Homeಅಂಕಣಗಳುರಾಜಕೀಯ ಕ್ರಾಂತಿಗೆ ಕಹಳೆ ನಾಂದಿ ಮೊಳಗಬೇಕಿರುವ ಸಂಧಿಕಾಲದಲ್ಲಿ..

ರಾಜಕೀಯ ಕ್ರಾಂತಿಗೆ ಕಹಳೆ ನಾಂದಿ ಮೊಳಗಬೇಕಿರುವ ಸಂಧಿಕಾಲದಲ್ಲಿ..

- Advertisement -
- Advertisement -

ಡಿಸೆಂಬರ್ ಕೊನೆಯ ವಾರ ಹಲವು ಕಾರಣಗಳಿಗೆ ಇದ್ದಕ್ಕಿದ್ದಂತೆ ಸಂಭ್ರಮ-ಚರ್ಚೆ-ವಿವಾದಗಳ ಸಮಯವಾಗಿಬಿಡುತ್ತದೆ. ಕ್ರಿಸ್ಮಸ್ ಹಬ್ಬ-ಹೊಸ ವರ್ಷದ ಸಂಭ್ರಮಾಚರಣೆಗಳು, ದಾರ್ಶನಿಕ ಕುವೆಂಪು ಅವರ ಜನ್ಮದಿನದ ನೆನಪು ಹಾಗೂ ಸಾಮಾನ್ಯವಾಗಿ ಈ ಸಮಯದಲ್ಲಿ ನಡೆಯುವ ಚಳಿಗಾಲದ ವಿಧಾನಸಭಾ ಅಧಿವೇಶನದ ವಾದವಿವಾದಗಳು ಇಡೀ ವಾರವನ್ನು ಆಕ್ರಮಿಸಿಕೊಳ್ಳುತ್ತವೆ. ಹಲವು ವಿರೋಧಾಭಾಸಗಳ ಈ ವಾರ ಪ್ರತಿ ವರ್ಷದಂತೆ 2022ರ ವರ್ಷವೂ ಸದ್ದುಗದ್ದಲಗಳಿಗೆ ಕಾರಣವಾಗಿದೆ. ಕ್ರಿಸ್ಮಸ್ ಸಂಭ್ರಮಾಚರಣೆಯ ಸಂದರ್ಭದಲ್ಲಿ ಏಸುಕ್ರಿಸ್ತನ ಕರುಣೆ-ಪ್ರೀತಿಗಳ ಬಗ್ಗೆ ನೆನೆಯುವುದರ ಜೊತೆಗೆ, ಭಾರತದಲ್ಲಿ ಕ್ರಿಶ್ಚಿಯನ್ ಅಲ್ಪಸಂಖ್ಯಾತ ಧರ್ಮೀಯರನ್ನು ಮೂದಲಿಸುವ ಪರಿಪಾಠ ಬೆಳೆಯುತ್ತಲೇ ಇದೆ. ಮತಮೌಢ್ಯತೆಯನ್ನು ತೊರೆದು ವೈಚಾರಿಕತೆಯನ್ನು ಬೆಳೆಸಿಕೊಳ್ಳಿ ಎಂದು ಕರೆಕೊಟ್ಟ ಕುವೆಂಪು ಅವರನ್ನು ವಿರೋಧಿಸುತ್ತಲೇ ಬಂದ ಬಲಪಂಥೀಯ ಸಂಘ ಪರಿವಾರದವರು ಈಗ ಅವರನ್ನು ಅಪ್ರಾಪ್ರಿಯೇಟ್ ಮಾಡಲು ಮುಂದಾಗುತ್ತಿದ್ದಾರೆ; ಪಠ್ಯ ಪರಿಷ್ಕರಣೆ ಮೂಲಕ ಕರ್ನಾಟಕದ ಮಕ್ಕಳಿಗೆ ಕೋಮುವಿಷವುಣಿಸಲು ಶ್ರಮಿಸಿದ ರೋಹಿತ್ ಚಕ್ರತೀರ್ಥ ಎಂಬ ವ್ಯಕ್ತಿಯ ಕಡೆಯಿಂದ ಡಿಸೆಂಬರ್ 29ರಂದು ಉಪನ್ಯಾಸ ಕೊಡಿಸುವ ಕಾರ್ಯಕ್ರಮ ಆಯೋಜನೆಗೊಳ್ಳುತ್ತದೆ. (ಕುವೆಂಪು ವರ್ಣಾಶ್ರಮವನ್ನು ಒಪ್ಪಿದ್ದರು ಎಂಬ ಸುಳ್ಳನ್ನು ಆತ ನಿರ್ಭಿಡೆಯಿಂದ ನುಡಿಯುತ್ತಾರೆ!) ರಾಜ್ಯದ ಕುಂದುಕೊರತೆಗಳ ಚರ್ಚೆಯಾಗಿ ಪರಿಹಾರ ಕಂಡುಕೊಳ್ಳಬೇಕಿರುವ ಅಧಿವೇಶನದಲ್ಲಿ ಕೋಮುದ್ವೇಷ ಹರಡುವ, ಅಲ್ಪಸಂಖ್ಯಾತರನ್ನು ಹಣಿಯುವಂತೆ ಮಾತನಾಡುವ ಭಾಷಣಗಳು ರಾರಾಜಿಸುತ್ತವೆ.

