Homeಮುಖಪುಟಸಿಜೆಐ ಮೇಲೆ ದಾಳಿ: ಬಲಪಂಥೀಯ ಪ್ರಚೋದನೆಯ ಫಲಿತಾಂಶ

ಸಿಜೆಐ ಮೇಲೆ ದಾಳಿ: ಬಲಪಂಥೀಯ ಪ್ರಚೋದನೆಯ ಫಲಿತಾಂಶ

- Advertisement -
- Advertisement -

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ. ಆರ್ ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆಯಲು ಯತ್ನಿಸಿದ ಆಘಾತಕಾರಿ ಘಟನೆ ಸೋಮವಾರ (ಅ.6) ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದೆ.

ಸಂವಿಧಾನವನ್ನು ಅನುಸರಿಸುವ ಭಾರತೀಯರು ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದು, ದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ, ಕೆಲ ಹಿಂದುತ್ವ ಬಲಪಂಥೀಯರು, ಧರ್ಮಾಂಧರು ಮತ್ತು ಜಾತಿವಾದಿಗಳು ದಲಿತ ಸಮುದಾಯದ ಸಿಜೆಐ ಮೇಲಿನ ದಾಳಿಯನ್ನು ಸಂಭ್ರಮಿಸಿದ್ದಾರೆ.

ಕೆಲ ದುಷ್ಕರ್ಮಿಗಳು ಕಾನೂನಿನ ಯಾವುದೇ ಭಯವಿಲ್ಲದೆ ಬಹಿರಂಗವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಸಿಜೆಐಗೆ ಗುಂಡಿಕ್ಕುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ಇನ್ನೂ ಕೆಲವರು ಎಐ ವಿಡಿಯೋಗಳ ಮೂಲಕ ಸಿಜೆಐ ಅವರನ್ನು ಅವಮಾನಿಸಿದ್ದಾರೆ.


ಸಾಮಾಜಿಕ ಜಾಲತಾಣಗಳಾದ ಎಕ್ಸ್‌, ಮತ್ತು ಫೇಸ್‌ಬುಕ್‌ಗಳು ಕೊಲೆ, ಹಲ್ಲೆ, ಅತ್ಮಹತ್ಯೆ ಇತ್ಯಾದಿ ಪದಗಳನ್ನು ಬಳಸಿ ಏನಾದರು ಪೋಸ್ಟ್‌ಗಳನ್ನು ಹಾಕಿದರೆ ನಿಯಮಗಳನ್ನು ಮೀರಿದ ಕಾರಣ ಕೊಟ್ಟು ತಕ್ಷಣ ಅವುಗಳನ್ನು ತೆಗೆದು ಹಾಕುತ್ತವೆ. ಆದರೆ, ಮೇಲೆ ನಾವು ಉಲ್ಲೇಖಿಸಿದ ಪೋಸ್ಟ್‌ಗಳ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಇಲ್ಲಿ ಗಮನಾರ್ಹ.

ಸಿಜೆಐ ಮೇಲೆ ಶೂ ಎಸೆಯಲು ಕಾರಣವೇನು?

ಭಾರತೀಯ ಪುರಾತತ್ವ ಇಲಾಖೆ ಅಧೀನದಲ್ಲಿ ಬರುವ ಮಧ್ಯಪ್ರದೇಶದ ಐತಿಹಾಸಿಕ ತಾಣ ಖಜುರಾಹೊ ದೇವಾಲಯಕ್ಕೆ ಸಂಬಂಧಪಟ್ಟ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ತಿರಸ್ಕರಿಸುವ ವೇಳೆ ಸಿಜೆಐ ಗವಾಯಿ ಅವರು ನೀಡಿರುವ ಮೌಖಿಕ ಹೇಳಿಕೆಯೇ ವಕೀಲ ರಾಕೇಶ್ ಕಿಶೋರ್ ದಾಳಿ ಅವರ ಮೇಲೆ ದಾಳಿ ಮಾಡಲು ಕಾರಣ ಎಂದು ಹೇಳಲಾಗ್ತಿದೆ.

