Homeಕರ್ನಾಟಕಕಟೀಲು “ಅಸ್ರಣ್ಣ”ರು ಭಾಗವತ ಪಟ್ಲರನ್ನೇಕೆ ರಂಗದಿಂದ ಕೆಳಗಿಳಿಸಿದರು?

ಕಟೀಲು “ಅಸ್ರಣ್ಣ”ರು ಭಾಗವತ ಪಟ್ಲರನ್ನೇಕೆ ರಂಗದಿಂದ ಕೆಳಗಿಳಿಸಿದರು?

ಕಟೀಲು ಮೇಳದಲ್ಲಿ ಅನ್ಯಾಯಕ್ಕೆ ಒಳಗಾಗಿದ್ದ ಕಲಾವಿದರ ಬೆನ್ನಿಗೆ ಪಟ್ಲ ನಿಂತಿದ್ದು ನಿಜ. ಅದವರ ಸ್ವಭಾವ. ಆತ ಸದಾ ನೊಂದ ಕಲಾವಿದರ ಪಕ್ಷಪಾತಿ.

- Advertisement -
- Advertisement -

ಯಕ್ಷಗಾನ ಒಂಥರಾ ಜಡವಾಗಿದ್ದ ಕಾಲದಲ್ಲಿ ಅದಕ್ಕೊಂದು ಲವಲವಿಕೆ ತಂದುಕೊಟ್ಟಿದ್ದು ಪಟ್ಲ ಸತೀಶ್ ಶೆಟ್ಟಿಯ ಅಪ್ರತಿಮ ಹಾಡುಗಾರಿಕೆ! ಪಟ್ಲರ ಅಸಾಮಾನ್ಯ ಪ್ರತಿಭೆಯಿಂದ ತೆಂಕುತೆಟ್ಟಿನ ಭಾಗವತಿಕೆಗೆ ವಿಶಿಷ್ಟ ಆಯಾಮ ಬಂದುಬಿಟ್ಟಿತು. ಈಗಾತ ಯಕ್ಷಲೋಕದ ಅಷ್ಟೂ ತೆಟ್ಟಿನಲ್ಲಿ ಸೂಪರ್ ಸ್ಟಾರ್ ಭಾಗವತ!! ಅಪಾರ ಸಿದ್ಧಿ ಪ್ರಸಿದ್ಧಿಯನ್ನು ಎಂದೂ ತಲೆಗೇರಿಸಿಕೊಳ್ಳದೆ ಸಮಚಿತ್ತದಿಂದ ನಿಭಾಯಿಸುತ್ತ ಬಂದಿರುವ ಪಟ್ಲ ತನ್ನ ಕೀರ್ತಿಯ ವರ್ಚಸ್ಸನ್ನು ಯಕ್ಷಗಾನ ಕಲಾವಿದರ ನೆರವಿಗೆ ಬಳಸುತ್ತಿರುವ ಅಪರೂಪದ ಹೃದಯವಂತ.