1974ರಲ್ಲಿ ಕುವೆಂಪು ಅವರು ಮಾಡಿದ ’ವಿಚಾರ ಕ್ರಾಂತಿಗೆ ಆಹ್ವಾನ’ ಭಾಷಣಕ್ಕೆ ಬರಲಿರುವ ಹೊಸ ವರ್ಷಕ್ಕೆ 50 ವರ್ಷಗಳಾಗಲಿದೆ. ಕರ್ನಾಟಕದ ಪ್ರಜ್ಞಾವಂತರು ಅಗಾಗ್ಗೆ ರಿವಿಸಿಟ್ ಮಾಡಿಕೊಂಡು ಬಂದಿರುವ ಭಾಷಣವಿದು. ಭಾಷಣದಲ್ಲಿ ಒಂದು ಕಡೆಗೆ ಕುವೆಂಪು ಹೀಗೆ ಹೇಳುತ್ತಾರೆ: “ನಮ್ಮ ಪ್ರಜಾಸತ್ತೆ ಕಲುಷಿತವಾಗಲು ಹಣ ಒಂದೇ ಕಾರಣವೆಂದು ತಿಳಿಯುವುದು ತಪ್ಪಾಗುತ್ತದೆ. ಅದಕ್ಕಿಂತಲೂ ಮಹತ್ತಾದ ಮತ್ತು ಮೂಲಭೂತವಾದ ಮತ್ತೊಂದು ಕಾರಣವೂ ಇದೆ, ನಮ್ಮ ಪುಣ್ಯಭೂಮಿ ಭಾರತದಲ್ಲಿ! ಅದು ಒಂದು ಆಮೂರ್‍ತ ವಸ್ತು, ಅದು ಹಾಕಿಕೊಂಡಿರುವ ವೇಷದಿಂದ ತುಂಬ ಸಾಧು ಮತ್ತು ಪೂಜ್ಯ ಎಂಬಂತೆ ತೋರುತ್ತದೆ. ಅದು ಭಾವರೂಪಿಯಾದುದರಿಂದ ಅತಿ ಸೂಕ್ಷ್ಮವಾಗಿ ಹೃದಯಪ್ರವೇಶಮಾಡಿ ನಮ್ಮನ್ನು ಆಕ್ರಮಿಸುತ್ತದ. ಮತ್ತು ನಮ್ಮಲ್ಲಿ ನಿಜವಾಗಿಯೂ ಇರುವ ಒಂದು ಅನಿರ್ವಚನೀಯ-ಅತ್ಯಂತ ಅಂತರತಮ-ಸತ್ಯಸ್ಯ ಸತ್ಯವಾದ ಸನಾತನ ತತ್ತ್ವಕ್ಕೆ (ಅದನ್ನು ಆಧ್ಯಾತ್ಮ ಎಂದು ಹೆಸರಿಸುತ್ತೇವೆ.) ಅದು ತನ್ನ ಬಾಂಧವ್ಯವನ್ನು ಘೋಷಿಸುತ್ತಾ ಬಂದಿರುವುದರಿಂದಲೂ ಮತ್ತು ಅದನ್ನ ತಾನು ಪೋಷಿಸುತ್ತಿರುವುದಾಗಿ ಹೇಳುತ್ತಲೂ ಇರುವುದರಿಂದಲೂ ಅದರ ಪ್ರಚ್ಛನ್ನ ವಂಚನೆಯ ಮುಷ್ಟಿಯಿಂದ ತಪ್ಪಿಸಿಕೊಳ್ಳುವುದೂ ಕಷ್ಟಸಾಧ್ಯವಾಗಿದೆ. ಅದರ ಹೆಸರು ’ಮತ’! ಈ ಮತಭ್ರಾಂತಿಯಿಂದ ಲೋಕಕ್ಕೆ ಆಗಿರುವಷ್ಟು ಹಾನಿ ಮತ್ತಾವುದರಿಂದಲೂ ಆಗಿಲ್ಲ ಎಂದು ತೋರುತ್ತದೆ. ಇನ್ನು ಮುಂದೆಯಾದರೂ ನೀವು ಅಧ್ಯಾತ್ಮವನ್ನು ಉಳಿಸಿಕೊಂಡು ಮತ ಮತ್ತು ಅದರಿಂದ ಜನ್ಯವಾದ ಮತಭ್ರಾಂತಿ ಮತ್ತು ಮತಮೌಢ್ಯಗಳನ್ನು ನಿರಾಕರಿಸದಿದ್ದರೆ ನಿಜವಾದ ಪ್ರಜಾಸತ್ತೆಯಾಗಲಿ ಸಮಾಜವಾದವಾಗಲಿ ಸಮಾನತಾಭಾವ ಸ್ಥಾಪನೆಯಾಗಲಿ ಎಂದೆಂದಿಗೂ ಸಾಧ್ಯವಾಗುವುದಿಲ್ಲ.” ಸ್ವಾತಂತ್ರ್ಯ ಬಂದು 25 ವರ್ಷಗಳ ನಂತರ ನೀಡಿದ ಭಾಷಣದ ಆತಂಕಗಳು 75ನೇ ವರ್ಷದ ಅಮೃತ ಮಹೋತ್ಸವದಲ್ಲಿಯೂ ಅಕ್ಷರಶಃ ಅನ್ವಯವಾಗುತ್ತಿರುವುದು ಈ ಸಮಾಜದ ದುರಂತವಲ್ಲದೆ ಮತ್ತೇನು?

ರೋಹಿತ್ ಚಕ್ರತೀರ್ಥ

ಸದ್ಯ ಜಾರಿಯಲ್ಲಿರುವ ಬೆಳಗಾವಿಯ ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿ ಪಕ್ಷದ ಶಾಸಕ ಸಿ.ಟಿ ರವಿಯವರು ಮಾತನಾಡಿದ ಮಾತುಗಳು, ಅದರ ಧಾಟಿ ಕೂಡ (ಇದು ಒಂದೇ ಒಂದು ಉದಾಹರಣೆಯಷ್ಟೇ) ಮತಭ್ರಾಂತಿಯ, ಮತದ್ವೇಷದ ಸಮಸ್ಯೆ ಜ್ವಲಂತವಾಗಿರುವುದನ್ನ, ಅದರ ಸ್ವರೂಪ ಮತ್ತು ಅದನ್ನು ದಾಟಿಸುತ್ತಿಸಿರುವ ಬಗೆ ಬದಲಾಗಿರುವುದನ್ನ ಸೂಚಿಸುತ್ತದೆ. ಇತ್ತೀಚಿಗೆ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬ್ಲಾಸ್ಟ್ ಪ್ರಕರಣವನ್ನು ಮುಂದಿಟ್ಟುಕೊಂಡು, ಒಂದು ಪಕ್ಷವನ್ನು ಹಾಗೂ ಪ್ರಕರಣದ ತನಿಖೆ ರಾಜಕೀಯ ದುರುದ್ದೇಶಗಳನ್ನು ಮೀರಿ ನಿಷ್ಪಕ್ಷಪಾತವಾಗಿ ನಡೆಯಬೇಕು ಎಂದು ಹೇಳಿದವರನ್ನು ಖಳನಾಯಕರಂತೆ ಚಿತ್ರಿಸಲು ಸಿ.ಟಿ. ರವಿ ಪ್ರಯತ್ನಿಸಿದರು. ಸದ್ಯ ಆರೋಪಿಗಳಾಗಿರುವವರ ಬಗ್ಗೆ ಯಾವುದೇ ರೀತಿಯ ಸಹಾನುಭೂತಿಯನ್ನು ಯಾರೂ ತೋರಬಾರದೆಂದು ಫರ್ಮಾನು ಹೊರಡಿಸಿದರು. (ತನಿಖೆಯಾಗಿ ದೇಶದ ಕಾನೂನು ಪರಿಪಾಲನೆಯಾಗಬೇಕಿರುವುದು ನಿಜ, ಆದರೆ ಅಲ್ಪಸಂಖ್ಯಾತ ಸಮುದಾಯದ ಎಷ್ಟೋ ವ್ಯಕ್ತಿಗಳು ಭಯೋತ್ಪಾದನೆ ಪ್ರಕರಣಗಳಲ್ಲಿ ಸಿಲುಕಿ ನಂತರ ನಿರಪರಾಧಿಗಳು ಎಂದು ಸಾಬೀತಾಗಿರುವ ನೂರಾರು ಉದಾಹರಣೆಗಳಿವೆ.) ಸಿ.ಟಿ. ರವಿ ಅವರು ಹೇಳಿದ ಮಾತುಗಳು ರಾಜಕೀಯ ದುರುದ್ದೇಶದಿಂದ ಕೂಡಿವೆ ಎಂದು ಕಾಂಗ್ರೆಸ್ ಶಾಸಕ ಯು.