ಖಜುರಾಹೊದಲ್ಲಿನ ಶಿರಚ್ಛೇದಗೊಂಡ ವಿಷ್ಣುವಿನ ವಿಗ್ರಹವನ್ನು ಪುನಃಸ್ಥಾಪಿಸಲು ನಿರ್ದೇಶಿಸುವಂತೆ ಕೋರಿ ಪಿಐಎಲ್‌ ಸಲ್ಲಿಸಲಾಗಿತ್ತು. ಅದನ್ನು ತಿರಸ್ಕರಿಸಿದ್ದ ಸಿಜೆಐ, “ಈ ಅರ್ಜಿಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ. ಪ್ರಚಾರದ ಹಿತಾಸಕ್ತಿ ಇದ್ದಂತಿದೆ. ಭಗ್ನಗೊಂಡ ವಿಷ್ಣು ವಿಗ್ರಹವನ್ನು ದುರಸ್ಥಿಗೊಳಿಸಲು ಪುರಾತತ್ವ ಇಲಾಖೆಗೆ ಮನವಿ ಸಲ್ಲಿಸಿ ಎಂದಿದ್ದರು.

ಮುಂದುವರಿದು, “ನೀವು ವಿಷ್ಣುವಿನ ಪರಮ ಭಕ್ತ ಎಂದು ಹೇಳಿಕೊಳ್ಳುತ್ತೀರಿ. ಹೋಗಿ ನಿಮ್ಮ ದೇವರ ಬಳಿಯೇ ಪ್ರಾರ್ಥಿಸಿ, ಆ ದೇವರೇ ಏನಾದರೂ ಮಾಡಲಿ” ಎಂದು ಅರ್ಜಿದಾರರಿಗೆ ಸಿಜೆಐ ಮೌಖಿಕವಾಗಿ ಹೇಳಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಬೆಂಕಿ ಹೊತ್ತಿಸಿದ ಸಿಜೆಐ ಹೇಳಿಕೆ

ಸಿಜೆಐ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿತ್ತು. #ImpeachCJI ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್‌ ಆಗಿತ್ತು. ಹಿಂದುತ್ವ ಸಂಘಟನೆಗಳು ಸಿಜೆಐ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿತ್ತು.

ಹೇಳಿಕೆ ವಿವಾದ ಸ್ವರೂಪ ಪಡೆದ ಎರಡು ದಿನಗಳ ನಂತರ ಪ್ರತಿಕ್ರಿಯಿಸಿದ್ದ ಸಿಜೆಐ ಗವಾಯಿ “ನಾನು ಧರ್ಮವನ್ನು ಅವಹೇಳನ ಮಾಡಿಲ್ಲ, ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ” ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದರು.

ಅಜಿತ್ ಭಾರ್ತಿಯ ಪ್ರಚೋದನಕಾರಿ ಅಭಿಯಾನ

ಸಿಜೆಐ ಹೇಳಿಕೆ ವಿವಾದದ ಬೆಂಕಿ ಹೊತ್ತಿಸಿದಾಗ ಅದಕ್ಕೆ ತುಪ್ಪ ಸುರಿದ ಪ್ರಮುಖರಲ್ಲಿ ಬಲಪಂಥೀಯ ಯೂಟ್ಯೂಬರ್ ಅಜಿತ್ ಭಾರ್ತಿಯೂ ಒಬ್ಬ. ಈ ವಿಚಾರದಲ್ಲಿ ಈತನ ಪಾತ್ರ ದೊಡ್ಡದಿದೆ.

ಸೋಮವಾರ (ಅ.6) ಸಿಜೆಐ ಮೇಲೆ ಶೂ ಎಸೆದ ಘಟನೆ ನಡೆದ ಬಳಿಕ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದ ಅಜಿತ್ ಭಾರ್ತಿ, “ಇಂದು ಸಿಜೆಐ ಗವಾಯಿ ಅವರತ್ತ ವಕೀಲ ಎಸೆದ ಶೂ ಬಹುತೇಕ ತಗುಲಿದೆ. ವಕೀಲ ಗವಾಯಿ ಅವರ ಪೀಠದ ಬಳಿಗೆ ಹೋಗಿ, ತನ್ನ ಶೂ ತೆಗೆದು ಹೊಡೆಯಲು ಮುಂದಾದಾಗ ಭದ್ರತಾ ಸಿಬ್ಬಂದಿ ಅವರನ್ನು ತಡೆದರು. ನಂತರ ಹೊರಗಡೆ ಕರೆದೊಯ್ಯುವಾಗ “ಸನಾತನ ಧರ್ಮದ ಅವಮಾನವನ್ನು ಸಹಿಸುವುದಿಲ್ಲ ಎಂದು ವಕೀಲರು ಕೂಗಿದ್ದಾರೆ” ಎಂದು ಬರೆದುಕೊಂಡಿದ್ದಾನೆ.

