವ ರೈತ ಸಂಘದ ಕಾರ್ಯಕರ್ತರ ಈ ಪ್ರಯತ್ನದಿಂದ ಹಲವಾರು ರೈತರು ಭವಿಷ್ಯದ ಬಗ್ಗೆ ಆಶಾವಾದ ಹೊಂದುವಂತಾಗಿದೆ.

ಪಚ್ಚೆ ನಂಜುಂಡಸ್ವಾಮಿ

ಈ ಪ್ರಯತ್ನ ಚಿಗುರೊಡೆದಿದ್ದು ಹೇಗೆ? ಎಂಬುದರ ಕುರಿತು ಇದರ ಸ್ಥಾಪಕರಾದ ಪಚ್ಚೆ ನಂಜುಂಡಸ್ವಾಮಿಯವರು ನಾನುಗೌರಿ.ಕಾಂ ಮಾತನಾಡಿದರು. “ನನ್ನ ಮನಸ್ಸು ಆತ್ಮಹತ್ಯೆ ಮಾಡಿಕೊಂಡ ರೈತರ ಬಗ್ಗೆ ಸದಾ ಮಿಡಿಯುತ್ತದೆ. ಈ ಕೋವಿಡ್ ಕಾಲದಲ್ಲಿಯೂ ಸಹ ಬೆಳೆ ಬೆಳೆದ ಎಷ್ಟೊ ರೈತರು ಮಾರಲಾಗದೇ ಬೆಳೆಯನ್ನು ಸುಟ್ಟುಬಿಟ್ಟ, ಹೊಲದಲ್ಲಿಯೇ ಉತ್ತುಬಿಟ್ಟಂತ ಘಟನೆಗಳನ್ನು ಕೇಳಿದ್ದೇವೆ. ಕೋವಿಡ್ ಬರುವುದಕ್ಕೂ ಮುಂಚೆಯೇ 16-17 ವರ್ಷಗಳಿಂದ ಲಕ್ಷಾಂತರ ರೈತರ ಆತ್ಮಹತ್ಯೆಗಳು ನಡೆದುಹೋಗಿವೆ. ಇವೆಲ್ಲವುಗಳಿಂದ ರೈತರ ಪರವಾಗಿ ಏನಾದರೂ ಮಾಡುವಂತೆ ತುಡಿಯುತ್ತಿತ್ತು. ಅದರ ಭಾಗವೇ ಈ ಗ್ರೂಪ್ ಆಗಿದೆ” ಎಂದರು.

ಮತ್ತೊಬ್ಬ ರೈತರ ಪೋಸ್ಟ್

ಇದು ಎರಡು ದಿನ ಮಗು ಅಷ್ಟೇ. ಇದರ ಹಿಂದೆ ಒಂದು ಇತಿಹಾಸವಿದೆ. ನೀರಾ ಚಳವಳಿ ಮಾಡುವಂತಹ ಸಂದರ್ಭದಲ್ಲಿ ಚಿತ್ರನಟ ಅಶೋಕ್‌ರವರು ಈ ಪರಿಕಲ್ಪನೆ ಇಟ್ಟುಕೊಂಡು ನಮ್ಮ ಮನೆಗೆ ಬಂದಿದ್ದರು. ನಮ್ಮ ತಂದೆ ಪ್ರೊ. ನಂಜುಂಡಸ್ವಾಮಿಯವರು ‘ಸ್ವದೇಶಿ’ ಎಂಬ ಹೆಸರಿನಲ್ಲಿ ಇದನ್ನು ಶುರು ಮಾಡಲು ಆರಂಭಿಸಿದ್ದರು. ಇದಕ್ಕೆ ತಮಿಳು ಚಿತ್ರನಟ ರಜಿನಿಕಾಂತ್‌ ಕೂಡ ‘ನಮ್ದು’ ಎಂಬ ಹೆಸರಿಡಿ ಎಂದು ಸಲಹೆ ನೀಡಿದ್ದರು. ಈ ಪ್ರಕ್ರಿಯೆ ನಡೆಯುತ್ತಿರುವಾಗಲೇ ಪ್ರೊ. ಎಂಡಿಎನ್ ಕ್ಯಾನ್ಸರ್‌ಗೆ ತುತ್ತಾದರು. ಈಗ ಬಹಳ ವರ್ಷಗಳ ನಂತರ ನಾವು ಇದನ್ನು ಆರಂಭಿಸಿದ್ದೇವೆ. ಸಮಾಜ ಕಟ್ಟುವ ಆರೋಗ್ಯಕರ ಚೇಷ್ಟೇ ಇದು. ಇದು ಸಮಾಜದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಜನರಿಗೆ ಸಹಾಯವಾದರೆ ಅದೇ ನೆಮ್ಮದಿ ಎನ್ನುತ್ತಾರೆ ಪಚ್ಚೆ ನಂಜುಂಡಸ್ವಾಮಿಯವರು…