ಟಿ. ಖಾದರ್ ಪ್ರತಿಕ್ರಿಯಿಸಿದರು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, ’ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಮಾಡಿದ ಪಕ್ಷ ನಮ್ಮದು. ಅವರಿಗೂ ಭಯೋತ್ಪಾದಕರಿಗೂ ವ್ಯತ್ಯಾಸ ಏನೆನ್ನುವುದು ತಿಳಿದಿದೆ. ಖಾದರ್ ಮತ್ತು ಶಾರೀಕ್ (ಕುಕ್ಕರ್ ಬ್ಲಾಸ್ಟ್ ಆರೋಪಿ) ನಡುವೆ ವ್ಯತ್ಯಾಸ ಕಂಡುಹಿಡಿಯುವುದು ಗೊತ್ತಿದೆ’ ಎಂಬ ಧಾಟಿಯಲ್ಲಿ, ಮುಸಲ್ಮಾನ ಸಮುದಾಯದವರ ಬಗ್ಗೆ ಏನೋ ಚಾರಿಟಿ ರೀತಿಯ ಮಾತನಾಡಿದ್ದಾರೆ. ಈ ಧಾಟಿಯನ್ನು ಅಧಿವೇಶನದಲ್ಲಿ ಖಂಡಿಸಿದ ಬಗ್ಗೆ ಏನೂ ತಿಳಿದುಬರಲಿಲ್ಲ. ಸಿ.ಟಿ. ರವಿಯವರ ’ಧರ್ಮ-ಕರ್ಮ’ ಇಲ್ಲಿ ಅಗತ್ಯವಿಲ್ಲ, ಸಂವಿಧಾನ ಎಲ್ಲಾ ಪ್ರಜೆಗಳಿಗೂ ಸಮಾನ ಹಕ್ಕುಗಳನ್ನು ನೀಡಿದೆಯೆಂದು ಗಟ್ಟಿ ದನಿಯಲ್ಲಿ ವಿರೋಧ ಪಕ್ಷದವರೂ ಕೌಂಟರ್ ಮಾಡದೆ ಹೋದರು! ಇದೇ ಸಮಯದಲ್ಲಿ (ಭಾನುವಾರ ಶಿವಮೊಗ್ಗದಲ್ಲಿ ನಡೆದ ಹಿಂದೂ ಜಾಗರಣ ವೇದಿಕೆಯ ಪ್ರಾದೇಶಿಕ ವಾರ್ಷಿಕ ಸಮಾವೇಶದಲ್ಲಿ) ಮಾಲೆಗಾಂವ್ ಬಾಂಬ್ ಬ್ಲಾಸ್ಟ್ ಆರೋಪಿ ಮತ್ತು ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಅವರು ಕೋಮುಪ್ರಚೋದನೆಯ ಭಾಷಣ ಮಾಡುತ್ತಿದ್ದರು: “ಅವರು ಭಜರಂಗದಳ ಕಾರ್ಯಕರ್ತ ಹರ್ಷ, ಇತರ ಹಿಂದೂ ವೀರರು ಮತ್ತು ಬಿಜೆಪಿ ಕಾರ್ಯಕರ್ತರನ್ನು ಚಾಕುವಿನಿಂದ ಇರಿದಿದ್ದಾರೆ. ಹಾಗಾಗಿ ನಾವು (ಹಿಂದೂಗಳು) ನಮ್ಮ ಮನೆಯಲ್ಲಿ ಆಯುಧಗಳನ್ನು ಇಟ್ಟುಕೊಳ್ಳಬೇಕು ಎಂದು ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ತರಕಾರಿಗಳನ್ನು ಕತ್ತರಿಸಲು ಬಳಸುವ ಚಾಕುಗಳನ್ನು ಕನಿಷ್ಠ ಚೂಪು ಮಾಡಿಕೊಂಡು ಇಟ್ಟುಕೊಳ್ಳಿ. ಯಾವಾಗ ಉಪಯೋಗಕ್ಕೆ ಬರುತ್ತವೆ ಹೇಳಲಾಗುವುದಿಲ್ಲ. ಸಮಯ ಬಂದಾಗ ವೈರಿಗಳ ತಲೆ ತೆಗೆಯಿರಿ” ಎಂದಿದ್ದಾರೆ. ಹೀಗೆ ದೇಶದ ಅಧಿಕಾರದ ಚುಕ್ಕಾಣಿ ಹಿಡಿದ ರಾಜಕೀಯ ಪಟುಗಳು ಮತಭ್ರಾಂತಿಯಿಂದ ದೇಶದ ಜನತೆಯ ನಡುವೆ ಕಂದಕಗಳನ್ನು ನಿರ್ಮಿಸುವ ಮಾತುಗಳನ್ನಾಡುತ್ತಿದ್ದಾರೆ. ಇದನ್ನು ಮೆಟ್ಟಿನಿಲ್ಲಬೇಕಾದ ವಿವೇಕ ಮುನ್ನಲೆಗೆ ಬರದಂತಹ ವಾತಾವರಣ ನಿರ್ಮಾಣವಾಗಿದ್ದು, ವರ್ಷದಿಂದ ವರ್ಷಕ್ಕೆ ಅಸಹನೀಯತೆ ಬೆಳೆಯುತ್ತಿದೆ. ಇಂತಹ ಅಸಹನೀಯ ಪರಿಸ್ಥಿತಿಯಲ್ಲಿ ಕರ್ನಾಟಕ 2023ಕ್ಕೆ ಮತ್ತೊಂದು ಚುನಾವಣೆಗೆ ಸಜ್ಜಾಗುತ್ತಿದೆ. ಈ ಕೋಮುವಿಷಮತೆಯನ್ನು ಮೆಟ್ಟಿನಿಲ್ಲುವ ಬಗ್ಗೆ ವಿರೋಧ ಪಕ್ಷಗಳಲ್ಲಿಯೂ ಸ್ಪಷ್ಟತೆಯ-ಒಗ್ಗಟ್ಟಿನ ಕೊರತೆ ಎದ್ದುಕಾಣುತ್ತಿದೆ. ಇದು ಅಧಿವೇಶನದ ಚರ್ಚೆಗಳಲ್ಲೂ ಪ್ರತಿಧ್ವನಿಸುತ್ತಿದೆ!

ಕುವೆಂಪು

ಇನ್ನು ಈ ಕೋಮು ವಿಷಮತೆ ಸಿನಿಮಾ, ಸಾಹಿತ್ಯ ಮತ್ತಿತರ ಕಲಾವಲಯಗಳನ್ನೂ ಬಿಟ್ಟಿಲ್ಲ. 2023ರ ಜನವರಿ ಮೊದಲ ವಾರದಲ್ಲಿ ಹಾವೇರಿಯಲ್ಲಿ ಜರುಗಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಸಂಘ ಪರಿವಾರದ ಕರಿನೆರಳು ಕಾಣಿಸಿಕೊಳ್ಳುತ್ತಿದೆ. ಮುಸಲ್ಮಾನ ಲೇಖಕ-ಲೇಖಕಿಯರನ್ನು ಕಡೆಗಣಿಸಿ, ಅವರ ಪ್ರತಿನಿಧಿತ್ವವನ್ನು ನಾಮಕಾವಸ್ಥೆಯೆಂಬಂತೆ ಸೇರಿಸಿ ಸಮ್ಮೇಳನ ನಡೆಸುತ್ತಿರುವ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿವೆ. ’ನಿಮ್ಮೊಡನಿದ್ದೂ ನಿಮ್ಮಂತಾಗದೆ’ ಎಂಬ ನಿಸಾರ ಅಹಮದ್ ಅವರ ಕವಿವಾಣಿಯಂತೆ, ಮುಸಲ್ಮಾನರನ್ನು ಅನ್ಯಗೊಳಿಸುವ, ಎರಡನೇ ದರ್ಜೆಯ ನಾಗರಿಕರನ್ನಾಗಿಸುವ ಪ್ರಭುತ್ವದ ಹುನ್ನಾರಗಳನ್ನು ಪ್ರಶ್ನಿಸುವ ವೇದಿಕೆ ಸಾಹಿತ್ಯ ಸಮ್ಮೇಳನವಾಗಬೇಕಿತ್ತು. ಆದರೆ ಪ್ರಭುತ್ವವನ್ನು ತನ್ನ ಅಪರಾಧಗಳಲ್ಲಿ ಹುರಿದುಂಬಿಸುವಂತೆ ಕನ್ನಡ ಸಾಹಿತ್ಯ ಪರಿಷತ್ ಮುನ್ನಡೆಸುವ ಈ ಸಾಹಿತ್ಯ ಸಮ್ಮೇಳನ ಆಯೋಜನೆಗೊಳ್ಳುತ್ತಿರುವುದು ಬಹುತ್ವದ ಮೌಲ್ಯಗಳು ನಶಿಸುತ್ತಿರುವ ಆಕಂಕಕ್ಕೆ ಇನ್ನಷ್ಟು ಪುಷ್ಠಿ ನೀಡಿದೆ.

ಪ್ರತಿ ವರ್ಷ ಹಲವು ಚಾರಿತ್ರಿಕ ಘಟ್ಟದ ನೆನಪುಗಳನ್ನು ಮೆಲುಕು ಹಾಕುವಂತೆ ಈ ವರ್ಷವೂ ಕುವೆಂಪು ಜನ್ಮ ದಿನವನ್ನು ಆಚರಿಸುತ್ತಿದ್ದೇವೆ. ಆದರೆ ಬಿಗಡಾಯಿಸಿದ ಪರಿಸ್ಥಿತಿಯಲ್ಲಿ ಕುವೆಂಪುರಂತಹ ದಾರ್ಶನಿಕರು ಅಂದು ತೋರಿಸಿದ ದಾರಿಯ ಬಗ್ಗೆ ನಾವು ನಾಗರಿಕರು ಇನ್ನಷ್ಟು ಗಂಭೀರವಾಗುವುದು ಹೆಚ್ಚು ಉಚಿತ. ಆ ನೆಲೆಯಲ್ಲಿ ನಾಡಿನ ವಿವೇಕವನ್ನು ಉಳಿಸುವ ಕೈಂಕರ್ಯಕ್ಕೆ ನಾಗರಿಕರೇ ಮುಂದಾಗಬೇಕಿದೆ. ಚುನಾವಣೆಗಳಿಂದ ಕೋಮು ಧ್ರುವೀಕರಣ, ಸ್ವಜಾತಿ ಬೆಂಬಲ ಮುಂತಾದ ಸೋಂಕುಗಳನ್ನು ನಿವಾರಿಸಿ 23ರ ವಿಧಾನಸಭಾ ಚುನಾವಣೆ ಹಾಗೂ 24ರ ಲೋಕಸಭಾ ಚುನಾವಣೆಗಳಲ್ಲಿ ಸ್ವಚ್ಛತೆಯ ಕೆಲಸಕ್ಕೆ ಮುಂದಾಗಬೇಕಿದೆ. ಕುವೆಂಪು ಅವರ ಮತ್ತೊಂದು ಭಾಷಣ ’ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ’ಯಲ್ಲಿ ಕರೆಕೊಟ್ಟಂತೆಯೇ ಇಂದಿನ ಅಗತ್ಯಕ್ಕನುಗುಣವಾಗಿ ಮತ್ತು ಆತಂಕಗಳನ್ನು ಮೆಟ್ಟಿ ನಿಲ್ಲಲು ರಾಜಕೀಯ ಕ್ರಾಂತಿಗೆ ಕಹಳೆ ನಾಂದಿ ಮೊಳಗಬೇಕಿದೆ.


ಇದನ್ನೂ ಓದಿ: ಮುಸ್ಲಿಂ ಲೇಖಕರನ್ನು ಹೊರಗಿಟ್ಟ ಕಸಾಪ: ಪ್ರತಿರೋಧವಾಗಿ ಜ.8ರಂದು ಜನಸಾಹಿತ್ಯ ಸಮ್ಮೇಳನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....