Homeಕರ್ನಾಟಕಸಂವಿಧಾನ ವಿರೋಧಿ ಚರ್ಚಾ ಸ್ಪರ್ಧೆ ವಿವಾದ: ವಿಇಎಸ್‌ ಶಾಲೆ ತಪ್ಪೊಪ್ಪಿಗೆ

ಸಂವಿಧಾನ ವಿರೋಧಿ ಚರ್ಚಾ ಸ್ಪರ್ಧೆ ವಿವಾದ: ವಿಇಎಸ್‌ ಶಾಲೆ ತಪ್ಪೊಪ್ಪಿಗೆ

ಆರು ಅಂಶಗಳನ್ನು ಪತ್ರದಲ್ಲಿ ಪ್ರಸ್ತಾಪಿಸಿರುವ ಶಾಲೆಯು, ‘ಸಂವಿಧಾನ ಅರಿವು’ ಕಾರ್ಯಕ್ರಮ ಆಯೋಜಿಸುವುದಾಗಿಯೂ, ಪ್ರತಿದಿನ ಚಾಚೂತಪ್ಪದೇ ಪ್ರಸ್ತಾವನೆಯನ್ನು ಓದುವುದಾಗಿಯೂ ತಿಳಿಸಿದೆ.

- Advertisement -
- Advertisement -

ಸಂವಿಧಾನ ವಿರೋಧಿ ಚರ್ಚಾ ಸ್ಪರ್ಧೆಯನ್ನು ಆಯೋಜಿಸಿ ವಿವಾದ ಸೃಷ್ಟಿಸಿದ್ದ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವಿಇಎಸ್ ಮಾಡೆಲ್ ಕಾನ್ವೆಂಟ್‌ ಶಾಲೆಯು ಕೊನೆಗೂ ತಪ್ಪೊಪ್ಪಿಕೊಂಡಿದೆ.

ಈ ಸಂಬಂಧ ‘ಸಂವಿಧಾನ ಸಂರಕ್ಷಣಾ ಐಕ್ಯತಾ ಸಮಿತಿ’ಗೆ ಪತ್ರ ಬರೆದಿರುವ ಶಾಲೆಯು, ‘ಸಂವಿಧಾನ ಅರಿವು’ ಕಾರ್ಯಕ್ರಮವನ್ನು ಆಯೋಜಿಸುವುದಾಗಿ ತಿಳಿಸಿದೆ.

“ವಿಇಎಸ್‌ ಶಾಲೆಯಲ್ಲಿ ಸಂವಿಧಾನ ವಿರೋಧಿ ಚರ್ಚಾ ಸ್ಪರ್ಧೆಯನ್ನು ಆಯೋಜಿಸಿ, ವಿವಾದ ಸೃಷ್ಟಿಸಲಾಗಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಸಂವಿಧಾನ ಸಂರಕ್ಷಣಾ ಐಕ್ಯತಾ ಸಮಿತಿ ದೂರು ನೀಡಿತ್ತು.

ಗಣರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಇಂಗ್ಲಿಷ್‌ ಚರ್ಚಾ ಸ್ಪರ್ಧೆಯಲ್ಲಿ ಸಂವಿಧಾನಕ್ಕೆ ಅಗೌರವ, ಅಪನಂಬಿಕೆ ತೋರುವ ರೀತಿಯಲ್ಲಿ ವಿಷಯವನ್ನು ನೀಡಲಾಗಿತ್ತು. ‘72 years of Bharathiya Samvidhana/Indian Constitution has reached expiry Date’ (72 ವರ್ಷಗಳ ಭಾರತ ಸಂವಿಧಾನದ ಅವಧಿ ಮುಗಿದಿದೆ) ಎಂಬ ವಿಷಯವನ್ನು ನೀಡಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು.

ಇದನ್ನೂ ಓದಿರಿ: ಬೆಂಗಳೂರು ವಿವಿ: ಅಂಬೇಡ್ಕರ್‌‌ ಫೋಟೋ ತೆರವು ಖಂಡಿಸಿ ಪ್ರತಿಭಟಿಸುವಾಗ ಎಬಿವಿಪಿ ಹಸ್ತಕ್ಷೇಪ; ಲಾಠಿಚಾರ್ಜ್

