Homeಮುಖಪುಟಸಿಜೆಐ ಮೇಲೆ ದಾಳಿ: ಬಲಪಂಥೀಯ ಪ್ರಚೋದನೆಯ ಫಲಿತಾಂಶ

ಸಿಜೆಐ ಮೇಲೆ ದಾಳಿ: ಬಲಪಂಥೀಯ ಪ್ರಚೋದನೆಯ ಫಲಿತಾಂಶ

- Advertisement -
- Advertisement -

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ. ಆರ್ ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆಯಲು ಯತ್ನಿಸಿದ ಆಘಾತಕಾರಿ ಘಟನೆ ಸೋಮವಾರ (ಅ.6) ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದೆ.

ಸಂವಿಧಾನವನ್ನು ಅನುಸರಿಸುವ ಭಾರತೀಯರು ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದು, ದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ, ಕೆಲ ಹಿಂದುತ್ವ ಬಲಪಂಥೀಯರು, ಧರ್ಮಾಂಧರು ಮತ್ತು ಜಾತಿವಾದಿಗಳು ದಲಿತ ಸಮುದಾಯದ ಸಿಜೆಐ ಮೇಲಿನ ದಾಳಿಯನ್ನು ಸಂಭ್ರಮಿಸಿದ್ದಾರೆ.

ಕೆಲ ದುಷ್ಕರ್ಮಿಗಳು ಕಾನೂನಿನ ಯಾವುದೇ ಭಯವಿಲ್ಲದೆ ಬಹಿರಂಗವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಸಿಜೆಐಗೆ ಗುಂಡಿಕ್ಕುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ಇನ್ನೂ ಕೆಲವರು ಎಐ ವಿಡಿಯೋಗಳ ಮೂಲಕ ಸಿಜೆಐ ಅವರನ್ನು ಅವಮಾನಿಸಿದ್ದಾರೆ.


ಸಾಮಾಜಿಕ ಜಾಲತಾಣಗಳಾದ ಎಕ್ಸ್‌, ಮತ್ತು ಫೇಸ್‌ಬುಕ್‌ಗಳು ಕೊಲೆ, ಹಲ್ಲೆ, ಅತ್ಮಹತ್ಯೆ ಇತ್ಯಾದಿ ಪದಗಳನ್ನು ಬಳಸಿ ಏನಾದರು ಪೋಸ್ಟ್‌ಗಳನ್ನು ಹಾಕಿದರೆ ನಿಯಮಗಳನ್ನು ಮೀರಿದ ಕಾರಣ ಕೊಟ್ಟು ತಕ್ಷಣ ಅವುಗಳನ್ನು ತೆಗೆದು ಹಾಕುತ್ತವೆ. ಆದರೆ, ಮೇಲೆ ನಾವು ಉಲ್ಲೇಖಿಸಿದ ಪೋಸ್ಟ್‌ಗಳ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಇಲ್ಲಿ ಗಮನಾರ್ಹ.

ಸಿಜೆಐ ಮೇಲೆ ಶೂ ಎಸೆಯಲು ಕಾರಣವೇನು?

ಭಾರತೀಯ ಪುರಾತತ್ವ ಇಲಾಖೆ ಅಧೀನದಲ್ಲಿ ಬರುವ ಮಧ್ಯಪ್ರದೇಶದ ಐತಿಹಾಸಿಕ ತಾಣ ಖಜುರಾಹೊ ದೇವಾಲಯಕ್ಕೆ ಸಂಬಂಧಪಟ್ಟ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ತಿರಸ್ಕರಿಸುವ ವೇಳೆ ಸಿಜೆಐ ಗವಾಯಿ ಅವರು ನೀಡಿರುವ ಮೌಖಿಕ ಹೇಳಿಕೆಯೇ ವಕೀಲ ರಾಕೇಶ್ ಕಿಶೋರ್ ದಾಳಿ ಅವರ ಮೇಲೆ ದಾಳಿ ಮಾಡಲು ಕಾರಣ ಎಂದು ಹೇಳಲಾಗ್ತಿದೆ.

