ದೇಶದಲ್ಲಿ ಭಿನ್ನಾಭಿಪ್ರಾಯಗಳನ್ನು ಬಿತ್ತುವ ಮತ್ತು ಒಡಕು ಮೂಡಿಸುವ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ ಎಂದು ಪರೋಕ್ಷವಾಗಿ ಅಂತರಾಷ್ಟ್ರೀಯ ಮಾಧ್ಯಮ ಬಿಬಿಸಿಗೆ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ.
ದೆಹಲಿ ಕಂಟೋನ್ಮೆಂಟ್ನ ಕರಿಯಪ್ಪ ಮೈದಾನದಲ್ಲಿ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್ಸಿಸಿ) ರ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತವು ಭವ್ಯತೆಯನ್ನು ಸಾಧಿಸಲು ಏಕತೆಯ ಮಂತ್ರವೊಂದೇ ಮಾರ್ಗವಾಗಿದೆ ಎಂದು ಹೇಳಿದರು.
“ದೇಶದ ಯುವಶಕ್ತಿಯಿಂದಾಗಿ ಇಡೀ ವಿಶ್ವವೇ ಭಾರತದತ್ತ ನೋಡುತ್ತಿದೆ. ನಮ್ಮ ಸರ್ಕಾರ ಡಿಜಿಟಲ್, ಸ್ಟಾರ್ಟ್ಅಪ್ ಮತ್ತು ನಾವೀನ್ಯತೆ ಕ್ರಾಂತಿಗಳನ್ನು ಬಿಡುಗಡೆ ಮಾಡಿದೆ, ಅದು ಯುವಕರಿಗೆ ಪ್ರಯೋಜನಕಾರಿಯಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದರು.
ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ್ದ ಎನ್ಸಿಸಿ ಕೆಡೆಟ್ಗಳನ್ನುದ್ದೇಶಿಸಿ ಮಾತನಾಡಿದ ಅವರು, “ಇದು ಭಾರತದ ಯುವಜನರಿಗೆ ಹೊಸ ಅವಕಾಶಗಳ ಸಮಯ. ಎಲ್ಲೆಡೆ ಭಾರತದ ಸಮಯ ಬಂದಿದೆ ಎಂಬುದು ಸ್ಪಷ್ಟವಾಗಿದೆ” ಎಂದರು.
ಅದೇ ಸಮಯದಲ್ಲಿ, ದೇಶವನ್ನು ವಿಭಜಿಸುವ ಪ್ರಯತ್ನಗಳ ವಿರುದ್ಧ ಎಚ್ಚರಿಕೆ ವಹಿಸಬೇಕೆಂದು ಪ್ರಧಾನಿ ಒತ್ತಾಯಿಸಿದರು.
“ದೇಶ ಒಡೆಯಲು ಹಲವಾರು ನೆಪಗಳನ್ನು ಎತ್ತಲಾಗುತ್ತಿದೆ. ಭಾರತಮಾತೆಯ ಮಕ್ಕಳಲ್ಲಿ ಒಡಕು ಮೂಡಿಸಲು ಹಲವು ಸಮಸ್ಯೆಗಳನ್ನು ಹುಟ್ಟುಹಾಕುತ್ತಿದ್ದಾರೆ. ಆದರೆ ಇಂತಹ ಪ್ರಯತ್ನಗಳ ಎಷ್ಟೇ ಮಾಡಿದರೂ ಕೂಡ, ನಮ್ಮ ಜನರಲ್ಲಿ ಎಂದಿಗೂ ಭಿನ್ನಾಭಿಪ್ರಾಯಗಳು ಉಂಟಾಗುವುದಿಲ್ಲ” ಎಂದು ಅವರು ಹೇಳಿದರು.
ಇದನ್ನೂ ಓದಿ: ಜನರು ದೂರದರ್ಶನ ನಂಬದಿದ್ದರೂ BBC ನಂಬುತ್ತಾರೆ: ಮೋದಿಯ ಹಳೆಯ ವಿಡಿಯೊ ವೈರಲ್
2002ರ ಗುಜರಾತ್ ಗಲಭೆಯ ಕುರಿತು ಬಿಬಿಸಿ ಬಿಡುಗಡೆ ಮಾಡಿರುವ ಸಾಕ್ಷ್ಯಚಿತ್ರದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಈ ರೀತಿಯ ಮಾತುಗಳನ್ನು ಆಡಿದ್ದಾರೆ.
ಈ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಎನ್ಸಿಸಿ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಗುರ್ಬೀರ್ಪಾಲ್ ಸಿಂಗ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಅನಿಲ್ ಚೌಹಾಣ್, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿಕುಮಾರ್, ವಾಯುಪಡೆ ಮುಖ್ಯಸ್ಥ ವಿ ಆರ್ ಚೌಧರಿ ಮತ್ತು ರಕ್ಷಣಾ ಕಾರ್ಯದರ್ಶಿ ಗಿರ್ಧರ್ ಅರ್ಮಾನೆ ಉಪಸ್ಥಿತರಿದ್ದರು.
