Homeನೂರರ ನೋಟಅಯೋಧ್ಯೆ ತೀರ್ಪು ಹೊರಬಂದಿರುವ ಸಂದರ್ಭದಲ್ಲಿ... : ಎಚ್.ಎಸ್.ದೊರೆಸ್ವಾಮಿ ಅಭಿಪ್ರಾಯ

ಅಯೋಧ್ಯೆ ತೀರ್ಪು ಹೊರಬಂದಿರುವ ಸಂದರ್ಭದಲ್ಲಿ… : ಎಚ್.ಎಸ್.ದೊರೆಸ್ವಾಮಿ ಅಭಿಪ್ರಾಯ

- Advertisement -
- Advertisement -

ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಕೇಳಿದ ಅಡ್ವಾಣಿಯವರು, ನ್ಯಾಯಾಲಯ ತಮ್ಮ ತೀರ್ಮಾನವನ್ನು ಸಮರ್ಥಿಸಿದೆ ಎಂದು ಹೇಳಿದ್ದಾರೆ. ನ್ಯಾಯಾಲಯವು ಅಡ್ವಾಣಿಯವರ ಪ್ರಚೋದನೆಯ ಕೆಲಸವನ್ನು ಸಮರ್ಥಿಸಿಲ್ಲ. ಬಾಬ್ರಿ ಮಸೀದಿ ಒಡೆದದ್ದು ಅಪರಾಧ ಎಂದು ಸ್ಪಷ್ಟವಾಗಿ ಹೇಳಿದೆ; ಈ ಅಪರಾಧದ ಗಂಭೀರತೆಯನ್ನು ಯಾರೂ ಮರೆಯುವಂತಿಲ್ಲ.

ಭಾರತದಲ್ಲಿ ಎಲ್ಲವೂ ಜಾತಿ, ಧರ್ಮಗಳ ಮಯವಾಗಿದೆ. self-appointed ದೇಶಭಕ್ತರ ಹಾವಳಿ ಜಾಸ್ತಿಯಾಗಿದೆ. ಅವರ ಮನಸ್ಸೆಲ್ಲಾ ವಿಷಪೂರಿತವಾಗಿದೆ. ಇವರ ಅಭಿಪ್ರಾಯದಲ್ಲಿ ಭಾರತದಲ್ಲಿರುವ ಮುಸ್ಲಿಮರು ಕ್ರಿಶ್ಚಿಯನ್ನರು, ಪಾರ್ಸಿಗಳು, ನೀಗ್ರೋಗಳು ಎಲ್ಲರೂ ತಾವು ಹಿಂದುಗಳೆಂದು ಘೋಷಣೆ ಮಾಡಬೇಕು. ಈ ಸ್ವಯಂನೇಮಿತ ದೇಶಭಕ್ತರ ಹಿಂದುತ್ವವನ್ನು ಯಾವ ಕಾರಣಕ್ಕೂ ಪ್ರಶ್ನಿಸುವಂತಿಲ್ಲ. ಈ ಅಹಂಕಾರದಿಂದಲೇ ಅವರು ಬಾಬ್ರಿ ಮಸೀದಿ ಒಡೆದು ರಾಮಮಂದಿರವನ್ನು ನಿರ್ಮಿಸಲು ಹೊರಟಿದ್ದು.

ಮುಖ್ಯನ್ಯಾಯಾಧೀಶರಾದ ರಂಜನ್ ಗೊಗೊಯ್ ಅವರನ್ನು ಒಬ್ಬ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು ಪ್ರಶ್ನಿಸುತ್ತಾರೆ: ಬಾಬ್ರಿ ಮಸೀದಿ ಕಟ್ಟಡ ಇಂದಿಗೂ ಅಸ್ತಿತ್ವದಲ್ಲಿ ಇದ್ದಿದ್ದರೆ, ನೀವು ರಾಮಮಂದಿರವನ್ನು ಕಟ್ಟಲು ಅಲ್ಲಿ ಅವಕಾಶ ಕೊಡುವ ತೀರ್ಪನ್ನು ಕೊಡುತ್ತಿದ್ದಿರಾ? ಎಂದು. ಕಾನೂನು ವಿಚಾರಕ್ಕಿಂತ ಹೆಚ್ಚಿನ ಮಹತ್ವವನ್ನು ತೀರ್ಪಿನಲ್ಲಿ ಜನರ ನಂಬಿಕೆ ಭಕ್ತಿ ಶ್ರದ್ಧೆಗೆ ನೀಡಿ, ಹೆಚ್ಚಿನ ಮನ್ನಣೆ ನೀಡಲಾಗಿದೆ ಎಂದು ಅನೇಕರು ಹೇಳಿದ್ದಾರೆ.

