Homeಕರ್ನಾಟಕಉನ್ನತ ಶಿಕ್ಷಣ ಸಚಿವರ ಎಫ್‌ಬಿ ಖಾತೆಯಲ್ಲಿ ‘ಉತ್ತಮ ಆಡಳಿತ ದಿನ’ ಲೈವ್‌: ಕಮೆಂಟ್‌ ಬಾಕ್ಸ್‌ನಲ್ಲಿ ಅತಿಥಿ...

ಉನ್ನತ ಶಿಕ್ಷಣ ಸಚಿವರ ಎಫ್‌ಬಿ ಖಾತೆಯಲ್ಲಿ ‘ಉತ್ತಮ ಆಡಳಿತ ದಿನ’ ಲೈವ್‌: ಕಮೆಂಟ್‌ ಬಾಕ್ಸ್‌ನಲ್ಲಿ ಅತಿಥಿ ಉಪನ್ಯಾಸಕರ ಅಳಲು

- Advertisement -
- Advertisement -

ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ್‌ ನಾರಾಯಣ್ ಅವರ ಫೇಸ್‌ಬುಕ್ ಖಾತೆಯ ಮೂಲಕ ಗುಡ್‌ ಗವರ್ನೆನ್ಸ್‌ ಡೇ (ಉತ್ತಮ ಆಡಳಿತ ದಿನ) ಕಾರ್ಯಕ್ರಮದ ನೇರಪ್ರಸಾರವಾಗುತ್ತಿದ್ದರೆ, ಅತಿಥಿ ಉಪನ್ಯಾಸರು ಕಮೆಂಟ್ ಬಾಕ್ಸ್‌ನಲ್ಲಿ ಅಳಲು ತೋಡಿಕೊಂಡಿದ್ದಾರೆ.

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಗೌರವಾರ್ಥ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಶನಿವಾರ ಅತ್ಯುತ್ತಮ ಆಡಳಿತ ದಿನವನ್ನು ಉನ್ನತ ಶಿಕ್ಷಣ ಇಲಾಖೆ, ಕೌಶಾಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ನಡೆಸಲಾಗಿದೆ. ಅಶ್ವತ್‌ ನಾರಾಯಣ್ ಅವರು ತಮ್ಮ ಎಫ್‌ಬಿ ಖಾತೆಯಲ್ಲಿ ಕಾರ್ಯಕ್ರಮವನ್ನು ಲೈವ್ ಮಾಡಿದ್ದಾರೆ.

‘ಉತ್ತಮ ಆಡಳಿತ ದಿನ’ ಆಚರಣೆಯನ್ನು ಅಣಕಿಸಿದಂತೆ ಭಾಸವಾಗುವ ರೀತಿ ಕಮೆಂಟ್‌ಗಳು ದಾಖಲಾಗಿವೆ. ಅತಿಥಿ ಉಪನ್ಯಾಸಕರಿಗೆ ಆಗುತ್ತಿರುವ ಅನ್ಯಾಯದ ಕುರಿತು ಉನ್ನತ ಶಿಕ್ಷಣ ಸಚಿವರು ಹೆಚ್ಚಿನ ಗಮನ ಹರಿಸುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ. ಸುಮಾರು ಎರಡು ಸಾವಿರಕ್ಕೂ ಹೆಚ್ಚು ಕಮೆಂಟ್‌ಗಳಾಗಿವೆ.

ಮಹಾಲಕ್ಷ್ಮಿ ನಾಯ್ಡು ಎಂಬವರು ಕಮೆಂಟ್‌ ಮಾಡಿದ್ದು, “ಉತ್ತಮ ಆಡಳಿತವು ಮಾನವ ಹಕ್ಕುಗಳ ಸಾಕ್ಷಾತ್ಕಾರವನ್ನೂ ಒಳಗೊಂಡಿರುತ್ತದೆ. ದಯವಿಟ್ಟು ಅತಿಥಿ ಅಧ್ಯಾಪಕರಿಗೆ ನ್ಯಾಯವನ್ನು ನೀಡಿ. ಅದು ನಮ್ಮ ಮಾನವ ಹಕ್ಕು. ಉತ್ತಮ ಆಡಳಿತದ ಬಗ್ಗೆ ಅಟಲ್ ಜಿ ಅವರ ಅಭಿಪ್ರಾಯಗಳನ್ನು ನಾವು ಗೌರವಿಸುತ್ತೇವೆ. ಅತಿಥಿ ಉಪನ್ಯಾಸಕರನ್ನು ಖಾಯಂ ನೇಮಕಾತಿ ಮಾಡಿಕೊಂಡರೆ ಒತ್ತಡ ಕಡಿಮೆಯಾಗಲಿದೆ. ಅತಿಥಿ ಉಪನ್ಯಾಸಕರು ಸರ್ಕಾರಕ್ಕೆ ಸಾಕಷ್ಟು ಹಣವನ್ನು ಉಳಿಸಿದ್ದಾರೆ. ಈಗಲಾದರೂ ನಮ್ಮ ಸೇವೆಗೆ ನ್ಯಾಯ ಸಿಗಬೇಕು” ಎಂದು ಆಗ್ರಹಿಸಿದ್ದಾರೆ.

