ಟೋಯಿಂಗ್ ವಿಚಾರವಾಗಿ ಟ್ರಾಫಿಕ್ ಎಎಸ್ಐ ವಿಕಲಾಂಗ ಮಹಿಳೆ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರದಲ್ಲಿ ವಾಹನಗಳ ಟೋಯಿಂಗ್ ಮಾಡುವುದನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ ಎಂದು ವರದಿಯಾಗಿದೆ.
ಜಂಟಿ ಆಯುಕ್ತ ಬಿ.ಆರ್.ರವಿಕಾಂತೇಗೌಡ ನೇತೃತ್ವದಲ್ಲಿ ಅರಮನೆ ಮೈದಾನದಲ್ಲಿ ಸೋಮವಾರ ಸಭೆ ನಡೆಸಲಾಗಿದ್ದು, ನಗರದ ಎಲ್ಲ ಸಂಚಾರ ಠಾಣೆಗಳ ಎಎಸ್ಐ, ಪಿಎಸ್ಐ, ಎಸಿಪಿ, ಡಿಸಿಪಿ, ಇನ್ಸ್ಪೆಕ್ಟರ್ಗಳ ಸಭೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ವಿಕಲಾಂಗ ಮಹಿಳೆಯ ಮೇಲೆ ಟ್ರಾಫಿಕ್ ಎಎಸ್ಐ ಹಲ್ಲೆ: ಗೃಹ ಸಚಿವರ ಸೂಚನೆ ಬೆನ್ನಲ್ಲೇ ಅಧಿಕಾರಿ ಅಮಾನತು
ಟೋಯಿಂಗ್ ವ್ಯವಸ್ಥೆ ಸುಧಾರಣೆ ಹಾಗೂ ಜನರೊಂದಿಗೆ ಪೊಲೀಸರ ವರ್ತನೆ ಕುರಿತು, ಸಂಚಾರ ಸುಗಮದ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ. ಜನರ ವಿರೋಧ ವ್ಯಕ್ತವಾಗಿದ್ದರ ಹಿನ್ನೆಲೆಯಲ್ಲಿ ಸೋಮವಾರ ಟೈಗರ್ ಟೋಯಿಂಗ್ ವಾಹನಗಳು ನಗರದಲ್ಲಿ ಓಡಾಡಿಲ್ಲವೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಬೆಂಗಳೂರು: ವಿಕಲಾಂಗ ಮಹಿಳೆಯ ಮೇಲೆ ಟ್ರಾಫಿಕ್ ಎಎಸ್ಐ ಹಲ್ಲೆ; ಮಹಿಳೆಯ ಮೇಲೆಯೇ ಪ್ರಕರಣ ದಾಖಲು!
ವಾಹನವನ್ನು ಟೋಯಿಂಗ್ ಮಾಡಿದ್ದನ್ನು ಪ್ರಶ್ನಿಸಿದ ವಿಕಲಾಂಗ ಮಹಿಳೆಯೊಬ್ಬರು ಎಎಸ್ಐ ಅವರನ್ನು ಪ್ರಶ್ನಿಸಿ, ಕಲ್ಲಿನಿಂದ ಹೊಡೆದಿದ್ದಾರೆ. ಇದಕ್ಕೆ ಕುಪಿತಗೊಂಡ ಎಎಸ್ಐ ಮಹಿಳೆಗೆ ಬೂಟುಗಾಲಿನಿಂದ ಒದ್ದು, ಅವಾಚ್ಯ ಶಬ್ಧ ಬಳಸಿ ಅವರನ್ನು ಥಳಿಸಿದ್ದರು. ಈ ವೀಡಿಯೋ ಎರಡು ದಿನಗಳಿಂದ ವೈರಲ್ ಆಗಿದೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾಗಿ ಅಂಗವಿಕಲ ಮಹಿಳೆಯನ್ನು ಎಸ್.ಜೆ. ಪಾರ್ಕ್ ಪೊಲೀಸ್ ವಶಕ್ಕೆ ನೀಡಲಾಗಿತ್ತು.
ವಿಕಲಾಂಗ ಮಹಿಳೆಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ ಬೆಂಗಳೂರು ಟ್ರಾಫಿಕ್ ಪೊಲೀಸ್
Bangalore Traffic Police inhumanly assaulting a woman with disabilities@blrcitytraffic @jointcptraffic @CPBlr @ACP_TrafficEast @DCPTrEastBCP @DCPSouthBCP @DCPTrWestBCP @halairporttrfps @JnanendraAraga pic.twitter.com/IQa9QVtGlX— Baapu Ammembala (@BaapuAmmembala) January 29, 2022
ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಮೇಲೆ ಹಲ್ಲೆ ಮಾಡಿದ ಹಲಸೂರು ಠಾಣೆ ಎಎಸ್ಐ ನಾರಾಯಣ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ತಕ್ಷಣಕ್ಕೆ ಜಾರಿಗೆ ಬರುವಂತೆ ಜಂಟಿ ಆಯುಕ್ತ ಬಿ.ಆರ್.ರವಿಕಾಂತೇಗೌಡ ಆದೇಶ ನೀಡಿದ್ದರು. ಅಲ್ಲದೇ ಪ್ರಕರಣದ ಬಗ್ಗೆ ಇಲಾಖೆ ವಿಚಾರಣೆ ನಡೆಸುವುದಾಗಿ ಭಾನುವಾರ ತಿಳಿಸಿದ್ದಾರೆ.
ಈ ಘಟನೆ ಬೆನ್ನಲ್ಲೇ ಟೋಯಿಂಗ್ ಹೆಸರಲ್ಲಿ ಹಣ ವಸೂಲಿ, ಭ್ರಷ್ಟಾಚಾರ, ದಬ್ಬಾಳಿಕೆ ನಡೆಸುತ್ತಿರುವುದಾಗಿ ಪೊಲೀಸರು ಹಾಗೂ ಖಾಸಗಿ ಸಂಸ್ಥೆ ವಿರುದ್ಧ ಸಾರ್ವಜನಿಕರು ಆರೋಪಿಸಿದ್ದಾರೆ.
ಇದನ್ನೂ ಓದಿ: ಟೋಯಿಂಗ್ ವ್ಯವಸ್ಥೆಯಲ್ಲಿನ ಲೋಪದೋಷ ಸರಿಪಡಿಸಲು ಕ್ರಮ: ಸಿಎಂ ಬಸವರಾಜ ಬೊಮ್ಮಾಯಿ