ಅನೇಕ ಶಿಷ್ಯರನ್ನು ಪಟ್ಲ ತಯಾರು ಮಾಡಿದ್ದಾರೆ. “ಯಕ್ಷದ್ರುವ ಪಟ್ಲ ಫೌಂಡೇಷನ್” ಸ್ಥಾಪಿಸಿ ನೂರಾರು ಬಡಕಲಾವಿದರಿಗೆ ಕಷ್ಟಕಾಲದಲ್ಲಿ ಆರ್ಥಿಕ ಸಹಾಯ ಮಾಡುತ್ತಿದ್ದಾರೆ; ಮನೆಗಳನ್ನು ಕಟ್ಟಿಸಿ ಕೊಡುತ್ತಿದ್ದಾರೆ. ಇದಕ್ಕೆಲ್ಲ ಹಣ ಭೂಗತ ಲೋಕದಲ್ಲಿ “ಡಾನ್” ಆಗಿರುವ ಅಣ್ಣ ವಿಕ್ಕಿಶೆಟ್ಟಿಯಿಂದ ತಮ್ಮ ಪಟ್ಲನಿಗೆ ಬರುತ್ತಿದೆಯೆಂದು ಕೊಂಕು ಮಾತಾಡೋರೂ ಇದ್ದಾರೆ. ಆದರೆ ಪಟ್ಲರ “ಪುಣ್ಯ”ಕಾರ್ಯ ಕಂಡ ಕೂಲಿಯೂ ತನ್ನ ಸಂಪಾದನೆಯ ಕೆಲವೇ ಕಾಸು ಫೌಂಡೇಷನ್‍ಗೆ ಕೊಡುತ್ತಿದ್ದಾನೆ. ಯಕ್ಷ ರಸಿಕರಿಂದಂತೂ ಹೇರಳ ಹಣ ಹರಿದುಬರುತ್ತಿದೆ. ಯಕ್ಷಗಾನ ಕಲಾವಿದರಿಗೆ ಅನ್ಯಾಯ ಶೋಷಣೆಯಾದಾಗ ಧ್ವನಿ ಎತ್ತುವ ಕಳಕಳಿಯ ಪಟ್ಲರ ಕಂಡರಾಗದ ಕಟೀಲು ಯಕ್ಷಗಾನ ಮೇಳದ ಯಜಮಾನಿಕೆಯ ವೈದಿಕಶಾಹಿ ಅಸ್ರಣ್ಣ ಪರಿವಾರ ಶೂದ್ರನೊಬ್ಬನ ಛೂಬಿಟ್ಟು ರಂಗದಲ್ಲೇ ಅವಮಾನಿಸಿರುವುದು ಯಕ್ಷಾಭಿಮಾನಿಗಳಲ್ಲಿ ಅಲ್ಲೋಲಕಲ್ಲೋಲವೇ ಮಾಡಿಬಿಟ್ಟಿದೆ……

ಅದು ಶುಕ್ರವಾರ 22-11-2019ನೇ ತಾರೀಖಿನ ರಾತ್ರಿ ಆಗರ್ಭ ಶ್ರೀಮಂತ ಕಟೀಲು ದುರ್ಗಾಪರಮೇಶ್ವರಿ ದೇವಳದ ಅಂಗಳದಲ್ಲಿ ಆಟ ನಡೆದಿತ್ತು. ಈ ವರ್ಷದ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳಗಳ ತಿರುಗಾಟದ ಆರಂಭದ ಮೊದಲ ಆಟ. ಆ ಪ್ರಸಂಗದ ದ್ವಿತಿಯಾರ್ಧದ ಸುಮಾರು 12:30ರ ಹೊತ್ತಿಗೆ ಪಟ್ಲ ಮೊದಲಿದ್ದ ಭಾಗವತರಿಂದ ಜಾಗಟೆ ಪಡೆದು ಪೀಠದಲ್ಲಿ ಕುಳಿತುಕೊಳ್ಳುತ್ತಾರೆ. ಅಷ್ಟರಲ್ಲಾಗಲೇ ಆತನ ಸಾವಿರಾರು ಅಭಿಮಾನಿಗಳು ಶಿಳ್ಳೆ-ಚಪ್ಪಾಳೆ ಹೊಡೆದು ರೋಮಾಂಚಿತರಾಗಿದ್ದಾರೆ. ಇನ್ನೇನು ಚಕ್ಕಳಬಕ್ಕಳ ಹಾಕಿ ಹಾಡಬೇಕು ಎನ್ನುವಷ್ಟರಲ್ಲಿ ಮೇಳದ ಯಜಮಾನ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ತೆರೆಯ ಹಿಂದಿನಿಂದ ಬಂದು- “ನೀನು ಹಾಡೋದು ಬೇಡ… ನಿನ್ನನ್ನು ಮೇಳದಿಂದ ಹೊರಹಾಕಲಾಗಿದೆ…” ಅಂತಾನೆ.