“ನೀವು ಮಂತ್ರಿ ಸ್ಥಾನದಲ್ಲಿದ್ದೀರಿ. ನಮಗೆ ನ್ಯಾಯ ಒದಗಿಸಿಕೊಡಿ. ಅತಿಥಿ ಉಪನ್ಯಾಸಕರು ಬಹಳ ಕಷ್ಟದಲ್ಲಿದ್ದೇವೆ” ಎಂದು ಶಿವ ಅಮ್ಮು ಭಾರ್ಗವಿ ಎಂಬವರು ಕೋರಿದ್ದಾರೆ. “ದಯವಿಟ್ಟು ಸೂಕ್ತ ವೇತನವನ್ನು ನೀಡಿ ಅತಿಥಿ ಉಪನ್ಯಾಸಕರ ಕಷ್ಟಗಳನ್ನು ಬಗೆಹರಿಸಿ” ಎಂದು ಅಂಬರೀಶ್ ಗೌರಿ ಎಂಬವರು ಕಮೆಂಟ್ ಮಾಡಿದ್ದಾರೆ.

“ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜು ಅತಿಥಿ ಉಪನ್ಯಾಸಕರಿಗೆ ಉದ್ಯೋಗ ಭದ್ರತೆ ನೀಡಬೇಕು. ನಮ್ಮನ್ನು ಖಾಯಂಗೊಳಿಸಬೇಕು. ಸಂಬಳವನ್ನು ಹೆಚ್ಚಿಸಬೇಕು” ಎಂದು ಮತ್ತೊಬ್ಬರು ಆಗ್ರಹಿಸಿದ್ದಾರೆ.

ಇದನ್ನೂ ಓದಿರಿ: ‘ನೀವು ಬಿಜೆಪಿ ಏಜೆಂಟಾ?’- ಕನ್ಹಯ್ಯ ಪ್ರಶ್ನೆಗಳಿಗೆ ಪತ್ರಕರ್ತ ತಬ್ಬಿಬ್ಬು; ಕ್ಷಮೆಯಾಚಿಸಿದ ವರದಿಗಾರ

ಅತಿಥಿ ಉಪನ್ಯಾಸಕರ ನಿರಂತರ ಹೋರಾಟ

ಸೇವಾ ಅಭದ್ರತೆ, ವೇತನ ತಾರತಮ್ಯ ಖಂಡಿಸಿ ಅತಿಥಿ ಉಪನ್ಯಾಸಕರು ಮುಷ್ಕರ ನಡೆಸಿದ್ದಾರೆ. ಬೆಳಗಾವಿ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾವಿರಾರು ಅತಿಥಿ ಉಪನ್ಯಾಸಕರು ಬೆಳಗಾವಿಯಲ್ಲಿ ಸೇರಿ ಪ್ರತಿಭಟಿಸಿದ್ದಾರೆ.

“ಅತಿಥಿ ಉಪನ್ಯಾಸಕರನ್ನು ಸರ್ಕಾರ ನೇಮಕ ಮಾಡಿಕೊಳ್ಳುತ್ತದೆ. ನಿಯಮದ ಪ್ರಕಾರ ಸರ್ಕಾರ ನಮಗೆ ಹತ್ತು ತಿಂಗಳು ಕೆಲಸ ಕೊಡಬೇಕು. ಆದರೆ ಸೆಮಿಸ್ಟರ್‌ ವ್ಯವಸ್ಥೆಯಿಂದಾಗಿ ನಮಗೆ ಮೂರು + ಮೂರು ತಿಂಗಳು ಕೆಲಸ ಸಿಗುತ್ತಿದೆ. ಅಂದರೆ ವರ್ಷಕ್ಕೆ ಆರು ತಿಂಗಳು ಮಾತ್ರ ಕೆಲಸ ನೀಡುತ್ತಾರೆ. ಬೇರೆ ರಾಜ್ಯಗಳಲ್ಲಿ ಯುಜಿಸಿ ನಿರ್ದೇಶನದಂತೆ ಅತಿಥಿ ಉಪನ್ಯಾಸಕರಿಗೆ ಉತ್ತಮ ಸಂಬಳ ನೀಡಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಕೇವಲ 11ರಿಂದ 13 ಸಾವಿರ ರೂ. ಸಂಬಳ ಕೊಡುತ್ತಿದ್ದಾರೆ” ಎಂದು ಅತಿಥಿ ಉಪನ್ಯಾಸಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