ಭಾರತವನ್ನು ಇಬ್ಬಾಗ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಿಬಿಸಿ ವಿರುದ್ಧ ಪ್ರಧಾನಿ ಮೋದಿ ಅಸಮಾಧಾನಗೊಂಡಿದ್ದಾರೆ. ಆದರೆ 2013ರಲ್ಲಿ ಮೋದಿಯವರು ಬಿಬಿಸಿಯನ್ನು ಹೊಗಳಿ ಮಾತನಾಡಿದ್ದ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು.
ಜನರು ದೂರದರ್ಶನವನ್ನು ನಂಬದಿದ್ದರೂ ಬಿಬಿಸಿಯನ್ನು ನಂಬುತ್ತಾರೆಂದು ಮೋದಿಯವರು ಮೆಚ್ಚುಗೆ ವ್ಯಕ್ತಪಡಿಸಿರುವ ವಿಡಿಯೊ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ‘ಆಲ್ಟ್ನ್ಯೂಸ್’ ಸಹಸಂಸ್ಥಾಪಕ ಮೊಹಮ್ಮದ್ ಜುಬೇರ್ ಅವರು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ಗುಜರಾತ್ ಗಲಭೆ ಕುರಿತು ಬಿಬಿಸಿ ಮಾಡಿರುವ ಸಾಕ್ಷ್ಯಾಚಿತ್ರವನ್ನು ಭಾರತದಲ್ಲಿ ಸರ್ಕಾರ ನಿರ್ಬಂಧಿಸಿರುವ ಬೆನ್ನಲ್ಲೇ, ‘ಬಿಬಿಸಿಯನ್ನು ಮೋದಿಯವರು ಹೊಗಳಿದ್ದ ವಿಡಿಯೊ’ ಮುನ್ನೆಲೆಗೆ ಬಂದಿದೆ. 2013ರಲ್ಲಿ ಮೋದಿಯವರು ಬಿಬಿಸಿಯನ್ನು ಹೊಗಳಿ ಮಾತನಾಡಿದ್ದರು. ಮಾಧ್ಯಮವೊಂದರ ವಿಶ್ವಾಸಾರ್ಹತೆಗೆ ದೇಶದ ನಾಯಕನೊಬ್ಬ ಸಲ್ಲಿಸಿದ ಮಹೋನ್ನತ ಗೌರವ ಇದಾಗಿದೆ ಎಂದೇ ಬಣ್ಣಿಸಲಾಗುತ್ತಿದೆ.
ವಿಡಿಯೊದಲ್ಲಿ ಏನಿದೆ?
“ಸಾಮಾನ್ಯ ಜನರು ಏನು ಮಾತನಾಡುತ್ತಾರೆ ಗೊತ್ತಾ? ನಾನು ಇದನ್ನು ಬಿಬಿಸಿಯಲ್ಲಿ ಕೇಳಿದ್ದೇನೆ ಎನ್ನುತ್ತಾರೆ. ನಮ್ಮ ದೇಶದ ಆಲ್ ಇಂಡಿಯಾ ರೇಡಿಯೋವನ್ನು ಅವರು ನಂಬುವುದಿಲ್ಲ, ದೂರದರ್ಶನವನ್ನು ಅವರು ನಂಬುವುದಿಲ್ಲ, ಅವರು ಪತ್ರಿಕೆಯನ್ನು ನಂಬುವುದಿಲ್ಲ. ನಾನು ಬಿಬಿಸಿಯಲ್ಲಿ ಕೇಳಿದ್ದೇನೆ ಎನ್ನುತ್ತಾರೆ.” ಮೋದಿಯವರು “ಈ ರೀತಿಯ ವಿಶ್ವಾಸಾರ್ಹತೆ ಇರಬೇಕು” ಎಂದು ಬಿಬಿಸಿ ಸುದ್ದಿ ಸಂಸ್ಥೆಯನ್ನು ಹೊಗಳಿದ್ದರು.
ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿರುವ ಸಾಮಾಜಿಕ ಕಾರ್ಯಕರ್ತ ರಮೇಶ್ ಅವರು, “ಅಂದು ಮೋದಿಯವರೇ ಹೇಳಿದ ಹಾಗೆ, ವಿಶ್ವಾಸಾರ್ಹ ಸುದ್ದಿ ಸಂಸ್ಥೆಯಾಗಿದ್ದ ಬಿಬಿಸಿ, ಇದೀಗ ಮೋದಿ ಅವರ ಕಣ್ಣಿಗೆ ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದಿನಿಸುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ. ಅಂದಿಗೂ ಸತ್ಯವನ್ನೇ ತೋರಿಸುತ್ತಿದ್ದ ಬಿಬಿಸಿ ಇವತ್ತಿಗೂ ಸತ್ಯವನ್ನೇ ತೋರಿಸುತ್ತಿದೆ ಆದರೆ ಪ್ರಧಾನಿಯವರಿಗೆ ಅದನ್ನು ಸ್ವೀಕರಿಸಲಾಗುತ್ತಿಲ್ಲ ಹಾಗಾಗಿ ಅಂತರಾಷ್ಟ್ರೀಯ ಸುದ್ದಿಸಂಸ್ಥೆಯ ಬಗ್ಗೆ ಹಗುರಾಗಿ ಮಾತನಾಡಿದ್ದಾರೆ” ಎಂದು ಅಭಿಪ್ರಾಯ ವ್ಯಕ್ತಪಡಿಸ್ಸಿದರು.