ಪಟ್ಲ ಮರುಮಾತಾಡದೆ ವೇದಿಕೆಯಿಂದಿಳಿದು ನೇರ ಭ್ರಮರಾಂಭೆಯ ಗುಡಿಬಳಿ ಹೋಗಿ ಭಾಗವತಿಕೆಯ ಪೇಟ ಬಾಗಿಲಲ್ಲಿಟ್ಟು ಮನೆಗೆ ಬೇಸರದಿಂದ ಹೆಜ್ಜೆ ಹಾಕುತ್ತಾರೆ. ಪಟ್ಲ ಸಂಯಮ ಕಳೆದುಕೊಂಡಿದ್ದರೆ, ಆ ರಾತ್ರಿ ದುರ್ಗಾಪರಮೇಶ್ವರಿಯ ಸನಿಹ ರಣರಂಗವಾಗುತ್ತಿತ್ತು. ಆತ ಒಂದು ಕಣ್ಣು ಸನ್ನೆ ಮಾಡಿದರೂ ಸಾಕಿತ್ತು ಅಲ್ಲಿ ನೆರೆದಿದ್ದ ಅಭಿಮಾನಿಗಳು ಕೆರಳಿ ದೊಡ್ಡ ದೊಂಬಿಯೇ ಆಗಿಹೋಗುತ್ತಿತ್ತು. ಆದರೆ ಪಟ್ಲ ಅಂಥ ಅನಾಹುತಕ್ಕೆ ಆಸ್ಪದ ಕೊಡದೆ ತನಗಾದ ಅಪಮಾನವನ್ನು ಆಪ್ತರಲ್ಲಿ ಹೇಳಿಕೊಂಡು ಹಗುರಾದರು.

ಆದರೆ ರಾತ್ರಿ ಬೆಳಗಾಗುವುದಲ್ಲಿ ಸ್ವರವಾರಿಧಿ ಪಟ್ಲರಿಗೆ ಕಟೀಲು ದೇವಳವನ್ನು ಅಕ್ರಮವಾಗಿ ಕಬ್ಜಾ ಮಾಡಿಕೊಂಡು ಕೋಟಿ ಲೂಟಿ ಮಾಡುತ್ತಿರುವ ಅರ್ಚಕ ಕುಟುಂಬದ ಅಸ್ರಣ್ಣಗಳು ಮತ್ತವರ ಗುಲಾಮನಂತಿರುವ ಯಕ್ಷಗಾನ ಮೇಳದ ಗುತ್ತಿಗೆದಾರ ದೇವಿಪ್ರಸಾದ್ ಶೆಟ್ಟಿ ಬುದ್ಧಿಪೂರ್ವಕವಾಗೇ ಪ್ರೇಕ್ಷಕರೆದುರು ಅವಮಾನಿಸಿ ಸೇಡೊಂದು ತೀರಿಸಿಕೊಂಡಿದ್ದಾರೆಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿಬಿಟ್ಟಿತು. ಆ ಕ್ಷಣ ಶುರುವಾದ ದೇವಸ್ಥಾನಕ್ಕೆ ಗಂಟುಬಿದ್ದಿರುವ ಧೂರ್ತರ ವಿರುದ್ಧ ಶುರುವಾದ ಪ್ರತಿಭಟನೆ, ಸಾಮಾಜಿಕ ಜಾಲತಾಣದ ಅಭಿಯಾನ ಇನ್ನೂ ನಿಂತಿಲ್ಲ. ಯಕ್ಷ ರಸಿಕರ ಹಾಗೂ ಪಟ್ಲರ ಲಕ್ಷಾಂತರ ಅಭಿಮಾನಿಗಳ ಆಕ್ರೋಶ ಆಸ್ಫೋಟಕ ಹಂತ ತಲುಪುತ್ತಿದೆ!!