“ರಾಜ್ಯದಲ್ಲಿನ 430 ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಸುಮಾರು 14,500ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದೇವೆ. ನಮಗೆ ಕಡಿಮೆ ಸಂಬಳ ಕೊಡುವುದಷ್ಟೇ ಅಲ್ಲದೇ ಮೂರು ತಿಂಗಳಾದರೂ ಸಂಬಳವನ್ನು ನೀಡುವುದಿಲ್ಲ. ನಮಗೆ ಯಾವುದೇ ಸೇವಾ ಭದ್ರತೆ ಕೂಡ ಇಲ್ಲ. ಖಾಯಂ ಉಪನ್ಯಾಸಕರು ಸೇವೆಗೆ ಬಂದಾಗ ಬೋಧನ ಕಾರ್ಯಭಾರ ಕಡಿಮೆಯಾಗಿ ನಮ್ಮನ್ನು ಕೆಲಸದಿಂದ ತೆರವು ಮಾಡಲಾಗುತ್ತದೆ. ಜೊತೆಗೆ ನಮಗೆ ಪಿ.ಎಫ್‌. ಆಗಲೀ, ಇಎಸ್‌ಐ ಸೌಲಭ್ಯವೂ ಇಲ್ಲ” ಎಂದು ಅಳಲು ತೋಡಿಕೊಂಡಿದ್ದಾರೆ.

ದೆಹಲಿ, ಪಶ್ಚಿಮ ಬಂಗಾಳ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಿದ್ದಾರೆ. ಕೆಲವು ಕಡೆ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡಿದ್ದಾರೆ. ಕರ್ನಾಟಕ ಸರ್ಕಾರ ಈ ರೀತಿಯ ಉದಾರತೆ ಹಾಗೂ ಮಾನವೀಯತೆಯನ್ನು ತೋರಬೇಕಿದೆ. ಸಾಕಷ್ಟು ಅತಿಥಿ ಉಪನ್ಯಾಸಕರು ಆರೋಗ್ಯ ಸಮಸ್ಯೆಗಳಿಂದ ಮೃತಪಟ್ಟಿದ್ದಾರೆ. ಅನೇಕರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಕೆಲವರು ಆರ್ಥಿಕ ಪರಿಸ್ಥಿತಿ ಹದಗೆಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಅತಿಥಿ ಉಪನ್ಯಾಸಕರ ಅಳಲು.

ಮೊದಲೆಲ್ಲ ಶೈಕ್ಷಣಿಕ ವರ್ಷ ಆರಂಭವಾದಾಗಿನಿಂದ ಮುಗಿಯುವವರೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿತ್ತು. ಅಂದರೆ ವರ್ಷಕ್ಕೆ ಒಂದು ಬಾರಿ ಆದೇಶ ಹೊರಡಿಸಲಾಗುತ್ತಿತ್ತು. ಆದರೆ ಒಂದು ವರ್ಷದಿಂದೀಚೆಗೆ ಪ್ರತಿ ಸೆಮಿಸ್ಟರ್‌‌ ಬಳಿಕ ಆದೇಶ ನೀಡಲಾಗುತ್ತಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರವಾಗಿಸಿದೆ.

ಇತರೆ ಸರ್ಕಾರ ಉದ್ಯೋಗಕ್ಕಾಗಿ ಅರ್ಜಿಗಳನ್ನು ಸರ್ಕಾರ ಆಹ್ವಾನಿಸಿದರೂ ಅನೇಕ ಅತಿಥಿ ಉಪನ್ಯಾಸಕರು ವಯೋಮಿತಿಯನ್ನು ಮೀರಿದ್ದು, ಅರ್ಜಿ ಹಾಕಲೂ ಅವಕಾಶ ಇಲ್ಲ. ಅನೇಕ ಅತಿಥಿ ಉಪನ್ಯಾಸಕರು ನೆಟ್‌, ಸ್ಲೆಟ್‌ ಮಾಡಿಕೊಂಡಿದ್ದಾರೆ. ಇಷ್ಟು ಅರ್ಹತೆಗಳು ಇದ್ದರೂ ಸೇವಾ ಭದ್ರತೆ ನೀಡುತ್ತಿಲ್ಲ. ಖಾಯಂಗೊಳಿಸುತ್ತಿಲ್ಲ ಎನ್ನುತ್ತಾರೆ ಉಪನ್ಯಾಸಕರು.


ಇದನ್ನೂ ಓದಿರಿ: ಶಾಲೆಗೆ ನುಗ್ಗಿ ಕ್ರಿಸ್‌ಮಸ್ ಆಚರಿಸದಂತೆ ಬೆದರಿಸಿದ ಬಲಪಂಥೀಯರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

7 COMMENTS

  1. Sir please save the guest lectures life we are suffering a lot bcz of low salary and no job security and our family becoming helpless plz do the needful sir

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...