Homeಮುಖಪುಟಜಾತೀಯತೆ ಮತ್ತದರ ನೆರಳಿನ ಭಯಾನಕ ಪ್ರತಿಫಲವನ್ನು ಹೊಂದಿದ ಚಿತ್ರ ಅಸುರನ್‌...

ಜಾತೀಯತೆ ಮತ್ತದರ ನೆರಳಿನ ಭಯಾನಕ ಪ್ರತಿಫಲವನ್ನು ಹೊಂದಿದ ಚಿತ್ರ ಅಸುರನ್‌…

- Advertisement -
- Advertisement -

ಅಕಿರ ಕುರುಸೊವಾ ಒಬ್ಬ ಜಪಾನ್ ದೇಶದ ನಿರ್ದೇಶಕ, ತನ್ನ ಕೊನೆ ಕಾಲಘಟ್ಟದಲ್ಲಿ ಆತನ ಆತ್ಮತೃಪ್ತಿಗೆಂದು “ದ ಡ್ರೀಮ್ಸ್” ಅನ್ನೋ ಹಲವು ಚಾಪ್ಟರ್‌ಗಳುಳ್ಳ ಸಿನೆಮಾ ಮಾಡುತ್ತಾನೆ.

ಇದನ್ನ ಯಾವ ಪ್ರೇಕ್ಷಕ ನೋಡದಿದ್ದರೂ ಪರವಾಗಿಲ್ಲ ಅನ್ನುವುದು ಅವನ ಪೂರ್ವನಿಯೋಜಿತ ಗಟ್ಟಿತನವಾಗಿದ್ದರೂ ದ ಡ್ರೀಮ್ಸ್ ಗೆಲ್ಲುತ್ತದೆ.

ಧನಂಜಯ್‌ ಎನ್

ಕಾರಣ ಇಷ್ಟೇ ಡ್ರೀಮ್ಸ್‍ನಲ್ಲಿ ಬರುವ ಸರಿಸುಮಾರು ಎಂಟು ಚಾಪ್ಟರ್‍ಗಳೂ ಸಹ ಎಲ್ಲಾ ಕಾಲಕ್ಕೂ ಸಲ್ಲುವಂಥವು. ಉದಾಹರಣೆಗೆ ಒಂದು ಚಾಪ್ಟರಿನಲ್ಲಿ, ಯುದ್ಧದಲ್ಲಿ ಸತ್ತ ಸೈನಿಕರು ಕಮಾಂಡರ್ ಬಳಿ ದೆವ್ವಗಳಾಗಿ ಬಂದು ಆತನನ್ನ ಪ್ರಶ್ನೆ ಮಾಡುವಾಗ, ಕಮಾಂಡರ್ ಪಾತ್ರವು ಆತ್ಮವಿಮರ್ಶೆ ಮಾಡಿಕೊಳ್ಳುತ್ತಲೇ ಕೊನೆಗೊಳ್ಳುತ್ತದೆ.

ಇದೇರೀತಿ ನಮ್ಮ ಭಾರತದ ಮಟ್ಟಿಗೆ ಎಲ್ಲಾ ಕಾಲಕ್ಕೂ ಸಲ್ಲುವ ಸಿನಿಮಾ ಮಾಡಬೇಕು ಅಂತ, ಒಂದು ಕಥಾವಸ್ತುವನ್ನ ಹುಡುಕಿದರೆ ಮೊದಲಿಗೆ ನಮ್ಮ ಕಣ್ಣ ಮುಂದೆ ಬರುವುದು ಈ “ಜಾತೀಯತೆ ಮತ್ತು ಅದರ ನೆರಳು.”

ನಮ್ಮಲ್ಲಿ ಯುದ್ಧಗಳ ಹುಟ್ಟೂ ಕೂಡ, ಈ ಜಾತಿಯ ಗರ್ಭದಲ್ಲೇ ಆಗುವುದೆಂದು ನಿಸ್ಸಂದೇಹವಾಗಿ ಹೇಳಬಹುದು.