ಈ ಅಪಮಾನ ಪ್ರಸಂಗದ ಹಿಂದೆ ಎರಡು ವರ್ಷದ ದ್ವೇಷಾಸೂಯೆಯ ಕರೆ ಅಡಗಿದೆ. ಪಟ್ಲ ಕಳೆದ ಇಪ್ಪತ್ತು ವರ್ಷದಿಂದ ಕಟೀಲು ಮೇಳದಲ್ಲಿ ಭಾಗವತಿಕೆ ಮಾಡುತ್ತಿದ್ದಾರೆ. ಬೇರೆ ಮೇಳಗಳಿಂದ ದೊಡ್ಡ ಮೊತ್ತದ ಸಂಬಳದ ಆಫರ್ ಬಂದರೂ ಭಾವನಾತ್ಮಕ ಸಂಬಂಧದ ಕಟೀಲು ಮೇಳ ಬಿಡಲು ಆತ ಸಿದ್ಧರಿಲ್ಲ. ಕಳೆದೆರಡು ವರ್ಷದಿಂದ ದೇವಳದ ಆಡಳಿತಗಾರರು ಮತ್ತು ಪಟ್ಲರ ಸಂಬಂಧ ಕೆಟ್ಟಿತ್ತು. ದೇವಸ್ಥಾನ ಮತ್ತು ಮೇಳ ತಮ್ಮ ಪಿತ್ರಾರ್ಜಿತ ಆಸ್ತಿಯೆಂಬಂತೆ ಹಾರಾಡುವ ಅರ್ಚಕ ಫ್ಯಾಮಿಲಿ ಹರಿನಾರಾಯಣದಾಸ ಅಸ್ರಣ್ಣ ಮತ್ತು ಆಟದ ಮೇಳದ ದೇವಿಪ್ರಸಾದ್ ಶೆಟ್ಟಿಯ ಅಳಿಯ ಸುಪ್ರಿತ್ ಸೇರಿಕೊಂಡು ಪಟ್ಲರ ವಿರುದ್ಧ ಕಿತಾಪತಿ ಶುರುಹಚ್ಚಿಕೊಂಡಿದ್ದರು. ಇದಕ್ಕವರ ಬಳಿ ಎರಡು ಕಾರಣವಿತ್ತು. ಒಂದು, ಮೇಳದಲ್ಲಿ ಶೋಷಣೆಗೆ ಸಿಲುಕಿರುವ ಕಲಾವಿದರನ್ನು ಪಟ್ಲ ಎತ್ತಿಕಟ್ಟಿ ಆಡಳಿತಗಾರರ ವಿರುದ್ಧ ನಿಲ್ಲಿಸಿದ್ದಾರೆಂಬುದು. ಮತ್ತೊಂದು ತಮ್ಮ ಮೇಳಕ್ಕೆ ಬರುತ್ತಿದ್ದ ದಾನ-ದೇಣಿಗೆ ಪಟ್ಲರ ಫೌಂಡೇಷನ್‍ನಿಂದಾಗಿ ಕಮ್ಮಿಯಾಗುತ್ತಿದೆಯೆಂಬ ಆತಂಕ.

ಕಟೀಲು ಮೇಳದಲ್ಲಿ ಅನ್ಯಾಯಕ್ಕೆ ಒಳಗಾಗಿದ್ದ ಕಲಾವಿದರ ಬೆನ್ನಿಗೆ ಪಟ್ಲ ನಿಂತಿದ್ದು ನಿಜ. ಅದವರ ಸ್ವಭಾವ. ಆತ ಸದಾ ನೊಂದ ಕಲಾವಿದರ ಪಕ್ಷಪಾತಿ. ಕಟೀಲು ಮೇಳದ ಕಲಾವಿದ ಕರ್ಮಚಾರಿಗಳಿಗೆ ಸಿಗುವ ಸಂಬಳ ದಿನಕ್ಕೆ 150-200ರೂ! ಉಳಿದ ಮೇಳದಲ್ಲಿ ಸಾವಿರಗಟ್ಟಲೆ ಸಂಬಳವಿದೆ. ತಮ್ಮ ಬದುಕಿನ ಹಕ್ಕಿಗಾಗಿ ಪ್ರಶ್ನಿಸಿದ ಎಂಟು ಕಲಾವಿದರನ್ನು ಆಡಳಿತಗಾರರು ಯಾವ ಮುಲಾಜೂ ಇಲ್ಲದೆ ಮೇಳದಿಂದ ಹೊರಹಾಕುತ್ತಾರೆ. ಹರಿನಾರಾಯಣದಾಸ ಮತ್ತು ಸುಪ್ರಿತ್‍ನ ಪಾರುಪತ್ಯದ ವಿರುದ್ಧ ಯಾವ ಕಲಾವಿದನೂ ಸೊಲ್ಲೆತ್ತುವಂತೆಯೇ ಇಲ್ಲ. ಹಲವು ವರ್ಷ ಮೇಳದಲ್ಲಿ ದುಡಿದು ರಂಗಸ್ಥಳದಲ್ಲೇ ಬಿದ್ದು ಅಸುನೀಗಿದ ಕಲಾವಿದ ಗೇರುಕಟ್ಟೆ ಗಂಗಯ್ಯರಿಗೆ ಹತ್ತು ವರ್ಷದ ಸಂಬಳವೇ ಕೊಟ್ಟಿರಲಿಲ್ಲ. ಅರವತ್ತು ವರ್ಷಗಳ ಕಾಲ ಮೇಳದಲ್ಲಿದ್ದ ಐತಪ್ಪರಿಗಾದ ಅನ್ಯಾಯ ಘೋರ. ಗಂಗಯ್ಯರ ಕುಟುಂಬಕ್ಕೆ ಹರಿ-ಸುಪ್ರಿತ್ ಪೈಸೆ ಪರಿಹಾರ ಕೊಡಲಿಲ್ಲ. ಆದರೆ ಪಟ್ಲ ಫೌಂಡೇಷನ್ 2 ಲಕ್ಷ ಕೊಡುತ್ತದೆ.