ತನ್ನ ಇನ್ನೊಂದು ಪೋಸ್ಟ್‌ನಲ್ಲಿ ಅಜಿತ್ ಭಾರ್ತಿ ಆಕ್ರಮಣಕಾರಿ ಭಾಷೆ ಬಳಸಿದ್ದು, “ಇದು ಕೇವಲ ಆರಂಭ. ನ್ಯಾಯಾಧೀಶರು ಹಿಂದೂ ವಿರೋಧಿ ಧೋರಣೆ ತೋರಿದರೆ ಮತ್ತು ತಮ್ಮ ಆದೇಶಗಳಲ್ಲಿ ಹಿಂದೂಗಳನ್ನು ಅವಮಾನಿಸುವ ರೀತಿಯಲ್ಲಿ ತಮ್ಮ ಕೆಟ್ಟ ಉದ್ದೇಶಗಳನ್ನು ತೋರಿದರೆ, ಅಂತಹ ನ್ಯಾಯಾಧೀಶರ ವಿರುದ್ಧ ಜನರು ಬೀದಿಗಳಲ್ಲಿಯೂ ಇದೇ ರೀತಿಯಾಗಿ ವರ್ತಿಸಬಹುದು” ಎಂದು ಎಚ್ಚರಿಕೆ ನೀಡಿದ್ದಾನೆ.

ಈ ಹಿಂದೆ ಸೆಪ್ಟೆಂಬರ್ 18ರಂದು ಎಕ್ಸ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್‌ ಮಾಡಿದ್ದ ಅಜಿತ್ ಭಾರ್ತಿ ಸಿಜೆಐ ಗವಾಯಿ ಅವರನ್ನು “ಹಿಂದೂ ದ್ವೇಷ ಹೊಂದಿರುವ ಕೀಳು ನ್ಯಾಯಾಧೀಶ” ಎಂದು ಕರೆದಿದ್ದ. ಜೊತೆಗೆ, ಹಿರಣ್ಯಕಶಿಪುನ ಕಥೆಯನ್ನು ಉಲ್ಲೇಖಿಸಿ, “ಗವಾಯಿ ಗಮನದಲ್ಲಿಡಿ, ಹಿರಣ್ಯಕಶಿಪು ಕೂಡ ತನ್ನ ಅಹಂಕಾರದಿಂದ ಪ್ರಹ್ಲಾದನಿಗೆ ‘ಈ ಕಂಬದಲ್ಲಿ ವಿಷ್ಣು ಇದ್ದಾನೆಯೇ?’ ಎಂದು ಕೇಳಿದ್ದ. ಅವನಿಗೆ ವರವಿತ್ತು, ಆದರೂ ನರಸಿಂಹ ಭಗವಾನ್ ಅವನನ್ನು ತೊಡೆಯ ಮೇಲಿಟ್ಟು ಉಗುರಿನಿಂದ ಕಿತ್ತು ಹಾಕಿದ್ದ. ನೀನು ಕೇವಲ ಒಬ್ಬ ಅಂಬೇಡ್ಕರವಾದಿ ಮನುಷ್ಯ ಮಾತ್ರ” ಎಂದಿದ್ದ.

ಹಿಂದುತ್ವ ವೆಬ್‌ಸೈಟ್‌ ಒಂದು ಸಿಜೆಐ ಗವಾಯಿ ಅವರಿಗೆ ಇದೇ ರೀತಿಯ ಬೆದರಿಕೆ ಹಾಕಿತ್ತು

ಹಿಂದೂ ಕೆಫೆಯ ಕೌಶಲೇಶ್ ರಾಯ್‌ನಿಂದ ಹಿಂಸಾತ್ಮಕ ಬೆದರಿಕೆ

ಸೆಪ್ಟೆಂಬರ್ 29ರಂದು ಅಜಿತ್ ಭಾರ್ತಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಸಿಜೆಐ ಗವಾಯಿ vs ಸ್ಲೀಪಿಂಗ್ ಹಿಂದೂಸ್’ ಎಂಬ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗಿತ್ತು.