ಬಹುಶಃ ಈ ವಸ್ತುವನ್ನ ಅತ್ಯಂತ ಪರಿಣಾಮಕಾರಿಯಾಗಿ ತೋರಿಸಿದ ಕೆಲವೇ ಕೆಲವು ಸಿನೆಮಾಗಳಿಗೆ ಹೊಸ ಸೇರ್ಪಡೆ “ಅಸುರನ್”.

ಹೌದು, ಅಸುರನ್ ಜಾತೀಯತೆ ಮತ್ತದರ ನೆರಳಿನ ಭಯಾನಕ ಪ್ರತಿಫಲವನ್ನು ಹೊಂದಿದ ಚಿತ್ರ.

ಇಲ್ಲಿ ಯುದ್ಧ ಅಂದರೆ ಕೇವಲ ಗಡಿಗಾಗಿ ನಡೆಯುವುದಷ್ಟೇ ಅಲ್ಲ, ಒಬ್ಬ ಮನುಷ್ಯ ಮನುಷ್ಯನಾಗಿಯೇ ಉಳಿದು ತನಗೆ ಸಿಗಬೇಕಾದ ಕನಿಷ್ಟ ಗೌರವ ಮತ್ತು ಬದುಕನ್ನ ಪಡೆಯಲೂ ಸಹ ಯುದ್ಧ ಮಾಡಬೇಕಿದೆ.

ಅಸಮಾನತೆಯಿಂದ ಹುಟ್ಟುವ ಹತಾಶೆ ಯಾವತ್ತಿಗೂ ಮೇಲ್ನೋಟಕ್ಕೆ ಕಾಣುವುದಿಲ್ಲ, ಅದು ನಮ್ಮೆಲ್ಲರ ರಕ್ತದಲ್ಲೇ ಒದ್ದುಗೊಂಡು ಬಂದುಬಿಟ್ಟಿದೆ.

“ನಿನ್ನಲ್ಲಿ ಅಸಮಾನತೆ ಇದೆ” ಅಂತ ನೇರವಾಗಿ ಅಥವಾ ತಮಾಷೆಯಾಗಿ ಕೇಳಿದರೂ ಸಹ, “ಇಲ್ಲವೇ ಇಲ್ಲ” ಎಂಬ ಸಿದ್ಧ ಉತ್ತರವೊಂದನ್ನ ಜತೆಯಲ್ಲಿಟ್ಟುಕೊಂಡೇ ಸಾಗುವ ನಮಗೆ ಈ ಸೂಕ್ಷ್ಮಗಳೆಲ್ಲಾ ಮೇಲ್ನೋಟಕ್ಕೆ ಕಾಣಬೇಕೆಂದು ಬಯಸುವುದು ದೊಡ್ಡ ತಪ್ಪು.

ವೆಟ್ರಿಮಾರನ್‍ರ ಈ ಹಿಂದಿನ ಎಲ್ಲಾ ಸಿನೆಮಾಗಳನ್ನು ಗಮನಿಸಿದರೆ ಆತ ಈ ರೀತಿಯಾದ ಅತೀಸೂಕ್ಷ್ಮ ವಿಚಾರಗಳನ್ನೂ ಸಹ ಪ್ರೇಕ್ಷಕನಿಗೆ ಅಚ್ಚುಕಟ್ಟಾಗಿ ತಲುಪಿಸುವುದರಲ್ಲಿ, ತನ್ನದೇ ಆದ ವಿಶೇಷ ಕೌಶಲ್ಯದಿಂದ ಗುರುತಿಸಿಕೊಂಡಿದ್ದಾನೆ.