ವಿವಾದದ ಕುರಿತು ಶಾಲೆಯ ಪ್ರತಿಕ್ರಿಯೆ ಪಡೆಯಲು ‘ನಾನುಗೌರಿ.ಕಾಂ’ ಪ್ರಯತ್ನಿಸಿತ್ತು. ಆದರೆ ಯಾವುದೇ ಪ್ರತಿಕ್ರಿಯೆ ಶಾಲೆಯ ವತಿಯಿಂದ ಬಂದಿರಲಿಲ್ಲ. ರಾಯಚೂರು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಅಂಬೇಡ್ಕರ್‌ ಫೋಟೋವನ್ನು ಗಣರಾಜ್ಯೋತ್ಸವ ಧ್ವಜಾರೋಹಣದ ವೇಳೆ ತೆರವುಗೊಳಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ರಾಯಚೂರು ಪ್ರಕರಣದ ಜೊತೆಗೆ ವಿಇಎಸ್ ಶಾಲೆಯಲ್ಲಾದ ಸಂವಿಧಾನ ವಿರೋಧಿ ಕೆಲಸವು ಟೀಕೆಗೆ ಒಳಗಾದ ಬೆನ್ನಲ್ಲೇ ಶಾಲೆಯ ಅಧಿಕೃತ ಹೇಳಿಕೆ ಹೊರಬಿದ್ದಿದೆ.

ಸಂವಿಧಾನ ಸಂರಕ್ಷಣಾ ಐಕ್ಯತಾ ಸಮಿತಿಯ (ಕರ್ನಾಟಕ) ಪ್ರಧಾನ ಸಂಚಾಲಕರಿಗೆ, ರಾಜ್ಯ ಸಂಚಾಲಕರುಗಳಿಗೆ, ಪತ್ರ ಬರೆದಿರುವ ಶಾಲೆಯು ಆರು ಅಂಶಗಳನ್ನು ಪ್ರಸ್ತಾಪಿಸಿದೆ.

“ನಮ್ಮ ಶಾಲೆಯಲ್ಲಿ ಜ.24ರಂದು ಹಮ್ಮಿಕೊಳ್ಳಲಾಗಿದ್ದ ಆಂಗ್ಲ ಚರ್ಚಾಸ್ಪರ್ಧೆಗೆ “72 years of Bharathiya Samvidana/Indian Constitution has it reached expiry date” ಎಂಬ ವಿಷಯವನ್ನು ನೀಡಲಾಗಿತ್ತು. ಇದರಿಂದ ಸಾರ್ವಜನಿಕರಿಂದ, ತಮ್ಮ ಸಮಿತಿಯಿಂದ ಆಕ್ಷೇಪಣೆ ಬಂದ ಮೇಲೆ ನಮಗೆ ನಮ್ಮ ತಪ್ಪಿನ ಅರಿವಾಗಿದೆ. ಈ ತಪ್ಪಿಗಾಗಿ ನಮ್ಮ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದವು ತಮ್ಮ ಸಮಿತಿಗೆ, ಕರ್ನಾಟಕದ ಜನತೆಗೆ ಬೇಷರತ್‌ ಕ್ಷಮೆ ಕೇಳುತ್ತದೆ” ಎಂದು ತಿಳಿಸಿದೆ.

“ನಮ್ಮ ತಪ್ಪಿನ ಅರಿವಿನ ಕುರಿತು ಪತ್ರಿಕಾ ವರದಿಯನ್ನು ಸಹ ಬಿಡುಗಡೆಗೊಳಿಸುತ್ತೇವೆ. ಸಂವಿಧಾನಕ್ಕೆ ಅಪಚಾರವೆಸಗುವ ಇಂಥ ವಿಷಯವನ್ನು ಚರ್ಚೆಗೆ ನೀಡಿದ್ದ ನಮ್ಮ ಶಾಲಾ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಜರುಗಿಸುತ್ತೇವೆ” ಎಂದು ಹೇಳಿದೆ.