ಮೇಳದಲ್ಲಿರುವ 300-350 ಕಲಾವಿದರನ್ನು ದೇವರ ಭಯದಿಂದ ಜೀತದಾಳುಗಳಾಗಿಸಿಕೊಳ್ಳಲಾಗಿದೆ. ಕಟೀಲು ಮೇಳದವರಿಗೆ ಯಾವ ಭದ್ರತೆಯೂ ಇಲ್ಲ. ತಮಗಾಗುತ್ತಿರುವ ಶೋಷಣೆಯ ಬಗ್ಗೆ ವಜಾ ಆಗಿದ್ದ ಎಂಟು ಕಲಾವಿದರು ಹೈಕೋರ್ಟ್‍ನಲ್ಲಿ ವ್ಯಾಜ್ಯ ಹೂಡಿದ್ದರು. ಮುಜರಾಯಿ ಇಲಾಖೆಗೆ ಸೇರಿದ ಎ-ದರ್ಜೆಯ ಕಟೀಲು ದೇವಸ್ಥಾನದ ಆಟದ ಮೇಳವನ್ನು ಖಾಸಗಿ ಮಂದಿ ಬೇಕಾಬಿಟ್ಟಿಯಾಗಿ ನಡೆಸಿ ದುಡ್ಡು ಮಾಡುತ್ತಿರುವುದನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು. ಈಚೆಗಷ್ಟೇ ಹೈಕೋರ್ಟ್, ಆಟದ ಮೇಳಗಳನ್ನು ಜಿಲ್ಲಾಧಿಕಾರಿ ಉಸ್ತುವಾರಿಯಲ್ಲಿ ನಡೆಸಬೇಕೆಂಬ ಆದೇಶ ನೀಡಿತ್ತು. ಇದರಿಂದ ಹತಾಶರಾಗಿದ್ದ ಹರಿ ಅಸ್ರಣ್ಣ – ಸುಪ್ರಿತ್ ಶೆಟ್ಟಿ ಗ್ಯಾಂಗ್ ಭಾಗವತ ಪಟ್ಲರನ್ನು ಮೇಳದಿಂದ ಓಡಿಸುವ ನಿರ್ಧಾರಕ್ಕೆ ಬಂದಿತ್ತು.

ಕಟೀಲು ದೇವಸ್ಥಾನದ ಆರು ಯಕ್ಷಗಾನ ಮೇಳಗಳಿವೆ. ಇವೆಲ್ಲವೂ ಯಕ್ಷಗಾನ ಪ್ರಿಯೆ ದುರ್ಗಾಪರಮೇಶ್ವರಿ ಪ್ರಿತ್ಯರ್ಥ ಭಕ್ತಾದಿಗಳು ಹೊರುವ ಹರಕೆ ಸೇವೆಯಿಂದ ಆಟ ನಡೆಸುತ್ತವೆ. ಒಂದು ಸೇವೆ ಆಟಕ್ಕೆ ಕಲ್ಲಾಡಿ ಶೆಟ್ಟಿ ಮತ್ತವನ ಅಳಿಯ ಸುಪ್ರಿತ್ 60-70 ಸಾವಿರ ರೂ. ಪಡೆಯುತ್ತಿದ್ದಾರೆ. ಇದರಲ್ಲಿ ಕೇವಲ 5,000ರೂ ಮಾತ್ರ ದೇವಸ್ಥಾನಕ್ಕೆ ಕೊಡುತ್ತಾರೆ. ಪ್ರತಿ ವರ್ಷ ಆಟದ ಸೇವೆಯಿಂದ ಬರುವ ಆಮದಾನಿ ಕಮ್ಮಿ ಕಮ್ಮಿಯೆಂದರೂ 7-8 ಕೋಟಿ. ಇದರಲ್ಲಿ ಅಮ್ಮಮ್ಮಾ ಎಂದರೆ ದೇವಸ್ಥಾನಕ್ಕೆ 1 ಕೋಟಿಯಷ್ಟೇ ಸಿಗುತ್ತದೆ. ಹರಕೆ ಆಟದ ಹೊತ್ತಲ್ಲಿ ಯಕ್ಷಗಾನದ ವೇಷಕ್ಕಿಂತಲೂ ಹೆಚ್ಚು “ಕುಣಿಯುವುದು ಅಸ್ರಣ್ಣಗಳು. ಮೂರ್ನಾಲ್ಕು ಅಸ್ರಣ್ಣಗಳನ್ನು ಹರಕೆ ಹೊತ್ತವರು ರಂಗಸ್ಥಳಕ್ಕೆ ಕರೆತಂದು ಪಾದ ಪೂಜೆ ಮಾಡಬೇಕು; ಸಾವಿರಾರು ರೂ ಪಾದ ಕಾಣಿಕೆ ಅರ್ಪಿಸಬೇಕು.