“ಇದು ಒಳ್ಳೆಯ ಸಮಯ. ಪ್ರತಿ ತಾಲೂಕಿನಲ್ಲೂ ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಮಾಡಿ. ಇದರಿಂದ ದಲ್ಲಾಳಿಗಳ ಹಾವಳಿ ಕಡಿಮೆಯಾಗಿ ರೈತರಿಗೆ ತುಂಬಾ ಸಹಾಯ ಆಗುತ್ತದೆ . ರೈತರಿಂದ, ರೈತರಿಗಾಗಿ, ರೈತರಿಗೋಸ್ಕರ” ಎಂದು ವೆಂಕಟೇಶಯ್ಯ ಹೆಬ್ಬಸುರು ಎಂಬುವವರು ಗ್ರೂಪ್ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಇಂದು ಇರುವ ಸಾಮಾನ್ಯ ಮಾರುಕಟ್ಟೆ ವ್ಯವಸ್ಥೆಯಲ್ಲಿ ಆಹಾರ ಬೆಳೆವ ರೈತ ಸುಖವಾಗಿಲ್ಲ. ಅದೇ ಆಹಾರ ಖರೀದಿಸುವ ಗ್ರಾಹಕರು ಕೂಡ ದುಬಾರಿ ಬೆಲೆಗೆ ಕೊಳ್ಳಬೇಕೆಂಬ ಮನೋಭಾವನೆ ಹೊಂದಿದ್ದಾರೆ. ಮಧ್ಯವರ್ತಿಗಳ ಹಾವಳಿಯ ಇಂತಹ ಪರಿಸ್ಥಿತಿಯಲ್ಲಿ ರೈತ ಮತ್ತು ಗ್ರಾಹಕ ಸ್ನೇಹಿಯಾದ ಹಲವಾರು ಪ್ರಯೋಗಗಳು ಹೊರಬರುತ್ತಿವೆ. ಅಂತಹ ಸಾಲಿಗೆ ಹೊಸ ಸೇರ್ಪಡೆಯಾದ ‘ರೈತರಿಂದ ನೇರ ಗ್ರಾಹಕರಿಗೆ’ ಪ್ರಯೋಗ ಯಶಸ್ವಿಯಾಗಲಿ. ಇದೇ ಮಾದರಿಯ ಹತ್ತಾರು ಯೋಜನೆಗಳು ಹೊರಬಂದು ರೈತರು ನೆಮ್ಮದಿಯ ಬದುಕು ಕಾಣುವಂತಾಗಲಿ ಎಂಬುದು ನಮ್ಮ ಆಶಯ. ನೀವೂ ಆ ಗ್ರೂಪ್ ಸೇರುವ ಮನಸ್ಸಿದ್ದಲ್ಲಿ ಇಲ್ಲಿ ಕ್ಲಿಕ್ ಮಾಡಿ.


ಇದನ್ನೂ ಓದಿ: ಕೊರೊನಾ: ರೋಗ ನಿರೋಧಕತೆ ಕುರಿತು ಆಯುರ್ವೇದದ ದೃಷ್ಟಿಕೋನ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...