ಅಸುರನ್ ಸಿನೆಮಾದಲ್ಲಿ ಆ ಎಲ್ಲಾ ಪ್ರಯತ್ನಗಳನ್ನೂ ಮೀರಿ ಮತ್ತೂ ಒಂದು ಮೆಟ್ಟಿಲನ್ನು ಮೆಟ್ಟಿ ನಿಂತಿರುವುದು, ವೆಟ್ರಿಮಾರನ್ ಅಭಿಮಾನಿಗಳಿಗೆ ಒಂದು ಹಬ್ಬ.

ಶೋಷಿತನಿಗೆ ಕಾಣುವ ಸಮಾಜಕ್ಕೂ, ಶೋಷಕನಿಗೆ ಕಾಣುವ ಸಮಾಜಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇದನ್ನ ನೀವು ಒಪ್ಪೋದಾದ್ರೆ, ಧನುಷ್ ಮಾಡಿರೋ ಶಿವಸ್ವಾಮಿ ಪಾತ್ರ ಒಂದು ಕ್ಲಿಯರ್ ಪಿಚ್ಚರ್ ಕೊಡೋದ್ರಲ್ಲಿ ಅನುಮಾನವೇ ಇಲ್ಲ.
ಧನುಷ್ ಮತ್ತು ವೆಟ್ರಿಮಾರನ್

ಇಲ್ಲಿ ಎಲ್ಲರೂ ತಮ್ಮ ತಮ್ಮ ಅನುಭವಗಳಿಂದಲೇ ಪಾಠ ಕಲಿಯುವ ಹಾಗೆ ಶಿವಸ್ವಾಮಿಯೂ ಕೂಡ ಶೋಷಿತನಾಗಿ ಬಹಳ ದೊಡ್ಡ ಪಾಠ ಕಲಿತಿದ್ದಾನೆ.

ಜೊತೆಗೆ ತನ್ನ ಮುಂದಿನ ಪೀಳಿಗೆ ಕೂಡಾ ಅದೇ ತಪ್ಪನ್ನ ಮಾಡದಿರಲಿ ಅನ್ನೋ ಅಂಶದ ಜೊತೆಗೆ, ಭಾರತದಲ್ಲಿ ತುಳಸಿಕೊಂಡು ಬೇಯುತ್ತಿರುವ ಅಸಂಖ್ಯ ಶೋಷಿತರಿಗೆ ಒಂದು ಸ್ಪಷ್ಟ ದಾರಿಯನ್ನು, ತನ್ನದೇ ಕಥೆಯ ಮೂಲಕ ನಟನೆಯ ಮೂಲಕ ಕಟ್ಟಿಕೊಡುತ್ತಾನೆ.

“ಮನುಷ್ಯ ಹುಟ್ಟುತ್ತಲೇ ಕ್ರೂರಿ” ಎಂದು ಕನ್ನಡದ ಲೇಖಕ ಪಿ.ಲಂಕೇಶ್ ಅವರಿಂದ ಹಿಡಿದು, ವಿಶ್ವದ ಹಲವು ಚಿಂತಕರುಗಳೆಲ್ಲಾ ಒಂದಲ್ಲಾ ಒಂದು ರೀತಿಯಾಗಿ ನಮಗೆ ಮನವರಿಕೆ ಮಾಡಿಸಿದ್ದಾರೆ.

ಮತ್ತದು, ನಾವು ದಿನನಿತ್ಯ ಎದುರುಗೊಳ್ಳುವ ಹಲವು ಸಂದರ್ಭಗಳಲ್ಲಿ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಅನುಭವಕ್ಕೆ ಬರುತ್ತಲೇ ಇದೆ. ಕಾರಣ ಎಂಥದ್ದೇ ಇರಲಿ ತನ್ನದೇ ಆಕಾರಗಳನ್ನು ಹೊತ್ತ ಮನುಷ್ಯನನ್ನ ಸ್ವತಃ ಮನುಷ್ಯನಾಗಿದ್ದರೂ ಸಹ ಚಿತ್ರ ವಿಚಿತ್ರವಾಗಿ ಕೊಲ್ಲಬೇಕಾದರೆ ಅಥವಾ ಹಿಂಸಿಸಬೇಕಾದರೆ ನಮ್ಮಗಳ ಕ್ರೂರತ್ವ ನಿಜಕ್ಕೂ ನಮ್ಮ ಪ್ರಜ್ಞೆಗೆ ಬರುತ್ತಿದೆಯೇ ???