ಮುಂಬೈ ಮುಂತಾದೆಡೆ ಉದ್ಯಮ ನಡೆಸುವ ಶ್ರೀಮಂತರು ಕಟೀಲು ದೇವಿ ಸನ್ನಿಧಿಯಲ್ಲಿ ಹರಕೆ ಆಟ ಆಡಿಸೋದು ಹೆಚ್ಚು. ಇವರೆಲ್ಲ ಬಾಟ್-ಬಾಟ್ ಕಾಣಿಕೆ ಅಸ್ರಣ್ಣಗಳ ಅಡಿಯಡಿ ಇಡುತ್ತಾರೆ. ಹೀಗೆ ದೇವರ ಹೆಸರಲ್ಲಿ ಅಸ್ರಣ್ಣಗಳು ಆಟದ ಹೊತ್ತಲ್ಲಿ ಪಡೆಯುವ ಕಾಣಿಕೆ ಕೋಟಿಗೂ ಮೀರುತ್ತದೆ!!

ಹರಕೆ ಆಟ ಆಡಿಸುವವರ ಮನೆಗೆ ಅರ್ಚಕರು ಬಂದು ಪೂಜಿಸುವ ಪದ್ಧತಿಯಿದೆ. ಆದರೆ ಶೂದ್ರರ ಮನೆಗೆ ಈ ದೇವರು ಹೋಗೋದಿಲ್ಲ. ಅರ್ಚಕರ ಮನೆಗೆ ಅಥವಾ ದೇವಸ್ಥಾನದ ಒಂದು ಕೋಣೆಯಲ್ಲಿ ಶೂದ್ರ ಭಕ್ತರಿಗಾಗಿ ದೇವರು ಬರುತ್ತಾರೆ. ಅಲ್ಲಿ ಅರ್ಚಕ ಅಸ್ರಣ್ಣಗಳ ಆದರಾತಿಥ್ಯ-ಊಟೋಪಚಾರ-ಕಾಣಿಕೆ-ಇವಕ್ಕೆ 25-30 ಸಾವಿರ ಸುಲಿಗೆ ನಡೆಯುತ್ತದೆ. ಇಂಥ ಲಾಭದಾಯಕ ಸೇವೆ ಆಟದ ಮೇಳಗಳ ಹರಾಜಿಗೆ ಅಸ್ರಣ್ಣಗಳು ಬಿಡುತ್ತಿಲ್ಲ. ಒಂದು ಆಟಕ್ಕೆ 20-25 ಸಾವಿರ ಕೊಟ್ಟು ವಲಮ್‍ನಲ್ಲಿ ಮೇಳ ಪಡೆಯಲು ಹಲವರು ರೆಡಿಯಿದ್ದಾರೆ. ಆದರೆ ತಮ್ಮ ಕರಾಳ ಆಮದನಿಗೆ ಹೊಡೆತಬೀಳುತ್ತದೆಂದು ಅಸ್ರಣ್ಣಗಳು ವಲಾಮ್ ಮಾಡಲು ಬಿಡುತ್ತಿಲ್ಲ. ಆಟದ ಬುಕ್ಕಿಂಗ್‍ನಲ್ಲೂ ಅವ್ಯವಹಾರ.