ಮಸೀದಿಯನ್ನು ಕಟ್ಟಿದ ದಿನದಿಂದ ಇಂದಿನವರೆಗೂ ಅದು ವಿವಾದಾಸ್ಪದ ವಿಚಾರವೇ ಆಗಿತ್ತು. ಈಗ ನ್ಯಾಯಾಲಯ ಒಂದು ತೀರ್ಪಿತ್ತು ವಿವಾದವನ್ನು ಇತ್ಯರ್ಥಗೊಳಿಸಿದೆ. ಈ ತೀರ್ಮಾನವನ್ನು ಹಿಂದುತ್ವಕ್ಕೆ ದೊರೆತ ಜಯ ಎಂದು ಭಾವಿಸಿ ಹಿಂದು ಮತಾಂಧರು ಒಂದು ಯುದ್ಧ ಗೆದ್ದವರಂತೆ ರಂಪ ಮಾಡಿಲ್ಲ. ಸುನ್ನಿ ವಕ್ಫ್ ಬೋರ್ಡಿನ ಸದಸ್ಯರು ನ್ಯಾಯಾಲಯದ ತೀರ್ಪು ಸಮಾಧಾನ ತಂದಿಲ್ಲವಾದರೂ, ವಿರೋಧಿಸುವುದಿಲ್ಲ ಎಂದರು. ಆನಂತರ ಸಭೆ ಸೇರಿ ನಮಗೆ ನಿಮ್ಮ ಐದು ಎಕರೆ ಜಮೀನು ಬೇಡ ಎಂದು ತೀರ್ಮಾನ ತೆಗೆದುಕೊಂಡಿದ್ದಾರೆಂದು ಹೇಳಲಾಗುತ್ತಿದೆ.

ಈ ಚಾರಿತ್ರಿಕ ತೀರ್ಪು ಸಮರ್ಪಕವಿಲ್ಲವೆಂದು ಹೇಳುವ ಜನ ಎರಡೂ ಕಡೆ ಇದ್ದಾರೆ. ಆದರೆ ಅವರು ಪ್ರತಿಭಟನೆ ಮಾಡುವ ಮಟ್ಟಕ್ಕೆ ಇಳಿದಿಲ್ಲ. ಇದು ಒಂದು ಸಂತಸದ ಸಂಗತಿ.

ಅಯೋಧ್ಯೆಯಲ್ಲಿ ರಾಮಮಂದಿರ ಇದ್ದ ವಿವಾದವನ್ನು ನ್ಯಾಯಾಲಯ ಒಪ್ಪಿಕೊಂಡಿಲ್ಲ. ಮಸೀದಿ ಕಟ್ಟುವುದಕ್ಕೆ ಮೊದಲು ಅದರ ಅಡಿಯಲ್ಲಿ ಒಂದು ಕಟ್ಟಡ ಇತ್ತು. ಆದರೆ ಅದು ರಾಮರ ದೇವಾಲಯ ಎನ್ನುವುದಕ್ಕೆ ಪುರಾವೆ ಇಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಈ ತೀರ್ಪಿನಲ್ಲಿ ನ್ಯಾಯಾಲಯ ಬಾಬ್ರಿ ಮಸೀದಿ ಕೆಡವಿದ್ದು ತಪ್ಪು ಎಂದು ಹೇಳಿದೆ. ಕಾನೂನನ್ನು ಯಾರೇ ಆಗಲಿ ತಮ್ಮ ಕೈಗೆ ತೆಗೆದುಕೊಳ್ಳುವುದು ಅಪರಾಧ ಎಂಬುದನ್ನು ಸ್ಪಷ್ಟಪಡಿಸಿದೆ. ಈ ಅಪರಾಧ ಮಾಡಿದವರಲ್ಲಿ ಎಲ್.ಕೆ.ಅಡ್ವಾನಿಯವರು ಒಬ್ಬರು. ಅವರು ಕಾನೂನನ್ನು ಉದ್ದೇಶಪೂರ್ವಕವಾಗಿ ಗಾಳಿಗೆ ತೂರಿದ್ದಾರೆ. ಅಡ್ವಾನಿಯವರ ರಥಯಾತ್ರೆ ಕರಸೇವಕರಿಗೆ ಪ್ರೇರಕಶಕ್ತಿಯಾಗಿತ್ತು. ಆ ಯಾತ್ರೆಯ ಮೂಲಕ ಅವರು ಕೋಮು ಉನ್ಮಾದಕ್ಕೆ ನಾಂದಿ ಹಾಡಿದರು. ಲಿಬರ್ಹಾನ್ ಕಮಿಷನ್ ಕೂಡ ಅಡ್ವಾನಿಯವರು ಹಾಗೂ ಆಗಿನ ಉತ್ತರಪ್ರದೇಶದ ಮುಖ್ಯಮಂತ್ರಿ ಕಲ್ಯಾಣ್‍ಸಿಂಗ್ ಮತ್ತು ಇತರರು ಕೋಮುದ್ವೇಷ ಬೆಳೆಸಲು ಪ್ರೇರಕರು ಎಂದು ತಮ್ಮ ವಿಚಾರಣಾ ವರದಿಯಲ್ಲಿ ನಮೂದಿಸಿದ್ದಾರೆ.

ಎಲ್.ಕೆ.ಅಡ್ವಾಣಿ ಮುಂತಾದ ಬಿಜೆಪಿ ಮತ್ತು ಆರ್‍ಎಸ್‍ಎಸ್ ಮುಖಂಡರು, ಬಾಬ್ರಿ ಮಸೀದಿ ಆವರಣದಲ್ಲಿದ್ದುಕೊಂಡು ಕರಸೇವಕರನ್ನು ಮಸೀದಿ ಒಡೆಯುವ ಸಂದರ್ಭದಲ್ಲಿ ಹುರಿದುಂಬಿಸಿದ್ದಾರೆ. ಆಗಿನ ಪ್ರಧಾನಿಯಾಗಿದ್ದ ಪಿ.ವಿ ನರಸಿಂಹರಾಯರು ಅಯೋಧೈಗೆ ಸೈನಿಕರನ್ನು ಕಳಿಸಿ ತಾವೇ ನಿಂತು ಬಾಬ್ರಿ ಮಸೀದಿಯನ್ನು ಧ್ವಂಸಮಾಡುವುದನ್ನು ತಡೆಗಟ್ಟಬೇಕಾಗಿತ್ತು. ಅವರು ಆ ಕೆಲಸವನ್ನು ಮಾಡದೆ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್‍ಸಿಂಗ್‍ಗೆ ಈ ಜವಾಬ್ದಾರಿಯನ್ನು ವಹಿಸಿ ಸೈನ್ಯವನ್ನು ಅವರ ವಶಕ್ಕೆ ವಹಿಸಿದರು. ಇದು ಪ್ರಧಾನಿಯ ಕರ್ತವ್ಯಲೋಪದ ಪರಮಾವಧಿ. ಬಿಜೆಪಿಯ ಮುಖ್ಯಮಂತ್ರಿ ಕಲ್ಯಾಣ್‍ಸಿಂಗ್ ಸೈನ್ಯವನ್ನು ಬಳಸಿಕೊಂಡು ಮಸೀದಿ ಒಡೆಯುವನೇ ಎಂದು ಪಿ.ವಿ ನರಸಿಂಹರಾಯರು ಯೋಜಿಸದೆ ಇರಲಿಲ್ಲ. ಈ ಬಿಕ್ಕಟ್ಟಿನ ಸಮಸ್ಯೆಯಿಂದ ತಪ್ಪಿಸಿಕೊಳ್ಳುವ ದುರುದ್ದೇಶದಿಂದ ಅವರು ಈ ತಂತ್ರ ಮಾಡಿದರು. ಮುಖ್ಯಮಂತ್ರಿ ಕಲ್ಯಾಣ್‍ಸಿಂಗ್ ತಟಸ್ಥರಾಗಿದ್ದುಕೊಂಡು ಕರಸೇವಕರಿಗೆ ಕುಮ್ಮಕ್ಕು ಕೊಟ್ಟರು. ತಮ್ಮ ಸಾಂವಿಧಾನಿಕ ಜವಾಬ್ದಾರಿಯ ಕೆಲಸ ಮಾಡುವವರಲ್ಲ ಎಂದು ತಿಳಿಸಿದ್ದರೂ ಪಿ.ವಿ.ನರಸಿಂಹರಾಯರು ಆ ಕೆಲಸವನ್ನು ಕಲ್ಯಾಣ್‍ಸಿಂಗ್‍ಗೆ ವಹಿಸಿದ್ದು ಅಕ್ಷಮ್ಯ ಅಪರಾಧ.

ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಕೇಳಿದ ಅಡ್ವಾಣಿಯವರು, ನ್ಯಾಯಾಲಯ ತಮ್ಮ ತೀರ್ಮಾನವನ್ನು ಸಮರ್ಥಿಸಿದೆ ಎಂದು ಹೇಳಿದ್ದಾರೆ. ನ್ಯಾಯಾಲಯವು ಅಡ್ವಾಣಿಯವರ ಪ್ರಚೋದನೆಯ ಕೆಲಸವನ್ನು ಸಮರ್ಥಿಸಿಲ್ಲ. ಬಾಬ್ರಿ ಮಸೀದಿ ಒಡೆದದ್ದು ಅಪರಾಧ ಎಂದು ಸ್ಪಷ್ಟವಾಗಿ ಹೇಳಿದೆ; ಈ ಅಪರಾಧದ ಗಂಭೀರತೆಯನ್ನು ಯಾರೂ ಮರೆಯುವಂತಿಲ್ಲ. ಬಾಬ್ರಿ ಮಸೀದಿಯನ್ನು ಅಕ್ರಮವಾಗಿ ಒಡೆದ ಕಾರಣದಿಂದ ಭಾರತದ ಅನೇಕ ಕಡೆ ದಾಂಧಲೆಗಳಾದವು. ಅದರ ಪ್ರತಿಧ್ವನಿಯಾಗಿ ನೂರಾರು ಮಂದಿ ಕೊಲ್ಲಲ್ಪಟ್ಟರು.