ಯೂಟ್ಯೂಬ್ ವಿಡಿಯೋ ವಿವರಣೆಯಲ್ಲಿ (ಡಿಸ್ಕ್ರಿಪ್ಶನ್) “ಪ್ರಶ್ನೆ ಏನೆಂದರೆ, ಸಿಜೆಐ ಗವಾಯಿ ಅವರಂತವರು ತಮ್ಮ ಹಿಂದೂ ವಿರೋಧಿ ಹೇಳಿಕೆಗಳ ಹೊರತಾಗಿಯೂ ಯಾವುದೇ ಪರಿಣಾಮಗಳಿಲ್ಲದೆ ತಪ್ಪಿಸಿಕೊಳ್ಳುವುದು ಏಕೆ?” ಎಂದು ಬರೆಯಲಾಗಿತ್ತು.

ವಿಡಿಯೋದಲ್ಲಿ ಹಿಂದುತ್ವ ಸಂಘಟನೆಯಾದ ‘ಹಿಂದೂ ಕೆಫೆ ಫೌಂಡೇಶನ್‌’ನ ಸಂಸ್ಥಾಪಕ ಕೌಶಲೇಶ್ ರಾಯ್, ಸಿಜೆಐ ಗವಾಯಿ ವಿರುದ್ಧ ಬಹಿರಂಗವಾಗಿ ಹಿಂಸಾಚಾರದ ಬೆದರಿಕೆ ಹಾಕಿದ್ದ.

“ನಾನು ಗಾಂಧಿವಾದಿಯಾಗಿದ್ದೇನೆ, ಆದ್ದರಿಂದ ನಾನು ಹಿಂಸೆಯನ್ನು ಬೆಂಬಲಿಸುವುದಿಲ್ಲ. ಒಂದು ವೇಳೆ ನಾನು ಹಿಂಸೆಯನ್ನು ಬೆಂಬಲಿಸಿದ್ದರೆ, ನಾನು ಹೀಗೆ ಹೇಳುತ್ತಿದ್ದೆ: ಸಿಜೆಐ ಗವಾಯಿ ಅವರು ಕೋರ್ಟ್‌ನಲ್ಲಿ ಇರುವಾಗ, ಒಬ್ಬ ಹಿಂದೂ ವಕೀಲ ಅವರ ತಲೆಯನ್ನು ಹಿಡಿದು ಗೋಡೆಗೆ ಬಡಿದು, ತಲೆಯನ್ನು ಎರಡು ತುಂಡು ಮಾಡಬಹುದು. ಆದರೆ ನಾನು ಖಂಡಿತವಾಗಿಯೂ ಹಿಂಸೆಯನ್ನು ಬೆಂಬಲಿಸುವುದಿಲ್ಲ” ಎಂದು ಕೌಶಲೇಶ್ ರೈ ಹೇಳಿದ್ದ.

ಮುಂದುವರಿದು, ” ಹಿಂದೂ ಧರ್ಮದ ಬಗ್ಗೆ ಯಾರು ಏನು ಹೇಳಿದರೂ, ಅವರಿಗೆ ದೊಡ್ಡ ಮಟ್ಟದ ಶಿಕ್ಷೆಯಾಗುವುದಿಲ್ಲ. ಆದ್ದರಿಂದ ಎಲ್ಲರೂ ಸುಲಭವಾಗಿ ಮಾತನಾಡುತ್ತಾರೆ. ನ್ಯಾಯಮೂರ್ತಿ ಗವಾಯಿ ಅವರು ವಿಷ್ಣು ದೇವರ ಬಗ್ಗೆ ಟೀಕೆ ಮಾಡಿರುವುದು ಗೊತ್ತಿದ್ದೂ ಅವರು ಜಾಗರೂಕರಾಗಿಬೇಕು. ಗೋಡ್ಸೆಯಂತಹ ಹಿಂಸೆ ಮಾಡುವುದು ಸರಿಯಲ್ಲ, ಆದರೆ ಗಾಂಧಿಯಂತೆ ಶಾಂತಿಯಿಂದ ಪ್ರತಿಭಟಿಸಬಹುದು. ಒಂದು ವೇಳೆ ಗವಾಯಿ ಅವರ ಮುಖದ ಮೇಲೆ ಯಾರಾದರೂ ಉಗುಳಿದರೆ, ಕಾನೂನಿನ ಪ್ರಕಾರ ಗರಿಷ್ಠ ಆರು ತಿಂಗಳು ಜೈಲು ಶಿಕ್ಷೆಯಾಗಬಹುದು. ಆದರೆ, ಹಿಂದೂಗಳು ಇಂತಹ ಸಣ್ಣ ಕ್ರಮವನ್ನೂ ತೆಗೆದುಕೊಳ್ಳುತ್ತಿಲ್ಲ” ಎಂದಿದ್ದ.