ಕಟೀಲು ದೇವಸ್ಥಾನವನ್ನು ಗೋಲ್‍ಮಾಲ್‍ನ ಅಡ್ಡೆಮಾಡಿಕೊಂಡಿರುವ ಅಸುರಣ್ಣಗಳ ಕೋಟಿ ಲೂಟಿ ಒಂದೆರಡು ನಮೂನೆಯಲ್ಲ! ಬ್ರಹ್ಮಕಲಶೋತ್ಸವ ಬಂದರಂತೂ ಈ ಭಟ್ಟರಿಗೆ ಸುಗಿಯೋ ಸುಗ್ಗಿ!! ಅರ್ಚಕರಿಂದ ಪ್ರತಿವರ್ಷ ಮೂರ್ನಾಲ್ಕು ಲಕ್ಷ ಕಮಿಷನ್ ದೇವಸ್ಥಾನದಿಂದ ಪಡೆಯುವ ಅಸ್ರಣ್ಣಗಳು ಚಂಡಿಕಾ ಹೋಮದಲ್ಲಿ ಹಗಲುದರೋಡೆ ಮಾಡುತ್ತಿದ್ದಾರೆ. ಒಂದು ದಿನಕ್ಕೆ ನಾಲ್ಕು ಹೋಮ ಮಾಡುತ್ತಾರೆ. ಪ್ರತಿ ಹೋಮಕ್ಕೆ 500-2000 ರೂನಂತೆ ದೇವಸ್ಥಾನಕ್ಕೆ ಕೊಟ್ಟರೆ ಉಳಿದದ್ದು ಅಸ್ರಣ್ಣಗಳ ಜೋಳಿಗೆಗೆ!!

ದೇವಸ್ಥಾನದ ಆವಾರವನ್ನು ಮಾಫಿಯಾ ಅಡ್ಡೆಯಾಗಿಸಿಕೊಂಡಿರುವ ಅಸ್ರಣ್ಣಗಳ ದುಡ್ಡಿನ ದಾಹಕ್ಕೆ ದುರ್ಬಲ ವ್ಯಾಪಾರಸ್ಥರೆಲ್ಲ ಕಂಗಾಲಾಗಿ ಹೋಗಿದ್ದಾರೆ. ಹಣ್ಣು-ಕಾಯಿ-ಹೂವಿನ ಅಂಗಡಿಯವರೂ ಹರಿ ಅಸ್ರಣ್ಣ ಗ್ಯಾಂಗಿಗೆ ಹಫ್ತಾ ಕೊಡಬೇಕು. ದೇವಸ್ಥಾನಕ್ಕೆ ಬರುವ ಲೋಡುಗಟ್ಟಲೇ ಕಾಯಿ ಮಾರಿ ತಿಂತಾರೆ. ಹಣವಂತರ ಮಕ್ಕಳ ಮದುವೆ ದೇವಸ್ಥಾನದಲ್ಲಿ ನಡೆಸುವ ಬಿಸ್ನೆಸ್ ಲಕ್ಷದ ಲೆಕ್ಕದ್ದು. ದೇವಿಗೆ ಬರುವ ಬೆಲೆ ಬಾಳುವ ಸೀರೆಗಳನ್ನು ಅಸ್ರಣ್ಣ ಕುಟುಂಬದ ಹೆಣ್ಣುಮಕ್ಕಳು ರಾಜಾರೋಷವಾಗಿ ಉಟ್ಟು ಮೆರೆಯತ್ತಾರೆ. ನವರಾತ್ರಿ ಹೊತ್ತಲ್ಲಿ ದೇವರ ಸೀರೆ ವಿತರಿಸುವಾಗಲೂ ಬ್ರಾಹ್ಮಣಿಕೆ ತಾರತಮ್ಯ ನಡೆಯುತ್ತಿದೆ. ವಿಪ್ರ ಸಮುದಾಯದ ಹೆಂಗಸರಿಗೆ ಜರತಾರಿ ಸೀರೆ ಕೊಟ್ಟರೆ ಕಡಿಮೆ ದರ್ಜೆಯ ಅರ್ಧ ಸೀರೆ ತುಂಡು ಶೂದ್ರ ಹೆಂಗಸರಿಗೆ ಕೊಡುತ್ತಾರೆ. ಆದಾಯ ತೆರಿಗೆ ಅಧಿಕಾರಿಗಳಿಗೆ ಅಸ್ರಣ್ಣಗಳ ಅಕ್ರಮ ಸಂಪತ್ತು ಸವಾಲಿನಂತಿದೆ!!