ಖಜುರಾಹೊದಲ್ಲಿನ ಶಿರಚ್ಛೇದಗೊಂಡ ವಿಷ್ಣುವಿನ ವಿಗ್ರಹವನ್ನು ಪುನಃಸ್ಥಾಪಿಸಲು ನಿರ್ದೇಶಿಸುವಂತೆ ಕೋರಿ ಪಿಐಎಲ್‌ ಸಲ್ಲಿಸಲಾಗಿತ್ತು. ಅದನ್ನು ತಿರಸ್ಕರಿಸಿದ್ದ ಸಿಜೆಐ, “ಈ ಅರ್ಜಿಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ. ಪ್ರಚಾರದ ಹಿತಾಸಕ್ತಿ ಇದ್ದಂತಿದೆ. ಭಗ್ನಗೊಂಡ ವಿಷ್ಣು ವಿಗ್ರಹವನ್ನು ದುರಸ್ಥಿಗೊಳಿಸಲು ಪುರಾತತ್ವ ಇಲಾಖೆಗೆ ಮನವಿ ಸಲ್ಲಿಸಿ ಎಂದಿದ್ದರು.

ಮುಂದುವರಿದು, “ನೀವು ವಿಷ್ಣುವಿನ ಪರಮ ಭಕ್ತ ಎಂದು ಹೇಳಿಕೊಳ್ಳುತ್ತೀರಿ. ಹೋಗಿ ನಿಮ್ಮ ದೇವರ ಬಳಿಯೇ ಪ್ರಾರ್ಥಿಸಿ, ಆ ದೇವರೇ ಏನಾದರೂ ಮಾಡಲಿ” ಎಂದು ಅರ್ಜಿದಾರರಿಗೆ ಸಿಜೆಐ ಮೌಖಿಕವಾಗಿ ಹೇಳಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಬೆಂಕಿ ಹೊತ್ತಿಸಿದ ಸಿಜೆಐ ಹೇಳಿಕೆ

ಸಿಜೆಐ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿತ್ತು. #ImpeachCJI ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್‌ ಆಗಿತ್ತು. ಹಿಂದುತ್ವ ಸಂಘಟನೆಗಳು ಸಿಜೆಐ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿತ್ತು.

ಹೇಳಿಕೆ ವಿವಾದ ಸ್ವರೂಪ ಪಡೆದ ಎರಡು ದಿನಗಳ ನಂತರ ಪ್ರತಿಕ್ರಿಯಿಸಿದ್ದ ಸಿಜೆಐ ಗವಾಯಿ “ನಾನು ಧರ್ಮವನ್ನು ಅವಹೇಳನ ಮಾಡಿಲ್ಲ, ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ” ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದರು.

ಅಜಿತ್ ಭಾರ್ತಿಯ ಪ್ರಚೋದನಕಾರಿ ಅಭಿಯಾನ

ಸಿಜೆಐ ಹೇಳಿಕೆ ವಿವಾದದ ಬೆಂಕಿ ಹೊತ್ತಿಸಿದಾಗ ಅದಕ್ಕೆ ತುಪ್ಪ ಸುರಿದ ಪ್ರಮುಖರಲ್ಲಿ ಬಲಪಂಥೀಯ ಯೂಟ್ಯೂಬರ್ ಅಜಿತ್ ಭಾರ್ತಿಯೂ ಒಬ್ಬ. ಈ ವಿಚಾರದಲ್ಲಿ ಈತನ ಪಾತ್ರ ದೊಡ್ಡದಿದೆ.

ಸೋಮವಾರ (ಅ.6) ಸಿಜೆಐ ಮೇಲೆ ಶೂ ಎಸೆದ ಘಟನೆ ನಡೆದ ಬಳಿಕ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದ ಅಜಿತ್ ಭಾರ್ತಿ, “ಇಂದು ಸಿಜೆಐ ಗವಾಯಿ ಅವರತ್ತ ವಕೀಲ ಎಸೆದ ಶೂ ಬಹುತೇಕ ತಗುಲಿದೆ. ವಕೀಲ ಗವಾಯಿ ಅವರ ಪೀಠದ ಬಳಿಗೆ ಹೋಗಿ, ತನ್ನ ಶೂ ತೆಗೆದು ಹೊಡೆಯಲು ಮುಂದಾದಾಗ ಭದ್ರತಾ ಸಿಬ್ಬಂದಿ ಅವರನ್ನು ತಡೆದರು. ನಂತರ ಹೊರಗಡೆ ಕರೆದೊಯ್ಯುವಾಗ “ಸನಾತನ ಧರ್ಮದ ಅವಮಾನವನ್ನು ಸಹಿಸುವುದಿಲ್ಲ ಎಂದು ವಕೀಲರು ಕೂಗಿದ್ದಾರೆ” ಎಂದು ಬರೆದುಕೊಂಡಿದ್ದಾನೆ.