ಇದು ಸ್ವಗತವಾಗಿ ನಾವೇ ಹಾಕಿಕೊಳ್ಳಬೇಕಾದ ಪ್ರಶ್ನೆ !!!!

ಚಿತ್ರದಲ್ಲಿ ಬರುವ ಖಳನಾಯಕರೆಲ್ಲಾ ಶೋಷಿತ ಜಾತಿಯ ಹಿನ್ನೆಲೆಯಿಂದ ಬಂದವರಾದ್ದರಿಂದ, ಸಿನೆಮಾದಲ್ಲಿ ಈ ಕ್ರೂರತ್ವದ ಪರಿಚಯ ಚೆನ್ನಾಗಿಯೇ ಆಗುತ್ತದೆ. ಇಲ್ಲಿ ವೈರತ್ವ ಬೆಳೆಸುವ ಆ ದೊಡ್ಡಸ್ಥಿಕೆ ಯಾವುದು ಎನ್ನುವುದಕ್ಕೆ ನಮ್ಮ ನಿಮ್ಮ ಬಳಿ ಉತ್ತರವಿಲ್ಲ, ಅಷ್ಟಕ್ಕೂ… ಅದು, ಕಣ್ಣಿಗೆ ಕಂಡರೆ ತಾನೇ ವಿವರಿಸುವುದಕ್ಕೆ!!!

ಇಲ್ಲಿ ಅಸುರನ್ ಚಿತ್ರಕಥೆ ಖಂಡಿತವಾಗಿ ಆ ವಿವರಣೆಯ ರೂಪ ಪಡೆದಿರುವುದು ಪ್ರತಿಯೊಂದು ದೃಶ್ಯದಲ್ಲೂ ಅನುಭವಕ್ಕೆ ಸಿಗುತ್ತದೆ.

ಅದಕ್ಕೊಂದು ಬಲವಾದ ಉದಾಹರಣೆ, ಹೆಣ್ಣುಮಗಳೊಬ್ಬಳು ಕಾಲಿಗೆ ಚಪ್ಪಲಿ ಹಾಕಿ ಊರೊಳಗಿನ ಶಾಲೆಗೆ ಬಂದದ್ದನ್ನೂ ಸಹಿಸಲಾಗದ ಒಬ್ಬ ಅಬ್ಬೇಪಾರಿ ಜಾತಿಭೂತದವನು ಅವನಿಗೆ ಸಿಕ್ಕಿರುವ ತನ್ನದೇ ಹಿನ್ನೆಲೆಯ ಸಾಮಥ್ರ್ಯದ ಹುಚ್ಚಿನಿಂದ ಆಕೆಯ ಮೇಲೆ ಅವಮಾನಿತ ಹಲ್ಲೆಗೆ ಮುಂದಾಗುತ್ತಾನೆ !

ದೊಡ್ಡಸ್ತಿಕೆಯ ವಿವರಣೆಗೆ ಇದೊಂದು ಅತ್ಯಂತ ಪ್ರಭಾವಿ ದೃಶ್ಯ.