ಮುಜರಾಯಿ ಇಲಾಖೆಗೆ ಕಾನೂನುನಿಷ್ಠ ಐಎಎಸ್ ರೋಹಿಣಿ ಸಿಂಧೂರಿ ಪ್ರಭಾರಿ ಕಮಿಷನರ್ ಆಗಿಬಂದಾಗ ಕಟೀಲು ದೇವಳದ ಅವ್ಯವಹಾರಕ್ಕೆ ಒಂದಿಷ್ಟು ಕಡಿವಾಣ ಹಾಕಿದ್ದರು. ಆದರೆ ಬಹಳ ವರ್ಷದಿಂದ ಮುಜರಾಯಿ ಕಮಿಷನರ್ ಕುರ್ಚಿಗೆ ಫೆವಿಕಾಲ್ ಹಾಕಿ ಕುಳಿತಿರುವ ಶೈಲಜಾ ಎಂಬ ಭ್ರಷ್ಟೆ ಅಸ್ರಣ್ಣಗಳ ದೋಖಾಬಾಜಿಗೆ ನೆರವು ನೀಡುತ್ತಿದ್ದಾರೆ. ಹಾಲಿ ಅಸ್ರಣ್ಣ ಪ್ರತಿ ತಿಂಗಳು ಶೈಲಜಾ ಮೇಡಂ ಚೇಂಬರ್‍ನಲ್ಲಿ ಠಳಾಯಿಸೋದು ಕಟೀಲು ದೇವಳದಲ್ಲಿನ ದಗಲುಬಾಜಿ ದಂಧೆಗೆಲ್ಲಾ ಸಾಕ್ಷಿಯಂತಿದೆ!! ಜನಪ್ರಿಯ ಭಾಗವತ ಪಟ್ಲ ಶೆಟ್ಟಿಗೆ ರಂಗಸ್ಥಳದಲ್ಲೇ ಅವಮಾನಿಸಲಾದ ಪ್ರಸಂಗ ಅಸುರಣ್ಣಗಳ ಅವಸಾನಕ್ಕೆ ನಾಂದಿಯಾದೀತಾ? ಹಾಗಾಗಲೆಂಬುದೇ ಕಟೀಲು ದೇವಿ ಭಕ್ತರ ಬೇಡಿಕೆ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಹೊತ್ತಿ ಉರಿಯುತ್ತಿರುವ ಮಣಿಪುರ’: ಶತಮಾನದ ಬೆಂಕಿಗೆ ತುಪ್ಪ ಸುರಿದ ಬಿಜೆಪಿಯ ಕೋಮುರಾಜಕಾರಣ

ಭಾರತದ ಈಶಾನ್ಯ ರಾಜ್ಯ ಮಣಿಪುರ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಶತಮಾನಗಳಿಂದ ಹೊಗೆಯಾಡುತ್ತಿದ್ದ ಹಗೆತನಕ್ಕೆ ಕೋಮುರಾಜಕಾರಣದ ಬಣ್ಣ ಬಳಿದ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಮಣಿಪುರದ ಜನರತ್ತ ತಿರುಗಿಯೂ ನೋಡುತ್ತಿಲ್ಲ. 2023ರಲ್ಲಿ ಭುಗಿಲೆದ್ದ ಉದ್ವಿಗ್ನತೆ...

ಮಧ್ಯಪ್ರದೇಶ| ದಲಿತ ದಂಪತಿಗೆ ಹನುಮಾನ್ ದೇಗುಲ ಪ್ರವೇಶ ನಿರಾಕರಣೆ; ಸಾಮಾಜಿಕ ಬಹಿಷ್ಕಾರ

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಹನುಮಾನ್ ದೇವಸ್ಥಾನಕ್ಕೆ ನವವಿವಾಹಿತ ದಲಿತ ದಂಪತಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಗ್ರಾಮದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ. ಈ ಘಟನೆಯು ಜಾತಿ ಆಧಾರಿತ ತಾರತಮ್ಯದ ಕುರಿತು ಕಳವಳ...

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...