ತನ್ನ ಇನ್ನೊಂದು ಪೋಸ್ಟ್‌ನಲ್ಲಿ ಅಜಿತ್ ಭಾರ್ತಿ ಆಕ್ರಮಣಕಾರಿ ಭಾಷೆ ಬಳಸಿದ್ದು, “ಇದು ಕೇವಲ ಆರಂಭ. ನ್ಯಾಯಾಧೀಶರು ಹಿಂದೂ ವಿರೋಧಿ ಧೋರಣೆ ತೋರಿದರೆ ಮತ್ತು ತಮ್ಮ ಆದೇಶಗಳಲ್ಲಿ ಹಿಂದೂಗಳನ್ನು ಅವಮಾನಿಸುವ ರೀತಿಯಲ್ಲಿ ತಮ್ಮ ಕೆಟ್ಟ ಉದ್ದೇಶಗಳನ್ನು ತೋರಿದರೆ, ಅಂತಹ ನ್ಯಾಯಾಧೀಶರ ವಿರುದ್ಧ ಜನರು ಬೀದಿಗಳಲ್ಲಿಯೂ ಇದೇ ರೀತಿಯಾಗಿ ವರ್ತಿಸಬಹುದು” ಎಂದು ಎಚ್ಚರಿಕೆ ನೀಡಿದ್ದಾನೆ.

ಈ ಹಿಂದೆ ಸೆಪ್ಟೆಂಬರ್ 18ರಂದು ಎಕ್ಸ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್‌ ಮಾಡಿದ್ದ ಅಜಿತ್ ಭಾರ್ತಿ ಸಿಜೆಐ ಗವಾಯಿ ಅವರನ್ನು “ಹಿಂದೂ ದ್ವೇಷ ಹೊಂದಿರುವ ಕೀಳು ನ್ಯಾಯಾಧೀಶ” ಎಂದು ಕರೆದಿದ್ದ. ಜೊತೆಗೆ, ಹಿರಣ್ಯಕಶಿಪುನ ಕಥೆಯನ್ನು ಉಲ್ಲೇಖಿಸಿ, “ಗವಾಯಿ ಗಮನದಲ್ಲಿಡಿ, ಹಿರಣ್ಯಕಶಿಪು ಕೂಡ ತನ್ನ ಅಹಂಕಾರದಿಂದ ಪ್ರಹ್ಲಾದನಿಗೆ ‘ಈ ಕಂಬದಲ್ಲಿ ವಿಷ್ಣು ಇದ್ದಾನೆಯೇ?’ ಎಂದು ಕೇಳಿದ್ದ. ಅವನಿಗೆ ವರವಿತ್ತು, ಆದರೂ ನರಸಿಂಹ ಭಗವಾನ್ ಅವನನ್ನು ತೊಡೆಯ ಮೇಲಿಟ್ಟು ಉಗುರಿನಿಂದ ಕಿತ್ತು ಹಾಕಿದ್ದ. ನೀನು ಕೇವಲ ಒಬ್ಬ ಅಂಬೇಡ್ಕರವಾದಿ ಮನುಷ್ಯ ಮಾತ್ರ” ಎಂದಿದ್ದ.

ಹಿಂದುತ್ವ ವೆಬ್‌ಸೈಟ್‌ ಒಂದು ಸಿಜೆಐ ಗವಾಯಿ ಅವರಿಗೆ ಇದೇ ರೀತಿಯ ಬೆದರಿಕೆ ಹಾಕಿತ್ತು

ಹಿಂದೂ ಕೆಫೆಯ ಕೌಶಲೇಶ್ ರಾಯ್‌ನಿಂದ ಹಿಂಸಾತ್ಮಕ ಬೆದರಿಕೆ

ಸೆಪ್ಟೆಂಬರ್ 29ರಂದು ಅಜಿತ್ ಭಾರ್ತಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಸಿಜೆಐ ಗವಾಯಿ vs ಸ್ಲೀಪಿಂಗ್ ಹಿಂದೂಸ್’ ಎಂಬ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗಿತ್ತು.

ಯೂಟ್ಯೂಬ್ ವಿಡಿಯೋ ವಿವರಣೆಯಲ್ಲಿ (ಡಿಸ್ಕ್ರಿಪ್ಶನ್) “ಪ್ರಶ್ನೆ ಏನೆಂದರೆ, ಸಿಜೆಐ ಗವಾಯಿ ಅವರಂತವರು ತಮ್ಮ ಹಿಂದೂ ವಿರೋಧಿ ಹೇಳಿಕೆಗಳ ಹೊರತಾಗಿಯೂ ಯಾವುದೇ ಪರಿಣಾಮಗಳಿಲ್ಲದೆ ತಪ್ಪಿಸಿಕೊಳ್ಳುವುದು ಏಕೆ?” ಎಂದು ಬರೆಯಲಾಗಿತ್ತು.

ವಿಡಿಯೋದಲ್ಲಿ ಹಿಂದುತ್ವ ಸಂಘಟನೆಯಾದ ‘ಹಿಂದೂ ಕೆಫೆ ಫೌಂಡೇಶನ್‌’ನ ಸಂಸ್ಥಾಪಕ ಕೌಶಲೇಶ್ ರಾಯ್, ಸಿಜೆಐ ಗವಾಯಿ ವಿರುದ್ಧ ಬಹಿರಂಗವಾಗಿ ಹಿಂಸಾಚಾರದ ಬೆದರಿಕೆ ಹಾಕಿದ್ದ.

“ನಾನು ಗಾಂಧಿವಾದಿಯಾಗಿದ್ದೇನೆ, ಆದ್ದರಿಂದ ನಾನು ಹಿಂಸೆಯನ್ನು ಬೆಂಬಲಿಸುವುದಿಲ್ಲ. ಒಂದು ವೇಳೆ ನಾನು ಹಿಂಸೆಯನ್ನು ಬೆಂಬಲಿಸಿದ್ದರೆ, ನಾನು ಹೀಗೆ ಹೇಳುತ್ತಿದ್ದೆ: ಸಿಜೆಐ ಗವಾಯಿ ಅವರು ಕೋರ್ಟ್‌ನಲ್ಲಿ ಇರುವಾಗ, ಒಬ್ಬ ಹಿಂದೂ ವಕೀಲ ಅವರ ತಲೆಯನ್ನು ಹಿಡಿದು ಗೋಡೆಗೆ ಬಡಿದು, ತಲೆಯನ್ನು ಎರಡು ತುಂಡು ಮಾಡಬಹುದು. ಆದರೆ ನಾನು ಖಂಡಿತವಾಗಿಯೂ ಹಿಂಸೆಯನ್ನು ಬೆಂಬಲಿಸುವುದಿಲ್ಲ” ಎಂದು ಕೌಶಲೇಶ್ ರೈ ಹೇಳಿದ್ದ.

ಮುಂದುವರಿದು, ” ಹಿಂದೂ ಧರ್ಮದ ಬಗ್ಗೆ ಯಾರು ಏನು ಹೇಳಿದರೂ, ಅವರಿಗೆ ದೊಡ್ಡ ಮಟ್ಟದ ಶಿಕ್ಷೆಯಾಗುವುದಿಲ್ಲ. ಆದ್ದರಿಂದ ಎಲ್ಲರೂ ಸುಲಭವಾಗಿ ಮಾತನಾಡುತ್ತಾರೆ. ನ್ಯಾಯಮೂರ್ತಿ ಗವಾಯಿ ಅವರು ವಿಷ್ಣು ದೇವರ ಬಗ್ಗೆ ಟೀಕೆ ಮಾಡಿರುವುದು ಗೊತ್ತಿದ್ದೂ ಅವರು ಜಾಗರೂಕರಾಗಿಬೇಕು. ಗೋಡ್ಸೆಯಂತಹ ಹಿಂಸೆ ಮಾಡುವುದು ಸರಿಯಲ್ಲ, ಆದರೆ ಗಾಂಧಿಯಂತೆ ಶಾಂತಿಯಿಂದ ಪ್ರತಿಭಟಿಸಬಹುದು. ಒಂದು ವೇಳೆ ಗವಾಯಿ ಅವರ ಮುಖದ ಮೇಲೆ ಯಾರಾದರೂ ಉಗುಳಿದರೆ, ಕಾನೂನಿನ ಪ್ರಕಾರ ಗರಿಷ್ಠ ಆರು ತಿಂಗಳು ಜೈಲು ಶಿಕ್ಷೆಯಾಗಬಹುದು. ಆದರೆ, ಹಿಂದೂಗಳು ಇಂತಹ ಸಣ್ಣ ಕ್ರಮವನ್ನೂ ತೆಗೆದುಕೊಳ್ಳುತ್ತಿಲ್ಲ” ಎಂದಿದ್ದ.