ಜೊತೆಗೆ ಶಿವಸ್ವಾಮಿ ಮಕ್ಕಳಾದ ಸೋಮಸುಂದರನ್ ಮತ್ತು ಚಿದಂಬರನ್, ಈ ಇಬ್ಬರ ಮೇಲೆ ಅದೇ ದೊಡ್ಡಸ್ಥಿಕೆಯ ಪ್ರಯೋಗವಾಗುವುದನ್ನು ಮತ್ತು ಆ ಪ್ರಯೋಗಗಳಿಂದ ಆತನ ಕುಟುಂಬಕ್ಕೆ ತೊಂದರೆಯಾಗುವುದು, ಶಿವಸ್ವಾಮಿಯು ತನ್ನ ಮುಂದಾಲೋಚನೆ ಮತ್ತು ತಾಳ್ಮೆಯಿಂದ ಪ್ರೇಕ್ಷಕನಿಗೆ ಉತ್ತರ ನೀಡುತ್ತಾ ಹೋಗುವುದು ಸಿನೆಮಾದ ಮುಖ್ಯ ಗ್ರಹಿಕೆಗಳಲ್ಲೊಂದು.

ಶೋಷಿತ ಜಾತಿಯಿಂದ ಬಂದವನಿಗೆ ತಾನು ಎಂತಹ ಹೀನ ಮನಸ್ಥಿತಿ ಹೊಂದಿದ್ದರೂ ತನ್ನ ಹಿನ್ನೆಲೆಯವರು ಬಿಟ್ಟುಕೊಡುವುದಿಲ್ಲ!! ಎನ್ನುವ ಸಮಾಜದ ಕೆಟ್ಟ ಮುಖವಾಡವನ್ನೂ ಸಹ ಅವನದೇ ಹಿನ್ನೆಲೆ ಕಥೆಯಲ್ಲಿ ಸೂಕ್ತವಾಗಿ ಬೆರೆಸಿದ್ದಾರೆ.

ಪ್ರಮುಖವಾಗಿ ಶೋಷಕರಿಗೆ ಕಾಣದ ಪ್ರಪಂಚವು ಕೊಂಚವಾದರೂ ಅನುಭವಕ್ಕೆ ಬರಬೇಕು ಎನ್ನುವ ಕಾರಣದಿಂದಲೇ…, ಕರುಳು ಹಿಂಡುವಂಥಾ ಉದಾಹರಣೆಗಳನ್ನ ಮುಂದಿಡುವಂತೆ ಒಂದೆರಡು ದೃಶ್ಯಗಳನ್ನ ಸೃಷ್ಟಿಸಿದ್ದಾರೆ. ನೀವು ಎಂತಹ ತಣ್ಣನೆ ಹೃದಯವನ್ನ ಹೊಂದಿದ್ದರೂ ಸಹ , ತಡೆಯಲಾಗದೆ ಕಣ್ಣು ಮುಚ್ಚಿಕೊಳ್ಳುವುದರಲ್ಲಿ ಅನುಮಾನವಿಲ್ಲ.

ಮಗನ ಸಾವನ್ನು ಒಪ್ಪಿಕೊಳ್ಳಲೂ ಸಹ ತಿಂಗಳುಗಟ್ಟಲೆ ನೋವು ತಿನ್ನುವ ತಾಯಿ, ಆ ತಾಯಿಯ ಅವಸ್ಥೆ ನೋಡಲಾಗದೇ ವ್ಯವಸ್ಥೆಯ ವಿರುದ್ಧ ತಿರುಗಿಬೀಳುವ ಮಗ, ಸಾಮಾಜಿಕ ಬಂಡವಾಳವನ್ನೆಲ್ಲಾ ತನ್ನದಾಗಿಸಿಕೊಂಡು ಅಧಿಕಾರಕ್ಕಾಗಿ ಮತ್ತಷ್ಟು ಕ್ರೂರಿಗಳಾಗುವ ವರ್ಗಗಳು, ಪಕ್ಕದ ಮನೆಯವನ ನೋವು ನನ್ನದಲ್ಲ ಎಂದು ನೋಡುತ್ತಾ ನಿಲ್ಲುವ ಸಾಮಾನ್ಯರು… !!!

ಆ ಸಾಮಾನ್ಯರಲ್ಲೂ ಅಸಮಾನ್ಯನಂತೆ ತನ್ನ ಹಿಂದುಳಿದವರಿಗೆಲ್ಲಾ ಭವಿಷ್ಯದ ನಾಳೆಯಾಗಿ ನಿಲ್ಲುವ ನಾಯಕ.