ಈ ಎಲ್ಲ ಪ್ರಸಂಗಗಳೂ ಭಾರತದ ಜಾತ್ಯತೀತ ನಿಲುವಿಗೆ ಭಾರೀ ಪೆಟ್ಟು ಕೊಟ್ಟವು, ಅಡ್ವಾನಿಯವರ ಜೊತೆಗೆ ರಥಯಾತ್ರೆಯಲ್ಲಿ ಸಾಥ್ ಕೊಟ್ಟವರು ಇಂದಿನ ಪ್ರಧಾನಿಯಾಗಿರುವ ಮೋದಿಯವರು ಎಂಬುದನ್ನು ಮರೆಯದಿರೋಣ. ಅಡ್ವಾಣಿ ರಥಯಾತ್ರೆ ಮಾಡಿ ಕೋಮುಭಾವನೆ ಬೆಳೆಸಿದ್ದು ತಪ್ಪಾದರೆ ಅವರಿಗೆ ಸಾಥ್ ಕೊಟ್ಟವರೂ ತಪ್ಪಿತಸ್ಥರೇ!

ಹಿಂದೂ ರಾಷ್ಟ್ರದ ಕನಸು ಕಾಣುವ ಈ ರಾಜಕೀಯ ಹಿತಾಸಕ್ತಿಗಳಿಗೆ ಧರ್ಮ ಒಂದು ರಾಜಕೀಯ ಅಸ್ತ್ರ. ರಾಮನನ್ನು ಇವರು ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳುತ್ತಾರೆ. ಅಸಹಿಷ್ಣುತೆ ಮತ್ತು ಹಿಂಸೆಯನ್ನು ರಾಮನ ಹೆಸರಿನಲ್ಲಿ ಬಿತ್ತುವ ಈ ಧೂರ್ತರು ಹಿಂದುತ್ವದ ಮಾರಾಟಗಾರರು. ರಾಮನ ಹೆಸರಿನಲ್ಲಿ ಮತ ಕೇಳುವುದು ರಾಮನಿಗೆ ಕಳಂಕ ತರುವ ಗೆಯ್ಮೆ. ಆದರೆ ಅವರಿಗೆ ಹಾಗೆನಿಸುವುದಿಲ್ಲ. ಏಕೆಂದರೆ ಅವರಿಗೆ ರಾಮನ ಹೆಸರು ಬಳಸಿಕೊಂಡು ಮತ ಗಳಿಸುವುದೇ ಮುಖ್ಯ.

ಭಾರತ ಈಗ ಒಂದು ಮತೀಯ ರಾಷ್ಟ್ರವಾಗಿ ಪರಿವರ್ತನೆಗೊಳ್ಳುತ್ತಿದೆ. ಹಿಂದುತ್ವ ಪ್ರತಿಪಾದನೆಯ ಸನ್ನಿ ಹಿಡಿದವರಿಗೆ ಇದು ಒಂದು retrograde step ಎಂದು ಅನಿಸುತ್ತಿಲ್ಲದಿರುವುದು ಒಂದು ದುರ್ದೈವದ ಸಂಗತಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಡ ಜನರಿಗೆ ಬದುಕು ಕಟ್ಟಿಕೊಳ್ಳಲು ನೆರವಾದ ‘ಕಾಂಗ್ರೆಸ್‌’ ಸರಕಾರದ ‘ಗ್ಯಾರಂಟಿ ಯೋಜನೆ’ ಬಗ್ಗೆ ತೇಜಸ್ವಿ...

0
ಕರ್ನಾಟಕದ ಕಾಂಗ್ರೆಸ್‌ ಸರಕಾರ ಜಾರಿಗೆ ತಂದಿದ್ದ ಪಂಚ ಗ್ಯಾರಂಟಿಗಳ ಬಗ್ಗೆ ತುಚ್ಛವಾಗಿ ಮಾತನಾಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ರಾಜ್ಯದ ಕೋಟ್ಯಾಂತರ ಜನರಿಗೆ ಆಶ್ರಯವಾದ ಗ್ಯಾರಂಟಿ ಯೋಜನೆಗಳನ್ನು 'ಮತಿ ಹೀನ ಉಚಿತ ಕೊಡುಗೆ'...