“ನಮ್ಮ ಶಾಲೆಯು ಭಾರತದ ಸಂವಿಧಾನವನ್ನು ಸಂಪೂರ್ಣ ಗೌರವಿಸುತ್ತದೆ. ಸಂವಿಧಾನದ ಘನತೆಯನ್ನು ಎತ್ತಿ ಹಿಡಿಯುವಂತಹ ಕಾರ್ಯವನ್ನು ಮಾಡುತ್ತದೆ ಎಂಬುದನ್ನು ಈ ಮೂಲಕ ಸೃಷ್ಟೀಕರಿಸುತ್ತಾ ಇದಕ್ಕೆ ಪುರಕವಾಗಿ ಇದೇ ಫೆಬ್ರವರಿ ತಿಂಗಳಲ್ಲಿ ಒಂದು ದಿನ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿ ವರ್ಗಕ್ಕೆ ಸಂವಿಧಾನ ಅರಿವು ಕಾರ್ಯಕ್ರಮವನ್ನು ಏರ್ಪಡಿಸುತ್ತೇವೆ. ತಮ್ಮ ಸಮಿತಿಯವರ ಸಲಹೆಯಂತೆ ಸಂವಿಧಾನ ತಜ್ಞರನ್ನು ಅತಿಥಿಗಳಾಗಿ ಆ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತೇವೆ. ಅವರ ಮೂಲಕ ಸಂವಿಧಾನ ಅರಿವು ಮೂಡಿಸುತ್ತೇವೆ” ಎಂದು ಸ್ಪಷ್ಟನೆ ನೀಡಲಾಗಿದೆ.

“ಶಿಕ್ಷಣ ಇಲಾಖೆಯು ಹೊರಡಿಸಿರುವ ಸುತ್ತೋಲೆಯ ಆದೇಶದಂತೆ ಪ್ರತಿದಿನ ಶಾಲೆಯಲ್ಲಿ ಪ್ರಾರ್ಥನೆಯ ವೇಳೆ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಸಂವಿಧಾನದ ಪೀಠಿಕೆಯನ್ನು ಇಂಗ್ಲಿಷ್‌ನಲ್ಲಿ ಮತ್ತು ಕನ್ನಡದಲ್ಲಿ ಉಚ್ಛಕಂಠದಿಂದ ಓದುತ್ತೇವೆ. ಈ ಮೂಲಕ ಸಂವಿಧಾನಕ್ಕೆ ಗೌರವ ಸಮರ್ಪಿಸುತ್ತೇವೆ” ಎಂದು ತಿಳಿಸಿದೆ.

“ಮುಂದಿನ ದಿನಗಳಲ್ಲಿ ಶಾಲೆಯಲ್ಲಿ ಪ್ರಜ್ಞಾಪೂರ್ವಕವಾಗಿ ಸಂವಿಧಾನಕ್ಕೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಅವಮಾನ ಎಸಗುವಂತಹ ಕಾರ್ಯಕ್ರಮವು ಪುನರಾವರ್ತನೆ ಆಗದಂತೆ ಎಚ್ಚರಿಕೆ ವಹಿಸುತ್ತೇವೆ ಎಂದು ಈ ಮೂಲಕ ತಿಳಿಸುತ್ತೇವೆ. ಮೇಲಿನ ಈ ಎಲ್ಲಾ ಮಾತುಗಳಿಗೂ ನಮ್ಮ ಶಾಲೆಯ ಆಡಳಿತ ಮಂಡಳಿಯು ಬದ್ಧವಾಗಿರುತ್ತದೆ” ಎಂದು ಸ್ಪಷ್ಟಪಡಿಸಲಾಗಿದೆ.

ಕ್ಷಮೆಯಾಚನೆಯ ಬಳಿಕ ಮತ್ತೊಂದು ಹೇಳಿಕೆ: ಕ್ಷಮೆಯಾಚನೆಯ ಹೇಳಿಕೆ ನೀಡಿದ ಬಳಿಕ ಶಾಲಾ ಆಡಳಿತ ಮಂಡಳಿಯು ನೀಡಿರುವ ಹೇಳಿಕೆಯು ಮತ್ತೊಮ್ಮೆ ಆಕ್ರೋಶಕ್ಕೆ ಕಾರಣವಾಗಿದೆ.

“ಶಾಲೆಯ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ” ಎಂದು ಶಾಲೆ ಆರೋಪಿಸಿದೆ. ಹೀಗಾಗಿ ರಾಮನಗರದಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಒಂದು ಕಡೆ ಕ್ಷಮೆಯಾಚಿಸಿ, ಮತ್ತೊಂದು ಕಡೆ ಪಿತೂರಿಯ ಆರೋಪ ಹೊರಿಸಲಾಗಿದೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿರಿ: ಸಂವಿಧಾನ ವಿರೋಧಿ ಚರ್ಚಾ ಸ್ಪರ್ಧೆ: ತಾವರೆಕೆರೆ ವಿಇಎಸ್‌ ಶಾಲೆಯ ವಿರುದ್ಧ ಶಿಕ್ಷಣ ಆಯುಕ್ತರಿಗೆ ದೂರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...