ವೆಟ್ರಿಮಾರನ್‍ರ ಸಿನೆಮಾದಲ್ಲಿ ಇಷ್ಟೆಲ್ಲವೂ ಒಂದು ತೂಕವಾದರೆ, ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತದ್ದೇ ಮತ್ತೊಂದು ತೂಕ. ಮುಖ್ಯವಾಗಿ ರಾತ್ರಿಕತ್ತಲೆಯಲ್ಲಿ ಕಾಡಿನ ಮಧ್ಯದಲ್ಲಿ ತೆಗೆದಿರುವ ದೃಶ್ಯಗಳು, ಹಂದಿ ಬೇಟೆಯಾಡುವಾಗಿನ ಆ ರೋಚಕತೆ, ಮುಖ್ಯಪಾತ್ರಧಾರಿಗಳನ್ನು ಪರಿಚಯಿಸುವಾಗಿನ, ಊರಹೊರಗಿನ ಕೇರಿ, ಸೆಟ್‍ಗಳ ಉಪಯೋಗ, ಎಲ್ಲವನ್ನೂ ಎದುರುನಿಂತು ನೋಡುವ ಹಾಗೆ ತೋರಿಸಿದ್ದಾರೆ.

ಮೂರು ದೃಶ್ಯಗಳಲ್ಲಿ ಬಳಸಿರುವ ಅಸುರನ್ ಸಿನೆಮಾದ ವಿಷಯಾಧಾರಿತ ಸಂಗೀತವು ಪ್ರೇಕ್ಷಕನನ್ನು ಸೀಟಿನ ಮುಂಬದಿಗೆ ಕೂರಿಸಿ ಚಿಂತನೆಯ ದಿಕ್ಕು ಬದಲಾವಣೆಯಾಗದಂತೆ ನೋಡಿಕೊಳ್ಳುತ್ತದೆ.

ಪ್ರತೀ ಬಾರಿಯೂ ಹೇಳುವ ಹಾಗೆಯೇ ದೃಶ್ಯರೂಪಕ್ಕಿರುವ ಅಪಾರ ಶಕ್ತಿಯನ್ನು ಬಳಸಿಕೊಂಡು ಸಮಾಜಕ್ಕೆ ಚಿಂತನೆ ಹುಟ್ಟಿಸುವ ಸಿನೆಮಾಗಳನ್ನು ಕೊಡುತ್ತಿರುವ ಇಂಥಾ ನಿರ್ದೇಶಕರು ನಟರು ಮತ್ತು ತಂಡಕ್ಕೆ, ನಾವೆಲ್ಲರೂ ವಿಶೇಷವಾದ ಗೌರವವನ್ನು ಕೊಡಬೇಕು.

ಆ ಗೌರವ ಇಂಥಾ ಸಿನೆಮಾಗಳನ್ನ ನೋಡಿ ಚರ್ಚಿಸುವುದೇ ಆಗಿದೆಯೆಂದು ಬಿಡಿಸಿ ಹೇಳಬೇಕಿಲ್ಲ.

ಈ ದುರಿತ ಕಾಲದಲ್ಲಿ, ಕೇವಲ ಮನರಂಜನೆಗಾಗಿ ಬರುವ ಸಿನಿಮಾಗಳನ್ನ ಖಡಾಖಂಡಿತವಾಗಿ ತಿರಸ್ಕರಿಸುವಷ್ಟು ವಿರೋಧವನ್ನ ಪ್ರೇಕ್ಷಕ ಬೆಳೆಸಿಕೊಳ್ಳಲಿಲ್ಲ ಎಂದರೆ, ಅದು ನಮಗೆ ನಾವೇ ಮಾಡಿಕೊಳ್ಳುವ ಮೋಸ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...