“ಗವಾಯಿ ಅವರಂತಹವರು ಅಥವಾ ಯಾರಾದರೂ ಹಿಂದೂಗಳ ವಿರುದ್ಧ ಧಾರ್ಮಿಕವಾಗಿ ಟೀಕೆ ಮಾಡಿದರೆ, ಅವರಿಗೆ ಯಾವುದೇ ಶಿಕ್ಷೆಯಾಗುವುದಿಲ್ಲ ಎಂದು ಅವರಿಗೆ ಗೊತ್ತಿದೆ. ಆದರೆ, ಹಿಂದೂಗಳು ಒಂದು ದಿನ ಈ ರೀತಿಯ ಟೀಕೆಗೆ ಒಂದು ಬೆಲೆ (ಶಿಕ್ಷೆ ಅಥವಾ ಪರಿಣಾಮ) ನಿಗದಿಪಡಿಸಿದರೆ, ಉದಾಹರಣೆಗೆ, “ವಿಷ್ಣು ದೇವರ ಬಗ್ಗೆ ಟೀಕಿಸಿದರೆ ಇಂತಹ ಶಿಕ್ಷೆ ಎದುರಿಸಬೇಕು” ಎಂದು ಹೇಳಿದರೆ, ಜನರು ಜಾಗರೂಕರಾಗುತ್ತಾರೆ. ಒಂದೆರಡು ಜನರಿಗೆ ಶಿಕ್ಷೆಯಾದರೆ, ಇಂತಹ ಘಟನೆಗಳು 60-70% ಕಡಿಮೆಯಾಗುತ್ತವೆ” ಎಂದು ಹೇಳಿದ್ದ.

ಕಾರ್ಯಕ್ರಮದಲ್ಲಿ ಅಜಿತ್ ಭಾರ್ತಿ ನ್ಯಾಯಮೂರ್ತಿ ಗವಾಯಿ ಅವರ ಕಾರನ್ನು ಸುತ್ತುವರಿಯುವಂತೆ ಸೂಚಿಸಿದ್ದ.

ಸೋಮವಾರ ಗವಾಯಿ ಅವರ ಮೇಲಿನ ದಾಳಿಯ ನಂತರ, ರಾಯ್ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರಿಗೂ ಬೆದರಿಕೆ ಹಾಕಿದ್ದ.

ಸಿಜೆಐ ಮೇಲಿನ ದಾಳಿಯನ್ನು ಖಂಡಿಸಿದ್ದ ಪ್ರಶಾಂತ್ ಭೂಷಣ್, “ಇದು ಸಿಜೆಐ ಅವರನ್ನು ಬೆದರಿಸಲು ಬ್ರಾಹ್ಮಣ ಮನಸ್ಥಿತಿಯ ವಕೀಲರೊಬ್ಬರು ಮಾಡಿರುವ ಹೇಯ ಪ್ರಯತ್ನ. ಇದು ಕ್ರಿಮಿನಲ್ ನ್ಯಾಯಾಂಗ ನಿಂದನೆಯಾಗಿದೆ. ವಕೀಲರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದ್ದರು.

ಪ್ರಶಾಂತ್ ಭೂಷಣ್ ಅವರ ಈ ಪೋಸ್ಟ್ ಅನ್ನು ರಿಪೋಸ್ಟ್ ಮಾಡಿದ್ದ ರಾಯ್‌ “ಭೂಷಣ್ ಜಿ ರ‍್ಯಾಪ್‌ನಿಂದ ತೃಪ್ತರಾಗಿಲ್ಲ ಎಂದು ತೋರುತ್ತದೆ” ಎಂದು ಬರೆದಿದ್ದ.