“ಗವಾಯಿ ಅವರಂತಹವರು ಅಥವಾ ಯಾರಾದರೂ ಹಿಂದೂಗಳ ವಿರುದ್ಧ ಧಾರ್ಮಿಕವಾಗಿ ಟೀಕೆ ಮಾಡಿದರೆ, ಅವರಿಗೆ ಯಾವುದೇ ಶಿಕ್ಷೆಯಾಗುವುದಿಲ್ಲ ಎಂದು ಅವರಿಗೆ ಗೊತ್ತಿದೆ. ಆದರೆ, ಹಿಂದೂಗಳು ಒಂದು ದಿನ ಈ ರೀತಿಯ ಟೀಕೆಗೆ ಒಂದು ಬೆಲೆ (ಶಿಕ್ಷೆ ಅಥವಾ ಪರಿಣಾಮ) ನಿಗದಿಪಡಿಸಿದರೆ, ಉದಾಹರಣೆಗೆ, “ವಿಷ್ಣು ದೇವರ ಬಗ್ಗೆ ಟೀಕಿಸಿದರೆ ಇಂತಹ ಶಿಕ್ಷೆ ಎದುರಿಸಬೇಕು” ಎಂದು ಹೇಳಿದರೆ, ಜನರು ಜಾಗರೂಕರಾಗುತ್ತಾರೆ. ಒಂದೆರಡು ಜನರಿಗೆ ಶಿಕ್ಷೆಯಾದರೆ, ಇಂತಹ ಘಟನೆಗಳು 60-70% ಕಡಿಮೆಯಾಗುತ್ತವೆ” ಎಂದು ಹೇಳಿದ್ದ.

ಕಾರ್ಯಕ್ರಮದಲ್ಲಿ ಅಜಿತ್ ಭಾರ್ತಿ ನ್ಯಾಯಮೂರ್ತಿ ಗವಾಯಿ ಅವರ ಕಾರನ್ನು ಸುತ್ತುವರಿಯುವಂತೆ ಸೂಚಿಸಿದ್ದ.

ಸೋಮವಾರ ಗವಾಯಿ ಅವರ ಮೇಲಿನ ದಾಳಿಯ ನಂತರ, ರಾಯ್ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರಿಗೂ ಬೆದರಿಕೆ ಹಾಕಿದ್ದ.

ಸಿಜೆಐ ಮೇಲಿನ ದಾಳಿಯನ್ನು ಖಂಡಿಸಿದ್ದ ಪ್ರಶಾಂತ್ ಭೂಷಣ್, “ಇದು ಸಿಜೆಐ ಅವರನ್ನು ಬೆದರಿಸಲು ಬ್ರಾಹ್ಮಣ ಮನಸ್ಥಿತಿಯ ವಕೀಲರೊಬ್ಬರು ಮಾಡಿರುವ ಹೇಯ ಪ್ರಯತ್ನ. ಇದು ಕ್ರಿಮಿನಲ್ ನ್ಯಾಯಾಂಗ ನಿಂದನೆಯಾಗಿದೆ. ವಕೀಲರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದ್ದರು.

ಪ್ರಶಾಂತ್ ಭೂಷಣ್ ಅವರ ಈ ಪೋಸ್ಟ್ ಅನ್ನು ರಿಪೋಸ್ಟ್ ಮಾಡಿದ್ದ ರಾಯ್‌ “ಭೂಷಣ್ ಜಿ ರ‍್ಯಾಪ್‌ನಿಂದ ತೃಪ್ತರಾಗಿಲ್ಲ ಎಂದು ತೋರುತ್ತದೆ” ಎಂದು ಬರೆದಿದ್ದ.

ಅಜಿತ್ ಭಾರ್ತಿಯ ಕಾರ್ಯಕ್ರಮದಲ್ಲಿ ಕೌಶಲೇಶ್ ರಾಯ್ ಸಿಜೆಐ ಗವಾಯಿ ಅವರ ಕುಟುಂಬದ ಬಗ್ಗೆಯೂ ಟೀಕೆ ಮಾಡಿದ್ದ. “ಗವಾಯಿ ಅವರ ತಂದೆ ಮೂರು ರಾಜ್ಯಗಳ ಗವರ್ನರ್ ಆಗಿದ್ದರು ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಸಂಸ್ಥಾಪಕರಾಗಿದ್ದರು. ಈ ಎಲ್ಲ ವಿಷಯಗಳನ್ನು ಜೋಡಿಸಿದರೆ, ಭಾರತದಲ್ಲಿ ಕೆಲವು ಕೆಟ್ಟ ಬರಹಗಳು ಅಥವಾ ದ್ವೇಷ ಹರಡುವ ಸಾಹಿತ್ಯಕ್ಕೆ (‘ದೌರ್ಜನ್ಯ ಸಾಹಿತ್ಯ’) ಗವಾಯಿ ಕುಟುಂಬವೇ ಕಾರಣ ಎಂದು ತೋರುತ್ತದೆ” ಎಂದು ಹೇಳಿದ್ದ.

