ವಿಚಾರ ಹಾಗೂ ಅಭಿಪ್ರಾಯದ ವ್ಯತ್ಯಾಸ, ವೈರುಧ್ಯಗಳು ಏನೇ ಇರಲಿ, ಎಷ್ಟೇ ಪ್ರಚೋದನಕಾರಿ ಅಂಶಗಳು ನಡೆದಿರಲಿ, ಅವೆಲ್ಲವೂ ಸಂವಿಧಾನದ ಮಿತಿಯಲ್ಲಿ ಸಮಾಜ ವರ್ತಿಸಬೇಕು ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.
ನಾಗ್ಪುರದಲ್ಲಿ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್, ಸಾಮೂಹಿಕ ಹಲ್ಲೆ ಎಂಬುದು ವಿದೇಶಿಗರು ಕಟ್ಟಿದ ಕಟ್ಟಡ. ಇದು ಇಡೀ ದೇಶವನ್ನು ಹಾಳು ಮಾಡದಿರಲಿ. ಎಲ್ಲಿಯೇ ಪ್ರಚೋದನಕಾರಿ ಕೃತ್ಯಗಳು ನಡೆಯಲಿ, ಎಷ್ಟೇ ವೈಚಾರಿಕ ವ್ಯತ್ಯಾಸಗಳಿರಲಿ ಅದೆಲ್ಲವೂ ಸಂವಿಧಾನದ ಮಿತಿಯಲ್ಲಿರಬೇಕು. ಸಮಾಜ ಕೂಡ ಹೀಗೆ ವರ್ತಿಸಬೇಕು. ಇದು ಕೇವಲ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಮಾಡುತ್ತಿರುವ ಕೆಲಸವಲ್ಲ. ಕೆಲವೊಮ್ಮೆ ಇದಕ್ಕೆ ವ್ಯತಿರಿಕ್ತವಾಗಿಯೂ ದಾಳಿ, ಹಲ್ಲೆ ನಡೆಯುತ್ತವೆ. ಕೆಲ ಸಂದರ್ಭದಲ್ಲಿ ನಡೆದ ಘಟನೆಗಳನ್ನು ತಿರುಚಲಾಗಿದೆ. ನಿರ್ದಿಷ್ಟ ಸಮುದಾಯಗಳು, ಕೆಲ ಸಮುದಾಯವನ್ನು ಕೇಂದ್ರೀಕರಿಸಿ, ಪರಸ್ಪರರ ಮಧ್ಯೆ ಬೆಂಕಿ ಹಚ್ಚುತ್ತಿವೆ ಎಂದು ಸಾಮೂಹಿಕ ಹಲ್ಲೆ, ಗುಂಪು ದಾಳಿಗೆ ಬೇರೆಯದೆ ಬಣ್ಣ ಹಚ್ಚಿದ್ದಾರೆ ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕೆಲವು ವಿಷಯಗಳನ್ನಿಟ್ಟುಕೊಂಡು ಬ್ರ್ಯಾಂಡಿಂಗ್ ರೀತಿಯಲ್ಲಿ ಪ್ರಚಾರ ಮಾಡಲಾಗುತ್ತಿದೆ. ಇದರಿಂದ ದೇಶ ಹಾಳಾಗಲಿದೆ. ಹಿಂದೂ ಸಮಾಜ ಮತ್ತು ಇತರೆ ಸಮುದಾಯಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಸಾಮೂಹಿಕ ಹಲ್ಲೆ ಎಂಬುದು ಭಾರತದ್ದಲ್ಲ. ಇದು ಏಲಿಯನ್ನಂತೆ ಕಲ್ಪನಾತೀತ. ಲಿಂಚಿಂಗ್ ಎಂಬುದು ಭಾರತೀಯ ಪದವಲ್ಲ. ಇದು ಕಥೆಯೊಂದರಲ್ಲಿ ಧರ್ಮವನ್ನು ಬೇರ್ಪಡಿಸಲು ಇರುವ ಪದ. ಭಾರತದಲ್ಲಿ ಇಂತಹವುಗಳನ್ನು ಬಿತ್ತಬೇಡಿ ಎಂದು ಹೇಳಿದರು.
ಇನ್ನು ಸಾಮೂಹಿಕ ಹಲ್ಲೆ ಪ್ರಕರಣದಲ್ಲಿ 49 ಸೆಲೆಬ್ರಿಟಿಗಳ ವಿರುದ್ಧ ದಾಖಲಿಸಿರುವ ಎಫ್ಐಆರ್ ಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಇದೇ ವಿಚಾರವಾಗಿ ಮೋಹನ್ ಭಾಗವತ್ ಮಾತನಾಡಿದ್ದಾರೆ. ದೇಶದಲ್ಲಿ ನಡೆದಿರುವ ಸಾಮೂಹಿಕ ಹಲ್ಲೆ ಬಗ್ಗೆ ಇದೊಂದು ಭಾರತೀಯ ಪದವಲ್ಲ ಎಂದಿದ್ದಾರೆ.
ಇನ್ನು ಜಾರ್ಖಂಡ್ನಲ್ಲಿ ಜೈಶ್ರೀರಾಮ್ ಘೋಷಣೆ ಕೂಗದ್ದಕ್ಕೆ 24 ವರ್ಷದ ತಬ್ರೇಜ್ ಅನ್ಸಾರಿ ಎಂಬ ಯುವಕನನ್ನು ಗುಂಪೊಂದು ಥಳಿಸಿತ್ತು. ಇದೇ ವಿಷಯ ದೇಶದಾದ್ಯಂತ ಭಾರಿ ಸದ್ದು ಮಾಡಿತ್ತು. ಇನ್ನು ಅನೇಕ ರೀತಿಯ ಗುಂಪು ಘರ್ಷಣೆ ಹಾಗೂ ಸಾಮೂಹಿಕ ಹಲ್ಲೆ ಪ್ರಕರಣಗಳು ದಾಖಲಾಗಿದ್ದವು.
ಪುರಾಣವನ್ನು ಇತಿಹಾಸವನ್ನಾಗಿ ಬಿಂಬಿಸಲು ಯತ್ನಿಸುತ್ತಿರುವ ಮನುವಾದಿಗಳು ಈಗ ದೇಶದಲ್ಲಿ ನಡೆದಿರುವ ನೈಜ ದುರ್ಘಟನೆಗಳನ್ನು ಕಪೋಲಕಲ್ಪಿತ ಪುರಾಣ ಕತೆಗಳನ್ನಾಗಿಸಲು ಶ್ರಮಿಸುತ್ತಿದ್ದಾರೆ. ವಾಹ್, ಇವರ ಪ್ರತಿಭೆಯನ್ನು ನಿಜಕ್ಕೂ ಮೆಚ್ಚಬೇಕು.