ಅಜಿತ್ ಭಾರ್ತಿಯ ಕಾರ್ಯಕ್ರಮದಲ್ಲಿ ಕೌಶಲೇಶ್ ರಾಯ್ ಸಿಜೆಐ ಗವಾಯಿ ಅವರ ಕುಟುಂಬದ ಬಗ್ಗೆಯೂ ಟೀಕೆ ಮಾಡಿದ್ದ. “ಗವಾಯಿ ಅವರ ತಂದೆ ಮೂರು ರಾಜ್ಯಗಳ ಗವರ್ನರ್ ಆಗಿದ್ದರು ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಸಂಸ್ಥಾಪಕರಾಗಿದ್ದರು. ಈ ಎಲ್ಲ ವಿಷಯಗಳನ್ನು ಜೋಡಿಸಿದರೆ, ಭಾರತದಲ್ಲಿ ಕೆಲವು ಕೆಟ್ಟ ಬರಹಗಳು ಅಥವಾ ದ್ವೇಷ ಹರಡುವ ಸಾಹಿತ್ಯಕ್ಕೆ (‘ದೌರ್ಜನ್ಯ ಸಾಹಿತ್ಯ’) ಗವಾಯಿ ಕುಟುಂಬವೇ ಕಾರಣ ಎಂದು ತೋರುತ್ತದೆ” ಎಂದು ಹೇಳಿದ್ದ.

ಅಕ್ಟೋಬರ್ 5ರಂದು ಮಹಾರಾಷ್ಟ್ರದ ಅಮರಾವತಿಯಲ್ಲಿ ಆಯೋಜಿಸಿದ್ದ ಆರ್‌ಎಸ್‌ಎಸ್‌ 100ನೇ ವರ್ಷಾಚರಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸಿಜೆಐ ಗವಾಯಿ ಅವರ ತಾಯಿ ಕಮಲಾತೈ ಗವಾಯಿ ಅವರನ್ನು ಆಹ್ವಾನಿಸಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಕಮಲಾತೈ ಅವರು, ನಾವು ಅಂಬೇಡ್ಕರ್ ಸಿದ್ದಾಂತದವರು, ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ನಾನು ಒಂದು ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ ಅಂಬೇಡ್ಕರ್ ಸಿದ್ದಾಂತವನ್ನೇ ಹೇಳುತ್ತಿದ್ದೆ ಎಂದಿದ್ದರು. ಈ ಬೆಳವಣಿಗೆಗಳನ್ನು ಸಿಜೆಐ ಮೇಲಿನ ದಾಳಿಯ ಈ ಸಂದರ್ಭದಲ್ಲಿ ನಾವು ಗಮನಿಸಬೇಕಿದೆ.

ಹಿಂದುತ್ವ ಬಲಪಂಥೀಯರಿಂದ ವ್ಯಾಪಕ ಅಭಿಯಾನ

ಅಜಿತ್ ಭಾರ್ತಿ ಮತ್ತು ಕೌಶಲೇಶ್ ರಾಯ್ ಇತರ ಹಲವಾರು ಹಿಂದುತ್ವ ಬಲಪಂಥೀಯ ಸಂಘಟನೆಗಳು ಮತ್ತು ವ್ಯಕ್ತಿಗಳೊಂದಿಗೆ ಸೇರಿ ಮುಖ್ಯ ನ್ಯಾಯಮೂರ್ತಿ ಗವಾಯಿ ವಿರುದ್ಧ ಪ್ರಚಾರ ಮಾಡಿದ್ದರು. ವಿಶ್ವ ಹಿಂದೂ ಪರಿಷತ್ ಮುಖ್ಯಸ್ಥ ಅಲೋಕ್ ಕುಮಾರ್ “ನ್ಯಾಯಾಲಯದಲ್ಲಿ ಭಾಷೆಯಲ್ಲಿ ಸಂಯಮ” ವನ್ನು ಕಾಯ್ದುಕೊಳ್ಳುವಂತೆ ಹೇಳಿದ್ದರು. ಸನಾತನ ಕಥಾ ವಾಚಕ್ ಸಮನ್ವಯ ಪರಿಷತ್ ಎಂಬ ಗುಂಪು ಅಕ್ಟೋಬರ್ 2 ರಂದು ಸುಪ್ರೀಂ ಕೋರ್ಟ್‌ಗೆ ಮೆರವಣಿಗೆಗೆ ಕರೆ ನೀಡಿತ್ತು.

ವಕೀಲ ವಿನೀತ್ ಜಿಂದಾಲ್ ಅವರು ತಮ್ಮ ಹೇಳಿಕೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರಿಗೆ ಪತ್ರ ಬರೆದಿದ್ದರು. ರಾಷ್ಟ್ರಪತಿಗೂ ಪತ್ರ ಕಳುಹಿಸಿದ್ದರು. #ImpeachCJI ಎಂಬ ಹ್ಯಾಶ್‌ಟ್ಯಾಗ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಹಲವಾರು ಯೂಟ್ಯೂಬ್ ಚಾನೆಲ್‌ಗಳು ಮುಖ್ಯ ನ್ಯಾಯಮೂರ್ತಿ ಗವಾಯಿ ವಿರುದ್ಧ ಅಭಿಯಾನ ಆರಂಭಿಸಿತ್ತು.