ಅಕ್ಟೋಬರ್ 5ರಂದು ಮಹಾರಾಷ್ಟ್ರದ ಅಮರಾವತಿಯಲ್ಲಿ ಆಯೋಜಿಸಿದ್ದ ಆರ್‌ಎಸ್‌ಎಸ್‌ 100ನೇ ವರ್ಷಾಚರಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸಿಜೆಐ ಗವಾಯಿ ಅವರ ತಾಯಿ ಕಮಲಾತೈ ಗವಾಯಿ ಅವರನ್ನು ಆಹ್ವಾನಿಸಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಕಮಲಾತೈ ಅವರು, ನಾವು ಅಂಬೇಡ್ಕರ್ ಸಿದ್ದಾಂತದವರು, ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ನಾನು ಒಂದು ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ ಅಂಬೇಡ್ಕರ್ ಸಿದ್ದಾಂತವನ್ನೇ ಹೇಳುತ್ತಿದ್ದೆ ಎಂದಿದ್ದರು. ಈ ಬೆಳವಣಿಗೆಗಳನ್ನು ಸಿಜೆಐ ಮೇಲಿನ ದಾಳಿಯ ಈ ಸಂದರ್ಭದಲ್ಲಿ ನಾವು ಗಮನಿಸಬೇಕಿದೆ.

ಹಿಂದುತ್ವ ಬಲಪಂಥೀಯರಿಂದ ವ್ಯಾಪಕ ಅಭಿಯಾನ

ಅಜಿತ್ ಭಾರ್ತಿ ಮತ್ತು ಕೌಶಲೇಶ್ ರಾಯ್ ಇತರ ಹಲವಾರು ಹಿಂದುತ್ವ ಬಲಪಂಥೀಯ ಸಂಘಟನೆಗಳು ಮತ್ತು ವ್ಯಕ್ತಿಗಳೊಂದಿಗೆ ಸೇರಿ ಮುಖ್ಯ ನ್ಯಾಯಮೂರ್ತಿ ಗವಾಯಿ ವಿರುದ್ಧ ಪ್ರಚಾರ ಮಾಡಿದ್ದರು. ವಿಶ್ವ ಹಿಂದೂ ಪರಿಷತ್ ಮುಖ್ಯಸ್ಥ ಅಲೋಕ್ ಕುಮಾರ್ “ನ್ಯಾಯಾಲಯದಲ್ಲಿ ಭಾಷೆಯಲ್ಲಿ ಸಂಯಮ” ವನ್ನು ಕಾಯ್ದುಕೊಳ್ಳುವಂತೆ ಹೇಳಿದ್ದರು. ಸನಾತನ ಕಥಾ ವಾಚಕ್ ಸಮನ್ವಯ ಪರಿಷತ್ ಎಂಬ ಗುಂಪು ಅಕ್ಟೋಬರ್ 2 ರಂದು ಸುಪ್ರೀಂ ಕೋರ್ಟ್‌ಗೆ ಮೆರವಣಿಗೆಗೆ ಕರೆ ನೀಡಿತ್ತು.

ವಕೀಲ ವಿನೀತ್ ಜಿಂದಾಲ್ ಅವರು ತಮ್ಮ ಹೇಳಿಕೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರಿಗೆ ಪತ್ರ ಬರೆದಿದ್ದರು. ರಾಷ್ಟ್ರಪತಿಗೂ ಪತ್ರ ಕಳುಹಿಸಿದ್ದರು. #ImpeachCJI ಎಂಬ ಹ್ಯಾಶ್‌ಟ್ಯಾಗ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಹಲವಾರು ಯೂಟ್ಯೂಬ್ ಚಾನೆಲ್‌ಗಳು ಮುಖ್ಯ ನ್ಯಾಯಮೂರ್ತಿ ಗವಾಯಿ ವಿರುದ್ಧ ಅಭಿಯಾನ ಆರಂಭಿಸಿತ್ತು.

Courtesy : thewirehindi.com

ಸಿಜೆಐ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ್ ಕಿಶೋರ್ ಯಾರು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...