Courtesy : thewirehindi.com

ಸಿಜೆಐ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ್ ಕಿಶೋರ್ ಯಾರು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಂದೇ ಮಾತರಂ ಗೀತೆಯ 6 ಚರಣಕ್ಕೆ ಕರ್ನಾಟಕ ಸರ್ಕಾರದ ಬ್ರೇಕ್

ವಂದೇ ಮಾತರಂ ಗೀತೆಯ ಗಾಯನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿರ್ಧಾರ ಮತ್ತು ಕಡ್ಡಾಯ ನೀತಿಗೆ ಕರ್ನಾಟಕ ಸರ್ಕಾರ ನೇರವಾಗಿ ಸೆಡ್ಡು ಹೊಡೆದಿದೆ. ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಸಂಪೂರ್ಣ...

ಸಿಜೆಪಿ ಪ್ರತಿಭಟನೆಯಲ್ಲಿ ಬಾಲಕಿ ನಿಶು ಆಜಾದ್‌ಗೆ ಬೆದರಿಕೆ; ಕ್ರಮಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 14 ವರ್ಷದ ನಿಶು ಆಜಾದ್‌ಗೆ ಕಿಡಿಗೇಡಿಗಳು ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ ಹಾಗೂ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂಬ...

ಜಾದವ್‌ಪುರ ವಿವಿ ವಿರುದ್ಧ ಸುವೇಂದು ಅಧಿಕಾರಿಯ ‘ಕೇಸರಿ ಯಾತ್ರೆ’: ‘ಆಜಾದಿ’, ‘ಲಾಲ್ ಸಲಾಂ’ ಕೂಗುವವರನ್ನು ಬೇರುಸಹಿತ ಕಿತ್ತುಹಾಕುತ್ತೇನೆ ಎಂದು ಬೆದರಿಕೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಹಾಗೂ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾಲಯದತ್ತ ನಡೆದ ‘ಗೆರುವಾ ಸಮ್ಮಾನ್ ಯಾತ್ರೆ’ (ಕೇಸರಿ ಗೌರವ ಮೆರವಣಿಗೆ) ಇದೀಗ ರಾಜ್ಯದ ರಾಜಕೀಯ ವಲಯದಲ್ಲಿ...

SIR : ಒಂದೇ ಮತಗಟ್ಟೆಯ 729 ಮತದಾರರಲ್ಲಿ 728 ಮಂದಿಯ ಹೆಸರು ಡಿಲೀಟ್!

ದೆಹಲಿಯ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌) ಮುನ್ನ, ಯಮುನಾ ನದಿ ಪಾತ್ರದ ಕೊಳಗೇರಿ ಪ್ರದೇಶವಾದ ಬೇಲಾ ಎಸ್ಟೇಟ್‌ನ ಭಾಗವೊಂದನ್ನು ಒಳಗೊಂಡಿರುವ ಮತಗಟ್ಟೆಯಲ್ಲಿ 729 ನೋಂದಾಯಿತ ಮತದಾರರಿದ್ದರು. ಆದರೆ, ಆಗಸ್ಟ್‌ನಲ್ಲಿ ಕರಡು...

ಬಂಗಾಳದ ನಾನ್‌ವೆಜ್ ವಿವಾದ: ಬಾಗೇಶ್ವರ್ ಬಾಬಾ ಹೇಳಿಕೆಗೆ ಹಿಂದೂ ವಲಯದಲ್ಲೇ ವಿರೋಧ; ‘ಹಿಂದೂ ಧರ್ಮ ಆಹಾರದ ಕೋಡ್ ಅಲ್ಲ!

ದುರ್ಗಾ ಪೂಜೆಯ ಸಂದರ್ಭದಲ್ಲಿ ಮೀನು, ಮಾಂಸ ಸೇವನೆ ಹಾಗೂ ಮಾರಾಟದ ವಿರುದ್ಧ ಬಾಗೇಶ್ವರ್ ಧಾಮದ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿದ್ದ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ವಿವಾದ ಹುಟ್ಟುಹಾಕಿದ ಬೆನ್ನಲ್ಲೇ, ಇದೀಗ...

SIR: ಪಂಜಾಬ್‌ ಮತದಾರರ ಪಟ್ಟಿಯಿಂದ ಡಿಲೀಟ್ ಆಗಿದ್ದ ರಾಘವ್ ಚಡ್ಡಾ ಹೆಸರು ದೆಹಲಿಯಲ್ಲಿ ಎಂಟ್ರಿ!

ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರು ಪಂಜಾಬ್‌ನ ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕಲ್ಪಟ್ಟ ಕೆಲವೇ ದಿನಗಳಲ್ಲಿ, ದೆಹಲಿಯ ಮತದಾರರ ಪಟ್ಟಿಯಲ್ಲಿ ದಿಢೀರನೆ ಪ್ರತ್ಯಕ್ಷವಾಗಿರುವುದು ದೇಶಾದ್ಯಂತ ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ...

ರಾಜ್ಯ ಕಾಂಗ್ರೆಸ್‌ಗೆ 35 ನೂತನ ಜಿಲ್ಲಾಧ್ಯಕ್ಷರ ನೇಮಕ; ಹೈಕಮಾಂಡ್ ಪಟ್ಟಿಯಲ್ಲಿ ಮಹಿಳೆಯರಿಗಿಲ್ಲ ಪ್ರಾತಿನಿಧ್ಯ!

ಕರ್ನಾಟಕ ಕಾಂಗ್ರೆಸ್‌ನ ಬಹುನಿರೀಕ್ಷಿತ ಜಿಲ್ಲಾ ಪುನರ್‌ರಚನೆಗೆ ಕೊನೆಗೂ ಚಾಲನೆ ದೊರೆತಿದ್ದು, ರಾಜ್ಯದ 35 ಸಾಂಸ್ಥಿಕ ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಗೆ (DCC) ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ....

ತ್ರಿಪುರ| ಬಿಜೆಪಿ ಬೇಡಿಕೆಗೆ ಸ್ಪಂದಿಸಿದ ಇಸಿಐ; ಗ್ರಾಮ ಸಮಿತಿ ಚುನಾವಣೆ ಹಿನ್ನೆಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಮುಂದೂಡಿಕೆ

ಆಡಳಿತರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಬೇಡಿಕೆಗೆ ಸ್ಪಂದಿಸಿರುವ ಭಾರತೀಯ ಚುನಾವಣಾ ಆಯೋಗ (ಇಸಿಐ), ರಾಜ್ಯದ ಬುಡಕಟ್ಟು ಪ್ರದೇಶಗಳಲ್ಲಿ ಸೆಪ್ಟೆಂಬರ್ 28 ರಂದು ನಡೆಯಲಿರುವ ಗ್ರಾಮ ಸಮಿತಿ...

SIR: ಸ್ವತಃ BLO ಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ತಾಂತ್ರಿಕ ಎಡವಟ್ಟುಗಳು ಮತ್ತು ಗೊಂದಲಗಳು ಪ್ರತಿದಿನವೂ ಒಂದಲ್ಲ ಒಂದು ವಿಲಕ್ಷಣ ಘಟನೆಗಳಿಗೆ ಕಾರಣವಾಗುತ್ತಿದ್ದು, ಇದೀಗ ಸ್ವತಃ ಮತದಾರರ ಪಟ್ಟಿ ಪರಿಷ್ಕರಣೆ...

‘ಎಸ್‌ಐಆರ್ ಪ್ರಜಾಪ್ರಭುತ್ವಕ್ಕೆ ವಂಚನೆ’: 2025ಕ್ಕೆ ಹೋಲಿಸಿದರೆ ದೆಹಲಿಯ 58.60 ಲಕ್ಷ ಮತದಾರರ ಹೆಸರುಗಳು ಮಾಯ: ನಾಗರೀಕ ಸಂಘಟನೆಗಳ ಆಕ್ರೋಶ

ನವದೆಹಲಿ: ದೆಹಲಿಯಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮತದಾರರ ಪಟ್ಟಿಯ ಶುದ್ಧೀಕರಣದ ಸಾಮಾನ್ಯ ಆಡಳಿತಾತ್ಮಕ ಕ್ರಮವಲ್ಲ, ಬದಲಾಗಿ ನಾಗರಿಕರ ಮತದಾನದ ಹಕ್ಕಿನ ಮೇಲೆ ಗಂಭೀರ ಪರಿಣಾಮ ಬೀರುವ...